Tag: ಹೆಲ್ತ್ ಟಿಪ್ಸ್

  • ದಾಸವಾಳ ಜ್ಯೂಸ್ ಕುಡಿಯಿರಿ ಆರೋಗ್ಯ ಹೆಚ್ಚಿಸಿಕೊಳ್ಳಿ

    ದಾಸವಾಳ ಜ್ಯೂಸ್ ಕುಡಿಯಿರಿ ಆರೋಗ್ಯ ಹೆಚ್ಚಿಸಿಕೊಳ್ಳಿ

    ಬೇಸಿಗೆಯಲ್ಲಿ ನೀರು ಬಾಯಾರಿಕೆ ಆಗೋದು ಹೆಚ್ಚು. ಆಗ ಬರೀ ನೀರಿಗಿಂತ ತಣ್ಣಗೆ ಇರುವ ಪಾನೀಯ ಸೇವಿಸಲು ಹೆಚ್ಚು ಬಯಸುತ್ತೇವೆ. ಬಾಯಾರಿಕೆ ಕಡಿಮೆ ಮಾಡಲು ತಪ್ಪು ಪಾನೀಯ ಕುಡಿಯಬೇಕು ಎನಿಸಿದಾಗ ಕೆಮಿಕಲ್ ಮಿಶ್ರಿತ ಕೂಲ್ ಡ್ರಿಂಕ್ಸ್ ಕುಡಿಯುವ ಬದಲು ನೈಸರ್ಗಿಕ ಜ್ಯೂಸ್ ಮಾಡಿ ಕುಡಿದರೆ ಬಾಯಿಗೂ ರುಚಿ, ಆರೋಗ್ಯವೂ ಒಳ್ಳೆಯದು. ಅದರಲ್ಲೂ ಬೆಸಿಗೆಯಲ್ಲಿ ದಾಸವಾಳ ಹೂವಿನ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ ಒಳ್ಳೆದು.

    ಈ ಸ್ಪೆಷಲ್ ಹೆಲ್ತಿ ಜ್ಯೂಸ್ ಮಾಡೋದು ಹೇಗೆ? ಇದರಿಂದ ಆರೋಗ್ಯಕ್ಕೆ ಲಾಭವೇನು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

    ಬೇಕಾಗಿರುವ ಸಾಮಗ್ರಿ
    * ದಾಸಾವಾಳದ ಹೂ 20-25
    * ನೀರು 1/4 ಲೀಟರ್
    * ನಿಂಬೆ ಹಣ್ಣು 5-6
    * ಸಕ್ಕರೆ 250ಗ್ರಾಂ

    ಮಾಡುವ ವಿಧಾನ
    ಮೊದಲು 1/4 ಲೀಟರ್ ನೀರನ್ನು ಕುದಿಯಲು ಪಾತ್ರೆಯಲ್ಲಿ ಹಾಕಿ ಸ್ಟವ್ ಮೇಲೆ. ಆ ಬಳಿಕ ನೀರು ಕುದಿಯಲು ಆರಂಭಿಸಿದಾಗ ಅದಕ್ಕೆ ಸಕ್ಕರೆ ಹಾಕಿ. ಸಕ್ಕರೆ ಕರಗಿದ ನಂತರ ಗ್ಯಾಸ್ ಆಫ್ ಮಾಡಿ, ಅದಕ್ಕೆ ದಾಸವಾಳದ ಹೂಗಳ ಎಸಳನ್ನು ಹಾಕಿ(ದಾಸಾವಾಳದ ಹೂ ಹಾಕಿದ ಮೇಲೆ ನೀರನ್ನು ಕುದಿಸಬೇಡಿ), ನೀರು ತಣ್ಣಗಾದ ಮೇಲೆ ಅದನ್ನು ಸೋಸಿ ಅದಕ್ಕೆ ನಿಂಬೆ ರಸ ಸೇರಿಸಿ ಕಲಿಸಿ. ಈ ಮಿಶ್ರಣ 2 ತಿಂಗಳವರೆಗೆ ಚೆನ್ನಾಗಿರುತ್ತದೆ. ಬೇಕಾದಾಗ ಅರ್ಧ ಲೋಟ ಜ್ಯೂಸ್‍ಗೆ ಅರ್ಧ ಲೋಟ ನೀರು ಬಳಸಿ ಮಿಕ್ಸ್ ಮಾಡಿ ಕುಡಿಯಬಹುದು.

    1. ಹೃದಯದ ಆರೋಗ್ಯಕ್ಕೆ ಒಳ್ಳೆಯದು
    ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ದಾಸವಾಳ ಜ್ಯೂಸ್ ಒಳ್ಳೆಯದು. ಇದನ್ನು ಸೇವಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯಕವಾಗುತ್ತದೆ. ಬೊಜ್ಜು ನಿವಾರಕ ಗುಣ ಕೂಡ ಹೊಂದಿದ್ದು, ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೀಗಾಗಿ ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ.

    2. ಕೆಮ್ಮು-ಶೀತ ನಿವಾರಿಸುತ್ತೆ
    ಅಲರ್ಜಿ ಸಮಸ್ಯೆ ಇರುವವರಿಗೆ ಬೇಸಿಗೆಯಲ್ಲಿ ಕೆಮ್ಮು-ಶೀತ ಆಗೋದು ಸಾಮಾನ್ಯ. ಆದರೆ ಈ ಸಮಸ್ಯೆಯನ್ನು ನಿವಾರಿಸುವ ಸಾಮಾಥ್ರ್ಯ ದಾಸವಾಳ ಜ್ಯೂಸ್‍ನಲ್ಲಿದೆ. ಈ ಜ್ಯೂಸ್‍ನಲ್ಲಿ ದಾಸವಾಳ ಹೂ ಹಾಗೂ ನಿಂಬೆರಸ ಇರುವುದರಿಂದ ದೇಹಕ್ಕೆ ವಿಟಮಿನ್ ಸಿ ಅಂಶ ಹೆಚ್ಚು ದೊರೆಯುತ್ತದೆ. ಹೀಗಾಗಿ ಇದನ್ನು ಕುಡಿದರೆ ಕೆಮ್ಮು-ಶೀತ ಕಡಿಮೆ ಆಗುತ್ತದೆ.

