Tag: Air India express

  • ಇಬ್ಭಾಗವಾಗಿದ್ದ ವಿಮಾನ, ಕಣ್ಣ ಮುಂದೆ ಬಂದಿದ್ದು ಮಂಗಳೂರು ದುರಂತದ ನೆನಪು!

    ಇಬ್ಭಾಗವಾಗಿದ್ದ ವಿಮಾನ, ಕಣ್ಣ ಮುಂದೆ ಬಂದಿದ್ದು ಮಂಗಳೂರು ದುರಂತದ ನೆನಪು!

    – ಏರ್ ಇಂಡಿಯಾ ಏರ್ಪೋರ್ಟ್ ಸಿಬ್ಬಂದಿಯ ಪ್ರತ್ಯಕ್ಷ ಕಥನ

    ಕ್ಯಾಲಿಕಟ್: ಕಳೆದ ಶುಕ್ರವಾರ ಕ್ಯಾಲಿಕಟ್ ಏರ್ಪೋರ್ಟ್‍ನಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ದುರಂತದ ಕ್ಷಣಗಳು ಹೇಗಿತ್ತು..? ಅಂದು ಏನೇನಾಯ್ತು ಅನ್ನೋದನ್ನು ಅಂದು ಏರ್ಪೋರ್ಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಸಿನಿ ಸನಲ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಘನಘೋರ ದೃಶ್ಯ ಕಂಡ ಎಂಥವರ ಕಣ್ಣಾಲಿಗಳೂ ತುಂಬಲೇ ಬೇಕು. ಕೊರೊನಾ ನಡುವೆಯೂ ಊರವರ ಸಾಹಸ ಹೇಗಿತ್ತು ಇತ್ಯಾದಿಗಳನ್ನು ಅವರು ವಿವರವಾಗಿ ಬರೆದಿದ್ದಾರೆ.

    ಸಿನಿ ಸನಿಲ್ ಫೇಸ್ ಬುಕ್ ಪೋಸ್ಟ್ ನ ಪೂರ್ಣರೂಪ..
    ಸಂಜೆ 7 ಗಂಟೆಗೆ ಹೊರಡಬೇಕಾದ ದೆಹಲಿ ವಿಮಾನದ ಬಿಎಂಎ (ಬ್ಯಾಗೇಜ್ ಮೇಕಪ್ ಏರಿಯಾ) ಕೆಲಸ ಮಾಡುವಾಗ ನಾನು ಹೊರಗಡೆಯೇ ನೋಡುತ್ತಿದ್ದೆ. ಕಾರಣ ಮಳೆ ಅಷ್ಟು ಬಿರುಸಾಗಿ ಸುರಿಯುತ್ತಿತ್ತು. ಜೊತೆಗೆ ವೇಗವಾಗಿ ಗಾಳಿಯೂ ಬೀಸುತ್ತಿತ್ತು. ಕೌಂಟರ್ ಕ್ಲೋಸ್ ಮಾಡಿ ಬ್ಯಾಗ್‍ಗಳನ್ನೆಲ್ಲಾ ಟ್ಯಾಲಿ ಮಾಡಿ ಪ್ರಿಂಟ್ ತೆಗೆಯುವ ವೇಳೆ ಫ್ಲೈ ದುಬೈ ಕೌಂಟರ್ ಓಪನ್ ಆಯಿತು. ಇದರ ಬಿಎಂಎ ಕೂಡ ನೋಡಲು ರಾಜೀವ್ ಸರ್ ನನ್ನಲ್ಲಿ ಹೇಳಿದರು. ಬ್ಯಾಟರಿ ಚಾರ್ಜ್ ಮುಗಿಯುತ್ತಿದ್ದ ಫೋನನ್ನು ಚಾರ್ಜ್ ಹಾಕಿ ನೋಡಿದಾಗ ಐಎಕ್ಸ್ 1344 ದುಬೈ ಫ್ಲೈಟ್ ನ ಕೆಲಸ ನಿರ್ವಹಿಸಲು ಪಿಪಿಇ ಕಿಟ್ ಧರಿಸಿ ಸುಮೇಶ್ ಹಾಗೂ ಬ್ಯಾಗೇಜ್ ಸೆಕ್ಷನ್ ಉಸ್ತುವಾರಿಯಲ್ಲಿದ್ದ ಪ್ರತಿಭಾ ರನ್ ವೇ ಕಡೆಗೇ ನೋಡುತ್ತಾ ಸಿದ್ಧವಾಗಿದ್ದರು. 20 ನಿಮಿಷಗಳ ಕಾಲ ವಿಮಾನ ಲ್ಯಾಂಡಿಂಗ್ ಸಾಧ್ಯವಾಗದೇ ಆಗಸದಲ್ಲೇ ಇತ್ತು. ನನ್ನ ಹಿಂದೆಯೇ ಪ್ರತಿಭಾ ಕೂಡ ಬಂದಳು. ನಾವು ರ್ಯಾಂಪ್ ನೋಡ್ತಾ ಮಾತಾಡ್ತಿದ್ದೆವು. ಆಗ ನಮಗೆ ಎಕ್ಸ್ ಪ್ರೆಸ್ ವಿಮಾನ ಬಂದಿಳಿಯೋದು ಕಾಣಿಸಿತು. ಆದರೆ ಆಗಲೇ ನಮಗೆ ಏನೋ ಸಮಸ್ಯೆಯಾಗಿದೆ ಎಂದೆನಿಸಲು ಶುರುವಾಗಿತ್ತು. ಕಾರಣ ಇಷ್ಟು ವರ್ಷದಲ್ಲಿ ನಾವು ಇಂತಹ ಒಂದು ಲ್ಯಾಂಡಿಂಗ್ ನೋಡಿರಲಿಲ್ಲ. ಇದನ್ನು ನಾವು ಮಾತಾಡ್ತಿದ್ದಂಗೆ ಪ್ರತಿಭಾ ಮುಂದಕ್ಕೆ ಹೋಗಿ ನೋಡಿದಳು. ಇದನ್ನೂ ಓದಿ: ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ

    ಆದರೆ ನನ್ನ ಮನಸಿಗ್ಯಾಕೋ ಭಯ ಶುರುವಾಗಿತ್ತು. ಅಷ್ಟರಲ್ಲಿ ಸುಮೇಶ್ ಪಿಪಿಇ ಕಿಟ್ ಜೊತೆ ಓಡೋಡಿ ಬಂದ. ಅವನು ಆ ವಿಮಾನದ ಉಸ್ತುವಾರಿ ನೋಡಬೇಕಿತ್ತು. ಅರುಣ್ ಸರ್ ಕೂಡ ಬಂದರು. ಜೊತೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಕೋಆರ್ಡಿನೇಟರ್, ಸಿಬ್ಬಂದಿ, ಲೋಡರ್ ಗಳು ಸೇರಿ ಸುಮಾರು 8-10 ಮಂದಿ ಬಂದರು. ಮತ್ತೆ ನಾವು ತಡ ಮಾಡಲಿಲ್ಲ, ತಕ್ಷಣ ಅಲ್ಲಿದ್ದ ಫೈರ್ ಫೋರ್ಸ್ ಆಫೀಸಿಗೆ ಹೋದ್ವಿ. ಏನೇ ಅವಘಡ ಆಗಿದ್ದರೂ ಮೊದಲು ಅವರಿಗೆ ಮಾಹಿತಿ ಸಿಗಬೇಕಿತ್ತು. ಈ ನಡುವೆಯೇ ರನ್ ವೇ ಮೂಲಕ ಫೈರ್ ಇಂಜಿನ್ ಹೋಗ್ತಿರೋದು ಕಾಣಿಸಿತು. ಅಗ್ನಿಶಾಮಕ ಸಿಬ್ಬಂದಿ ಎಟಿಸಿಯಿಂದ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಹೇಳ್ತಿದ್ದರು. ಆಗಲೂ ಮಳೆ ಜೋರಾಗಿ ಸುರಿಯುತ್ತಿತ್ತು. ಇದೇ ವೇಳೆ ಸಿಐಎಸ್‍ಎಫ್ ಸಿಬ್ಬಂದಿಯಿದ್ದ ಒಂದು ವಾಹನವೂ ವೇಗವಾಗಿ ಹೋಯಿತು. ಅದೇ ಸಮಯಕ್ಕೆ ಬಂದ ಫೈರ್ ಸ್ಟಾಫ್ ಒಬ್ಬ ಹೇಳಿದ ಮಾತು ಕೇಳಿ ಹೃದಯ ನಿಂತಂತೆ ಭಾಸವಾಯಿತು, ನಂತರ ಪ್ರತಿಭಾಳನ್ನು ಆಲಿಂಗಿಸಿ ಕಣ್ಣೀರು ಹಾಕೋದಕ್ಕೆ ಮಾತ್ರ ಸಾಧ್ಯವಾಯಿತು. ಕಾರಣ ಆತ ಹೇಳಿದ್ದು – ‘ವಿಮಾನ ಕೆಳಗೆ ಹೋಯಿತು’. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

