Tag: 2019-20 budget

  • ಒಂದು ದೇಶ, ಒಂದು ಕಾರ್ಡ್ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪ

    ಒಂದು ದೇಶ, ಒಂದು ಕಾರ್ಡ್ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪ

    ನವದೆಹಲಿ: ಇಂದು ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ತಮ್ಮ ಬಜೆಟ್‍ನಲ್ಲಿ ಒಂದು ದೇಶ, ಒಂದು ಕಾರ್ಡ್ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.

    ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್ (ಎನ್‍ಸಿಎಂಸಿ) ಮಾನದಂಡಗಳ ಆಧಾರದ ಮೇಲೆ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪಾವತಿ ವ್ಯವಸ್ಥೆಯನ್ನು ಮಾರ್ಚ್, 2019ರಲ್ಲಿ ಪ್ರಧಾನ ಮಂತ್ರಿ ಉದ್ಘಾಟಿಸಿದ್ದರು. ಎನ್‍ಸಿಎಂಸಿ ದೇಶೀಯವಾಗಿ ಅಭಿವೃದ್ಧಿಗೊಂಡಿದ್ದು, ಹಲವು ಸೇವೆಗಳನ್ನು ಗ್ರಾಹಕರು ಈ ಒಂದೇ ಕಾರ್ಡ್‍ನಿಂದ ಪಡೆಯಬಹುದಾಗಿದೆ.

    ಕಾರ್ಡ್ ಒಂದು ಉಪಯೋಗ ಹಲವು ಎನ್ನುವುದೇ ಈ ಕಾರ್ಡ್‍ನ ವಿಶೇಷತೆಯಾಗಿದ್ದು, ಸಾರಿಗೆ, ಮೆಟ್ರೊ ಸೇವೆ, ಟೋಲ್ ಸುಂಕ, ಪಾರ್ಕಿಂಗ್ ಶುಲ್ಕ ಪಾವತಿ, ರೀಟೇಲ್ ಶಾಪಿಂಗ್, ದೇಶದ ಎಲ್ಲಾ ಕಡೆಯೂ ಹಣ ಪಡೆಯುವ ಅವಕಾಶ ಸೇರಿದಂತೆ ಬಹುತೇಕ ಎಲ್ಲಾ ಸೇವೆಗಳಿಗೆ ಈ ಕಾರ್ಡ್ ಉಪಯೋಗಿಸಬಹುದು. ಅಲ್ಲದೆ ಈ ಎನ್‍ಸಿಎಂಸಿ ರುಪೇ ಕಾರ್ಡ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ ಇದನ್ನು ಬಳಕೆದಾರರು ಮೆಟ್ರೋ, ಬಸ್ ಪ್ರಯಾಣ, ಟೋಲ್ ತೆರಿಗೆ, ಪಾರ್ಕಿಂಗ್, ಎಟಿಎಂನಿಂದ ಹಣ ತೆಗೆಯಲು ಸಹ ಉಪಯೋಗಿಸಬಹುದಾಗಿದೆ.

    ಈ ಎನ್‍ಸಿಎಂಸಿ ಕಾರ್ಡ್ ರುಪೇ ಕಾರ್ಡ್ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಪ್ರಯಾಣ ಸಂಬಂಧಿ ಸಮಸ್ಯೆಗಳನ್ನು ಈ ಕಾರ್ಡ್‍ನಿಂದ ದೂರವಾಗುತ್ತದೆ. ಮೆಟ್ರೊ, ಬಸ್, ರೈಲಿನಲ್ಲಿ ಪ್ರಯಾಣ ಮಾಡುವಾಗ ಅಥವಾ ಟೋಲ್‍ಗಳಲ್ಲಿ ಸುಂಕ ಕಟ್ಟುವಾಗ, ವಾಹನ ಪಾರ್ಕಿಂಗ್ ಮಾಡುವಾಗ ಚಿಲ್ಲರೆಯ ಸಮಸ್ಯೆ ಸಾಮಾನ್ಯವಾಗಿ ಎದುರಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಎನ್ನುವಂತೆ ಆಟೋಮ್ಯಾಟಿಕ್ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ಎನ್‍ಸಿಎಂಸಿ ಕಾರ್ಡ್‍ನಿಂದ ಜನರಿಗೆ ಬಹಳ ಅನುಕೂಲವಾಗಲಿದೆ ಎಂದು ಪ್ರಧಾನಿ ತಿಳಿಸಿದ್ದರು.

    ನಾನಾ ಸಂಸ್ಥೆಗಳು ಕಾರ್ಡ್ ವಿತರಿಸುತ್ತಿದ್ದ ಕಾರಣಕ್ಕೆ ಅವುಗಳು ಸೇವೆ ನಿರ್ದಿಷ್ಟ ನಗರಗಳಲ್ಲಿ ಮಾತ್ರ ಪಡೆಯಲು ಅವಕಾಶ ಇತ್ತು. ಇದು ಬಳಕೆದಾರರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಆದರೆ, ಈ ಬಂದಿರುವ ಎನ್‍ಸಿಎಂಸಿ ಬಳಸಿ ದೇಶದ ಎಲ್ಲೆಡೆ ಸೇವೆಯನ್ನು ಪಡೆಯಬಹುದಾಗಿದೆ ಎಂದು ಮೋದಿ ಹೇಳಿದ್ದರು.

    ಈ ಒಂದು ದೇಶ ಒಂದು ಕಾರ್ಡ್ ತಂತ್ರಜ್ಞಾನವು ಕೇವಲ ಆಯ್ದ ದೇಶಗಳಲ್ಲಿ ಮಾತ್ರ ಇದೆ. ಈಗ ಭಾರತವು ಈಗ ಕೂಡ ಈ ಪಟ್ಟಿಗೆ ಸೇರಿದೆ. ವಿದೇಶ ತಂತ್ರಜ್ಞಾನವನ್ನು ಹೆಚ್ಚಿನ ಕಾಲದವರೆಗೆ ಉಪಯೋಗಿಸದೆ ಮೇಕ್ ಇನ್ ಇಂಡಿಯಾ ಮೂಲಕ ಈ ಕಾರ್ಡ್ ರೂಪುಗೊಂಡಿದೆ. ಬ್ಯಾಂಕ್‍ಗಳು, ವಿವಿಧ ಸಚಿವಾಲಯಗಳು ಹಾಗೂ ಸಕಾರಿ ಇಲಾಖೆಗಳ ಜೊತೆ ಚರ್ಚೆ ನಡೆಸಿ ಹಾಗೂ ಹಲವು ಪ್ರಕ್ರಿಯೆಗಳು ಮುಗಿದ ಬಳಿಕ ಈ ನೂತನ ಕಾರ್ಡ್ ಕಾರ್ಯರೂಪಕ್ಕೆ ಬಂದಿದೆ. ಅಂದರೆ ರುಪೇ ಕಾರ್ಡ್ ಅನ್ನು ಮೊಬಿಲಿಟಿ ಕಾರ್ಡ್ ಜೊತೆ ವಿಲೀನ ಮಾಡಲಾಗಿದೆ.

    ಎನ್‍ಸಿಎಂಸಿಯಲ್ಲಿ ಯಾವೆಲ್ಲ ಸೇವೆ ಲಭ್ಯ?
    1. ರುಪೇ ಡೆಬಿಟ್/ಕ್ರೆಡಿಟ್ ಕಾರ್ಡ್ ರೀತಿಯೇ ಈ ಎನ್‍ಸಿಎಂಸಿ ಇರುತ್ತದೆ. ಎಸ್‍ಬಿಐ, ಪಿಎನ್‍ಬಿ ಸೇರಿದಂತೆ 25 ಬ್ಯಾಂಕ್‍ಗಳಲ್ಲಿ ಈ ಕಾರ್ಡ್ ಲಭ್ಯವಿದೆ.
    2. ಇದರಿಂದ ಮೆಟ್ರೊ, ಬಸ್, ಸಬರ್ಬನ್ ರೈಲ್ವೆ, ಸ್ಮಾರ್ಟ್ ಸಿಟಿ ಮತ್ತು ರೀಟೇಲ್ ಶಾಪಿಂಗ್ ಮತ್ತಿತರ ಸೇವೆಗಳನ್ನು ಪಡೆಯಬಹುದಾಗಿದೆ.

    3. ಟೇಲ್ ಗೇಟ್‍ಗಳಲ್ಲಿ ಮತ್ತು ವಾಹನ ಪಾರ್ಕಿಂಗ್ ಸ್ಥಳಗಳಲ್ಲಿ ಶುಲ್ಕ ಕಟ್ಟಲು ಈ ಕಾರ್ಡ್ ಉಪಯುಕ್ತ.
    4. ಇದರಿಂದ ಬಿಲ್ ಪೇಮೆಂಟ್ ಕೂಡ ಮಾಡಬಹುದು. ಅಲ್ಲದೆ ಇದರಲ್ಲಿ ಕ್ಯಾಶ್‍ಬ್ಯಾಕ್ ಆಫರ್ ಗಳೂ ಲಭ್ಯವಿದ್ದು, ಸಾವಿರಕ್ಕೂ ಅಧಿಕ ಸೇವೆಗಳ ಆನಂದಿಸಬಹುದು.
    5. ಅಷ್ಟೇ ಅಲ್ಲದೆ ಈ ಕಾರ್ಡ್ ಬಳಕೆದಾರರು ಎಟಿಎಂಗಳಲ್ಲಿ ಶೇ.5ರಷ್ಟು ಕ್ಯಾಶ್‍ಬ್ಯಾಕ್ ಪಡೆಯಬಹುದು. ವಿದೇಶಕ್ಕೆ ತೆರಳಿದಾಗ ಮರ್ಚೆಂಟ್‍ಗಳ ಔಟ್‍ಲೆಟ್‍ಗಳಲ್ಲಿ ಶೇ.10ರಷ್ಟು ಕ್ಯಾಶ್‍ಬ್ಯಾಕ್ ಈ ಕಾರ್ಡ್ ಹಿಂದಿದವರಿಗೆ ಸಿಗುತ್ತದೆ.

  • ಸೂಟ್‍ಕೇಸ್ ಸಂಸ್ಕೃತಿಗೆ ಬ್ರೇಕ್ – ಕೆಂಪು ಬಣ್ಣದ ಬಟ್ಟೆಯಲ್ಲಿ ಬಜೆಟ್ ಪ್ರತಿ

    ಸೂಟ್‍ಕೇಸ್ ಸಂಸ್ಕೃತಿಗೆ ಬ್ರೇಕ್ – ಕೆಂಪು ಬಣ್ಣದ ಬಟ್ಟೆಯಲ್ಲಿ ಬಜೆಟ್ ಪ್ರತಿ

    ನವದೆಹಲಿ: ಹಣಕಾಸು ಸಚಿವರು ಇಲ್ಲಿಯವರೆಗೆ ಬಜೆಟ್ ಪ್ರತಿಯನ್ನು ಸೂಟ್‍ಕೇಸ್‍ನಲ್ಲಿ ಹೊತ್ತುಕೊಂಡು ಸಂಸತ್ ಪ್ರವೇಶಿಸುತ್ತಿದ್ದರು. ಆದರೆ ನಿರ್ಮಲಾ ಸೀತಾರಾಮನ್ ಅವರು ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಕೆಂಪು ಬಣ್ಣದ ಬಟ್ಟೆಯಲ್ಲಿ ಬಜೆಟ್ ಪ್ರತಿಗಳನ್ನು ಇರಿಸಿಕೊಂಡು ಸಂಸತ್ ಪ್ರವೇಶಿಸಿದ್ದಾರೆ.

    ಹಣಕಾಸು ಸಚಿವಾಯಕ್ಕೆ ಆಗಮಿಸಿದ ಸಚಿವೆ ಬಜೆಟ್ ದಾಖಲೆಗಳನ್ನು ಬ್ರೀಫ್‍ಕೇಸ್ ಬದಲು ಕೆಂಪು ಬಣ್ಣದ ಬಟ್ಟೆಯಲ್ಲಿ ಬಜೆಟ್ ಪ್ರತಿ ಹಿಡಿದು ಫೋಟೋಗೆ ಪೋಸ್ ಕೊಟ್ಟಿರುವುದು ವಿಶೇಷವಾಗಿತ್ತು. ಈ ವೇಳೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹಾಗೂ ಹಣಕಾಸು ಸಚಿವಾಲಯದ ಇತರೇ ಅಧಿಕಾರಿಗಳು ಸಚಿವೆಗೆ ಸಾಥ್ ನೀಡಿದ್ದಾರೆ.

    ನಿರ್ಮಲಾ ಸೀತಾರಾಮನ್ ಭಾರತದ ಪೂರ್ಣ ಅವಧಿಯ ಮೊದಲ ಮಹಿಳಾ ಹಣಕಾಸು ಮಂತ್ರಿಯಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ಈ ಬಾರಿ ಕೇಂದ್ರ ಸರ್ಕಾರ ಬಜೆಟ್ ಖರ್ಚನ್ನು ಹೆಚ್ಚಿಸಿ, ತೆರಿಗೆ ವ್ಯವಹಾರಗಳ ಬಗ್ಗೆ ಪ್ರಮುಖ್ಯತೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

    ಕೆಂಪುಬಟ್ಟೆಯಲ್ಲಿ ಬಜೆಟ್ ಗೆ ಸಂಬಂಧಪಟ್ಟ ದಾಖಲೆಗಳನ್ನು ಇಟ್ಟು ಆ ಬಟ್ಟೆಯನ್ನು ನಾಲ್ಕು ಮಡಿಕೆ ಮಾಡಿ ರಿಬ್ಬನ್‍ನಿಂದ ಕಟ್ಟಲಾಗಿದೆ. ಅದರ ಮೇಲೆ ರಾಷ್ಟ್ರಲಾಂಛನವಾದ ನಾಲ್ಕು ಮುಖದ ಸಿಂಹದ ಚಿತ್ರವಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣಿಯನ್ ಅವರು, ಬಟ್ಟೆಯಲ್ಲಿ ಕಟ್ಟುವುದು ನಮ್ಮ ದೇಶದ ಸಂಪ್ರದಾಯ. ಪಾಶ್ಚಾತ್ಯ ಸಂಸ್ಕೃತಿಯಿಂದ ಹೊರಬರಲು ಈ ಬಾರಿ ಬ್ರೀಫ್‍ಕೇಸ್ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.

    ಸಂಸತ್ ಪ್ರವೇಶಿಸುವ ಮುನ್ನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಸಚಿವೆ ಭೇಟಿಯಾಗಿದ್ದರು. ಬಜೆಟ್ ಮಂಡಿಸಿದ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಲಿದ್ದು, ಅನುರಾಗ್ ಠಾಕೂರ್, ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು ಮತ್ತು ಆರ್ಥಿಕ ಸಲಹೆಗಾರ ಕೆ.ವಿ ಸುಬ್ರಮಣಿಯನ್ ಅವರು ಭಾಗಿಯಾಗಲಿದ್ದಾರೆ.