Tag: actress Sruthi Hariharan

  • ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಹೇಗೆ ಸಾಧ್ಯ – ಇಂದಿನ ಕಲಾಪದಲ್ಲಿ ಬಿವಿ ಆಚಾರ್ಯ ವಾದ ಹೀಗಿತ್ತು

    ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಹೇಗೆ ಸಾಧ್ಯ – ಇಂದಿನ ಕಲಾಪದಲ್ಲಿ ಬಿವಿ ಆಚಾರ್ಯ ವಾದ ಹೀಗಿತ್ತು

    ಬೆಂಗಳೂರು: ನಟ ಅರ್ಜುನ್ ಸರ್ಜಾಗೆ ಹೈಕೋರ್ಟ್‍ನಿಂದ ಕೊಂಚ ರಿಲೀಫ್ ಸಿಕ್ಕಿದೆ. ಶೃತಿ ಹರಿಹರನ್ ದಾಖಲಿಸಿರುವ ಎಫ್‍ಐಆರ್ ರದ್ದು ಕೋರಿ ಅರ್ಜುನ್ ಸರ್ಜಾ ಹೈಕೋರ್ಟ್ ಗೆ ದಾಖಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು.

    ಅರ್ಜುನ್ ಸರ್ಜಾ ಪರ ಹಿರಿಯ ವಕೀಲ ಬಿವಿ ಆಚಾರ್ಯ ಸುದೀರ್ಘ ವಾದ ಮಂಡನೆ ಮಾಡಿದರು. ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಹೇಗೆ ಸಾಧ್ಯ? ಶೃತಿಹರಿಹರನ್ ಫೇಸ್‍ಬುಕ್ ಪೋಸ್ಟಿಗು ದೂರಿಗು ವ್ಯತ್ಯಾಸವಿದೆ. ಒಂದಕ್ಕೊಂದು ಸಂಬಂಧ ಇಲ್ಲದ ಆರೋಪವಿದೆ. ನಟನೆ ಮಾಡುವಾಗ ಕೈ ಕಾಲುಗಳು ಟಚ್ ಅಗುವುದು ಸಹಜ, ಒಬ್ಬೊಬ್ಬರು ಟಚ್ ಮಾಡದೇ ಚಿತ್ರದಲ್ಲಿ ನಟಿಸಲು ಸಾಧ್ಯವಿಲ್ಲ. ಸಹಜ ನಟನೆಗೆ ಅಲ್ಲಿ ಬೇಡಿಕೆ ಇರುತ್ತದೆ. ನಿರ್ದೆಶಕನ ಸೂಚನೆ ಮೇರೆಗೆ ನಟನೆ ಮಾಡಲಾಗಿದೆ. ಇದು ಮೂರು ವರ್ಷಗಳ ಹಿಂದೆ ನಡೆದ ಚಿತ್ರೀಕರಣ ಎಂದು ವಾದ ಮಂಡನೆ ಮಾಡಿದರು.

    ವಿಚಾರಣೆ ನಡೆಸಿದ ನ್ಯಾಯಾಲಯ ನವೆಂಬರ್ 14 ಕ್ಕೆ ಮುಂದೂಡಿ ಅಲ್ಲಿಯವರೆಗೆ ಅರ್ಜುನ್ ಸರ್ಜಾ ಅವರನ್ನ ಬಂಧಿಸದಂತೆ ಪೊಲೀಸರಿಗೆ ಸೂಚನೆ ನೀಡಿತು.

    ಬಿವಿ ಆಚಾರ್ಯ ವಾದ ಹೀಗಿತ್ತು:
    ಅಕ್ಟೋಬರ್ 20 ರಿಂದ ಎಲ್ಲಾ ವಿವಾದ ಆರಂಭವಾಗಿದ್ದು, ಫೇಸ್ಬುಕ್ ನಲ್ಲಿ ಸ್ಟೇಟಸ್ ಹಾಕಿ, ದೂರು ನೀಡಿ ಇಲ್ಲಿಯವರೆಗೆ ತಂದು ನಿಲ್ಲಿಸಿದ್ದಾರೆ. ಸರ್ಜಾ ಅವರಿಗೆ ಮದುವೆ ವಯಸ್ಸಿಗೆ ಬಂದಿರೋ ಹೆಣ್ಣು ಮಕ್ಕಳಿದ್ದಾರೆ. ಅವರಿಂದ ಇಂಹ ಕೃತ್ಯ ನಿರೀಕ್ಷೆ ಮಾಡಲು ಸಹ ಸಾಧ್ಯವಿಲ್ಲ. ಅರ್ಜುನ್ ಸರ್ಜಾ ಒಬ್ಬ ಖ್ಯಾತ ನಟ. ದಕ್ಷಿಣ ಭಾರತದ 5 ಭಾಷೆಗಳಲ್ಲಿ ನಟನೆ ಮಾಡಿ, ಹೆಸರು ಮಾಡಿದ್ದಾರೆ. ಇವರಿಗೆ ಚಿತ್ರರಂಗಲ್ಲಿಯೂ ಒಳ್ಳೆಯ ಹೆಸರಿದೆ. ಮೀಟೂ ಅಭಿಯಾನ ಖ್ಯಾತೆ ತೆಗೆಯುವ ಅಭಿಯಾನ ಆಗಿದೆ. ಇದರಿಂದಾಗಿ ಅರ್ಜುನ್ ಸರ್ಜಾಗೆ ಅವಮಾನ ಆಗಿದೆ.

    ಮೀಟೂ ಆರೋಪದಿಂದಾಗಿ ಅವರಿಗೆ ಮಾನಸಿಕ ಅವಮಾನ, ಕಿರುಕುಳ ಉಂಟಾಗಿದೆ. 37 ವರ್ಷ ಚಿತ್ರರಂಗದ ಬದುಕನ್ನು 29 ವರ್ಷದ ಶೃತಿ ಹರಿಹರನ್ ಹಾಳು ಮಾಡಿದ್ದಾರೆ. ನಾನು ಇಡೀ ಸಿನಿಮಾವನ್ನು ನೋಡಿದ್ದೇನೆ. ಸಿನಿಮಾದಲ್ಲಿ ಯಾವುದೇ ತಪ್ಪು ನಡೆದಿಲ್ಲ. ಸುಮ್ಮನೆ ಆರೋಪ ಮಾಡಿರುವುದು ತಪ್ಪು. ಇದೇ ಮೊದಲ ಬಾರಿಗೆ ಚಿತ್ರರಂಗದ ರಿಹರ್ಸಲ್ ನಲ್ಲಿ ನಡೆದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.

