Tag: air strike

  • ಪಾಕ್‌ ಒಳಗಡೆಯೇ ಏರ್‌ಸ್ಟ್ರೈಕ್‌ – 7 ಬಾಂಬ್‌ಗೆ 30 ಮಂದಿ ಬಲಿ

    ಪಾಕ್‌ ಒಳಗಡೆಯೇ ಏರ್‌ಸ್ಟ್ರೈಕ್‌ – 7 ಬಾಂಬ್‌ಗೆ 30 ಮಂದಿ ಬಲಿ

    ಇಸ್ಲಾಮಾಬಾದ್‌: ಖೈಬರ್ ಪಖ್ತುಂಖ್ವಾ (Khyber Pakhtunkhwa) ಪ್ರಾಂತ್ಯದಲ್ಲಿ ಪಾಕಿಸ್ತಾನ ವಾಯುಪಡೆ (Pakistan Air Force) ನಡೆಸಿದ ವೈಮಾನಿಕ ದಾಳಿಯಲ್ಲಿ (Air Strike) ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ.

    ಕಣಿವೆಯಲ್ಲಿರುವ ಮಾಟ್ರೆ ದಾರಾ ಗ್ರಾಮದ ಮೇಲೆ ಪಾಕಿಸ್ತಾನದ ಜೆ-17 ಯುದ್ಧ ವಿಮಾನಗಳು ಎಂಟು LS-6 ಬಾಂಬ್‌ಗಳನ್ನು ಹಾಕಿವೆ. ಸೋಮವಾರ ನಸುಕಿನ ಜಾವ 2 ಗಂಟೆಯ ವೇಳೆ ಈ ದಾಳಿ ನಡೆದಿದ್ದು ಭಾರೀ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದೆ ಎಂದು ವರದಿಯಾಗಿದೆ.  ಇದನ್ನೂ ಓದಿ:  ಒಂದಿಂಚು ಜಾಗವನ್ನೂ ಬಿಡಲ್ಲ – ಬಾಗ್ರಾಮ್‌ ವಾಯುನೆಲೆ ಹಿಂದಿರುಗಿಸುವ ಟ್ರಂಪ್ ಬೇಡಿಕೆ ತಿರಸ್ಕರಿಸಿದ ತಾಲಿಬಾನ್

     

    ರಕ್ಷಣಾ ತಂಡಗಳು ಅವಶೇಷಗಳ ಅಡಿಯಲ್ಲಿ ಶವಗಳನ್ನು ಹುಡುಕುವಲ್ಲಿ ನಿರತವಾಗಿವೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಚೀರಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ.

    ಖೈಬರ್ ಪಖ್ತುಂಖ್ವಾದಲ್ಲಿ ಹಿಂದೆ ಅನೇಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ಪಾಕಿಸ್ತಾನದಲ್ಲಿ ಭಯೋತ್ಪಾದ ದಾಳಿ ಹೆಚ್ಚಾಗುತ್ತಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇ.42 ರಷ್ಟು ಹೆಚ್ಚಳ ಕಂಡಿದೆ. ಇದನ್ನೂ ಓದಿ:  ಅಮೆರಿಕ ವಿರೋಧದ ನಡ್ವೆ ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡಲು ಬ್ರಿಟನ್ ಸಿದ್ಧತೆ

    ಈ ವರ್ಷದ ದೇಶಾದ್ಯಂತ ಕನಿಷ್ಠ 74 ಭಯೋತ್ಪಾದಕ ದಾಳಿಗಳು ದಾಖಲಾಗಿದ್ದು, 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಖೈಬರ್ ಪಖ್ತುಂಖ್ವಾದ ಪ್ರಾಂತ್ಯದಲ್ಲಿ ಹೆಚ್ಚು ದಾಳಿ ನಡೆದರೆ ನಂತರದ ಸ್ಥಾನದಲ್ಲಿ ಬಲೂಚಿಸ್ತಾನ್ ಇದೆ.

  • ಶಾಂತಿ ಸ್ಥಾಪಿಸಿ, ಇಲ್ಲದಿದ್ರೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತೆ – ಇರಾನ್‌ಗೆ ಟ್ರಂಪ್ ಖಡಕ್ ವಾರ್ನಿಂಗ್

    ಶಾಂತಿ ಸ್ಥಾಪಿಸಿ, ಇಲ್ಲದಿದ್ರೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತೆ – ಇರಾನ್‌ಗೆ ಟ್ರಂಪ್ ಖಡಕ್ ವಾರ್ನಿಂಗ್

    – ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ದಾಳಿ ಬಳಿಕ ಎಚ್ಚರಿಕೆ

    ವಾಷಿಂಗ್ಟನ್: ಈಗಲಾದರೂ ಇರಾನ್ ಶಾಂತಿ ಸ್ಥಾಪಿಸಲಿ, ಇಲ್ಲವಾದರೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಭಾನುವಾರ ನಸುಕಿನಲ್ಲಿ ಇರಾನ್ (Iran) ಮೇಲೆ ಅಮೆರಿಕ (America) ನಡೆಸಿದ ವೈಮಾನಿಕ ದಾಳಿ (Air Strike) ಬಳಿಕ ಶ್ವೇತಭವನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಇರಾನ್ ಮೇಲಿನ ವೈಮಾನಿಕ ದಾಳಿ ಯಶಸ್ವಿಯಾಗಿದೆ. ಈಗಲಾದರೂ ಇರಾನ್. ಇಸ್ರೇಲ್ ಜೊತೆಗಿನ ಯುದ್ಧಕ್ಕೆ ವಿರಾಮ ಘೋಷಿಸಿ, ಶಾಂತಿ ಸ್ಥಾಪಿಸಲಿ. ಇಲ್ಲವಾದರೆ ಭವಿಷ್ಯದಲ್ಲಿ ಭಾರೀ ಪ್ರಮಾಣದ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: Pahalgam Attack | ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್‌

    ಶನಿವಾರ ರಾತ್ರಿ ವೈಮಾನಿಕ ದಾಳಿ ಮೂಲಕ ಇರಾನ್‌ನ ಪರಮಾಣು ಸ್ಥಾವರಗಳು ಹಾಗೂ ಪರಮಾಣು ಬಾಂಬ್‌ಗಳನ್ನು ತಯಾರಿಕೆಯನ್ನು ನಿಲ್ಲಿಸುವುದು ನಮ್ಮ ಮೂಲ ಉದ್ದೇಶವಾಗಿತ್ತು ಹಾಗೂ ಈ ಮೂಲಕ ಇಸ್ರೇಲ್‌ಗೆ ಯುದ್ಧ ಬೆದರಿಕೆ ಹಾಕುತ್ತಿರುವ ಇರಾನ್ ಅನ್ನು ಬುಡಸಮೇತ ಅಲುಗಾಡಿಸುವುದು ಮುಖ್ಯ ಗುರಿಯಾಗಿತ್ತು. ಈ ವೈಮಾನಿಕ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ನೀಡಿದ ಸಹಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ.

    ದಾಳಿಯಲ್ಲಿ ಇರಾನ್‌ನ ಪ್ರಮುಖ ಪರಮಾಣು ಸ್ಥಾವರಗಳಾದ ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ದಾಳಿ ನಡೆಸಿ, ಅವುಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ. ಈ ವೇಳೆ ಫೋರ್ಡೊನಲ್ಲಿದ್ದ 30,000 ಪೌಂಡ್‌ನ ಬಂಕರ್ ಬಸ್ಟರ್ ಬಾಂಬ್‌ಗಳನ್ನು ಧ್ವಂಸಮಾಡಲಾಗಿದೆ. ಈ ಮೂಲಕ ವೈಮಾನಿಕ ದಾಳಿ ಭರ್ಜರಿ ಯಶಸ್ಸನ್ನು ಕಂಡಿದೆ ಎಂದು ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ. ಇದರಿಂದಾಗಿ ಇಸ್ರೇಲ್‌ಗಿದ್ದ ಒಂದು ದೊಡ್ಡ ಅಪಾಯವನ್ನು ತಪ್ಪಿಸಿದ್ದೇವೆ ಎಂದು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ ಎಂದಿದ್ದಾರೆ.ಇದನ್ನೂ ಓದಿ: ಇಸ್ರೇಲ್‌ ಮೇಲೆ ಮತ್ತೆ ಬ್ಯಾಲಿಸ್ಟಿಕ್ ಮಿಸೈಲ್‌ಗಳ ಸುರಿಮಳೆ – ಅಮೆರಿಕ ದಾಳಿಗೂ ಜಗ್ಗದ ಇರಾನ್‌

    ಕಳೆದ 40 ವರ್ಷಗಳಿಂದ ಇರಾನ್ ಇಸ್ರೇಲ್ ಹಾಗೂ ಅಮೆರಿಕಕ್ಕೆ ಸಾವಿನ ಬೆದರಿಕೆ ಹಾಕುತ್ತಲೇ ಬಂದಿದೆ. ಜನರಲ್ ಖಾಸಿಮ್ ಸೊಲೈಮಾನಿ ಸೇರಿ ಈಗಾಗಲೇ ಎಷ್ಟೋ ಜನರನ್ನು ಬಲಿ ತೆಗೆದುಕೊಂಡಿದ್ದಾರೆ. ಇದೇ ಮುಂದುವರಿಯಲು ಬಿಡುವುದಿಲ್ಲ ಎಂದು ಹೇಳಿದರು.

    ಈ ಮೊದಲೇ ಡೊನಾಲ್ಡ್ ಟ್ರಂಪ್ ಶಾಶ್ವತ ಯುದ್ಧ ಬೇಡ ಎಂದಿದ್ದರು. ಆದರೆ ಈದೀಗ ಇರಾನ್ ಮತ್ತು ಇಸ್ರೇಲ್ ಮಧ್ಯೆ ಅಮೆರಿಕ ಪ್ರವೇಶಿರುವುದು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಸಾಧ್ಯತೆಯಿದೆ.

    ಶ್ವೇತಭನದ ಪರಿಸ್ಥಿತಿ ಹೇಗಿತ್ತು?
    ಇರಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಸಂದರ್ಭದಲ್ಲಿ ಶ್ವೇತಭವನದ ಪರಿಸ್ಥಿತಿ ಹೇಗಿತ್ತು ಅನ್ನೋದರ ಒಂದಿಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿವೆ. ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಶ್ವೇತಭವನದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ದಾಳಿಯ ಪ್ರತಿ ಕ್ಷಣದ ಮಾಹಿತಿಯನ್ನು ಹೇಗೆ ಕಲೆಹಾಕುತ್ತಿದ್ದರು. ಇದಕ್ಕೆ ದುಗುಡ ಏನಿತ್ತು? ಇದಕ್ಕೆ ಟ್ರಂಪ್ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬೆಲ್ಲ ಚಿತ್ರಣವನ್ನು ಈ ಫೋಟೋಗಳು ಕಟ್ಟಿಕೊಟ್ಟಿವೆ.ಇದನ್ನೂ ಓದಿ: ಅಮೆರಿಕನ್ನರು ಹಿಂದೆಂದೂ ನೋಡಿರದ ದಾಳಿ ಎದುರಿಸಲು ಸಿದ್ಧರಾಗಿ – ಖಮೇನಿ ಬಿಗ್‌ ವಾರ್ನಿಂಗ್‌

  • ನಮ್ಮ ತಂಟೆಗೆ ಬಂದ್ರೆ ಹಿಂದೆಂದೂ ನೋಡಿರದ ಮಿಲಿಟರಿ ಬಲವನ್ನು ಎದುರಿಸಬೇಕಾಗುತ್ತೆ – ಇರಾನ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

    ನಮ್ಮ ತಂಟೆಗೆ ಬಂದ್ರೆ ಹಿಂದೆಂದೂ ನೋಡಿರದ ಮಿಲಿಟರಿ ಬಲವನ್ನು ಎದುರಿಸಬೇಕಾಗುತ್ತೆ – ಇರಾನ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

    – ಇರಾನ್‌ ಮೇಲಿನ ದಾಳಿಗೆ ಇಸ್ರೇಲ್‌ ಅಮೆರಿಕದ ಶಸ್ತ್ರಾಸ್ತ್ರ ಬಳಸಿಕೊಂಡಿದೆ

    ವಾಷಿಂಗ್ಟನ್‌/ಟೆಹ್ರಾನ್‌: ಇಸ್ರೇಲ್‌ ನಡೆಸಿದ ವಾಯುದಾಳಿಗೂ (Israel Air Strike) ನಮಗೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಇರಾನ್‌ ಅಮೆರಿಕದ ಮೇಲೆ ದಾಳಿ ಮಾಡಿದ್ರೆ, ಹಿಂದೆಂದೂ ನೋಡಿರದ ಮಟ್ಟದಲ್ಲಿ ನಮ್ಮ ಮಿಲಿಟರಿ ಬಲವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಎಚ್ಚರಿಕೆ ನೀಡಿದ್ದಾರೆ.

    ಇಸ್ರೇಲ್‌ ನೆರವಿಗೆ ಬಂದರೆ ನಿಮ್ಮ ನೌಕಾನೆಲೆಗಳನ್ನು ಧ್ವಂಸಗೊಳಿಸ್ತೇವೆ ಎಂದು ಇರಾನ್‌ (Iran) ಎಚ್ಚರಿಕೆ ನೀಡಿದ ಬೆನ್ನಲ್ಲೇ ಟ್ರಂಪ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಇರಾನ್‌ನ ಅಣ್ವಸ್ತ್ರ ಮತ್ತು ಮಿಲಿಟರಿ ನೆಲೆಗಳ ಮೇಲಿನ ಇಸ್ರೇಲ್‌ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಇರಾನ್‌ ನಮ್ಮ ಮೇಲೆ ಯಾವುದೇ ರೀತಿಯಲ್ಲಿ ದಾಳಿ ಮಾಡಿದ್ರೆ ಅಮೆರಿಕದ ಪಡೆಗಳ ಸಂಪೂರ್ಣ ಶಕ್ತಿ ಅಲ್ಲಿ ಬಂದಿಳಿಯಲಿದೆ. ಇಂದೆಂದೂ ನೋಡಿರದ ಮಟ್ಟದಲ್ಲಿ ಸೇನಾ ಬಲವನ್ನು (US Armed Forces) ಎದುರಿಸಬೇಕಾಗುತ್ತದೆ ಎಂದು ಭೀಕರ ದಾಳಿಯ ಮುನ್ಸೂಚನೆ ನೀಡಿದ್ದಾರೆ. ಇದನ್ನೂ ಓದಿ: Israel vs Iran War: ಹೊತ್ತಿ ಉರಿದ ಟೆಹ್ರಾನ್‌- ತೈಲ ಡಿಪೋ ಮೇಲೆ ಇಸ್ರೇಲ್‌ ದಾಳಿ 

    ಒಂದು ಕಾಲದಲ್ಲಿ ಇರಾನ್ ಸಾಮ್ರಾಜ್ಯ ಎಂದು ಕರೆಯಲ್ಪಡುತ್ತಿತ್ತು, ಈಗ ಅವರಲ್ಲಿ ಏನೂ ಉಳಿದಿಲ್ಲ. ಇರಾನ್‌ನ ಪರಿಸ್ಥಿತಿ ಕುರಿತಂತೆ ರಾಷ್ಟ್ರೀಯ ಭದ್ರತಾ ತಂಡದ ಜೊತೆ ಮಾತುಕತೆ ನಡೆಸಿದ್ದೇನೆ. ದಾಳಿಯಲ್ಲಿ ನಮ್ಮ ದೇಶದ ಯಾವುದೇ ಪಾತ್ರವಿಲ್ಲ. ಆದರೆ, ಇರಾನ್ ಮೇಲಿನ ದಾಳಿಗೆ ಅಮೆರಿಕದ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಬಳಸಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕ್ಷಿಪಣಿ ದಾಳಿ, ಪ್ರತಿದಾಳಿ – ಇರಾನ್‌, ಇಸ್ರೇಲ್‌ನಲ್ಲಿ 80 ಮಂದಿ ಸಾವು

    ಇನ್ನಷ್ಟು ವಿನಾಶವಾಗುವ ಮುನ್ನ ಇರಾನ್ ಒಪ್ಪಂದಕ್ಕೆ ಬರಲು ಮತ್ತೊಂದು ಅವಕಾಶವಿದೆ. ಇರಾನ್ ಮತ್ತು ಇಸ್ರೇಲ್ ನಡುವೆ ಸುಲಭವಾಗಿ ಒಪ್ಪಂದ ಮಾಡಿಕೊಳ್ಳಬಹುದು. ಜೊತೆಗೆ ಈ ರಕ್ತಸಿಕ್ತ ಸಂಘರ್ಷವನ್ನು ಕೊನೆಗೊಳಿಸಬಹುದು ಎಂದು ತಮ್ಮ ಸೋಷಿಯಲ್‌ ಮೀಡಿಯಾ ವೇದಿಕೆ ‘ಟ್ರುತ್ ಸೋಶಿಯಲ್’ನಲ್ಲಿ ಅಭಿಪ್ರಯಾ ಹಂಚಿಕೊಂಡಿದ್ದಾರೆ. ಅಲ್ಲದೇ ಇರಾನ್ ತನ್ನ ಪರಮಾಣು ಯೋಜನೆಗಳನ್ನು ಸ್ಥಗಿತಗೊಳಿಸುವ ಸಂಬಂಧ ಶೀಘ್ರ ಒಪ್ಪಂದಕ್ಕೆ ಬರುವಂತೆ ಒತ್ತಾಯಿಸಿದ್ದಾರೆ.

    ಇರಾನ್‌-ಇಸ್ರೇಲ್‌ ನಡುವಿನ ಸಂಘರ್ಷ ತೀವ್ರಗೊಂಡಿದ್ದು ಮಧ್ಯಪ್ರಾಚ್ಯದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ:  ಗೋಲ್ಡ್‌ ಪ್ರಿಯರಿಗೆ ಶಾಕ್‌ – 1 ವಾರದಲ್ಲಿ ಚಿನ್ನದ ದರ 3,645 ರೂ. ಏರಿಕೆ

  • ಭಾರತದ ದಾಳಿಗೆ ಬೆದರಿ ರಾವಲ್ಪಿಂಡಿಯಿಂದ ಪಾಕ್‌ ಸೇನಾ ಪ್ರಧಾನ ಕಚೇರಿ ಇಸ್ಲಾಮಾಬಾದ್‌ಗೆ ಶಿಫ್ಟ್‌!

    ಭಾರತದ ದಾಳಿಗೆ ಬೆದರಿ ರಾವಲ್ಪಿಂಡಿಯಿಂದ ಪಾಕ್‌ ಸೇನಾ ಪ್ರಧಾನ ಕಚೇರಿ ಇಸ್ಲಾಮಾಬಾದ್‌ಗೆ ಶಿಫ್ಟ್‌!

    – ಚಕ್ಲಾಲಾದ ವಾಯುನೆಲೆಯ ಮೇಲೆ ಭಾರತ ದಾಳಿ

    ಇಸ್ಲಾಮಾಬಾದ್‌: ಭಾರತದ (India) ದಾಳಿಗೆ ಬೆದರಿರುವ ಪಾಕಿಸ್ತಾನ (Pakistan) ಸೇನೆ ರಾವಲ್ಪಿಂಡಿಯಲ್ಲಿರುವ ತನ್ನ ಪ್ರಧಾನ ಕಚೇರಿಯನ್ನು (GHQ) ರಾಜಧಾನಿ ಇಸ್ಲಾಮಾಬಾದ್‌ಗೆ (Islamabad) ಶಿಫ್ಟ್‌ ಮಾಡಲು ಮುಂದಾಗುತ್ತಿದೆ.

    ಸದ್ಯ ಪಾಕಿಸ್ತಾನದ ಸೇನಾ ಜನರಲ್ ಪ್ರಧಾನ ಕಚೇರಿ(GHQ) ರಾವಲ್ಪಿಂಡಿಯ ಚಕ್ಲಾಲಾದ ನೂರ್‌ ಖಾನ್‌ ವಾಯು ನೆಲೆಯ ಬಳಿಯಿದೆ. ಮೇ 10 ರಂದು ಭಾರತ ಪಾಕ್‌ ವಾಯುನೆಲೆಯಗಳ ಮೇಲೆ ಭೀಕರ ವಾಯುದಾಳಿ ನಡೆಸಿತು. ಚಕ್ಲಾಲಾ ವಾಯು ನೆಲೆ ಮೇಲೆಯೂ ದಾಳಿ ನಡೆಸಿ ಧ್ವಂಸ ಮಾಡಿತ್ತು.

    ಭವಿಷ್ಯದಲ್ಲಿ ಭಾರತ ದಾಳಿ ಮಾಡಬಹುದು ಎಂಬ ಭೀತಿ ಎದುರಿಸುತ್ತಿರುವ ಪಾಕಿಸ್ತಾನ ಸೇನೆ ತನ್ನ ಪ್ರಧಾನ ಕಚೇರಿಯನ್ನು ಇಸ್ಲಾಮಾಬಾದ್‌ಗೆ ಸ್ಥಳಾಂತರಿಸಲು ಮುಂದಾಗುತ್ತಿದೆ ಎಂದು ವರದಿಯಾಗಿದೆ.

    ಇಸ್ಲಾಮಾಬಾದ್‌ನಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ರಾವಲ್ಪಿಂಡಿಯ (Rawalpindi) ಚಕ್ಲಾಲಾ ನೂರ್ ಖಾನ್ ವಾಯುನೆಲೆಯು ಪಾಕಿಸ್ತಾನದ GHQ ಪಕ್ಕದಲ್ಲಿದೆ ಮತ್ತು ಪ್ರಮುಖ ಸಾರಿಗೆ ವಿಮಾನಗಳು, ಕಣ್ಗಾವಲು ವ್ಯವಸ್ಥೆಗಳು ಮತ್ತು ಇಂಧನ ತುಂಬುವ ಸ್ಕ್ವಾಡ್ರನ್‌ಗಳನ್ನು ಹೊಂದಿದೆ. ಇದನ್ನೂ ಓದಿ: ಜಮ್ಮು & ಕಾಶ್ಮೀರದಲ್ಲಿ 2 ಎನ್‌ಕೌಂಟರ್‌ – ಭಾರತೀಯ ಸೇನೆ 6 ಉಗ್ರರನ್ನು ಹೊಡೆದುರುಳಿಸಿದ್ದು ಹೇಗೆ?

    ತನ್ನ ಸೇನಾ ಜನರಲ್ ಪ್ರಧಾನ ಕಚೇರಿಯ ಜೊತೆ ಸೇನಾ ಮುಖ್ಯಸ್ಥರ ನಿವಾಸವನ್ನು ಸಹ ಸ್ಥಳಾಂತರಿಸಲಾಗುತ್ತದೆ ಎಂದು ವರದಿಯಾಗಿದೆ.

    ಭಾರತದ ದಾಳಿಗೆ ಬೆದರಿದ ಪಾಕ್‌ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್‌ (Asim Munir) ಜೀವಭಯದಿಂದ ಸೇನಾ ಬಂಕರ್‌ (Bunker) ಒಳಗಡೆ ಅಡಗಿದ್ದ ವಿಚಾರ 4 ದಿನ ಹಿಂದೆ ಬೆಳಕಿಗೆ ಬಂದಿತ್ತು.  ಇದನ್ನೂ ಓದಿ: IMF ಸಾಲವನ್ನು ಪಾಕ್ ಪರೋಕ್ಷವಾಗಿ ಭಯೋತ್ಪಾದನೆಗೆ ಬಳಸ್ತಿದೆ – ರಾಜನಾಥ್ ಸಿಂಗ್

    ರಾವಲ್ಪಿಂಡಿಯಲ್ಲಿರುವ ನೂರ್‌ ಖಾನ್‌ ನೆಲೆಯ ಮೇಲೆ ದಾಳಿ ನಡೆಸಿದ ನಂತರ ಮುಂದೆ ಭಾರತ ತನ್ನ ಮೇಲೂ ದಾಳಿ ನಡೆಸಬಹುದು ಎಂದು ಭಾವಿಸಿ ಮುನೀರ್‌ ಜನರಲ್ ಹೆಡ್‌ಕ್ವಾರ್ಟರ್ಸ್ (ಜಿಎಚ್‌ಕ್ಯು) ನಲ್ಲಿರುವ ಕೋಟೆಯ ಬಂಕರ್‌ ಒಳಗಡೆ ಅಡಗಿದ್ದರು ಎಂಬ ಮಾಹಿತಿ ಸರ್ಕಾರಿ ಮೂಲಗಳಿಂದ ಬಂದಿದೆ. ಸುಮಾರು 2 ರಿಂದ 3 ಗಂಟೆಗಳ ಕಾಲ ಮುನೀರ್‌ ಬಂಕರ್‌ ಒಳಗಡೆಯೇ ಇದ್ದರು. ಪರಿಸ್ಥಿತಿ ಸುಧಾರಿಸಿದ ಬಳಿಕ ಮುನೀರ್‌ ಹೊರಗಡೆ ಬಂದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು.

  • ಆಪರೇಷನ್ ಸಿಂಧೂರದ ಮೂಲಕ ನರಮೇಧಕ್ಕೆ ಉತ್ತರ: ಅಮಿತ್ ಶಾ ಶ್ಲಾಘನೆ

    ಆಪರೇಷನ್ ಸಿಂಧೂರದ ಮೂಲಕ ನರಮೇಧಕ್ಕೆ ಉತ್ತರ: ಅಮಿತ್ ಶಾ ಶ್ಲಾಘನೆ

    ನವದೆಹಲಿ: ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆಯಿದೆ ಎಂದು ಸೇನಾಪಡೆಗಳ ಕಾರ್ಯಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ(Amit Shah) ಎಕ್ಸ್ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ನಮ್ಮ ಮುಗ್ಧ ಸಹೋದರರ ಕ್ರೂರ ಹತ್ಯೆಗೆ ಆಪರೇಷನ್ ಸಿಂಧೂರದ(Operation Sindoor) ಮೂಲಕ ಭಾರತ ಉತ್ತರ ನೀಡಿದೆ. ಭಾರತ ಮತ್ತು ಅಲ್ಲಿನ ಜನರ ಮೇಲಿನ ಯಾವುದೇ ದಾಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ಮೋದಿ ಸರ್ಕಾರವು ನಿರ್ಧರಿಸಿದೆ. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕಲು ಭಾರತ ಸದಾ ಸಿದ್ಧ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: Operation Sindoor | ಶ್ರೀನಗರ ಏರ್‌ಪೋರ್ಟ್‌ ನಿಯಂತ್ರಣಕ್ಕೆ ಪಡೆದ IAF – ಜೆ&ಕೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮಧ್ಯಾಹ್ನ 2 ಗಂಟೆಗೆ ಗಡಿ ರಾಜ್ಯಗಳ ಮುಖ್ಯಮಂತ್ರಿಗಳು, ಡಿಜಿಪಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ಕರೆದಿದ್ದಾರೆ

    ಪಹಲ್ಗಾಮ್ ಉಗ್ರರ ದಾಳಿಗೆ(Pahalgam Terror Attack) ಪತ್ರೀಕಾರವಾಗಿ ಇಂದು ತಡರಾತ್ರಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಸೇನಾಯು ಪಾಕಿಸ್ತಾನದ ೯ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • ನಾವು ಭಾರತದ ಸೈನಿಕರನ್ನು ಸೆರೆ ಹಿಡಿದಿಲ್ಲ: ಬುರುಡೆ ಬಿಟ್ಟು ಸತ್ಯ ಒಪ್ಪಿಕೊಂಡ ಪಾಕ್‌ ಸಚಿವ

    ನಾವು ಭಾರತದ ಸೈನಿಕರನ್ನು ಸೆರೆ ಹಿಡಿದಿಲ್ಲ: ಬುರುಡೆ ಬಿಟ್ಟು ಸತ್ಯ ಒಪ್ಪಿಕೊಂಡ ಪಾಕ್‌ ಸಚಿವ

    ಇಸ್ಲಾಮಾಬಾದ್‌: ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವ ಪಾಕಿಸ್ತಾನದ (Pakistan) ರಕ್ಷಣಾ ಸಚಿವ ಖವಾಜಾ ಆಸಿಫ್‌ (Khawaja Asif) ಬಂಡವಾಳ ಮತ್ತೆ ಬಯಲಾಗಿದೆ.

    ಭಾರತ ನಡೆಸಿದ ದಾಳಿ ಪಾಕಿಸ್ತಾನ (Pakistan) ಪ್ರತಿ ದಾಳಿ ನಡೆಸಿ ಮೂವರನ್ನುಸೆರೆ ಹಿಡಿದಿದ್ದೇವೆ ಎಂದು ಖವಾಜಾ ಆಸಿಫ್‌ ಹೇಳಿದ್ದರು. ಆದರೆ ಈಗ ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದು ಪಾಕಿಸ್ತಾನ ಭಾರತದ ಸೈನಿಕರನ್ನು ಸೆರೆ ಹಿಡಿದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:9 ಉಗ್ರರ ನೆಲೆಗಳು ಉಡೀಸ್‌- ಗಡಿಯಿಂದ ಎಷ್ಟು ದೂರ ಇದೆ? ಎಲ್ಲೆಲ್ಲಿ ದಾಳಿ?

    ಪದೇ ಪದೇ ಭಾರತವನ್ನು ಕೆಣಕಿದ್ದ ಆಸಿಫ್‌, ಒಂದು ವೇಳೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಧೈರ್ಯ ಮಾಡಿದರೆ ಮತ್ತು ಪಾಕಿಸ್ತಾನದ ಅಸ್ತಿತ್ವಕ್ಕೆ ಬೆದರಿಕೆ ಎದುರಾದರೆ ಈ ಜಗತ್ತಿನಲ್ಲಿ ಯಾರೂ ಉಳಿಯುವುದಿಲ್ಲ ಎಂದಿದ್ದರು.

    ಭಾರತ ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸಿ ಯಾವುದೇ ಡ್ಯಾಮ್ ನಿರ್ಮಿಸಿದರೆ ಇಸ್ಲಾಮಾಬಾದ್ ಅದನ್ನು ಧ್ವಂಸಗೊಳಿಸಲಿದೆ ಎಂದು ಹೇಳಿದ್ದರು.

    ಭಾರತ ತಡ ರಾತ್ರಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ.

  • 9 ಉಗ್ರರ ನೆಲೆಗಳು ಉಡೀಸ್‌-  ಗಡಿಯಿಂದ ಎಷ್ಟು ದೂರ ಇದೆ? ಎಲ್ಲೆಲ್ಲಿ ದಾಳಿ?

    9 ಉಗ್ರರ ನೆಲೆಗಳು ಉಡೀಸ್‌- ಗಡಿಯಿಂದ ಎಷ್ಟು ದೂರ ಇದೆ? ಎಲ್ಲೆಲ್ಲಿ ದಾಳಿ?

    ನವದೆಹಲಿ: ತಡರಾತ್ರಿ ಭಾರತ (India) ಪಾಕಿಸ್ತಾನದಲ್ಲಿರುವ (Pakistan) ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪಹಲ್ಗಾಮ್‌ ನರಮೇಧಕ್ಕೆ (Pahalgam Terror Attack) ಪ್ರತೀಕಾರ ತೀರಿಸಿದೆ.

    ಉಗ್ರರ 9 ನೆಲೆಗಳ ಮೇಲೆ ಆಪರೇಷನ್‌ ಸಿಂಧೂರ (Operation Sindoor) ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಒಳಗಡೆ ನುಗ್ಗಿ ಏರ್‌ಸ್ಟ್ರೈಕ್‌ (Air Strike) ಮಾಡಿ ಧ್ವಂಸ ಮಾಡಿದೆ. ಭಾರತ ಪಾಕಿಸ್ತಾನದ ಯಾವುದೇ ಮಿಲಿಟರಿ ನೆಲೆಗಳನ್ನು ಗುರಿಯಾಗಿಸದೇ ಕೇವಲ ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಿದ್ದು ವಿಶೇಷ.

    9 ಉಗ್ರರ ನೆಲೆಗಳ ಪೈಕಿ ಕೆಲವು 100 ಕಿ.ಮೀ ದೂರದಲ್ಲಿ ಇದ್ದವು. ದಾಳಿಗೊಳಗಾದ ಶಿಬಿರಗಳು ಭಾರತದ ವಿರುದ್ಧದ ಹಿಂದಿನ ಅನೇಕ ದಾಳಿಗಳಿಗೆ ನೇರವಾಗಿ ಸಂಬಂಧಿಸಿವೆ. ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: Operation Sindoor | ಭಾರತದ ಪ್ರತೀಕಾರ ದಾಳಿಗೆ ಉಗ್ರ ಹಫೀಜ್ ಸಯೀದ್‌ಗೆ ಸಂಬಂಧಿಸಿದ ಮಸೀದಿ ಧ್ವಂಸ

    ಎಲ್ಲೆಲ್ಲಿ ದಾಳಿ ನಡೆದಿದೆ?
    1) ಬಹವಾಲ್ಪುರ್: ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಬಹವಾಲ್ಪುರ್ ಮೇಲೆ ದಾಳಿ ನಡೆದಿದೆ. ಇದು ಜೈಷ್‌ ಉಗ್ರ ಸಂಘಟನೆಯ ಪ್ರಧಾನ ಕಚೇರಿಯಾಗಿತ್ತು.

    2) ಮುರಿಡ್ಕೆ: ಸಾಂಬಾ ಎದುರಿನ ಗಡಿಯಿಂದ 30 ಕಿ.ಮೀ ದೂರದಲ್ಲಿದ್ದು ಇದು ಲಷ್ಕರ್-ಎ-ತೈಬಾ ಸಂಘಟನೆ ಉಗ್ರರ ಶಿಬಿರ ನಡೆಸುತ್ತಿತ್ತು. ಮುಂಬೈ ದಾಳಿ ನಡೆಸಿದ ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗಿತ್ತು.

    3) ಗುಲ್ಪುರ್ : ಗಡಿ ನಿಯಂತ್ರಣ ರೇಖೆ ಪೂಂಚ್-ರಾಜೌರಿಯಿಂದ 35 ಕಿ.ಮೀ ದೂರದಲ್ಲಿದೆ. ಪೂಂಚ್‌ನಲ್ಲಿ ಏಪ್ರಿಲ್ 20, 2023 ರಂದು ನಡೆದ ದಾಳಿ ಮತ್ತು ಜೂನ್ 24 ರಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಮಾಯಕ ಯಾತ್ರಿಕರ ಮೇಲೆ ಇಲ್ಲಿ ತರಬೇತಿ ಪಡೆದ ಉಗ್ರರು ದಾಳಿ ನಡೆಸಿದ್ದರು.

    4) ಸವಾಯಿ: ಲಷ್ಕರ್‌ ಉಗ್ರರ ಕ್ಯಾಂಪ್‌ ಇದಾಗಿದ್ದು ಗಡಿ ನಿಯಂತ್ರಣ ರೇಖೆಯಿಂದ 30 ಕಿ.ಮೀ ದೂರದಲ್ಲಿದೆ. ಕಳೆದ ವರ್ಷ ಅಕ್ಟೋಬರ್ 20, 24 ರಂದು ಸೋನ್‌ಮಾರ್ಗ್, ಅಕ್ಟೋಬರ್ 24 ರಂದು ಗುಲ್ಮಾರ್ಗ್ ಮತ್ತು ಏಪ್ರಿಲ್ 22 ರಂದು ಪಹಲ್ಗಾಮ್ ಮೇಲೆ ದಾಳಿ ನಡೆಸಿದ ಉಗ್ರರು ಇಲ್ಲಿ ತರಬೇತಿ ಪಡೆದಿದ್ದರು.


    5) ಬಿಲಾಲ್: ಉಗ್ರ ಸಂಘಟನೆ ಜೈಷ್–ಎ–ಮೊಹಮದ್ ಲಾಂಚ್‌ ಪ್ಯಾಡ್‌ ಇದಾಗಿದ್ದು ಉಗ್ರರು ಇಲ್ಲಿ ಕೊನೆಯ ಹಂತದ ತರಬೇತಿ ಪಡೆದು ಭಾರತಕ್ಕೆ ನುಗ್ಗುತ್ತಿದ್ದರು.

    6) ಕೋಟ್ಲಿ: ಗಡಿ ನಿಯಂತ್ರಣ ರೇಖೆಯಿಂದ 15 ಕಿ.ಮೀ ದೂರದಲ್ಲಿದೆ. ಲಷ್ಕರ್‌ ಉಗ್ರರ ಕ್ಯಾಂಪ್‌ ಇದಾಗಿದ್ದು 50 ಉಗ್ರರಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿತ್ತು.

    7) ಬರ್ನಾಲಾ: ಭಾರತ ಗಡಿಯಿಂದ 10 ಕಿ.ಮೀ ದೂರದಲ್ಲಿದೆ. ಇಲ್ಲೂ ಲಷ್ಕರ್‌ ಉಗ್ರರಿಗೆ ತರಬೇತಿ ನೀಡಲಾಗುತ್ತಿತ್ತು.

    8) ಸರ್ಜಲ್: ಸಾಂಬಾ ಕಟುವಾ ಬಳಿ ಅಂತಾರಾಷ್ಟ್ರೀಯ ಗಡಿಯಿಂದ 8 ಕಿಲೋಮೀಟರ್ ದೂರದಲ್ಲಿ ಜೈಶ್ ಎ ಮೊಹಮದ್ ಕ್ಯಾಂಪ್.

    9) ಮಹಮೂನಾ: ಸಿಯಾಲ್ ಕೋಟ್ ಬಳಿಯ ಅಂತಾರಾಷ್ಟ್ರೀಯ ಗಡಿಯಿಂದ 15 ಕಿಲೋಮೀಟರ್ ದೂರದಲ್ಲಿ ಹಿಜ್ಬುಲ್ಲಾ ಟ್ರೈನಿಂಗ್ ಸೆಂಟರ್.

  • Operation Sindoor | ವಾಯುನೆಲೆ ಬಂದ್ – ಶ್ರಿನಗರದಿಂದ ವಿಮಾನ ಹಾರಾಟ ಸ್ಥಗಿತ

    Operation Sindoor | ವಾಯುನೆಲೆ ಬಂದ್ – ಶ್ರಿನಗರದಿಂದ ವಿಮಾನ ಹಾರಾಟ ಸ್ಥಗಿತ

    ಶ್ರೀನಗರ: ಪಹಲ್ಗಾಮ್ ಉಗ್ರರ ದಾಳಿಗೆ(Pahalgam Terror Attack) ಪ್ರತೀಕಾರವಾಗಿ ಭಾರತ ತಡರಾತ್ರಿ ಪಾಕಿಸ್ತಾನದ(Pakistan) ಉಗ್ರರ ಅಡಗುತಾಣಗಳ ಮೇಲೆ ಏರ್‌ಸ್ಟ್ರೈಕ್‌(Air Strike) ನಡೆಸಿದೆ. ದಾಳಿಯ ಬೆನ್ನಲ್ಲೇ ವಾಯು ನೆಲೆಯನ್ನು ಬಂದ್ ಮಾಡಲಾಗಿದ್ದು, ಶ್ರೀನಗರದಿಂದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

    ಆಪರೇಷನ್ ಸಿಂಧೂರ ಹೆಸರಿನಲ್ಲಿ ಭಾರತ ತಡರಾತ್ರಿ 1:44ಕ್ಕೆ ದಾಳಿ ನಡೆಸಿದೆ. ರಫೇಲ್ ಯುದ್ಧ ವಿಮಾನಗಳನ್ನು ಬಳಸಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ(PoK ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಏರ್‌ಸ್ಟ್ರೈಕ್‌ ನಡೆದಿದೆ. ಈ ದಾಳಿಗಳಲ್ಲಿ ಮೂವತ್ತಕ್ಕೂ ಹೆಚ್ಚು ಉಗ್ರರು ಮೃತಪಟ್ಟಿರುವುದಾಗಿ ಕೆಲ ವರದಿಗಳು ತಿಳಿಸಿವೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಹೆಸರನ್ನೇ ಯಾಕೆ ಇಡಲಾಯಿತು ಗೊತ್ತಾ?

    ಉಗ್ರರ 9 ಸ್ಥಳಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದೇವೆ. ಯಾವುದೇ ಯಾವುದೇ ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ. ಗುರಿ ಮಾಡಲಾದ ೯ ಸ್ಥಳಗಳಲ್ಲಿ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಸೇರಿವೆ ಎಂದು ಮೂಲಗಳು ತಿಳಿಸಿವೆ.

    ಒಂಬತ್ತು ಗುರಿಗಳಲ್ಲಿ ನಾಲ್ಕು ಪಾಕಿಸ್ತಾನದಲ್ಲಿ ಮತ್ತು ಐದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದವು. ಪಾಕಿಸ್ತಾನದಲ್ಲಿರುವ ಗುರಿಗಳಲ್ಲಿ ಬಹಾವಲ್ಪುರ್, ಮುರಿಡ್ಕೆ ಮತ್ತು ಸಿಯಾಲ್‌ಕೋಟ್ ಸೇರಿವೆ. ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಲು ವಿಶೇಷ ನಿಖರ ಯುದ್ಧಸಾಮಗ್ರಿಗಳನ್ನು ಬಳಸಲಾಗಿದೆ. ಇದನ್ನೂ ಓದಿ: Operation Sindoor – ಪಾಕ್‌ ಉಗ್ರರ 9 ನೆಲೆಗಳ ಮೇಲೆ ಏರ್‌ಸ್ಟ್ರೈಕ್‌

    ಭಾರತದ 26 ಸಹೋದರಿಯರ ಕುಂಕುಮ ಅಳಿಸಿದ್ದಕ್ಕೆ ನಡೆಸಿದ ಪ್ರತೀಕಾರಕ್ಕೆ `ಆಪರೇಷನ್ ಸಿಂಧೂರ'(Operation Sindoor) ಎಂಬ ಹೆಸರನ್ನು ಇಡಲಾಗಿದೆ. ಉಗ್ರರ ಶಿಬಿರಗಳನ್ನು ಧ್ವಂಸ ಮಾಡಲಾಗಿರುವ ವಿಡಿಯೋಗಳು ಹರಿದಾಡುತ್ತಿವೆ.

    ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರ ತೀರಿಸುವುದಾಗಿ ಭಾರತ ಪ್ರತಿಜ್ಞೆ ಮಾಡಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಮಿಲಿಟರಿ ಪ್ರತಿಕ್ರಿಯೆಯ ವಿಧಾನ, ಗುರಿ ಮತ್ತು ಸಮಯವನ್ನು ನಿರ್ಧರಿಸಲು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ‍್ಯ ನೀಡಿದ್ದರು.

  • Explainer | ಯಾರಿದು ಹೌತಿ ಉಗ್ರರು? ಅಮೆರಿಕ ದಾಳಿ ನಡೆಸಿದ್ದು ಯಾಕೆ? ವಿಶ್ವಕ್ಕೆ ಸಮಸ್ಯೆ ಏನು?

    Explainer | ಯಾರಿದು ಹೌತಿ ಉಗ್ರರು? ಅಮೆರಿಕ ದಾಳಿ ನಡೆಸಿದ್ದು ಯಾಕೆ? ವಿಶ್ವಕ್ಕೆ ಸಮಸ್ಯೆ ಏನು?

    ಷ್ಯಾ-ಉಕ್ರೇನ್‌, ಹಮಾಸ್‌-ಇಸ್ರೇಲ್‌ ಮಧ್ಯೆ ಕದನ ವಿರಾಮದ ಬಗ್ಗೆ ಮಾತುಕತೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಹೌತಿ ಉಗ್ರರ ಕಿರಿಕ್‌ ಮತ್ತೆ ಆರಂಭವಾಗುವ ಸಾಧ್ಯತೆಯಿದೆ. ಈ ಉಗ್ರರು ಈಗ ಮತ್ತೆ ನಾವು ವಾಣಿಜ್ಯ ಹಡುಗುಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆ ಬೆನ್ನಲ್ಲೇ ಅಮೆರಿಕ (USA) ಈಗ ಹೌತಿ ನೆಲೆಗಳ ಮೇಲೆ ಏರ್‌ಸ್ಟ್ರೈಕ್‌ (Air Strike) ಮಾಡಿದೆ. ಹೀಗಾಗಿ ಇಲ್ಲಿ ಹೌತಿ ಉಗ್ರರು ಯಾರು? ಕೆಂಪು ಸಮುದ್ರ ಮಾರ್ಗ ಯಾಕೆ ಫೇಮಸ್‌? ಹೌತಿ ಉಗ್ರರು ದಾಳಿ ಮಾಡಿದರೆ ಭಾರತ (India) ಮತ್ತು ವಿಶ್ವದ ಮೇಲೆ ಆಗುವ ಪರಿಣಾಮ ಏನು ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಹೌತಿ ಉಗ್ರರು ಯಾರು?
    1990ರಲ್ಲಿ ಯೆಮೆನ್‌ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ವಿರುದ್ಧ ಭ್ರಷ್ಟಾಚಾರದ ಆರೋಪ ಬರುತ್ತದೆ. ಈ ವೇಳೆ ಧಾರ್ಮಿಕ ನಾಯಕ ಹುಸೇನ್‌ ಅಲಿ ಹೌತಿ ನೇತೃತ್ವದಲ್ಲಿ ಒಂದು ಚಳುವಳಿ ಆರಂಭವಾಗುತ್ತದೆ. ಈ ಚಳುವಳಿ ಈಗ ಹೌತಿ ಉಗ್ರ ಸಂಘಟನೆಯಾಗಿ ಮಾರ್ಪಾಡಾಗಿದೆ.

    ರಷ್ಯಾದ (Russia) ವಿರುದ್ಧ ಹೋರಾಡಲು ಅಮೆರಿಕ ತಾಲಿಬಾನ್‌ ಹೇಗೆ ಬೆಳೆಸಿತೋ ಅದೇ ರೀತಿ ಇರಾನ್‌ ತನ್ನ ವಿರುದ್ಧ ಇರುವ ದೇಶಗಳ ವಿರುದ್ಧ ಹೋರಾಡಲು ಹೌತಿ ಬಂಡುಕೋರರಿಗೆ ಸಹಾಯ ನೀಡುತ್ತದೆ. ಈಗ ಯೆಮೆನ್‌ನ ಒಂದು ಕಡೆ ಸೌದಿ ಅರೇಬಿಯಾ ಮತ್ತು ಅಮೆರಿಕದ ಬೆಂಬಲ ಇರುವ ಒಂದು ಸರ್ಕಾರ ಇದ್ದರೆ ಇನ್ನೊಂದು ಕಡೆ ಇರಾನ್‌ ಬೆಂಬಲಿತ ಹೌತಿ ಉಗ್ರರು ಇದ್ದಾರೆ. ಅಮೆರಿಕ, ಇಸ್ರೇಲ್‌, ಸೌದಿ ಅರೇಬಿಯಾ ಮತ್ತು ಪಾಶ್ಚಿಮಾತ್ಯ ದೇಶಗಳೇ ಹೌತಿ ಉಗ್ರರ ಶತ್ರುಗಳು.

    ಕೆಂಪು ಸಮುದ್ರ ಮಾರ್ಗ ಎಲ್ಲಿದೆ?
    ಯುರೋಪ್‌ ಮತ್ತು ಏಷ್ಯಾದ ವ್ಯಾಪಾರದ ಕೊಂಡಿಯೇ ಕೆಂಪು ಸಮುದ್ರ ಮಾರ್ಗ. ಯುರೋಪ್‌ನಿಂದ ಮೆಡಿಟರೆನಿಯನ್‌ ಸಮುದ್ರದ ಮೂಲಕ ಬರುವ ಹಡಗುಗಳು ಸೂಯೆಜ್‌ ಕಾಲುವೆ ಮೂಲಕ ಕೆಂಪು ಸಮುದ್ರಕ್ಕೆ (Red Sea) ಆಗಮಿಸಿ ಯೆಮನ್‌ ಬಳಿ ಬಾಬ್‌ ಎಲ್‌ ಮಂಡೇಬ್‌ ಚೋಕ್‌ ಪಾಯಿಂಟ್‌ ಮೂಲಕ ಅರಬ್ಬಿ ಸಮುದ್ರಕ್ಕೆ ಬಂದು ಏಷ್ಯಾದ ದೇಶಗಳಿಗೆ ಹೋಗುತ್ತದೆ. ಪ್ರತಿ ದಿವಸ ಈ ಮಾರ್ಗದಲ್ಲಿ ಅಂದಾಜು 385 ಕಾರ್ಗೋ ಹಡಗುಗಳು ಸಂಚರಿಸುತ್ತವೆ.

     

    ಹೌತಿ ಉಗ್ರರು ದಾಳಿ ನಡೆಸುತ್ತಿರುವುದು ಯಾಕೆ?
    ಮೊದಲೇ ಹೇಳಿದಂತೆ ಹೌತಿ ಬಂಡುಕೋರರಿಗೆ ಮೊದಲಿನಿಂದಲೂ ಇಸ್ರೇಲ್‌ ವಿರೋಧಿ. ಅಷ್ಟೇ ಅಲ್ಲದೇ ಹಮಾಸ್‌ ಉಗ್ರರ ಜೊತೆ ಉತ್ತಮ ಸಂಬಂಧವನ್ನು ಹೌತಿ ಇಟ್ಟುಕೊಂಡಿದೆ. ಯಾವಾಗ ಇಸ್ರೇಲ್‌ ಹಮಾಸ್‌ ಉಗ್ರರ ಮೇಲೆ ದಾಳಿ ಮಾಡಿತೋ ಅದಕ್ಕೆ ಪ್ರತಿಯಾಗಿ ಹೌತಿ ಕೆಂಪು ಸಮುದ್ರದಲ್ಲಿ ಸಂಚರಿಸುವ ಇಸ್ರೇಲ್‌ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಆರಂಭಿಸಿತು.

    ಇಸ್ರೇಲ್‌ ನಡೆಸಿದ ದಾಳಿ ಅಮೆರಿಕ ಮತ್ತು ಯುರೋಪ್‌ ರಾಷ್ಟ್ರಗಳು ಬೆಂಬಲ ನೀಡಿದ್ದವು. ಇಸ್ರೇಲ್‌ಗೆ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ಹೌತಿ ಉಗ್ರರು ಕೆಂಪು ಸಮುದ್ರದಲ್ಲಿ ಸಂಚರಿಸುವ ಅಮೆರಿಕ ಮತ್ತು ಯುರೋಪ್‌ ಕಾರ್ಗೋ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ದಾಳಿ ನಡೆಸಿದರೆ ಇಸ್ರೇಲ್‌ ಮೇಲೆ ಈ ದೇಶಗಳು ಒತ್ತಡ ಹಾಕಿ ಯುದ್ಧ ನಿಲ್ಲಸಬಹುದು ಎಂಬ ಲೆಕ್ಕಾಚಾರ ಹೌತಿ ಉಗ್ರರದ್ದು.

     

     

    ಈಗ ಅಮೆರಿಕ ದಾಳಿ ನಡೆಸಿದ್ದು ಯಾಕೆ?
    2023 ರ ಅಂತ್ಯದಿಂದ ಹೌತಿಗಳು ಕೆಂಪು ಸಮುದ್ರ, ಅಡೆನ್ ಕೊಲ್ಲಿ ಮತ್ತು ಇತರ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ವಾಣಿಜ್ಯ ಮತ್ತು ಮಿಲಿಟರಿ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಈಗ ಗಾಜಾದಲ್ಲಿ ಕದನ ವಿರಾಮದ ಹೊರತಾಗಿಯೂ ಹೌತಿಗಳು ಇತ್ತೀಚೆಗೆ ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ದಾಳಿಗಳನ್ನು ಪುನರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಕ್ಕೆ ಅಮೆರಿಕ ಈಗ ಯುದ್ಧ ವಿಮಾನಗಳನ್ನು ಬಳಸಿ ಬಾಂಬ್‌ ದಾಳಿ ನಡೆಸಿದೆ.

    ಪ್ರಸಿದ್ಧ ಮಿಲಿಟರಿ ತಾಣವಾದ ಸನಾ ವಿಮಾನ ನಿಲ್ದಾಣ ಸಂಕೀರ್ಣ, ಸೌದಿ ಗಡಿಯ ಬಳಿ ಹೌತಿಗಳ ಉತ್ತರದ ಭದ್ರಕೋಟೆಯಾದ ಸಾದಾ, ನೈಋತ್ಯ ಪ್ರದೇಶದಲ್ಲಿರುವ ಧಮರ್ ಮತ್ತು ಅಬ್ಸ್, ಹೌತಿ ಮಿಲಿಟರಿ ಸೌಲಭ್ಯಗಳ ನೆಲೆಯಾಗಿರುವ ಗೆರಾಫ್ ಮೇಲೆ ಅಮೆರಿಕ ಏರ್‌ಸ್ಟ್ರೈಕ್‌ ಮಾಡಿದೆ.

    ವಿಶ್ವಕ್ಕೆ ಸಮಸ್ಯೆ ಯಾಕೆ?
    ಯೆಮೆನ್‌ ಪಶ್ಚಿಮ ಭಾಗವನ್ನು ಹೌತಿ ಉಗ್ರರು ವಶಪಡಿಸಿಕೊಂಡಿದ್ದಾರೆ. ಪಶ್ಚಿಮ ಭಾಗವನ್ನು ವಶಪಡಿಸಿಕೊಂಡಿದ್ದರೂ ಯಾವುದೇ ಸಮಸ್ಯೆ ಇಲ್ಲ. ಆದರೆ ಅವರು ಈಗ ಕಿರಿಕ್‌ ಮಾಡುತ್ತಿರುವುದು ಬಾಬ್‌ ಎಲ್‌ ಮಂಡೇಬ್‌ ಎಂಬ ಚೋಕ್‌ ಪಾಯಿಂಟ್‌ನಲ್ಲಿ. ಈ ಚೋಕ್‌ ಪಾಯಿಂಟ್‌ 50 ಕಿ.ಮೀ ಉದ್ದ ಇದ್ದರೆ 26 ಕಿ.ಮೀ ಅಗಲ ಹೊಂದಿದೆ. ಈ ಚೋಕ್‌ಪಾಯಿಂಟ್‌ ಬ್ಲಾಕ್‌ ಮಾಡಿ ಕಿರಿಕ್‌ ಮಾಡುವುದು ಹೌತಿ ಉಗ್ರರ ಉದ್ದೇಶ.

    ಈ ಸಮುದ್ರ ಮಾರ್ಗ ಎಷ್ಟು ಮುಖ್ಯ ಅಂದರೆ ವಿಶ್ವದ ಕಂಟೈನರ್‌ ಟ್ರಾಫಿಕ್‌ ಪೈಕಿ ಶೇ.30 ರಷ್ಟು ಹಡಗುಗಳು ಈ ಮಾರ್ಗದಲ್ಲಿ ಸಂಚರಿಸುತ್ತದೆ. ಶೇ.7 ರಿಂದ ಶೇ.10 ರಷ್ಟು ಕಚ್ಚಾ ತೈಲ ಹಡಗುಗಳು ಈ ರೂಟ್‌ನಲ್ಲಿ ಸಾಗುತ್ತದೆ. ಕೆಂಪು ಸಮುದ್ರದ ಮೂಲಕ ವರ್ಷಕ್ಕೆ 1 ಟ್ರಿಲಿಯನ್‌ ಡಾಲರ್‌ ವ್ಯವಹಾರ ನಡೆಯುತ್ತದೆ. ಇದನ್ನೂ ಓದಿ: ಭಾರತದ ಧ್ವಜವುಳ್ಳ ಕಚ್ಚಾತೈಲ ಟ್ಯಾಂಕರ್‌ ಮೇಲೆ ಹೌತಿ ಉಗ್ರರಿಂದ ಡ್ರೋನ್‌ ದಾಳಿ

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ

    ಹಿಂದೆ ಸೂಯೆಜ್‌ ಕಾಲುವೆಯಲ್ಲಿ ಕಂಟೈನರ್‌ ಹಡಗು ಅರ್ಧಕ್ಕೆ ನಿಂತಿತ್ತು. 6 ದಿನ ಕಾಲುವೆಯಲ್ಲೇ ನಿಂತ ಕಾರಣ ವಿಶ್ವಕ್ಕೆ ಅಂದಾಜು 54 ಶತಕೋಟಿ ಡಾಲರ್‌ ವ್ಯಾಪಾರ ನಷ್ಟವಾಗಿತ್ತು. ಒಂದು ವಾರಕ್ಕೆ ಇಷ್ಟು ನಷ್ಟವಾದರೆ ತಿಂಗಳು ಕಾಲ ಈ ಜಲ ಮಾರ್ಗದಲ್ಲಿ ಸಮಸ್ಯೆಯಾದರೆ ವಿಶ್ವಕ್ಕೆ ಸಾಕಷ್ಟು ನಷ್ಟವಾಗಲಿದೆ.

    ಹಾಗೆ ನೋಡಿದರೆ ಹಿಂದೆ ಸೌದಿ ಅರೇಬಿಯಾದ ಮೇಲೂ ಹೌತಿ ಉಗ್ರರು ದಾಳಿ ನಡೆಸಿದ್ದರು. ಯಾಕೆಂದರೆ ಸೌದಿಯಲ್ಲಿ ಸುನ್ನಿ ಮುಸ್ಲಿಮರಿಂದ ಹೌತಿಯಲ್ಲಿ ಶಿಯಾ ಮುಸ್ಲಿಮರಿದ್ದಾರೆ. ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋದ ತೈಲ ಸಂಸ್ಕರಣ ಘಟಕದ ಮೇಲೆ ಡ್ರೋನ್‌ ದಾಳಿ ನಡೆಸಿದ್ದರು. ಈ ಪರಿಣಾಮ ದಿಢೀರ್‌ ವಿಶ್ವದಲ್ಲಿ ತೈಲ ಬೆಲೆ ಏರಿಕೆಯಾಗಿತ್ತು.

    ಭಾರತದ ಮೇಲೆ ಆಗುವ ಪರಿಣಾಮ ಏನು?
    ಹೇಗೆ ವಾಹನಗಳಿಗೆ ವಿಮೆ ಮಾಡಲಾಗುತ್ತದೋ ಅದೇ ರೀತಿ ಹಡಗಗುಗಳಿಗೆ ವಿಮೆ ಇರುತ್ತೆ. ಮೊದಲು ಈ ಮಾರ್ಗದ ಮೂಲಕ ಸಾಗುವ ಕಾರ್ಗೋ ಶಿಪ್‌ಗಳಿಗೆ 2 ಲಕ್ಷ ಡಾಲರ್‌ ವಿಮೆ ಇದ್ದರೆ ಈಗ 5 ಲಕ್ಷ ಡಾಲರ್‌ಗೆ ಏರಿಕೆಯಾಗಿದೆ.

    ಎರಡನೇಯದಾಗಿ ಕೆಂಪು ಸಮುದ್ರದಲ್ಲಿ ಸಮಸ್ಯೆಯಾದರೆ ಹಡಗುಗಳು ಈಗ ಮಾರ್ಗವನ್ನು ಬದಲಾಯಿಸಿ ಆಫ್ರಿಕಾ ಖಂಡಕ್ಕೆ ಸುತ್ತು ಹಾಕಿ ಏಷ್ಯಾ, ಯುರೋಪ್‌ ದೇಶಗಳನ್ನು ತಲುಪಬೇಕಾಗುತ್ತದೆ. ಕೆಂಪು ಸಮುದ್ರದ 2 ಸಾವಿರ ಕಿ.ಮೀ ಮಾಡಬೇಕಾದ ಹಡಗು ಹತ್ತಿರ ಹತ್ತಿರ 9 ಸಾವಿರ ಕಿ.ಮೀ ಕ್ರಮಿಸಿ ದೇಶಗಳನ್ನು ತಲುಪಬೇಕಾಗುತ್ತದೆ. ಯುರೋಪ್‌ನಿಂದ 5 ವಾರದಲ್ಲಿ ಭಾರತಕ್ಕೆ ಬರುತ್ತಿದ್ದ ಹಡಗುಗಳು ಈ ಮಾರ್ಗ ಬಳಸಿದರೆ 7-8 ವಾರ ಬೇಕಾಗುತ್ತದೆ.

    ಕೆಂಪು ಸಮುದ್ರದಲ್ಲಿ ಯುದ್ಧ ನಿಲ್ಲುತ್ತಾ?
    ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಯಾರ ಮೇಲೆ ಬೇಕಾದರೂ ಭೂಮಿ, ವಾಯು, ಸಮುದ್ರದಿಂದ ದಾಳಿ ಮಾಡಬಹುದು. ಈಗಾಗಲೇ ಅಮೆರಿಕ ಮತ್ತು ಯುಕೆ ಯೆಮೆನ್‌ನಲ್ಲಿರುವ ಹೌತಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೇ ಅಮೆರಿಕ ಮತ್ತು ಯುಕೆಯ ಯುದ್ಧ ನೌಕೆ ಹಡಗುಗಳು ಕೆಂಪು ಸಮುದ್ರದದಲ್ಲಿ ಬಿಡು ಬಿಟ್ಟಿವೆ. ಇರಾನ್‌ ಹೌತಿ ಉಗ್ರರಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಮಿಲಿಟರಿಯಲ್ಲಿ ಸೂಪರ್‌ ಪವರ್‌ ದೇಶಗಳಾಗಿವೆ. ಹೀಗಾಗಿ ಹೌತಿ ಉಗ್ರರನ್ನು ಸದೆ ಬಡೆಯುವುದು ಕಷ್ಟದ ಕೆಲಸ ಏನಲ್ಲ. ಈ ಕಿತ್ತಾಟದ ಮಧ್ಯೆ ಇರಾನ್‌ ಮಧ್ಯ ಪ್ರವೇಶ ಮಾಡಿದರೆ ಪರಿಸ್ಥಿತಿ ಉಲ್ಭಣವಾಗುವ ಸಾಧ್ಯತೆಯಿದೆ.

