Tag: air marshal

  • ಆಪರೇಷನ್‌ ಸಿಂಧೂರದ ಹಿಂದಿರುವ ಏರ್‌ ಮಾರ್ಷಲ್‌ ಎಕೆ ಭಾರ್ತಿ ಯಾರು? ಹಿನ್ನೆಲೆ ಏನು?

    ಆಪರೇಷನ್‌ ಸಿಂಧೂರದ ಹಿಂದಿರುವ ಏರ್‌ ಮಾರ್ಷಲ್‌ ಎಕೆ ಭಾರ್ತಿ ಯಾರು? ಹಿನ್ನೆಲೆ ಏನು?

    ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಆಪರೇಷನ್‌ ಸಿಂಧೂರ (Operartion Sindoor) ಹೆಸರಿನಲ್ಲಿ ಮೇ 7 ರಂದು ಮಧ್ಯರಾತ್ರಿ ಭಾರತೀಯ ಸೇನೆ ನಡೆಸಿದ ಸರಣಿ ಕ್ಷಿಪಣಿ ದಾಳಿಯಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಒಳಭಾಗದಲ್ಲಿ ಭಯೋತ್ಪಾದಕರ ಅಡಗುತಾಣಗಳನ್ನು ಧ್ವಂಸಗೊಳಿಸಲಾಯಿತು. ಅಲ್ಲದೇ 100  ಭಯೋತ್ಪಾದಕರನ್ನು ಕೂಡ ಭಾರತೀಯ ಸೇನಾ ಪಡೆ ಹೊಡೆದುರುಳಿಸಿದ್ದು, ಪಾಕ್‌ ಮುಟ್ಟಿ ನೋಡಿಕೊಳ್ಳುವಂತಹ ಪೆಟ್ಟು ಕೊಟ್ಟಿದೆ. 

    ಭಾರತ ಮತ್ತು ಪಾಕ್‌ ಸಂಘರ್ಷದಲ್ಲಿ ಭಾರತದ ತ್ರಿಪಡೆಗಳಾದ ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಪಾತ್ರ ಪ್ರಮುಖವಾದದ್ದು. ಈ ಆಪರೇಷನ್‌ ಸಿಂಧೂರ ಯಶಸ್ವಿ ಕಾರ್ಯಾಚರಣೆಯ ಹಿಂದಿರುವ ಮಾಸ್ಟರ್ ಮೈಂಡ್‌ಗಳ ಪೈಕಿ ಏರ್‌ ಮಾರ್ಷಲ್‌ ಎಕೆ ಭಾರ್ತಿ ಕೂಡ ಒಬ್ಬರು. ಹಾಗಿದ್ರೆ ಯಾರು ಈ ಏರ್‌ ಮಾರ್ಷಲ್‌ ಭಾರ್ತಿ? ಹಿನ್ನೆಲೆ ಏನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಹಿನ್ನೆಲೆ ಏನು?
    ಬಿಹಾರದ ಪುರ್ನಿಯಾ ಜಿಲ್ಲೆಯ ಜುನ್ನಿ ಕಲಾನ್ ಗ್ರಾಮದ ಎಕೆ ಭಾರ್ತಿ ಅವರ ತಂದೆ ಜೀವ್ಚಲಾಲ್ ಯಾದವ್, ಕೋಸಿ ಯೋಜನೆಯಲ್ಲಿ ಲೆಕ್ಕಪರಿಶೋಧಕರಾಗಿದ್ದರು. ಎಕೆ ಭಾರ್ತಿಯವರ ಇಬ್ಬರು ಸಹೋದರರು ಕೂಡ ಪುರ್ನಿಯಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  

    ಏರ್ ಮಾರ್ಷಲ್ ಭಾರ್ತಿ ಅವರಂತಹ ಸರಳ ಕುಟುಂಬದಿಂದ ಬಂದ ವ್ಯಕ್ತಿಯ ಈ ಕೊಡುಗೆ ಪೂರ್ಣಿಯಾಗೆ ಮಾತ್ರವಲ್ಲ, ಇಡೀ ಬಿಹಾರಕ್ಕೆ ಹೆಮ್ಮೆಯ ವಿಷಯವಾಗಿದೆ. ಇದು ಯುವ ಪೀಳಿಗೆಗೆ ಉತ್ತಮ ಸ್ಫೂರ್ತಿಯಾಗಿದೆ ಎಂದು ಬಿಹಾರದ ಜನರು ಭಾರ್ತಿ ಅವರನ್ನು ಕೊಂಡಾಡುತ್ತಿದ್ದಾರೆ.