    ಶೃತಿ ಹರಿಹರನ್ ರವರು ಅರ್ಜುನ್ ಸರ್ಜಾ ಹಿಂದೆ ಟಚ್ ಮಾಡಿದ್ದಾರೆಂದು ಆರೋಪ ಮಾಡಿದ್ದಾರಲ್ಲ, ಟಚ್ ಮಾಡುವಾಗ ಅವರು ಏನು ಮಾಡುತ್ತಿದ್ದರು. ನಿರ್ದೇಶಕರು ಈ ದೃಶ್ಯಗಳ ಬಗ್ಗೆ ಮೊದಲೇ ಅವರಿಗೆ ಹೇಳಿರುತ್ತಾರೆ. ನಿರ್ದೇಶಕರಿಗೆ ದೃಶ್ಯ ಸರಿಯಾಗಿ ಬರುವವರೆಗೂ, ರಿಹರ್ಸಲ್ ಮಾಡಿಸುತ್ತಾರೆ. ಶೃತಿ ಸಿನಿಮಾದಲ್ಲಿ ಅರ್ಜುನ್ ಪತ್ನಿಯ ನಟನೆ ಮಾಡಿದ್ದಾರೆ. ನಿರ್ದೇಶಕರ ಸೂಚನೆಯಂತೆ ಅರ್ಜುನ್ ನಟಿಸಿದ್ದಾರೆ. ಶೃತಿ ಅವರು ಉದ್ದೇಶಪೂರ್ವಕವಾಗಿ ದೂರು ನೀಡಿದ್ದಾರೆ.

    ಅವರು ಹೇಳುವ ಘಟನೆ 50 ರಿಂದ 60 ಜನರ ಮುಂದೆ ನಡೆದಿದೆ. ಇದರ ಬಗ್ಗೆ ಅಂದೇ ಅವರು ಹೇಳಬಹುದಿತ್ತು. ಅಲ್ಲದೇ ಈ ಘಟನೆ ಬಗ್ಗೆ ಯಾರೂ ಸಹ ಅಂದು ಅರ್ಜುನ್ ಸರ್ಜಾ ಶೃತಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆಂದು ಒಪ್ಪಿಕೊಳ್ಳುವುದಿಲ್ಲ. ನಟನೆ ಮಾಡುವಾಗ ಕೈ, ಕಾಲುಗಳು ಟಚ್ ಆಗುವುದು ಸಹಜ. ಗಂಡ-ಹೆಂಡತಿಯ ಪಾತ್ರದಲ್ಲಿ ನಟಿಸಿದವರು, ಒಬ್ಬೊಬ್ಬರು ಟಚ್ ಮಾಡದೇ ಚಿತ್ರದಲ್ಲಿ ನಟಿಸಲು ಸಾಧ್ಯವಿಲ್ಲ. ತಬ್ಬಿಕೊಳ್ಳುವ, ಉರುಳಾಡುವ ದೃಶ್ಯಾವಳಿಯಲ್ಲಿ ಕೈಗಳು ದೇಹ ಟಚ್ ಆಗೋದು ಸಹಜ. ಅಲ್ಲದೇ ಸಿನಿಮಾದಲ್ಲಿ ಸಹಜ ನಟನೆಗೆ ಬೇಡಿಕೆ ಬಹಳ ಇರುತ್ತದೆ. ನಿರ್ದೇಶಕರ ಸೂಚನೆ ಮೇರೆಗೆ ನಟನೆ ಮಾಡಲಾಗಿದೆ.

    ಇದು ಮೂರು ವರ್ಷಗಳ ಹಿಂದೆ ನಡೆದ ಚಿತ್ರೀಕರಣ. ಈಗ ಇದರ ಬಗ್ಗೆ ಚರ್ಚಿಸಿ, ದೂರು ನೀಡಿದ್ದಾರೆ. ಹೆಣ್ಣಿನ ಮೇಲಿನ ದೌರ್ಜನ್ಯವನ್ನು ನಾನು ಸಹ ಖಂಡಿಸುತ್ತೇನೆ. ಆದರೆ ಕೆಲವರು ಕಾನೂನುಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ನಿಜವಾಗಿಯೂ ದೌರ್ಜನ್ಯಕ್ಕೆ ಒಳಗಾಗಿದ್ದರೆ, ಶಿಕ್ಷೆ ಆಗಲೇಬೇಕು. ಆದರೆ ಶೃತಿ ಹರಿಹರನ್ ಕೊಟ್ಟ ದೂರಿನಲ್ಲಿ ಉಲ್ಲೇಖಿಸಿರುವಂತೆ ಎಲ್ಲವೂ ಸಾರ್ವಜನಿಕ ಸ್ಥಳದಲ್ಲಿ ನಡೆದಿರುವಂತಹದ್ದು. ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಹೇಗೆ ಸಾಧ್ಯ? ಶೃತಿಯವರ ಫೇಸ್ಬುಕ್ ಪೋಸ್ಟ್ ಹಾಗೂ ದೂರಿಗೂ ವ್ಯತ್ಯಾಸವಿದೆ. ಒಂದಕ್ಕೊಂದು ಸಂಬಂಧವಿಲ್ಲದ ಆರೋಪ ಮಾಡಿದ್ದಾರೆ.

    ಚಿತ್ರದಲ್ಲಿ ಗಂಡ-ಹೆಂಡತಿ ಪಾತ್ರವಾಗಿರುವುದರಿಂದ ತಬ್ಬಿಕೊಳ್ಳುವುದು, ಮುದ್ದಾಡುವುದು ಸಾಮಾನ್ಯ. ಮೀಟೂ ಚಳುವಳಿಯಲ್ಲಿ ತಾನು ನಾಯಕಿಯಾಗಬೇಕು ಎನ್ನುವ ಉದ್ದೇಶದಿಂದ ಖ್ಯಾತ ನಟನ ಮೇಲೆ ಹೊರಿಸಿ, ಸಂತ್ರಸ್ತೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ದೂರಿನಲ್ಲಿ ಐಪಿಸಿ ಸೆಕ್ಷನ್ 354, 354ಎ ಹಾಗೂ 506 ಹಾಕಿದ್ದಾರೆ. ಬೇಕೆಂದೇ ಕಂಪ್ಲೇಂಟ್ ಕಾಪಿಯಲ್ಲಿ ಉಲ್ಲೇಖಸಿದ್ದಾರೆ. ಸೋಶಿಯಲ್ ಮೀಡಿಯಾ ಮತ್ತು ಮಾಧ್ಯಮಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ.

