Tag: AIIMS Hospital

  • ಆಸ್ಪತ್ರೆಗೆ ದಾಖಲಾಗಿರುವ ಅಡ್ವಾಣಿ ಆರೋಗ್ಯ ಸ್ಥಿರ

    ಆಸ್ಪತ್ರೆಗೆ ದಾಖಲಾಗಿರುವ ಅಡ್ವಾಣಿ ಆರೋಗ್ಯ ಸ್ಥಿರ

    ನವದೆಹಲಿ: ಆಸ್ಪತ್ರೆಗೆ ದಾಖಲಾಗಿರುವ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್‌.ಕೆ ಅಡ್ವಾಣಿ (LK Advani) ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯು ತನ್ನ ಹೇಳಿಕೆಯಲ್ಲಿ ದೃಢಪಡಿಸಿದೆ.

    ಏಕಾಏಕಿ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ 96 ವರ್ಷ ವಯಸ್ಸಿನ ಅಡ್ವಾಣಿಯವರನ್ನು ಬುಧವಾರ ತಡರಾತ್ರಿ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS)‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸ್ತುತ ಅಡ್ವಾಣಿ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.

    ಅಡ್ವಾಣಿಯವರು ವೃದ್ಧಾಪ್ಯ ವಿಭಾಗದ ತಜ್ಞರ ಅಡಿಯಲ್ಲಿ ವಯೋಸಹಜ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕುಡಿತದ ಮತ್ತಿನಲ್ಲಿದ್ದ ವ್ಯಕ್ತಿಯನ್ನ ಎತ್ತಿ ಎಸೆದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆ

    2024ರ ಮಾರ್ಚ್ 30 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು  ಅವರು ನವದೆಹಲಿಯಲ್ಲಿರುವ ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದರು.

  • 41 ಕಾರ್ಮಿಕರ ಆರೋಗ್ಯ ಸ್ಥಿರವಾಗಿದ್ದು, ಮನೆಗೆ ತೆರಳಬಹುದು: ಏಮ್ಸ್

    41 ಕಾರ್ಮಿಕರ ಆರೋಗ್ಯ ಸ್ಥಿರವಾಗಿದ್ದು, ಮನೆಗೆ ತೆರಳಬಹುದು: ಏಮ್ಸ್

    ನವದೆಹಲಿ: ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿ ಹೊರಬಂದಿರುವ 41 ಕಾರ್ಮಿಕರ ಆರೋಗ್ಯವು (41 Workers Health) ಉತ್ತಮವಾಗಿದ್ದು, ಅವರಿನ್ನು ಮನೆಗೆ ಹೋಗಬಹುದು ಎಂದು ಏಮ್ಸ್ ಆಸ್ಪತ್ರೆಯ (AIIMS Hospital) ವೈದ್ಯರು ತಿಳಿಸಿದ್ದಾರೆ.

    40 ಮಂದಿ ಕಾರ್ಮಿಕರು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೋರ್ವನಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಕೂಡ ಆದಷ್ಟು ಬೇಗ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೆಜ್ಜೆ ಹೆಜ್ಜೆಗೂ ಅಡೆತಡೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

    ಈ ಸಂಬಂಧ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಏಮ್ ಆಸ್ಪತ್ರೆ, ಸಿಲ್ಕ್ಯಾರಾ ಸುರಂಗದಿಂದ (Silkyara-Barkot Tunnel) ಸುರಕ್ಷಿತವಾಗಿ ರಕ್ಷಣೆಗೊಂಡ ಬಳಿಕ ಎಲ್ಲಾ 41 ಮಂದಿ ಕಾರ್ಮಿಕರು ಏಮ್ಸ್-ರಿಷಿಕೇಶ್ ಆಸ್ಪತ್ರೆಗೆ ಬುಧವಾರ ಮಧ್ಯಾಹ್ನ ದಾಖಲಾಗಿದ್ದಾರೆ. ಪ್ರಾಥಮಿಕ ತಪಾಸಣೆಯ ವೇಳೆ ಈ ಕಾರ್ಮಿಕರ ಮೈಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ. ನಂತರ ಅವರನ್ನು ತೀವ್ರ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಅವರ ರಕ್ತ ಪರೀಕ್ಷೆಗಳು, ಮೂತ್ರಪಿಂಡ, ಇಸಿಜಿ ವರದಿಗಳು, ಯಕೃತ್ತಿನ ಕಾರ್ಯ ಪರೀಕ್ಷೆ ಮತ್ತು ಎಕ್ಸ್ ರೇನಲ್ಲಿ ಎಲ್ಲರೂ ದೈಹಿಕವಾಗಿ ಸ್ಥಿರರಾಗಿದ್ದಾರೆ ಎಂದು ತಿಳಿಸಿದರು.

    40 ಕಾರ್ಮಿಕರಲ್ಲಿ ಒಬ್ಬರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಅವರನ್ನು ಹೆಚ್ಚಿನ ತಪಾಸಣೆಗಾಗಿ ಡಿಸಾಸ್ಟರ್ ವಾರ್ಡ್‍ನಿಂದ ಹೃದ್ರೋಗ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಆದರೆ ಇದು ಸುರಂಗ ಕುಸಿತ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಎಲ್ಲಾ ಕಾರ್ಮಿಕರ ಆರೋಗ್ಯದ ಬಗ್ಗೆ ಆಸ್ಪತ್ರೆಯು ಕ್ಲಿಯರೆನ್ಸ್ ನೀಡಿದ್ದು, ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಬಹುದು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ 41 ಜನರ ಪೈಕಿ 15 ಮಂದಿ ಏಮ್ಸ್ ನಿಂದ ತಮ್ಮ ಊರಾದ ಜಾರ್ಖಂಡ್‍ಗೆ ಹೊರಟಿದ್ದಾರೆ. ಈ 15 ಕಾರ್ವಿಕರನ್ನು ಅವರ ಕುಟುಂಬಸ್ಥರ ಸಮೇತ ಉತ್ತರಾಖಂಡದ ಡೆಹ್ರಾಡೂನ್‍ನಿಂದ ದೆಹಲಿಗೆ ಏರ್ ಲಿಫ್ಟ್ ಮಾಡಲಾಗಿದ್ದು, ಅಲ್ಲಿಂದ ಅವರನ್ನು ವಿಮಾನದಲ್ಲಿ ರಾಂಚಿಗೆ ಕಳುಹಿಸಿಕೊಡಲಾಗುತ್ತದೆ.

  • ದೆಹಲಿ ಏಮ್ಸ್‌ಗೆ ಕನ್ನ ಹಾಕಿದ್ದು ಚೀನಾ – ಡೇಟಾ ಈಗ ಸುರಕ್ಷಿತ

    ದೆಹಲಿ ಏಮ್ಸ್‌ಗೆ ಕನ್ನ ಹಾಕಿದ್ದು ಚೀನಾ – ಡೇಟಾ ಈಗ ಸುರಕ್ಷಿತ

    ನವದೆಹಲಿ: ನಗರದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ (AIIMS) ಕಂಪ್ಯೂಟರ್ ಸಿಸ್ಟಮ್ ಮೇಲೆ ಇತ್ತೀಚೆಗೆ ಸೈಬರ್ ದಾಳಿ (Cyber Attack) ನಡೆದಿದ್ದು, ಈ ದಾಳಿಯ ಮೂಲ ಚೀನಾವಾಗಿದೆ (China) ಎಂದು ಸರ್ಕಾರಿ ಮೂಲಗಳು ಬುಧವಾರ ತಿಳಿಸಿದೆ.

    ವರದಿಗಳ ಪ್ರಕಾರ 100 ಸರ್ವರ್‌ಗಳಲ್ಲಿ (40 ಭೌತಿಕ ಹಾಗೂ 60 ವರ್ಚುವಲ್) 5 ಭೌತಿಕ ಸರ್ವರ್‌ಗಳನ್ನು ಹ್ಯಾಕ್ ಮಾಡುವಲ್ಲಿ ಅಪರಾಧಿಗಳು ಯಶಸ್ವಿಯಾಗಿದ್ದಾರೆ. ಆದರೆ ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡಿರುವುದರಿಂದ ದೊಡ್ಡ ಹಾನಿಯನ್ನು ತಪ್ಪಿಸಲಾಗಿದೆ. ಇದೀಗ ಲಕ್ಷಗಟ್ಟಲೆ ರೋಗಿಗಳ ವಿವರಗಳು ಸುರಕ್ಷಿತವಾಗಿದೆ ಎಂದು ವರದಿಯಾಗಿದೆ.

    ನವೆಂಬರ್ 23 ರಂದು ಮೊದಲ ಬಾರಿ ಏಮ್ಸ್ ಆಸ್ಪತ್ರೆಯ ಸರ್ವರ್ 9 ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಇದು ಹ್ಯಾಕರ್‌ಗಳ (Hacker) ದಾಳಿಯಿಂದಾಗಿರುವುದಾಗಿ ಏಮ್ಸ್ ತಿಳಿಸಿತ್ತು. ಸುಮಾರು 3-4 ಕೋಟಿ ರೋಗಿಗಳ ವಿವರ ಸೋರಿಕೆಯಾಗಿರುವ ಭೀತಿ ಉಂಟಾಗಿದ್ದು, ಬಳಿಕ ಹ್ಯಾಕರ್‌ಗಳು ಏಮ್ಸ್ನಿಂದ ಸುಮಾರು 200 ಕೋಟಿ ರೂ. ಮೌಲ್ಯದ ಕ್ರಿಪ್ಟೋಕರೆನ್ಸಿ ನೀಡುವಂತೆ ಬೇಡಿಕೆಯಿಟ್ಟಿದ್ದರು. ಇದನ್ನೂ ಓದಿ: ಜಿ7 ದೇಶಗಳು ನಿಗದಿ ಮಾಡಿದ ದರಕ್ಕಿಂತಲೂ ಕಡಿಮೆ ದರದಲ್ಲಿ ರಷ್ಯಾದಿಂದ ಭಾರತ ತೈಲ ಖರೀದಿ