    ಈ ಮಾತು ಕೇಳುವವರೆಗೆ ವಿಮಾನ ರನ್ ವೇಯಿಂದ ಜಾರಿರುತ್ತೆ, ಸ್ಕಿಡ್ ಆಗಿರುತ್ತೆ ಎಂದಷ್ಟೇ ಅಂದುಕೊಂಡು ನಮ್ಮ ಮನಸ್ಸಿಗೆ ನಾವೇ ಸಮಾಧಾನ ಹೇಳಿದ್ವಿ. ಆದರೆ ಅವನು ಹೇಳಿದ ಈ ಮಾತು ನಮ್ಮೆಲ್ಲಾ ನಿರೀಕ್ಷೆಗಳನ್ನು ಕೊನೆಯಾಗಿಸಿತು. ಮನಸ್ಸಿಗೆ ಆಘಾತವಾಗಿತ್ತು. ಕಣ್ಣ ಮುಂದೆ ಮಂಗಳೂರು ವಿಮಾನ ದುರಂತದ ದೃಶ್ಯಗಳೆಲ್ಲಾ ಹಾದುಹೋದವು. ವಿಮಾನ ಕೆಳಗೆ ಹೋಗಿದ್ದರೆ ನೋಡೋದಕ್ಕೆ ಇನ್ನೇನೂ ಉಳಿದಿರಲ್ಲ ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಕಾರಣ ಮಂಗಳೂರಿನಂತೆಯೇ ಇಲ್ಲಿರೋದು ಕೂಡ ಟೇಬಲ್ ಟಾಪ್ ಏರ್ಪೋರ್ಟ್. ಕೆಳಗೆ ಹೋಗಿದ್ದರೆ ವಿಮಾನ ಅಗ್ನಿಗಾಹತಿಯಾಗೋದು ಖಚಿತ. ಮಂಗಳೂರು ಘಟನೆ ಇದನ್ನೇ ಅಲ್ಲವೇ ನಮಗೆ ತೋರಿಸಿಕೊಟ್ಟಿದ್ದು.! ಇದನ್ನೂ ಓದಿ: ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು

    ಬೆಚ್ಚಿ ನಿಂತಿದ್ದ ನಮ್ಮ ಮುಂದೆ ವಿಮಾನ ನಿಲ್ದಾಣ ಪ್ರಾಧಿಕಾರದ ಎರಡು ವಾಹನಗಳು ಬಂದು ನಿಂತಿದ್ದವು. ಓಡಿ ಅದನ್ನು ಹತ್ತುವಾಗ ನಮ್ಮ ಮುಂದೆ ಕೊರೊನಾ, ಸಾಮಾಜಿಕ ಅಂತರ ಯಾವುದೂ ಇರಲಿಲ್ಲ. ನಮ್ಮೆಲ್ಲರನ್ನೂ ಹೊತ್ತೊಯ್ದ ವಿಮಾನ ಸುಮಾರು 2 ಕಿ.ಮೀ. ಸಂಚರಿಸಿ ಘಟನಾ ಸ್ಥಳದ ಬಳಿ ನಿಲ್ಲಿಸಿದಾಗ ಕಂಡ ದೃಶ್ಯ ನಮ್ಮ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಇಬ್ಭಾಗವಾಗಿ ಮಲಗಿತ್ತು ವಿಮಾನ. ವಿಮಾನದ ಮುಂಭಾಗ (ನೋಸ್) ಹಾಗೂ ಹಿಂಭಾಗ (ಟೇಲ್) ಬಿಟ್ಟು ಮಧ್ಯಭಾಗ ಇಲ್ಲ ಎಂದೇ ಹೇಳಬಹುದು. ಕೆಲವೇ ಕೆಲವು ಸಿಐಎಸ್‍ಎಫ್, ಫೈರ್ ಹಾಗೂ ಏರ್ಪೋರ್ಟ್ ಅಥಾರಿಟಿ ಸಿಬ್ಬಂದಿ ಬಿಟ್ಟರೆ ಅಲ್ಲಿ ಉಳಿದವರೆಲ್ಲಾ ಊರ ಜನ. ವಿಮಾನದಿಂದ ರಕ್ಷಣೆ ಮಾಡಿದವರನ್ನು ಸಿಕ್ಕ ಸಿಕ್ಕ ವಾಹನಗಳಿಗೆ ಹಾಕಿ ಕಳಿಸುತ್ತಿದ್ದರು. ಅದರಲ್ಲಿ ಆಟೋ ರಿಕ್ಷಾಗಳು ಕೂಡ ಇದ್ದವು. ಸುತ್ತಮುತ್ತ ವಿಮಾನದ ಇಂಧನದ ವಾಸನೆ ಹರಡಿತ್ತು. ಅಂಬುಲೆನ್ಸ್‍ಗಳು ಬರುತ್ತಿದ್ದವು. ಸ್ಟ್ರೆಚರ್ ಗಳು ಕಡಿಮೆ ಇದ್ದ ಕಾರಣ ವಿಮಾನದಿಂದ ರಕ್ಷಣೆ ಮಾಡಿದವರನ್ನು ಅಲ್ಲೇ ನೆಲದಲ್ಲಿ ಮಲಗಿಸಿದ್ದರು. ನಮ್ಮನ್ನು ನೋಡಿದ ರಕ್ಷಣಾ ತಂಡದಲ್ಲಿದ್ದ ಸ್ಥಳೀಯರೊಬ್ಬರು ನೆಲದಲ್ಲಿ ಮಲಗಿಸಿದ್ದ ಮಹಿಳೆಯನ್ನು ನೋಡಿಕೊಳ್ಳಿ ಎಂದು ಹೇಳಿದರು. ಅವರ ಬಳಿ ಹೋಗಿ ಧೈರ್ಯ ಹೇಳುವಾಗಲೂ ಆಕೆ ‘ನನ್ನ ಮಗಳು, ನನ್ನ ಗಂಡ’ ಎಂದು ಹೇಳುತ್ತಲೇ ಇದ್ದರು. ನನ್ನ ಮಗಳು ಆ ವಿಮಾನದಲ್ಲಿ ಸಿಲುಕಿದ್ದಾಳೆ ಎಂದು ಹೇಳಿದ್ದು ಅಲ್ಲೇ ಪಕ್ಕದಲ್ಲಿ ಮಲಗಿದ್ದ ಮತ್ತೊಬ್ಬಳು ಅಕ್ಕ. ಇವೆಲ್ಲಾ ನಾವು ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲದ ಕ್ಷಣಗಳು. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ಪೈಲಟನ್ನು ವಿಮಾನದಿಂದ ಹೊರತೆಗೆಯಬೇಕಾದರೆ ಕಾಕ್‍ಪಿಟ್ ಒಡೆಯಲೇ ಬೇಕಿತ್ತು. ನಮ್ಮ ಯೂನಿಫಾರ್ಮ್ ನೋಡಿದ ರಕ್ಷಣಾ ತಂಡದ ಸದಸ್ಯರು ಕಟ್ಟರ್ ಬೇಕು ಎಂದು ಕೇಳಿದರು. ತಕ್ಷಣ ಫೈರ್ ಸಿಬ್ಬಂದಿ ಬಳಿ ಓಡಿ ಹೋಗಿ ಇದನ್ನು ಹೇಳಿದೆ. ಈ ನಡುವೆ ವಿಮಾನ ಇಂಧನ ಲೀಕೇಜ್ ಇರೋದ್ರಿಂದ ಎಲ್ಲರೂ ಮೊಬೈಲ್ ಸ್ವಿಚ್ ಆಫ್ ಮಾಡಿ ಎಂದು ಅನೌನ್ಸ್ ಮಾಡಿದ್ರು. ಜೊತೆಗೆ ಭಾರೀ ಮಳೆ. ನಮ್ಮ ಜೊತೆ ಬಂದಿದ್ದ ಅರುಣ್ ಸರ್ ವಿಮಾನದ ಮೇಲೆ ಹತ್ತಿ, ಒಳಗೆ ಹೋಗಿ ಹಲವರನ್ನು ರಕ್ಷಣೆ ಮಾಡುತ್ತಿದ್ದರು. ಅಷ್ಟರಲ್ಲಾಗಲೇ ಕೇರಳ ಫೈರ್ ಫೋರ್ಸ್, ಪೊಲೀಸ್ರು, ಜಿಲ್ಲಾಧಿಕಾರಿ ಎಲ್ಲರೂ ಬಂದರು.

