Tag: 10ನೇ ತರಗತಿ

  • 2026 ರಿಂದ ವರ್ಷಕ್ಕೆ 2 ಬಾರಿ 10ನೇ ತರಗತಿ ಪರೀಕ್ಷೆ: ಸಿಬಿಎಸ್‌ಇ

    2026 ರಿಂದ ವರ್ಷಕ್ಕೆ 2 ಬಾರಿ 10ನೇ ತರಗತಿ ಪರೀಕ್ಷೆ: ಸಿಬಿಎಸ್‌ಇ

    ನವದೆಹಲಿ: 2026ರಿಂದ ವರ್ಷಕ್ಕೆ 2 ಬಾರಿ 10ನೇ ತರಗತಿ ಪರೀಕ್ಷೆ ನಡೆಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಮುಂದಾಗಿದೆ.

    ಸಿಬಿಎಸ್‌ಇ ಪ್ರತಿ ವರ್ಷ 10ನೇ ತರಗತಿಗೆ 2 ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವಂತೆ ಯೋಜಿಸಿದೆ. ಈ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಹೆಚ್ಚುವರಿ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದೆ.ಇದನ್ನೂ ಓದಿ: ನೆಲಮಂಗಲ| ಹಾವಾರ್ಡ್ ಶಾಲೆಯಲ್ಲಿ ಶಿವರಾತ್ರಿ ಆಚರಣೆ

    ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಿಬಿಎಸ್‌ಇ ಅಧಿಕಾರಿಗಳು, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ, ಕೇಂದ್ರೀಯ ವಿದ್ಯಾಲಯ ಸಂಘಟನೆ ಹಾಗೂ ನವೋದಯ ವಿದ್ಯಾಲಯ ಸಮಿತಿ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಹೊಸದಾಗಿ ಅನುಮೋದಿಸಲಾದ ಕರಡು ಮಾರ್ಗಸೂಚಿಗಳ ಪ್ರಕಾರ, 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಎರಡು ಹಂತಗಳಲ್ಲಿ ನಡೆಯಲಿವೆ. ಮೊದಲ ಹಂತವು ಫೆಬ್ರವರಿ ಮತ್ತು ಮಾರ್ಚ್ ನಡುವೆ ನಡೆಯಲಿದ್ದು, ಎರಡನೇ ಹಂತವು ಮೇ ತಿಂಗಳಲ್ಲಿ ನಡೆಯಲಿದೆ. ಎರಡೂ ಪರೀಕ್ಷೆಗಳು ಪೂರ್ಣ ಪಠ್ಯಕ್ರಮವನ್ನು ಒಳಗೊಂಡಿರುತ್ತವೆ.

    ಈ ಯೋಜನೆ ಮೂಲಕ ಪರೀಕ್ಷೆಯಲ್ಲಿ ಸುಧಾರಣೆ ತರುವುದು ಪ್ರಮುಖ ಉದ್ದೇಶವಾಗಿದೆ. ಇದರಿಂದ ಒತ್ತಡ ಕಡಿಮೆ, ಪರೀಕ್ಷೆಯಲ್ಲಿ ಆತಂಕ, ಅನಾರೋಗ್ಯದ ತೊಂದರೆಗಳಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಒಂದೇ ಪರೀಕ್ಷೆಯಲ್ಲಿ ಹೆಚ್ಚಿನ ಒತ್ತಡವಿಲ್ಲದೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ ಎಂದು ತಿಳಿಸಿದೆ.

    ಬೋರ್ಡ್ ಪರೀಕ್ಷೆಗಳು ವರ್ಷಕ್ಕೆ ಎರಡು ಬಾರಿ ನಡೆದರೂ ಪ್ರಾಯೋಗಿಕ ಮತ್ತು ಆಂತರಿಕ ಮೌಲ್ಯಮಾಪನಗಳನ್ನು ಹೊಸ ಮಾನದಂಡಗಳ ಪ್ರಕಾರ ವರ್ಷಕ್ಕೊಮ್ಮೆ ಮಾತ್ರ ನಡೆಸಲಾಗುವುದು. ವಿದ್ಯಾರ್ಥಿಗಳು ಎರಡೂ ಅವಧಿಗಳಿಗೆ ಹಾಜರಾಗಲು ಮತ್ತು ಅವರ ತಯಾರಿಗೆ ಉತ್ತಮವಾಗಿ ಹೊಂದಿಕೆಯಾಗುವ ಒಂದನ್ನು ಆಯ್ಕೆ ಮಾಡಲು ಅವಕಾಶವನ್ನು ಹೊಂದಿರುತ್ತಾರೆ.

    ಮುಂದಿನ ಶೈಕ್ಷಣಿಕ ಅವಧಿಯಿಂದ ಪ್ರತಿ ವರ್ಷ ಎರಡು ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಯೋಜನೆಯ ಕುರಿತು ಶಿಕ್ಷಣ ಸಚಿವಾಲಯವು ಇತ್ತೀಚೆಗೆ ಸಿಬಿಎಸ್‌ಇ ಜೊತೆ ಚರ್ಚೆ ನಡೆಸಿತು.