    3. ಬಿಪಿ ಕಡಿಮೆ ಮಾಡುತ್ತದೆ
    ಅಧಿಕ ರಕ್ತದೊತ್ತಡ ಇರುವವರು ದಾಸವಾಳ ಜ್ಯೂಸ್ ಕುಡಿದರೆ ಒಳ್ಳೆದು. ಇದು ಬಿಪಿ ಹಾಗೂ ಸಂಧಿವಾತ ನೋವು ಕಡಿಮೆಯಾಗುತ್ತದೆ. ದಾಸವಾಳ ಆ್ಯಂಟಿಆಕ್ಸಿಡೆಂಟ್ ಅಂಶವಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಶೂನ್ಯವಾಗಿರುವುದರಿಂದ ಬೊಜ್ಜನ್ನು ಕರಗಿಸುತ್ತದೆ, ದೇಹದ ಆರೋಗ್ಯ ಕಾಪಾಡುತ್ತದೆ.

    4. ದೇಹದ ಉಷ್ಣತೆ ಕಡಿಮೆ ಮಾಡುತ್ತದೆ
    ಬೇಸಿಗೆಯಲ್ಲಿ ದೇಹದ ಉಷ್ಣತೆ ಕಾಪಾಡುವಲ್ಲಿ ದಾಸವಾಳ ಜ್ಯೂಸ್ ಸಹಕಾರಿ. ಇದು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಅದರಲ್ಲೂ ಬಿಳಿ ಬಣ್ಣದ ದಾಸವಾಳ ಹೂ ಜ್ಯೂಸ್ ಕಣ್ಣುಗಳಿಗೆ ತಂಪು ನೀಡುತ್ತದೆ.

    5. ಕೂದಲಿನ ಆರೋಗ್ಯಕ್ಕೆ ಉತ್ತಮ
    ದಾಸವಾಳದ ಹೂ ಹಾಗೂ ಎಲೆ ಕೂದಲನ್ನು ಬಾಹ್ಯವಾಗಿ ಆರೈಕೆ ಮಾಡುವಲ್ಲಿ ತುಂಬಾ ಪ್ರಯೋಜನಕಾರಿ. ಅದರಲ್ಲೂ ದಾಸವಾಳ ಜ್ಯೂಸ್ ಕುಡಿದರೆ ಆಂತರಿಕವಾಗಿ ಕೂಡ ಕೂದಲಿಗೆ ಪೋಷಣೆ ನೀಡುತ್ತದೆ. ಕೂದಲಿಗೆ ಅಗ್ಯತವಾದ ವಿಟಮಿನ್‍ಗಳನ್ನು ಈ ಜ್ಯೂಸ್ ಒದಗಿಸುತ್ತದೆ. ಕೂದಲು ಚೆನ್ನಾಗಿ ಬೆಳೆಯಲು ಸಹಕರಿಸುತ್ತದೆ.

    6. ಮೂತ್ರ ನಾಳದ ಸೋಂಕು ನಿವಾರಣೆ
    ಮೂತ್ರ ನಾಳದ ಸೋಂಕು ನಿವಾರಣೆಗೆ ಈ ಜ್ಯೂಸ್ ತುಂಬಾ ಒಳ್ಳೆಯದು. ದೇಹದ ಉಷ್ಣತೆ ಹೆಚ್ಚಾದರೆ ಕೆಲವರಿಗೆ ಮೂತ್ರ ಮಾಡುವಾಗ ಉರಿ ಕಂಡು ಬರುತ್ತದೆ. ಅದನ್ನು ಕಡಿಮೆ ಮಾಡುವಲ್ಲಿ ಎಳನೀರಿನಷ್ಟೇ ಪರಿಣಾಮಕಾರಿಯಾಗಿ ದಾಸವಾಳ ಜ್ಯೂಸ್ ಕೂಡ ಕೆಲಸ ಮಾಡುತ್ತದೆ. ಮಹಿಳೆಯರಿಗೆ ಕಾಡುವ ಮುಟ್ಟಿನ ನೋವು ಕಡಿಮೆ ಮಾಡುವಲ್ಲಿ ಕೂಡ ದಾಸವಾಳ ಜ್ಯೂಸ್ ಉಪಯುಕ್ತವಾಗಿದೆ. ಆದರೆ ಗರ್ಭಣಿಯರು ಹಾಗೂ ಈಗಾಗಲೇ ಅನಾರೋಗ್ಯಕ್ಕೆ ಔಷಧಿಗಳನ್ನು ತೆಗೆದುಕೊಳ್ಳುವ ಮಂದಿ ಈ ಜ್ಯೂಸ್ ಕುಡಿಯಬಾರದು.

  • ಕೊರೊನಾ ವಿರುದ್ಧ ಹೋರಾಟಕ್ಕೆ ಮೋದಿ ನೀಡಿದ್ರು 10 ಹೆಲ್ತ್ ಟಿಪ್ಸ್

    ಕೊರೊನಾ ವಿರುದ್ಧ ಹೋರಾಟಕ್ಕೆ ಮೋದಿ ನೀಡಿದ್ರು 10 ಹೆಲ್ತ್ ಟಿಪ್ಸ್

    ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ಪ್ರಧಾನಿ ಮೋದಿ ಅವರು 10 ಹೆಲ್ತ್ ಟಿಪ್ಸ್ ಗಹಳನ್ನು ನೀಡಿದ್ದಾರೆ.

    ತಲೆ ಬರಹ ಓದಿ ಕನ್‍ಫ್ಯೂಸ್ ಆಗಬೇಡಿ. ಮೋದಿ ಸರ್ಕಾರದ ಅಯುಷ್ ಇಲಾಖೆ ಕೊರೊನಾ ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಲವೊಂದು ಸಲಹೆ ನೀಡಿದೆ. ಈ ಸಲಹೆ ಇರುವ ಗ್ರಾಫಿಕ್ಸ್ ಪ್ಲೇಟ್ ಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಇದನ್ನು ಓದಿ: ತೆಂಗಿನಕಾಯಿ, ತೆಂಗಿನ ಎಣ್ಣೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