    ಏರ್ಪೋರ್ಟ್ ಸಿಬ್ಬಂದಿ ಎಲ್ಲರೂ ಇಲ್ಲಿಗೆ ತಲುಪುವ ಮುನ್ನವೇ ಕೊರೊನಾ ಎಂಬ ಮಹಾಮಾರಿಯನ್ನೂ ಮರೆತು ರಕ್ಷಣಾ ಕಾರ್ಯಕ್ಕೆ ಓಡೋಡಿ ಬಂದ ಕೊಂಡೋಟ್ಟಿ ಎಂಬ ಗ್ರಾಮದ ನಿವಾಸಿಗಳನ್ನು ಎಷ್ಟು ಅಭಿನಂದಿಸಿದರೂ ಸಾಲದು. ಇದು ವಿದೇಶದಿಂದ ಬಂದ ವಿಮಾನ. ಕೋವಿಡ್ ಪಾಸಿಟಿವ್ ಇದ್ದವರಿದ್ದರೆ ನಮಗೆ ಪಾಸಿಟಿವ್ ಬರಬಹುದು ಎಂದು ಗೊತ್ತಿದ್ದರೂ ಅಧೀರರಾಗದೇ ಮುಂದೆ ಬಂದ ಸ್ಥಳೀಯರು, ವಿಮಾನದ ಇಂಧನ ಲೀಕ್ ಆಗುತ್ತಿದೆ, ಒಂದು ಸಣ್ಣ ಸ್ಪಾರ್ಕ್ ಕೂಡ ದೊಡ್ಡ ಸ್ಫೋಟವನ್ನೇ ಮಾಡಬಹುದು ಎಂಬ ಅರಿವಿದ್ದರೂ, ರಕ್ಷಣಾ ಕಾರ್ಯದಿಂದ ಹಿಂದೆ ಸರಿಯದೇ ವಿಮಾನದಲ್ಲಿದ್ದ ಎಲ್ಲರನ್ನೂ ರಕ್ಷಣೆ ಮಾಡಿದ ಸಿಐಎಸ್‍ಎಫ್ ಹಾಗೂ ಸ್ಥಳೀಯ ನಿವಾಸಿಗಳು. ದೊಡ್ಡದೊಂದು ದುರಂತಕ್ಕೆ ಸಾಕ್ಷಿಯಾದ ಕಣ್ಣು ಹಾಗೂ ಮನಸ್ಸು ಸ್ತಬ್ಧವಾದ ಕ್ಷಣಗಳು. 2010 ಮೇ 22ರ ನಂತರ 10 ವರ್ಷದ ಬಳಿಕ ಆಗಸ್ಟ್ 7 ಕೂಡ ‘ಬ್ಲ್ಯಾಕ್ ಡೇ’ಗಳ ಪಟ್ಟಿಗೆ ಸೇರಿತು. ಮತ್ತೆ ನಾವು ನೆನಪಿಸಿಕೊಳ್ಳಲೂ ಬಯಸದ ಈ ದಿನ.  ಇದನ್ನೂ ಓದಿ: ಅಜ್ಜಿ ಮನೆ ನೋಡುವ ಮುನ್ನವೇ ಕಣ್ಣು ಮುಚ್ಚಿದ 1 ವರ್ಷದ ಕಂದಮ್ಮ

    ಮರಣ ಸಂಖ್ಯೆ ಇಷ್ಟು ಕಡಿಮೆಯಾಗಿದ್ದಕ್ಕೆ ಕಾರಣ ಕ್ಯಾಪ್ಟನ್ ಪರಿಣತಿ. ವಿಮಾನವು ಅಗ್ನಿಗಾಹುತಿಯಾಗದೇ ಸ್ವಯಂ ಜವರಾಯನಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಕ್ಯಾಪ್ಟನ್ ದೀಪಕ್ ವಸಂತ್ ಸಾಥೆ ಸರ್, ಅಖಿಲೇಶ್ ಸರ್… ನಮ್ಮೆಲ್ಲರ ಮನಸ್ಸಿನಿಂದ ಮಾಸದೇ ನೀವು ನೆನಪಲ್ಲೇ ಉಳಿಯುತ್ತೀರಿ… ಪ್ರಣಾಮಗಳು.
    – ಸಿನಿ ಸನಿಲ್

  • ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ಕ್ಯಾಲಿಕಟ್‌: ಕೇರಳ ವಿಮಾನ ದುರಂತ ಪ್ರಕರಣದ ತನಿಖೆ ನಡೆಸುತ್ತಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಅಧಿಕಾರಿಗಳಿಗೆ ಬ್ಲ್ಯಾಕ್‌ ಬಾಕ್ಸ್‌ ಸಿಕ್ಕಿದೆ.

    ದುಬೈನಿಂದ ಹೊರಟಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಟೇಬಲ್‌ಟಾಪ್‌ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಲ್ಯಾಂಡ್‌ ಆಗಿ 35 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ 18 ಮಂದಿ ಮೃತಪಟ್ಟಿದ್ದಾರೆ. 137 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, 22 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಇಬ್ಬರು ಪೈಲಟ್‌ ಮೃತಪಟ್ಟಿದ್ದು, 4 ಮಂದಿ ವಿಮಾನ ಸಿಬ್ಬಂದಿ ಪಾರಾಗಿದ್ದಾರೆ.