    2015 ರಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಶೃತಿ ದೂರಿನಲ್ಲಿ ಆರೋಪ ಮಾಡಿದ್ದಾರೆ. ಆದರೆ ಚಿತ್ರೀಕರಣ ಹೊರತು ಪಡಿಸಿ ದೂರುದಾರರು ಭೇಟಿ ಮಾಡಿಲ್ಲ. ಶೃತಿ ಅರ್ಜುನ್ ರ ಸಂಪರ್ಕವನ್ನು ಮಾಡಿಯೇ ಇಲ್ಲ. ಇಲ್ಲಿಯೇ ಅರ್ಥವಾಗುತ್ತೆ, ಇದೊಂದು ಸುಳ್ಳು ದೂರು ಎನ್ನುವುದು. ಈ ಚಿತ್ರದಲ್ಲಿ ಶೃತಿ ಹರಿಹರನ್ ನಾಯಕನಿಗೆ ಕಿಸ್ ಕೊಡುವ ಸಾಕಷ್ಟು ದೃಶ್ಯಗಳಿವೆ. ಅಷ್ಟೊಂದು ಮುಜುಗರ ಇರುವವರು, ಯಾಕೆ ಕಿಸ್ ಕೊಡುವ ಸೀನ್‍ಗಳಲ್ಲಿ ಅಭಿನಯಿಸಬೇಕಿತ್ತು? ಚಿತ್ರದಲ್ಲಿ ಎಲ್ಲಾ ದೃಶ್ಯಗಳು ನಟನೆಯ ಒಂದು ಭಾಗವಷ್ಟೇ. ಅದನ್ನು ಲೈಂಗಿಕ ಕಿರುಕುಳ ಎಂದು ಹೇಗೆ ಅರ್ಥೈಸುತ್ತೀರಿ?

    ಅರ್ಜುನ್ ಸರ್ಜಾ ಪ್ರತ್ಯೇಕವಾಗಿ ಎಂದೂ ಸಹ ಶೃತಿಯವರನ್ನು ಭೇಟಿ ಮಾಡಿಲ್ಲ. ಸಿನಿಮಾ ರಿಹರ್ಸಲ್ ವೇಳೆ ಹಿಂದೆಯಿಂದ ಬಂದು ಬೆನ್ನು ಸವರಿದ್ದಾರೆ ಎಂದು ಹೇಳುತ್ತಿದ್ದಾರೆ. ರಿಹರ್ಸಲ್ ಎಂದು ಅವರೇ ಹೇಳಿಕೊಂಡಿದ್ದಾರಲ್ಲ, ಅದು ದೌರ್ಜನ್ಯವೇ? ನಟನೆ ಅಂದ ಮೇಲೆ ಸ್ವಾಭಾವಿಕವಾಗಿ ಇರಬೇಕು. ಆದರೆ ಇದನ್ನೇ ದಾರಿ ತಪ್ಪಿಸೋ ದೃಷ್ಟಿಯಿಂದ ಪ್ರಕರಣವನ್ನಾಗಿ ದಾಖಲು ಮಾಡುತ್ತಾರೆ. ಸುಳ್ಳು ದೂರು ನೀಡಿರುವುದರಿಂದ ತನಿಖೆಗೆ ತಡೆ ನೀಡಬೇಕು. ದೂರು ನೀಡುವುದರ ಮೂಲಕ ಜನಪ್ರಿಯತೆ ಪಡೆಯಲು ನಟಿ ಶೃತಿ ಹರಿಹರನ್ ಮುಂದಾಗಿದ್ದಾರೆ. ಇದರಿಂದಾಗಿ ಅರ್ಜುನ್ ಸರ್ಜಾರವರಿಗೆ ತೊಂದರೆಯಾಗಿದೆ. ಸಂವಿಧಾನದ ಪರಿಚ್ಛೇದ 21ರ ಪ್ರಕಾರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ. ಹೀಗಾಗಿ ತನಿಖೆಗೆ ತಡೆ ನೀಡಬೇಕು.

    ಪ್ರಾಸಿಕ್ಯೂಷನ್ ಪರ ಎಎಜಿ ಪೊನ್ನಣ್ಣ ವಾದ ಮಂಡನೆ ಮಾಡಿ, ಯಾವುದೇ ತಪ್ಪು ಮಾಡಿಲ್ಲವೆಂದರೆ ಏಕೆ ಹೆದರಬೇಕು? ಆರೋಪಿ ತನಿಖೆಯನ್ನು ಎದುರಿಸಲಿ. ಪೊಲೀಸರು ಸಹ ಈಗಾಗಲೇ ಸಾಕ್ಷಿಗಳನ್ನು ಕಲೆಹಾಕುತ್ತಿದ್ದಾರೆ ಎಂದು ವಾದಿಸಿದರು.

    ಅರ್ಜುನ್ ಸರ್ಜಾ ಪರ ವಕೀಲ್ ಶ್ಯಾಂ ಸುಂದರ್ ಪ್ರತಿಕ್ರಿಯಿಸಿ, ಮಾನ್ಯ ಹೈಕೋರ್ಟ್ ಅರ್ಜುನ್‍ರವರನ್ನು ಬಂಧಿಸುವಂತಿಲ್ಲವೆಂದು ಸೂಚನೆ ನೀಡಿದ್ದು, ಪೊಲೀಸರಿಗೆ ತನಿಖೆ ಮುಂದುವರಿಸುವಂತೆ ಮಧ್ಯಂತರ ಆದೇಶ ನೀಡಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/tndTQg0hd0M

  • #MeToo ಬಗ್ಗೆ ನಟ ಕಿಶೋರ್ ಮನದ ಮಾತು

    #MeToo ಬಗ್ಗೆ ನಟ ಕಿಶೋರ್ ಮನದ ಮಾತು

    ಬೆಂಗಳೂರು: ನಟಿ ಶೃತಿ ಹರಿಹರನ್, ಅರ್ಜುನ್ ಸರ್ಜಾ ಮೀಟೂ ವಿಚಾರವಾಗಿ ಬಹುಭಾಷಾ ನಟ ಕಿಶೋರ್ ಫೇಸ್‍ಬುಕ್‍ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಜನರ ಪ್ರೀತಿ ಮತ್ತು ಗೌರವ ಸಂಪಾದಿಸಿರುವ ಅರ್ಜುನ್ ಸರ್ಜಾ ಜೊತೆ ಕೆಲಸ ಮಾಡಿ, ಊಟ ಹಂಚಿಕೊಂಡಿದ್ದೇನೆ. ಅವರು ನನ್ನ ಮನಸಿಗೆ ತುಂಬಾ ಹತ್ತಿರದವರು ಎಂದು ಭಾವಿಸಿದ್ದು, ಸರ್ಜಾ ಮೇಲೆ ಕೇಳಿ ಬರುತ್ತಿರುವ ಆರೋಪಗಳು ನಿಜ ಎಂದು ಬಯಸುವುದಿಲ್ಲ ಎಂದು ಹೇಳಿದ್ದಾರೆ.

    ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಶೃತಿ ತೇಜೋವಧೆ ಮಾಡಲಾಗುತ್ತಿದೆ ಎಂದು ದೂರಿರುವ ಕಿಶೋರ್, ಯುವಜನತೆಯ ಮಾತುಗಳು ಮನಸ್ಸಿಗೆ ಬೇಸರ ತಂದಿದೆ. ಹೆಣ್ಣಿನ ಚಾರಿತ್ರೆ ವಧೆ ಮಾಡೋದು ತಪ್ಪು. ಸಿನಿಮಾ ಹೊಲಸು ಎಂಬ ಮನೋಭಾವನೆಯನ್ನ ದೂರ ಮಾಡುವಂತಾಗಬೇಕು. ರಾಜಣ್ಣನಂತ ತಂದೆ ಪಾರ್ವತಮ್ಮನಂತ ತಾಯಿ ವಿಷ್ಣುವರ್ಧನ್ ಅಂತಹ ಅಣ್ಣನಿದ್ದಾಗ ಇಂತಾ ಅದೇಷ್ಟೋ ಸಮಸ್ಯೆಗಳು ಸಮಸ್ಯೆ ಆಗುವ ಮುನ್ನವೇ ತೊಳೆದು ಹಾಕಿರುವ ಉದಾಹರಣೆಯನ್ನ ಕೇಳಿದ್ದೆ ಎಂದು ಮೀಟೂ ಆರೋಪದ ಬಗ್ಗೆ ವಿಸ್ತಾರವಾಗಿ ಮನದಾಳದ ಮಾತುಗಳನ್ನ ಹೇಳಿದ್ದಾರೆ.

    ಕಿಶೋರ್ ಫೇಸ್‍ಬುಕ್ ಪೋಸ್ಟ್ ಇಂತಿದೆ:
    ನನ್ನ ಮತ್ತು ಮೀಟೂವಿನ ನಡುವೆ ಹರಿದು ಹಂಚಿಹೋದ ಹೃದಯ. ಒಂದೆರಡು ದಿನಗಳ ಹಿಂದೆ ಪ್ರಸ್ತುತ ವಿದ್ಯಮಾನಗಳಿಗೆ ನಾನು ತಟಸ್ಥ ವೀಕ್ಷಕನಾಗಿದ್ದೆ. ಶೋಷಣೆಯ ಸಮಸ್ಯೆ ಯಾವುದೋ ಒಂದು ಉದ್ಯಮ ಅಥವಾ ಕೆಲಸದ ಸ್ಥಳದಲ್ಲಿ ಮಾತ್ರವಲ್ಲ ಬೇರೆ ಬೇರೆ ಹಂತಗಳಲ್ಲಿ ಮತ್ತು ಬೇರೆ ಬೇರೆ ರೂಪಗಳಲ್ಲಿ ಎಲ್ಲೆಡೆಯಲ್ಲೂ ಇದ್ದೇ ಇದೆ. ಸಿನಿಮಾ ಜನಪ್ರಿಯ ಸಾರ್ವಜನಿಕ ಮಾಧ್ಯಮವಾಗಿದ್ದರಿಂದ ಇಲ್ಲಿ ದನಿ ದೊಡ್ಡದಾಗಿ ಕೇಳುತ್ತಿದೆ. ಈ ಅಭಿಯಾನ ನನ್ನ ವೃತ್ತಿಯ ಹಲವು ಮಹಿಳೆಯರ ಭಾವನೆಗಳ ಅಭಿವ್ಯಕ್ತಿಗೆ, ಒಲ್ಲೆನೆನ್ನುವ ಹಕ್ಕಿನ ಚಲಾವಣೆಗೆ ದಾರಿಯಾದದ್ದು ಸಂತೋಷವೇ.

    ಈ ಮೀಟೂ ಅಭಿಯಾನ ತನ್ನ ಧ್ಯೇಯವನ್ನು ಉಳಿಸಿಕೊಂಡರೆ ನಮ್ಮ ಕೆಲಸದ ಸ್ಥಳವನ್ನು ಆರೋಗ್ಯಕರ ಮತ್ತು ವೃತ್ತಿಪರವಾಗಿ ಮಾಡುವಲ್ಲಿ ಸಫಲವಾಗಲು ತಕ್ಕಮಟ್ಟಿಗೆ ಸಾಧ್ಯ ಎಂದೆಲ್ಲಾ ಯೋಚಿಸಿದ್ದೆ. ಆದರೆ ಅದು ಈ ಬಾರಿ ನನ್ನನ್ನು ಬೆಚ್ಚಿಬೀಳಿಸಿ ನನ್ನ ಕೊರಳ ಪಟ್ಟಿ ಹಿಡಿದು ಒಳಕ್ಕೆಳೆದೊಯ್ದಿತ್ತು. ರಾಜ್ಯಗಳಾದ್ಯಂತ ಜನರ ಪ್ರೀತಿಗೆ ಮಾತ್ರವಲ್ಲ ವೈಯುಕ್ತಿಕವಾಗಿ ನಾನೂ ತುಂಬ ಪ್ರೀತಿ ಗೌರವದಿದ ನೋಡುವ ಒಬ್ಬರ ಕಡೆಗೆ. ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ, ಅಭಿನಯವನ್ನು ಇಷ್ಟಪಟ್ಟಿದ್ದೇನೆ, ಅವರ ಬಾಲ್ಯದ ದಿನಗಳಿಂದ ಅವರ ಕೆಲಸ ನನಗೆ ಅಚ್ಚುಮೆಚ್ಚು. ಅವರು ನನ್ನನ್ನು ನಡೆಸಿಕೊಂಡ ರೀತಿ ತನ್ನ ಜ್ಞಾನವನ್ನು ತಾನು ಪ್ರಪಂಚದಾದ್ಯಂತ ಸಂಗ್ರಹಿಸಿದ ಸಲಕರಣೆಗಳನ್ನು, ತನ್ನ ಊಟವನ್ನು ಸಹ ಹಂಚಿಕೊಂಡ ರೀತಿಯಲ್ಲಿ ಹೃದಯಕ್ಕೆ ತೀರ ಹತ್ತಿರವಾದವರು. ಮಾತ್ರವಲ್ಲ, ಅವರ ಸಹೋದರ ಮತ್ತು ನಾನು ಒಂದೇ ಹೆಸರಷ್ಟೇ ಅಲ್ಲ, ಜನ್ಮ ದಿನಾಂಕ ಕೂಡ. ಹಂಚಿಕೊಂಡಿದ್ದೇವೆ ಎಂಬ ಸಂಗತಿಯಿಂದ ಅವರಿಗೆ ಹತ್ತಿರವೆಂದು ಭ್ರಮಿಸಿದವನು ನಾನು. ಒಟ್ಟಾರೆಯಾಗಿ ಹೇಳಬೇಕೆಂದರೆ ನಾನು ತುಂಬಾ ಇಷ್ಟಪಡುವ ವ್ಯಕ್ತಿ ವ್ಯಕ್ತಿತ್ವ. ಈ ಎಲ್ಲಾ ಆರೋಪಗಳು ನಿಜವೆಂದು ಎಂದಿಗೂ ನಂಬಲು ಬಯಸುವುದಿಲ್ಲ. ಆದರೂ ನಡೆದದ್ದೇನೆಂದು ತಿಳಿಯಲು ಫೇಸ್ ಬುಕ್ ಹೇಳಿಕೆ ಓದಿದೆ. 15 ವರ್ಷಗಳ ಕಾಲ ಅದೇ ಕೆಲಸದಲ್ಲಿದ್ದ, ನನ್ನ ಸ್ವೀಕೃತಿ ಮತ್ತು ತಿಳುವಳಿಕೆಯ ಪ್ರಕಾರ ನನಗನಿಸಿದ್ದು ಇದು ಕೇವಲ ತಪ್ಪು ಗ್ರಹಿಕೆಯೆಂದು.

    ಆದರೆ ನನಗೆ ಹೆಚ್ಚು ಆಘಾತ ತಂದಿದ್ದು ನಮ್ಮ ಜನರ ಪ್ರತಿಕ್ರಿಯೆ. ಅಷ್ಟೊಂದು ಆಕ್ರಮಣಶೀಲತೆ ಮತ್ತು ದ್ವೇಷ. ಸಾಮಾಜಿಕ ಜಾಲವೆಂಬ ಎರಡಲಗಿನ ಕತ್ತಿಯನ್ನು ಬಳಸಿ ದಾರುಣವಾಗಿ ಆ ಹುಡುಗಿಯ ತೇಜೋವಧೆ ಮಾಡಲಾಗಿತ್ತು. ಇದೇ ನಮ್ಮ ನವಸಮಾಜದ ನಿಜವಾದ ಮುಖವೆಂದು ನೆನೆದರೆ ಗಾಬರಿಯಾಗುತ್ತದೆ. ಇಷ್ಟು ಅಸ್ವಸ್ಥರಾದೆವೇ ನಾವು? ಈ ಅವಾಸ್ತವಿಕ ಅಂತರ್ಜಾಲ ಸಮಾಜ ಇಂದಿನ ನಮ್ಮ ಬಹುತೇಕ ಆಲೋಚನೆಗಳು ಮತ್ತು ಕ್ರಿಯೆಗಳನ್ನು ನಿಯಂತ್ರಿಸುತ್ತಿದೆ ಅದರ ಕಡಿವಾಣ ಯಾರಕೈಲಿದೆಯೋ ಅವರು ನಿರ್ಮಿಸಿದ ಸಿದ್ಧಮಾದರಿಯ ವಿರುದ್ಧದ ಯಾವುದೇ ಅಭಿಪ್ರಾಯವು ಅಪರಾಧ ಮತ್ತು ಅದನ್ನು ನಿಗ್ರಹಿಸಬೇಕು ಎಂದು ತೀರ್ಮಾನಿಸಿದೆ.

    ನನ್ನ ಮಟ್ಟಿಗೆ ಅದು ಒಪ್ಪಿತವಲ್ಲ. ಹೌದು ಸಂಘರ್ಷವಿದ್ದೆಡೆ ಅಸಮ್ಮತಿಯ ಧ್ವನಿ ಏಳುತ್ತದೆ. ಆ ದನಿಯೆತ್ತುವ ಅವಕಾಶ ಎಲ್ಲರಿಗೂ ಇರಬೇಕು, ಅದಕ್ಕೆ ಕಿವಿಗೊಡಬೇಕು, ಸರ್ವಸಮ್ಮತ ಪರಿಹಾರ ಹುಡುಕಬೇಕು ಹತ್ತಿಕ್ಕಬಾರದು ಇದು ನನ್ನ ಮಟ್ಟಿಗೆ ಸ್ವಸ್ಥ ಸಮಾಜದ ಲಕ್ಷಣ. ಕನಿಷ್ಟ ಸರಿ ತಪ್ಪುಗಳ ನಿರ್ಣಯವಾಗುವವರೆಗೆ. ಗಂಡುಕುಲದ ಪರವಾಗಿ ಕ್ಷಮೆ ಯಾಚಿಸಿ ಉಲ್ಬಣಗೊಂಡ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸುವ ಹೃದಯ ವೈಶಾಲ್ಯ ತೋರಿದ ಗೆಳೆಯ ಗಿರಿರಾಜರು “ಕುಟುಂಬದಲ್ಲಿ ಒಪ್ಪಿತವಾದ್ದೆಲ್ಲ ಉದ್ಯಮದಲ್ಲಿ ಒಪ್ಪಿತವಲ್ಲ” ಎಂದ ಮಾತುಗಳಲ್ಲಿನ ಪ್ರಸ್ತುತ ಸತ್ಯ ನನ್ನನ್ನು ಆಲೋಚಿಸುವಂತೆ ಮಾಡಿದೆ. ಆಧುನೀಕರಣದ ನಾಗಾಲೋಟದಲ್ಲಿ ಕುಟುಂಬವಾಗಿದ್ದ ಸಿನಿಮಾ ಉದ್ಯಮವಾಗಿ ಹೋದದ್ದು ನನಗೆ ಗೊತ್ತಾಗಲೇ ಇಲ್ಲ. ವಸುದೈವಕುಟುಂಬಕಂನಲ್ಲಿ ಜಗತ್ತೇ ಒಂದು ಕುಟುಂಬವಾಗಿರುವಾಗ ಸಿನಿಮಾಗೆ ಅದು ಸಾಧ್ಯವಿಲ್ಲವೇ?

    ಕೃಷಿಯಲ್ಲೂ ಹಳೆಯ ಪದ್ಧತಿಗಳಲ್ಲೇ ಪರ್ಯಾಯ, ಉತ್ತರ ಕಂಡ ಓಬೀರಾಯನ ಕಾಲದ ಗುಗ್ಗು ನಾನು, ಕಾಲದ ಮೂಸೆಯಲ್ಲಿ ಪಕ್ವಗೊಂಡ ಪರಿಹಾರಗಳೆಂದು ಅವುಗಳಲ್ಲೇ ನನ್ನ ನಂಬಿಕೆ. ನಿಜ ಅವೂ ದಾರಿ ತಪ್ಪಿ ಶೋಷಣೆಯ ಸಾಧನಗಳಾಗಿದ್ದಿದೆ. ಆದರೂ ಇದು ಕುಟುಂಬವಾಗಿದ್ದಾಗ, ರಾಜಣ್ಣನಂಥ ತಂದೆ ವಿಷ್ಣುವಿನಂಥ ಅಣ್ಣ, ಪಾರ್ವತಮ್ಮನವರಂಥ ತಾಯಿಯಿದ್ದಾಗ ಇಂಥವೆಷ್ಟೊ ಸಮಸ್ಯೆಗಳು ಸಮಸ್ಯೆಗಳಾಗುವ ಮುನ್ನವೇ ಬಗೆಹರಿದದ್ದನ್ನ ಕಂಡಿದ್ದೇವೆ ಕೇಳಿದ್ದೇವೆ. ಇದು ಉದ್ಯಮವಾದರೂ ಸಮಸ್ಯೆಗಳು ನಿರ್ಮೂಲವಾಗುವ ಭರವಸೆಯೆಲ್ಲಿದೆ? ಕಾನೂನಿನ ಚೌಕಟ್ಟು ಹಾಕಿ ನಿಯಮದ ಗೆರೆ ಹಿಡಿದು ಕಟಕಟೆಗಳಲ್ಲಿ ನಿಂತು ಹೊಡೆದಾಡಿ ಬದುಕಬಹುದು. ಆದರೆ ಕುಟುಂಬದೊಳಗೇ ಉತ್ತರ ಕಾಣುವ ಬಯಕೆ ನನ್ನದು.

    ಕಾನೂನಿನ ಕಠೋರತೆಗಿಂತ ಪ್ರೀತಿಯ ಸಲಹೆ ಬದಲಾವಣೆಗೆ ಆಪ್ತವಲ್ಲವೇ. ನಿಜ, ಕುಟುಂಬದೊಳಗೇ ಶೋಷಣೆಯ ಸಾಧ್ಯತೆಗಳು ಕಮ್ಮಿಯೇನಿಲ್ಲ. ಆದರೂ ನಮ್ಮ ಹಳೆಯ ತಪ್ಪುಗಳಿಂದ ಕಲಿಯಬಹುದಲ್ಲವೇ. ಇಂದು ಹೆಣ್ಣಿಗೆ ಕುಟುಂಬದೊಳಗೇ ದನಿಯಿದೆ. ಅದನ್ನು ಸಾರಿ ಹೇಳಬೇಕಿದೆ. ಸಿನಿಮಾ ಕುಟುಂಬ ಹೊಲಸೆಂಬ ಕಲ್ಪನೆಯ ತೊಳೆಯಬೇಕಿದೆ. ಆ ಹೆಣ್ಣು ನನ್ನ ಕುಟುಂಬದ ಹೆಣ್ಣು ಅವಳ ನಿಂದನೆ ಸಲ್ಲ. ಅವಳ ಆರೋಪ ನನ್ನ ವಿರುದ್ಧವೇ ಆದರೂ ಸರಿ ಅದನ್ನು ಭರಿಸುವ ಶಕ್ತಿ ನನಗಿದೆ, ಗಂಡಿನ ಅಹಮ್ಮೆಂದರೂ ಸರಿಯೇ. ಆದರೆ ಯಾವ ಕಾರಣಕ್ಕೂ ನನ್ನ ಕುಟುಂಬದ ಹೆಣ್ಣಿನ ತೇಜೋವಧೆಯಾಗುವುದು ನನಗೆ ಒಪ್ಪಿತವಲ್ಲ. ಪ್ರೇಕ್ಷಕನೇನು ಹೊರಗಿನವನಲ್ಲ. ಅವನೂ ಅಣ್ಣ ಅಕ್ಕನೆಂದು ಇದೇ ಕುಟುಂಬವ ಸುತ್ತಿ ಸುತ್ತಿ ಬಂದ ಸದಸ್ಯನೇ. ಅವನೇ ತನ್ನ ಕುಟುಂಬದ ಹೆಣ್ಣಿನ ಚಾರಿತ್ರ್ಯವಧೆ ಮಾಡುವುದು ತಪ್ಪಲ್ಲವೇ. ಇಂದು ಅವನ ತೀವ್ರ ಪ್ರತಿಕ್ರಿಯೆಯೂ ನನ್ಣಣ್ಣನೂ ಅವನಣ್ಣನೆಂಬ ಭಾವುಕ ಸಂಬಂಧದಿಂದಲೇ ಅಲ್ಲವೇ. ನಿಮಗೆ ಬೇಸರವಾಗಿದ್ದರೂ ಸರಿ ಅದೇ ಕುಟುಂಬದ ಈ ಹೆಣ್ಣು ನಿಮ್ಮ ಅಕ್ಕನೋ ತಂಗಿಯೋ ಎನ್ನುವುದ ಮರೆತಿರೇಕೆ? ಅವಳ ದನಿಯ ಹತ್ತಿಕ್ಕಬೇಡಿ.

    ನಿಜ, ಹಲವು ಸಂದರ್ಭಗಳಲ್ಲಿ ಸರಿ ತಪ್ಪುಗಳು ಮಸುಕಾಗಿ ನೋವನುಭವಿಸಬೇಕಾಗಬಹುದು. ಆದರೆ ತಪ್ಪಾದರೂ ಸರಿ ಇಂದು ಈ ದನಿಯನ್ನು ಹತ್ತಿಕ್ಕಿದರೆ ಬರುವ ನಾಳೆಗಳಲ್ಲಿ ದನಿಯೆತ್ತಲೇಬೇಕಾದ ಸಂದರ್ಭದಲ್ಲೂ ಭಯದಿಂದ ನಮ್ಮ ಅಕ್ಕ ತಂಗಿ ಗೆಳತಿಯರ ಸದ್ದಡಗಿ ಸಾಯಬಹುದು. ನಮ್ಮ ಕುಟುಂಬದ ಮಾನ ರಕ್ಷಣೆ ನಮ್ಮ ಕರ್ತವ್ಯ ಸರಿತಪ್ಪು ಹಿರಿಯರು ತಿಳಿದವರು ನಿರ್ಧರಿಸಲಿ. ಭಾವುಕ ಮೂರ್ಖನಂತೆ, ಶಿಲಾಯುಗದವನಂತೆ ಕಂಡರೂ ದ್ರೋಹಿಯಂತೆ ಕಂಡರೂ ಅಣ್ಣನ ಮನಸ್ಸಿಗೆ ನೋವಾಗುವ ಅರಿವಿದ್ದರೂ ಸರಿತಪ್ಪುಗಳ ಲೆಕ್ಕಿಸದೇ ಎಷ್ಟೋ ಹೆಣ್ಣುಮಕ್ಕಳ ನಿಂದಿಸಿದವರ ಛೇಡಿಸಿದವರ ಮೂಳೆ ಮುರಿದು ಅವರ ಪರ ನಿಂತ ನನ್ನಣ್ಣ ನನ್ನನ್ನು ಅರ್ಥ ಮಾಡಿಕೊಳ್ಳದೇ ಹೋಗಲಾರನೆಂಬ ನಂಬಿಕೆಯೊಂದಿಗೆ, ಯಾರ ಪರ ವಿರೋಧವಾಗಿಯೂ ಅಲ್ಲ ನಮ್ಮ ಕುಟುಂಬದ ಹೆಣ್ಣಿನ ಜತೆ ನಿಂತಿದ್ದೇನೆ. ಪ್ರೇಕ್ಷಕ ಸಹೋದರರಲ್ಲಿ ಕೈಮುಗಿದು ಬೇಡುತ್ತಾ -ಇದು ನಿಮ್ಮ ಕುಟುಂಬದ ಹೆಣ್ಣು ನಿಂದಿಸದರಿ.

    ಅಂತಿಮವಾಗಿ ಬರೆದಿದ್ದನ್ನು ಮುಗಿಸಲು ಮತ್ತೆ ಓದುತ್ತಾ ಬಂದೆ ಖಿನ್ನತೆಯ ಮಡುವಿನಲ್ಲಿ ಸರಿ ಮತ್ತು ತಪ್ಪುಗಳು ಮರೆಯಾಗಿ ಹೋದವು. ಈ ಘಟನೆಯ ಭಾಗವಾದ ನನ್ನವರು ಮತ್ತು ಅವರ ಕುಟುಂಬಗಳ ಪರಿಸ್ಥಿತಿಯನ್ನು ನೆನೆದು ಮನಸ್ಸು ಭಾರವಾಯಿತು. ನನ್ನ ಗಂಡುಕುಲ, ಹೆಣ್ಣುಕುಲ, ನನ್ನ ಜಾತಿ, ನನ್ನ ಭಾಷೆ, ನನ್ನ ರಾಷ್ಟ್ರೀಯತೆ, ನನ್ನ ಮತ್ತು ನನ್ನೆಲ್ಲದರ ಪರವಾಗಿ ಕೂಗಿ ಕ್ಷಮೆ ಕೇಳಲೇ? ನನ್ನಲ್ಲಿರುವ ಛಿದ್ರಗೊಂಡ ನಾನು ಕೇಳುವ ಆ ಕ್ಷಮೆಗೆ ತಿಳಿದೋ ತಿಳಿಯದೆಯೋ ನಾನು ಒಡೆದ ಲೆಕ್ಕವಿಲ್ಲದಷ್ಟು ಮನಗಳು ಮನೆಗಳು ಸಂಬಂಧಗಳನ್ನು ಸರಿಪಡಿಸಲು ಶಕ್ತಿಯಿದೆಯೇ ಮತ್ತೆ ಅವುಗಳನ್ನು ಮೊದಲಿನ ಹಾಗೇ ಒಡೆದ ಬಿರುಕುಗಳು ಕಾಣದಂತೆ ಮಾಡಲು ಸಾಧ್ಯವೇ? ಏಕೋ ಮೀಟೂ ನ `ನಾನು’ ವಿಗೆ ಉತ್ತರವಾಗಿ ಗೆಳೆಯ ಗಿರಿರಾಜರ `ಜಟ್ಟ’ ಸಿನಿಮಾ ಮತ್ತದರ `ಪ್ರೀತಿಯೊಂದೆ ಪ್ರಾರ್ಥನೆಯು’ ಹಾಡು ಜ್ಞಾಪಕ ಬರುತ್ತಿದೆ. ನನ್ನ ಮತ್ತು ಮೀಟೂವಿನ ನಡುವೆ ಹರಿದು ಇಬ್ಭಾಗವಾಗಿಹೋದ ಹೃದಯದ ಕೂಗು ಹೇಳುತ್ತಲೇ ಇದೆ, ಇದೆಲ್ಲ ಕೇವಲ ತಪ್ಪುತಿಳುವಳಿಕೆಯೆಂದು.