    ಬಳಿಕ ಡಿಸೆಂಬರ್ 2 ರಂದು ಆಸ್ಪತ್ರೆಯ 5 ಮುಖ್ಯ ಸರ್ವರ್‌ಗಳು ಸೈಬರ್ ದಾಳಿಗೆ ಒಳಗಾಗಿತ್ತು. ಇದರಿಂದ ಲಕ್ಷಾಂತರ ರೋಗಿಗಳ ವೈಯಕ್ತಿಕ ಡೇಟಾಗಳಿಗೆ ಹಾನಿಯಾಗಿತ್ತು. ಈ ಸೈಬರ್ ದಾಳಿಯನ್ನು ಚೀನಾದ ಹ್ಯಾಕರ್‌ಗಳು ನಡೆಸಿರುವ ಶಂಕೆಯಿದೆ ಎಂದು ಮೂಲಗಳು ತಿಳಿಸಿದ್ದವು.

    ಡಿಸೆಂಬರ್ 4 ರಂದು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿಯೂ ಸೈಬರ್ ದಾಳಿಯಾಗಿರುವುದಾಗಿ ವರದಿಯಾಗಿದೆ. ಆದರೆ ಏಮ್ಸ್ನಲ್ಲಿ ನಡೆದಿರುವಷ್ಟು ದಾಳಿ ತೀವ್ರವಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ವೈದ್ಯನಿಂದ ಪತ್ನಿಯ ಬರ್ಬರ ಹತ್ಯೆ – ಸೂಟ್‍ಕೇಸ್‍ನಲ್ಲಿ ತುಂಬಿ 400 ಕಿ.ಮೀ ದೂರದಲ್ಲಿ ಸುಟ್ಟು ಹಾಕಿದ

    Live Tv
    [brid partner=56869869 player=32851 video=960834 autoplay=true]

  • ರಾಯಚೂರು ಏಮ್ಸ್ ಹೋರಾಟಗಾರರಿಂದ ಶಾಸಕನ ಮನೆಗೆ ಮುತ್ತಿಗೆ

    ರಾಯಚೂರು ಏಮ್ಸ್ ಹೋರಾಟಗಾರರಿಂದ ಶಾಸಕನ ಮನೆಗೆ ಮುತ್ತಿಗೆ

    ರಾಯಚೂರು: ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ (AIIMS Hospital) ಒತ್ತಾಯಿಸಿ ನಡೆದಿರುವ ಹೋರಾಟ 150 ದಿನಗಳನ್ನು ದಾಟಿದ್ದರೂ, ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ದೇವದುರ್ಗದ ಅರಕೇರಾದಲ್ಲಿನ ಶಾಸಕ ಶಿವನಗೌಡ ನಾಯಕ್ (Shivanagouda Naik) ನಿವಾಸಕ್ಕೆ ಹೋರಾಟಗಾರರು ಮುತ್ತಿಗೆ ಹಾಕಿ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿದರು.

    ರಾಯಚೂರಿನಿಂದ ಅರಕೇರಾವರೆಗೆ 51 ಕಿ.ಮೀ ಪಾದಯಾತ್ರೆ ಮೂಲಕ ಬಂದ ಹೋರಾಟಗಾರರು ವಚನ ಭ್ರಷ್ಟರಾದ ಶಾಸಕ ಶಿವನಗೌಡ ನಾಯಕ್ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳಬೇಕು. ಏಮ್ಸ್ ಸ್ಥಾಪನೆ ಕುರಿತು ಸರ್ಕಾರದಲ್ಲಿ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ಶಾಸಕ ಶಿವನಗೌಡ ನಾಯಕ್‌ ಮಾತನಾಡಿ, ಏಮ್ಸ್ ಆಸ್ಪತ್ರೆ ಸ್ಥಾಪನೆಗೆ ಒಂದು ಲಕ್ಷ ಕೋಟಿ ರೂ. ಅನುದಾನದ ಬೇಕಾಗುತ್ತದೆ. ರಾಯಚೂರಿಗೆ ಆ ರೀತಿಯ ಸಂಸ್ಥೆ ಬಂದರೆ ನನಗೂ ಖುಷಿಯಾಗುತ್ತದೆ, ಈ ಹಿನ್ನೆಲೆಯಲ್ಲಿ ಹೋರಾಟಗಾರರ ಆಕ್ರೋಶಕ್ಕೆ ಮಣಿದು ಸರ್ಕಾರದ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದ ಕಾಶ್ಮೀರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ವಾಹನ ಸಂಚಾರ ಸ್ಥಗಿತ