    ಏನಿದು ಬ್ಲ್ಯಾಕ್‌ ಬಾಕ್ಸ್‌?
    ವಿಮಾನದಲ್ಲಿ ಧ್ವನಿಗ್ರಹಣಕ್ಕೆ ಬಳಸಲಾಗುವ ಎರಡು ಸಾಧನಗಳನ್ನು ತಾಂತ್ರಿಕ ಭಾಷೆಯಲ್ಲಿ ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಗುತ್ತದೆ. ಬ್ಲ್ಯಾಕ್ ಬಾಕ್ಸ್ ಅನ್ನು ‘ಫ್ಲೈಟ್ ಡಾಟಾ ರೆಕಾರ್ಡರ್’ ಎಂದೂ ಕರೆಯುತ್ತಾರೆ. ಬ್ಲ್ಯಾಕ್ ಬಾಕ್ಸ್ ಹಾರಾಟದ ಸಮಯದಲ್ಲಿನ ವಿಮಾನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತದೆ. ಎಲ್ಲ ರೀತಿಯ ವಿಮಾನಗಳಲ್ಲಿ ಬ್ಲ್ಯಾಕ್‌ ಬಾಕ್ಸ್‌ ಅನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ.

    ವಿಮಾನ ಅಪಘಾತವಾದಾಗ ಅದಕ್ಕೆ ಕಾರಣ ಪತ್ತೆ ಹಚ್ಚಲು ನೆರವಾಗಲೆಂದೇ 5 ಕೆಜಿ ತೂಕದ ರೆಕಾರ್ಡಿಂಗ್ ಸಾಧನವನ್ನು ಅಳವಡಿಸಲಾಗುತ್ತದೆ. ಭದ್ರತೆಯ ದೃಷ್ಟಿಯಿಂದ ಕಪ್ಪು ಪೆಟ್ಟಿಗೆಯನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಈ ಪೆಟ್ಟಿಗೆಯನ್ನು ಟೈಟಾನಿಯಂ ಲೋಹದಿಂದ ಮಾಡಲಾಗಿದ್ದು, ಟೈಟಾನಿಯಂ ಪೆಟ್ಟಿಗೆಯಲ್ಲಿ ಸುತ್ತುವರಿಯಲಾಗಿದೆ. ಇದು ಎಷ್ಟು ಶಕ್ತಿಶಾಲಿಯೆಂದರೆ ಸಮುದ್ರದಲ್ಲಿ ಬಿದ್ದರೆ ಅಥವಾ ಎತ್ತರದಿಂದ ಬಿದ್ದರೂ ಯಾವುದೇ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ. . ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ರು

    ಹಿಂಭಾಗದಲ್ಲಿ ಯಾಕೆ?
    ಅಪಘಾತದ ಸಂಭವಿಸಿದಾಗ ಹಿಂಭಾಗದಲ್ಲಿ ಅದರಲ್ಲೂ ಬಾಲದ ಕಡೆ ಪೆಟ್ಟು ಬೀಳುವುದು ಕಡಿಮೆ. ಯಾಕೆಂದರೆ ಬಾಲ ಎತ್ತರದಲ್ಲಿರುತ್ತದೆ. ಈ ಕಾರಣಕ್ಕೆ ಬಾಲದಲ್ಲಿ ಅಳವಡಿಸಲಾಗಿರುತ್ತದೆ. ವಿಮಾನದ ಎಂಜಿನ್‌ಗೆ ಜೋಡಿಸಲಾದ ಜನರೇಟರ್ ನಿಂದ ಬ್ಲ್ಯಾಕ್ ಬಾಕ್ಸ್ ಚಾರ್ಜ್ ಆಗುತ್ತದೆ.  ಇದನ್ನೂ ಓದಿ: ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು 

    ಎರಡು ಪ್ರತ್ಯೇಕ ಪೆಟ್ಟಿಗೆಗಳಿವೆ
    1. ಫ್ಲೈಟ್ ಡೇಟಾ ರೆಕಾರ್ಡರ್ – ಈ ಪೆಟ್ಟಿಗೆಯಲ್ಲಿ ನಿರ್ದೇಶನ, ಎತ್ತರ, ಇಂಧನ, ವೇಗ, ಕ್ಯಾಬಿನ್ ತಾಪಮಾನ ಇತ್ಯಾದಿಗಳ ಬಗ್ಗೆ ಮಾಹಿತಿ ಇರುತ್ತದೆ. ಕೊನೆಯ 25 ಗಂಟೆಗಳ ಕಾಲದ ಒಟ್ಟು 88 ಮಾಹಿತಿಗಳ ಡೇಟಾವನ್ನು ಸಂಗ್ರಹಿಸುತ್ತದೆ. 1,100 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇದ್ದರೆ 1 ಗಂಟೆ, 260 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇದ್ದರೆ ಇದ್ದರೆ 10 ಗಂಟೆಗಳ ಕಾಲ ಡೇಟಾವನ್ನು ತಡೆದಿಟ್ಟುಕೊಳ್ಳಬಹುದು. ತನಿಖಾಧಿಕಾರಿಗಳಿಗೆ ಸುಲಭವಾಗಿ ಗುರುತಿಸಲು ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಈ ಪೆಟ್ಟಿಗೆಯನ್ನು ಮಾಡಲಾಗುತ್ತದೆ.

    2. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್: ಈ ಬಾಕ್ಸ್ ಕೊನೆಯ ಎರಡು ಗಂಟೆಗಳ ವಿಮಾನದ ಧ್ವನಿಯನ್ನು ದಾಖಲಿಸುತ್ತದೆ. ಯಾವುದೇ ಅಪಘಾತ ಸಂಭವಿಸುವ ಮೊದಲು ಎಂಜಿನ್, ತುರ್ತು ಎಚ್ಚರಿಕೆ, ಕ್ಯಾಬಿನ್ ಮತ್ತು ಕಾಕ್‌ಪಿಟ್‌ ಧ್ವನಿಯನ್ನು ದಾಖಲಿಸುತ್ತದೆ. ಇದನ್ನೂ ಓದಿ: ವಿಮಾನ ದುರಂತ- ಮೃತಪಟ್ಟವರಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್

    ಹೇಗೆ ಕಾರ್ಯನಿರ್ವಹಿಸುತ್ತದೆ?
    ಇದು ಯಾವುದೇ ವಿದ್ಯುತ್ ಇಲ್ಲದೆ 30 ದಿನಗಳವರೆಗೆ ಬ್ಲಾಕ್‌ ಬಾಕ್ಸ್‌ ಕೆಲಸ ಮಾಡಬಹುದು. ಪತ್ತೆ ಕಾರ್ಯ ಸುಲಭವಾಗಲು ಸುಮಾರು 30 ದಿನಗಳವರೆಗೆ ಸಿಗ್ನಲ್‌ ಹೊರಸೂಸುತ್ತಿರುತ್ತದೆ. ಈ ಧ್ವನಿಯನ್ನು ತನಿಖಾಧಿಕಾರಿಗಳು ಸುಮಾರು 2-3 ಕಿಲೋಮೀಟರ್ ದೂರದಿಂದ ಗುರುತಿಸಬಹುದು. 14 ಸಾವಿರ ಅಡಿ ಆಳದ ಸಮದ್ರದಲ್ಲಿದ್ದರೂ ಸಿಗ್ನಲ್‌ ಹೊರ ಸೂಸುತ್ತಿರುತ್ತದೆ.

