Tag: Akhila Karnataka Police Mahasabha

  • ಪೊಲೀಸರ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ರೆ ತಪ್ಪೇ – ಸರ್ಕಾರಕ್ಕೆ ಚಾಟಿ, ಶಶಿಧರ್‌ಗೆ ಬಿಗ್ ರಿಲೀಫ್

    ಪೊಲೀಸರ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ರೆ ತಪ್ಪೇ – ಸರ್ಕಾರಕ್ಕೆ ಚಾಟಿ, ಶಶಿಧರ್‌ಗೆ ಬಿಗ್ ರಿಲೀಫ್

    ಬೆಂಗಳೂರು: ಪೊಲೀಸರ ಸಮಸ್ಯೆ ಪರಿಹಾರಕ್ಕಾಗಿ ಪ್ರತಿಭಟಸಿ ರಾಜ್ಯ ದ್ರೋಹ ಆರೋಪ ಪ್ರಕರಣ ಎದುರಿಸುತ್ತಿದ್ದ ಪೊಲೀಸ್ ಮಹಾಸಭಾ ಅಧ್ಯಕ್ಷ ಶಶಿಧರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

    ಹೈಕೋರ್ಟ್ ಏಕಸದಸ್ಯ ಪೀಠವು ಶಶಿಧರ್ ವಿರುದ್ಧ ಸಿಸಿಬಿ ದಾಖಲಿಸಿದ್ದ ರಾಜ್ಯ ದ್ರೋಹ ಪ್ರಕರಣದ ವಿಚಾರಣೆಯನ್ನು ಇಂದು ನಡೆಸಿತು. ಪೊಲೀಸರ ಸಮಸ್ಯೆ ಕುರಿತು ಧ್ವನಿ ಎತ್ತಿದರೆ ತಪ್ಪೇ? ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಬಾರದೇ? ಶಶಿಧರ್ ಅವರನ್ನೇ ಯಾಕೆ ಬೆನ್ನತ್ತಿದ್ದೀರಿ ಎಂದು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಸರ್ಕಾರದ ಪರ ವಕೀಲರನ್ನು ಮಾರ್ಮಿಕವಾಗಿ ಪ್ರಶ್ನಿಸಿದರು.

    ರಾಜ್ಯ ಸರ್ಕಾರ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತರಾಟೆ ತೆಗದುಕೊಂಡ ನ್ಯಾ.ಅರವಿಂದ್ ಕುಮಾರ್ ಅವರು ಶಶಿಧರ್ ವಿರುದ್ಧ ನಡೆಯುತ್ತಿದ್ದ ವಿಚಾರಣೆಗೆ ತಡೆ ನೀಡಿ ಮಾ.5ಕ್ಕೆ ಮುಂದೂಡಿದರು. ಇದನ್ನೂ ಓದಿ: ಖಾಕಿಗಳಿಗೆ ಸರ್ಕಾರದಿಂದ ವೇತನ ಹೆಚ್ಚಳದ ಉಡುಗೊರೆ!

    ಏನಿದು ಪ್ರಕರಣ?
    ಪೊಲೀಸರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಪೊಲೀಸರ ಪ್ರತಿಭಟನೆಗೆ ಶಶಿಧರ್ ಕರೆ ನೀಡಿದ್ದರು. 2016ರ ಜೂನ್ 4ರಂದು ಸಾಮೂಹಿಕ ರಜೆ ಹಾಕಲು ಪೊಲೀಸ್ ಇಲಾಖೆಗೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಶಶಿಧರ್ ಮೇಲೆ ರಾಜದ್ರೋಹದ ಆರೋಪ ಹೊರಿಸಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಶಶಿಧರ್ ಅವರಿಗೆ 84 ದಿನದ ಬಳಿಕ ಆಗಸ್ಟ್ 25 ರಂದು ಹೈಕೋರ್ಟ್ ಏಕಸದಸ್ಯ ಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ಇತ್ತೀಚೆಗೆ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿತ್ತು. ಈ ಚಾರ್ಜ್‍ಶೀಟ್ ರದ್ದುಕೋರಿ ಶಶಿಧರ್ ಹೈ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

    ಈ ಪ್ರಕರಣದ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಕರ್ನಾಟಕ ಸರ್ಕಾರ ಬಜೆಟ್ ನಲ್ಲಿ ಪೊಲೀಸರ ಸಂಬಳ ಏರಿಕೆ ಮಾಡದ್ದಕ್ಕೆ ಔರಾದ್‍ಕರ್ ಸಮಿತಿಯ ವರದಿಯ ಜಾರಿ ಸಂಬಂಧ ಫೇಸ್‍ಬುಕ್ ನಲ್ಲಿ ಪೋಸ್ಟ್ ಪ್ರಕಟಿಸಿದ್ದರು. ಷರತ್ತು ಬದ್ಧ ಜಾಮೀನಿನಲ್ಲಿದ್ದರೂ ಅನುಚಿತವಾಗಿ ಬರೆದು ಪೋಸ್ಟ್ ಗಳನ್ನು ಪ್ರಕಟಿಸಿದ್ದಾರೆ ಎನ್ನುವ ಆರೋಪದ ಅಡಿ ಶಶಿಧರ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv