Tag: AJ hospital

  • ಫುಟ್ಬಾಲ್ ಆಟಗಾರರು ಬರ್ತಾರೆ ಅಂತ 60 ಕಾರುಗಳನ್ನು ಬಾಡಿಗೆ ಪಡೆದು ಐಟಿ ಮಾಸ್ಟರ್ ಪ್ಲಾನ್!

    ಫುಟ್ಬಾಲ್ ಆಟಗಾರರು ಬರ್ತಾರೆ ಅಂತ 60 ಕಾರುಗಳನ್ನು ಬಾಡಿಗೆ ಪಡೆದು ಐಟಿ ಮಾಸ್ಟರ್ ಪ್ಲಾನ್!

    – ಮಂಗಳೂರಲ್ಲಿ ಉದ್ಯಮಿಗಳಿಗೆ ಐಟಿ ಶಾಕ್
    – ದಾಳಿ ವೇಳೆ ಮಾಲೀಕರೊಬ್ಬರ ತಂದೆ ಆರೋಗ್ಯದಲ್ಲಿ ಏರುಪೇರು
    – 5 ಕೋಟಿ ಹಣ ಪತ್ತೆಯ ಬಗ್ಗೆ ಮಾಹಿತಿ

    ಮಂಗಳೂರು: ಕರಾವಳಿಯಲ್ಲಿ ವಿವಿಧ ಉದ್ಯಮಿಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ಇದಕ್ಕೂ ಮುನ್ನ ಅಧಿಕಾರಿಗಳು ಮಾಸ್ಟರ್ ಪ್ಲಾನ್ ಒಂದನ್ನು ಮಾಡಿಕೊಂಡಿದ್ದರು.

    ಹೌದು. ಮಂಗವಾರ ಸಂಜೆ 60 ಕಾರುಗಳನ್ನು ಅಧಿಕಾರಿಗಳು ಬಾಡಿಗೆಗೆ ಪಡೆದಿದ್ದರು. ಬಾಡಿಗೆ ಪಡೆಯುವ ವೇಳೆ ಕೇರಳಕ್ಕೆ ಹೋಗಬೇಕು. ಇಂಟರ್ ಸ್ಟೇಟ್ ಫುಟ್ಬಾಲ್ ಚಾಂಪಿಯನ್ ಶಿಪ್ ಇದೆ. ಕಾರಿನಲ್ಲಿ ಫುಟ್ಬಾಲ್ ಆಟಗಾರರು ಬರುತ್ತಾರೆ ಅಂತ ಅಧಿಕಾರಿಗಳು ಬಾಡಿಗೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ನಿನ್ನೆ ಸಂಜೆ ಕಾರುಗಳಿಗೆ ಸಿಬ್ಬಂದಿ ‘ಫುಟ್ಬಾಲ್’ ನ ಸ್ಟಿಕರ್ ಅಂಟಿಸಿದ್ದರು. ಈ ಮೂಲಕ ಆಪರೇಷನ್ ಗೌಪ್ಯವಾಗಿರಿಸಲು ಮಾಸ್ಟರ್ ಪ್ಲಾನ್ ರೂಪಿಸಿದ್ದರು.

    ಇಂದು ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳ ಮಾಲೀಕರ ಮನೆ ಮೇಲೆ ಐಟಿ ದಾಳಿ ನಡೆಸಿದೆ. ಎಜೆ ಗ್ರೂಪ್ ಸಂಸ್ಥೆಯ ಮಾಲಕ ಎಜೆ ಶೆಟ್ಟಿ, ಯನಪೋಯ ಗ್ರೂಪ್ ಸಂಸ್ಥೆಯ ಮಾಲಕ ಅಬ್ದುಲ್ ಕುಂಞ, ಕಣಚೂರು ಗ್ರೂಪ್ ಸಂಸ್ಥೆಯ ಮಾಲಕ ಕಣಚೂರು ಮೋನು ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಮೂರೂ ಸಂಸ್ಥೆಗಳ ಮನೆ, ಆಸ್ಪತ್ರೆ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ. ಅಲ್ಲದೆ ಶಿಕ್ಷಣ ಸಂಸ್ಥೆಗಳ ಮೇಲೂ ಏಳು ಮಂದಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ಐಟಿ ದಾಳಿ ನಡೆಸಿದೆ.