    ಬಳಕೆ ಆಗಿದ್ದು ಯಾವಾಗ?
    1953-54ರ ವರ್ಷದಲ್ಲಿ ವಿಮಾನ ಅಪಘಾತಗಳು ಹೆಚ್ಚಾಗುತ್ತಿತ್ತು. ಯಾಕೆ ಈ ಅಪಘಾತಗಳು ಸಂಭವಿಸುತ್ತದೆ ಎಂಬುದನ್ನು ಪತ್ತೆ ಹಚ್ಚಲು ಮತ್ತು ಮುಂದೆ ಅಪಘಾತ ತಡೆಯಲು ಬ್ಲ್ಯಾಕ್‌ಬಾಕ್ಸ್‌ ಅನ್ನು ಅಭಿವೃದ್ಧಿ ಪಡಿಸಲಾಯಿತು. ಈ ಮೊದಲು ಇದು ಕೆಂಪು ಬಣ್ಣದ್ದಲ್ಲಿತ್ತು. ಹೀಗಾಗಿ ಇದನ್ನು ʼಕೆಂಪು ಮೊಟ್ಟೆ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಬಳಿಕ ಬಾಕ್ಸ್‌ ಒಳಗಡೆ ಇರುವ ಗೋಡೆಗಳು ಕಪ್ಪು ಬಣ್ಣದ್ದಲ್ಲಿದ್ದ ಕಾರಣ ಇದನ್ನು ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಯಿತು. ವಿಮಾನ ಅಪಘಾತಕ್ಕೆ ನಿಖರ ಕಾರಣವನ್ನು ಈ ಬ್ಲ್ಯಾಕ್‌ ಬಾಕ್ಸ್‌ ನೀಡದೇ ಇದ್ದರೂ ತನಿಖೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಸತ್ಯ.

  • ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು

    ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು

    ಕ್ಯಾಲಿಕಟ್‌: ಕೊರೊನಾ ವೈರಸ್‌ನಿಂದಾಗಿ ಸ್ವದೇಶ ಬರಲು ಹರಸಾಹಸ ಪಟ್ಟು ಕೊನೆಗೆ ವಂದೇಭಾರತ್‌ ಮಿಷನ್‌ ಅಡಿ ಟಿಕೆಟ್‌ ಪಡೆದು ಕುಟುಂಬದೊಂದಿಗೆ ಕೇರಳಕ್ಕೆ ಬರುತ್ತಿದ್ದ ವ್ಯಕ್ತಿಯೊಬ್ಬರು ವಿಮಾನ ದುರಂತಕ್ಕೆ ಬಲಿಯಾಗಿದ್ದಾರೆ.

    ಕ್ಯಾಲಿಕಟ್‌ ಮೂಲದ 35 ವರ್ಷದ ಶರಫು ಗಲ್ಫ್‌ನಲ್ಲಿ ಕೆಲಸ ಮಾಡುತ್ತಿದ್ದು ಪತ್ನಿ ಅಮೀನಾ, ಮಗಳು ಈಶಾ ಫಾತಿಮಾ ಜೊತೆ ದುಬೈನಿಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಹತ್ತಿದ್ದರು.

    ವಿಮಾನ ಟೇಕಾಫ್‌ ಆಗುವುದಕ್ಕೆ ಮೊದಲು ಫೇಸ್‌ಶೀಲ್ಡ್‌, ಪಿಪಿಇ ಕಿಟ್‌, ಮುಖಕ್ಕೆ ಮಾಸ್ಕ್‌ ಧರಿಸಿ ಪತ್ನಿ, ಪುತ್ರಿಯ ಜೊತೆ ಸೆಲ್ಫಿ ಕ್ಲಿಕ್‌ ಮಾಡಿ ‘ಮರಳಿ ಮನೆಗೆʼ ಎಂದು ಬರೆದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು.

    ವೈದ್ಯಕೀಯ ತುರ್ತು ಕಾರಣ ನೀಡಿ ಕೊನೆಗೆ ಶರಫು ಕುಟುಂಬಕ್ಕೆ ವಂದೇ ಭಾರತ್‌ ಮಿಶನ್‌ ಅಡಿ ಸ್ವದೇಶಕ್ಕೆ ಬರಲು ಟಿಕೆಟ್‌ ಸಿಕ್ಕಿತ್ತು. ಶರಫು ಪತ್ನಿ ಆರೋಗ್ಯ ಸ್ಥಿರವಾಗಿದ್ದು, ಪುತ್ರಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಶರಫ್‌ ಸ್ನೇಹಿತ ಶಫಿ ಎಂಬವರು ಈ ಪೋಸ್ಟ್‌ಗೆ ಕಮೆಂಟ್‌ ಮಾಡಿ, ಕೇರಳಕ್ಕೆ ಹೋಗುವ ಮೊದಲು ನನ್ನ ಹೋಟೆಲಿಗೆ ಬಂದಿದ್ದ. ಮನಸ್ಸು ಬಹಳ ಗೊಂದಲದಲ್ಲಿತ್ತು. ಮುಂದೆ ಏನೋ ಆಗಬಹುದು ಎಂಬುದರ ಕುರಿತು ಆತನಿಗೆ ನ್ಸೂಚನೆ ಸಿಕ್ಕಿರಬೇಕು ಎಂದು ನಾನು ಭಾವಿಸುತ್ತೇನೆ. ನನಗೆ ಆತ ಹಣವನ್ನು ನೀಡಿ, ಉದ್ಯೋಗವಿಲ್ಲದವರಿಗೆ ಆಹಾರವನ್ನು ನೀಡಲು ಇದನ್ನು ಬಳಸಬೇಕು ಎಂದು ಹೇಳಿದ್ದ. ಕೊರೊನಾ ಸಮಯದಲ್ಲಿ ಶರಫು ಅವರು ಬಡವರಿಗೆ ಹಣ ನೀಡುವ ಮೂಲಕ ಸಹಾಯ ಮಾಡಿದ್ದ ಎಂದು ಬರೆದುಕೊಂಡಿದ್ದಾರೆ.

  • ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ

    ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ

    – ರನ್‌ ವೇ ಬಫರ್‌ ಜೋನ್‌ ಕಡಿಮೆಯಿದೆ
    – ಇದು ಕೊಲೆಗೆ ಸಮನಾದ ಕ್ರಿಮಿನಲ್‌ ಕೃತ್ಯ

    ಚೆನ್ನೈ: ಮಂಗಳೂರು ವಿಮಾನ ದುರಂತದ ಬಳಿಕ ನಾನು ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲೂ ಅಪಾಯವಾಗಬಹುದು ಎಂದು ವರದಿಯಲ್ಲಿ ಎಚ್ಚರಿಕೆ ನೀಡಿದ್ದೆ. ಆದರೆ ನನ್ನ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಯಿತು ಎಂದು ವಾಯು ಸುರಕ್ಷಾ ತಜ್ಞ, ಕ್ಯಾಪ್ಟನ್‌ ಮೋಹನ್‌ ರಂಗನಾಥನ್‌ ಹೇಳಿದ್ದಾರೆ.

    ಕಲ್ಲಿಕೋಟೆ ವಿಮಾನ ದುರಂತದ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಕಲ್ಲಿಕೋಟೆ ವಿಮಾನ ನಿಲ್ದಾಣ ಟೇಬಲ್‌ ಟಾಪ್‌ ಆಗಿದ್ದು, ರನ್‌ವೇಯ ಬಫರ್‌ ಜೋನ್‌ ಬಹಳ ಕಡಿಮೆಯಿದೆ. ನಿಯಮಗಳ ಪ್ರಕಾರ ರನ್‌ವೇ ಕೊನೆಯಲ್ಲಿ 240 ಮೀಟರ್ ಉದ್ದದ ಬಫರ್‌ ಜೋನ್‌ ಇರಬೇಕು. ಆದರೆ ಇಲ್ಲಿ ಕೇವಲ 90 ಮೀಟರ್‌ ಉದ್ದವಿದೆ. ಇನ್ನೊಂದು ಬದಿಯಲ್ಲಿ 100 ಮೀಟರ್‌ ಇರಬೇಕಿತ್ತು. ಆದರೆ ಇಲ್ಲಿ ಕೇವಲ 75 ಮೀಟರ್‌ ಇದೆ ಎಂದು ಹೇಳಿದರು.

