Tag: Agriculture Act

  • ನಮ್ಮ ದೇಶದಲ್ಲಿ ಹೋರಾಟ ಇಲ್ಲದೇ ಬದಲಾವಣೆ ಸಾಧ್ಯವಿಲ್ಲ: ಕಾಗೋಡು ತಿಮ್ಮಪ್ಪ

    ನಮ್ಮ ದೇಶದಲ್ಲಿ ಹೋರಾಟ ಇಲ್ಲದೇ ಬದಲಾವಣೆ ಸಾಧ್ಯವಿಲ್ಲ: ಕಾಗೋಡು ತಿಮ್ಮಪ್ಪ

    – ರೈತರು ಹೋರಾಟ ನಿಲ್ಲಿಸಬಾರದು

    ಶಿವಮೊಗ್ಗ : ನಮ್ಮ ದೇಶದಲ್ಲಿ ಏನಾದರೂ ಹೊಸ ಬದಲಾವಣೆ ಆಗಬೇಕು ಅಂದರೆ ಅದು ಹೋರಾಟದಿಂದ ಮಾತ್ರ. ಹೋರಾಟವಿಲ್ಲದೇ ಬದಲಾವಣೆ ಸಾಧ್ಯವಿಲ್ಲ. ಹೀಗಾಗಿ ರೈತರು ಹೋರಾಟವನ್ನು ನಿಲ್ಲಿಸಬಾರದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕರೆ ನೀಡಿದ್ದಾರೆ.

    ದೆಹಲಿಯ ಟ್ರ್ಯಾಕ್ಟ ರ್ ಪೆರೇಡ್ ಬೆಂಬಲಿಸಿ, ಶಿವಮೊಗ್ಗದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ವತಿಯಿಂದ ನಡೆದ ರೈತರ ರಾಜ್ಯೋತ್ಸವ ಪೆರೃಡ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಹೋರಾಟದ ನೆಲವಾಗಿದೆ. ದೆಹಲಿಯಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಹೋರಾಟವನ್ನು ಬೆಂಬಲಿಸಿ ನೀವೆಲ್ಲಾ ಒಂದು ವರ್ಷವಾದರೂ ಸಹ ಹೋರಾಟ ನಡೆಸಬೇಕಾಗುತ್ತದೆ ಎಂದರು.

    ಹೊಸ ಹೋರಾಟಕ್ಕೆ ನಾಂದಿ: ಹೋರಾಟವಿಲ್ಲದೆ ನಮ್ಮ ದೇಶದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ನಿಮ್ಮ ಹೋರಾಟ ಈಗ ಪ್ರಾರಂಭವಾಗಿದೆ. ಇದನ್ನು ಮುಂದುವರಿಸಬೇಕಿದೆ. ನಿಮ್ಮ ಹೋರಾಟದಿಂದ ಹೊಸ ಹೋರಾಟಕ್ಕೆ ನಾಂದಿಯಾಗಬೇಕು. ಸಮಾಜದಲ್ಲಿ ಏರುಪೇರು ಹೋಗಲಾಡಿಸಬೇಕು. ಹೋರಾಟದ ಕೀ ಅನ್ನು ಕೈಯಲ್ಲಿ ಹಿಡಿದು ಹೋಗಬೇಕಿದೆ. ಹಿಂದೆ ನಾವು ಉಳುವವನೆ ಭೂ ಒಡೆಯ ಎಂದು ಹೋರಾಟ ಮಾಡಿ ಗೆಲುವು ಕಂಡಿದ್ದೇವೆ. ಮುಂದಿನ ದಿನಗಳಲ್ಲಿ ನಿಮ್ಮ ಹೋರಾಟಕ್ಕೆ ಯಶಸ್ಸು ಲಭ್ಯವಾಗುತ್ತದೆ. ಹೋರಾಟದಿಂದ ಹಿಂದಕ್ಕೆ ಹೋಗಬಾರದು. ನಿಮ್ಮ ಹೋರಾಟದಿಂದ ಕೇವಲ ನಿಮಗೆ ಮಾತ್ರ ಅಲ್ಲ, ಎಲ್ಲರಿಗೂ ಅನುಕೂಲವಾಗುತ್ತದೆ. ಎಂದರು.

    ಈ ವೇಳೆ ಸಂಯುಕ್ತ ಕಿಸಾನ್ ಮೋರ್ಚಾದ ಕೆ.ಟಿ.ಗಂಗಾಧರ್, ಹೋರಾಟಗಾರ ಶ್ರೀಪಾಲ್, ಬಂಡಾಯ ಸಾಹಿತಿ ಸಿದ್ದನಗೌಡ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಯೋಗೀಶ್, ನಾಗರಾಜ್, ದಲಿತ ಸಂಘಟನೆಯ ಗುರುಮೂರ್ತಿ ಸೇರಿದಂತೆ ಅನೇಕ ರೈತರು ಭಾಗಿಯಾಗಿದ್ದರು.