    10 ಹೆಲ್ತ್ ಟಿಪ್ಸ್
    1. ದಿನವಿಡಿ ಬಿಸಿ ನೀರು ಕುಡಿಯಿರಿ.
    2. ದಿನಕ್ಕೆ ಮೂವತ್ತು ನಿಮಿಷ ಯೋಗಾಸನ, ಪ್ರಾಣಾಯಾಮ ಮಾಡಿ.
    3. ಆಹಾರದಲ್ಲಿ ಅರಶಿನ, ಧನಿಯಾ, ಬೆಳ್ಳುಳ್ಳು ಯಥೇಚ್ಚವಾಗಿ ಬಳಸಿ.
    4. ಚವನಪ್ರಾಶ ನಿತ್ಯ ಒಂದು ಸ್ಪೂನ್ (ಜೇನು ತುಪ್ಪ, ಸಕ್ಕರೆ, ತುಪ್ಪ ಹಾಕಿ ಮಾಡಿರೋದು)
    5. ದಿನಕ್ಕೆರಡು ಬಾರಿ ಹರ್ಬಲ್ ಟೀ ಕುಡಿಯಿರಿ.( ತುಳಸಿ, ದಾಲ್ಚಿನ್ನಿ, ಬೆಲ್ಲ, ಲೆಮನ್ ಹಾಕಿರುವ ಟೀ)
    6. ಅರಶಿನ ಹಾಕಿರುವ ಹಾಲು ದಿನಕ್ಕೊಂದು ಅಥವಾ ಎರಡು ಬಾರಿ.
    7. ನಿತ್ಯವೂ ಬಿಸಿ ನೀರಿನಲ್ಲಿ ಪುದೀನ ಹಾಕಿ ಅದ್ರ ಗಾಳಿಯನ್ನು ತೆಗೆದುಕೊಳ್ಳುವುದು.
    8. ಮೂಗಿಗೆ ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ಹಚ್ಚಿಕೊಳ್ಳುವುದು.
    9. ಅಯಿಲ್ ಪುಲ್ಲಿಂಗ್ ಅಂದ್ರೆ ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು ಎರಡರಿಂದ ಮೂರು ನಿಮಿಷ ಬಾಯಿ ಮುಕ್ಕಳಿಸಬೇಕು. ಅದನ್ನು ನುಂಗಬಾರದು. ಆಮೇಲೆ ಬಿಸಿ ನೀರಿನಿಂದ ಬಾಯಿ ತೊಳೆದುಕೊಳ್ಳಬೇಕು.
    10. ಲವಂಗವನ್ನು ಸಕ್ಕರೆ ಹನಿಯ ಜೊತೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಬೇಕು. ಕಫ ಕೆಮ್ಮು ಸಮಸ್ಯೆ ಇದ್ದರೆ ಇದನ್ನು ಪ್ರಾಕ್ಟೀಸ್ ಮಾಡಬೇಕು.

  • ಕೊರೊನಾವೈರಸ್: ಮಧುಮೇಹಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು

    ಕೊರೊನಾವೈರಸ್: ಮಧುಮೇಹಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು

    ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾವೈರಸ್ ಸೋಂಕನ್ನು ತಡೆಗಟ್ಟಲು ಜನರು ತುಂಬಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಭಾರತವನ್ನು ಕೂಡ ಕಾಡುತ್ತಿರುವ ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿದೆ. ಕೊರೊನಾವೈರಸ್ ಮಧುಮೇಹಿಗಳಿಗೆ ಸೋಂಕಿದರೆ ಗುಣವಾಗಲು ಕಷ್ಟವಾಗಿರುವ ಕಾರಣಕ್ಕೆ ಮಧುಮೇಹ ಇದ್ದವರು ಹೆಚ್ಚು ಜಾಗೃತರಾಗಿರಬೇಕು.

    ಮಧುಮೇಹಿಗಳ ದೇಹದಲ್ಲಿ ಗ್ಲೈಸೆಮಿಕ್ ನಿಯಂತ್ರಣ ಸಾಮರ್ಥ್ಯ ಕಡಿಮೆ ಇರುತ್ತದೆ. ಹೀಗಾಗಿ ಮಧುಮೇಹಿಗಳಿಗೆ ಕೊರೊನಾ ಸೋಂಕು ತಗುಲುವ ಸಾಮರ್ಥ್ಯ ಹೆಚ್ಚು ಎಂದು ಸಿಡಿಸಿ (Centers for Disease Control and Prevention) ಮಾಹಿತಿ ನೀಡಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಸೋಂಕು ತಗುಲಿದರೆ ಅವರ ಪರಿಸ್ಥಿತಿ ಜಿಂತಾಜನಕವಾಗುತ್ತದೆ. ಹೀಗಾಗಿ ಮಧುಮೇಹಿಗಳು ಕೆಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

    ಅಮೆರಿಕದ ಡಯಾಬಿಟಿಕ್ ಅಸೋಸಿಯೇಷನ್ ಕೊರೊನಾ ವೈರಸ್ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿದೆ. ಈ ವರದಿಯನ್ನು ನೋಡಿದಾಗ ವಯಸ್ಸಾದವರಿಗೆ, ಮಧುಮೇಹಿಗಳಿಗೆ, ಹೃದಯ ಹಾಗೂ ಇತರ ಶ್ವಾಸಕೋಶ ಸಮಸ್ಯೆ ಇರುವ ಮಂದಿಗೆ ಕೊರೊನಾವೈರಸ್ ಸೋಂಕಿನ ಅಪಾಯ ಹೆಚ್ಚು ಎಂಬುದು ತಿಳಿದುಬಂದಿದೆ. ಒಂದು ವೇಲೆ ಈ ಆರೋಗ್ಯ ಸಮಸ್ಯೆಗಳು ಇದ್ದವರಿಗೆ ಸೋಂಕು ತಟ್ಟಿದರೆ ಚೇತರಿಸಿಕೊಳ್ಳೋದು ಕಷ್ಟವಾಗುತ್ತದೆ ಎಂದು ತಿಳಿಸಿದೆ

    ಮಧುಮೇಹ ಕಾಯಿಲೆ ಬಂದರೆ ಅದನ್ನು ನಿಯಂತ್ರಿಸಬಹುದೇ ಹೊರತಾಗಿ ಅದರಿಂದ ಸಂಪೂರ್ಣ ಗುಣಮುಖರಾಗಲು ಸಾಧ್ಯವಿಲ್ಲ. ಹೀಗಾಗಿ ಸದ್ಯ ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾವೈರಸ್ ದೇಹ ಹೊಕ್ಕದಂತೆ ಮಧುಮೇಹಿಗಳು ಎಚ್ಚರವಹಿಸಬೇಕು.

    ಅನುಸರಿಸಬೇಕಾದ ಕ್ರಮಗಳೇನು?

    1. ಮೊದಲು ಮಧುಮೇಹಿಗಳೂ ತೆಗೆದುಕೊಳ್ಳುತ್ತಿರುವ ಔಷಧಿಯ ಬಗ್ಗೆ ನಿಗವಹಿಸಬೇಕು. ಅವುಗಳ ಹೆಸರು ಹಾಗೂ ಡೋಸೇಜ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರಬೇಕು.

    2. ಒಂದು ತಿಂಗಳಿಗೆ ಬೇಕಾಗುವಷ್ಟು ಔಷಧಿಯನ್ನು ಮಧುಮೇಹಿಗಳು ತಂದು ಇಟ್ಟುಕೊಳ್ಳುವುದು ಒಳ್ಳೆಯದು, ಯಾಕೆಂದರೆ ಪದೇ ಪದೇ ಔಷಧಿಗಾಗಿ ಆಸ್ಪತ್ರೆ ಅಥವಾ ಮೆಡಿಕಲ್ ಶಾಪ್‍ಗೆ ಹೋಗೋದು ತಪ್ಪುತ್ತದೆ.

    3. ನಿಮ್ಮಗೆ ತಪಾಸಣೆ ನಡೆಸುವ ವೈದ್ಯರ ನಂಬರ್ ಇಟ್ಟುಕೊಂದು ಅಗ್ಯತ ಬಿದ್ದಾಗ, ಆರೋಗ್ಯದಲ್ಲಿ ಏರುಪೇರಾದಾಗ ಮಾತ್ರ ಕರೆ ಸಲಹೆ ಪಡೆಯಿರಿ.

    4. ಹ್ಯಾಂಡ್ ವಾಶ್, ಸೋಪ್ ಅಥವಾ ಸ್ಯಾನಿಟೈಸರ್‍ನಿಂದ ಆಗಾಗ ಕೈಗಳನ್ನು ತೊಳೆದುಕೊಳ್ಳೋದು ಒಳ್ಳೆಯದು. ದೇಹದಲ್ಲಿ ಸಕ್ಕರೆಯಂಶ ಕಡಿಮೆ ಆಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಗ್ಲೂಕೋಸ್ ಟ್ಯಾಬ್ಲೆಟ್ ಇಟ್ಟುಕೊಳ್ಳುವುದು ಒಳ್ಳೆಯದು.

    5. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಬಗ್ಗೆ ಗಮನ ಹರಿಸಿ. ದೇಹಕ್ಕೆ ಪೌಷ್ಟಿಕಾಂಶ ಸಿಗುವ ಆಹಾರ ಪಾನೀಯಗಳನ್ನು ಸೇವಿಸಿ, ಚೆನ್ನಾಗಿ ನಿದ್ರೆ ಮಾಡಿ, ವ್ಯಾಯಾಮ ಮಾಡಿ, ಸರಿಯಾದ ಸಮಯಕ್ಕೆ ಆಹಾರ ಸೇವಿಸಿ ಔಷಧಿಗಳನ್ನು ತೆಗೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ.

    ಸೋಂಕು ತಗುಲುವುದನ್ನು ತಡೆಗಟ್ಟಲು ಏನು ಮಾಡಬೇಕು?

    1. ನಿಮ್ಮ ಕೈಗಳನ್ನು ಸೋಪ್, ಹ್ಯಾಂಡ್ ವಾಶ್ ಬಳಸಿ ಆಗಾಗ ತೊಳೆದುಕೊಳ್ಳಿ. ಅಥವಾ ಆಗಾಗ ಸ್ಯಾನಿಟೈಸರ್ ಬಳಸುತ್ತಿರಿ.

    2. ಒಂದು ವೇಳೆ ನಿಮ್ಮ ಕೈಗಳಿಗೆ ವೈರಸ್ ತಗುಲಿದ್ದರೆ ಅದು ನಿಮ್ಮ ದೇಹವನ್ನು ಸೇರುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಣ್ಣು, ಮೂಗು, ಬಾಯಿಯನ್ನು ಆಗಾಗ ಮುಟ್ಟದಿರಿ. ನೀವು ಮುಟ್ಟುವ ವಸ್ತುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.

    3. ಗುಂಪು ಗುಂಪಾಗಿ ಓಡಾಡಬೇಡಿ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಯಾರಾದರೂ ಕೆಮ್ಮುತ್ತಿದ್ದರೆ, ಜ್ವರ ಇದ್ದರೆ ಅವರಿಂದ ದೂರವಿರಿ.

    4. ಒಂದು ವೇಲೆ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಆದರೆ ತಕ್ಷಣ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳಿ, ನಿರ್ಲಕ್ಷಿಸಿದರೆ ಅಪಾಯ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

  • ಮನೆಯಲ್ಲೇ ಮಾಡಿ ಕುಡಿಯಿರಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಜ್ಯೂಸ್

    ಮನೆಯಲ್ಲೇ ಮಾಡಿ ಕುಡಿಯಿರಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಜ್ಯೂಸ್

    ಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಹಾವಳಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸದ್ಯ ಭಾರತ ಸ್ಟೇಜ್ 2ನಲ್ಲಿದೆ. ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಸೋಂಕಿನ ಭೀಕರತೆಯನ್ನು ಎದುರಿಸಿಬೇಕಾಗುತ್ತೆ. ಯಾಕೆಂದರೆ ಈವರೆಗೂ ಈ ಸೋಂಕಿಗೆ ಔಷಧಿ ಲಭ್ಯವಿಲ್ಲ. ಔಷಧಿ ಕಂಡುಹಿಡಿಯುವಲ್ಲಿ ಸಂಶೋದಕರು ನಿರತರಾಗಿದ್ದಾರೆ. ಹೀಗಾಗಿ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳುವುದು ಅಗತ್ಯವಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ.

    ಶೀತ, ನೆಗಡಿ, ಕೆಮ್ಮು, ಜ್ವರ, ಉಸಿರಾಟದ ತೊಂದರೆಗಳಂತಹ ಯಾವುದೇ ಲಕ್ಷಣಗಳು ಗೋಚರಿಸದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮನೆ ಮದ್ದುಗಳು ಮೂಲಕ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯ ವೃದ್ಧಿಸಿಕೊಳ್ಳಬಹುದು.

    ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಹಾರ ಪದ್ಧತಿಯಲ್ಲಿ ಹಣ್ಣು ಮತ್ತು ತರಕಾರಿಗಳು ಸೇರಿಕೊಂಡರೆ ಒಳ್ಳೆಯದು. ಹಣ್ಣು, ತರಕಾರಿಗಳನ್ನು ಸೇವಿಸಿದರೆ ಅದರಲ್ಲಿರುವ ಹೆಚ್ಚಿನ ಪೌಷ್ಟಿಕ ಸತ್ವಗಳು ದೇಹ ಸೇರಿ, ಆರೋಗ್ಯ ರಕ್ಷಣೆ ಮಾಡುತ್ತದೆ. ಅದರಲ್ಲೂ ಹಣ್ಣು ಮತ್ತು ತರಕಾರಿಗಳು ಎರಡನ್ನೂ ಮಿಶ್ರಣ ಮಾಡಿ ತಯಾರಿಸುವ ಪಾನೀಯಗಳಲ್ಲಿ ಪೋಷಕಾಂಶಗಳು ಯಥೇಚ್ಛವಾಗಿರುತ್ತದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಸುವ ಜ್ಯೂಸ್‍ಗಳನ್ನು ಮಾಡೋದು ಹೇಗೆ? ಅದರಿಂದ ಏನು ಲಾಭ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

    ಯಾವ ಜ್ಯೂಸ್ ಕುಡಿದರೆ ಏನು ಲಾಭ?

    1. ಕ್ಯಾರೆಟ್, ಸೇಬು ಮತ್ತು ಕಿತ್ತಳೆ ಹಣ್ಣಿನ ಜ್ಯೂಸ್
    ಕ್ಯಾರೆಟ್‍ನಲ್ಲಿ ಬೀಟಾ-ಕ್ಯಾರೋಟಿನ್ ಅಂಶ ಹೆಚ್ಚಿದ್ದು, ಉಸಿರಾಟದ ವ್ಯವಸ್ಥೆಯ ಉತ್ತಮಗೊಳಿಸುತ್ತದೆ. ಸೇಬು ಹಣ್ಣುಗಳಲ್ಲಿ ಆಂಟಿ-ಆಕ್ಸಿಡೆಂಟ್ ಅಂಶವಿದ್ದು, ಇದು ದೇಹದಲ್ಲಿ ಪ್ರಮುಖ ಕೋಶಗಳನ್ನು ಮತ್ತು ಅಂಗಾಂಶಗಳನ್ನು ರಕ್ಷಣೆ ಮಾಡುತ್ತದೆ. ಕಿತ್ತಳೆ ಹಣ್ಣಿನಲ್ಲಿ ಇರುವ ಪೌಷ್ಟಿಕ ಸತ್ವಗಳು ಯಾವುದೇ ಬಗೆಯಲ್ಲಿ ವೈರಾಣುಗಳ ಸೋಂಕನ್ನು ತಡೆಯುವಲ್ಲಿ ಸಹಾಯಕವಾಗಿದೆ. ಇವುಗಳ ಸೇವನೆಯಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಅಂಶಗಳು ಮತ್ತು ಪೌಷ್ಟಿಕ ಸತ್ವಗಳು ಸಿಗುತ್ತದೆ.

    ಜ್ಯೂಸ್ ಮಾಡುವ ವಿಧಾನ:
    ಮೊದಲು ಕತ್ತರಿಸಿದ 1 ಕ್ಯಾರೆಟ್, 1 ಸೇಬು ಹಣ್ಣನ್ನು ಚೆನ್ನಾಗಿ ತೊಳೆದು, 1 ಕಿತ್ತಳೆ ಹಣ್ಣನ್ನು ಸುಲಿದು ಸೊಳೆಗಳನ್ನು ಒಂದು ಮಿಕ್ಸರ್ ಜಾರ್‍ನಲ್ಲಿ ಹಾಕಿ ರುಬ್ಬಿಕೊಳ್ಳಿ.

    ಬಳಿಕ ಅದರಿಂದ ರಸವನ್ನು ತೆಗೆದು ಲೋಟದಲ್ಲಿ ಹಾಕಿಕೊಂಡು ಕುಡಿಯಿರಿ ಅಥವಾ ರುಬ್ಬಿಕೊಂಡ ಮಿಶ್ರಣವನ್ನು ಹಾಗೆಯೇ ಗಟ್ಟಿಯಾಗಿ ಕೂಡ ಸೇವಿಸಬಹುದು. ನಿಯಮಿತವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಸೇವಿಸೋದು ಉತ್ತಮವಾಗಿದ್ದು, ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

    2. ನಿಂಬೆ ಹಣ್ಣು, ಶುಂಠಿ ಮತ್ತು ಜೇನು ತುಪ್ಪ ಪಾನೀಯ
    ಜೇನು ತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್‍ಗಳು ಹೆಚ್ಚಾಗಿ ಇರುತ್ತದೆ. ಜೇನು ತುಪ್ಪದ ಜೊತೆ ಶುಂಠಿ ಮತ್ತು ನಿಂಬೆ ಹಣ್ಣಿನ ರಸ ಸೇರಿದರೆ ದೇಹದಲ್ಲಿ ಶೀತ ಮತ್ತು ಜ್ವರದ ಲಕ್ಷಣಗಳನ್ನು ಇಲ್ಲವಾಗಿಸುತ್ತದೆ. ನಿಂಬೆ ಹಣ್ಣಿನಲ್ಲಿ ವಿಟಮಿನ್ ‘ಸಿ’ ಅಂಶವಿದ್ದು, ಇದು ಜೀರ್ಣಾಂಗದ ವ್ಯವಸ್ಥೆ ಉತ್ತಮಗೊಳಿಸಿ ಅಜೀರ್ಣತೆ ದೂರಮಾಡಲು ಸಹಕಾರಿಯಾಗಿದೆ. ಶುಂಠಿಯಲ್ಲಿ ಆಂಟಿ-ಇನ್ಫಾಮೇಟರಿ ಗುಣವಿದ್ದು ಇದು ಆರೋಗ್ಯಕ್ಕೆ ಒಳ್ಳೆಯದು.