    ವಿಮಾನ ನಿಲ್ದಾಣದಲ್ಲಿ ವಿಮಾನಗಳು ಲ್ಯಾಂಡ್‌ ಆಗುವಾಗ ಏನಾದರೂ ದೋಷ ಉಂಟಾದರೆ ಅಥವಾ ನಿಗದಿತ ಜಾಗದಲ್ಲಿ ಲ್ಯಾಂಡ್‌ ಆಗದೇ ಮುಂದಕ್ಕೆ ಹೋಗಿ ಲ್ಯಾಂಡ್‌ ಆದಾಗ ವಿಮಾನ ರನ್‌ವೇಗಿಂತಲೂ ಮುಂದಕ್ಕೆ ಸಾಗುತ್ತದೆ. ರನ್‌ವೇಗಿಂತಲೂ ವಿಮಾನ ಮುಂದಕ್ಕೆ ಹೋದಾಗ ಅಪಾಯ ಆಗದೇ ಇರಲು ಬಫರ್‌ ಜೋನ್‌ ನಿರ್ಮಿಸಲಾಗುತ್ತದೆ. ಈ ವಲಯವನ್ನು ರನ್‌ವೇ ರೀತಿಯಾಗಿ ನಿರ್ಮಿಸುತ್ತಾರೆ. ಆದರೆ ರನ್‌ವೇಯಲ್ಲಿ ಇರುವಂತೆ ಮಧ್ಯದಲ್ಲಿ ಯಾವುದೇ ಬಿಳಿಯಾದ ಪಟ್ಟಿಗಳು ಇರುವುದಿಲ್ಲ.

    ಮಳೆ ಬಂದಾಗ ಟೇಬಲ್‌ ಟಾಪ್‌ ವಿಮಾನ ನಿಲ್ದಾಣದಲ್ಲಿ ಇಳಿಸಲು ಸರಿಯಾದ ಮಾರ್ಗಸೂಚಿಗಳು ಇಲ್ಲ. ಈ ಕಾರಣಕ್ಕೆ ಈ ರೀತಿಯ ಘಟನೆಗಳು ಸಂಭವಿಸುತ್ತದೆ. ರನ್‌ವೇಯಲ್ಲಿ ಯಾವುದೇ ಸುರಕ್ಷತಾ ಜಾಗವಿಲ್ಲ. 9 ವರ್ಷದದ ಹಿಂದೆಯೇ ಈ ಬಗ್ಗೆ ವರದಿ ನೀಡಿ ಎಚ್ಚರಿಕೆ ನೀಡಿದ್ದೆ. ಆದರೆ ಅವರು ವಿಮಾನ ನಿಲ್ದಾಣಕ್ಕೆ ಯಾವುದೇ ಅಪಾಯವಿಲ್ಲ. ಸುರಕ್ಷಿತವಾಗಿದೆ ಎಂದು ಹೇಳಿದರು ಎಂದು ರಂಗನಾಥನ್‌ ತಿಳಿಸಿದರು.

    ಇಲ್ಲಿ ದುರಂತ ಸಂಭವಿಸಿ ಸಾವನ್ನಪ್ಪಿದ್ದರೆ ಇದು ಕೊಲೆಗೆ ಸಮನಾದ ಕ್ರಿಮಿನಲ್‌ ಕೃತ್ಯ. ಈ ವಿಮಾನ ನಿಲ್ದಾಣ ಎರಡು ಬದಿಗಳಲ್ಲಿ 200 ಅಡಿ ಆಳದ ಕಣಿವೆಯಿದೆ. ವಿಮಾನಯಾನ ಸಂಸ್ಥೆಗಳು ಇಲ್ಲಿ ಕುರುಡಾಗಿ ವರ್ತಿಸುತ್ತದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಈ ಬಗ್ಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

    ಎತ್ತರ ಪ್ರದೇಶದಲ್ಲಿ ಇರುವ ಕಾರಣ ಅಪಾಯವಾಗಬಹುದು ಎಂಬ ಕಾರಣಕ್ಕೆ ಕೆಲ ಅಂತರಾಷ್ಟ್ರೀಯ ವಿಮಾನಯಾನ ಕಂಪನಿಗಳು ಇಲ್ಲಿ ದೊಡ್ಡ ವಿಮಾನಗಳ ಲ್ಯಾಂಡಿಂಗ್‌ ನಿಲ್ಲಿಸಿದ್ದವು. ಬೋಯಿಂಗ್‌ 777, ಏರ್‌ಬಸ್‌ ಎ330ಗಳು ರನ್‌ವೇ ಕಡಿಮೆಯಿದೆ ಎಂಬ ಕಾರಣ ನೀಡಿ ಈ ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಿದ್ದವು.

    ಕಲ್ಲಿಕೋಟೆ ರನ್‌ವೇ 2,860 ಮೀಟರ್‌ ಉದ್ದವಿದೆ. ದೇಶದಲ್ಲಿ ಅತಿ ಉದ್ದವಿರುವ ದೆಹಲಿ ವಿಮಾನ ನಿಲ್ದಾಣದ ರನ್‌ವೇ 4,430 ಮೀಟರ್‌ ಉದ್ದವಿದೆ. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

  • ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ರು

    ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ರು

    – ರಾಷ್ಟ್ರಪತಿಯಿಂದ ಚಿನ್ನದ ಪದಕ
    – 30 ವರ್ಷಗಳ ಅಪಘಾತ ರಹಿತ ಚಾಲನೆ

    ಕಲ್ಲಿಕೋಟೆ: ಲ್ಯಾಂಡಿಂಗ್‌ ವೇಳೆ ರನ್‌ವೇಯಿಂದ ಜಾರಿ 2 ತುಂಡಾದ ವಿಮಾನವನ್ನು ಹಾರಿಸುತ್ತಿದ್ದ ಪೈಲಟ್‌ ದೀಪಕ್‌ ವಸಂತ ಸಾಠೆ ಯುದ್ಧ ವಿಮಾನಗಳ ಹಾರಾಟದ ಅನುಭವವನ್ನು ಪಡೆದಿದ್ದರು.

    ಹೌದು. ದುಬೈಯಿಂದ 184 ಪ್ರಯಾಣಿಕರನ್ನು ಕರೆತರುತ್ತಿದ್ದ ಏರ್‌ಇಂಡಿಯಾ ಎಕ್ಸ್‌ ಪ್ರೆಸ್‌ ವಿಮಾನವನ್ನು ದೀಪಕ್‌ ವಸಂತ ಸಾಠೆ ಎರಡು ಬಾರಿ ವಿಮಾನ ನಿಲ್ದಾಣಕ್ಕೆ ಸುತ್ತು ಹೊಡೆಸಿದ್ದರು. ಆದರೆ ಪ್ರತಿಕೂಲ ಹವಾಮಾನದ ಸಮಸ್ಯೆಯ ಮಧ್ಯೆಯೂ ವಿಮಾನವನ್ನು ಟೇಬಲ್‌ ಟಾಪ್‌ ರನ್‌ವೇಯಲ್ಲಿ ಇಳಿಸಿದರೂ ಅದು 35 ಅಡಿ ಕಂದಕಕ್ಕೆ ಜಾರಿ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿದೆ.

    ಪುಣೆಯ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದ ಸಾಠೆ ಮಿಗ್‌ 21 ಯುದ್ಧವಿಮಾನವನ್ನು ಹಾರಿಸಿದ್ದರು. ವಾಯುಪಡೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕೆ ಅವರಿಗೆ ರಾಷ್ಟ್ರಪತಿಯಿಂದ ಚಿನ್ನದ ಪದಕ ಸಹ ಸಿಕ್ಕಿತ್ತು. ಹೈದರಾಬಾದ್‌ನಲ್ಲಿರುವ ಏರ್‌ಫೋರ್ಸ್‌ ಅಕಾಡೆಮಿಯಲ್ಲಿದ್ದಾಗ ಅವರು ಸ್ವಾರ್ಡ್‌ ಆಫ್‌ ಆನರ್‌ ಅನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.