    ಶೈಕ್ಷಣಿಕ ಹಿನ್ನೆಲೆ:
    ಏರ್ ಮಾರ್ಷಲ್ ಎಕೆ ಭಾರ್ತಿ ತಮ್ಮ ಆರಂಭಿಕ ಶಿಕ್ಷಣವನ್ನು ತಿಲೈಯಾದ ಸೈನಿಕ್ ಶಾಲೆಯಿಂದ ಪಡೆದರು. ಬಳಿಕ ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ (ಎನ್‌ಡಿಎ) ಪ್ರವೇಶ ಪಡೆದರು.ವೆಲ್ಲಿಂಗ್ಟನ್‌ನಲ್ಲಿ ಪ್ರತಿಷ್ಠಿತ ಸ್ಟಾಫ್ ಕೋರ್ಸ್ ಮತ್ತು ದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲಿ (ಎನ್‌ಡಿಸಿ) ವ್ಯಾಸಂಗ ಮಾಡಿದರು.

    ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜ್ (ಡಿಎಸ್‌ಎಸ್‌ಸಿ) ಮತ್ತು ನ್ಯಾಷನಲ್ ಡಿಫೆನ್ಸ್ ಕಾಲೇಜಿನ (ಎನ್‌ಡಿಸಿ) ಸ್ನಾತಕೋತ್ತರ ಪದವೀಧರರಾದ ಎಕೆ ಭಾರ್ತಿ ಅವರು ಐಎಎಫ್‌ಗಾಗಿ ಆಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಕಾರ್ಯಗತಗೊಳಿಸುವ ಮತ್ತು ಶತ್ರು ಪ್ರದೇಶವನ್ನು ಭೇದಿಸಲು ಹೊಸ ತಂತ್ರಗಳನ್ನು ಅಭಿವೃದ್ಧಿಪಡಿಸುವ ಕೀರ್ತಿಗೆ ಪಾತ್ರರಾಗಿದ್ದಾರೆ.

    ಸಾಧನೆಗಳೇನು?
    ಸುಮಾರು ಎರಡು ದಶಕಗಳ ಸೇವೆಯ ಅನುಭವ ಹೊಂದಿರುವ ಅನುಭವಿ ಅಧಿಕಾರಿ ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ ಅವರು ಜೂನ್ 13, 1987 ರಂದು ಭಾರತೀಯ ವಾಯುಪಡೆಗೆ ನಿಯೋಜನೆಗೊಂಡರು. ಫೈಟರ್ ಯುದ್ಧ ನಾಯಕರಾಗಿದ್ದು, ಆಗಸ್ಟ್ 2005ರಿಂದ ಸೆಪ್ಟೆಂಬರ್ 2007 ರವರೆಗೆ ಸುಖೋಯ್ -30 ಎಂಕೆಐ ಸ್ಕ್ವಾಡ್ರನ್ ಅನ್ನು ಮುನ್ನಡೆಸಿದರು. ಅಲ್ಲಿ ಅವರು ವಿಮಾನದ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಕಾರ್ಯಗತಗೊಳಿಸುವಲ್ಲಿ ಮತ್ತು ತಂತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

    ಆಗಸ್ಟ್ 16, 2005ರಂದು ಎಕೆ ಭಾರ್ತಿ ಸುಖೋಯ್-30 ಎಂಕೆಐ ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ ಆಗಿ ಅಧಿಕಾರ ವಹಿಸಿಕೊಂಡರು. ಅವರ ನೇತೃತ್ವದಲ್ಲಿ, ಸುಖೋಯ್ -30 ಎಂಕೆಐ ಸ್ಕ್ವಾಡ್ರನ್ ಗಗನ್ ಶಕ್ತಿ, ಇಂದ್ರಧನುಷ್ 2006 (ರಾಯಲ್ ಏರ್ ಫೋರ್ಸ್‌ನೊಂದಿಗೆ), ಮತ್ತು ಗರುಡ 2007 (ಫ್ರೆಂಚ್ ಏರ್ ಫೋರ್ಸ್‌ನೊಂದಿಗೆ)  ಪ್ರಮುಖ ವ್ಯಾಯಾಮಗಳಲ್ಲಿ ತೊಡಗಿಸಿಕೊಂಡಿತ್ತು. 

    1997ರಲ್ಲಿ  ಕೆಲಸದ ಶ್ರದ್ಧೆಗಾಗಿ ಏರ್ ಮಾರ್ಷಲ್ ಭಾರ್ತಿ ಅವರಿಗೆ ವಾಯುಪಡೆಯ ಮುಖ್ಯಸ್ಥರು CAS ಪ್ರಶಂಸೆ ನೀಡಿದರು. 2008ರಲ್ಲಿ ಭಾರ್ತಿ ಅವರ ಕರ್ತವ್ಯ ನಿಷ್ಠೆ ಹಾಗೂ ಅತ್ಯುತ್ತಮ ನಾಯಕತ್ವ ಗುಣಕ್ಕಾಗಿ ʼವಾಯುಸೇನಾʼ ಪದಕವನ್ನು ನೀಡಿ ಗೌರವಿಸಲಾಯಿತು. 

