Tag: afghanistan

  • ಬಿಗಿ ಉಡುಪು ಧರಿಸಿದ್ದಕ್ಕೆ ಯುವತಿಯ ಕೊಲೆ

    ಬಿಗಿ ಉಡುಪು ಧರಿಸಿದ್ದಕ್ಕೆ ಯುವತಿಯ ಕೊಲೆ

    ಕಾಬೂಲ್: ಬಿಗಿ ಬಟ್ಟೆಯನ್ನು ಯುವತಿ ಧರಿಸಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಿದ ಘಟನೆ ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯ ಬಲ್ಕನ್‍ನಲ್ಲಿ ನಡೆದಿದೆ.

    ನಜಾನಿನ್ (21) ಮೃತಳಾಗಿದ್ದಾಳೆ. ಸಮರ್ ಕ್ವಾಂಡ್ ಎಂಬ ಹಳ್ಳಿಯಲ್ಲಿ ಯುವತಿಯನ್ನು ಕೊಲೆ ಮಾಡಲಾಗಿದ್ದು, ಈ ಹಳ್ಳಿ ಸಂಪೂರ್ಣವಾಗಿ ತಾಲಿಬಾನ್ ಹೋರಾಟಗಾರರ ನಿಯಂತ್ರಣದಲ್ಲಿದೆ ಎನ್ನಲಾಗಿದೆ.

    ನಜಾನಿನ್ ಮಸೀದಿಗೆ ತೆರಳಲು ವಾಹನ ಹುಡುಕುತ್ತ ಬಂದಾಗ ದಾಳಿ ನಡೆದಿದೆ. ಬಿಗಿಯಾಗಿ ಉಡುಪು ಧರಿಸಿದ್ದಳು ಮತ್ತು ಆಕೆಯೊಂದಿಗೆ ಪುರುಷರು ಯಾರೂ ಇರಲಿಲ್ಲ ಎಂಬ ಕಾರಣಕ್ಕೆ ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಆದರೆ ಈಕೆಯ ಮೇಲೆ ದಾಳಿಯಾಗುವಾಗ ಅವಳು ಮುಖ ಹಾಗೂ ಮೈಯಿಗೆ ಬುರ್ಖಾವನ್ನು ಹೊದ್ದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಳ್ಳಿ ತಾಲಿಬಾನ್ ಹೋರಾಟಗಾರರ ನಿಯಂತ್ರಣದಲ್ಲಿ ಇದ್ದರೂ, ಆಕೆಯನ್ನು ಹತ್ಯೆ ಮಾಡಿದ್ದು ತಾವಲ್ಲ ಎಂದು ತಾಲಿಬಾನ್ ಉಗ್ರರು ಹೇಳಿಕೊಂಡಿದ್ದಾರೆ.

    ಅಫ್ಘಾನಿಸ್ತಾನದ ಸರ್ಕಾರಕ್ಕೆ ಬೆಂಬಲ ಸೂಚಿಸುವ ಎಲ್ಲ ಗಣ್ಯವ್ಯಕ್ತಿಗಳನ್ನು ಉಗ್ರರು ಹತ್ಯೆ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಹೆಚ್ಚೆಚ್ಚು ಪ್ರದೇಶಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.

  • ಕಂದಹಾರ್ ಏರ್ ಪೋರ್ಟ್ ಮೇಲೆ ರಾಕೆಟ್ ದಾಳಿ – ವಿಮಾನ ಹಾರಾಟ ರದ್ದು

    ಕಂದಹಾರ್ ಏರ್ ಪೋರ್ಟ್ ಮೇಲೆ ರಾಕೆಟ್ ದಾಳಿ – ವಿಮಾನ ಹಾರಾಟ ರದ್ದು

    ಕಾಬೂಲ್: ದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್ ವಿಮಾನ ನಿಲ್ದಾಣದಲ್ಲಿ ಉಗ್ರರು ಮೂರು ರಾಕೆಟ್‍ಗಳ ದಾಳಿ ನಡೆಸಿದ್ದಾರೆ. ಮೂರರಲ್ಲಿ ಎರಡು ರಾಕೆಟ್‍ಗಳು ರನ್ ವೇ ಮೇಲೆ ಬಿದ್ದು, ಸ್ಫೋಟಗೊಂಡಿವೆ.

    ಶನಿವಾರ ರಾತ್ರಿ ವಿಮಾನ ನಿಲ್ದಾಣದ ಮೇಲೆ ಮೂರು ರಾಕೆಟ್‍ಗಳನ್ನು ಹಾರಿಸಲಾಗಿದ್ದು, ಅವುಗಳಲ್ಲಿ ಎರಡು ರಾಕೆಟ್ ರನ್‍ವೇಗೆ ಹೊಡೆದಿದೆ. ಪರಿಣಾಮ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮುಖ್ಯಸ್ಥ ಮಸೂದ್ ಪಶ್ತುನ್ ತಿಳಿಸಿದ್ದಾರೆ. ಇದೀಗ ರನ್‍ವೇಯನ್ನು ದುರಸ್ತಿ ಮಾಡಿಸುವ ಕೆಲಸ ನಡೆಯುತ್ತಿದ್ದು, ವಿಮಾನಗಳು ಭಾನುವಾರದ ನಂತರ ಕಾರ್ಯನಿರ್ವಹಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

    ತಾಲಿಬಾನ್ ಕೃತ್ಯ ಶಂಕೆ:
    ಕಳೆದ ಕೆಲ ದಿನಗಳಿಂದಲೂ ಉಗ್ರರು ಸತತ ದಾಳಿ ನಡೆಸುತ್ತಿದ್ದಾರೆ. ನಗರದ ಸುತ್ತಲೂ ತಾಲಿಬಾನ್, ಹೆರಾತ್, ಲಷ್ಕರ್ ಗಾಹಾ ಸಂಘಟನೆಯಯ ಉಗ್ರರು ಆವರಿಸಿದ್ದು, ಕಂದಹಾರ್ ವಶಕ್ಕೆ ಮುಂದಾಗುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿವೆ. ರಾಕೆಟ್ ದಾಳಿ ಸಹ ತಾಲಿಬಾನ್ ನಡೆಸಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.