  • ದೇಶದ ಹಿತಕ್ಕಾಗಿ ರೈತ ವಿರೋಧಿ ಕಾನೂನುಗಳನ್ನ ಹಿಂಪಡೆಯರಿ: ರಾಹುಲ್ ಗಾಂಧಿ

    ದೇಶದ ಹಿತಕ್ಕಾಗಿ ರೈತ ವಿರೋಧಿ ಕಾನೂನುಗಳನ್ನ ಹಿಂಪಡೆಯರಿ: ರಾಹುಲ್ ಗಾಂಧಿ

    ನವದೆಹಲಿ: ಗಣರಾಜ್ಯೋತ್ಸವ ದಿನವೇ ದೇಶದ ರಾಜಧಾನಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಪ್ರತಿಭಟನೆ ಹಿನ್ನೆಲೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ, ರೈತ ವಿರೋಧಿ ಕಾನೂನುಗಳನ್ನ ಹಿಂಪಡೆಯಿರಿ ಎಂದು ಆಗ್ರಹಿಸಿದ್ದಾರೆ.

    ಹಿಂಸೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಏನೇ ಹಾನಿ ಸಂಭವಿಸಿದರೂ ಅದು ದೇಶಕ್ಕಾದ ನಷ್ಟ. ಹಾಗಾಗಿ ದೇಶದ ಹಿತಕ್ಕಾಗಿ ಕೃಷಿ ವಿರೋಧಿ ಕಾನೂನುಗಳನ್ನ ಹಿಂಪಡೆಯಿರಿ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳನ್ನ ಹಿಂಪಡೆಯುವಂತೆ ರೈತರು ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಗಡಿಯಲ್ಲಿದ್ದ ಧರಣಿ ನಿರತರು ಇಂದು ರಾಜಧಾನಿ ಪ್ರವೇಶಿಸಿದ್ದು, ಪ್ರತಿಭಟನೆ ಹಿಂಸೆ ರೂಪ ಪಡೆದುಕೊಂಡಿದೆ.

    ಸೋಮವಾರ ತಮಿಳುನಾಡಿನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ದೇಶದ ಪ್ರಧಾನ ಮಂತ್ರಿಗಳು ಮೂರು ಕೃಷಿ ಕಾಯ್ದೆಗಳ ಮೂಲಕ ರೈತರ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ನೀತಿಗಳಿಂದ ದೇಶದ ಕೃಷಿ ವಲಯ ನಾಶವಾಗಲಿದೆ. ಇಡೀ ಕೃಷಿ ವಲಯ ಕೆಲ ಕೋಟ್ಯಧಿಪತಿಗಳಲ್ಲಿಯೇ ಕೇಂದ್ರಿಕೃತವಾಗಲಿದೆ. ರೈತರು ತಮ್ಮ ಸುರಕ್ಷೆಗಾಗಿ ನ್ಯಾಯಾಲಯಕ್ಕೆ ಹೋಗುವಂತಿಲ್ಲ ಎಂದು ಒಂದು ಕಾನೂನು ಹೇಳುತ್ತೆ ಎಂದಿದ್ದರು.

  • ದೆಹಲಿಯಲ್ಲಿ ಪ್ರತಿಭಟನೆ ಮಾಡೋ ರೈತರು ಭಯೋತ್ಪಾದಕರು: ಮತ್ತೆ ನಾಲಗೆ ಹರಿಬಿಟ್ಟ ಕೌರವ

    ದೆಹಲಿಯಲ್ಲಿ ಪ್ರತಿಭಟನೆ ಮಾಡೋ ರೈತರು ಭಯೋತ್ಪಾದಕರು: ಮತ್ತೆ ನಾಲಗೆ ಹರಿಬಿಟ್ಟ ಕೌರವ

    ಕೊಪ್ಪಳ: ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತೆ ತಮ್ಮ ನಾಲಗೆ ಹರಿಬಿಟ್ಟಿದ್ದು, ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರು ಭಯೋತ್ಪಾದಕರು ಎಂಬ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ.

    ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವರಿಗೆ ಬೇರೆ ದೇಶಗಳ ಬೆಂಬಲದ ಜೊತೆ ಪಾಕಿಸ್ತಾನದ ಕುಮ್ಮಕ್ಕು ಇದೆ. ಕೆಂಪು ಕೋಟೆ ಬಳಿ ಗಲಾಟೆ ಮಾಡ್ತಾರೆ ಅಂದ್ರೆ ಇವರಿಗೆ ಭಯೋತ್ಪಾದಕರ ಬೆಂಬಲ ಎಷ್ಟಿದೆ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕಿದೆ. ಕೆಂಪುಕೋಟಿಗೆ ಮುತ್ತಿಗೆ ಹಾಕಿರೋದು ಭಯೋತ್ಪಾದನೆ ಕೃತ್ಯ ಎಂದು ಆಕ್ರೋಶ ಹೊರ ಹಾಕಿದರು.

    ನಮ್ಮ ದೇಶದ ರೈತರು ಯಾವತ್ತೂ ಕಾನೂನುಗಳನ್ನು ಕೈಗೆ ತೆಗೆದುಕೊಳ್ಳುವದಿಲ್ಲ. ಪ್ರತಿಭಟನಾ ನಿರತರ ಹಿಂದೆ ಪಾಕಿಸ್ತಾನ ಮತ್ತು ಕಾಂಗ್ರೆಸ್ ಇದೆ. ಪ್ರಧಾನಿ ಮೋದಿಯವರ ಜನಪ್ರಿಯತೆ ಕಂಡು ಭಯೋತ್ಪಾದಕರನ್ನ ಕರೆ ತಂದು ಅವರಿಗೆ ರೈತರು ಹೆಸರಿಟ್ಟು ಭಯೋತ್ಪಾದನೆ ಮಾಡಿಸುತ್ತಿದ್ದಾರೆ. ಈ ಪ್ರತಿಭಟನೆಗೆ ಸಂಪೂರ್ಣ ಪಾಕಿಸ್ತಾನ ಮತ್ತು ಕಾಂಗ್ರೆಸ್ ನವರ ಕುಮ್ಮುಕ್ಕು ಇದ್ದು, ಯಾರೇ ಕಾನೂನು ಕೈಗೆ ತಗೆದುಕೊಂಡರು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗವುದು ಎಂದು ಹೇಳಿದರು.


    ಈ ಹಿಂದೆ ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು. ಸರ್ಕಾರದ ಕಾನೂನುಗಳು ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಲ್ಲ ಎಂದು ಮಡಿಕೇರಿಯಲ್ಲಿ ಹೇಳಿದ್ದರು. ಇನ್ನೂ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿಯೂ ತಮ್ಮ ವಿವಾದಾತ್ಮಕ ಹೇಳಿಕೆ ಪುನರುಚ್ಛಿರಿಸಿದ್ದರು.

  • ರೈತರು ಧ್ವಜಾರೋಹಣ ಮಾಡಬಾರದೆಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗ್ಬೇಕು: ಚಂದ್ರಶೇಖರ್

    ರೈತರು ಧ್ವಜಾರೋಹಣ ಮಾಡಬಾರದೆಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗ್ಬೇಕು: ಚಂದ್ರಶೇಖರ್

    ಬೆಂಗಳೂರು: ರೈತರು ಧ್ವಜಾರೋಹಣ ಮಾಡಬಾರದು ಎಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗಬೇಕು. ನೈಸ್ ರೋಡ್ ಜಂಕ್ಷನ್ ನಿಂದ ರಾಷ್ಟ್ರ ಬಾವುಟವನ್ನು ಹಿಡಿದು ರ್ಯಾಲಿ ಆರಂಭ ಮಾಡುತ್ತೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

    ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯಿದೆಯನ್ನು ವಿರೋಧಿಸಿ ಇಂದು ಬೆಂಗಳೂರಿನಲ್ಲಿ ರೈತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಮುಂಜಾನೆ ಕೋಲಾರದಿಂದ ಬೆಂಗಳೂರಿಗೆ ಬರುತ್ತಿದ್ದ ಟ್ರ್ಯಾಕ್ಟರ್‍ಗಳನ್ನು ಪೊಲೀಸರು ಅಡ್ಡ ಹಾಕಿ ವಶಪಡಿಸಿಕೊಂಡಿದ್ದಾರೆ. ಹೀಗಾಗಿ ರ್ಯಾಲಿಯಲ್ಲಿ ಕೆಲವು ರೈತರು ಭಾಗಿಯಾಗಿದ್ದರೆ, ಇನ್ನೂ ಕೆಲ ರೈತರು ಹೆದ್ದಾರಿ, ಟೋಲ್ ಗಳಲ್ಲಿಯೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