  • ಹೌತಿ ಉಗ್ರರ ಮೇಲೆ ಅಮೆರಿಕ ಏರ್‌ಸ್ಟ್ರೈಕ್‌, 31 ಬಲಿ – ನರಕ ತೋರಿಸ್ತೀವಿ ಎಂದು ಗುಡುಗಿದ ಟ್ರಂಪ್‌

    ಹೌತಿ ಉಗ್ರರ ಮೇಲೆ ಅಮೆರಿಕ ಏರ್‌ಸ್ಟ್ರೈಕ್‌, 31 ಬಲಿ – ನರಕ ತೋರಿಸ್ತೀವಿ ಎಂದು ಗುಡುಗಿದ ಟ್ರಂಪ್‌

    – ಟ್ರಂಪ್‌ ಎರಡನೇ ಅವಧಿಯ ಮೊದಲ ದಾಳಿ
    – ನಿಮ್ಮ ಸಮಯ ಮುಗಿದಿದೆ: ಟ್ರಂಪ್‌ ಎಚ್ಚರಿಕೆ

    ವಾಷಿಂಗ್ಟನ್‌: ಅಮೆರಿಕದ (USA) ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಉಗ್ರರ ಮೇಲೆ ಏರ್‌ಸ್ಟ್ರೈಕ್‌ (Air Strike) ಮಾಡಿಸಿದ್ದಾರೆ. ಯೆಮೆನ್‌ನಲ್ಲಿ ಹೌತಿ ಉಗ್ರರ ನೆಲೆಗಳ (Yemen Houthi Rebels) ಅಮೆರಿಕ ಏರ್‌ಸ್ಟ್ರೈಕ್‌ (Air Strike) ನಡೆಸಿ ಧ್ವಂಸಗೊಳಿಸಿದೆ.

    ಯೆಮೆನ್‌ನ ಇರಾನ್ ಬೆಂಬಲಿತ ಹೌತಿಗಳ ವಿರುದ್ಧ ದೊಡ್ಡ ಪ್ರಮಾಣದ ಮಿಲಿಟರಿ ದಾಳಿಯಿಂದ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.  ಅಮೆರಿಕ ಯುದ್ಧ ನೌಕೆಗಳಿಂದ ಹಾರಿದ ಯುದ್ಧ ವಿಮಾನಗಳು ಹೌತಿ ಉಗ್ರರ ಪ್ರಮುಖ ಸ್ಥಳಗಳ ಮೇಲೆ ಬಾಂಬ್‌ ದಾಳಿ ನಡೆಸಿದೆ.

    ಕೆಂಪು ಸಮುದ್ರದಲ್ಲಿ ಸರಕು ಸಾಗಾಣಿಕೆ ಹಡಗು ಮೇಲೆ ಹೌತಿ ಉಗ್ರರು ನಡೆಸಿದ ದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ನಿಮ್ಮ ಸಮಯ ಮುಗಿದಿದೆ ಮತ್ತೆ ದಾಳಿ ಮಾಡಿದರೆ ನಿಮಗೆ ನರಕ ತೋರಿಸಲಾಗುವುದು ಎಂದು ಟ್ರಂಪ್‌ ಗುಡುಗಿದ್ದಾರೆ.

    ಜಾಗತಿಕ ವ್ಯಾಪಾರ ಮತ್ತು ಅಮೆರಿಕ ಸ್ವತ್ತುಗಳನ್ನು ರಕ್ಷಿಸಲು ಈ ದಾಳಿ ಮಾಡಿದ್ದೇವೆ ಎಂದು ಟ್ರಂಪ್‌ ಸಮರ್ಥಿಸಿಕೊಂಡಿದ್ದಾರೆ. ಯಾವುದೇ ಭಯೋತ್ಪಾದಕ ಪಡೆ ಅಮೆರಿಕದ ವಾಣಿಜ್ಯ ಮತ್ತು ನೌಕಾ ಹಡಗುಗಳು ವಿಶ್ವದ ಜಲಮಾರ್ಗಗಳಲ್ಲಿ ಮುಕ್ತವಾಗಿ ನೌಕಾಯಾನ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಹೌತಿಗಳಿಗೆ ಇರಾನ್‌ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ಇರಾನ್‌ ದೇಶವನ್ನು ಸಂಪೂರ್ಣವಾಗಿ ಹೊಣೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಹೌತಿಗಳ ಬೆದರಿಕೆಗೆ ಮಾಜಿ ಅಧ್ಯಕ್ಷ ಜೋ ಬೈಡನ್‌ ಪ್ರಬಲವಾಗಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಟೀಕಿಸಿದ್ದಾರೆ.

    ಜೋ ಬೈಡೆನ್ ಸರ್ಕಾರದ ಪ್ರತಿಕ್ರಿಯೆ ಶೋಚನೀಯವಾಗಿ ದುರ್ಬಲವಾಗಿತ್ತು. ಇದರಿಂದಾಗಿ ಹೌತಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ನಾಲ್ಕು ತಿಂಗಳ ಹಿಂದೆ ಕೆಂಪು ಸಮುದ್ರದ ಮೂಲಕ ಹಾದುಹೋದ ಕೊನೆಯ ಅಮೆರಿಕನ್ ಯುದ್ಧನೌಕೆಯ ಮೇಲೆ ಹೌತಿಗಳು ಒಂದು ಡಜನ್‌ಗಿಂತಲೂ ಹೆಚ್ಚು ಬಾರಿ ದಾಳಿ ಮಾಡಿದ್ದಾರೆ. ಇರಾನ್‌ನಿಂದ ಹಣಕಾಸು ಪಡೆದ ಹೌತಿ ಗೂಂಡಾಗಳು ಯುಎಸ್ ವಿಮಾನಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿದ್ದಾರೆ. ಈ ಕಾರಣಕ್ಕೆ ದಾಳಿ ನಡೆಸಲಾಗಿದೆ ಎಂದು ಟ್ರಂಪ್‌ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಬಸ್‌ ಉರುಳಿಸಿ 9 ಮಂದಿ ತೀರ್ಥಯಾತ್ರಿಗಳನ್ನು ಹತೈಗೈದ ಉಗ್ರ ಪಾಕ್‌ನಲ್ಲಿ ಮಟಾಷ್‌

     

    ಈಗ ಅಮೆರಿಕ ದಾಳಿ ನಡೆಸಿದ್ದು ಯಾಕೆ?
    2023 ರ ಅಂತ್ಯದಿಂದ ಹೌತಿಗಳು ಕೆಂಪು ಸಮುದ್ರ, ಅಡೆನ್ ಕೊಲ್ಲಿ ಮತ್ತು ಇತರ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ವಾಣಿಜ್ಯ ಮತ್ತು ಮಿಲಿಟರಿ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಈಗ ಗಾಜಾದಲ್ಲಿ ಕದನ ವಿರಾಮದ ಹೊರತಾಗಿಯೂ ಹೌತಿಗಳು ಇತ್ತೀಚೆಗೆ ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ದಾಳಿಗಳನ್ನು ಪುನರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಕ್ಕೆ ಅಮೆರಿಕ ಈಗ ದಾಳಿ ನಡೆಸಿದೆ.

    ಎಲ್ಲಿಲ್ಲಿ ದಾಳಿ?
    ಪ್ರಸಿದ್ಧ ಮಿಲಿಟರಿ ತಾಣವಾದ ಸನಾ ವಿಮಾನ ನಿಲ್ದಾಣ ಸಂಕೀರ್ಣ, ಸೌದಿ ಗಡಿಯ ಬಳಿ ಹೌತಿಗಳ ಉತ್ತರದ ಭದ್ರಕೋಟೆಯಾದ ಸಾದಾ, ನೈಋತ್ಯ ಪ್ರದೇಶದಲ್ಲಿರುವ ಧಮರ್ ಮತ್ತು ಅಬ್ಸ್, ಹೌತಿ ಮಿಲಿಟರಿ ಸೌಲಭ್ಯಗಳ ನೆಲೆಯಾಗಿರುವ ಗೆರಾಫ್ ಮೇಲೆ ದಾಳಿ ನಡೆದಿದೆ.