    ಇದರ ಜೊತೆಗೆ 2026-27 ಶೈಕ್ಷಣಿಕ ಅವಧಿಗೆ ವಿದೇಶಿ ಶಾಲೆಗಳಿಗೆ ಜಾಗತಿಕ ಪಠ್ಯಕ್ರಮವನ್ನು ಪ್ರಾರಂಭಿಸಲು ಸಚಿವಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸಚಿವ ಪ್ರಧಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ವಿದೇಶಿ ಶಾಲೆಗಳಿಗೆ ಸಿಬಿಎಸ್‌ಇ ಜಾಗತಿಕ ಪಠ್ಯಕ್ರಮವನ್ನು ಪ್ರಾರಂಭಿಸಲು ವಿವರವಾದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಸಿಬಿಎಸ್‌ಇಗೆ ಸೂಚಿಸಲಾಯಿತು.ಇದನ್ನೂ ಓದಿ: ಈ ಬಾರಿಯ ಐಪಿಎಲ್‌ನಲ್ಲಿ ಹೊಸ ಬ್ಯಾಟ್ ಬಳಸಲಿದ್ದಾರೆ ಧೋನಿ

     

  • ನಕ್ಸಲ್‌ ದಂಪತಿ ಮಗಳು 10 ನೇ ತರಗತಿ ಪಾಸ್‌; ಅಪ್ಪ-ಅಮ್ಮನ ಥರ ಆಗಲ್ಲ, ಡಾಕ್ಟರ್‌ ಆಗ್ತೀನಿ ಅಂದ್ಳು ಬಾಲಕಿ

    ನಕ್ಸಲ್‌ ದಂಪತಿ ಮಗಳು 10 ನೇ ತರಗತಿ ಪಾಸ್‌; ಅಪ್ಪ-ಅಮ್ಮನ ಥರ ಆಗಲ್ಲ, ಡಾಕ್ಟರ್‌ ಆಗ್ತೀನಿ ಅಂದ್ಳು ಬಾಲಕಿ

    ರಾಯ್ಪುರ: ಅಪ್ಪ-ಅಮ್ಮ ನಕ್ಸಲರು. ಆದರೆ ಮಗಳು ಮಾತ್ರ ಚೆನ್ನಾಗಿ ಓದಿ ಡಾಕ್ಟರ್‌ ಆಗಬೇಕು ಎಂದು ಕನಸು ಹೊತ್ತು ಸಾಗುತ್ತಿದ್ದಾಳೆ. ಛತ್ತೀಸಗಢದ ಬಾಲಕಿಯೊಬ್ಬಳು 10 ತರಗತಿ ಬೋರ್ಡ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ. ತಾನು ಡಾಕ್ಟರ್‌ ಆಗಬೇಕೆಂಬ ಆಸೆಯನ್ನೂ ಹೊಂದಿದ್ದಾಳೆ. ಆದರೆ ಆಕೆಯ ಪೋಷಕರು ನಕ್ಸಲರು.

    ನಾರಾಯಣಪುರ ಜಿಲ್ಲೆಯ ಅಬುಜ್ಮದ್‌ ಪ್ರದೇಶದ ಸೋನ್ವಾರಮ್, ಆರತಿ ಹೆಸರಿನ ನಕ್ಸಲ್‌ ದಂಪತಿ ಪುತ್ರಿಯಾಗಿರುವ ಬಾಲಕಿ 10ನೇ ತರಗತಿಯಲ್ಲಿ 54.5% ರಷ್ಟು ಅಂಕ ಪಡೆದು ತೇರ್ಗಡೆಯಾಗಿದ್ದಾಳೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬಾಲಕಿ, ನಾನು 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಸಂತಸ ತಂದಿದೆ. ಅಪ್ಪ-ಅಮ್ಮನ ಥರ ಆಗಲ್ಲ. ನಾನು ವೈದ್ಯೆಯಾಗಬೇಕು. ನನ್ನ ಹಳ್ಳಿಯ ಜನರ ಸೇವೆ ಮಾಡಬೇಕು ಎಂದು ಆಕೆ ಆಕಾಂಕ್ಷೆ ವ್ಯಕ್ತಪಡಿಸಿದ್ದಾಳೆ. ಇದನ್ನೂ ಓದಿ: ಮಣಿಪುರದಲ್ಲಿ ಉಗ್ರರ ದಾಳಿ – ಓರ್ವ ಪೊಲೀಸ್ ಹುತಾತ್ಮ, ನಾಲ್ವರು ಗಂಭೀರ

    “ನನಗೆ ಶಿಕ್ಷಣ ಪಡೆಯಲು ಅನೇಕ ತೊಂದರೆಗಳಿವೆ. ಕೆಲವು ದಾಖಲೆಗಳ ಕೊರತೆಯಿಂದಾಗಿ ಮಾದಿಯಾ ಬುಡಕಟ್ಟಿನ ಸದಸ್ಯೆ ಎಂದು ಗುರುತಿಸುವ ಪರಿಶಿಷ್ಟ ಪಂಗಡ (ಎಸ್‌ಟಿ) ಪ್ರಮಾಣಪತ್ರ ಮತ್ತು ನಿವಾಸ ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗದ ಕಾರಣ ಮುಂದಿನ ಅಧ್ಯಯನದಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದೇನೆ. ಈ ಪ್ರಮಾಣಪತ್ರಗಳು ನನಗೆ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಸಹಾಯ ಮಾಡುತ್ತದೆ. ಆ ಮೂಲಕ ನನ್ನ ಅಧ್ಯಯನವನ್ನು ಮುಂದುವರಿಸಲು ಮತ್ತು ವೈದ್ಯೆಯಾಗುವ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತದೆ” ಎಂದು ಬಾಲಕಿ ಹೇಳಿಕೊಂಡಿದ್ದಾಳೆ.