    ಈ ಕುರಿತಂತೆ ಮಾತನಾಡಿದ ಕೋಡಿಹಳ್ಳಿ, ಸರ್ಕಾರ, ರೈತರ ಸ್ವಾಭಿಮಾನವನ್ನ ಕೆರಳಿಸುತ್ತಿದೆ. ರೈತರ ಚಳುವಳಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ರೈತರು ಧ್ವಜಾರೋಹಣ ಮಾಡಬಾರದು ಎಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗಬೇಕು. ನೈಸ್ ರೋಡ್ ಜಂಕ್ಷನ್ ನಿಂದ ರಾಷ್ಟ್ರ ಬಾವುಟವನ್ನು ಹಿಡಿದು ರ್ಯಾಲಿ ಆರಂಭ ಮಾಡುತ್ತೇವೆ. ಜೊತೆಗೆ ಟೋಲ್, ಹೆದ್ದಾರಿಗಳಲ್ಲಿಯೂ ಹೋರಾಟದ ತೀವ್ರತೆ ಹೆಚ್ಚಾಗಿರುತ್ತದೆ. ರೈತರ ವಾಹನಗಳನ್ನ ತಡೆಯಲು ಸರ್ಕಾರ ಪೊಲೀಸರ ಸರ್ಪಗಾವಲು ಹಾಕಿದೆ. ಎಲ್ಲಾ ಚೆಕ್ ಪೋಸ್ಟ್, ಟೋಲ್ ಗಳಲ್ಲಿ ರೈತರನ್ನ ಪೊಲೀಸರು ತಡೆಯುತ್ತಿದ್ದಾರೆ. ಆದರೆ ಟ್ರ್ಯಾಕ್ಟರ್, ಎತ್ತಿನ ಗಾಡಿಯನ್ನು ಪೊಲೀಸರು ತಡೆದರು ಇತರೆ ವಾಹನಗಳ ಮೂಲಕ ರೈತರು ಬೆಂಗಳೂರಿಗೆ ಬರುತ್ತಿದ್ದಾರೆ.

    ಇಂದು ರೈತರೆಲ್ಲರೂ ಸೇರಿ ವಿಧಾನಸೌಧಕ್ಕೆ ನುಗ್ಗುವ (ಮುತ್ತಿಗೆ) ಹಾಕುವ ಪ್ರಯತ್ನ ನಡೆಸಲಾಗುತ್ತದೆ. ಆದರೆ ಪ್ರಯತ್ನದಲ್ಲಿ ಕೆಲ ಬದಲಾವಣೆಗಳು ಆಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

  • ಅನ್ನದಾತನ ಕಿಚ್ಚು – ‘ಗಣ’ದಿನದಂದು ಟ್ರ್ಯಾಕ್ಟರ್ ಮೂಲಕ ರೈತರ ‘ಗಣ’ ಘರ್ಜನೆ

    ಅನ್ನದಾತನ ಕಿಚ್ಚು – ‘ಗಣ’ದಿನದಂದು ಟ್ರ್ಯಾಕ್ಟರ್ ಮೂಲಕ ರೈತರ ‘ಗಣ’ ಘರ್ಜನೆ

    ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರಾಜ್ಯದ ರೈತರು ಮತ್ತೊಮ್ಮೆ ಬೀದಿಗಿಳಿಯಲಿದ್ದಾರೆ. ಜನವರಿ 26ರಂದು ಅಂದ್ರೆ ಗಣರಾಜ್ಯೋತ್ಸವದಂದೇ ಟ್ರ್ಯಾಕ್ಟರ್ ಮಾರ್ಚ್ ಮೂಲಕ ಬಿಸಿ ಮುಟ್ಟಿಸಲು ರೈತ ಸಂಘಟನೆಗಳು ಮುಂದಾಗಿವೆ. ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಸೇರಿದಂತೆ 25 ಸಾವಿರಕ್ಕೂ ಹೆಚ್ಚು ವಾಹನಗಳ ಮೂಲಕ ಅನ್ನದಾತರು ಬೃಹತ್ ರ‍್ಯಾಲಿ ಮಾಡಲಿದ್ದಾರೆ.

    ಬೆಂಗಳೂರಿಗೆ ರಾಜ್ಯದ ಮೂಲೆ ಮೂಲೆಯಿಂದ ರೈತರು ಆಗಮಿಸಲಿದ್ದಾರೆ. ಐಕ್ಯ ಹೋರಾಟ ಸಮಿತಿ, ರೈತ ಸಂಘಟನೆ, ದಲಿತ ಸಂಘಟನೆಗಳು, ಕನ್ನಡ ಸಂಘಟನೆಗಳು ಹೋರಾಟ ನಡೆಸಲಿದ್ದು, ನೈಸ್ ರಸ್ತೆ ಜಂಕ್ಷನ್‍ನಿಂದ ಆರಂಭವಾಗುವ ರೈತರ ರ‍್ಯಾಲಿ, ಗೊರಗುಂಟೆಪಾಳ್ಯ, ಯಶವಂತಪುರ ಮಾರ್ಗವಾಗಿ ಫ್ರೀಡಂಪಾರ್ಕ್ ತಲುಪಲಿದೆ. ಕೇವಲ ನೈಸ್ ರೋಡ್ ಮಾತ್ರವಲ್ಲ.. ಬೆಂಗಳೂರಿನ ದಶ ದಿಕ್ಕುಗಳಿಂದಲೂ ರೈತ ಪ್ರವಾಹ ರಾಜಧಾನಿಗೆ ಹರಿದುಬರಲಿದೆ. ಸಿಎಂ ಯಡಿಯೂರಪ್ಪ ಭಾಷಣ ಮುಗಿಯುತ್ತಲೇ, ರಾಜಧಾನಿಯಲ್ಲಿ ಟ್ರ್ಯಾಕ್ಟರ್ ಮಾರ್ಚ್‍ಗೆ ರೈತ ಸಂಘಟನೆಗಳು ಸಕಲ ಪ್ಲಾನ್ ಮಾಡಿಕೊಂಡಿವೆ.