    ಕಂದಹಾರ್ ಮೇಲೆ ದಾಳಿ ಏಕೆ?:
    ಕಂದಹಾರ್ ಅಫ್ಘಾನಿಸ್ತಾನದ ಎರಡನೇ ಅತಿ ದೊಡ್ಡ ನಗರವಾಗಿದ್ದು, ಇಲ್ಲಿಯ ವಿಮಾನ ನಿಲ್ದಾಣದಿಂದಲೇ ಸೇನೆಗೆ ಸಶಾಸ್ತ್ರಗಳ ಸರಬರಾಜು ಮಾಡಲಾಗುತ್ತದೆ. ಈ ಹಿನ್ನೆಲೆ ಕಂದಹಾರ್ ಮೇಲೆ ದಾಳಿ ನಡೆದಿರುವ ಸಾಧ್ಯತೆಗಳಿವೆ. ಕಂದಹಾರ್ ವಿಮಾನ ನಿಲ್ದಾಣದ ಮೇಲೆಯೇ ಉಗ್ರರು ಕಣ್ಣಿಟ್ಟಿದ್ದು, ಕಳೆದ ಎರಡ್ಮೂರು ವಾರಗಳಿಂದ ಸೇನೆಯ ಮೇಲೆ ನಿರಂತರವಾಗಿ ದಾಳಿ ನಡೆಸಿಕೊಂಡು ಬರುತ್ತಿದ್ದಾರೆ. ಉಗ್ರರ ವಿರುದ್ಧ ಅಫ್ಘಾನಿಸ್ತಾನ ಸೇನೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.

    ಅಮೆರಿಕದ ಸಹಾಯ: ಅಫ್ಘಾನಿಸ್ತಾನದ ನ್ಯಾಷನಲ್ ಡಿಫೆನ್ಸ್ ಸೆಕ್ಯುರಿಟಿ ಫೋರ್ಸ್ ಅಮೆರಿಕದ ಸಹಾಯ ಪಡೆದು ಉಗ್ರರು ವಶಕ್ಕೆ ಗ್ರಾಮಗಳನ್ನು ಖಾಲಿ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನದ ಬೆಂಬಲದಿಂದ ತಾಲಿಬಾನ್ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ವರದಿಯಾಗಿದೆ.

    ಯುದ್ಧದ ಸ್ಥಿತಿ ನಿರ್ಮಾಣ: ಕಂದಹಾರ್ ನಗರ ಪ್ರವೇಶಿಸಿರುವ ತಾಲಿಬಾನ್ ಉಗ್ರರು ಸೇನೆಯ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಹಲವು ಇಲಾಖೆಗಳಲ್ಲಿ ಅಡಗಿ ಕುಳಿತಿದ್ದ ಉಗ್ರರನ್ನು ಸೇನೆ ಹೊಡೆದುರಿಳಿಸಿದ್ದು, ಮೃತರಲ್ಲಿ ಪಾಕಿಸ್ತಾನದ ಅಧಿಕಾರಿಗಳು ಸಹ ಇದ್ದಾರೆ. ಮೃತರ ಬಳಿ ಪಾಕಿಸ್ತಾನದ ಗುರುತಿನ ಚೀಟಿಗಳು ಲಭ್ಯವಾಗಿವೆ. ಇದನ್ನೂ ಓದಿ: ಕೇಂದ್ರದ 10 ಕೊರೊನಾ ಹಾಟ್ ಸ್ಪಾಟ್- ರಾಜ್ಯಗಳ ಲಿಸ್ಟ್ ನಲ್ಲಿ ಕರ್ನಾಟಕ

  • 11.44 ಕೋಟಿ ಬೆಲೆಯ ಡ್ರಗ್ಸ್ ಸಾಗಿಸುತ್ತಿದ್ದ ಅಫ್ಘಾನಿಯರ ಬಂಧನ

    11.44 ಕೋಟಿ ಬೆಲೆಯ ಡ್ರಗ್ಸ್ ಸಾಗಿಸುತ್ತಿದ್ದ ಅಫ್ಘಾನಿಯರ ಬಂಧನ

    ನವದೆಹಲಿ: ಡ್ರಗ್ಸ್ ಸಾಗಿಸುತ್ತಿದ್ದ ಇಬ್ಬರು ಅಫ್ಘಾನಿಸ್ಥಾನದವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಬರೋಬ್ಬರಿ 11.44 ಕೋಟಿ ರೂ. ಬೆಲೆಯ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

    ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಡಿ.25ರಂದು ದುಬೈನಿಂದ ಆಗಮಿಸಿದ್ದರು. ಒಟ್ಟು 208 ಕ್ಯಾಪ್ಸಲ್ಸ್ ಗಳಲ್ಲಿ 1.635 ಕೆ.ಜಿ. ಹೆರಾಯಿನ್ ರೂಪದ ಡ್ರಗ್ಸ್ ನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 11.44 ಕೋಟಿ ರೂ. ಆಗಿದೆ ಎಂದು ಅಂದಾಜಿಸಲಾಗಿದೆ.

    ನಾರ್ಕೋಟಿಕ್ ಡ್ರಗ್ಸ್ ಹಾಗೂ ಸೈಕೋಟ್ರೋಪಿಕ್ ಸಬ್‍ಸ್ಟೇನ್ಸಸ್ ಆಕ್ಟ್-1985 ಅಡಿ ಪ್ರಕರಣ ದಾಖಲಾಗಿದ್ದು, ಜನವರಿ 25ರಂದು ಇಕೆ 512 ವಿಮಾನದಲ್ಲಿ ಆಗಮಿಸಿದ ಇಬ್ಬರು ಅಫ್ಘಾನಿಸ್ಥಾನದವರನ್ನು ದೆಹಲಿ ಕಸ್ಟಮ್ಸ್ ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 208 ಕ್ಯಾಪ್ಸಲ್ಸ್ ಒಟ್ಟು 1,635 ಗ್ರಾಂ. ವೈಟ್ ಪೌಡರ್ ರೀತಿಯ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

  • ವಾಯು ಸೇನೆಯ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ

    ವಾಯು ಸೇನೆಯ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ

    – ಸ್ಥಳದಲ್ಲಿ 8 ಸಾವು, ಒಟ್ಟು 15 ಮಂದಿ ದುರ್ಮರಣ

    ಕಾಬೂಲ್: ಅಫ್ಘಾನಿಸ್ಥಾನದ ವಾಯು ಸೇನೆಯ ಎರಡು ಹೆಲಿಕಾಪ್ಟರ್ ಗಳ ನಡುವೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 15 ಜನರು ಮೃತಪಟ್ಟಿದ್ದಾರೆ.

    ಮಂಗಳವಾರ ರಾತ್ರಿ ದಕ್ಷಿಣ ಹೆಲ್‍ಮಂದ್ ವ್ಯಾಪ್ತಿಯ ನವಾ ಜಿಲ್ಲೆಯಲ್ಲಿ ಅಫ್ಘಾನ್ ವಾಯುಸೇನೆ ಎರಡು ಹೆಲಿಕಾಪ್ಟರ್ ಗಳ ನಡುವೆ ಡಿಕ್ಕಿಯಾಗಿದೆ. ಒಂದು ಹೆಲಿಕಾಪ್ಟರ್ ನಲ್ಲಿ ಕಮಾಂಡೋಗಳನ್ನು ಒಂದು ಸ್ಥಳಕ್ಕೆ ಕರೆದೊಯ್ಯಲಾಗುತ್ತಿತ್ತು. ಮತ್ತೊಂದರಲ್ಲಿ ಗಾಯಾಳುಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಅಪಘಾತ ನಡೆದಿದ್ದು, ಸ್ಥಳದಲ್ಲಿಯೇ ಎಂಟು ಜನ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ವಿಮಾನಗಳ ಮುಖಾಮುಖಿ ಡಿಕ್ಕಿ – ಓರ್ವ ಜನಪ್ರತಿನಿಧಿ ಸೇರಿ 7 ಜನ ಸಾವು

    ಇದುವರೆಗೂ ಅಫ್ಘಾನಿಸ್ಥಾನ ವಾಯುಸೇನೆ ಘಟನೆಯ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆದ್ರೆ ಸ್ಥಳೀಯ ಗವರ್ನರ್ ನವಾ ಜಿಲ್ಲೆಯಲ್ಲಿ ನಡೆದಿರುವ ಅಪಘಾತದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 2 ಸೂರ್ಯಕಿರಣ್ ಯುದ್ಧವಿಮಾನಗಳು ಡಿಕ್ಕಿ

  • ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದ ಅಫ್ಘಾನಿಸ್ತಾನದ ಕ್ರಿಕೆಟಿಗ ಇನ್ನಿಲ್ಲ

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದ ಅಫ್ಘಾನಿಸ್ತಾನದ ಕ್ರಿಕೆಟಿಗ ಇನ್ನಿಲ್ಲ

    ಕಾಬೂಲ್: ಅಫ್ಘಾನಿಸ್ತಾನದ ಕ್ರಿಕೆಟಿಗ ನಜೀಬ್ ತರಕೈ(29) ಇಂದು ನಿಧನರಾಗಿದ್ದಾರೆ.

    ಅಕ್ಟೋಬರ್ 2ರಂದು ಜಲಾಲಬಾದ್ ನ ಪೂರ್ವ ನಂಗರ್ಹಾರ್ ನಲ್ಲಿ ನಡೆದಿದ್ದ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ನಜೀಬ್, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅಪ್ಘಾನಿಸ್ತಾನ ಕ್ರಿಕಟ್ ಮಂಡಳಿ ನಜೀಬ್ ನಿಧನದ ಸುದ್ದಿಯನ್ನು ತಿಳಿಸಿದೆ.

    ಶುಕ್ರವಾರ ಅಪ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಇಬ್ರಾಹಿಂ ಮೊಹಮ್ಮದ್ ಟ್ವೀಟ್ ಮಾಡಿ, ಜಲಾಲಬಾದ್ ನಲ್ಲಿ ನಡೆದ ಕಾರು ಅಫಗಾತದಲ್ಲಿ ಗಾಯಗೊಂಡಿರುವ ನಜೀಬ್ ಸ್ಥಿತಿ ಗಂಭೀರವಾಗಿದೆ. ಘಟನೆಯಿಂದ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಕೋಮಾದಲ್ಲಿದ್ದಾರೆ ಎಂದು ತಿಳಿಸಿದ್ದರು.

    ನಜೀಬ್ ಅಭಿಮಾನಿಗಳು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಾಬೂಲ್ ಅಥವಾ ಸ್ಥಳೀಯ ದೇಶದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿ ಎಂದು ಒತ್ತಾಯ ಮಾಡಿದ್ದರು ಎಂಬುದಾಗಿಯೂ ಇಬ್ರಾಹಿಂ ಹೇಳಿದ್ದರು. ಒಟ್ಟಿನಲ್ಲಿ ನಜೀಬ್ ಅಕಾಲಿಕ ನಿಧನ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗೆ ತುಂಬಲಾರದ ನಷ್ಟ ಉಂಟುಮಾಡಿದೆ. ಅಲ್ಲದೆ ಅವರ ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ.

    ನಜೀಬ್ ಅವರು 2014ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ನಲ್ಲಿ ನಜೀಬ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಅಫ್ಘಾನಿಸ್ತಾನದ ಪರ 12 ಟಿ20 ಮತ್ತು ಅಂತಾರಾಷ್ಟ್ರೀಯ ಏಕದಿನ ಪಂದ್ಯವೊಂದನ್ನು ಆಡಿದ್ದರು.

  • ಬಾಂಬ್‌ ದಾಳಿ – ಅಫ್ಘಾನ್‌ ಅಂಪೈರ್‌ ಬಲಿ

    ಬಾಂಬ್‌ ದಾಳಿ – ಅಫ್ಘಾನ್‌ ಅಂಪೈರ್‌ ಬಲಿ

    ಕಾಬೂಲ್‌: ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಲ್ಲಿ ಅಂಪೈರ್‌ ಆಗಿದ್ದ ಅಫ್ಘಾನಿಸ್ತಾನದ ಬಿಸ್ಮಿಲ್ಲಾ ಜಾನ್‌ ಶೆನ್ಸಾರಿ(36) ಬಾಂಬ್‌ ಸ್ಫೋಟಕ್ಕೆ ಬಲಿಯಾಗಿದ್ದಾರೆ.

    ನಂಗರ್‌ಹಾರ್ ಪ್ರಾಂತ್ಯದಲ್ಲಿರುವ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ನಡೆದ ಆತ್ಮಹುತಿ ಬಾಂಬ್‌ ದಾಳಿಯಲ್ಲಿ ಶೆನ್ಸಾರಿ ಸೇರಿ 15 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    2018-19 ರಲ್ಲಿ 6 ಏಕದಿನ ಮತ್ತು 6 ಟಿ 20 ಪಂದ್ಯಕ್ಕೆ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದರು.

    ನಂಗರ್ರ್‌ಹಾರ್‌ ಗವರ್ನರ್ ವಕ್ತಾರರು ಪ್ರತಿಕ್ರಿಯಿಸಿ, ಕೆಲ ಬಂದೂಕುಧಾರಿ ವ್ಯಕ್ತಿಗಳು ಜಿಲ್ಲಾ ಗವರ್ನರ್ ಕಾಂಪೌಂಡ್‌ ಪ್ರವೇಶಿಸಲು ಬಯಸಿದ್ದರು, ಆದರೆ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟರು ಎಂದು ತಿಳಿಸಿದರು.

  • ‘ಶೇಕಿಂಗ್‌ ಡೆಲ್ಲಿ’ ಟಾಸ್ಕ್‌ – ಉಗ್ರನ ಮನೆಯಲ್ಲಿ ಸಿಕ್ಕಿದ 19 ವಸ್ತುಗಳ ಪೂರ್ಣ ಮಾಹಿತಿ ಇಲ್ಲಿದೆ

    ‘ಶೇಕಿಂಗ್‌ ಡೆಲ್ಲಿ’ ಟಾಸ್ಕ್‌ – ಉಗ್ರನ ಮನೆಯಲ್ಲಿ ಸಿಕ್ಕಿದ 19 ವಸ್ತುಗಳ ಪೂರ್ಣ ಮಾಹಿತಿ ಇಲ್ಲಿದೆ

    ನವದೆಹಲಿ: ಏಕಾಂಗಿಯಾಗಿ ದೆಹಲಿಯಲ್ಲಿ ಭಾರೀ ಪ್ರಮಾಣದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಐಸಿಸ್‌ ಉಗ್ರನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಆತನ ಮನೆಯಲ್ಲಿರುವ ಸೆರೆ ಸಿಕ್ಕಿದ ಸ್ಫೋಟಕಗಳನ್ನು ನೋಡಿ ಭದ್ರತಾ ಪಡೆಯ ಸಿಬ್ಬಂದಿಯೇ ಶಾಕ್‌ ಆಗಿದ್ದಾರೆ.

    ಮುಸ್ತಾಕೀನ್‌ ಖಾನ್‌ ಅಲಿಯಾಸ್‌ ಅಬು ಯೂಸುಫ್‌ ಬೈಕ್‌ನಲ್ಲಿ 2 ತೀವ್ರ ಸ್ಫೋಟ ಸಾಮರ್ಥ್ಯದ ಪ್ರೆಷರ್‌ ಕುಕ್ಕರ್‌ ಬಾಂಬ್‌ಗಳನ್ನು ಒಯ್ಯುತ್ತಿದ್ದಾಗ ದೆಹಲಿ ಪೊಲೀಸರು ರೆಡ್‌ ಹ್ಯಾಂಡ್‌ ಆಗಿ ಬಂಧಿಸಿದ್ದಾರೆ. ಅವನಿಂದ ಎರಡು ಸಜೀವ ಬಾಂಬ್‌ಗಳ ಜೊತೆಗೆ ಒಂದು ಪಿಸ್ತೂಲ್‌ ಹಾಗೂ ಗುಂಡುಗಳು ಮತ್ತು ಮೋಟರ್‌ಸೈಕಲ್‌ ವಶಪಡಿಸಿಕೊಳ್ಳಲಾಗಿದೆ.  ಇದನ್ನೂ ಓದಿ: ‘ಶೇಕಿಂಗ್‌ ಡೆಲ್ಲಿ’ ಟಾಸ್ಕ್‌ – ಉಗ್ರನಿಗೆ ಭಟ್ಕಳ ಮೂಲದ ಸಫಿ ಅರ್ಮರ್‌ ಜೊತೆ ನಿಕಟ ಸಂಪರ್ಕ 

    ವಿಶೇಷ ಘಟಕದ ಡಿಸಿಪಿ ಪಿ.ಎಸ್‌.ಕುಶ್ವಾಹ ಪ್ರತಿಕ್ರಿಯಿಸಿ, ಆ.15ರಂದು ಸ್ವಾತಂತ್ರ್ಯೋತ್ಸವದ ವೇಳೆ ಈತ ದೆಹಲಿಯಲ್ಲಿ ದಾಳಿ ನಡೆಸಲು ಮುಂದಾಗಿದ್ದ. ಆದರೆ ಭಾರಿ ಭದ್ರತೆ ಇದ್ದ ಕಾರಣ ಆತನಿಗೆ ಕೃತ್ಯ ಎಸಗಲು ಸಾಧ್ಯವಾಗಿರಲಿಲ್ಲ. ಈಗ ಭದ್ರತೆ ಕಡಿಮೆ ಇದೆ ಎಂದು ತಿಳಿದು ದಾಳಿಗೆ ಮುಂದಾಗಿದ್ದ. ಈತನ ಬಳಿಯಿರುವ ಬಾಂಬ್‌ಗಳು ಸ್ಫೋಟಕ್ಕೆ ಸಿದ್ಧಗೊಂಡ ಸ್ಥಿತಿಯಲ್ಲಿದ್ದವು. ಟೈಮರ್‌ ಅಳವಡಿಕೆ ಮಾತ್ರ ಬಾಕಿಯಿತ್ತು ಎಂದು ತಿಳಿಸಿದ್ದಾರೆ.

    ಆರಂಭದಲ್ಲಿ ಬಾಂಬ್‌ ದಾಳಿ ನಡೆಸಿದ ಬಳಿಕ ಆತ ಆತ್ಮಹುತಿ ದಾಳಿ ನಡೆಸುವ ಪ್ಲಾನ್‌ ಮಾಡಿದ್ದ. ಈತನ ಚಲನವಲನ ಬಗ್ಗೆ ಕಳೆದ 1 ವರ್ಷದಿಂದ ನಿಗಾ ಇಟ್ಟಿದ್ದೆವು. ಈಗ ಬಾಂಬ್‌ನೊಂದಿಗೆ ಅಬು ಯೂಸುಫ್‌ನನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ. ಉತ್ತರಪ್ರದೇಶದ ಮನೆಯಲ್ಲಿ ದೆಹಲಿ ಪೊಲೀಸರು ಶೋಧ ನಡೆಸಿ ಅಪಾರ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

    ಏನು ಸಿಕ್ಕಿದೆ?
    1. 3 ಸ್ಫೋಟಕ ಪ್ಯಾಕೆಟ್‌ಗಳನ್ನು ಹೊಂದಿರುವ ಒಂದು ಕಂದು ಬಣ್ಣದ ಜಾಕೆಟ್
    2. 4 ಸ್ಫೋಟಕ ಪ್ಯಾಕೆಟ್‌ಗಳನ್ನು ಹೊಂದಿರುವ ಒಂದು ನೀಲಿ ಬಣ್ಣದ ಚೆಕ್ ವಿನ್ಯಾಸದ ಜಾಕೆಟ್(ಪ್ರತಿ ಸ್ಫೋಟಕ ಪ್ಯಾಕೆಟ್‌ಗಳನ್ನು ಜಾಕೆಟ್‌ಗಳಿಂದ ತೆಗೆದು ನಿಷ್ಕ್ರಿಯಗೊಳಿಸಲಾಗಿದೆ. ಈ ಸ್ಫೋಟಕಗಳ ಪ್ಯಾಕೆಟ್‌ಗಳನ್ನು ಪಾರದರ್ಶಕ ಟೇಪ್‌ನಿಂದ ಸುತ್ತಿಡಲಾಗಿತ್ತು)
    3. ಸರಿಸುಮಾರು ಮೂರು ಕಿ.ಗ್ರಾಂ ತೂಕದ ಸ್ಫೋಟಕಗಳನ್ನು ಹೊಂದಿರುವ ಒಂದು ಚರ್ಮದ ಬೆಲ್ಟ್‌
    4. 4 ವಿಭಿನ್ನ ಪಾಲಿಥಿನ್‌ಗಳಲ್ಲಿ 8-9 ಕಿ.ಗ್ರಾಂ ತೂಕದ ಸ್ಫೋಟಕ.
    5. ಸಿಲಿಂಡರಾಕಾರದ ಲೋಹದ ಪೆಟ್ಟಿಗೆಗಳು, ಇದರಲ್ಲಿ ಸ್ಫೋಟಕ ಮತ್ತು ಎಲೆಕ್ಟ್ರಿಕ್‌ ವಯರ್‌ಗಳು ಇತ್ತು.

    6. ಎರಡು ಸಿಲಿಂಡರಾಕಾರದ ಲೋಹದ ಪೆಟ್ಟಿಗೆಗಳು ಇದರಲ್ಲಿ ಬಾಲ್ ಬೇರಿಂಗ್‌ಗಳನ್ನು ಇಡಲಾಗಿತ್ತು.
    7. ಒಂದು ಮರದ ಮುರಿದ ಪೆಟ್ಟಿಗೆ (ಪಿಸ್ತೂಲಿನಿಂದ ಟಾರ್ಗೆಟ್‌ ಶೂಟ್‌ ಮಾಡಲು ಬಳಕೆ)
    8. ಒಂದು ಐಸಿಸ್ ಧ್ವಜ
    9. ವಿಭಿನ್ನ ವ್ಯಾಸ ಹೊಂದಿರುವ 30 ಬಾಲ್ ಬೇರಿಂಗ್‌ಗಳು
    10. 12 ಬಾಲ್‌ ಬೇರಿಂಗ್‌ ಪ್ಯಾಕೆಟ್‌ ಇರುವ ಒಂದು ಸಣ್ಣ ಪೆಟ್ಟಿಗೆ

    11. ತಲಾ 4 ವೋಲ್ಟ್‌ನ ಎರಡು ಲಿಥಿಯಂ ಬ್ಯಾಟರಿಗಳು
    12. 9 ವೋಲ್ಟ್‌ನ ಒಂದು ಲಿಥಿಯಂ ಬ್ಯಾಟರಿ
    13. ಎರಡು ಸಿಲಿಂಡರಾಕಾರದ ಲೋಹದ ಪೆಟ್ಟಿಗೆಗಳು
    14. ಹಳದಿ ಬಣ್ಣದ ಒಂದು ಆಂಪಿಯರ್ ಮೀಟರ್
    15. ಎರಡು ಕಬ್ಬಿಣದ ಬ್ಲೇಡ್‌ಗಳು. ಎರಡೂ ಬದಿಗಳು ವಿದ್ಯುತ್ ತಂತಿಗಳಿಗೆ ಸಂಪರ್ಕ ಹೊಂದುವಂತೆ ಜೋಡಣೆ

    16. ಒಂದು ತಂತಿ ಕಟ್ಟರ್
    17. ಎರಡು ಮೊಬೈಲ್ ಚಾರ್ಜರ್‌ಗಳು
    18. ವಿದ್ಯುತ್ ತಂತಿಗಳೊಂದಿಗೆ ಜೋಡಿಸಲಾದ ಟೇಬಲ್ ಅಲಾರಾಂ ವಾಚ್
    19. ಒಂದು ಕಪ್ಪು ಬಣ್ಣದ ಟೇಪ್

  • ‘ಶೇಕಿಂಗ್‌ ಡೆಲ್ಲಿ’ ಟಾಸ್ಕ್‌ – ಉಗ್ರನಿಗೆ ಭಟ್ಕಳ ಮೂಲದ ಸಫಿ ಅರ್ಮರ್‌ಜೊತೆ ನಿಕಟ ಸಂಪರ್ಕ

    ‘ಶೇಕಿಂಗ್‌ ಡೆಲ್ಲಿ’ ಟಾಸ್ಕ್‌ – ಉಗ್ರನಿಗೆ ಭಟ್ಕಳ ಮೂಲದ ಸಫಿ ಅರ್ಮರ್‌ಜೊತೆ ನಿಕಟ ಸಂಪರ್ಕ

    ನವದೆಹಲಿ: ಶುಕ್ರವಾರ ತಡರಾತ್ರಿ ದೆಹಲಿ ಸ್ಪೆಷಲ್ ಸೆಲ್ ಪೊಲೀಸರಿಂದ ಬಂಧನಕ್ಕೆ ಒಳಗಾದ ಐಸಿಸ್ ಉಗ್ರ ಮೊಹಮ್ಮದ್‌ ಮುಸ್ತಾಕೀಮ್‌ ಅಲಿಯಾಸ್‌ ಅಬು ಯೂಸುಫ್‌ ಇಂಡಿಯನ್ ಮುಜಾಹಿದ್ದೀನ್ ಉಗ್ರ ಭಟ್ಕಳ ಮೂಲದ ಸಫಿ ಅರ್ಮರ್ ಜೊತೆ ನಿಕಟ ಸಂಬಂಧ ಹೊಂದಿದ್ದ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

    ಕರ್ನಾಟಕದ ಭಟ್ಕಳ ಮೂಲದವನಾಗಿರುವ ಸಫಿ ಅರ್ಮರ್‌ಗೆ ಯೂಸೂಫ್‌-ಆಲ್‌-ಹಿಂದಿ‌ ಹೆಸರಿದ್ದು, ಅಫ್ಘಾನಿಸ್ಥಾನದಲ್ಲಿದ್ದುಕೊಂಡು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನೆರವಿನೊಂದಿಗೆ ಖೊರಾಸಮ್ ಮಾದರಿಯ ಇಸ್ಲಾಮಿಕ್ ಸ್ಟೇಟ್ ನಡೆಸುತ್ತಿದ್ದಾನೆ.

    ಭಾರತೀಯ ಗುಪ್ತಚರ ಸಂಸ್ಥೆ ‘ರಾ’ಗೆ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿರುವ ಯೂಸುಫ್-ಆ‍ಲ್-ಹಿಂದಿ ಅಫ್ಘಾನಿಸ್ಥಾನದಲ್ಲಿದ್ದುಕೊಂಡೇ ಉಗ್ರ ಚಟುವಟಿಕೆಗಳಲ್ಲಿ ಆಸಕ್ತಿ ಇರುವ ಮತ್ತು ಇಸ್ಲಾಮಿಕ್ ಸ್ಟೇಟ್ ಕಲ್ಪನೆಯಲ್ಲಿ ನಂಬಿಕೆ ಇರುವ ವ್ಯಕ್ತಿಗಳ ಜೊತೆ ಸಂಪರ್ಕ ಸಾಧಿಸುತ್ತಿದ್ದಾನೆ ಎಂಬ ವಿಚಾರವೂ ಈಗ ಲಭ್ಯವಾಗಿದೆ. ಇದನ್ನೂ ಓದಿ: ನನಗೆ ನಾಲ್ಕು ಮಕ್ಕಳಿದ್ದಾರೆ. ಅವರನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು – ಉಗ್ರನ ಪತ್ನಿ ಪ್ರಶ್ನೆ

    ಭಾರತದಲ್ಲಿ ಇಂಡಿಯನ್‌ ಮುಜಾಹಿದ್ದೀನ್‌ ಉಗ್ರರನ್ನುಮಟ್ಟ ಹಾಕುತ್ತಿದ್ದಂತೆ ಸಫಿ ಅರ್ಮರ್‌ ಉಗ್ರರನ್ನು ಒಟ್ಟುಗೂಡಿಸುವ ಪ್ರಯತ್ನ ಆರಂಭಿಸಿದ್ದ. ಐಎಸ್‌ಐ ಈತನಿಗೆ ‘ಶೇಕಿಂಗ್‌ ಡೆಲ್ಲಿ’ ಹೆಸರಿನಲ್ಲಿ ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ಎಸಗುವಂತೆ ಸೂಚನೆ ನೀಡಿತ್ತು ಈ ಟಾಸ್ಕ್‌ ಪೂರ್ಣಗೊಳಿಸಲು ಸಫಿ ಅರ್ಮರ್‌ ಉತ್ತರಪ್ರದೇಶದ ಬಲರಾಮ್ ಪುರದ ನಿವಾಸಿಯಾಗಿದ್ದ ಅಬು ಯೂಸುಫ್ ಜೊತೆ ಮಾತುಕತೆ ನಡೆಸಿದ್ದ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

    ಯೂಸುಫ್-ಅಲ್-ಹಿಂದಿ ಭಾರತದಲ್ಲಿ ಉಗ್ರ ಚಟುವಟಿಕೆ ಒಲವುಳ್ಳ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಟೆಲಿಗ್ರಾಂ ಮತ್ತು ವಿಚ್ಯಾಟ್ ಗಳನ್ನು ಬಳಕೆ ಮಾಡುತ್ತಿದ್ದಾನೆಂಬ ವಿಚಾರ ತನಿಖೆ ವೇಳೆ ಬಯಲಾಗಿದೆ. ಉಗ್ರ ಅಬು ಯೂಸುಫ್ ಬಳಿಯಿಂದ 15 ಕೆ.ಜಿ.ಗಳಷ್ಟು ಸ್ಪೋಟಕ, ಐಸಿಸ್‌ ಧ್ವಜ ಸೇರಿದಂತೆ 19 ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

  • ಮ್ಯಾಚ್ ಫಿಕ್ಸಿಂಗ್: ಅಫ್ಘಾನ್ ಸ್ಟಾರ್ ಕ್ರಿಕೆಟಿಗನಿಗೆ 6 ವರ್ಷ ನಿಷೇಧ!

    ಮ್ಯಾಚ್ ಫಿಕ್ಸಿಂಗ್: ಅಫ್ಘಾನ್ ಸ್ಟಾರ್ ಕ್ರಿಕೆಟಿಗನಿಗೆ 6 ವರ್ಷ ನಿಷೇಧ!

    ಕಾಬುಲ್: ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ (ಎಸಿಬಿ) ತನ್ನ ತಂಡದ ಸ್ಟಾರ್ ಕ್ರಿಕೆಟ್ ಆಟಗಾರ ಶಫಿಕುಲ್ಲಾ ಶಫಾಕ್ ಮೇಲೆ 6 ವರ್ಷ ಅಮಾನತು ಶಿಕ್ಷೆ ವಿಧಿಸಿದೆ.

    ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್ 2018ರ ಆವೃತ್ತಿ ಹಾಗೂ 2019ರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ನಲ್ಲಿ ಶಫಾಕ್ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದ ಪರಿಣಾಮ ಆತನ ವಿರುದ್ಧ ಐಸಿಸಿ ನಿಯಮ 2.1.1ರ ಅನ್ವಯ ನಿಷೇಧ ವಿಧಿಸಲಾಗಿದೆ ಎಂದು ಎಸಿಬಿ ಮಾಹಿತಿ ನೀಡಿದೆ.

    ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳಲು ವಿವಿಧ ರೀತಿ ಪ್ರಯತ್ನ ನಡೆಸಿದ್ದು ಮಾತ್ರವಲ್ಲದೇ, ಬುಕ್ಕಿಗಳು ಸಂಪರ್ಕ ಮಾಡಿದ್ದರು ಉದ್ದೇಶ ಪೂರ್ವಕವಾಗಿ ಬೋರ್ಡಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಆಟಗಾರ ಫಿಕ್ಸಿಂಗ್‍ನಲ್ಲಿ ಪಾಲ್ಗೊಂಡಿರುವುದಕ್ಕೆ ಬೋರ್ಡ್ ಅಸಮಾಧಾನ ವ್ಯಕ್ತಪಡಿಸಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ 30 ವರ್ಷದ ಶಫಾಕ್ ದೇಶದ ಪರ ಅಂತಿಮ ಪಂದ್ಯವನ್ನಾಡಿದ್ದು, ಇದುವರೆಗೂ 24 ಏಕದಿನ, 46 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.

    ವಿಶ್ವ ಕ್ರಿಕೆಟ್‍ನಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್, ಮೊಹಮ್ಮದ್ ನಬಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಈ ಇಬ್ಬರು ಆಟಗಾರರ ಬಳಿಕ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಆಗಿರುವ ಶಫಾಕ್ ಸ್ಟಾರ್ ಕ್ರಿಕೆಟಿಗ ಎಂದು ಗುರುತಿಸಿಕೊಂಡಿದ್ದರು. ದೇಶಿಯ ಕ್ರಿಕೆಟ್‍ನಲ್ಲಿರುವಾಗಲೇ ಟಿ20 ಮಾದರಿಯಲ್ಲಿ ಕೇವಲ 71 ಎಸೆತಗಳಲ್ಲಿ 214 ರನ್ ಸಿಡಿಸಿದ್ದರು.

  • ಕಾಬೂಲ್‍ನ ಗುರುದ್ವಾರದ ಮೇಲೆ ಉಗ್ರರ ದಾಳಿ- 11 ಮಂದಿ ಸಾವು

    ಕಾಬೂಲ್‍ನ ಗುರುದ್ವಾರದ ಮೇಲೆ ಉಗ್ರರ ದಾಳಿ- 11 ಮಂದಿ ಸಾವು

    – 16ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

    ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನಲ್ಲಿ ಉಗ್ರರು ಬುಧವಾರ ಗುರುದ್ವಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 11 ಭಕ್ತರು ಸಾವನ್ನಪ್ಪಿದ್ದು, 16ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಸಿಖ್ ಸಮುದಾಯದ ನೂರಾರು ಜನರು ಪ್ರಾರ್ಥನೆ ಸಲ್ಲಿಸಲು ಬೆಳಗ್ಗೆ 7.30ರ ಸುಮಾರಿಗೆ ಕಾಬೂಲ್‍ನ ಗುರುದ್ವಾರಕ್ಕೆ ಆಗಮಿಸಿದ್ದರು. ಈ ವೇಳೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ಪರಿಣಾಮ ಸ್ಫೋಟದಲ್ಲಿ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ. ಈ ಬೆನ್ನಲ್ಲೇ ಭದ್ರತಾ ಪಡೆಯು ಗುರುದ್ವಾರವನ್ನು ಮುತ್ತಿಗೆ ಹಾಕಿ ಪ್ರತೀಕಾರ ತೀರಿಸಿಕೊಂಡಿದೆ.

    ದಾಳಿಯಲ್ಲಿ ಗಾಯಗೊಂಡ 16ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಈವರೆಗೂ ಯಾವುದೇ ಭಯೋತ್ಪಾದಕ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಅಫ್ಘಾನಿಸ್ತಾನದಲ್ಲಿ ಸುಮಾರು 300 ಸಿಖ್ ಕುಟುಂಬಗಳಿವೆ. ಅದರಲ್ಲೂ ಕಾಬೂಲ್ ಮತ್ತು ಜಲಾಲಾಬಾದ್‍ನಲ್ಲಿ ಸಿಖ್ ಸಮೂದಾಯದ ಜನರು ಹೆಚ್ಚಾಗಿದ್ದಾರೆ. ಈ ಎರಡು ನಗರಗಳಲ್ಲಿ ಗುರುದ್ವಾರಗಳಿವೆ.

    ಈ ಕುರಿತು ಟ್ವೀಟ್ ಮಾಡಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ಈ ದಾಳಿಗೆ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ. ನಾವು ದಾಳಿ ಮಾಡಲಿಲ್ಲ ಎಂದು ತಿಳಿಸಿದ್ದಾನೆ.

    2018ರಲ್ಲಿ ಐಸಿಸ್ ದಾಳಿ:
    ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತ ಸಿಖ್ಖರು ಮತ್ತು ಹಿಂದೂಗಳ ಧಾರ್ಮಿಕ ಸ್ಥಳಗಳ ಮೇಲೆ ಆಗಾಗ್ಗೆ ದಾಳಿಗಳು ನಡೆಯುತ್ತಲೇ ಇವೆ. ಇದಕ್ಕೂ ಮುನ್ನ 2018ರಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರನ್ನು ಭೇಟಿಯಾಗಲು ಹೊರಟಿದ್ದ ಹಿಂದೂಗಳು ಮತ್ತು ಸಿಖ್ಖರ ಬೆಂಗಾವಲು ಮೇಲೆ ಆತ್ಮಾಹುತಿ ದಾಳಿ ನಡೆದಿತ್ತು. ಈ ವೇಳೆ 19 ಸಿಖ್ಖರು ಮತ್ತು ಹಿಂದೂಗಳು ಮೃತಪಟ್ಟಿದ್ದರು. ಈ ದಾಳಿ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಹೊತ್ತುಕೊಂಡಿತ್ತು. ದಾಳಿಯಿಂದಾಗಿ ಸಿಖ್ ಮತ್ತು ಹಿಂದೂ ಸಮುದಾಯಗಳು ಭಯಭೀತರಾಗಿದ್ದಾರೆ. ಹೆಚ್ಚಿನ ಸಂಖ್ಯೆಯ ಸಿಖ್ಖರು ಮತ್ತು ಹಿಂದೂಗಳು ದೇಶವನ್ನು ತೊರೆಯಲು ನಿರ್ಧರಿಸಿದ್ದರು. ಮೂರು ವರ್ಷಗಳಲ್ಲಿ ಅನೇಕ ಸಂತ್ರಸ್ತರು ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.