Tag: Adwani

  • ಮೋದಿಗೆ ಮನುಷ್ಯತ್ವ ಇದ್ಯಾ ಅನ್ನೋದೆ ಅನುಮಾನ: ನಾಡಗೌಡ ವಾಗ್ದಾಳಿ

    ಮೋದಿಗೆ ಮನುಷ್ಯತ್ವ ಇದ್ಯಾ ಅನ್ನೋದೆ ಅನುಮಾನ: ನಾಡಗೌಡ ವಾಗ್ದಾಳಿ

    ರಾಯಚೂರು: ಮೈತ್ರಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿರುವ ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡರು ಬಿಜೆಪಿಗಾಗಿ ದುಡಿದ ಹಿರಿಯ ನಾಯಕ ಎಲ್.ಕೆ ಅಡ್ವಾಣಿಯನ್ನು ಪ್ರಧಾನಿ ನರೇಂದ್ರ ಮೋದಿ ಮೂಲೆ ಗುಂಪು ಮಾಡಿದ್ದಾರೆ. ಅವರಿಗೆ ಮನುಷ್ಯತ್ವ ಇದೆಯಾ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.

    ಇಂದು ಜಿಲ್ಲೆ ಲಿಂಗಸಗೂರಿನ ಮುದಗಲ್ ಪಟ್ಟಣದಲ್ಲಿ ನಡೆದ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯ ಹಿರಿಯ ನಾಯಕರಾದ ಅಡ್ವಾಣಿ, ಎಂಎಂ ಜೋಶಿ ಅವರನ್ನು ಮೋದಿ ಕಡೆಗಣಿಸಿದ್ದಾರೆ. ಬಿಜೆಪಿ ಈ ದೇಶದಲ್ಲಿ ನಿಲ್ಲಲು ಅಡ್ವಾಣಿಯವರ ಪಾತ್ರ ದೊಡ್ಡದಿದೆ. ಅಂತಹ ಹಿರಿಯ ನಾಯಕರನ್ನು ಮೋದಿ ಮೂಲೆ ಗುಂಪು ಮಾಡಿದ್ದಾರೆ. ಎಲ್ಲಿ ಅವರು ಈ ದೇಶದ ರಾಷ್ಟ್ರಪತಿ ಆಗುತ್ತಾರೋ ಎನ್ನುವ ಕಾರಣಕ್ಕೆ ಎಲ್ಲೋ ಇದ್ದ ವ್ಯಕ್ತಿಯನ್ನು ಇಂದು ರಾಷ್ಟ್ರಪತಿ ಮಾಡಿದರು. ಹಿಂದೊಮ್ಮೆ ಬಿಜೆಪಿ ಕಾರ್ಯಕ್ರಮದಲ್ಲಿ ಅಡ್ವಾಣಿ ನಮಸ್ಕಾರ ಮಾಡಿದಾಗಲೂ ತಿರುಗಿ ಕೂಡ ನೋಡಿರಲಿಲ್ಲ. ಇದನ್ನೆಲ್ಲ ಗಮನಿಸಿದರೆ ಮೋದಿಗೆ ಮನುಷ್ಯತ್ವ ಇದೆಯಾ ಎನ್ನುವುದನ್ನೇ ಪ್ರಶ್ನೆ ಮಾಡಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಈ ಚುನಾವಣೆಯ ನಂತರ ಬಿಜೆಪಿಯವರು ಸ್ಟ್ರೀಮ್ ಲೈನ್‍ನಲ್ಲಿ ಇರೋದಿಲ್ಲ. ಮೋದಿ ಅವರು 70 ವರ್ಷಕ್ಕಿಂತ ಮೆಲ್ಪಟ್ಟ ನಾಯಕರನ್ನು ಲೋಕಸಭಾ ಚುನಾವಣೆಯಿಂದ ದೂರವಿರುವಂತೆ ಮಾಡಿದರು. ಹಾಗೆಯೇ ಬಿಜೆಪಿಯ ಹಿರಿಯ ನಾಯಕ ಅನಂತ್‍ಕುಮಾರ್ ಅವರು ತೀರಿಕೊಂಡ ಸಂದರ್ಭದಲ್ಲಿ ಅವರ ಪತ್ನಿ ತೇಜಸ್ವಿನಿಗೆ ಆಶ್ವಾಸನೆ ನೀಡಿ, ಕೊನೆಗೆ ಚುನಾವಣೆ ವೇಳೆ ಕೈಬಿಟ್ಟರು. ಈಗ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಯಾವುದೋ ಒಂದು ಹುಡುಗನನ್ನು ತಂದು ನಿಲ್ಲಿಸಿದ್ದಾರೆ. ಆ ಹುಡುಗನಿಗೆ ಇನ್ನೂ ಕೂದಲೇ ಆರಿಲ್ಲ. ಭಾಷಣ ಮಾಡ್ತಾನೆ ಅಂತ ಕರೆದುಕೊಂಡು ಬಂದಿದ್ದಾರೆ. ಅದು ಅವರ ಪಕ್ಷದ ವಿಚಾರ ಬಿಡಿ ಎಂದು ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಟಿಕೆಟ್ ನೀರುವುದಕ್ಕೆ ಪ್ರತಿಕ್ರಿಯಿಸಿದರು. ಬಳಿಕ ಇದನ್ನೆಲ್ಲ ಗಮನವಿಟ್ಟುಕೊಂಡು ವೀರಶೈವ ಸಮಾಜದವರು ಎಚ್ಚರಿಕೆಯಿಂದ ಮತ ಹಾಕಬೇಕು ಎಂದು ಹರಿಹಾಯ್ದರು.

