Tag: ಹೊರರಾಜ್ಯ

  • ಕೋಟೆನಾಡಿಗೆ ಕಳ್ಳದಾರಿಯೇ ಕಂಟಕ – ಜಿಲ್ಲೆಯಲ್ಲಿ ನಿಂತಿಲ್ಲ ಅಕ್ರಮ ವಲಸಿಗರ ಪ್ರವೇಶ

    ಕೋಟೆನಾಡಿಗೆ ಕಳ್ಳದಾರಿಯೇ ಕಂಟಕ – ಜಿಲ್ಲೆಯಲ್ಲಿ ನಿಂತಿಲ್ಲ ಅಕ್ರಮ ವಲಸಿಗರ ಪ್ರವೇಶ

    ಚಿತ್ರದುರ್ಗ: ಗ್ರೀನ್ ಜೋನ್‍ನಲ್ಲಿದ್ದ ಚಿತ್ರದುರ್ಗಕ್ಕೆ ಆರಂಭದಿಂದಲೂ ಹೊರ ರಾಜ್ಯಗಳಿಂದ ಅಕ್ರಮವಾಗಿ ಕಳ್ಳದಾರಿಯಲ್ಲಿ ಬರುವವರಿಂದಲೇ ಕಂಟಕ ಶುರುವಾಗಿತ್ತು. ಆದರೆ ಇತ್ತೀಚೆಗೆ ಚಿತ್ರದುರ್ಗದಲ್ಲಿ ಕೊರೊನಾ ಹತೋಟಿಗೆ ಬಂದಿದ್ದು, ಸೋಂಕಿತರೆಲ್ಲಾ ಗುಣಮುಖರಾಗುತ್ತಿದ್ದರು. ಆದರೆ ಮತ್ತೆ ಕೋಟೆನಾಡಿಗೆ ಕಳ್ಳದಾರಿಯ ಮೂಲಕ ವಲಸಿಗರು ಪ್ರವೇಶ ಮಾಡುತ್ತಿದ್ದಾರೆ.

    ಕೊರೊನಾ ಪ್ರಾರಂಭವಾದಗಿನಿಂದಲೂ ಗ್ರೀನ್‍ಜೋನ್‍ನಲ್ಲಿದ್ದ ಚಿತ್ರದುರ್ಗಕ್ಕೆ ಅನುಮತಿ ಇಲ್ಲದೇ ಗುಜರಾತ್‍ನಿಂದ ಬಂದಿದ್ದ 15 ತಬ್ಲಿಘಿಗಳಿಂದ ಕಂಠಕ ಆರಂಭವಾಗಿತ್ತು. ನಂತರ ತಮಿಳುನಾಡಿನಿಂದ ಬಂದಿದ್ದ ಕೋಡಿಹಳ್ಳಿಯ ತಂದೆ, ಮಗಳಿಂದ ಆತಂಕ ಎದುರಾಗಿತ್ತು. ಆದರೆ ಅವರೆಲ್ಲಾ ಅದೃಷ್ಟವಶಾತ್ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು.

    ಸರ್ಕಾರವೇ ಹೊರರಾಜ್ಯಗಳಿಂದ ಬರುವವರ ಪ್ರವೇಶಕ್ಕೆ ನಿಷೇಧಾಜ್ಞೆ ಹೇರಿದೆ. ಆದರೂ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ, ನಾಗಪ್ಪನಹಳ್ಳಿ ಗೇಟ್, ಪುಟ್ಲಾರಹಳ್ಳಿ ಹಾಗೂ ಜಾಜೂರಿನ ಬಳಿ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಗುಜರಾತ್‍ನಿಂದ ಅನುಮತಿ ಇಲ್ಲದೇ ಕಳ್ಳದಾರಿಯಲ್ಲಿ ಬರುವವರ ಅಕ್ರಮ ಪ್ರವೇಶ ಮಾತ್ರ ಇನ್ನೂ ನಿಂತಿಲ್ಲ.

    ಹೀಗಾಗಿ ಮತ್ತೆ ತಮಿಳುನಾಡಿನಿಂದ ಬಂದಿರುವ ಉತ್ತರ ಪ್ರದೇಶದ 27 ಜನ ವಲಸೆ ಕಾರ್ಮಿಕರು ಸೇರಿದಂತೆ ದೆಹಲಿಯಿಂದ ಬಂದಿರುವ ಓರ್ವ ಯುವಕನಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿರೋದು ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಅಕ್ರಮ ಪ್ರವೇಶವನ್ನು ತಡೆಯಲು ಚಿತ್ರದುರ್ಗ ಜಿಲ್ಲೆಯ ಎಲ್ಲಾ ಗಡಿಭಾಗಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಆದರೆ ಜಮೀನುಗಳ ಮೂಲಕ ಹಾಗೂ ಕಳ್ಳದಾರಿಗಳಲ್ಲಿ ಕಾರ್ಮಿಕರು ಗ್ರಾಮಕ್ಕೆ ಬರುತ್ತಿದ್ದಾರೆ.

    ಹೊರರಾಜ್ಯಗಳಾದ ತಮಿಳುನಾಡು, ಉತ್ತರಪ್ರದೇಶ, ಗುಜರಾತ್ ಹಾಗೂ ದೆಹಲಿಯಿಂದ ಆಗಮಿಸಿರುವವರಲ್ಲಿ ಮಾತ್ರ ಚಿತ್ರದುರ್ಗದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅವರನ್ನು ಜನನಿಬಿಡ ಪ್ರದೇಶಗಳೆನ್ನದೇ ಸಿಕ್ಕ ಸಿಕ್ಕ ಹಾಸ್ಟಲ್‍ಗಳಲ್ಲಿ ಕ್ವಾರಂಟೈನ್ ಮಾಡುತ್ತಿದ್ದಾರೆ. ಬಳಿಕ ಅವರಲ್ಲಿ ಯಾರಿಗಾದರೂ ಪಾಸಿಟಿವ್ ಪತ್ತೆಯಾದರೆ ಅವರನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡದೇ ಜಿಲ್ಲಾಡಳಿತ ನಿರ್ಲಕ್ಷ ತೋರುತ್ತಿದೆ. ಜನರು ಅಗತ್ಯ ವಸ್ತುಗಳು ಹಾಗೂ ರೈತರು ಉಳುಮೆ ಮಾಡಲು ಬೇಕಿರುವ ಬೀಜ, ಗೊಬ್ಬರ ಖರೀದಿಸಲು ಸಹ ಹೊರಬರಲು ಯೋಚಿಸುವಂತಾಗಿದೆ ಎಂದು ಸ್ಥಳೀಯ ಮೂಡಲಗಿರಿ ಹೇಳಿದ್ದಾರೆ.

    ಮೇ 14 ರಿಂದ ಇಲ್ಲಿಯವರೆಗೆ ಹೊರರಾಜ್ಯಗಳಿಂದ ಅಕ್ರಮವಾಗಿ ಬಂದು ಚೆಕ್‍ಪೋಸ್ಟ್ ಗಳಲ್ಲಿ ಸಿಕ್ಕಂತಹ 39 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅವರಲ್ಲಿ 9 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸರ್ಕಾರ ಹೊರರಾಜ್ಯಗಳಿಂದ ಬರುವವರ ಪ್ರವೇಶಕ್ಕೆ ನಿಷೇಧ ಹೇರಿದ್ದರೂ ಸಹ ಅಕ್ರಮ ಪ್ರವೇಶದಿಂದ ಜನರು ಗ್ರಾಮಗಳಿಗೆ ಪ್ರವೇಶ ಮಾಡುತ್ತಿದ್ದಾರೆ. ಹೀಗಾಗಿ ಮತ್ತೆ ಕೋಟೆನಾಡು ಚಿತ್ರದುರ್ಗದಲ್ಲಿ ಕೊರೊನಾ ರಣಕೇಕೆಯಾಕಲಿದೆ ಎಂಬ ಭೀತಿ ಶುರುವಾಗಿದೆ.

  • ಹೊರರಾಜ್ಯದಿಂದ ಬರುವವರು ಕಡ್ಡಾಯವಾಗಿ ಕ್ವಾರಂಟೈನ್ ಕೇಂದ್ರಕ್ಕೆ: ಹಾಸನ ಡಿಸಿ ಸೂಚನೆ

    ಹೊರರಾಜ್ಯದಿಂದ ಬರುವವರು ಕಡ್ಡಾಯವಾಗಿ ಕ್ವಾರಂಟೈನ್ ಕೇಂದ್ರಕ್ಕೆ: ಹಾಸನ ಡಿಸಿ ಸೂಚನೆ

    – ಕೊರೊನಾ ಸೋಂಕಿತರ ಟ್ರಾವೆಲ್ ಹಿಸ್ಟರಿ ಬಿಡುಗಡೆ

    ಹಾಸನ: ಹಾಸನಕ್ಕೆ ಮುಂಬೈನಿಂದ ಬರಲು ಸಾವಿರಕ್ಕೂ ಹೆಚ್ಚು ಜನರ ಸೇವಾಸಿಂಧು ಮೂಲಕ ನೋಂದಣಿ ಮಾಡಿಕೊಂಡಿದ್ದು, ಹಾಸನದಲ್ಲಿ ಕೊರೊನಾ ಭೀತಿ ಮತ್ತಷ್ಟು ಹೆಚ್ಚಾಗುವ ಆತಂಕ ಮೂಡಿದೆ.

    ಗ್ರೀನ್‍ಜೋನ್ ಆಗಿದ್ದ ಹಾಸನದಲ್ಲಿ ನಿನ್ನೆ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರಿಗೆ ಮತ್ತು ಇಂದು ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಹಾಸನದಲ್ಲಿ ಸೋಂಕಿತರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ. ಸೋಂಕಿತರೆಲ್ಲರೂ ಬಾಂಬೆಯಿಂದ ವಾಪಸ್ಸಾದವರೇ ಆಗಿದ್ದಾರೆ.

    ಈ ಹಿನ್ನೆಲೆಯಲ್ಲಿ ಮುಂಬೈನಿಂದ ಹಾಸನಕ್ಕೆ ಬರುವವರು ಸಾಧ್ಯವಾದಷ್ಟು ಇದ್ದಲ್ಲೇ ಇರಲು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಮನವಿ ಮಾಡಿದ್ದಾರೆ. ಒಂದು ವೇಳೆ ಹೊರರಾಜ್ಯದಿಂದ ಹಾಸನಕ್ಕೆ ಬಂದರೆ ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿ ಇರಲು ಸೂಚನೆ ನೀಡಿದ್ದಾರೆ. ಇಂದು ಪಾಸಿಟಿವ್ ಕಂಡುಬಂದ ನಾಲ್ವರ ಟ್ರಾವೆಲ್ ಹಿಸ್ಟರಿ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ, ನಾಲ್ವರೂ ಒಂದೇ ಕುಟುಂಬದವರಾಗಿದ್ದು, ಗಂಡ ಹೆಂಡತಿ ಇಬ್ಬರು ಮಕ್ಕಳಾಗಿದ್ದಾರೆ ಎಂದಿದ್ದಾರೆ.

    ಸೋಂಕಿತರು ನಿನ್ನೆ ಮೇ 12 ರಂದು ಮುಂಬೈನಿಂದ ಸ್ವಂತ ಕಾರಿನಲ್ಲಿ ಹಾಸನಕ್ಕೆ ಬಂದಿದ್ದಾರೆ. ಈ ಕುಟುಂಬ ಎಲ್ಲೂ ಸುತ್ತಾಡದೆ ನೇರವಾಗಿ ಜಿಲ್ಲಾಡಳಿತ ಮಾಡಿರುವ ಕ್ವಾರಂಟೈನ್ ಗೆ ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪಾಸಿಟಿವ್ ಬಂದಿರುವವರ ಜೊತೆ ಕ್ವಾರಂಟೈನ್ ಕೇಂದ್ರದಲ್ಲಿದ್ದ 57 ಮಂದಿಯನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಅವರಲ್ಲಿ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾಗಿ ತಿಳಿಸಿದ್ದಾರೆ.