    ಶೀತಾ ಮತ್ತು ಜ್ವರದ ಲಕ್ಷಣಗಳನ್ನು ದೂರ ಮಾಡಲು ನಿಂಬೆ ಹಣ್ಣು, ಶುಂಠಿ, ಜೇನು ತುಪ್ಪ ಸಹಾಯಕವಾಗಿದ್ದು, ಇವುಗಳನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ಬೆಳಗಿನ ಅಸ್ವಸ್ಥತೆಯನ್ನು, ವಾಕರಿಕೆ ಮತ್ತು ವಾಂತಿಯ ಸಮಸ್ಯೆಯನ್ನು, ಮಾಂಸ ಖಂಡಗಳ ನೋವುಗಳನ್ನು ನಿವಾರಣೆ ಆಗುತ್ತದೆ. ಜೇನು ತುಪ್ಪ ದೇಹದ ತೂಕ ಕಡಿಮೆ ಮಾಡುವಲ್ಲಿ, ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳಲು ಮತ್ತು ಕೆಮ್ಮಿನ ಸಮಸ್ಯೆಯನ್ನು ದೂರ ಮಾಡುವಲ್ಲಿ ಉಪಯುಕ್ತವಾಗಿದೆ.

    ಜ್ಯೂಸ್ ತಯಾರು ಮಾಡುವ ವಿಧಾನ:
    ಒಂದು ಗ್ಲಾಸ್ ಕುದಿಯುವ ನೀರಿನಲ್ಲಿ ಸ್ವಲ್ಪ ತುರಿದ ಶುಂಠಿ, 1 ಚಿಟಿಕೆ ಅರಿಶಿನ, 2ರಿಂದ 3 ಟೇಬಲ್ ಚಮಚ ನಿಂಬೆ ರಸ ಹಾಕಿ ಚೆನ್ನಾಗಿ ಕಲಿಸಿ. ಬಳಿಕ ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು, ಆ ಬಳಿಕ ಒಂದು ಟೇಬಲ್ ಚಮಚದಷ್ಟು ಜೇನು ತುಪ್ಪವನ್ನು ನಿಂಬೆ ರಸದ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹೀಗೆ ತಯಾರಿಸಿದ ಜ್ಯೂಸ್ ಅನ್ನು ನಿಯಮಿತವಾಗಿ ಸೇವನೆ ಮಾಡಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.

    4. ಶುಂಠಿ, ಅರಿಶಿನ ಮತ್ತು ಕ್ಯಾರೆಟ್ ಜ್ಯೂಸ್
    ಅರಿಶಿನದಲ್ಲಿ ಆಂಟಿ-ಆಕ್ಸಿಡೆಂಟ್ ಅಂಶವಿರುತ್ತದೆ, ಶುಂಠಿ ಒಣ ಕೆಮ್ಮನ್ನು ತಡೆಯಲು ಸಹಾಯಕವಾಗಿದ್ದು, ಆಹಾರವನ್ನು ಜೀರ್ಣಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ನಿಂಬೆ ಹಣ್ಣಿನಲ್ಲಿ ವಿಟಮಿನ್ ‘ಸಿ’ ಹೆಚ್ಚಾಗಿದ್ದು, ರೋಗನಿರೋಧಕ ವರ್ಧಕವಾಗಿದೆ.

    ಜ್ಯೂಸ್ ಮಾಡುವ ವಿಧಾನ:
    ಮೊದಲು ಶುಂಠಿ, ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆಯಿರಿ. ಬಳಿಕ 1 ಅಥವಾ 2 ಕ್ಯಾರೆಟ್‍ಗಳನ್ನು ಮಿಕ್ಸಿ ಜಾರ್‍ಗೆ ಹಾಕಿ ರುಬ್ಬಿಕೊಳ್ಳಿ, ಬಳಿಕ ರಸವನ್ನು ತೆಗೆಯಿರಿ. ಈ ಕ್ಯಾರೆಟ್ ರಸಕ್ಕೆ ನಿಂಬೆ ಹಾಗೂ ಶುಂಠಿ ರಸವನ್ನು ಸೇರಿಸಿ ಜೊತೆಗೆ ಸ್ವಲ್ಪ ಅರಿಶಿನ ಪುಡಿಯನ್ನು ಬೆರೆಸಿ ಜ್ಯೂಸ್ ಮಾಡಿ. ಅದಕ್ಕೆ ಒಂದು ಚಿಟಿಕೆ ಕರಿಮೆಣಸು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ.

  • ಸೀನೋದನ್ನ ತಡೆಹಿಡಿದಷ್ಟೂ ಆರೋಗ್ಯಕ್ಕೆ ಅಪಾಯ

    ಸೀನೋದನ್ನ ತಡೆಹಿಡಿದಷ್ಟೂ ಆರೋಗ್ಯಕ್ಕೆ ಅಪಾಯ

    ಸೀನುವಿಕೆ ಅಂದರೆ ಅದು ರೋಗವಲ್ಲ, ರೋಗದ ಲಕ್ಷಣವೂ ಅಲ್ಲ. ಸೀನುವಿಕೆ ಮಾನವನ ದೇಹದ ರೋಗ ನಿರೋಧಕ ವ್ಯವಸ್ಥೆಯ ಒಂದು ಕ್ರಮ.

    ಸೀನುವಿಕೆ ಎಂದರೇನು?
    ಮೂಗಿನ ಮೂಲಕ ದೇಹದೊಳಗೆ ಯಾವುದಾದರೂ ವೈರಾಣುಗಳು ಪ್ರವೇಶಿಸಿದರೆ ಅವನ್ನು ಭಾರೀ ಒತ್ತಡದಿಂದ ದೇಹದಿಂದ ಹೊರಹಾಕುವ ಪ್ರಕ್ರಿಯೆಯೇ ಸೀನುವಿಕೆ ಎನ್ನಲಾಗುತ್ತದೆ.

    ಕೇವಲ ವೈರಾಣುಗಳು ಮಾತ್ರವಲ್ಲ, ಉಸಿರಾಟದ ಸಮಯದಲ್ಲಿ ದೇಹದ ಒಳಬರುವ ಧೂಳು, ಹೊಗೆ, ಬ್ಯಾಕ್ಟೀರಿಯಾ, ಹೂವಿನ ಪರಾಕ ಮೊದಲಾದ ಸೂಕ್ಷ್ಮ ಕಣಗಳನ್ನು ನಿವಾರಿಸಲೂ ಸೀನುವಿಕೆ ಅಗತ್ಯ ಎನ್ನಲಾಗುತ್ತೆ.