    ಅರಕೇರಾ ಗ್ರಾಮ ವಾಸ್ತವ್ಯದಲ್ಲಿದ್ದ ಕಂದಾಯ ಸಚಿವ ಆರ್. ಅಶೋಕ್‌ಗೂ (R Ashok) ಹೋರಾಟಗಾರರ ಪ್ರತಿಭಟನೆ ಬಿಸಿ ತಟ್ಟಿತು. ಸಚಿವರಿಗೆ ಮನವಿ ಸಲ್ಲಿಸಿದ ಹೋರಾಟಗಾರರು ಹಿಂದುಳಿದ ಭಾಗಕ್ಕೆ ಅನ್ಯಾಯ ಮಾಡಬೇಡಿ ಅಂತ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಆರ್‌. ಅಶೋಕ್‌ ನಿಮ್ಮ ಹೋರಾಟಕ್ಕೆ ಧ್ವನಿಯಾಗಿ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಹಾಸನದಲ್ಲಿ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

    Live Tv
    [brid partner=56869869 player=32851 video=960834 autoplay=true]

  • ದೆಹಲಿ ಏಮ್ಸ್ ನಿರ್ದೇಶಕರಾಗಿ ಕನ್ನಡಿಗ ಶ್ರೀನಿವಾಸ್ ನೇಮಕ

    ದೆಹಲಿ ಏಮ್ಸ್ ನಿರ್ದೇಶಕರಾಗಿ ಕನ್ನಡಿಗ ಶ್ರೀನಿವಾಸ್ ನೇಮಕ

    ಬೆಂಗಳೂರು: ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಏಮ್ಸ್‌ಗೆ (All Indian Institute of Medical Sciences ) ಮುಂದಿನ ನಿರ್ದೇಶಕರಾಗಿ ಡಾ.ಎಂ.ಶ್ರೀನಿವಾಸ್ (Dr M Srinivas) ಹೆಸರನ್ನು ಸಂಪುಟದ ನೇಮಕಾತಿ ಸಮಿತಿ ಅನುಮೋದಿಸಿದೆ.

     

    ಡಾ. ಎಂ.ಶ್ರೀನಿವಾಸ್ ಕನ್ನಡಿಗರಾಗಿದ್ದು ಯಾದಗಿರಿ ಮೂಲದವರಾಗಿದ್ದಾರೆ. ಬಳ್ಳಾರಿಯ ಏಮ್ಸ್‌ನಲ್ಲಿ 1984ರ ಬ್ಯಾಚ್‍ನ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದರು. ಸದ್ಯ ಹೈದರಾಬಾದ್‍ನ ಸನತ್‍ನಗರದ (Hydrabad Sanatnagar) ಇಎಸ್‍ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಆಗಿದ್ದು, ಇದಕ್ಕೂ ಮೊದಲು ಅವರು ದೆಹಲಿಯ ಏಮ್ಸ್‌ನಲ್ಲಿಯೇ (AIIMS) ಪೀಡಿಯಾಟ್ರಿಕ್ ಸರ್ಜರಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಕಾರ್ಯನಿರ್ವಹಿಸಿದ್ದರು. ಇದೀಗ ಹುದ್ದೆಯನ್ನು ವಹಿಸಿಕೊಳ್ಳುವ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಅಥವಾ 65 ವರ್ಷ ವಯಸ್ಸಿನವರೆಗೆ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇದನ್ನೂ ಓದಿ: CET ಬಿಕ್ಕಟ್ಟು ಶಮನ – ಸರ್ಕಾರದ ಸಮನ್ವಯ ಸೂತ್ರಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್

    ಈ ಹಿಂದೆ ನಿರ್ದೇಶಕರಾಗಿದ್ದ ಡಾ. ರಣದೀಪ್ ಗುಲೇರಿಯಾ (Dr Randeep Guleria) ಅವರನ್ನು 2017 ಮಾರ್ಚ್ 28ರಂದು ಏಮ್ಸ್ ನಿರ್ದೇಶಕರಾಗಿ ಐದು ವರ್ಷಗಳ ಅವಧಿಗೆ ನೇಮಕ ಮಾಡಲಾಗಿತ್ತು. ಅಧಿಕಾರ ಅವಧಿ ಮುಗಿದ ನಂತರ ಎರಡು ಬಾರಿ ತಲಾ ಮೂರು ತಿಂಗಳಂತೆ ಅವಧಿ ವಿಸ್ತರಿಸಲಾಗಿತ್ತು. ಇವರ ಅಧಿಕಾರಿ ಶುಕ್ರವಾರ ಅಂತ್ಯವಾಗಲಿದ್ದು, ಡಾ.ಶ್ರೀನಿವಾಸ್ ಮುಂದಿನ ಐದು ವರ್ಷ ಕಾರ್ಯನಿರ್ವಹಿಸಲಿದ್ದಾರೆ. ಇದನ್ನೂ ಓದಿ: ಮಂಗಳೂರು ದಸರಾ-2022: ತಾಲೂಕಿನಾದ್ಯಂತ 4 ದಿನ ಹೆಚ್ಚುವರಿ ರಜೆ

    Live Tv
    [brid partner=56869869 player=32851 video=960834 autoplay=true]

  • ದೆಹಲಿಯಲ್ಲಿ ಪ್ರತಿದಿನ ದಾಖಲಾಗ್ತಿದೆ 20ಕ್ಕೂ ಹೆಚ್ಚು ಬ್ಯ್ಲಾಕ್ ಫಂಗಸ್ ಪ್ರಕರಣಗಳು

    ದೆಹಲಿಯಲ್ಲಿ ಪ್ರತಿದಿನ ದಾಖಲಾಗ್ತಿದೆ 20ಕ್ಕೂ ಹೆಚ್ಚು ಬ್ಯ್ಲಾಕ್ ಫಂಗಸ್ ಪ್ರಕರಣಗಳು

    ನವದೆಹಲಿ: ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಪ್ರತಿದಿನ 20ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳ ದಾಖಲಾಗುತ್ತಿದೆ ಎಂದು ನರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಂ.ವಿ. ಪದ್ಮ ಶ್ರೀವಾಸ್ತವರವರು ತಿಳಿಸಿದ್ದಾರೆ.

    ಇಂದು ಗಂಭೀರ ಸ್ಥಿತಿಯಲ್ಲಿ 20ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳು ದಾಖಲಾಗಿದ್ದು, ಇಮ್ಯುನೊಕಾಂಪ್ರೊಮೈಸ್ಡ್, ಡಯಾಬಿಟಿಸ್, ಹೈ ಸ್ಟೀರಾಯ್ಡ್ ಡೋಸ್ ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಮುನ್ನ ಇಷ್ಟು ಸಂಖ್ಯೆಯಲ್ಲಿ ಎಂದಿಗೂ ಇರಲಿಲ್ಲ. ಕೇವಲ ಬೆರಳೆಣಿಕೆಯಷ್ಟಿತ್ತು. ಆದರೆ ಈಗ ಬ್ಲ್ಯಾಕ್ ಫಂಗಸ್ ರೋಗದ ಮಿತಿ ಮೀರುತ್ತಿದ್ದು, ಪ್ರತಿನಿತ್ಯ 20ಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ದಾಖಲಾಗುತ್ತಿದೆ. ಈ ಕಾಯಿಲೆಗೆ ನಾವು ಏಮ್ಸ್ ಟ್ರಾಮಾ ಸೆಂಟರ್ ಮತ್ತು ಏಮ್ಸ್ ಜಾಜ್ಜರ್ ಎಂದು ಪ್ರತ್ಯೇಕ ವಾರ್ಡ್‍ಗಳನ್ನು ನಿರ್ಮಿಸಿದ್ದೇವೆ ಎಂದಿದ್ದಾರೆ.

    ದೇಶಾದ್ಯಂತ ಮ್ಯಾಕ್ಸ್ ಆಸ್ಪತ್ರೆಯಲ್ಲಿ 50ಕ್ಕೂ ಹೆಚ್ಚು ಬ್ಯ್ಲಾಕ್ ಫಂಗಸ್ ಪ್ರಕರಣಗಳು ದಾಖಲಾಗಿದ್ದು, ದೆಹಲಿಯಲ್ಲಿ 25 ಮಂದಿಗೆ ಬ್ಯ್ಲಾಕ್ ಫಂಗಸ್ ಕಾಣಿಸಿಕೊಂಡಿದೆ. ಕೋವಿಡ್-19-ಗೆ ಆಯಾಸ ಕೂಡ ಕಾರಣವಾಗಬಹುದು ಮತ್ತು ಈ ರೋಗವನ್ನು ಹೆಚ್ಚು ಅರ್ಥಮಾಡಿಕೊಳ್ಳಲು ನಾವು ಜಿನೋಮ್ ಸೀಕ್ವನ್ಸಿಂಗ್ ಮಾಡಿಸಬೇಕಾಗುತ್ತದೆ ಎಂದು ಡಾ. ಎಂ.ವಿ. ಪದ್ಮ ಶ್ರೀವಾಸ್ತವರವರು ಹೇಳಿದ್ದಾರೆ.

  • ಪದ್ಮಶ್ರೀ, ಮಾಜಿ ಐಎಂಎ ಅಧ್ಯಕ್ಷ ಡಾ. ಕೆ.ಕೆ ಅಗರ್ವಾಲ್ ಕೊರೊನಾಗೆ ಬಲಿ

    ಪದ್ಮಶ್ರೀ, ಮಾಜಿ ಐಎಂಎ ಅಧ್ಯಕ್ಷ ಡಾ. ಕೆ.ಕೆ ಅಗರ್ವಾಲ್ ಕೊರೊನಾಗೆ ಬಲಿ

    ನವದೆಹಲಿ: ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಮಾಜಿ ರಾಷ್ಟ್ರೀಯ ಅಧ್ಯಕ್ಷ ಡಾ. ಕೆ.ಕೆ ಅಗರ್ವಾಲ್ ಅವರು ಕೊರೊನಾಗೆ ಬಲಿಯಾಗಿದ್ದಾರೆ.

    ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್)ನಲ್ಲಿ ಸೋಮವಾರ ರಾತ್ರಿ 11.30ಕ್ಕೆ ಡಾ.ಕೆ.ಕೆ ಅಗರ್ವಾಲ್ ಕೊನೆಯುಸಿರೆಳೆದಿದ್ದಾರೆ.

    ಡಾ.ಕೆ.ಕೆ ಅಗರ್ವಾಲ್‍ರವರು(62) ಕಳೆದ ಕೆಲವು ದಿನಗಳಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದು, ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಸೋಮವಾರ ರಾತ್ರಿ ನಿಧನರಾಗಿದ್ದಾರೆ.

    ಡಾ.ಕೆ.ಕೆ ಅಗರ್ವಾಲ್‍ರವರು ವೈದ್ಯರಾಗಿದ್ದಾಗಿನಿಂದಲೂ ತಮ್ಮ ಜೀವನವನ್ನು ಸಾರ್ವಜನಿಕರ ಹಿತಕ್ಕಾಗಿ ಮೀಸಲಿಟ್ಟಿದ್ದರು ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಕೊರೊನಾ ಸಂದರ್ಭದಲ್ಲಿ ಕೂಡ ಜನ ಸಾಮಾನ್ಯರಿಗೆ ಶಿಕ್ಷಣ ನೀಡುವ ನಿರಂತರ ಪ್ರಯತ್ನಗಳನ್ನು ಮಾಡಿದರು ಮತ್ತು ಹಲವಾರು ವೀಡಿಯೋ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ 100 ಮಿಲಿಯನ್ ಜನರನ್ನು ತಲುಪುವ ಮೂಲಕ ಸಂದೇಶವನ್ನು ಸಾರಿದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

  • ಉಸಿರಾಟದ ತೊಂದರೆ – ಮತ್ತೆ ಆಸ್ಪತ್ರೆ ಸೇರಿದ ಅಮಿತ್ ಶಾ

    ಉಸಿರಾಟದ ತೊಂದರೆ – ಮತ್ತೆ ಆಸ್ಪತ್ರೆ ಸೇರಿದ ಅಮಿತ್ ಶಾ

    ನವದೆಹಲಿ: ಉಸಿರಾಟದ ತೊಂದರೆ ಕಾಣಿಸಿಕೊಂಡ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತ್ತೆ ದೆಹಲಿ ಏಮ್ಸ್ ಆಸ್ಪತ್ರೆ ದಾಖಲಾಗಿದ್ದಾರೆ.

    ಅಮಿತ್ ಶಾ ಅವರು ಇತ್ತೀಚೆಗಷ್ಟೇ ಕೊರೊನಾದಿಂದ ಗುಣಮುಖರಾಗಿ ಬಂದಿದ್ದರು. ಆದರೆ ಮತ್ತೆ ಅವರಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡ ಕಾರಣ ಶನಿವಾರ ರಾತ್ರಿ 11 ಗಂಟೆಗೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಕೊರೊನಾ ಬಂದ ಕಾರಣ ಅವರು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.

    ಅಮಿತ್ ಶಾ ಅವರಿಗೆ ಆಗಸ್ಟ್ 2ರಂದು ಕೊರೊನಾ ಪಾಸಿಟಿವ್ ಬಂದಿತ್ತು. ಇದನ್ನು ಟ್ವೀಟ್ ಮಾಡುವ ಮೂಲಕ ದೃಢಪಡಿಸಿದ್ದ ಅಮಿತ್ ಶಾ, ನನಗೆ ಕೊರೊನಾ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿದ್ದರು. ಈ ನಂತರ ಅವರಿಗೆ ಅಗಸ್ಟ್ 14ರಂದು ಕೊರೊನಾ ಬರದಿ ನೆಗೆಟಿವ್ ಬಂದಿತ್ತು. ಆದ ಕಾರಣ ಮತ್ತೆ ಟ್ವೀಟ್ ಮಾಡಿದ್ದ ಅಮಿತ್ ಶಾ ನನಗೆ ಕೊರೊನಾ ವರದಿ ನೆಗೆಟಿವ್ ಬಂದ ಕಾರಣ ಹೋಂ ಐಸೊಲೇಶನ್‍ನಲ್ಲಿ ಇರಲಿದ್ದೇನೆ ಎಂದು ಟ್ವೀಟ್ ಮಾಡಿ ತಿಳಿಸಿದ್ದರು.

    ಇದಾದ ಬಳಿಕ ಅಗಸ್ಟ್ 18ರಂದು ಮಧ್ಯ ರಾತ್ರಿ ಮತ್ತೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಅಂದು ಪತ್ರಿಕಾ ಪ್ರಕಟನೆ ಹೊರಡಿಸಿದ್ದ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ, ಅಮಿತ್ ಶಾ ಅವರಿಗೆ ಕಳೆದ 3-4 ದಿನಗಳಿಂದ ಮೈ-ಕೈ ನೋವು, ಸುಸ್ತು ಕಾಣಿಸಿಕೊಂಡ ಹಿನ್ನೆಲೆ ಪೋಸ್ಟ್ ಕೋವಿಡ್ ಕೇರ್ ಗೆ ದಾಖಲಿಸಿಕೊಳ್ಳಲಾಗಿದೆ. ಅವರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಏಮ್ಸ್ ಆಸ್ಪತ್ರೆಯ ಪೋಸ್ಟ್ ಕೋವಿಡ್ ಕೇರ್ ಗೆ ದಾಖಲಿಸಿಕೊಳ್ಳಲಾಗಿದೆ. ಅವರು ಆರಾಮಾಗಿದ್ದು, ಆಸ್ಪತ್ರೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ತಿಳಿಸಲಾಗಿತ್ತು.

    ಆಗಸ್ಟ್ 18ರಂದು ಆಸ್ಪತ್ರೆ ಸೇರಿದ್ದ ಅಮಿತ್ ಶಾ ಅವರು 13 ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಂಡು ಅಗಸ್ಟ್ 31ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಇದಾದ 13 ದಿನಗಳ ಬಳಿಕ ಮತ್ತೆ ಅಮಿತ್ ಶಾ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

  • ಗೃಹ ಸಚಿವ ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲು

    ಗೃಹ ಸಚಿವ ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲು

    – ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು

    ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದು, ರಾತ್ರಿ 2.30ಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಅವರು ಅಮಿತ್ ಶಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಕುರಿತು ಏಮ್ಸ್ ಆಸ್ಪತ್ರೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅಮಿತ್ ಶಾ ಅವರಿಗೆ ಕಳೆದ 3-4 ದಿನಗಳಿಂದ ಮೈ-ಕೈ ನೋವು, ಸುಸ್ತು ಕಾಣಿಸಿಕೊಂಡ ಹಿನ್ನೆಲೆ ಪೋಸ್ಟ್ ಕೋವಿಡ್ ಕೇರ್‍ಗೆ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

    ಅಮಿತ್ ಶಾ ಅವರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಏಮ್ಸ್ ಆಸ್ಪತ್ರೆಯ ಪೋಸ್ಟ್ ಕೋವಿಡ್ ಕೇರ್‍ಗೆ ದಾಖಲಿಸಿಕೊಳ್ಳಲಾಗಿದೆ. ಅವರು ಆರಾಮಾಗಿದ್ದು, ಆಸ್ಪತ್ರೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಅಮಿತ್ ಶಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ನಂತರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆಗಸ್ಟ್ 14ರಂದು ಅವರ ಕೊರೊನಾ ವರದಿ ನೆಗೆಟಿವ್ ಬಂದಿತ್ತು. ಬಳಿಕ ಕೆಲ ದಿನಗಳ ಕಾಲ ಹೋಮ್ ಐಸೋಲೇಶನ್‍ನಲ್ಲಿರುವುದಾಗಿ ಅವರು ತಿಳಿಸಿದ್ದರು. ಅದರ ಪ್ರಕಾರ ಮನೆಯಲ್ಲೇ ಐಸೋಲೇಟ್ ಆಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದರು. ಆದರೆ ರಾತ್ರಿ ಇದ್ದಕ್ಕಿದ್ದಂತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕೊರೊನಾ ಸೋಂಕು ತಗುಲಿದ ಸಮಯದಲ್ಲಿ ಬೇಗ ಗುಣಮುಖನಾಗಲೆಂದು ನನಗೆ ಹಾಗೂ ನನ್ನ ಕುಟುಂಬಕ್ಕೆ ಹಾರೈಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ವೈದ್ಯರ ಸಲಹೆಯಂತೆ ಇನ್ನೂ ಕೆಲ ದಿನಗಳ ಕಾಲ ನಾನು ಹೋಮ್ ಐಸೋಲೇಶನ್‍ನಲ್ಲಿರುತ್ತೇನೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದರು.

  • ಆಸ್ಪತ್ರೆಯ ಬಾತ್‍ರೂಮ್ ಕಿಟಕಿಯಲ್ಲಿ ನೇಣುಬಿಗಿದುಕೊಂಡು ರೋಗಿ ಆತ್ಮಹತ್ಯೆ

    ಆಸ್ಪತ್ರೆಯ ಬಾತ್‍ರೂಮ್ ಕಿಟಕಿಯಲ್ಲಿ ನೇಣುಬಿಗಿದುಕೊಂಡು ರೋಗಿ ಆತ್ಮಹತ್ಯೆ

    ನವದೆಹಲಿ: ಇಲ್ಲಿನ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬ ಆತ್ಮಹತ್ಯೆಗೆ ಶರಣಾದ ದುರಂತ ಘಟನೆ ನಡೆದಿದೆ.

    ಆತ್ಮಹತ್ಯೆಗೊಳಗಾದ ರೋಗಿಯನ್ನು ರಾಜ್‍ಮನಿ ಸತ್ತರ್ ಎಂದು ಗುರುತಿಸಲಾಗಿದೆ. ಈತ ಆಸ್ಪತ್ರೆಯ ಬಾತ್ ರೂಮಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಹಲವು ದಿನಗಳಿಂದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಈ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದು ಈ ನಿರ್ಧಾರ ಕೈಗೊಂಡಿರಬಹುದು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಸ್ಥಳದಲ್ಲಿ ಯಾವುದೇ ರೀತಿಯ ಡೆತ್ ನೋಟ್ ಪತ್ತೆಯಾಗಿಲ್ಲ.

    ಸಾಂದರ್ಭಿಕ ಚಿತ್ರ

    ಆಸ್ಪತ್ರೆ ಸಿಬ್ಬಂದಿ ಗುರುವಾರ ಬೆಳ್ಳಂಬೆಳಗ್ಗೆ ವ್ಯಕ್ತಿಯೊಬ್ಬ ಬಾತ್‍ರೂಮ್ ಕಿಟಿಕಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿದ್ದಾರೆ. ಕೂಡಲೇ ಅಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ವ್ಯಕ್ತಿ ಆತ್ಮಹತ್ಯೆಗೆ ತನ್ನದೇ ಬಟ್ಟೆ ಬಳಸಿದ್ದಾನೆ ಎಂದು ವರದಿಯಾಗಿದೆ.

    ಮೃದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತದೆ.

    ಜುಲೈ 11ರಂದು ಕೂಡ ಇಂತದ್ದೇ ಒಂದು ಘಟನೆ ನಡದಿತ್ತು. ಏಮ್ಸ್ ಆಸ್ಪತ್ರೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದ ಮನೋ ವೈದ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. ಇವರು ಆಸ್ಪತ್ರೆಯ ಹಾಸ್ಟೆಲ್ ನಲ್ಲಿ ವಾಸವಿದ್ದು, ಅಂದು ಕಟ್ಟಡದ 10ನೇ ಮಹಡಿಯಲ್ಲಿ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ವೈದ್ಯರನ್ನು ಡಾ. ಅನುರಗ ಕುಮಾರ್ ಎಂದು ಗುರುತಿಸಲಾಗಿದೆ. ಇವರು ಕೂಡ ಯಾವುದೇ ಡೆತ್‍ನೋಡ್ ಬರೆದಿರಲಿಲ್ಲ. ಸಂಜೆ 5 ಗಂಟೆ ಸುಮಾರಿಗೆ ವೈದ್ಯರು ಈ ನಿರ್ಧಾರ ತೆಗೆದುಕೊಂಡಿದ್ದು, ಅವರ ಮೊಬೈಲ್ 10ನೇ ಮಹಡಿಯಲ್ಲಿ ದೊರೆತಿತ್ತು ಎಂದು ಡಿಸಿಪಿ ಅತುಲ್ ಕುಮಾರ್ ಠಾಕೂರ್ ತಿಳಿಸಿದ್ದರು.

    ಖಿನ್ನತೆಗೊಳಗಾಗಿರುವ ಕುಮಾರ್ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೆ ತನ್ನ ಜೀವನದ ಬಗ್ಗೆ ಕುಮಾರ್ ಬ್ಲಾಗ್ ನಲ್ಲಿ ಬರೆದುಕೊಂಡಿದ್ದರು ಎಂದು ಅವರದ್ದೇ ವಿಭಾಗ ವೈದ್ಯರು ತಿಳಿಸಿದ್ದಾರೆ.