    1981ರಲ್ಲಿ ವಾಯಪಡೆಗೆ ಸೇರಿದ್ದ ಸಾಠೆ 22 ವರ್ಷಗಳ ಕಾಲ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಇರುವ ಏರ್‌ ಪೋರ್ಸ್‌ ಟ್ರೈನಿಂಗ್‌ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿದ್ದರು. ಸ್ಕ್ವಾಡ್ರನ್‌ ಲೀಡರ್‌ ಆಗಿ ನಿವೃತ್ತಿ ಪಡೆದ ಬಳಿಕ ನಾಗರಿಕ ವಿಮಾನ ಸೇವೆಗೆ ಸೇರ್ಪಡೆಯಾಗಿದ್ದರು.

    ಬೋಯಿಂಗ್‌ 737 ವಿಮಾನಗಳ ಹಾರಾಟದಲ್ಲಿ ಅಪಾರ ಅನುಭವ ಹೊಂದಿದ್ದ ಇವರು 30 ವರ್ಷಗಳ ಕಾಲ ಅಪಘಾತರಹಿತ ಪೈಲಟ್‌ ಆಗಿ ಗುರುತಿಸಿಕೊಂಡಿದ್ದರು. ಮುಂಬೈ ನಿವಾಸಿಯಾಗಿದ್ದ ಇವರು ಕಳೆದ 18 ವರ್ಷಗಳಿಂದ ಏರ್‌ ಇಂಡಿಯಾದಲ್ಲಿ ಪೈಲಟ್‌ ಆಗಿದ್ದರು. ಏರ್‌ ಇಂಡಿಯಾದಲ್ಲಿ ಸೇವೆಗೆ ಸೇರಿದ ನಂತರ ಅವರು ಏರ್‌ಬಸ್‌310 ಗಳ ಹಾರಾಟವನ್ನು ಯಶಸ್ವಿಯಾಗಿ ನಡೆಸಿದ್ದರು.

    ಸಾಠೆ ಅವರಿಗೆ ಇಬ್ಬರು ಪುತ್ರರಿದ್ದು, ಒಬ್ಬರು ಬೆಂಗಳೂರಿನಲ್ಲಿದ್ದರೆ ಇನ್ನೊಬ್ಬರು ಅಮೆರಿಕದಲ್ಲಿದ್ದಾರೆ. ಶೀಘ್ರವೇ ಇವರು ಕಲ್ಲಿಕೋಟೆಗೆ ತಲುಪಲಿದ್ದಾರೆ ಎಂದು ವರದಿಯಾಗಿದೆ.

    ಸುತ್ತಲೂ ಆಳ ಕಣಿವೆಯಿ ಇದ್ದು, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗುತ್ತದೆ. ಈ ರೀತಿಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸುವುದು ಬಹಳ ಸವಾಲಿನ ಕೆಲಸ. ಕಲ್ಲಿಕೋಟೆ ದುರ್ಘಟನೆಯಲ್ಲಿ 19 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

  • ರನ್‍ವೇಯಿಂದ ಹೊರ ಬಂದ ವಿಮಾನ: ಟೇಕಾಫ್- ಲ್ಯಾಂಡಿಂಗ್ ಸಂಪೂರ್ಣ ಸ್ಥಗಿತ

    ರನ್‍ವೇಯಿಂದ ಹೊರ ಬಂದ ವಿಮಾನ: ಟೇಕಾಫ್- ಲ್ಯಾಂಡಿಂಗ್ ಸಂಪೂರ್ಣ ಸ್ಥಗಿತ

    -ವಿಮಾನ ತೆರವು ಕಾರ್ಯಚರಣೆ

    ಮಂಗಳೂರು: ಇಂದು ಸಂಜೆ 5.20ಕ್ಕೆ ಮಂಗಳೂರು ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ಪ್ಲೇನ್ ರನ್ ವೇಯಿಂದ ಹೊರ ಬಂದು ಆತಂಕವನ್ನು ಸೃಷ್ಟಿ ಮಾಡಿತ್ತು. ಪೈಲಟ್ ಸಮಯ ಪ್ರಜ್ಞೆಯಿಂದಾಗಿ 181 ಪ್ರಯಾಣಿಕರ ಜೀವ ಉಳಿದಿದೆ. ಇದೀಗ ವಿಮಾನದ ತೆರವು ಕಾರ್ಯಚರಣೆ ಅಂತಿಮವಾಗುವರೆಗೂ ಟೇಕಾಫ್ ಮತ್ತು ಲ್ಯಾಂಡಿಂಗ್ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

    ರನ್ ವೇಯಿಂದ ಹೊರಬಂದಿರುವ ವಿಮಾನ ಇಂದು ರಾತ್ರಿ 8.30ಕ್ಕೆ ಅಬುಧಾಬಿಯತ್ತ ಪ್ರಯಾಣ ಬೆಳಸಬೇಕಿತ್ತು. ರಾತ್ರಿ ವೇಳೆಗೆ ರನ್ ವೇ ಸುಗಮಗೊಳಿಸಿ ಸೋಮವಾರ ವಿಮಾನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಇಂದು ರಾತ್ರಿ 8.30ಕ್ಕೆ ಪ್ರಯಾಣ ಬೆಳೆಸಬೇಕಿದ್ದ ಪ್ರಯಾಣಿಕರಿಗೆ ಮಂಗಳೂರಿನ ಹೋಟೆಲ್ ಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಮವಾರ ಬೆಳಗ್ಗೆವರೆಗೂ ಸಂಚಾರ ಸ್ಥಗಿತಗೊಳ್ಳಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಅಪಘಾತಕ್ಕೆ ಕಾರಣ ಏನು?
    ಮಳೆಯ ಕಾರಣದಿಂದ ಸ್ಲಿಪ್ ಆಗಿ ವಿಮಾನ ರನ್ ವೇಯಿಂದ ಹೊರ ಬಂದಿದೆ ಎನ್ನಲಾಗುತ್ತಿದೆ. ಅಪಘಾತದಿಂದ ವಿಮಾನದ ಇಂಜಿನ್ ಭಾಗಕ್ಕೆ ಹಾನಿಯಾಗಿದ್ದು, ರಿಪೇರಿಗೆ ಮೂರು ತಿಂಗಳು ಸಮಯ ಬೇಕಾಗುತ್ತದೆ ತಜ್ಞರು ತಿಳಿಸಿದ್ದಾರೆ.

    ಆಗಿದ್ದೇನು?
    ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್- ಐಎಕ್ಸ್ 384 ವಿಮಾನ ಸಂಜೆ 5.20ಕ್ಕೆ ಲ್ಯಾಂಡ್ ಆಗಬೇಕಿತ್ತು. ರನ್ ವೇ ಮೇಲೆ ಬರುತ್ತಿದ್ದ ವಿಮಾನ ದಿಢೀರ್ ಅಂತಾ ಟ್ಯಾಕ್ಸಿ ವೇನತ್ತು ಚಲಿಸಿತ್ತು. ಕೂಡಲೇ ಎಚ್ಚೆತ್ತ ಪೈಲಟ್ ವಿಮಾನ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದು, ಸಿಬ್ಬಂದಿ ಸೇರಿದಂತೆ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

    2010ರಲ್ಲಿ ನಡೆದಿತ್ತು ದುರಂತ:
    2010 ಮೇ 22ರಂದು ಏರ್ ಇಂಡಿಯ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆ ರನ್ ವೇ ಬಿಟ್ಟು ಲ್ಯಾಂಡ್ ಆದ ಪರಿಣಾಮ 158 ಮಂದಿ ಸಾವನ್ನಪ್ಪಿದ್ದರು. ಮಂಗಳೂರು ವಿಮಾನ ನಿಲ್ದಾಣ ಟೇಬಲ್ ಟಾಪ್ ವಿಮಾನ ನಿಲ್ದಾಣವಾಗಿದ್ದು, ಲ್ಯಾಂಡಿಂಗ್ ಮತ್ತು ಟೇಕಾಫ್ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸುತ್ತಲೂ ಭದ್ರವಾದ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ. 2018 ಜೂನ್ ನಲ್ಲಿ ಸುರಿದ ಮಳೆಗೆ ಈ ತಡೆಗೋಡೆ ಕುಸಿತ ಕಂಡಿತ್ತು. ಕೂಡಲೇ ಅಧಿಕಾರಿಗಳು ಗೋಡೆಗಳನ್ನು ರಿಪೇರಿ ಮಾಡಿಸಿದ್ದರು.