    ಸೀನುವಾಗ ದೇಹದಿಂದ ದ್ರವ ಸಿಡಿಯಲು ಕಾರಣವೇನು?
    ಈ ಪ್ರಕ್ರಿಯೆಯಲ್ಲಿ ಅತಿ ಕ್ಷಿಪ್ರವಾಗಿ ಸಂಕುಚಿಸಿ ವಿಕಸಿಸುವ ಸ್ನಾಯುಗಳು ಒಳಗಿನ ಗಾಳಿಯನ್ನು ಘಂಟೆಗೆ 160 ಕಿ.ಮೀ ವೇಗದಲ್ಲಿ ಹೊರಬಿಳುತ್ತದೆ. ಈ ವೇಳೆ ಅಷ್ಟೂ ಕ್ರಿಮಿ ಮತ್ತು ಧೂಳಿನ ಅಂಶ ಹೊರಹೋಗುತ್ತವೆ. ಗಂಭೀರ ಸೋಂಕಿನಿಂದ ರಕ್ಷಣೆ ಪಡೆಯಲು ಸೀನು ಬರುತ್ತದೆ.

    ಸೀನುವಿಕೆ ತಡೆಹಿಡಿದರೆ ಆರೋಗ್ಯದ ಮೇಲೆ ಬೀರುವ ಅಡ್ಡ ಪರಿಣಾಮಗಳೇನು?

    1. ನಡು ಕಿವಿಯ ಸೋಂಕು
    ಸೀನುವಿಕೆಯನ್ನು ತಡೆಹಿಡಿದರೆ ನಡು ಕಿವಿಯ ಸೋಂಕು ಕಾಣಿಸಿಕೊಳ್ಳುತ್ತದೆ. ಸೀನುವುದರಿಂದ ಮೂಗಿನಲ್ಲಿರುವ ಬ್ಯಾಕ್ಟೀರಿಯಾಗಳೆಲ್ಲಾ ಹೊರಹೋಗುತ್ತವೆ. ಆದರೆ ಸೀನುವಿಕೆಯನ್ನು ತಡೆದರೆ ಆ ಬ್ಯಾಕ್ಟೀರಿಯಾಗಳು ಹೋಗದೇ ದ್ರವ ಒತ್ತಡದಿಂದ ನೇರವಾಗಿ ಕಿವಿಯತ್ತ ನುಗ್ಗುತ್ತದೆ. ಈ ಸೋಂಕುಪೀಡಿತ ದ್ರವ ಕಿವಿಯ ಮಧ್ಯಭಾಗಕ್ಕೆ ಹೋಗುವ ಪರಿಣಾಮ ಒಳಗಿವಿ ಸೋಂಕು ಶುರುವಾಗುತ್ತದೆ.

    2. ಎದೆ ಮೂಳೆ ಮುರಿಯುವುದು
    ಸೀನುವಿಕೆ ತಡೆಹಿಡಿದರೆ ಎದೆ ಮೂಳೆ ಮುರಿಯುವ ಸಾಧ್ಯತೆ ಇರುತ್ತದೆ. ಕೆಲ ವ್ಯಕ್ತಿಗಳಲ್ಲಿ, ಅದರಲ್ಲೂ ವಿಶೇಷವಾಗಿ ವೃದ್ಧರಲ್ಲಿ ಹೀಗೆ ಸೀನುವಿಕೆಯನ್ನು ತಡೆಯುವ ಪ್ರಯತ್ನದಿಂದ ಎದೆಗೂಡಿನ ಮೂಳೆಗಳು ಮುರಿದಿರುವ ಪ್ರಕರಣಗಳು ವರಿದಿಯಾಗಿದೆ.

    3. ಕಿವಿ ತಮಟೆ ಹರಿಯುವ ಸಾಧ್ಯತೆ
    ಸೀನುವಾಗ ಬರುವ ಗಾಳಿಯ ಒತ್ತಡವನ್ನು ತಡೆಹಿಡಿದರೆ ಕಿವಿ ತಮಟೆ ಹರಿದು ಹೋಗುವ ಸಾಧ್ಯತೆ ಹೆಚ್ಚಿದೆ. ಸ್ವಾಭಾವಿಕವಾಗಿ ಸೀನುಬಾದ ದುರ್ಬಲ ಮತ್ತು ತೆರೆದಿರುವ ಸ್ಥಳಗಳ ಮೂಲಕವೇ ದ್ರವ ಹಾದು ಹೋಗುತ್ತದೆ. ಆದ್ದರಿಂದ ಸೀನುವಿಕೆಯನ್ನು ತಡೆಹಿಡಿದರೆ ಕಿವಿಗೆ ತೊಂದರೆ ಹೆಚ್ಚು ಎನ್ನಲಾಗುತ್ತೆ.

    4. ಅನ್ಯೂರಿಸಂ(Aneurysm)
    ಸೀನುವಾಗ ದೇಹದಿಂದ ದ್ರವವೊಂದು ಹೊರಬರುತ್ತದೆ. ಆದರೆ ಸೀನುವುದನ್ನ ತಡೆದರೆ ಆ ದ್ರವದ ಒತ್ತಡ ರಕ್ತನಾಳಗಳ ಮೂಲಕ ಮೆದುಳನ್ನೂ ತಲಪುವ ಸಾಧ್ಯತೆ ಇದೆ. ಹೀಗಾದರೆ ಮೆದುಳನ್ನು ಸಂಪರ್ಕಿಸಿರುವ ಸೂಕ್ಷ್ಮ ಭಾಗ ಹರಿದುಹೋಗುತ್ತದೆ. ಪರಿಣಾಮ ಮೆದುಳಿನ ಸುತ್ತ, ತಲೆಬುರುಡೆಯ ಒಳಗೆ ರಕ್ತಸ್ರಾವವಾಗುತ್ತದೆ.

    5. ಕಣ್ಣಿನ ನರಕ್ಕೆ ತೊಂದರೆ
    ಸೀನುವಿಕೆಯನ್ನು ತಡೆಹಿಡಿಯುವ ಪ್ರಯತ್ನದಲ್ಲಿ ಗಾಳಿಯ ಒತ್ತಡ ಒಳಗೇ ಉಳಿದು ಕಿವಿಯ ಮಾತ್ರವಲ್ಲ ಕಣ್ಣಿನ ನರದ ಮೇಲೂ ಪರಿಣಾಮ ಬೀರುತ್ತದೆ.