    ರಾಜಧಾನಿಗೆ ಟ್ರ್ಯಾಕ್ಟರ್ ಪ್ರವಾಹ: ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನೈಸ್ ರೋಡ್ ಜಂಕ್ಷನ್‍ನಿಂದ ಪ್ರತಿಭಟನೆ ಶುರುವಾಗಲಿದೆ. ಗೊರಗುಂಟೆಪಾಳ್ಯ – ಮಲ್ಲೇಶ್ವರಂ – ಫ್ರೀಡಂಪಾರ್ಕ್‍ವರೆಗೂ ಟ್ರ್ಯಾಕ್ಟರ್ ರ‍್ಯಾಲಿ ನಡೆಯಲಿದೆ. ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮೈಸೂರಿನಿಂದಲೇ ರ‍್ಯಾಲಿ ಆರಂಭಗೊಂಡು ನಾಯಂಡಳ್ಳಿ ಮಾರ್ಗವಾಗಿ ಟ್ರ್ಯಾಕ್ಟರ್, ಎತ್ತಿನ ಗಾಡಿ ಮೂಲಕ ರೈತರು ಬೆಂಗಳೂರಿಗೆ ಎಂಟ್ರಿ ಕೊಡಲಿದ್ದಾರೆ. ಚಿಕ್ಕಬಳ್ಳಾಪುರ ರೈತರು ಹೆಬ್ಬಾಳ ಮಾರ್ಗವಾಗಿ ಮತ್ತು ಕೋಲಾರ ರೈತರು ಕೆ.ಆರ್ ಪುರಂ ಮಾರ್ಗವಾಗಿ ಪೆರೇಡ್ ನಡೆಸಲಿದ್ದಾರೆ. ಇನ್ನು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ರೈತರು ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಸೇರಿ ಬೃಹತ್ ರ್ಯಾಲಿ ನಡೆಸಲಿದ್ದಾರೆ.

    ನಮ್ಮ ಪೆರೇಡ್ ಅನ್ನು ತಡೆದರೇ ಇಡೀ ಬೆಂಗಳೂರು ಲಾಕ್ ಆಗಲಿದೆ. ದೆಹಲಿ ಮಾದರಿಯಲ್ಲೇ ನಮ್ಮ ಹೋರಾಟ ಸಾಗಲಿದೆ ಎಂದು ಸರ್ಕಾರಕ್ಕೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ. ನಮ್ಮ ಬೃಹತ್ ಹೋರಾಟ ಶಾಂತಿಯುತವಾಗಿರಲಿದೆ. ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇದ್ದರೆ ಈ ಕೂಡಲೇ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ರೈತರ ಮುಖಂಡ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.

    ‘ಖಾಕಿ’ ಬ್ರೇಕ್?: ಬೆಂಗಳೂರಿನಲ್ಲಿ ನಡೆಯಲಿರುವ ರೈತರ ಬೃಹತ್ ಟ್ರ್ಯಾಕರ್ ರ‍್ಯಾಲಿಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಪೊಲೀಸ್ ಆಯುಕ್ತರಿಗೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ಸೋಮವಾರ ಆಯುಕ್ತ ಕಮಲ್ ಪಂಥ್ ಸಭೆ ನಡೆಸಿ ನಿರ್ಧಾರ ತಿಳಿಸಲಿದ್ದಾರೆ. ಪಬ್ಲಿಕ್ ಟಿವಿಗೆ ಸಿಕ್ಕ ಮಾಹಿತಿ ಪ್ರಕಾರ, ಅನ್ನದಾತರ ಟ್ರ್ಯಾಕ್ಟರ್ ರ‍್ಯಾಲಿಗೆ ಬ್ರೇಕ್ ಹಾಕಲು ಖಾಕಿ ಪಡೆ ಪ್ಲಾನ್ ಮಾಡಿಕೊಂಡಿದೆ.

