Tag: agricultural

  • 91ರ ಇಳಿ ವಯಸ್ಸಿನಲ್ಲಿ ಸಹ ಬತ್ತದ ಕೃಷಿ ಉತ್ಸಾಹ – ಕಲಬುರಗಿ ವೃದ್ಧ ರೈತನ ಸಾಧನೆ

    91ರ ಇಳಿ ವಯಸ್ಸಿನಲ್ಲಿ ಸಹ ಬತ್ತದ ಕೃಷಿ ಉತ್ಸಾಹ – ಕಲಬುರಗಿ ವೃದ್ಧ ರೈತನ ಸಾಧನೆ

    ಕಲಬುರಗಿ: ಇಂದಿನ ತಾಂತ್ರಿಕ ಯುಗದಲ್ಲಿ ನಮ್ಮ ಹಳ್ಳಿಯ ಯುವಕರು ನಗರದತ್ತ ಮುಖ ಮಾಡಿ ಕೃಷಿ ಕಾಯಕವನ್ನು ಬಿಡುತ್ತಿದ್ದಾರೆ. ಆದರೆ ಕಲಬುರಗಿಯಲ್ಲಿ 91ರ ಅಜ್ಜ ಇಂದಿಗೂ ಕೃಷಿ ಮಾಡುತ್ತ ಅಂತಹ ಯುವಕರಿಗೇ ಮಾದರಿಯಾಗಿದ್ದಾರೆ.

    ಹೌದು, ಕಲಬುರಗಿ ತಾಲೂಕಿನ ಧರ್ಮಾಪುರ ಗ್ರಾಮದ ಬಸವಣ್ಣೆಪ್ಪ ಎಂಬ 91ರ ವೃದ್ಧ ಅಜ್ಜ ಈ ಇಳಿವಯಸ್ಸಿನಲ್ಲಿ ಸಹ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇವರು ಕಳೆದ 7 ದಶಕಗಳಿಂದ ಕೃಷಿಯಲ್ಲಿಯೇ ತಮ್ಮ ಜೀವನ ಕಳೆಯುತ್ತಿದ್ದು, ಬೆಳಗ್ಗೆ 6 ಗಂಟೆಯಾದರೆ ಸಾಕು ಇವರು ತಮ್ಮ ಜಮೀನಿನಲ್ಲಿ ಕೂಲಿಕಾರರನ್ನು ನಂಬದೇ ಸ್ವತಃ ಜಮೀನಿನಲ್ಲಿ ಉಳುಮೆ, ಬಿತ್ತನೆ ಸೇರಿದಂತೆ ಎಲ್ಲಾ ಕೆಲಸವನ್ನು ಖುದ್ದು ಅವರೇ ಮಾಡುತ್ತಿದ್ದಾರೆ.

    ಈ ಅಜ್ಜ ಪ್ರಾಚೀನ ಕೃಷಿಗೆ ಜೋತು ಬಿಳದೆ ವೈಜ್ಞಾನಿಕವಾಗಿ ಬೇಸಾಯ ಮಾಡುವ ಮಾದರಿ ರೈತರಾಗಿದ್ದಾರೆ. ಜೀವನ ಪೂರ್ತಿ ಕೂತುಂಡರೂ ಕರಗದಷ್ಟು ಆಸ್ತಿಯನ್ನು ಬಸವಣ್ಣೆಪ್ಪ ಮಾಡಿದ್ದರೂ, ತಮ್ಮ ಕೃಷಿ ಕಾಯಕ ಮಾತ್ರ ಬಿಟ್ಟಿಲ್ಲ. ಈ ಕೃಷಿ ಮೂಲಕವೇ ತಮ್ಮ 6 ಮಕ್ಕಳ ವಿದ್ಯಾಭ್ಯಾಸ ಮತ್ತು ಮದುವೆಯನ್ನು ಮಾಡಿದ್ದಾರೆ. ವಯಸ್ಸಾಯ್ತು ಕೃಷಿ ಸಾಕು ಎಂದು ಕುಟುಂಬಸ್ಥರು ಎಷ್ಟು ಹೇಳಿದರು ಕೇಳದ ಅಜ್ಜ ಬೆಳಗ್ಗೆ 6 ಗಂಟೆಗೆ ಬೈಕ್ ಮೇಲೆ ಜಮೀನಿಗೆ ಬಂದು ಕೃಷಿ ಕಾಯಕ ಮಾಡುವದು ಬಿಟ್ಟಿಲ್ಲ.

    ಇಂದಿನ ದಿನಗಳಲ್ಲಿ ಫೇಸ್ ಬುಕ್, ಟಿಕ್ ಟಾಕ್ ಎಂದು ಕಾಲ ಕಳೆಯುವ ಸೋಮಾರಿ ಯುವಕರಿಗೆ ಬಸವಣ್ಣೆಪ್ಪ ನಿಜಕ್ಕೂ ಮಾದರಿಯಾಗಿದ್ದಾರೆ. ಪ್ರತಿಯೊಬ್ಬರಿಗೂ ರಿಟೈರ್ಮೆಂಟ್ ಲೈಫ್ ಅನ್ನೋದು ಇರುತ್ತೆ. ಆದರೆ ದೇಶದ ಬೆನ್ನೆಲುಬು ಅನ್ನದಾತರಿಗೇ ನಿವೃತ್ತಿ ಅನ್ನೋದೇ ಇಲ್ಲ. ಇದಕ್ಕೆ ಈ 90ರ ವಯಸ್ಸಿನ ಅಜ್ಜ ತಾಜಾ ಉದಾಹರಣೆಯಾಗಿದ್ದಾರೆ.

  • 2017-18ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ ಕೃಷಿಗೆ 5,080 ಕೋಟಿ ರೂ. ಅನುದಾನ ಪ್ರಕಟ

    2017-18ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ ಕೃಷಿಗೆ 5,080 ಕೋಟಿ ರೂ. ಅನುದಾನ ಪ್ರಕಟ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇಂದು ವಿಧಾನಸಭೆಯಲ್ಲಿ 2017-18ನೇ ಸಾಲಿನ ಬಜೆಟ್ ಮಂಡಿಸಿದ್ದು, ಕೃಷಿಗೆ 5,080 ಕೋಟಿ ರೂ. ಅನುದಾನವನ್ನು ಪ್ರಕಟಿಸಿದ್ದಾರೆ. ಬಜೆಟ್‍ನಲ್ಲಿ ಘೋಷಣೆಯಾದ ಪ್ರಮುಖ ಅಂಶಗಳು

    – ಕೃಷಿ ಭಾಗ್ಯ ಯೋಜನೆ ಕರಾವಳಿ, ಮಲೆನಾಡು ಪ್ರದೇಶಗಳ ಎಲ್ಲಾ ತಾಲೂಕುಗಳಿಗೆ ವಿಸ್ತರಣೆ – 600 ಕೋಟಿ
    – ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ – 31.5 ಲಕ್ಷ ಹೆಕ್ಟೇರ್ ಪ್ರದೇಶ ವಿಸ್ತರಣೆ
    – ಹನಿ, ತುಂತುರು ನೀರಾವರಿ ಘಟಕಕ್ಕೆ ಸಹಾಯ ಧನ – 375 ಕೋಟಿ
    – ಕೃಷಿ ಯಂತ್ರಧಾರೆ ಕಾರ್ಯಕ್ರಮ ಹೋಬಳಿಗೆ ವಿಸ್ತರಣೆ – 122 ಕೋಟಿ
    – ಕೃಷಿಯಲ್ಲಿ ಯಂತ್ರೋಪಕರಣ ಬಳಕೆಗೆ ಉತ್ತೇಜನ – ರೈತರ ಖಾತೆಗೆ ಪ್ರೋತ್ಸಾಹ ಧನ – 100 ಕೋಟಿ
    – ಗ್ರಾಮೀಣ ಯುವಕರನ್ನು ಕೃಷಿಗೆ ಸೆಳೆಯಲು ಗ್ರಾಮೀಣ ಕೃಷಿ ಯಂತ್ರೋಪಕರಣ/ಸೇವಾ ಕೇಂದ್ರ ಸ್ಥಾಪನೆ – 10 ಕೋಟಿ

    ತೋಟಗಾರಿಕೆ ಇಲಾಖೆಗೆ 1,091 ಕೋಟಿ ರೂ. ಅನುದಾನ:

