Tag: ಹೊಸ ಕಾರು

  • ಹಳೆಯ ಕಾರು ಗುಜುರಿಗೆ ಹಾಕಿ ಹೊಸ ಕಾರು ಖರೀದಿಸಿದರೆ ಶೇ.5 ರಿಯಾಯಿತಿ

    ಹಳೆಯ ಕಾರು ಗುಜುರಿಗೆ ಹಾಕಿ ಹೊಸ ಕಾರು ಖರೀದಿಸಿದರೆ ಶೇ.5 ರಿಯಾಯಿತಿ

    ನವದೆಹಲಿ: ಹಳೆಯ ಕಾರನ್ನು ಗುಜು​ರಿಗೆ ಹಾಕಿ ಹೊಸ ಕಾರು ಖರೀ​ದಿ​ಸುವ ಗ್ರಾಹ​ಕ​ರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಗುಡ್‌ನ್ಯೂಸ್‌ ನೀಡಿದ್ದಾರೆ.

    ಸುದ್ದಿ ಸಂಸ್ಥೆಯ ಜೊತೆ ಮಾತನಾಡಿದ ಅವರು, 2021-22ನೇ ಬಜೆ​ಟ್‌​ನಲ್ಲಿ ಪ್ರಕಟಿಸಿದಂತೆ ನೂತನ ವಾಹನ ಖರೀದಿ ನೀತಿಯಡಿ ಹಳೇ ವಾಹ​ನ​ಗ​ಳನ್ನು ಗುಜು​ರಿಗೆ ಹಾಕಿ ಹೊಸ ವಾಹನ ಖರೀದಿಸಿದರೆ ಶೇ.5ರಷ್ಟು ರಿಯಾ​ಯಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.

    ನೀತಿಯ ನಾಲ್ಕು ಪ್ರಮುಖ ಅಂಶಗಳಿವೆ. ರಿಯಾಯಿತಿಯ ಹೊರತಾಗಿ, ಹಳೆಯ ಮಾಲಿನ್ಯಕಾರಕ ವಾಹನಗಳಿಗೆ ಹಸಿರು ತೆರಿಗೆ ಮತ್ತು ಇತರ ಸುಂಕಗಳನ್ನು ವಿಧಿಸಲಾಗುತ್ತದೆ. ಈ ವಾಹನಗಳು ಸ್ವಯಂಚಾಲಿತ ಸೌಲಭ್ಯಗಳಲ್ಲಿ ಕಡ್ಡಾಯವಾಗಿ ಫಿಟ್‌ನೆಸ್ ಮತ್ತು ಮಾಲಿನ್ಯ ಪರೀಕ್ಷೆಗಳಿಗೆ ಒಳಗಾಬೇಕಾಗುತ್ತದೆ. ಇದಕ್ಕಾಗಿ ದೇಶಾದ್ಯಂತ ಸ್ವಯಂಚಾಲಿತ ಫಿಟ್‌ನೆಸ್ ಕೇಂದ್ರಗಳು ತೆರೆಯಲಾಗುತ್ತದೆ. ಈ ನಿಟ್ಟಿನಲ್ಲಿ ಈಗ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಗಡ್ಕರಿ ವಿವರಿಸಿದರು.

    ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಅಡಿಯಲ್ಲಿ ಸ್ವಯಂಚಾಲಿತ ಫಿಟ್‌ನೆಸ್ ಪರೀಕ್ಷೆಗಳನ್ನು ಸ್ಥಾಪಿಸಲಾಗುವುದು ಮತ್ತು ಗುಜುರಿ ಕೇಂದ್ರಗಳನ್ನು ಸ್ಥಾಪಿಸಲು ಖಾಸಗಿ ಪಾಲುದಾರರು ಮತ್ತು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸಹಾಯ ಮಾಡಲಿದೆ ಎಂದು ಅವರು ತಿಳಿಸಿದರು.

    ಸ್ವಯಂಚಾಲಿತ ಪರೀಕ್ಷೆಗಳಲ್ಲಿ ಫೇಲ್‌ ಆದ ವಾಹನಗಳಿಗೆ ಭಾರೀ ದಂಡವನ್ನು ವಿಧಿಸಲಾಗುವುದರ ಜೊತೆ ವಾಹನವನ್ನು ಜಪ್ತಿ ಮಾಡಲಾಗುತ್ತದೆ. ಈ ನೀತಿಯು ವಾಹನ ವಲಯಕ್ಕೆ ವರದಾನವಾಗಲಿದ್ದು, ಇದರಿಂದಾಗಿ ಭಾರೀ ಉದ್ಯೋಗ ದೊರೆಯುತ್ತದೆ. ವಾಹನಗಳಿಗೆ ಬೇಡಿಕೆ ಹೆಚ್ಚಾಗುವ ಕಾರಣ ಆದಾಯ ಏರಿಕೆ ಆಗಲಿದೆ. ಪ್ರಸ್ತುತ ಆಟೋಮೊಬೈಲ್‌ ಕ್ಷೇತ್ರ 4.5 ಲಕ್ಷ ಕೋಟಿ ರೂ. ವಾರ್ಷಿಕ ವ್ಯವಹಾರ ನಡೆಸುತ್ತಿದೆ. ನೀತಿ ಜಾರಿಗೆ ಬಂದರೆ ವರ್ಷದಲ್ಲೇ 10 ಲಕ್ಷ ಕೋಟಿ ರೂ.ವ್ಯವಹಾರ ನಡೆಸುವ ಮೂಲಕ ಭಾರತ ಅಟೋಮೊಬೈಲ್‌ ಹಬ್‌ ಆಗಿ ಪರಿವರ್ತನೆಯಾಗಲಿದೆ ಎಂದು ಅವರು ವಿವರಿಸಿದರು.

    ಗುಜುರಿಗೆ ಹಾಕಿದ ಸ್ಟೀಲ್‌, ಪ್ಲಾಸ್ಟಿಕ್‌, ರಬ್ಬರ್‌, ಅಲ್ಯೂಮಿನಿಯಂ ಇತ್ಯಾದಿ ವಸ್ತುಗಳನ್ನು ಮರು ಬಳಕೆ ಮಾಡುವ ಕಾರಣ ಅಟೋಮೊಬೈಲ್‌ ಬಿಡಿ ಭಾಗಗಳ ಬೆಲೆ ಶೇ.30 ರಿಂದ 40 ರಷ್ಟು ಕಡಿಮೆಯಾಗಲಿದೆ. ಹೊಸ ನೀತಿಯಿಂದ ಉತ್ತಮ ಮೈಲೇಜ್‌ ಮತ್ತು ಹೊಸ ತಂತ್ರಜ್ಞಾನ ಹೊಂದಿರುವ ವಾಹನಗಳಿಗೆ ಉತ್ತೇಜನ ಸಿಗಲಿದೆ. ಇದರಿಂದಾಗಿ 18 ಲಕ್ಷ ಕೋಟಿ ಕಚ್ಚಾ ತೈಲ ಆಮದು ಶುಲ್ಕದಲ್ಲಿ 8 ಲಕ್ಷ ಕೋಟಿ ಇಳಿಕೆಯಾಗಲಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: 20 ವರ್ಷದ ಹಳೆಯ ವಾಹನಗಳು ಗುಜುರಿಗೆ – ಸೀತಾರಾಮನ್‌ ಹೇಳಿದ್ದು ಏನು? ಏನಿದು ಗುಜುರಿ ನೀತಿ?

    ಪ್ರಸ್ತುತ ಭಾರತದಲ್ಲಿ 20 ವರ್ಷ ಮೇಲ್ಪಟ್ಟ 51 ಲಕ್ಷ, 15 ವರ್ಷ ಮೇಲ್ಪಟ್ಟ 34 ಲಕ್ಷ ಲಘು ಮೋಟಾರು ವಾಹನಗಳಿವೆ. 15 ವರ್ಷ ಮೇಲ್ಪಟ್ಟ 17 ಲಕ್ಷ ಮಧ್ಯಮ ಮತ್ತು ಭಾರೀ ಗಾತ್ರದ ವಾಹನಗಳಿವೆ. ಈ ವಾಹನಗಳು ಯಾವುದೇ ಫಿಟ್‌ನೆಸ್‌ ಪ್ರಮಾಣಪತ್ರವನ್ನು ಹೊಂದಿಲ್ಲ. ಹೊಸ ವಾಹನಗಳಿಗೆ ಹೋಲಿಸಿದರೆ ಈ ವಾಹನಗಳು 10-12 ಪಟ್ಟು ಮಾಲಿನ್ಯವನ್ನು ಹೊರ ಹಾಕುತ್ತಿವೆ.

    ಮೆಟಲ್‌(ಲೋಹ) ತ್ಯಾಜ್ಯ ಮರುಬಳಕೆ, ಸುಧಾರಿತ ಸುರಕ್ಷತೆ, ವಾಯುಮಾಲಿನ್ಯ ಮತ್ತು ಇಂಧನ ಆಮದು ಕಡಿಮೆ ಮಾಡುವುದರ ಜೊತೆಗೆ ಹೂಡಿಕೆಯನ್ನು ಉತ್ತೇಜಿಸಲು ಹೊಸ ನೀತಿ ಸಹಾಯವಾಗಲಿದೆ.

    ಬಜೆಟ್‌ ಭಾಷಣದಲ್ಲಿ ಸ್ವಯಂಪ್ರೇರಿತ ಗುಜುರಿ ನೀತಿ ಜಾರಿಯ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಸ್ತಾಪ ಮಾಡಿದ್ದಾರೆ. 20 ವರ್ಷ ಮೇಲ್ಪಟ್ಟ ಖಾಸಗಿ ವಾಹನ, 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಿದ್ದರು.

  • ದುಬಾರಿ ಕಾರಿಗೆ ಒಡತಿಯಾದ ಬುಲ್ ಬುಲ್ ರಚಿತಾ ರಾಮ್ – ಕಾರಿನ ಗುಣವೈಶಿಷ್ಟ್ಯಗಳೇನು?

    ದುಬಾರಿ ಕಾರಿಗೆ ಒಡತಿಯಾದ ಬುಲ್ ಬುಲ್ ರಚಿತಾ ರಾಮ್ – ಕಾರಿನ ಗುಣವೈಶಿಷ್ಟ್ಯಗಳೇನು?

    ಬೆಂಗಳೂರು: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ದುಬಾರಿ ಬೆಲೆಯ ಮರ್ಸಿಡಿಸ್ ಬೆಂಜ್ ಕಾರನ್ನು ಖರೀದಿಸಿದ್ದಾರೆ

    ರಚಿತಾ ರಾಮ್ ಅವರು ತನ್ನ ನೆಚ್ಚಿನ ಕಲರ್ ನೀಲಿ ಬಣ್ಣದ ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ 350 ಡಿ ಗ್ರ್ಯಾಂಡ್ ಎಡಿಶನ್ ಕಾರನ್ನು ಬರೋಬ್ಬರಿ 1.6 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದಾರೆ. ಹೊಸ ‘ಅತಿಥಿ’ಯನ್ನು ರಚಿತಾ ರಾಮ್ ಕೇಕ್ ಕಟ್ ಮಾಡಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

    ಬೆಂಗಳೂರಿನ ಸುಂದರಂ ಮೋಟಾರ್ಸ್ ಶೋರೂಮ್‍ನಿಂದ ಈ ಕಾರನ್ನು ಖರೀದಿಸಿದ್ದಾರೆ. ತಮ್ಮ ಶೋ ರೊಂನಲ್ಲಿ ಖರೀದಿಸಿದ ರಚಿತಾ ರಾಮ್ ಅವರಿಗೆ ಶೋರೂಮ್ ಮಾಲೀಕರು ಶಾಲು ಹೊದಿಸಿ ಮೈಸೂರು ಪೇಟ ಹಾಕಿ ಅಭಿನಂದಿಸಿದ್ದಾರೆ. ಈ ವೇಳೆ ರಚಿತಾ ರಾಮ್ ಅವರ ಕೈಯಲ್ಲಿ ಕೇಕ್ ಕಟ್ ಮಾಡಿಸಿ ಕಾರನ್ನು ನೀಡಿದ್ದಾರೆ.

    ಕಾರಿನ ವಿಶೇಷತೆಗಳೇನು?
    ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ 350 ಡಿ ಗ್ರ್ಯಾಂಡ್ ಎಡಿಶನ್ ಕಾರು ಇದಾಗಿದ್ದು, ಇದರ ಬೆಲೆ ಆನ್‍ರೋಡ್ ಬರೋಬ್ಬರಿ 1.12 ಕೋಟಿ ಇದೆ. ಈ ಕಾರು ಪ್ರತಿ ಲೀಟರ್ ಡೀಸೆಲ್‍ಗೆ 10 ಕಿ.ಮೀ ಮೈಲೇಜ್ ನೀಡುತ್ತದೆ. 2,987 ಸಿಸಿ ಎಂಜಿನ್ ಸಾಮರ್ಥ್ಯ ಇರುವ ಈ ಕಾರು 3,250 ಕೆ.ಜಿ ತೂಕವಿದೆ. ಇದರ ಇಂಜಿನ್ ಅಲ್ಲಿ 6 ಸಿಲಿಂಡರ್ ಗಳನ್ನು ಅಳವಡಿಸಿದ್ದು, 254ಬಿಎಚ್‍ಪಿ ಪವರ್ ಮತ್ತು 620 ಎನ್‍ಎಂ ಟಾರ್ಕ್ ಉತ್ಪಾದಿಸಬಲ್ಲ ಶಕ್ತಿ ಹೊಂದಿದೆ. ಒಟ್ಟು ಏಳು ಜನರು ಒಂದು ವೇಳೆ ಕುಳಿತುಕೊಳ್ಳಬಲ್ಲ ಸೀಟಿನ ವ್ಯವಸ್ಥೆ ಇದೆ.

    ಈ ಕಾರಿನ ಉದ್ದ 5130 ಮಿ.ಮೀ.(16.8 ಅಡಿ) ಇದ್ದರೆ ಅಗಲ 1934 ಮಿ.ಮೀ. (6.3 ಅಡಿ) ಇದೆ. ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ 350ಡಿ ಒಟ್ಟು ಎತ್ತರ 1850 ಮಿ.ಮೀ. (6.06 ಅಡಿ) ಇದೆ. ಈ ಕಾರಿನಲ್ಲಿ ಗೇರಿನ ವ್ಯವಸ್ಥೆ ಸ್ವಯಂ ಚಾಲಿತವಾಗಿರಲಿದೆ. ಈ ಕಾರಿನಲ್ಲಿ ಎಬಿಎಸ್ ಸೇರಿದಂತೆ ಹೆಚ್ಚು ಸುರಕ್ಷತೆಯ ಬ್ರೇಕಿಂಗ್ ಸಿಸ್ಟಮ್ ಇದೆ.

    ಮೂಲತ ಬೆಂಗಳೂರಿನವರಾದ ರಚಿತಾ ರಾಮ್ ಅವರ ಹೆಸರು ಬಿಂದಿಯಾ ರಾಮ್ ಚಿತ್ರರಂಗಕ್ಕೆ ಬಂದ ನಂತರ ಅವರ ಹೆಸರನ್ನು ರಚಿತಾ ರಾಮ್ ಎಂದು ಇಟ್ಟುಕೊಂಡಿದ್ದಾರೆ. ಖಾಸಗಿ ವಾಹಿನಿಗಳಲ್ಲಿ ಬರುವ ಧಾರಾವಾಹಿಗಳಲ್ಲಿ ನಟನೆ ಮಾಡುತ್ತಿದ್ದ ರಚಿತಾ 2013 ರಲ್ಲಿ ತೆರೆಕಂಡ ಬುಲ್ ಬುಲ್ ಸಿನಿಮಾದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ಜೊತೆ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದರು. ಇದಾದ ಬಳಿಕ ಚಿತ್ರರಂಗದಲ್ಲಿ ತನ್ನದೇ ಅದ ಹೆಸರು ಮಾಡಿದ ರಚಿತಾ ಡಿಂಪಲ್ ಕ್ವೀನ್ ಆಗಿ ಮಿಂಚುತ್ತಿದ್ದಾರೆ.

    ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ರಚಿತಾ ರಾಮ್ ಅವರು, ದರ್ಶನ್, ಸುದೀಪ್, ಗಣೇಶ್, ಶಿವಣ್ಣ, ಪುನಿತ್, ಉಪೇಂದ್ರ ಸೇರಿದಂತೆ ಹಲವಾರು ನಟರ ಜೊತೆ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕಥಕ್ ಮತ್ತು ಭರತನಾಟ್ಯ ತರಬೇತಿ ಪಡೆದಿರುವ ರಚಿತಾ ತುಂಬಾ ಒಳ್ಳೆಯ ನೃತ್ಯಗಾರ್ತಿಯಾಗಿದ್ದಾರೆ. ರಚಿತಾ ರಾಮ್ ಮತ್ತು ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್‍ಭವ ಚಿತ್ರ ಇತ್ತೀಚೆಗೆ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ.

  • ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಬಸ್ ಟಿಕೆಟ್ ದರ ಏರಲ್ಲ: ಸಾರಿಗೆ ಸಚಿವ ಡಿ ಸಿ ತಮ್ಮಣ್ಣ

    ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಬಸ್ ಟಿಕೆಟ್ ದರ ಏರಲ್ಲ: ಸಾರಿಗೆ ಸಚಿವ ಡಿ ಸಿ ತಮ್ಮಣ್ಣ

    ಬೆಂಗಳೂರು: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪದವಿವರೆಗೆ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡುವ ನಿರ್ಧಾರವನ್ನು ಕೈಗೊಳ್ಳಲಾಗಿದ್ದು ಶೀಘ್ರದಲ್ಲೇ ಮುಖ್ಯಮಂತ್ರಿಗಳೇ ಈ ಘೋಷಣೆ ಮಾಡುತ್ತಾರೆ ಎಂದು ತಿಳಿಸಿದರು.

    ಉಚಿತ ಬಸ್ ಪಾಸ್ ನೀಡಿದರೆ ಇಲಾಖೆಗೆ ಸುಮಾರು 620 ಕೋಟಿ ರೂ. ಹೊರೆಯಾಗುತ್ತದೆ. ಇದರಲ್ಲಿ 15% ರಷ್ಟನ್ನು ಸಂಸ್ಥೆ ಭರಿಸಲಿದ್ದು ಉಳಿದದ್ದನ್ನು ಶಿಕ್ಷಣ ಇಲಾಖೆ ಅಥವಾ ಸರ್ಕಾರ ಭರಿಸಿದರೇ ಶೀಘ್ರವೇ ರಾಜ್ಯದ ಒಟ್ಟು 19.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು.

    ಖಾಸಗಿ ಡೀಸೆಲ್ ವಾಹನಗಳಿಗೆ ಕಡಿವಾಣಕ್ಕೆ ಚಿಂತನೆ ನಡೆಸಲಾಗಿದೆ. ಅಲ್ಲದೇ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಪಾರ್ಕಿಂಗ್ ಗೆ ತೊಂದರೆಯಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೊಸ ಕಾರುಗಳ ಖರೀದಿಗೆ ಪಾರ್ಕಿಂಗ್ ಸೌಲಭ್ಯ ಇದ್ದರೇ ಮಾತ್ರ ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲು ಯೋಜನೆ ರೂಪಿಸಲಾಗುವುದು. ಸಾರ್ವಜನಿಕರು ಹೆಚ್ಚಾಗಿ ಸಮೂಹ ಸಾರಿಗೆಯನ್ನು ಬಳಸಬೇಕು ಎಂದರು.

    ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳು ಬಸ್ ಟಿಕೆಟ್ ದರ ಏರಿಸುವಂತೆ ಪ್ರಸ್ತಾವನೆ ಸಲ್ಲಿಸಿವೆ. ಆದರೆ ಯಾವುದೇ ಕಾರಣಕ್ಕೂ ಬಸ್ ಟಿಕೆಟ್ ದರ ಏರಿಕೆ ಮಾಡುವುದಿಲ್ಲ. ಈ ಕುರಿತು ಮುಖ್ಯಮಂತ್ರಿಗಳು ಸಭೆ ಕರೆದಿದ್ದು, ಸಭೆಯಲ್ಲಿ ಬಸ್ ದರ ಏರಿಸುವ ಬದಲು ಸಾರಿಗೆ ಸಂಸ್ಥೆಗಳಲ್ಲಿ ಆಗುತ್ತಿರುವ ನಷ್ಟವನ್ನು ಕಡಿಮೆಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ವಿವರಿಸಿದರು.

    ನಮ್ಮ ಮೆಟ್ರೋ ಸೇವೆಯನ್ನು ಸಾರಿಗೆ ಇಲಾಖೆಯಡಿ ತರುವುದಕ್ಕೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇವೆ. ನಮ್ಮ ಮೆಟ್ರೋ ಸಾರಿಗೆ ಇಲಾಖೆಯಡಿ ಬಂದರೆ ಹಲವು ಸಮಸ್ಯೆಗಳು ಬಗೆಹರಿಯುತ್ತವೆ. ಸಾರಿಗೆ ಸಂಸ್ಥೆಯು ಮೆಟ್ರೋಗಿಂತ ಯಾವ ರೀತಿಯಿಂದಲೂ ಕಮ್ಮಿ ಇಲ್ಲ. ಆದರೆ ಸಮಯದ ಉಳಿತಾಯಕ್ಕೆ ಜನ ಮೆಟ್ರೋವನ್ನೇ ಅವಲಂಭಿಸಿರುವುದು ಅನಿವಾರ್ಯ. ಅಲ್ಲದೆ ಮೆಟ್ರೋ ಸಂಪರ್ಕಕ್ಕೆ ಸಂಸ್ಥೆಯೂ ಅನೇಕ ಹೊಸ ಬಸ್‍ಗಳನ್ನು ಕಲ್ಪಿಸಿದೆ ಎಂದು ತಿಳಿಸಿದರು.