    ಎಕೆ ಭಾರ್ತಿ ಅವರಿಗೆ ಅಪಘಾತ-ಮುಕ್ತ ಹಾರಾಟ ಪ್ರಶಸ್ತಿ ಮತ್ತು ಅಪಘಾತ-ಮುಕ್ತ ಹಾರಾಟಕ್ಕಾಗಿ 3 ಸ್ಟಾರ್ಸ್ ಅನ್ನು ಸಹ ನೀಡಲಾಗಿದೆ. ಸೆಪ್ಟೆಂಬರ್ 2023ರಿಂದ ಭಾರ್ತಿ ಡೈರೆಕ್ಟರ್ ಜನರಲ್ ಏರ್ ಆಪರೇಷನ್ಸ್ (DGAO) ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಿಜಿಎಒ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ಪ್ರಯಾಗ್‌ರಾಜ್‌ನ ಸೆಂಟ್ರಲ್ ಏರ್ ಕಮಾಂಡ್‌ನಲ್ಲಿ ಹಿರಿಯ ಸಿಬ್ಬಂದಿ ಅಧಿಕಾರಿ (ಎಸ್‌ಎಎಸ್‌ಒ) ಆಗಿದ್ದರು.

    ಆಪರೇಷನ್ ಸಿಂಧೂರ್‌ನಲ್ಲಿ ಭಾರ್ತಿ ಅವರ ಪಾತ್ರ:
    ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂಧೂರದಲ್ಲಿ ಭಾರತೀಯ ವಾಯುಪಡೆಯ ಕಾರ್ಯತಂತ್ರದ ಯೋಜನೆ ಮತ್ತು ವಾಯು ಕಾರ್ಯಾಚರಣೆಗಳ ನೇತೃತ್ವವನ್ನು ಏರ್‌ಮಾರ್ಷಲ್ ಎಕೆ ಭಾರ್ತಿ ವಹಿಸಿಕೊಂಡರು.

    ಭಾನುವಾರ ನಡೆದ ತ್ರಿಪಡೆಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ, IAF ಬಹವಾಲ್ಪುರ್ ಮತ್ತು ಮುರಿಡ್ಕೆಯಲ್ಲಿನ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಮತ್ತು ಚಕಲಾ, ರಫೀಕ್ ಮತ್ತು ರಹೀಮ್ ಯಾರ್ ಖಾನ್‌ನಲ್ಲಿರುವ ಪಾಕಿಸ್ತಾನದ ವಾಯು ನೆಲೆಗಳನ್ನು ಹೇಗೆ ಹೊಡೆದುರುಳಿಸಿತು ಎಂಬುದನ್ನು ಭಾರ್ತಿ ಬಹಿರಂಗಪಡಿಸಿದರು.

    ಸೋಮವಾರ ನಡೆದ ಮತ್ತೊಂದು ಸುದ್ದಿಗೋಷ್ಠಿಯಲ್ಲಿ, ಪಾಕಿಸ್ತಾನ ನಗರದಿಂದ 35 ಕಿ.ಮೀ ದೂರದಲ್ಲಿರುವ ಮಿಲಿಟರಿ ನೆಲೆಯಾದ ಮಾಲಿರ್ ಕಂಟೋನ್ಮೆಂಟ್ ಸೇರಿದಂತೆ ಕರಾಚಿಯಲ್ಲಿ ಹಲವಾರು ಗುರಿಗಳನ್ನು ಐಎಎಫ್ ಹೊಡೆದುರುಳಿಸಿದೆ ಎಂದು ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ದಾಳಿಯನ್ನು ವೀಡಿಯೋ ಸಾಕ್ಷ್ಯ ಸಮೇತ ಅಧಿಕಾರಿಗಳು ಬಹಿರಂಗಗೊಳಿಸಿದ್ದಾರೆ.

  • ಕಾಡ್ಗಿಚ್ಚು ನಂದಿಸಲು ವಾಯುಸೇನೆ ಸಿದ್ಧ- ರಾಜ್ಯ ಮುಖ್ಯ ಕಾರ್ಯದರ್ಶಿಗೆ ಏರ್ ಮಾರ್ಷಲ್ ಪತ್ರ

    ಕಾಡ್ಗಿಚ್ಚು ನಂದಿಸಲು ವಾಯುಸೇನೆ ಸಿದ್ಧ- ರಾಜ್ಯ ಮುಖ್ಯ ಕಾರ್ಯದರ್ಶಿಗೆ ಏರ್ ಮಾರ್ಷಲ್ ಪತ್ರ

    ಚಾಮರಾಜನಗರ: ರಾಜ್ಯದ ಅರಣ್ಯ ಪ್ರದೇಶಗಳಿಗೆ ಬೆಂಕಿ ಬಿದ್ದರೆ ಅದನ್ನು ನಂದಿಸುವ ಕಾರ್ಯಾಚರಣೆಗೆ ಸಹಕರಿಸಲು ವಾಯುಸೇನೆ ಸಿದ್ಧವಾಗಿದೆ. ಈ ಕುರಿತು ವಾಯುಸೇನೆಯ ಸೀನಿಯರ್ ಏರ್ ಸ್ಟಾಫ್ ಆಫೀಸರ್ ಏರ್ ಮಾರ್ಷಲ್ ಟಿ.ಡಿ. ಜೋಸೆಫ್ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಗೆ ಪತ್ರ ಬರೆದಿದ್ದಾರೆ.

    ದುರ್ಗಮ ಅರಣ್ಯ ಸೇರಿದಂತೆ ಕ್ಲಿಷ್ಟಕರ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಬಿದ್ದರೆ ಅಲ್ಲಿಗೆ ಅರಣ್ಯ ಸಿಬ್ಬಂದಿ ತೆರಳಿ ಬೆಂಕಿ ನಂದಿಸುವುದು ಕಷ್ಟವಾಗಲಿದೆ. ಅಂತಹ ಸಂದರ್ಭದಲ್ಲಿ ವಾಯುಸೇನೆಯ ಹೆಲಿಕಾಪ್ಟರ್ ಗಳನ್ನು ಕಳುಹಿಸಿಕೊಡುವಂತೆ ಹಾಗೂ ಸದಾ ಸನ್ನದ್ಧವಾಗಿ ಇರಿಸುವಂತೆ ಕ್ರಮ ಕೈಗೊಳ್ಳಲು ಮುಖ್ಯಕಾರ್ಯದರ್ಶಿಗಳಿಗೆ ಅರಣ್ಯ ಇಲಾಖೆ ವಿನಂತಿಸಿತ್ತು.

    ಈ ಹಿನ್ನೆಲೆಯಲ್ಲಿ ಬೆಂಕಿ ನಂದಿಸುವುದಕ್ಕೆ ಸಹಕಾರ ಕೋರಿ ಮುಖ್ಯಕಾರ್ಯದರ್ಶಿಗಳು ವಾಯುಸೇನೆಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿರುವ ವಾಯುಸೇನೆ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಸದಾ ಸಿದ್ಧವಿರುವುದಾಗಿ ತಿಳಿಸಿದ್ದಾರೆ.

    ಕಳೆದ ವರ್ಷ ಬೇಸಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಬಂಡೀಪುರ ಹೊತ್ತಿ ಉರಿದಿತ್ತು. ನಾಲ್ಕು ಸಾವಿರ ಹೆಕ್ಟೆರ್‍ಕ್ಕೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ದೊಡ್ಡ ಪ್ರಾಣಿಗಳು ಬೆಂಕಿಯಿಂದ ಬಚಾವಾದರೂ ಅಪರೂಪದ ಸರಿಸೃಪಗಳು ಸುಟ್ಟು ಭಸ್ಮವಾಗಿದ್ದವು. ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ ನಡೆಸಿದ್ದರು. ಕೊನೆಗೆ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಬೆಂಕಿಗೆ ನಂದಿಸುವ ಕಾರ್ಯಾಚರಣೆ ನಡೆಸಲಾಗಿತ್ತು.

    ಈ ಹಿನ್ನೆಲೆಯಲ್ಲಿ ಬಂಡೀಪುರದದಲ್ಲಿ ಈ ಬಾರಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಆಕಸ್ಮಿಕ ಬೆಂಕಿ ಬಿದ್ದರೂ ಹರಡದಂತೆ ಬೆಂಕಿ ರೇಖೆ ನಿರ್ಮಾಣ, ಬೆಂಕಿ ಬೀಳದಂತೆ ರಸ್ತೆಯ ಇಕ್ಕೆಲಗಳಲ್ಲಿ ವಾಟರ್ ಸ್ಪ್ರೇ ಮಾಡಿ ಹಸಿರು ಚಿಗುರುವಂತೆ ಮಾಡುವುದು, ಬೆಂಕಿ ಬಿದ್ದ ತಕ್ಷಣ ಅಧಿಕಾರಿಗಳ ಮೊಬೈಲ್‍ಗಳಿಗೆ ಎಚ್ಚರಿಕಾ ಸಂದೇಶ ರವಾನೆ, ಅರಣ್ಯ ಸಿಬ್ಬಂದಿಯ ನಿರಂತರ ಗಸ್ತು ಹೀಗೆ ಹತ್ತು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.