    2010ರ ಅಪಘಾತಕ್ಕೆ ಕಾರಣ ಏನು?
    2010ರಲ್ಲಿ 158 ಪ್ರಯಾಣಿಕರನ್ನು ಬಲಿ ತೆಗೆದುಕೊಂಡಿದ್ದ ವಿಮಾನ ದುರಂತಕ್ಕೆ ಕಾರಣ ಕ್ಯಾಪ್ಟನ್ ಝಡ್. ಗ್ಲುಸಿಕಾ ಕಾರಣ ಎಂದು ವರದಿಯಾಗಿತ್ತು. ವಿಮಾನವನ್ನು ರನ್ ವೇಯಲ್ಲಿ ಇಳಿಸದೇ ಸುತ್ತು ಹಾಕಿಸಿ ಎಂದು ಏರ್ ಪೋರ್ಟ್ ಅಧಿಕಾರಿಗಳು ಸೂಚನೆ ನೀಡಿದ್ದರು. ಆದ್ರೂ ಕ್ಯಾಪ್ಟನ್ ಟೇಬಲ್ ಟಾಪ್ ರನ್ ವೇಯಲ್ಲಿ ವಿಮಾನ ಇಳಿಸಿದ್ದರಿಂದ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

    2018ರಲ್ಲಿ ಟೇಕಾಪ್ ವೇಳೆ ತಪ್ಪಿತ್ತು ದುರಂತ:
    2018 ಜನವರಿಯಲ್ಲಿ ಟೇಕಾಫ್ ವೇಳೆಯೂ ದೊಡ್ಡ ಅನಾಹುತವೊಂದು ತಪ್ಪಿತ್ತು. ಅಂದು ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ ಹುಲ್ಲು ತೆಗೆಯಲು ಟ್ರ್ಯಾಕ್ಟರ್ ಕರೆಸಲಾಗಿತ್ತು. ಆದ್ರೆ ಚಾಲಕ ತನ್ನ ಟ್ರ್ಯಾಕ್ಟರ್ ನ್ನು ರನ್ ವೇ ಅಂತ್ಯದಲ್ಲಿ ನಿಲ್ಲಿಸಿದ್ದನು. ಮುಂಬೈನತ್ತ ಹೊರಟಿದ್ದ ವಿಮಾನ ಟೇಕಾಪ್ ಆಗುವದರಲ್ಲಿತ್ತು. ಟ್ರ್ಯಾಕ್ಟರ್ ರನ್ ವೇ ಅಂತ್ಯದಲ್ಲಿ ನಿಂತಿರೋದು ಪೈಲಟ್ ಗೆ ಕಾಣಿಸಿರಲಿಲ್ಲ. ಟ್ರ್ಯಾಕ್ಟರ್ ಗಮನಿಸಿ ಟ್ರಾಫಿಕ್ ಕಂಟ್ರೋಲರ್ ವಿಮಾನದ ಹಾರಾಟವನ್ನು ರದ್ದುಗೊಳಿಸಿದ್ದರು.

    ಏನಿದು ಟೇಬಲ್ ಟಾಪ್ ವಿಮಾನ ನಿಲ್ದಾಣ?
    ಸುತ್ತಲೂ ಆಳ ಕಣಿವೆಯಿಂದ ಕೂಡಿ, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗಿದೆ. ಮಂಗಳೂರು ಹೊರತು ಪಡಿಸಿ ದೇಶದಲ್ಲಿ ಕೋಝಿಕ್ಕೋಡು ಮತ್ತು ಲೆಂಗ್‍ಪುಯಿನಲ್ಲಿ ಈ ರೀತಿಯ ವಿಮಾನ ನಿಲ್ದಾಣಗಳನ್ನು ಕಾಣಬಹುದು.

  • ವಿಮಾನಯಾನದ ವೇಳೆ ಬೆತ್ತಲಾದ ಪ್ರಯಾಣಿಕ..!- ನೋಡಿ ದಂಗಾದ್ರು ಸಹಪ್ರಯಾಣಿಕರು

    ವಿಮಾನಯಾನದ ವೇಳೆ ಬೆತ್ತಲಾದ ಪ್ರಯಾಣಿಕ..!- ನೋಡಿ ದಂಗಾದ್ರು ಸಹಪ್ರಯಾಣಿಕರು

    ಲಕ್ನೋ: ವಿಮಾನದಲ್ಲಿ ದುಬೈನಿಂದ ಲಕ್ನೋಗೆ ತೆರಳುತ್ತಿದ್ದ ಪ್ರಯಾಣಿಕನೊಬ್ಬ ಇದ್ದಕ್ಕಿದ್ದಂತೆ ತನ್ನ ಬಟ್ಟೆ ಬಿಚ್ಚಿ ವಿಮಾನದಲ್ಲಿ ಓಡಾಡಿರುವ ವಿಚಿತ್ರ ಘಟನೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಶನಿವಾರದಂದು ನಡೆದಿದೆ.

    ದುಬೈನಿಂದ ಲಕ್ನೋಗೆ ತೆರಳುತ್ತಿದ್ದ ಐಎಕ್ಸ್-194 ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕನೊಬ್ಬ ವಿಮಾನಯಾನದ ವೇಳೆ ಇದ್ದಕ್ಕಿದ್ದ ಹಾಗೆ ಬಟ್ಟೆ ಬಿಚ್ಚಿ ಬೆತ್ತಲಾಗಿ ವಿಮಾನದ ಉದ್ದಕ್ಕೂ ಓಡಾಡಿದ್ದಾನೆ. ಆತನ ವಿಚಿತ್ರ ವರ್ತನೆಯನ್ನು ಕಂಡ ಇತರೇ ಪ್ರಯಾಣಿಕರು ಒಂದು ಕ್ಷಣ ದಂಗಾಗಿದ್ದಾರೆ. ತಕ್ಷಣ ವಿಮಾನದಲ್ಲಿದ್ದ ಸಿಬ್ಬಂದಿ ಆತನಿಗೆ ಕಂಬಳಿ ಹೊದಿಸಿದ್ದಾರೆ. ಈ ಒಬ್ಬ ಪ್ರಯಾಣಿಕನಿಂದ ವಿಮಾನದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

    ಒಟ್ಟು 150 ಮಂದಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಲಕ್ನೋದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದಂತೆ ದುರ್ವರ್ತನೆ ತೋರಿದ್ದ ವ್ಯಕ್ತಿಯನ್ನು ಏರ್‌ಲೈನ್‌ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಆದ್ರೆ ಆತ ಯಾಕೆ ಹಾಗೆ ವರ್ತಿಸಿದ ಎಂಬ ಕಾರಣ ತಿಳಿದು ಬಂದಿಲ್ಲ.

    ವಿಮಾನದ ಕ್ಯಾಪ್ಟನ್‍ನ ಮಾಹಿತಿ ಮೇರೆಗೆ ಪ್ರಯಾಣಿಕನನ್ನು ವಶಕ್ಕೆ ಪಡೆದ ಏರ್‌ಲೈನ್‌ ಭದ್ರತಾ ಸಿಬ್ಬಂದಿ ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಕ್ತಾರರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv