Tag: achievers

  • 64 ಗಣ್ಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    64 ಗಣ್ಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    – ಪಬ್ಲಿಕ್ ಟಿವಿ ಪಬ್ಲಿಕ್ ಹೀರೋಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
    – ಪಬ್ಲಿಕ್ ಹೀರೋ ಶಿವಾಜಿ ಕಾಲಿಗೆ ನಮಸ್ಕರಿಸಿದ ತೇಜಸ್ವಿ ಸೂರ್ಯ

    ಬೆಂಗಳೂರು: ಪಬ್ಲಿಕ್ ಟಿವಿ ಪಬ್ಲಿಕ್ ಹೀರೋಗಳಾದ ಶಿವಾಜಿ ಛತ್ರಪ್ಪ ಕಾಗಣಿಕರ್ ಹಾಗೂ ಸಾಲುಮರದ ವೀರಾಚಾರ್ಯ ಅವರಿಗೆ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

    ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 64 ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪೈಕಿ ಪಬ್ಲಿಕ್ ಹೀರೋ ಶಿವಾಜಿ ಛತ್ರಪ್ಪ ಕಾಗಣಿಕರ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕದ ಅಣ್ಣಾ ಹಜಾರೆ ಪ್ರಶಸ್ತಿ ನೀಡಿ ಗೌರವಿಸಿದರು. ಇವರ ಸಮಾಜ ಸೇವೆ ಕುರಿತು ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ಸಂಸದ ತೇಜಸ್ವಿ ಸೂರ್ಯ ಅವರು ಶಿವಾಜಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. 

     

    ಈ ವೇಳೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ನಾಡಗೀತೆಯ ಉಲ್ಲೇಖವೇ ರಾಜ್ಯೋತ್ಸವ ದಿನಾಚರಣೆಯ ಮುನ್ನುಡಿ. ತ್ಯಾಗ ಬಲಿದಾನದ ಪ್ರತಿಫಲವನ್ನು ನಾವು ಇಂದು ಅನುಭವಿಸುತ್ತಿದ್ದೇವೆ. ನಾಡಾಗಲಿ, ಬೀಡಾಗಲಿ ಕಟ್ಟುವುದು ತುಂಬಾ ಕಷ್ಟ. ಆದರೆ ಕೆಡುವುದು ತುಂಬಾ ಸುಲಭ. ಕಟ್ಟಿದವರು ಯಾವತ್ತು ಕೆಡುವಲು ಯತ್ನಿಸುವುದಿಲ್ಲ. ನಾಡು ನುಡಿಯ ಕುರಿತಾಗಿ ಸಾಧನೆ ಮಾಡಿದ ಎಲ್ಲರ ಬಗ್ಗೆ ನನಗೂ ನಮ್ಮ ಸರ್ಕಾರಕ್ಕೂ ಗೌರವವಿದೆ ಎಂದು ತಿಳಿಸಿದರು.

    ಭಾಷೆ ಮತ್ತು ಸಂಸ್ಕೃತಿ ಎರಡು ಒಂದೇ. ಯಾರು ತಮ್ಮ ಮಾತೃ ಭಾಷೆಯನ್ನು ಕಳೆದುಕೊಳ್ಳುತ್ತಾರೋ ಅವರು ಕೇವಲ ಭಾಷೆಯನ್ನಷ್ಟೆ ಅಲ್ಲ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಾರೆ. ಜಾಗತಿಕ ಮಟ್ಟದಲ್ಲಿ ಮುನ್ನುಗ್ಗುತ್ತ ಭಾಷೆ ಕಳೆದು ಹೋಗುತ್ತಿದ್ದೇವೆ. ನಾವು ಬ್ರಿಟಿಷರು ಆಗುವುದಿಲ್ಲ. ಆದ್ದರಿಂದ ಭಾಷೆ ಉಳಿಸುವ ಸವಾಲನ್ನು ಸ್ವೀಕರಿಸಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 64 ಗಣ್ಯರಿಗೆ ಸನ್ಮಾನ ಮಾಡುವ ಸೌಭಾಗ್ಯ ನಮ್ಮದಾಗಿದೆ ಎಂದು ಹೇಳಿದರು.

    ಸಿಎಂ ಯಡಿಯೂರಪ್ಪ ಮಾತನಾಡಿ, ರವೀಂದ್ರ ಕಲಾಕ್ಷೇತ್ರದಲ್ಲಿ ಸ್ಥಳಾವಕಾಶ ಕಡಿಮೆಯಿದೆ. ಆದರೆ ಕಾರ್ಯಕ್ರಮಕ್ಕೆ ಸಾವಿರಾರು ಜನ ಬಂದು ನಿಂತಿದ್ದಾರೆ. ಮುಂದಿನ ವರ್ಷ ವಿಶಾಲವಾದ ಸ್ಥಳದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

    ಸಲಹಾ ಸಮಿತಿಯ ಒಕ್ಕೋರಲ ಸಹಮತದೊಂದಿಗೆ ಕೆಲವು ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಯಾರು ನಿಜವಾದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭೂಷಣರಾಗಿದ್ದಾರೋ ಅವರಿಗೆ ಮುಂದಿನ ವರ್ಷ ಪ್ರಶಸ್ತಿ ಕೊಡಲಾಗುವುದು. ಕನ್ನಡವನ್ನು ನಾವು ಮರೆತರೆ ಸಂಸ್ಕ್ರತಿಯನ್ನ ಮರೆತಂತೆ. ಇಂಗ್ಲಿಷ್ ಸಂಬಂಳಕ್ಕಾದರೆ ಕನ್ನಡ ಉಂಬಳಕ್ಕೆ ಎನ್ನುವ ಮಾತಿದೆ. ಕನ್ನಡ ಸಂಬಂಳ ಹಾಗೂ ಉಬಂಳಕ್ಕೂ ಆಗಬೇಕು. ನಾಡು, ನುಡಿ, ಜಲದ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.

    ಸಿಎಂ ಯಡಿಯೂರಪ್ಪ ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ 30 ನಿಮಿಷ ಬೇಗ ಆಗಮಿಸಿ ಸಂಗೀತ ಕಾರ್ಯಕ್ರಮ ವೀಕ್ಷಿಸಿದರು. ಬಳಿಕ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ಉದಯ ಗರುಡಾಚಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ ಉಪಸ್ಥಿತರಿದ್ದರು.

  • ಕಿನ್ನಿಗೋಳಿಯಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

    ಕಿನ್ನಿಗೋಳಿಯಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

    ಮಂಗಳೂರು: ತಾಂತ್ರಿಕ ಶಿಕ್ಷಣದಲ್ಲಿ ಹೊಸತನ ನೈಪುಣ್ಯತೆಯನ್ನು ಬಳಸಿ ಉತ್ತಮ ಸಾಧನೆ ಮಾಡಿ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದು ಕಟೀಲು ದೇವಳ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು. ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ಕಿನ್ನಿಗೋಳಿ ಮತ್ತು ಕೈಕಂಬ ಕೆಐಸಿಟಿ ಮತ್ತು ಎಂಸಿಟಿಸಿ (ತಾಂತ್ರಿಕ ಹಾಗೂ ಕಂಪ್ಯೂಟರ್ ಶಿಕ್ಷಣ ಸಂಸ್ಥೆ) ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಹರ್ಷದ್ ಎಂ. ಎ ಅಧ್ಯಕ್ಷತೆ ವಹಿಸಿದ್ದರು.

    ಶಿಕ್ಷಣ ಕ್ರಾಂತಿಯ ಹರಿಕಾರ ಅಕ್ಷರ ಸಂತ ಹರೇಕಳ ಹಾಜಬ್ಬ, ಕಿನ್ನಿಗೊಳಿ ಗ್ರಾ. ಪಂ. ಪೌರ ಕಾರ್ಮಿಕ ಬೊಗ್ಗಣ್ಣ, ಅಂಚೆ ಇಲಾಖೆಯ ಎಲಿಯಾಸ್ ಡಿಸೋಜ, ಕಿನ್ನಿಗೋಳಿ ರುದ್ರಭೂಮಿ ನಿರ್ವಾಹಕ ಮಾದವ ಶೆಟ್ಟಿ , ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ ಎಕ್ಸ್‍ರೇ ಟೆಕ್ನೀಶಿಯನ್ ಲಿಯೋ ಲೂವಿಸ್, ಹಿರಿಯ ಆಟೋ ಚಾಲಕ ಭಾಸ್ಕರ ಶೆಟ್ಟಿ, ಬಹುಮುಖ ಪ್ರತಿಭೆ ಅನುಜ್ಞಾ ಭಟ್, ಅಂತರಾಷ್ಟ್ರೀಯ ಪವರ್ ಲಿಫ್ಟರ್ ಪ್ರದೀಪ್ ಕುಮಾರ್, ಪತ್ರಕರ್ತ ಇರ್ಶಾದ್ ಕಿನ್ನಿಗೋಳಿ, ದಾಯ್ಜಿ ವರ್ಲ್ಡ ಜೂನಿಯರ್ ಮಸ್ತಿ ಪ್ರಶಸ್ತಿ ವಿಜೇತೆ ನಮನ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

    ಸಂಸ್ಥೆಯ ಅರ್ಥಿಕ ಹಿಂದುಳಿದ ವಿದ್ಯಾರ್ಥಿಗಳಾದ ಸಂದೇಶ್, ಮಹಮ್ಮದ್ ಬಶೀರ್, ರಂಜನ ಸಿಕ್ವೇರಾ, ನಿರ್ಮಲಾ, ಪ್ರವೀಣ್ ಶೆಟ್ಟಿ, ದಾಕ್ಷಾಯಣಿ, ರುಫಿಯಾ, ಕಾಮಾಕ್ಷಿ, ಬಬಿತಾ, ನಿರ್ಮಲಾಕ್ಷಿ ಅವರಿಗೆ ಸಂಪೂರ್ಣ ಉಚಿತ ವಿದ್ಯಾಭ್ಯಾಸದ ಸರ್ಟಿಫಿಕೇಟ್ ನೀಡಲಾಯಿತು.

    ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್ ಲತೀಫ್ ಸಖಾಫಿ, ಚರ್ಚ್ ಧರ್ಮಗುರು ರೆ. ಫಾ. ವಿನ್ಸೆಂಟ್ ಎಫ್ ಮೊಂತೇರೊ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಐಕಳ ಪೊಂಪೈ ಕಾಲೇಜು ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ. ಜಗದೀಶ್ ಹೊಳ್ಳ, ಕೆಐಸಿಟಿ ಮತ್ತು ಎಂಸಿಟಿಸಿ ಪ್ರಿನ್ಸಿಪಾಲ್ ನವೀನ್ ವೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಮಾರ್ಗದರ್ಶಕರಾಗಿದ್ದ ಮರ್‍ಹೂಮ್ ಮುಲ್ಕಿ ಎಂ.ಎಚ್ ಅಬ್ಬಾಸ್ ಹಾಗೂ ದಿ. ವೈ. ಕಿಟ್ಟ ಕರ್ಕೇರ ಅವರಿಗೆ ನುಡಿ ನಮನ ನಡೆಯಿತು. ಸಂಸ್ಥೆಯ ಶಿಕ್ಷಕಿ ಸುರೇಖಾ ಸ್ವಾಗತಿಸಿದರು. ಪ್ರತಿಮಾ ಪ್ರತಿಭಾ ಪುರಸ್ಕಾರದ ವಿವರ ನೀಡಿದರು. ಸುರೇಖಾ ವಂದಿಸಿದರು. ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.