    ಬಾಲಕಿ, ತನ್ನ ಹೆತ್ತವರ ಬಗ್ಗೆ ಹೆಚ್ಚು ಬಹಿರಂಗಪಡಿಸಿಲ್ಲ. ಆಕೆಯ ಕಿರಿಯ ಸಹೋದರ ಗ್ರಾಮದ ರಾಮಕೃಷ್ಣ ಮಿಷನ್ ಆಶ್ರಮ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಬಾಲಕಿ ತಂದೆ ಸೋನ್ವಾರಮ್ ಸಲಾಮ್ ಪ್ರಸ್ತುತ ಅಬುಜ್‌ಮದ್‌ನ ಅಕಬೇಡ ಮತ್ತು ಕುತುಲ್ ಪ್ರದೇಶಗಳಲ್ಲಿ ಮಾವೋವಾದಿ ಸಂಘಟನೆಯಲ್ಲಿ ಕಮಾಂಡರ್ ಆಗಿ ಸಕ್ರಿಯನಾಗಿದ್ದಾನೆ. ಆತನ ಪತ್ನಿ, ಕೆಳ ಹಂತದ ಕೇಡರ್ ಆಗಿದ್ದಾಳೆ. ಈ ನಕ್ಸಲ್ ದಂಪತಿ ಬಗ್ಗೆ ಸುಳಿವು ಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯ ಕುರ್ಚಿಯಲ್ಲೇ ರಾಜಾರೋಷವಾಗಿ ಕುಳಿತು ಮದ್ಯಪಾನ- ವ್ಯಕ್ತಿ ಅರೆಸ್ಟ್

  • 10ನೇ ತರಗತಿವರೆಗೂ ಆರ್‌ಟಿಇ ವಿಸ್ತರಣೆಗೆ ಆಮ್ ಆದ್ಮಿ ಪಾರ್ಟಿ ಆಗ್ರಹ

    10ನೇ ತರಗತಿವರೆಗೂ ಆರ್‌ಟಿಇ ವಿಸ್ತರಣೆಗೆ ಆಮ್ ಆದ್ಮಿ ಪಾರ್ಟಿ ಆಗ್ರಹ

    ಬೆಂಗಳೂರು: ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಗೆ ತಿದ್ದುಪಡಿ ತಂದು, ಅದರ ವ್ಯಾಪ್ತಿಯನ್ನು 9 ಹಾಗೂ 10ನೇ ತರಗತಿಗಳಿಗೂ ವಿಸ್ತರಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.

    ಪಕ್ಷದ ಮಾಧ್ಯಮ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿಯ ಮಹಿಳಾ ಮುಖಂಡರಾದ ಉಷಾ ಮೋಹನ್, ಪ್ರಸ್ತುತ ಎಂಟನೇ ತರಗತಿಯವರೆಗೆ ಮಾತ್ರ ಆರ್‍ಟಿಇ ಕಾಯ್ದೆ ಅನ್ವಯಿಸುತ್ತಿದೆ. ಆದ್ದರಿಂದ 9 ಹಾಗೂ 10ನೇ ತರಗತಿ ಸೇರುವ ಬಡ ಕುಟುಂಬದ ವಿದ್ಯಾರ್ಥಿಗಳಿಂದ ಖಾಸಗಿ ಶಾಲೆಗಳು ಭಾರೀ ಮೊತ್ತದ ಶುಲ್ಕ ಪಡೆಯುತ್ತಿವೆ. ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ, ಮುಂದಿನ ಶಿಕ್ಷಣದಿಂದ ವಂಚಿತರಾಗಬೇಕಾದ ಅನಿವಾರ್ಯ ಸ್ಥಿತಿ ಎದುರಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವು ಶೀಘ್ರವೇ ಕಾಯ್ದೆಗೆ ತಿದ್ದುಪಡಿ ತಂದು ಬಡ ವಿದ್ಯಾರ್ಥಿಗಳ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.

    ಕೋವಿಡ್ ಹಾಗೂ ಲಾಕ್‍ಡೌನ್‍ನಿಂದಾಗಿ ಬಡ ಪೋಷಕರು ಎರಡು ವರ್ಷಗಳ ಕಾಲ ಆದಾಯವಿಲ್ಲದೇ ಆರ್ಥಿಕವಾಗಿ ದುರ್ಬಲವಾಗಿದ್ದಾರೆ. ಆದ್ದರಿಂದ 2020-21ನೇ ಸಾಲಿನಿಂದಲೇ ಅನ್ವಯಿಸುವಂತೆ ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತರಬೇಕು. ಅಂದರೆ ಆರ್‍ಟಿಎ ವಿದ್ಯಾರ್ಥಿಗಳ 9 ಹಾಗೂ 10ನೇ ತರಗತಿಗಳ ಕೋವಿಡ್ ಅವಧಿಯ ಎರಡು ವರ್ಷದ ಶಾಲಾ ಶುಲ್ಕವನ್ನು ಸರ್ಕಾರವೇ ಭರಿಸಬೇಕು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‍ರವರು ಈ ಬಗ್ಗೆ ನಿರ್ಲಕ್ಷ್ಯ ಮುಂದುವರಿಸಿದರೆ ಆಮ್ ಆದ್ಮಿ ಪಾರ್ಟಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದೆ ಎಂದು ಉಷಾ ಮೋಹನ್ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