  • ಚುನಾವಣೆಗೆ ನಿಲ್ಲದಂತೆ ಸೂಚನೆ ಬಂದಿದೆ – ಮುರಳಿ ಮನೋಹರ್ ಜೋಶಿ ಪತ್ರ

    ಚುನಾವಣೆಗೆ ನಿಲ್ಲದಂತೆ ಸೂಚನೆ ಬಂದಿದೆ – ಮುರಳಿ ಮನೋಹರ್ ಜೋಶಿ ಪತ್ರ

    ನವದೆಹಲಿ: ಉತ್ತರ ಪ್ರದೇಶದ ಕಾನ್ಪುರ ಕ್ಷೇತ್ರದಿಂದ ಈ ಬಾರಿ ನಾನು ಲೋಕಸಭೆ ಚುನಾವಣೆಗೆ ನಿಲ್ಲದಂತೆ ಬಿಜೆಪಿ ಸೂಚಿಸಿದೆ. ಆದರಿಂದ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ ಎಂದು ಬಿಜೆಪಿ ಹಿರಿಯ ನಾಯಕ 85 ವರ್ಷದ ಮುರಳಿ ಮನೋಹರ್ ಜೋಶಿ ಸ್ಪಷ್ಟಪಡಿಸಿದ್ದಾರೆ.

    ಬಿಜೆಪಿ ಹೈಕಮಾಂಡ್ 75 ವರ್ಷಕ್ಕಿಂತ ಹೆಚ್ಚು ವಯಸ್ಸಾದ ನಾಯಕರನ್ನು ರಾಷ್ಟ್ರೀಯ ಚುನಾವಣೆಗೆ ನಿಲ್ಲದಂತೆ ಸೂಚಿಸಿದೆ. ಈ ಮೂಲಕ ಬಿಜೆಪಿಯ ಪ್ರಭಾವಿ ಹಿರಿಯ ನಾಯಕರಲ್ಲಿ ಒಬ್ಬರಾದ ಎಂ.ಎಂ ಜೋಶಿ ಅವರ ಲೋಕಸಭೆಯ ರಾಜಕೀಯ ಪಯಣ ಮುಕ್ತಾಯವಾಗಿದೆ.

    ಈ ಬಗ್ಗೆ ಕಾನ್ಪುರ ಜನತೆಗೆ ಪತ್ರ ಬರೆದಿರುವ ಎಂ.ಎಂ ಜೋಶಿ ಅವರು, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಅವರು ನನ್ನನ್ನು ಭೇಟಿ ಮಾಡಿ, ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿರುವಂತೆ ಸೂಚಿಸಿದ್ದಾರೆ. ಕಾನ್ಪುರ ಮಾತ್ರವಲ್ಲ ಬೇರೆ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಬಾರದು ಎಂದು ಹೇಳಿದ್ದಾರೆ. ಆದರಿಂದ ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

    ಜೋಶಿ ಅವರು ಕೇಂದ್ರ ಸಚಿವರಾಗಿ ಹಾಗೂ ಬಿಜೆಪಿ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ 2014ರಲ್ಲಿ ವಾರಣಾಸಿ ಕ್ಷೇತ್ರವನ್ನು ಪ್ರಧಾನಿ ಮೋದಿ ಅವರಿಗೆ ಬಿಟ್ಟುಕೊಟ್ಟಿದ್ದರು. ಬಳಿಕ 2014ರಲ್ಲಿ ಕಾನ್ಪುರದಿಂದ ಸ್ಪರ್ಧಿಸಿ ಜಯಗಳಿಸಿದ್ದರು.

    ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ ಆಡ್ವಾಣಿ ಅವರ ಜೊತೆ ಸೇರಿ ಪಕ್ಷ ಕಟ್ಟುವಲ್ಲಿ ಜೋಶಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಡ್ವಾಣಿ ಸಹ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಅಡ್ವಾಣಿ ಕ್ಷೇತ್ರವಾದ ಗುಜರಾತಿನ ಗಾಂಧಿನಗರದಿಂದ ಅಮಿತ್ ಶಾ ಕಣಕ್ಕೆ ಇಳಿಯಲಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಮೇಲೆ 75 ವರ್ಷ ಮೇಲ್ಪಟ್ಟ ಬಿಜೆಪಿ ನಾಯಕರಿಗೆ ಮಾರ್ಗದರ್ಶಕ ಮಂಡಳಿಯಲ್ಲಿ ಸ್ಥಾನ ನೀಡಲಾಗಿತ್ತು. ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಮುರಳಿ ಮನೋಹರ್ ಜೋಷಿ ಈ ಮಾರ್ಗದರ್ಶನ ಮಂಡಳಿಯಲ್ಲಿ ಸ್ಥಾನ ಪಡೆದಿದ್ದರು.