    ಬೆಂಗಳೂರು ಹೊರ ಭಾಗದಲ್ಲೇ ಟ್ರ್ಯಾಕ್ಟರ್ ತಡೆಗೆ ಪೊಲೀಸರು ಪ್ಲಾನ್ ಮಾಡಿಕೊಂಡಿದ್ದಾರೆ. ಟ್ರ್ಯಾಕ್ಟರ್ ಬಿಟ್ಟು, ರೈತರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಸಾಧ್ಯತೆಗಳಿವೆ. ರೈತರು ಬೈಕ್‍ಗಳಲ್ಲಿ ಬಂದರೇ ತಡೆ ಉಂಟು ಮಾಡಬಾರದು. ಬೆಂಗಳೂರು ಸುತ್ತಲಿನ ಜಿಲ್ಲಾ ಎಸ್‍ಪಿಗಳಿಗೆ ಆದೇಶ ರವಾನಿಸಲಾಗಿದೆ ಎನ್ನಲಾಗಿದೆ. ಜಿಲ್ಲೆಗಳಿಂದ ಟ್ರ್ಯಾಕ್ಟರ್ ಹೊರಡದಂತೆ ತಡೆಯಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ.

    ಯಾರ ಬೆಂಬಲ: ರೈತರ ಟ್ರ್ಯಾಕ್ಟರ್ ರಣಕಹಳೆಗೆ ಕಾಂಗ್ರೆಸ್ ಕಿಸಾನ್ ಘಟಕ ಬೆಂಬಲ ಸೂಚಿಸಿದೆ. ಇನ್ನುಳಿದಂತೆ ಕನ್ನಡ ಪರ ಸಂಘಟನೆಗಳು, ಕಾರ್ಮಿಕ ಸಂಘಟನೆ, ದಲಿತ ಸಂಘಟನೆ, ಮಹಿಳಾ ಸಂಘಟನೆಗಳು ಮತ್ತು ಕನ್ನಡ ಸಂಘಟನೆಗಳು ರೈತರ ಹೋರಾಟಕ್ಕೆ ಬೆಂಬಲ ನೀಡಿವೆ. ಬೃಹತ್ ರ‍್ಯಾಲಿಯಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗಲಿದೆ. ಸರ್ಕಾರಿ ರಜೆ ಅಂತ ಬೆಂಗಳೂರಿನಲ್ಲಿ ರಸ್ತೆಗಿಳಿದ್ರೆ ಮಂಗಳವಾರ ಟ್ರಾಫಿಕ್‍ನಲ್ಲಿ ಸಿಲುಕಿಕೊಳ್ಳುವುದು ಖಂಡಿತ.

    ದೆಹಲಿಯಲ್ಲೂ ರೈತರ ಟ್ರ್ಯಾಕ್ಟರ್ ಪರೇಡ್‍ಗೆ ದೆಹಲಿ ಪೊಲೀಸರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 1 ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್ ಮೂಲಕ ರೈತರು ಕೇಂದ್ರದ ವಿರುದ್ಧ ಪ್ರತಿಭಟಿಸಲಿದ್ದಾರೆ. ಸಿಂಘು, ಠಿಕ್ರಿ, ಘಾಜಿಯಾಬಾದ್, ಬುರಾರಿ ಮೂಲಕ ಪೊಲೀಸರು ಸೂಚಿಸಿರುವ ನಿಗದಿತ ಮಾರ್ಗದಲ್ಲಿ ರೈತರು ಶಾಂತಿಯು ಹೋರಾಟ ನಡೆಸಲಿದ್ದಾರೆ. ಪಂಜಾಬ್, ಹರಿಯಾಣ, ಉತ್ತರಪ್ರದೇಶದಿಂದ ಟ್ರ್ಯಾಕ್ಟರ್ ಮೂಲಕ ರೈತರು ಆಗಮಿಸಲಿದ್ದಾರೆ. ಕೃಷಿ ಕಾಯ್ದೆ ವಿರುದ್ಧ ಅನ್ನದಾತನ ಕಿಚ್ಚು ಇನ್ನು ಆರಿಲ್ಲ. ದೆಹಲಿಯಲ್ಲಿ ದಾಖಲೆ ಪ್ರತಿಭಟನೆ ಮಾಡ್ತಿರುವ ರೈತರು ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಲು ಬೃಹತ್ ಹೋರಾಟಕ್ಕಿಳಿದಿದ್ದಾರೆ. ಜನವರಿ 26ರ ಗಣರಾಜ್ಯೋತ್ಸವದಂದು ಕಿಸಾನ್‍ರ ಹೋರಾಟಕ್ಕೆ ಪ್ರತಿಫಲ ಸಿಗುತ್ತದೋ ನೋಡಬೇಕು.