    BC Nagesh

    ಚಿಕ್ಕಪೇಟೆ ವಾರ್ಡ್ ಎಎಪಿ ಅಧ್ಯಕ್ಷರಾದ ಗೋಪಿನಾಥ್‍ರವರು ಮಾತನಾಡಿ, ಖಾಸಗಿ ಶಾಲೆಯ ದುಬಾರಿ ಶುಲ್ಕ ಕಟ್ಟಲು ಸಾಧ್ಯವಾಗದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ಸೇರಲು ಬಯಸುತ್ತಿದ್ದಾರೆ. ಆದರೆ ಅವರಿಗೆ ವರ್ಗಾವಣೆ ಪತ್ರ (ಟಿಸಿ) ನೀಡಲು ಕೆಲವು ಖಾಸಗಿ ಶಾಲೆಗಳು ಸತಾಯಿಸುತ್ತಿವೆ. ಭಾರೀ ಹಣ ಪಡೆದು ವರ್ಗಾವಣೆ ಪತ್ರ ನೀಡುತ್ತಿರುವ ಘಟನೆಗಳು ಅಲ್ಲಲ್ಲಿ ಕಂಡುಬರುತ್ತಿವೆ. ಬಡವರ ಅಸಹಾಯಕತೆಯ ಲಾಭ ಪಡೆಯುವ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರ್ಕಾರವು ವರ್ಗಾವಣೆ ಪತ್ರ ಇಲ್ಲದೆಯೇ ಸರ್ಕಾರಿ ಶಾಲೆ ಸೇರುವ ವ್ಯವಸ್ಥೆ ಕಲ್ಪಿಸಿದ್ದು, ರಾಜ್ಯದಲ್ಲೂ ಅದೇ ಮಾದರಿಯ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

  • 10ನೇ ತರಗತಿ ಪರೀಕ್ಷೆ ಬರೆಯಲಿರುವ 12 ವರ್ಷದ ಬಾಲಕ

    10ನೇ ತರಗತಿ ಪರೀಕ್ಷೆ ಬರೆಯಲಿರುವ 12 ವರ್ಷದ ಬಾಲಕ

    ಚಂಡೀಗಢ: 11 ವರ್ಷದ ಚಂಡೀಗಢದ ದುರ್ಗ ಜಿಲ್ಲೆಯ ಬಾಲಕನಿಗೆ 10ನೇ ತರಗತಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. 5ನೇ ತರಗತಿಯಲ್ಲಿ ಓದುತ್ತಿರುವ ಲಿವ್‍ಜೋತ್ ಸಿಂಗ್ ಅರೋರಾ ಎಂಬ ಬಾಲಕನ ಬುದ್ಧಿವಂತಿಕೆಯ ಆಧಾರದ ಮೇಲೆ ಪ್ರೌಢ ಶಿಕ್ಷಣ ಮಂಡಳಿಯು 10ನೇ ತರಗತಿ ಪರೀಕ್ಷೆಗೆ ಹಾಜರಾಗಲು ಸಮ್ಮತಿ ಸೂಚಿಸಿದೆ ಎಂದು ಮಂಗಳವಾರ ರಾಜ್ಯ ಜನಸಂಪರ್ಕ ಇಲಾಖೆಯ ಅಧಿಕಾರಿ ಹೇಳಿದ್ದಾರೆ.

    ಬಹುಶಃ ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ 10ನೇ ತರಗತಿ ಪರೀಕ್ಷಾ ಮಂಡಳಿ 12 ವರ್ಷದ ಬಾಲಕನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಟ್ಟಿದೆ. ಅಲ್ಲದೆ ಈ ಮುನ್ನ ಲಿವ್‍ಜೋತ್ 2020-2021ರ ಸಾಲಿನ 10ನೇ ತರಗತಿ ಪರೀಕ್ಷೆಗೆ ಹಾಜರಾಗಲು ಅನುಮತಿ ಕೋರಿ ಸಿಜಿಬಿಎಸ್‍ಇಗೆ ಅರ್ಜಿ ಸಲ್ಲಿಸಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದುರ್ಗ್ ಜಿಲ್ಲಾಸ್ಪತ್ರೆಯಲ್ಲಿ ಬಾಲಕನ ಐಕ್ಯೂ ಪರೀಕ್ಷೆಯನ್ನು ನಡೆಸಲಾಗಿತ್ತು. ವರದಿಯಲ್ಲಿ ಬಾಲಕ ಐಕ್ಯೂ 16ರ ವಯಸ್ಕರರ ಐಕ್ಯೂಗೆ ಸಮನಾಗಿದೆ ಎಂದು ತಿಳಿದುಬಂದಿದೆ. ಐಕ್ಯೂ ಎಂದರೇ ಮನುಷ್ಯರ ಬುದ್ದಿವಂತಿಕೆ ಪ್ರಮಾಣವನ್ನು ನಿರ್ಣಯಿಸಲು ವಿನ್ಯಾಸಗೊಳಿಸಿರುವ ಪ್ರಮಾಣೀಕೃತ ಪರೀಕ್ಷೆಯ ಗುಂಪಿನಿಂದ ಪಡೆದ ಅಂಕಗಳಾಗಿದೆ.

    ಲಿವ್‍ಜಿತ್ ಪರೀಕ್ಷೆಯಲ್ಲಿ ಪಡೆಯುತ್ತಿದ್ದ ಅಂಕಗಳ ಮತ್ತು ಆತನ ಐಕ್ಯೂ ಆಧಾರದ ಮೇಲೆ ಪ್ರೌಢ ಶಿಕ್ಷಣ ಮಂಡಳಿಯು ಬಾಲಕನಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿದೆ ಎಂದು ತಿಳಿಸಲಾಗಿದೆ.

    ಈ ಕುರಿತಂತೆ ಬಾಲಕನ ತಂದೆ ಗುರುವಿಂದರ್ ಸಿಂಗ್ ಅರೋರಾ ತಮ್ಮ ಮಗ ಬಿಹಾಲಿಯ ಮಿಲ್‍ಸ್ಟೋನ್ ಶಾಲೆಯ ವಿದ್ಯಾರ್ಥಿಯಾಗಿದ್ದು, ಪರೀಕ್ಷೆಗೆ ಬೇಕಾದ ತಯಾರಿಯನ್ನು ಈಗಾಗಲೇ ಮಾಡಿಕೊಳ್ಳುತ್ತಿದ್ದಾನೆ. ಜೊತೆಗೆ ಪರೀಕ್ಷೆ ಬರೆಯಲು ಬಹಳ ಉತ್ಸುಹಕನಾಗಿದ್ದಾನೆ ಎಂದು ಹೇಳಿದ್ದಾರೆ.

    ಲಿವ್‍ಜೀತ್ ಮೊದಲಿನಿಂದಲೂ ಪ್ರತಿಭೆಯುಳ್ಳ ವಿದ್ಯಾರ್ಥಿಯಾಗಿದ್ದು, 3ನೇ ತರಗತಿಯಲ್ಲಿದ್ದಾಗಲೇ ಆತ ಗಣಿತದ ಲೆಕ್ಕ ಸಮಸ್ಯೆಯನ್ನು ಕೇವಲ ಸೆಕೆಂಡುಗಳಲ್ಲಿ ಮಾಡಿ ಮುಗಿಸುತ್ತಿದ್ದನು. ಇದೀಗ ಚಿಕ್ಕವಯಸ್ಸಿನಲ್ಲಿಯೇ 10ನೇ ತರಗತಿ ಪರೀಕ್ಷೆ ಬರೆಯಲು ಮುಂದಾಗಿದ್ದು ನಮಗೆ ಬಹಳ ಖುಷಿತರಿಸಿದೆ. ನಾವು ಕೂಡ ಆತನ ಮೇಲೆ ಯಾವುದೇ ಒತ್ತಡ ನೀಡದೇ ಅವನ್ನು ತಯಾರಿ ನಡೆಸಲು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.

  • 10ನೇ ತರಗತಿ ಬಾಲಕಿ ಮೇಲೆ ಗ್ಯಾಂಗ್ ರೇಪ್ – ಪೊಲೀಸ್ ಮಗನ ಜೊತೆ ಸಿಆರ್​ಪಿಎಫ್​  ಯೋಧನಿಂದ ಕೃತ್ಯ

    10ನೇ ತರಗತಿ ಬಾಲಕಿ ಮೇಲೆ ಗ್ಯಾಂಗ್ ರೇಪ್ – ಪೊಲೀಸ್ ಮಗನ ಜೊತೆ ಸಿಆರ್​ಪಿಎಫ್​ ಯೋಧನಿಂದ ಕೃತ್ಯ

    – ಪೋಲೀಸ್ ಲೋಗೋ ಇರುವ ಕಾರನ್ನೇ ಬಳಸಿ ಕೃತ್ಯ

    ಲಕ್ನೋ: ಸಿಆರ್​ಪಿಎಫ್​ ಯೋಧ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಮಗ ಸೇರಿ ನಾಲ್ವರು 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

    ಉತ್ತರ ಪ್ರದೇಶದ ಮಿರ್ಜಾಪುರದ ಹಳಿಯಾ ಎಂಬಲ್ಲಿ ಘಟನೆ ನಡೆದಿದ್ದು, ಆರೋಪಿಗಳಾದ ಜೈಲರ್ ಮಗ ಜೈ ಪ್ರಕಾಶ್, ಸುಲ್ತಾನ್‍ಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಆರ್​ಪಿಎಫ್​ ಕಾನ್ಸ್‍ಟೇಬಲ್ ಮಹೇಂದ್ರ ಕುಮಾರ್ ಯಾದವ್, ಲವ್ ಕುಮಾರ್ ಪಾಲ್, ಗಣೇಶ್ ಪ್ರಸಾದ್ ಬಂಧಿತ ಆರೋಪಿಗಳು. ಪೊಲೀಸ್ ಲೋಗೋ ಇರುವ ಕಾರಿನಲ್ಲೇ ವಿದ್ಯಾರ್ಥಿನಿಯನ್ನು ಅಪಹರಿಸಿ ಕೃತ್ಯ ಎಸಗಿದ್ದಾರೆ.

    ಹಳಿಯಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ದೇವಿವರ್ ಶುಕ್ಲಾ ಈ ಕುರಿತು ಮಾಹಿತಿ ನೀಡಿ, ಆರೋಪಿಗಳ ವಿರುದ್ಧ ಅಪಹರಣ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ಆರೋಪಿಗಳು ಹಳಿಯಾದ ನಿರ್ಜನ ಪ್ರದೇಶದಲ್ಲಿ 15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ನಾಲ್ವರು ಆರೋಪಿಗಳ ಪೈಕಿ ಒಬ್ಬ ನಿವೃತ್ತ ಜೈಲರ್ ಬ್ರಿಜ್‍ಲಾಲ್ ಮೌರ್ಯ ಅವರ ಮಗ ಜೈ ಪ್ರಕಾಶ್ ಮೌರ್ಯ ಆಗಿದ್ದಾನೆ ಎಂದು ವಿವರಿಸಿದರು.

    ಜೈ ಪ್ರಕಾಶ್ ಸಹೋದರಿ ಮದುವೆಯ ನಂತರ ಹಳಿಯಾದಲ್ಲಿಯೇ ವಾಸವಿದ್ದು, ಈತ ಪದೇ ಪದೆ ಸಹೋದರಿ ಮನೆಗೆ ಭೇಟಿ ನೀಡುತ್ತಿದ್ದ. ಆಗ ಕೆಲವು ತಿಂಗಳ ಹಿಂದೆ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ ಎಂದು ಶುಕ್ಲಾ ಮಾಹಿತಿ ನೀಡಿದ್ದಾರೆ.

    ಸಂತ್ರಸ್ತೆಯ ತಂದೆ ಈ ಕುರಿತು ಪ್ರತಿಕ್ರಿಯಿಸಿ, ಜೈ ಶಂಕರ್ ಬಾಲಕಿಯ ಮೊಬೈಲ್‍ಗೆ ಕರೆ ಮಾಡಿದ್ದಾನೆ. ನಂತರ ಊರಿನ ಹೊರಗಡೆ ನನ್ನನ್ನು ಭೇಟಿಯಾಗು ಸೂಚಿಸಿದ್ದಾನೆ. ನಂತರ ಕಾರಿನಲ್ಲಿ ತನ್ನ ಮೂವರು ಸ್ನೇಹಿತರೊಂದಿಗೆ ಆ ಸ್ಥಳಕ್ಕೆ ಜೈ ಶಂಕರ್ ತೆರಳಿದ್ದ. ನಾಲ್ವರೂ ಸೇರಿ ಅವಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದು, ಅಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿದ್ದಾರೆ.

    ಜೈ ಪ್ರಕಾಶ್, ಲುವ್ ಕುಮಾರ್ ಪಾಲ್, ಗಣೇಶ್ ಪ್ರಸಾದ್ ಹಾಗೂ ಸುಲ್ತಾನ್‍ಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಆರ್ ಪಿಎಫ್  ಪೇದೆ ಮಹೇಂದ್ರ ಕುಮಾರ್ ಯಾದವ್ ನಾಲ್ವರ ವಿರುದ್ಧ ಬಾಲಕಿಯ ತಂದೆ ಪ್ರಕರಣ ದಾಖಲಿಸಿದ್ದಾರೆ.

    ಕಾರನ್ನು ನಿಲ್ಲಿಸಿದಾಗ ಬಾಲಕಿ ಅಳಲು ಪ್ರಾರಂಭಿಸಿದ್ದು, ಆಗ ಕಾರಿನ ಸೈರನ್ ಶಬ್ದವನ್ನು ಜೋರು ಮಾಡಿದ್ದಾರೆ. ಪರಿಶೀಲನೆಗೆ ತೆರಳಿದಾಗ ಬಾಲಕಿಯನ್ನು ಕರೆದೊಯ್ದಿದ್ದ ಕಾರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರು ಮೌರ್ಯ ಅವರಿಗೆ ಸೇರಿದ್ದಾಗಿದ್ದು, ಇದರ ಮೇಲೆ ಹೇಗೆ ಪೊಲೀಸ್ ಲೋಗೋ ಹಾಕಿದ್ದ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಮಿರ್ಜಾಪುರ ಎಸ್‍ಪಿ ಧರ್ಮ ವೀರ್ ಈ ಕುರಿತು ಪ್ರತಿಕ್ರಿಯಿಸಿ, ಸಂತ್ರಸ್ತೆ ಹಾಗೂ ನಾಲ್ವರೂ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

  • ಹತ್ತನೇ ತರಗತಿ ಪುಸ್ತಕದಲ್ಲಿ ನೆಹರು ಬದಲು ಸಾರ್ವಕರ್ ಫೋಟೋ: ಎನ್‍ಎಸ್‍ಯುಐ ವಿರೋಧ

    ಹತ್ತನೇ ತರಗತಿ ಪುಸ್ತಕದಲ್ಲಿ ನೆಹರು ಬದಲು ಸಾರ್ವಕರ್ ಫೋಟೋ: ಎನ್‍ಎಸ್‍ಯುಐ ವಿರೋಧ

    ಪಣಜಿ: ಗೋವಾದ 10ನೇ ತರಗತಿ ಪುಸ್ತಕದಲ್ಲಿದ್ದ ಮಾಜಿ ಪ್ರಧಾನಿ ಜವಹಾರ್ ಲಾಲ್ ಭಾವಚಿತ್ರದ ತಗೆದು ಆರ್‌ಎಸ್‌ಎಸ್ ಸಹ ಸಂಸ್ಥಾಪಕ, ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾರ್ವಕರ್ ಫೋಟೋ ಬಳಕೆ ಮಾಡಲಾಗಿದ್ದು, ಇದಕ್ಕೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಎನ್‍ಎಸ್‍ಯುಐ) ಭಾರೀ ವಿರೋಧ ವ್ಯಕ್ತಪಡಿಸಿದೆ.

    10ನೇ ತರಗತಿಯ ಸಮಾಜವಿಜ್ಞಾನ ವಿಷಯ ಪುಸ್ತಕದಲ್ಲಿ ನೆಹರು ಫೋಟೋ ಇತ್ತು. ಅದು 1935ರಲ್ಲಿ ಮಹಾರಾಷ್ಟ್ರದ ವಾರ್ದಾದಲ್ಲಿ ಜವಹಾರ್ ಲಾಲ್ ನೆಹರು ಅವರು ಮಹಾತ್ಮಾ ಗಾಂಧೀಜಿ ಹಾಗೂ ಮೌಲಾನ್ ಅಬ್ದುಲ್ ಕಲಾಂ ಆಜಾದ್ ಜೊತೆಗೆ ಇದ್ದ ಭಾವಚಿತ್ರ. ಆದರೆ ನೆಹರು ಫೋಟೋ ತಗೆದು ಅಲ್ಲಿ ವಿ.ಡಿ.ಸಾರ್ವಕರ್ ಫೋಟೋ ಹಾಕಲಾಗಿದೆ ಎಂದು ದೂರಿದೆ.

    ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಲಪಂತಿಯ ವಿಚಾರಗಳನ್ನು ಎತ್ತಿ ಹಿಡಿಯುತ್ತಿದೆ. ಅಷ್ಟೇ ಅಲ್ಲದೇ ಬಿಜೆಪಿಯವರು ಇತಿಹಾಸವನ್ನು ತಿರುಚಲು ಹಾಗೂ ಸ್ವಾತಂತ್ರ್ಯದಲ್ಲಿ ಕಾಂಗ್ರೆಸ್ ಕೊಡುಗೆಯನ್ನು ಮರೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎನ್‍ಎಸ್‍ಯುಐ ಗೋವಾ ರಾಜ್ಯ ಅಧ್ಯಕ್ಷ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮುಂದಿನ ದಿನಗಳಲ್ಲಿ ಮಹಾತ್ಮಾ ಗಾಂಧಿ ಕಾಂಗ್ರೆಸ್ಸಿಗೆ ಸೇರಿದವರು ಎನ್ನುವ ಕಾರಣಕ್ಕೆ ಅವರ ಫೋಟೋವನ್ನು ತಗೆದು ಹಾಕಬಹುದು. 60 ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿದೆ ಎನ್ನುವುದದು ಬಿಜೆಪಿ ವಾದವಾಗಿದೆ. ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಹಿರಿಯ ನಾಯಕರು ನೀಡಿದ ಕೊಡುಗೆಯನ್ನು ಇತಿಹಾಸದಿಂದ ಅಳಿಸಿ ಹಾಕಲು ಬಿಜೆಪಿಯವರಿಗೆ ಅವರಿಗೆ ಸಾಧ್ಯವಿಲ್ಲ ಎಂದು ಹೇಳಿದರು.

    ಫೋಟೋ ಬದಲಾಯಿಸಿದ್ದಕ್ಕೆ ಕಾರಣ ನೀಡುವಂತೆ ಉನ್ನತ ಹಾಗೂ ಮಾಧ್ಯಮಿಕ ಪರೀಕ್ಷಾ ಮಂಡಳಿಗೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ನಿರ್ದೇಶಕ ಗಜಾನನ ಪಿ ಭಟ್ ತಿಳಿಸಿದ್ದು, ಇತ್ತ ಶಿಕ್ಷಣ ಮಂಡಳಿಯ ಅಧ್ಯಕ್ಷ ರಾಮಕೃಷ್ಣ ಸಮಂತ್ ತನಿಖೆಗೆ ಆದೇಶ ನೀಡಿದ್ದಾರೆ.

    ವೃತ್ತಿ ಅನುಭವ ಹಾಗೂ ಹಿನ್ನಲೆ ಆಧಾರದ ಮೇಲೆ ಶಿಕ್ಷಕರನ್ನು ಪುಸ್ತಕದ ವಿಷಯ ಬದಲಾವಣೆಗೆ ಆಯ್ಕೆ ಮಾಡಲಾಗುತ್ತದೆ. ಎಲ್ಲ ಕಡೆಗೂ ಬದಲಾವಣೆ ಮಾಡುವ ಅಧಿಕಾರ ಅವರಿಗೆ ಇರುವುದಿಲ್ಲ. ಅವಶ್ಯಕತೆ ಇರುವಲ್ಲಿ ವಿಷಯ ಬದಲಾವಣೆಗೆ ಸಲಹೆ ನೀಡಬಹುದು. ಆದರೆ ಅವರು ಏಕೆ ಫೋಟೋ ಬದಲಾವಣೆ ಮಾಡಿದರು ಎನ್ನುವುದು ತಿಳಿದಿಲ್ಲ. ಹೀಗಾಗಿ ತನಿಖೆಗೆ ಆದೇಶ ನೀಡಲಾಗಿದೆ ಎಂದು ರಾಮಕೃಷ್ಣ ಸಮಂತ್ ತಿಳಿಸಿದ್ದಾರೆಂದು ವರದಿಯಾಗಿದೆ.

    ಮೇ ತಿಂಗಳಿನಲ್ಲಿ ಹೊಸ ಪಠ್ಯ ಬಿಡುಗಡೆಯಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.

  • ಮುಂದಿನ ವರ್ಷದಿಂದ ಸಿಬಿಎಸ್‍ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ- 6 ಪೇಪರ್ ಕಡ್ಡಾಯ

    ಮುಂದಿನ ವರ್ಷದಿಂದ ಸಿಬಿಎಸ್‍ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ- 6 ಪೇಪರ್ ಕಡ್ಡಾಯ

    ನವದೆಹಲಿ: ಸಿಬಿಎಸ್‍ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಹೆಚ್ಚಿನ ಹೊರೆಯಾಗಲಿದೆ. 10ನೇ ತರಗತಿ ವಿದ್ಯಾರ್ಥಿಗಳು ಐದು ವಿಷಯಗಳ ಬದಲು ಕಡ್ಡಾಯವಾಗಿ 6 ವಿಷಯಗಳನ್ನು ಅಭ್ಯಾಸ ಮಾಡಬೇಕಾಗಿದೆ.

    ಸಿಬಿಎಸ್‍ಇನಲ್ಲಿ ಸದ್ಯ ಎರಡು ಭಾಷಾ ವಿಷಯಗಳು, ಸಾಮಾಜ ವಿಜ್ಞಾನ, ಗಣಿತ ಹಾಗೂ ವಿಜ್ಞಾನ ವಿಷಯಗಳಿವೆ. ಆದ್ರೆ 2017-18ನೇ ಶೈಕ್ಷಣಿಕ ವರ್ಷದಿಂದ ವೃತ್ತಿಪರ ವಿಷಯ ಕೂಡ ಸೇರ್ಪಡೆಯಾಗ್ತಿದೆ.

    ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಷನ್ ಫ್ರೇಮ್‍ವರ್ಕ್(ಎನ್‍ಎಸ್‍ಕ್ಯೂಎಫ್) ಅಡಿ ಸಿಬಿಎಸ್‍ಇ ವೃತ್ತಿಪರ ವಿಷಯವನ್ನ ಕಡ್ಡಾಯಗೊಳಿಸಿದೆ. ವಿದ್ಯಾರ್ಥಿಯು ವಿಜ್ಞಾನ, ಗಣಿತ ಅಥವಾ ಸಮಾಜ ವಿಜ್ಞಾನ ಈ ಮೂರರಲ್ಲಿ ಯಾವುದೇ ಒಂದು ವಿಷಯದಲ್ಲಿ ಅನುತ್ತೀರ್ಣವಾದ್ರೆ ಆಗ ಅದನ್ನು 6ನೇ ವಿಷಯದೊಂದಿಗೆ ಬದಲಾಯಿಸಲ್ಪಡುತ್ತದೆ. ಅದರಂತೆ ಫಲಿತಾಂಶವನ್ನು ಲೆಕ್ಕ ಹಾಕಲಾಗುತ್ತದೆ ಎಂದು ಸಿಬಿಎಸ್‍ಇ ಸುತ್ತೋಲೆಯಲ್ಲಿ ಹೇಳಿದೆ. ಒಂದು ವೇಳೆ ವಿದ್ಯಾರ್ಥಿಯು ಅನುತ್ತೀರ್ಣವಾದ ವಿಷಯದ ಪರೀಕ್ಷೆಯನ್ನು ಮತ್ತೊಮ್ಮೆ ಬರೆಯಲು ಇಚ್ಛಿಸಿದ್ರೆ ವಿಭಾಗೀಯ ಪರೀಕ್ಷೆಯಲ್ಲಿ ಬರೆಯಬಹುದು ಎಂದು ಹೇಳಲಾಗಿದೆ.

    6ನೇ ಪತ್ರಿಕೆಗೆ 13 ವಿಷಯಗಳ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಡೈನಮಿಕ್ ರೀಟೇಲಿಂಗ್, ಇನ್ಫರ್ಮೇಷನ್ ಟೆಕ್ನಾಲಜಿ, ಸೆಕ್ಯೂರಿಟಿ, ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್‍ನೆಸ್, ಬ್ಯಾಂಕಿಂಗ್ ಮತ್ತು ಇನ್ಶೂರೆನ್ಸ್ ಹೀಗೆ ನೀಡಲಾಗಿರುವ 13 ವಿಷಯಗಳಲ್ಲಿ ಒಂದನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕಿದೆ.

    ಪರೀಕ್ಷೆಯ ಗರಿಷ್ಠ ಅಂಕ 100, ಅದರಲ್ಲಿ 50 ಅಂಕ ಬೋರ್ಡ್ ಪರೀಕ್ಷೆ ಹಾಗು ಇನ್ನುಳಿದ 50 ಅಂಕ ಆಂತರಿಕ ಮೌಲ್ಯಮಾಪನವಾಗಿ ವಿಂಗಡಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿಯು ಉತ್ತೀರ್ಣವಾಗಲು ಬೋರ್ಡ್ ಪರೀಕ್ಷೆ ಹಾಗೂ ಆಂತರಿಕ ಮೌಲ್ಯಮಾಪನ ಎರಡರಲ್ಲೂ ಶೇ. 33ರಷ್ಟು ಅಂಕ ಪಡೆಯಬೇಕಿದೆ.