Tag: ಹೊಸ ಸಚಿವರು

  • ಕುತೂಹಲ ಹೆಚ್ಚಿಸಿದೆ ಜಿಲ್ಲಾ ಉಸ್ತುವಾರಿ ನೇಮಕ!

    ಕುತೂಹಲ ಹೆಚ್ಚಿಸಿದೆ ಜಿಲ್ಲಾ ಉಸ್ತುವಾರಿ ನೇಮಕ!

    ಬೆಂಗಳೂರು: ಸಂಪುಟ ವಿಸ್ತರಣೆ ಆಯ್ತು. 10 ಶಾಸಕರು ಮಿನಿಸ್ಟರ್ ಆದ್ರೂ ಅವರಿಗೆ ಈಗ ಎರಡು ಚಿಂತೆ. ಒಂದು ಖಾತೆ ಚಿಂತೆಯಾದರೆ, ಇನ್ನೊಂದು ಜಿಲ್ಲಾ ಉಸ್ತುವಾರಿ ಚಿಂತೆ. ನೂತನ ಸಚಿವರಲ್ಲಿ ಮೂರ್ನಾಲ್ಕು ಮಂದಿ ಉಸ್ತುವಾರಿಗೆ ಟವೆಲ್ ಹಾಕಿದ್ದಾರೆ. ಸಾಹುಕಾರ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ನನಗೆ ಬೇಕು ಅಂತಾ ಬೇಡಿಕೆ ಇಟ್ಟಿರೋದರ ಜೊತೆಗೆ ಬೆಳಗಾವಿ ಜಿಲ್ಲೆ ಉಸ್ತುವಾರಿ ಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ.

    ಈ ನಡುವೆ ಬೆಂಗಳೂರು ಉಸ್ತುವಾರಿಯನ್ನು ಯಾರಿಗೂ ಕೊಡದೇ ಮುಖ್ಯಮಂತ್ರಿ ಯಡಿಯೂರಪ್ಪನವರೇ ಇಟ್ಟುಕೊಂಡಿದ್ದಾರೆ. ಅಶೋಕ್, ಅಶ್ವಥ್ ನಾರಾಯಣ್ ಅವರ ಗುದ್ದಾಟ ಜೋರಾಗಬಹುದೆಂದು ಬೆಂಗಳೂರು ನಗರ ಉಸ್ತುವಾರಿ ಸಿಎಂ ಬಳಿಯೇ ಇದೆ. ಅಷ್ಟೇ ಅಲ್ಲ ಬೆಂಗಳೂರು ಅಭಿವೃದ್ಧಿ ಖಾತೆಯೂ ಸಿಎಂ ಯಡಿಯೂರಪ್ಪ ಬಳಿ ಇದೆ. ಹಾಗಾಗಿ ನೂತನ ಸಚಿವರಿಗೆ ಬೆಂಗಳೂರು ಉಸ್ತುವಾರಿ ಸಿಗುವುದು ಅನುಮಾನ ಅನ್ನೋ ಮಾತುಗಳು ಕೇಳಿಬಂದಿವೆ.

    ಈ ನಡುವೆ ಹಾಸನ ಉಸ್ತುವಾರಿ ಎಸ್.ಟಿ.ಸೋಮಶೇಖರ್‍ಗೋ? ಡಿಸಿಎಂ ಅಶ್ವಥ್ ನಾರಾಯಣ್‍ಗೋ? ಅನ್ನೋ ಚರ್ಚೆ ಶುರುವಾಗಿದ್ದು, ಒಕ್ಕಲಿಗ ಸಚಿವರನ್ನೇ ಹಾಸನ ಜಿಲ್ಲೆ ಉಸ್ತುವಾರಿಯನ್ನಾಗಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ರಾಮನಗರ, ಹಾಸನ ಎರಡು ಪಕ್ಷ ಸಂಘಟನೆಯಿಂದ ಬಿಜೆಪಿಗೆ ಮಹತ್ವದ್ದು, ಎರಡು ಕಡೆ ಒಕ್ಕಲಿಗರನ್ನೇ ಉಸ್ತುವಾರಿಯನ್ನಾಗಿ ನೇಮಿಸಲು ಪಕ್ಷ ತಂತ್ರ ಹೂಡಿದೆ ಎನ್ನಲಾಗಿದೆ. ಇನ್ನೊಂದೆಡೆ ಬಳ್ಳಾರಿಗೆ ಆನಂದ್ ಸಿಂಗ್‍ಗೆ ಉಸ್ತುವಾರಿ ಕೊಟ್ಟರೆ ರೆಡ್ಡಿ, ಶ್ರೀರಾಮುಲು ಟೀಂ ಕೆಂಡಾಮಂಡಲವಾಗುತ್ತಾರಾ ಅನ್ನೋ ಚರ್ಚೆಯೂ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಕುತೂಹಲ ಮೂಡಿಸಿದೆ.

    ಜಿಲ್ಲಾಉಸ್ತುವಾರಿಗಳ ಸಂಭವನೀಯ ಲಿಸ್ಟ್..!
    > ರಮೇಶ್ ಜಾರಕಿಹೊಳಿ – ಬೆಳಗಾವಿ
    > ಬಿ.ಸಿ.ಪಾಟೀಲ್ – ದಾವಣಗೆರೆ
    > ಎಸ್.ಟಿ.ಸೋಮಶೇಖರ್ – ಹಾಸನ
    > ಸುಧಾಕರ್ – ಚಿಕ್ಕಬಳ್ಳಾಪುರ
    > ನಾರಾಯಣಗೌಡ – ಮಂಡ್ಯ
    > ಆನಂದ್ ಸಿಂಗ್ – ಬಳ್ಳಾರಿ
    > ಶಿವರಾಂ ಹೆಬ್ಬಾರ್ – ಉತ್ತರ ಕನ್ನಡ
    > ಬೈರತಿ ಬಸವರಾಜು – ಬೆಂಗಳೂರು ಗ್ರಾಮಾಂತರ
    > ಗೋಪಾಲಯ್ಯ – ಕೊಡಗು
    > ಶ್ರೀಮಂತಗೌಡ ಪಾಟೀಲ್ – ಯಾದಗಿರಿ

  • ಹೊಸ ಸಚಿವರಿಗೆ ನಯಾ ‘ಟೈಂ ಟೇಬಲ್’ ಕೊಟ್ಟ ಕಟೀಲ್

    ಹೊಸ ಸಚಿವರಿಗೆ ನಯಾ ‘ಟೈಂ ಟೇಬಲ್’ ಕೊಟ್ಟ ಕಟೀಲ್

    ಬೆಂಗಳೂರು: ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಟೈಂ ಟೇಬಲ್ ಫಿಕ್ಸ್ ಮಾಡಿದ್ದಾರೆ.

    ಈ ಟೈಂ ಟೇಬಲ್‍ನೊಂದಿಗೆ ಮೌಖಿಕ ಆದೇಶ ಹೊರಡಿಸಿರುವ ನಳಿನ್, ವಾರಕ್ಕೊಂದು ಬಾರಿ ಎರಡು ಗಂಟೆ ಟೈಂ ಪಕ್ಷದ ಕಚೇರಿಗೆ ಬರಲೇಬೇಕು. ಜೊತೆಗೆ ಕಾರ್ಯಕರ್ತರ ಸಮಸ್ಯೆ ಆಲಿಸಲೇಬೇಕು ಎಂದು ಹೊಸ ಸಚಿವರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

    ಕಚೇರಿಗೆ ಬಂದು ಮುಕ್ತವಾಗಿ ಸಭೆಯಲ್ಲಿ ಭಾಗಿಯಾಗಬೇಕು. ವರಿಷ್ಠರ ಜೊತೆಗೆ ಹೊಸ ಸಚಿವರು ಸಹ ಕಾರ್ಯಕರ್ತರ ಸಮಸ್ಯೆ, ಅಹವಾಲು ಆಲಿಸಬೇಕು ಎಂದು ಆದೇಶ ಮಾಡಿದ್ದಾರಂತೆ. ಇಂದು ನಾರಾಯಣಗೌಡ ಕಚೇರಿಗೆ ಬರುತ್ತಿದ್ದ ಹಾಗೆ ಈ ಸೂಚನೆಯ ಬಗ್ಗೆ ಸಿಬ್ಬಂದಿ ಮಾಹಿತಿ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ನಾರಾಯಣ ಗೌಡ, ಪಕ್ಷದ ವರಿಷ್ಠರು ಈ ಟೈಂ ಟೇಬಲ್ ಫಿಕ್ಸ್ ಮಾಡಿದ್ದಾರೆ. ಈ ಬಗ್ಗೆ ನಮಗೂ ಮೌಖಿಕ ಆದೇಶ ಬಂದಿದೆ. ಇದನ್ನು ಪಾಲನೆ ಮಾಡುತ್ತೇವೆ ಎಂದರು.