    – ತೋಟಗಾರಿಕೆ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆ ಅನುಷ್ಠಾನ – 200 ಕೋಟಿ
    – ರೈತರಿಗೆ ಉತ್ತಮ ಗುಣಮಟ್ಟದ ಸಸಿ ನೆಡುವ ಸಾಮಗ್ರಿ ಒದಗಿಸಲು 5 ಕೋಟಿ
    – ಗೇರು ಅಭಿವೃದ್ಧಿ ಮಂಡಳಿ – 10 ಕೋಟಿ
    – ತೆಂಗಿನ ತೋಟ ಪುನಶ್ಚೇತನ, ಉತ್ಪಾದನೆ ಹೆಚ್ಚಳಕ್ಕೆ 10 ಕೋಟಿ
    – ಮಾವಿನ ತೋಟ ಪುನಶ್ಚೇತನ – 10 ಕೋಟಿ
    – ರಾಜ್ಯಾದ್ಯಂತ 100 ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ಮಾಗಿಸುವ ಸೌಲಭ್ಯ – 10 ಕೋಟಿ
    – ಹನಿ ನೀರಾವರಿ ಯೋಜನೆಗೆ ಶೇ 90 ರಷ್ಟು ಸಹಾಯಧನ, 35 ಸಾವಿರ ರೈತರಿಗೆ ಯೋಜನೆಯ ಪ್ರಯೋಜನ- 233 ಕೋಟಿ
    – ರೈತರಿಗೆ ನೀರಿನ ಟ್ಯಾಂಕ್ ಖರೀದಿಗೆ ಶೇ 50 ರಷ್ಟು ಪ್ರೋತ್ಸಾಹ ಧನ

    ಪಶು ಸಂಗೋಪನೆ ಇಲಾಖೆಗೆ 2,245 ಕೋಟಿ ರೂ. ಅನುದಾನ:

    – 1512 ಪಶುವೈದ್ಯಕೀಯ ಕೇಂದ್ರಗಳು, ಪಶುಚಿಕಿತ್ಸಾಲಯ ಮೇಲ್ದರ್ಜೆಗೆ
    – ಪ್ರಮಾಣೀಕೃತ ಉತ್ಕೃಷ್ಟ ಟಗರು ತಳಿ ಉತ್ಪಾದಕ ಘಟಕ ಸ್ಥಾಪನೆ, ಹತ್ತುಸಾವಿರ ಕುರಿಮರಿಗಳ ಬೆಳೆಸೋದಕ್ಕೆ, ವರ್ಷ ಪೂರ್ತಿ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುವುದು.
    – ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿಗಳ ಸಹಕಾರದಲ್ಲಿ ಆಧುನಿಕ ಕಸಾಯಿಖಾನೆ ನಿರ್ಮಾಣ- 2.75 ಕೋಟಿ
    – ಮಾಂಸದಂಗಡಿಗೆ ಸಹಾಯಧನ ಪ್ರತಿ ಅಂಗಡಿಗೆ 1.25 ಲಕ್ಷ ಸಹಾಯಧನ
    – 40 ಉಣ್ಣೆ ಮತ್ತು ಚರ್ಮ ಗೋದಾಮು ನಿರ್ಮಾಣ
    – ಕಾಲು ಬಾಯಿ ಜ್ವರದ ಲಸಿಕೆ ಉತ್ಪಾದನ ಘಟಕ ನಿರ್ಮಾಣ – 100 ಕೋಟಿ
    – ಪಶುವೈದ್ಯಕೀಯಕ್ಕೆ ಸಂಬಂಧಪಟ್ಟಂತೆ ಮೂರು ಹೊಸ ಡಿಪ್ಲೋಮಾ ಕಾಲೇಜು – ಹಾಸನ, ಕೋರಮಂಗಲ , ಚಾಮರಾಜನಗರ
    – ಅಪಘಾತದಲ್ಲಿ ಸಾವಿಗೀಡಾಗುವ ಹಸುಗಳಿಗೆ 10 ಸಾವಿರ ರೂ ಪರಿಹಾರ ಧನ
    – ಆರು ತಿಂಗಳೊಳಗೆ ಸಾವಿಗೀಡಾಗುವ ಕುರಿಗಳಿಗೆ 2, 500 ಪರಿಹಾರ, ಆರು ತಿಂಗಳ ಮೇಲ್ಪಟ್ಟು ಸಾವಿಗೀಡಾಗುವ ಕುರಿಗಳಿಗೆ 5,ಸಾವಿರ ಪರಿಹಾರಧನ
    – ಕುರಿ ತಳಿ ಸಂವರ್ಧನೆಗೆ ಬಳ್ಳಾರಿಯಲ್ಲಿ ಕುರಿ ಸಂವರ್ಧನಾ ಕೇಂದ್ರ ನಿರ್ಮಾಣ – 1 ಕೋಟಿ ಅನುದಾನ

    ರೇಷ್ಮೆ ಇಲಾಖೆಗೆ 429 ಕೋಟಿ ರೂ. ಅನುದಾನ:

    – ರೇಷ್ಮೆ ಹುಳು ಮೊಟ್ಟೆ/ಚಾಕಿ ಗುಣಮಟ್ಟ ಪ್ರಾಧಿಕಾರ ಸ್ಥಾಪನೆ
    – ರೇಷ್ಮೆ ಕೃಷಿಯ ಬಗ್ಗೆ ತರಭೇತಿ ನೀಡಲು ಆರ್ಥಿಕ ನೆರವು
    – ಹಾಸನ ಜಿಲ್ಲೆಯಲ್ಲಿ ಹೊಸ ರೇಷ್ಮೆ ತರಬೇತಿ ಕೇಂದ್ರ ಸ್ಥಾಪನೆ
    – ಮೈಸೂರಿನಲ್ಲಿ ನೇಯ್ಗೆ ಕೇಂದ್ರ ಸ್ಥಾಪನೆ, ಐದು ಕೋಟಿ ಅನುದಾನ

    ಮೀನುಗಾರಿಕಾ ಇಲಾಖೆಗೆ 337 ಕೋಟಿ ರೂ. ಅನುದಾನ ಪ್ರಕಟ:

    – ಮಲ್ಪೆ ಹಾಗೂ ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ದೋಣಿ ಸುರಕ್ಷಿತ ಇಳಿದಾಣಕ್ಕೆ ಐದು ಕೋಟಿ
    – ಮತ್ಸ್ಯ ಕೃಷಿ ಆಶಾಕಿರಣ ಯೋಜನೆ ಜಾರಿ -ಮೀನು ಉತ್ಪಾದನೆಗೆ ಆರ್ಥಿಕ ಸಹಾಯ – 6.75 ಕೋಟಿ ಮೀಸಲು
    – ಸಾಂದ್ರೀಕೃತ ಮೀನಿಗೆ ಶೇ 50ರಷ್ಟು ಸಹಾಯಧನ, ಮೀನುಗಾರರಿಗೆ 10 ಲಕ್ಷ ಮೌಲ್ಯದ ಮನೆ ನಿರ್ಮಾಣಕ್ಕೆ ಶೇ 75ರಷ್ಟು ಸಹಾಯಧನ-

    ಸಹಕಾರ ಸಂಘಗಳ ಸಭಿವೃದ್ಧಿಗೆ 1,663 ಕೋಟಿ ರೂ. ಅನುದಾನ:

    – ಶೂನ್ಯ ಬಡ್ಡಿದರಲ್ಲಿ ಮೂರು ಲಕ್ಷದವೆರೆಗಿನ ಅಲ್ಪಾವಧಿ ಕೃಷಿ ಸಾಲ , ಮೂರು ಲಕ್ಷ ಮೇಲ್ಪಟ್ಟು -10 ಲಕ್ಷದ ಒಳಗಿನ ಸಾಲಕ್ಕೆ ಶೇ 3ರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯ – 13 ಸಾವಿರದ ಐನೂರು ಕೋಟಿ
    – ಪ್ರತಿಯೊಂದು ಗ್ರಾಮದಲ್ಲೂ ಪ್ರಾಥಮಿಕ ಕೃಷಿ ಸಹಕಾರ ಸಂಘದ ಸ್ಥಾಪನೆ
    – ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ
    – ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗೆ ಡಿಜಿಟಲ್ ಟಚ್-ಇ ಸೌಲಭ್ಯಕ್ಕಾಗಿ ಶೇ 25ರಷ್ಟು ನೆರವು

    ಕೃಷಿ ಮಾರುಕಟ್ಟೆ ಯೋಜನೆ:

    – ಗದಗದಲ್ಲಿ ಈರುಳ್ಳಿ ಗೋದಾಮು ಸ್ಥಾಪನೆಗೆ ಐದು ಕೋಟಿ
    – ಜಾನುವಾರ ಮಾರುಕಟ್ಟೆ ಆಧುನೀಕರಣಕ್ಕೆ ಐದು ಕೋಟಿ
    – ತರಕಾರಿ ಮಾರುಕಟ್ಟೆಯ ಸಾಮಾಗ್ರಿಗಳಿಗೆ 5 ಕೋಟಿ

    ಜಲಸಂಪನ್ಮೂಲ ಯೋಜನೆಗೆ 15,929 ಕೋಟಿ ರೂ. ಅನುದಾನ:

    – ಜಯಪುರದ ಮುದ್ದೇಬಿಹಾಳದಲ್ಲಿ ನಾಗರಬೆಟ್ಟ ಏತನೀರಾವರಿ ಯೋಜನೆ
    – ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಯಳ್ಳಿಗುತ್ತಿ ಗ್ರಾಮಕ್ಕೆ ನೀರು ಒದಗಿಸೋ ಯೋಜನೆ
    – ಸನ್ನತಿ ಯೋಜನೆ ಮೂಲಕ ಯಾದಗಿರಿ ತಾ 35 ಕೆರೆಗೆ ನೀರು ತುಂಬಿಸೋ ಯೋಜನೆ
    – ಆಲಮಟ್ಟಿ ಎಡದಂಡೆ ಆಧುನಿಕರಣ
    – ಬೆಳಗಾವಿ ಜಿಲ್ಲೆಯ ರಾಯಭಾಗ ತಾ 10 ಗ್ರಾಮಗಳ 17 ಕೆರೆಗಳಿ ಕೃಷ್ಣ ನದಿಯಿಂದ ನೀರು ತುಂಬಿಸುವ ಯೋಜನೆ
    – ಹರಪ್ಪನ ಹಳ್ಳಿ ತಾ 60 ಕೆರೆಗಳನ್ನ ತುಂಗಾಭದ್ರ ನದಿಯಿಂದ ನೀರು ತುಂಬಿಸೋ ಯೋಜನೆ
    – ಬೆಳಗಾವಿ ಜಿಲ್ಲೆಯ ತಾಲೂಕಿಗೆ ಮಲಪ್ರಭ ನದಿಯಿಂದ ನೀರು ತುಂಬಿಸೋ ಯೋಜನೆ
    – ಕಾವೇರಿ ಕೊಳ್ಳದಲ್ಲಿ 374 ಕಿ ಮೀ ನಾಲಾಭಿವೃದ್ಧಿ ಯೋಜನೆ – 599 ಕೋಟಿ ವೆಚ್ಚ
    – ಕಣ್ವ ನಾಲೆಗಳ ಆಧುನೀಕರಣ
    – ತೀವ್ರ ಬರಗಾಲ ಎದುರಿಸ್ತಾ ಇರೋ ಪ್ರದೇಶದಲ್ಲಿ ಮೋಡ ಬಿತ್ತನೆಗೆ ಯೋಜನೆ – 30 ಕೋಟಿ ಮೀಸಲು

    ಸಣ್ಣ ನೀರಾವರಿ ಯೋಜನೆಗೆ 2,099 ಕೋಟಿ ರೂ. ಅನುದಾನ ಪ್ರಕಟ:

    – ಕೆರೆ ಹೂಳು ಎತ್ತಲು ಕೆರೆ ಸಂಜೀವಿನಿ ಯೋಜನೆ- 100 ಕೋಟಿ
    – ಪಶ್ಚಿಮ ವಾಹಿನಿ ಯೋಜನೆಯಡಿ ಕರಾವಳಿ ಜಿಲ್ಲೆಯಲ್ಲಿ ಪಶ್ಚಿಮಾ¨ಭಿಮುಖವಾಗಿ ಹರಿಯುವ ನೀರನ್ನ ಸಂಗ್ರಹಿಸಲು ಕಿಂಡಿ ಅಣೆಕಟ್ಟು ನಿರ್ಮಾಣ – 100 ಕೋಟಿ
    – ಅಂತರ್ ಜಲ ತೀವ್ರವಾಗಿ ಕುಸಿದಿರುವ ಬೀದರ್, ಹಾವೇರಿ, ಚಾಮರಾಜನಗರ, ಚಿಕ್ಕಮಗಳೂರು ಹಾಸನದಲ್ಲಿ 50 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ

    ರೈತ ಸಾರಥಿ (ಹೊಸ ಯೋಜನೆ) ಘೋಷಣೆ:

    – ರೈತ ಸಾರಥಿ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಟ್ರಾಕ್ಟರ್ ಮತ್ತು ಟ್ರೈಲರ್‍ಗಳ ಅನುಕೂಲಕ್ಕಾಗಿ ರೈತರಿಗೆ ತರಬೇತಿ ಮತ್ತು ಕಲಿಕಾ ಲೈಸೆನ್ಸ್.