  • ಕೃಷಿ ಕಾಯಿದೆ ಖಂಡಿಸಿ ರಾಜಭವನ ಚಲೋ – ಬುಧವಾರ ರಸ್ತೆಗೆ ಇಳಿಯುವ ಮುನ್ನ ಬಿ ಅಲರ್ಟ್

    ಕೃಷಿ ಕಾಯಿದೆ ಖಂಡಿಸಿ ರಾಜಭವನ ಚಲೋ – ಬುಧವಾರ ರಸ್ತೆಗೆ ಇಳಿಯುವ ಮುನ್ನ ಬಿ ಅಲರ್ಟ್

    ಬೆಂಗಳೂರು: ಕೇಂದ್ರ ಕೃಷಿ ಕಾಯಿದೆ ವಿರೋಧಿಸಿ ಬುಧವಾರ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು, ರೈತ ಸಂಘಟನೆಗಳು ರಾಜಭವನ ಚಲೋ ನಡೆಸಲಿದ್ದಾರೆ. ಬೆಳಗ್ಗೆ ಹನ್ನೊಂದು ಗಂಟೆಗೆ ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿಯಿಂದ ರ‍್ಯಾಲಿ ಶುರುವಾಗಲಿದೆ. ಮೆಜೆಸ್ಟಿಕ್‍ನಿಂದ ಫ್ರೀಡಂ ಪಾರ್ಕ್ ಮಾರ್ಗವಾಗಿ ಸಾಗಿ ರಾಜಭವನ ತಲುಪಲಿದೆ.

    ಕಾಂಗ್ರೆಸ್ ಪಕ್ಷದ ನಾಯಕರು, ರೈತ ಸಂಘಟನೆಗಳು ಸೇರಿದಂತೆ ಹದಿನೈದು ಸಾವಿರಕ್ಕೂ ಹೆಚ್ಚು ಜನರು ಈ ರ‍್ಯಾಲಿಯಲ್ಲಿ ಭಾಗಿಯೋ ಸಾಧ್ಯತೆ ಇದೆ. ರಾಜಭವನ ಚಲೋಗೆ ಪೊಲೀಸರು ಕೂಡ ಎಲ್ಲ ರೀತಿಯ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಆದ್ರೆ ನಗರದ ಹೃದಯ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರೋದರಿಂದ ಮೆಜೆಸ್ಟಿಕ್ ಸುತ್ತಲಿನ ಕೆ.ಜಿ.ರೋಡ್, ಚಿಕ್ಕಪೇಟೆ ಮುಖ್ಯರಸ್ತೆ, ಫ್ರೀಡಂ ಪಾರ್ಕ್ ರಸ್ತೆ, ಚಾಲುಕ್ಯ ಸರ್ಕಲ್, ಮೌರ್ಯ ಸರ್ಕಲ್, ಕೆಆರ್ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆ ಗಳು ಫುಲ್ ಜಾಮ್ ಆಗುವ ಸಾಧ್ಯತೆಗಳಿವೆ ಪರಿಸ್ಥಿತಿ ನೋಡಿಕೊಂಡು ಮಾರ್ಗಬದಲಾಣೆ ಬಗ್ಗೆ ಸೂಕ್ತ ತಿರ್ಮಾನ ಕೈಗೊಳ್ಳಲಾಗುವುದು ಅಂತಾ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ರಾಜಭವನ ಚಲೋಗೆ ಯಾವುದೇ ರೀತಿಯ ಅನುಮತಿ ಇಲ್ಲ. ಆದರೆ ರ‍್ಯಾಲಿ ಮಾಡುವ ಬಗ್ಗೆ ಅನುಮತಿ ಕೋರಿ ಪತ್ರ ಬಂದಿದ್ದು, ಇನ್ನೂ ಪರಿಶೀಲನೆ ಹಂತದಲ್ಲಿದೆ. ಕೊರೋನಾ ನಿಯಮಗಳು ಇನ್ನೂ ಜಾರಿಯಲ್ಲಿರೋದರಿಂದ ಮಾರ್ಗಸೂಚಿಗಳನ್ನು ಎಲ್ಲರು ಕಡ್ಡಾಯವಾಗಿ ಪಾಲನೆ ಮಾಡಬೇಕು. ಬಂದೊಬಸ್ತ್, ಮಾರ್ಗ ಬದಲಾವಣೆ ಬಗ್ಗೆ ಹಿರಿಯ ಅಧಿಕಾರಿಗಳು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

    ಸಾವಿರಾರು ಜನರು ಭಾಗವಹಿಸೋದರಿಂದ ಮೆಜೆಸ್ಟಿಕ್, ವಿಧಾನಸೌಧಸುತ್ತಮುತ್ತಲಿನ ರಸ್ತೆಗಳು ಸ್ತಬ್ಧ ಆಗೋ ಸಾಧ್ಯತೆಗಳು ಹೆಚ್ಚಾಗಿದೆ. 10 ಗಂಟೆಯ ನಂತರ ರಸ್ತೆಗಿಳಿದ್ರೆ ಟ್ರಾಫಿಕ್ ನಲ್ಲಿ ಲಾಕ್ ಅಗೋದು ಪಕ್ಕಾ.

  • ಕೃಷಿ ಕಾಯ್ದೆ ವಿರೋಧಿಸಿ, ಕಾಂಗ್ರೆಸ್ ಸೇರಿದ 100 ಬಿಜೆಪಿ ಕಾರ್ಯಕರ್ತರು

    ಕೃಷಿ ಕಾಯ್ದೆ ವಿರೋಧಿಸಿ, ಕಾಂಗ್ರೆಸ್ ಸೇರಿದ 100 ಬಿಜೆಪಿ ಕಾರ್ಯಕರ್ತರು

    ತಿರುವನಂತಪುರ: ನೂತನ ಕೃಷಿಕಾಯ್ದೆ ವಿರುದ್ಧ ರಾಷ್ಟ್ರವ್ಯಾಪ್ತಿ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಇದಕ್ಕೆ ಬೆಂಬಲ ನೀಡಿ ನಭಿಪುರ ಜಿಲ್ಲೆ 9 ಹಳ್ಳಿಯ 100 ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ ಎಂದು ಭರೂಚ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅರುನ್ಸಿನ್ ರಾಣಾ ಶನಿವಾರ ಹೇಳಿದ್ದಾರೆ.

    ನಭೀಪುರ ಜಿಲ್ಲಾ ಪಂಚಾಯತ್ ಸದಸ್ಯ ಶಕೀಲ್ ಅಕುಜಿ ಅವರ ನೇತೃತ್ವದಲ್ಲಿ ಪರಿಮಲ್ಸಿಂಹ ರಾಣಾ ಅವರ ಸಮ್ಮುಖ ಭರೂಚ್‍ನ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಅಧಿಕೃತವಾಗಿ ಶನಿವಾರ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಹೊಸದಾಗಿ ಪಕ್ಷವನ್ನು ಸೇರಿದವರಲ್ಲಿ ಶೇಕಡ 70ಕ್ಕಿಂತ ಜನರು ಸ್ಥಳೀಯ ಪಾಟೀದಾರ್ ಪಟೇಲರು ಉಪ್ರಾಲಿ, ಸ್ಯಾಮ್ಲೋಡ್, ದಭಾಲಿ, ಭರ್ತಾನ, ಕವಿತಾ, ನಂದ್, ಪಿಪಾಲಿಯಾ, ಕರೇಲಾ ಮತ್ತು ಉಮ್ರಾ ಗ್ರಾಮಗಳಿಗೆ ಸೇರಿದ್ದು, ಉಳಿದವರು ಬುಡಕಟ್ಟು ಜನಾಂಗದವರಾಗಿದ್ದಾರೆ ಎಂದು ವರದಿಯಾಗಿದೆ.

    ಹೊಸಬರಿಗೆ ಬಿಜೆಪಿ ಪಕ್ಷದಲ್ಲಿ ಪ್ರಾಮುಖ್ಯತೆ ನೀಡಲಾಗುತ್ತಿಲ್ಲ ಮತ್ತು ಅವರ ಪ್ರದೇಶಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಹೀಗಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತಾರೆ ಎಂದು ಪರಿಮಾಲ್ಸಿಂಗ್ ಹೇಳಿದರು.

    ಉಪ್ರಾಲಿ ಗ್ರಾಮದ ಮಾಜಿ ಸರ್ಪಂಚ್ ಮಹೇಶ್ ಪಾಟೀಲ್(54) ಎಂಬವರು, 35 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಆದ್ರೆ ಬಿಜೆಪಿ ಸರ್ಕಾರ ಜಾರಿಗೆ ತಂದ ಮೂರು ಹೊಸ ಕೃಷಿ ಕಾನೂನುಗಳನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದರು.

    ಈ ವಿಚಾರವಾಗಿ ಮಾತನಾಡಿದ ಬಿಜೆಪಿಯ ಭರೂಚ್ ಜಿಲ್ಲಾ ಘಟಕದ ಮುಖ್ಯಸ್ಥ ಮಾರುತಿ ಸಿನ್ಹ್ ಆಟೋದರಿಯಾ, ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100 ಜನ ಬಿಜೆಪಿ ಕಾರ್ಯಕರ್ತರು ಸೇರಿಕೊಂಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಆದ್ರೆ ಬಿಜೆಪಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವರು ಕಾಂಗ್ರೆಸ್ ಪಕ್ಷ ಸೇರಿಕೊಂಡಿಲ್ಲ ಎಂಬುವುದನ್ನು ಮಾತ್ರ ಹೇಳಬಲ್ಲೆ. ಈ ಕುರಿತಂತೆ ನಾನು ಪಕ್ಷದ ಸಾಂಸ್ಥಿಕ ಕಾರ್ಯದರ್ಶಿಯೊಂದಿಗೆ ಮಾತನಾಡಿ ಪರಿಶೀಲಿಸುತ್ತೇನೆ ಎಂದು ಹೇಳಿದರು.