    ಮತ್ತೊಂದು ಮೆಡಿಕಲ್ ಕಾಲೇಜಿನ ಮೇಲೆ ಐಟಿ ದಾಳಿ ನಡೆದಿದೆ. ಮಂಗಳೂರಿನ ಶ್ರೀನಿವಾಸ ಗ್ರೂಪ್ ಆಫ್ ಎಜುಕೇಶನ್ ಇನ್ಸ್ಟಿಟ್ಯೂಷನ್ ಹಾಗೂ ಮಂಗಳೂರಿನ ಜೈಲು ರಸ್ತೆಯಲ್ಲಿರುವ ಮನೆ, ಕಚೇರಿ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಶ್ರೀನಿವಾಸ ರಾವ್ ತಂದೆ ಆರೋಗ್ಯದಲ್ಲಿ ಏರುಪೇರು ಉಂಟಾದ ಪ್ರಸಂಗವೂ ನಡೆದಿದೆ. ಕೂಡಲೇ ಶ್ರೀನಿವಾಸ ರಾವ್ ಅವರು ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ತರಿಸಿದ್ದಾರೆ. ಅಲ್ಲದೆ ವೈದ್ಯಕೀಯ ಸಿಬ್ಬಂದಿಯಿಂದ ತಪಾಸಣೆ ನಡೆಸಲಾಯಿತು. ಈ ವೇಳೆ ರಾಘವೇಂದ್ರ ರಾವ್ ಅನಾರೋಗ್ಯದಿಂದ ಐಟಿ ಅಧಿಕಾರಿಗಳು ಗಾಬರಿಗೊಂಡರು.

    ಮೆಡಿಕಲ್ ಕಾಲೇಜುಗಳ ಮಾಲೀಕರ ಮನೆಯಲ್ಲಿ ಐಟಿ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿರುವ ಮಾಹಿತಿ ದೊರೆತಿದೆ. ಒಂದೇ ಕಡೆ 5 ಕೋಟಿ ಹಣ ಪತ್ತೆಯಾಗಿರೋ ಬಗ್ಗೆ ಮಾಹಿತಿ ಸಿಕ್ಕಿದ್ದು, ಮನೆಯಲ್ಲಿ ಕೋಟಿ ಕೋಟಿ ಕ್ಯಾಶ್ ನೋಡಿ ಐಟಿ ಅಧಿಕಾರಿಗಳು ಸುಸ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಕೂಡ ಆಗಮಿಸಿವ ಸಾಧ್ಯತೆ ಇದೆ ಎನ್ನಲಾಗಿದೆ.

  • ಬೇರ್ಪಟ್ಟಿದ್ದ 2 ಕಾಲುಗಳ ಮರು ಜೋಡಣೆ – ಮಂಗ್ಳೂರಿನ ಎಜೆ ಆಸ್ಪತ್ರೆ ವೈದ್ಯರಿಂದ ದೇಶದಲ್ಲೇ ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿ

    ಬೇರ್ಪಟ್ಟಿದ್ದ 2 ಕಾಲುಗಳ ಮರು ಜೋಡಣೆ – ಮಂಗ್ಳೂರಿನ ಎಜೆ ಆಸ್ಪತ್ರೆ ವೈದ್ಯರಿಂದ ದೇಶದಲ್ಲೇ ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿ

    ಮಂಗಳೂರು: ಭೀಕರ ರೈಲ್ವೇ ಅಪಘಾತದಲ್ಲಿ ಎರಡೂವರೆ ವರ್ಷದ ಮಗುವಿನಿಂದ ಬೇರ್ಪಟ್ಟಿದ್ದ ಎರಡೂ ಕಾಲುಗಳನ್ನು ಮಂಗಳೂರಿನ ಎಜೆ ಆಸ್ಪತ್ರೆಯ ವೈದ್ಯರು ಮರುಜೋಡಿಸಿ ಪುನರ್ಜನ್ಮ ನೀಡಿದಿದ್ದಾರೆ.

    ಕಳೆದ ಎಪ್ರಿಲ್ 29 ರಂದು ಕೇರಳದ ಪಯ್ಯನೂರಿನಲ್ಲಿ ಭೀಕರ ರೈಲ್ವೇ ಅಪಘಾತ ನಡೆದಿದ್ದು, ಎರಡೂವರೆ ವರ್ಷದ ಮಗು ಮಹಮ್ಮದ್ ಸಾಲೆಯ ಕಾಲುಗಳೆರಡೂ ತುಂಡಾಗಿ ಬೇರ್ಪಟ್ಟಿತ್ತು. ಮಗುವಿನ ತಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಗುವನ್ನು ರೈಲ್ವೇ ಪೊಲೀಸರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು.

    ಬಳಿಕ ಪಯ್ಯನೂರಿನ ಆಸ್ಪತ್ರೆಯಿಂದ ಮಂಗಳೂರಿನ ಎಜೆ ಆಸ್ಪತ್ರೆಗೆ ಮಗುವಿನ ಜೊತೆಗೆ ಬೇರ್ಪಟ್ಟ ಎರಡೂ ಕಾಲುಗಳನ್ನೂ ಥರ್ಮಾಕೋಲ್ ನ ಐಸ್ ಬಾಕ್ಸ್ ನಲ್ಲಿ ಸಾಗಿಸಿದ್ದಾರೆ. ಎಜೆ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಡೀನ್ ಡಾ.ದಿನೇಶ್ ಕದಂ ನೇತೃತ್ವದಲ್ಲಿ ತಜ್ಞ ವೈದ್ಯರ ತಂಡ ಸತತ 7 ಗಂಟೆಗಳ ಕಾಲ ಮಗುವಿನ ಕಾಲು ಜೋಡಣೆಯ ಮೈಕ್ರೋ ವ್ಯಾಸ್ಕ್ಯುಲರ್ ಪ್ಲಾಸ್ಟಿಕ್ ಸರ್ಜರಿ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಇದೀಗ ಮಗುವಿನ ಕಾಲುಗಳ ಜೋಡಣೆಯಲ್ಲಿ ಯಶಸ್ವಿಯಾಗಿದ್ದಾರೆ.

    ಸಂಪೂರ್ಣವಾಗಿ ಬೇರ್ಪಟ್ಟ ಕಾಲುಗಳು ಮತ್ತು ಮಂಡಿ ಮೇಲ್ಭಾಗದಲ್ಲಿ ಕತ್ತರಿಸಿದ ಕಾಲಿನ ಮರು ಜೋಡಣೆ ಯಶಸ್ವಿಯಾಗಿ ನಡೆಸಿದ್ದಾರೆ. ಮೊದಲ ಬಾರಿಗೆ ದೇಶದಲ್ಲಿ ಈ ರೀತಿಯ ಶಸ್ತ್ರ ಚಿಕಿತ್ಸೆ ನಡೆದಿದೆ. ಶಸ್ತ್ರ ಚಿಕಿತ್ಸೆ ನಡೆದು ಏಳು ತಿಂಗಳು ಕಳೆದಿದ್ದು, ಸದ್ಯ ಮಗು ನಡೆಯಲು ಶಕ್ತವಾಗಿದೆ.

    ತಾಯಿಯನ್ನು ಕಳೆದುಕೊಂಡ ಮಗುವಿನ ಸಮಗ್ರ ಆರೈಕೆಯನ್ನು ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ವಿಶೇಷವಾಗಿ ಕಾಳಜಿ ವಹಿಸಿ ಮಾಡಿದ್ದಾರೆ. ಮಗುವಿನ ಪೂರ್ವಾಪರವೂ ವಿಚಾರಿಸದೇ ಆಸ್ಪತ್ರೆಯಲ್ಲಿ ದಾಖಲಿಸಿ, ಸ್ವ ಮುತುವರ್ಜಿ ವಹಿಸಿ ಪುನರ್ಜನ್ಮ ನೀಡಿದ ವೈದ್ಯರ ಸೇವಾ ಮನೋಭಾವವಕ್ಕೆ ಜನರ ಮೆಚ್ಚುಗೆ ವ್ಯಕ್ತವಾಗಿದೆ.