  • ಚೇತನ್ ವಿರುದ್ಧ ಐಶ್ವರ್ಯ ಸರ್ಜಾ ಮೀಟೂ ಬಾಂಬ್ – ಆಡಿಯೋ ಕೇಳಿ

    ಚೇತನ್ ವಿರುದ್ಧ ಐಶ್ವರ್ಯ ಸರ್ಜಾ ಮೀಟೂ ಬಾಂಬ್ – ಆಡಿಯೋ ಕೇಳಿ

    ಬೆಂಗಳೂರು: ನಟ ಚೇತನ್ ಅವರಿಗೆ ಲೈಂಗಿಕ ಕಿರುಕುಳ ಎಂದರೆ ಏನು ಗೊತ್ತಾ? ಊಟಕ್ಕೆ ಕರೆದದ್ದು ಲೈಂಗಿಕ ಕಿರುಕುಳ ಎಂದಾದರೆ ನಟ ಚೇತನ್ ನನ್ನನ್ನೂ ಕೂಡ ಊಟಕ್ಕೆ ಕರೆದಿದ್ದಾರೆ ಎಂದು ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಸರ್ಜಾ ಗಂಭೀರ ಆರೋಪ ಮಾಡಿದ್ದಾರೆ.

    ಶೃತಿ ಅವರ ದೂರಿನ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಐಶ್ವರ್ಯ ಅವರು, ಮೀಟೂ ಆರೋಪಕ್ಕೂ ಒಂದು ತಿಂಗಳ ಮುಂಚೆ ಆಷ್ಟೇ ನಟಿ ಶೃತಿ ನಮ್ಮ ತಂದೆ ಅವರನ್ನು ಟ್ವಿಟ್ಟರ್ ನಲ್ಲಿ ಅನ್‍ಫಾಲೋ ಮಾಡಿದ್ದರೆ. ಸಿನಿಮಾ ವೇಳೆ ಲೈಂಗಿಕ ಕಿರುಕುಳ ನೀಡಿದ್ದರೆ ಇಷ್ಟು ದಿನ ಆಕೆ ಅವರು ಸುಮ್ಮನಿದ್ದರು ಎಂದು ಉತ್ತರಿಸಬೇಕಿದೆ ಪ್ರಶ್ನೆ ಮಾಡಿದರು. ಇದೇ ವೇಳೆ ನಟ ಚೇತನ್ ವಿರುದ್ಧವೂ ಆರೋಪ ಮಾಡಿದ ಅವರು ನಟ ಚೇತನ್ ಅವರಿಗೆ ಲೈಂಗಿಕ ಕಿರುಕುಳ ಎಂದರೇ ಏನು ಎಂದು ಗೊತ್ತಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಶೃತಿ ಹರಿಹರನ್ ಮದ್ವೆ ರಹಸ್ಯ ಬಯಲು – ದೂರಿನಲ್ಲಿ ಮದುವೆ ಬಗ್ಗೆ ಉಲ್ಲೇಖ ಮಾಡಿದ ರಾಟೆ ಹುಡುಗಿ

    ಒಂದೊಮ್ಮೆ ಸಹ ನಟಿಯನ್ನು ಊಟಕ್ಕೆ ಕರೆಯುವುದು ಲೈಂಗಿಕ ಕಿರುಕುಳ ಎಂದಾದರೆ ನಟ ಚೇತನ್ ಕೂಡ ನನ್ನನ್ನು ಊಟಕ್ಕೆ ಕರೆದಿದ್ದಾರೆ. ಅಲ್ಲದೇ ಪ್ರೇಮ ಬರಹ ಸಿನಿಮಾ ವೇಳೆ ನಟ ಚೇತನ್ ರೊಂದಿಗೆ ಫೋಟೋ ಶೂಟ್, ವರ್ಕ್ ಶಾಪ್ ಮಾಡಲಾಗಿತ್ತು. ಈ ವೇಳೆ ಚೇತನ್ ನನ್ನ ಬೆನ್ನು ಮುಟ್ಟಿದ್ದರು, ಅಲ್ಲದೇ ಊಟಕ್ಕೂ ಕರೆದಿದ್ದರು. ಇದನ್ನು ಲೈಂಗಿಕ ಶೋಷಣೆ ಎಂದು ಕರೆಯಬಹುದುಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಅವರ ಪ್ರಕಾರ ಇದು ಲೈಂಗಿಕ ಶೋಷಣೆ ಆದ್ರೆ ಇದು ಕೂಡ ಕಿರುಕುಳ ಅಗುತ್ತದೆ ಅಲ್ಲವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಟಿ ಶೃತಿಗೆ ಅರ್ಜುನ್ ಮಗಳು ಐಶ್ವರ್ಯಾ ಸರ್ಜಾ ಸವಾಲ್!

    ನಟಿ ಶೃತಿ ಹರಿಹರನ್ ಅವರು ಈ ಹಿಂದೆ ತನ್ನ ಮೇಲೆ ಕಾಸ್ಟಿಂಗ್ ಕೌಚ್ ನಡೆದಿತ್ತು ಎಂದು ಹೇಳಿದ್ದರು. ಆದರೆ ಅಂದು ಯಾವುದೇ ನಟರ ಹೆಸರು ಬಹಿರಂಗ ಪಡಿಸಿರಲಿಲ್ಲ. ಈಗ ನಮ್ಮ ತಂದೆಯ ಹೆಸರನ್ನು ಬಳಕೆ ಮಾಡಿಕೊಳ್ಳಲು ಇಂತಹ ಆರೋಪ ಮಾಡಿದ್ದಾರೆ ಎಂದು ಐಶ್ವರ್ಯ ಸರ್ಜಾ ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=p-XbtCRr48o