Tag: 500rs

  • ಶಿವಮೊಗ್ಗದಲ್ಲಿ 500 ರೂ. ಮುಖಬೆಲೆಯ ನಕಲಿ ನೋಟು ಚಲಾವಣೆ- ಇಬ್ಬರ ಬಂಧನ

    ಶಿವಮೊಗ್ಗದಲ್ಲಿ 500 ರೂ. ಮುಖಬೆಲೆಯ ನಕಲಿ ನೋಟು ಚಲಾವಣೆ- ಇಬ್ಬರ ಬಂಧನ

    ಶಿವಮೊಗ್ಗ: ಹೊಸ 500 ರೂಪಾಯಿಯ ನಕಲಿ ನೋಟುಗಳ ಹಾವಳಿಯಿಂದ ಜಿಲ್ಲೆ ತತ್ತರಿಸಿದೆ. ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಜಾಲವೊಂದನ್ನು ಇದೀಗ ಪೊಲೀಸರು ಪತ್ತೆ ಹಚ್ಚಿದ್ದಾರೆ.

    ಶಿವಮೊಗ್ಗದ ಟಿಪ್ಪು ನಗರದ ಅಮ್ಜದ್ ಪಾಷಾ ಹಾಗೂ ಮೋಹಿನ್ ಖಾನ್ ಎಂಬವರನ್ನು ಬಂಧಿಸಲಾಗಿದೆ. ಇವರ ತಂಡ ಈಗಾಗಲೇ ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ಐನೂರು ರೂಪಾಯಿ ಮುಖಬೆಲೆಯ 350ಕ್ಕೂ ಹೆಚ್ಚು ನೋಟುಗಳನ್ನು ಚಲಾವಣೆ ಮಾಡಿದೆ. ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳಾದ ಭದ್ರಾವತಿಯ ತೌಸಿಫ್ ಹಾಗೂ ಬೆಂಗಳೂರಿನ ಇಮ್ರಾನ್ ನಾಪತ್ತೆಯಾಸಗಿದ್ದಾರೆ. ಇವರು ಪಶ್ಚಿಮಬಂಗಾಳದ ವ್ಯಕ್ತಿಗೆ 70 ಸಾವಿರ ರೂ. ಅಸಲಿ ನೋಟು ನೀಡಿ 2 ಲಕ್ಷ ಖೋಟಾ ನೋಟುಗಳನ್ನು ತಂದು ಚಲಾವಣೆ ಮಾಡಿದ್ದಾರೆ ಎನ್ನಲಾಗಿದೆ.

    ಇವರಿಂದ ಐನೂರು ರೂಪಾಯಿ ಮುಖಬೆಲೆಯ 26 ಸಾವಿರ ರೂಪಾಯಿ, 52 ಖೋಟಾನೋಟುಗಳು ಹಾಗೂ ಈ ಖೋಟಾನೋಟುಗಳ ಜೊತೆ ಮಿಶ್ರಣ ಮಾಡಿ ಚಲಾವಣೆ ಮಾಡಲು ಬಳಸುತ್ತಿದ್ದ 500 ಮುಖಬೆಲೆಯ 210 ಅಸಲಿ ಅಂದರೆ ಒಂದು ಲಕ್ಷದ ಐದು ಸಾವಿರ ಅಸಲಿ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಶಿವಮೊಗ್ಗದಲ್ಲಿ ಚಲಾವಣೆಗೊಂಡಿರುವ ನಕಲಿ ನೋಟಿನ ಸೀರೀಸ್ ನಂಬರ್ LEN875002, LEN875022, LEN875042, LEN875040, IEN 87002 ಆಗಿದ್ದು, ಸಿಕ್ಕಿರುವ ನಕಲಿ ನೋಟುಗಳು ಇದೇ 5 ಕ್ರಮಾಂಕದಲ್ಲಿ ಮುದ್ರಣಗೊಂಡಿವೆ.

    ಈ ಕುರಿತು ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

  • ಟೊಮೆಟೋ ಮಾರಿದ್ದಕ್ಕೆ ರೈತನಿಗೆ ಸಿಕ್ತು 500ರೂ. ನಕಲಿ ನೋಟು!

    ಟೊಮೆಟೋ ಮಾರಿದ್ದಕ್ಕೆ ರೈತನಿಗೆ ಸಿಕ್ತು 500ರೂ. ನಕಲಿ ನೋಟು!

    ರಾಮನಗರ: ರೈತನೋರ್ವ ತಾನು ಬೆಳೆದ ಟೊಮೆಟೋವನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ವೇಳೆ ಬಂದ ಹಣದಲ್ಲಿ ನಕಲಿ ಜೆರಾಕ್ಸ್ ನೋಟೊಂದು ಪತ್ತೆಯಾಗಿರುವ ಘಟನೆ ರಾಮನಗರದಲ್ಲಿ ನಡೆದಿದೆ.

    ರಾಮನಗರದ ಕೃಷಿ ಮಾರುಕಟ್ಟೆಗೆ ಚನ್ನಪಟ್ಟಣದ ರೈತ ಸುಜೀವನ್‍ಕುಮಾರ್ ಎಂಬುವವರು ಸುಮಾರು 30 ಕ್ರೇಟ್ ಟೊಮೆಟೋವನ್ನ ತಂದಿದ್ರು. ತಾವು ತಂದಿದ್ದ ಎಲ್ಲ ಟೊಮೆಟೋವನ್ನು ಮಾರಾಟ ಮಾಡಿದ ವೇಳೆ ವರ್ತಕ ಹಣವನ್ನ ನೀಡಿದ್ದಾನೆ. ವರ್ತಕನಿಂದ ಹಣ ಪಡೆದ ಬಳಿಕ ಹಣ ಎಣಿಸಿಕೊಳ್ಳುವ ವೇಳೆ ಜೆರಾಕ್ಸ್ ನೋಟು ಪತ್ತೆಯಾಗಿದೆ.

    500 ರೂಪಾಯಿಯ ಜೆರಾಕ್ಸ್ ನೋಟು ಪತ್ತೆಯಾದ ಬಳಿಕ ಹಣ ನೀಡಿದ ವರ್ತಕನ ಹುಡುಕಾಟ ಸಹ ನಡೆಸಿದ್ದಾರೆ. ನಂತರ ರೈತ ಸುಜೀವನ್ ಕುಮಾರ್ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ತಮಗೆ 500 ರೂಪಾಯಿಯ ಜೆರಾಕ್ಸ್ ನೋಟು ಬಂದ ಬಗೆಯನ್ನು ವಿವರಿಸಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

    ಬೆಳಗ್ಗೆ ಮಾರುಕಟ್ಟೆಯಲ್ಲಿ ಹಣ ನೀಡಿದ ವರ್ತಕ ಯಾರೆಂದು ಪತ್ತೆ ಹಚ್ಚುವಂತೆ ರೈತ ಆಗ್ರಹಿಸಿದ್ದಾರೆ. ಅಲ್ಲದೇ ಮಾರುಕಟ್ಟೆಯಲ್ಲಿ ಖೋಟಾನೋಟುಗಳ ಹಾವಳಿ ಹೆಚ್ಚಾಗುತ್ತಿದೆ ಕೂಡಲೇ ಪೊಲೀಸ್ರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯ ಮಾಡಿದ್ದಾರೆ.

  • ಕೊಪ್ಪಳ: ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಯ್ತು 2000 ರೂ. ನಕಲಿ ನೋಟು

    ಕೊಪ್ಪಳ: ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಯ್ತು 2000 ರೂ. ನಕಲಿ ನೋಟು

    ಕೊಪ್ಪಳ: ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ 500 ಹಾಗೂ 2 ಸಾವಿರ ರೂ. ನಕಲಿ ನೋಟುಗಳು ಪತ್ತೆಯಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಇಲ್ಲಿನ ಗಂಗಾವತಿ ನಗರದ ಹಿರೇಜಂತಕಲ್ ಐತಿಹಾಸಿಕ ದೇವಸ್ಥಾನದ ಪ್ರಸನ್ನ ಪಂಪಾತಿಯ ಕಾಣಿಕೆ ಹುಂಡಿಯಲ್ಲಿ ಈ ನೋಟುಗಳು ದೊರೆತಿವೆ. ದೇವಸ್ಥಾನದ ಆಡಳಿತಾಧಿಕಾರಿ ಗಂಗಾವತಿಯ ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ನೇತೃತ್ವದಲ್ಲಿ ದೇವಸ್ಥಾನದ ಆವರಣದಲ್ಲಿ ಕಾಣಿಕೆ ಹುಂಡಿಯಲ್ಲಿನ ಹಣ ಸಂಗ್ರಹಿಸಲು ಮುಂದಾಗಿದ್ರು. ನಂವೆಬರ್ 8 ರಂದು 500 ಮತ್ತು 1000 ಮುಖಬೆಲೆಯ ನೋಟುಗಳು ನಿಷೇಧವಾಗಿದೆ. ಆದ್ರೆ ಹುಂಡಿ ತೆಗೆದಾಗ ನಿಷೇಧಿತ 500 ರೂಪಾಯಿ ಹಾಗೂ ನಕಲಿ 2 ಸಾವಿರ ಮುಖಬೆಲೆಯ ನೋಟುಗಳು ಪತ್ತೆಯಾಗಿದೆ.

    ಹುಂಡಿಯಲ್ಲಿ ಪತ್ತೆಯಾದ 2000 ಮುಖಬೆಲೆಯ ಹಾಗೂ ಹಳೇ 500 ರೂ. ನೋಟು ಮಕ್ಕಳು ಆಡುವ ಆಟಿಕೆ ನೋಟುಗಳಾಗಿವೆ. ಆಟಿಕೆಯ ಎರಡು ಸಾವಿರದ ನೋಟು ಗಾತ್ರದಲ್ಲಿ ಚಿಕ್ಕದಾಗಿದ್ದು, ಬಹುತೇಕ ಅಸಲಿ ನೋಟಿನ ವಿನ್ಯಾಸವನ್ನೇ ಹೋಲುತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಕ್ಕಳು ಹುಂಡಿಯಲ್ಲಿ ಆಟಿಕೆ ನೋಟುಗಳನ್ನು ಹಾಕಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹುಂಡಿಯಲ್ಲಿ ಒಟ್ಟು 38,770 ರೂಪಾಯಿ ಹಣ ಸಂಗ್ರಹವಾಗಿದ್ದು, ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ತಹಶೀಲ್ದಾರ್ ಎಲ್.ಡಿ ಚಂದ್ರಕಾಂತ್ ಮಾಹಿತಿ ನೀಡಿದ್ರು.