  • ಹಾಟ್ ಬೇಸಿಗೆಯಲ್ಲಿ ಕರ್ಬೂಜ ತಿನ್ನಿ ಕೂಲ್ ಆಗಿರಿ

    ಹಾಟ್ ಬೇಸಿಗೆಯಲ್ಲಿ ಕರ್ಬೂಜ ತಿನ್ನಿ ಕೂಲ್ ಆಗಿರಿ

    ಬೇಸಿಗೆಯಲ್ಲಿ ಕರ್ಬೂಜ ಹಣ್ಣು ಕಲ್ಲಂಗಡಿಯಂತೆಯೇ ಸಿಕ್ಕಾಪಟ್ಟೆ ಫೇಮಸ್. ಈ ಹಣ್ಣಿನ ಸೇವನೆಯಿಂದ ವಿಶೇಷವಾಗಿ ಬೇಸಿಗೆಯಲ್ಲಿ ಎದುರಾಗುವ ನಿರ್ಜಲೀಕರಣದಿಂದ ಪಾರಾಗಬಹುದು. ಅಷ್ಟೇ ಅಲ್ಲದೇ ಕರ್ಬೂಜ ಹಣ್ಣು, ಜ್ಯೂಸ್ ಸೇವನೆಯಿಂದ ಸಿಗುವ ಆರೋಗ್ಯಕ ಲಾಭಗಳ ಬಗ್ಗೆ ಬಹುತೇಕ ಮಂದಿಗೆ ತಿಳಿದಿಲ್ಲ. ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಕರ್ಬೂಜ ಹಣ್ಣು ತನ್ನಲ್ಲಿ ಅನೇಕ ಆರೋಗ್ಯಕರ ಅಂಶವನ್ನು ಅಡಗಿಸಿ ಇಟ್ಟುಕೊಂಡಿದೆ.

    ಹೌದು. ಕರ್ಬೂಜ ಹಣ್ಣು ಸೇವನೆಯಿಂದ ಅನೇಕ ಆರೋಗ್ಯ ಲಾಭವನ್ನು ಪಡೆಯಬಹುದಾಗಿದೆ. ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಕರ್ಬೂಜ ಹಣ್ಣನ್ನು ಸೇವಿಸಿದರೆ ಒಳ್ಳೆದು. ಈ ಹಣ್ಣಿನಲ್ಲಿ ನೀರಿನಂಶ ಮತ್ತು ವಿವಿಧ ಪೋಷಕಾಂಶಗಳು ಹೆಚ್ಚಿದ್ದರೂ ಕ್ಯಾಲೋರಿಗಳು ಕಡಿಮೆ ಇದೆ. ಹೀಗಾಗಿ ಇದನ್ನು ಸೇವಿಸಿದರೆ ಕೊಬ್ಬು ಹೆಚ್ಚಿಸದೇ ದೇಹಕ್ಕೆ ಶಕ್ತಿ ಒದಗಿಸುತ್ತದೆ.

    ಕರ್ಬೂಜ ಹಣ್ಣಿನಲ್ಲಿ ಕರಗುವ ನಾರು, ಬೀಟಾ ಕ್ಯಾರೋಟೀನ್, ಪೊಟ್ಯಾಶಿಯಂ, ಕಬ್ಬಿಣ, ಮ್ಯಾಂಗನೀಸ್, ಫೋಲಿಕ್ ಆಮ್ಲ, ವಿಟಮಿನ್ ಎ, ಸಿ ಹಾಗೂ ಇತರ ಪ್ರಮುಖ ಪೋಷಕಾಂಶಗಳಿವೆ. ಹೀಗಾಗಿ ಕರ್ಬೂಜ ಹಣ್ಣು ರುಚಿಕರ ಮಾತ್ರವಲ್ಲ, ಇದರ ವಿಶಿಷ್ಟ ಪರಿಮಳವೂ ಎಲ್ಲರ ಮನ ಸೆಳೆಯುತ್ತದೆ. ಕರ್ಬೂಜ ಹಣ್ಣು ಸೇವನೆ ಆರೋಗ್ಯಕ್ಕೆ ಎಷ್ಟು ಲಾಭದಾಯಕ ಎಂಬ ಮಾಹಿತಿ ಇಲ್ಲಿದೆ.

    ಕರ್ಬೂಜ ಹಣ್ಣಿನ ಆರೋಗ್ಯಕಾರ ಲಾಭವೇನು?

    1. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
    ಕರ್ಬೂಜ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿದ್ದು, ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕ್ಷಮತೆ ಹೊಂದಿದೆ. ಈ ಹಣ್ಣಿನ ಸೇವನೆಯಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದ ಬಿಳಿರಕ್ತಕಣಗಳನ್ನು ಉತ್ಪತ್ತಿ ಆಗುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

    2. ಮಧುಮೇಹಕ್ಕೆ
    ಕರ್ಬೂಜ ಹಣ್ಣಿನ ರಸವು ಮಧುಮೇಹ ರೋಗಿಗಳಿಗೆ ಒಳ್ಳೆಯ ಪೂರಕ ಆಹಾರವಾಗಿದ್ದು, ಕರ್ಬುಜ ಹಣ್ಣು ದೇಹದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಹೀಗಾಗಿ ವೈದ್ಯರು ಮಧುಮೇಹಿಗಳಿಗೆ ಸ್ವಲ್ಪ ಕಹಿಯಾದ ಕರ್ಬೂಜ ಹಣ್ಣಿನ ರಸವನ್ನು ಸೇವಿಸಲು ಸೂಚಿಸುತ್ತಾರೆ.

    3. ಕಿಡ್ನಿ ಸಮಸ್ಯೆಗೆ
    ಕರ್ಬೂಜ ಹಣ್ಣು ಅತ್ಯುತ್ತಮ ಮೂತ್ರವರ್ಧಕ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಮೂತ್ರಪಿಂಡ ಸಂಬಂಧಿ ಕಾಯಿಲೆಗೆ ಒಂದೊಳ್ಳೆ ಮದ್ದಾಗಿದೆ. ಅಲ್ಲದೆ ಕಜ್ಜಿ, ತುರುಕೆ ಆಗುವುದನ್ನು ಸಹ ತಡೆಯುತ್ತದೆ. ನಿಂಬೆಹಣ್ಣಿನ ಜೊತೆಗೆ ಕರ್ಬೂಜ ಹಣ್ಣನ್ನು ಸೇವಿಸುವುದರಿಂದ ಸಂಧಿವಾತದ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

    4. ಜೀರ್ಣಶಕ್ತಿಗೆ ವೃದ್ಧಿಸುತ್ತೆ
    ಜೀರ್ಣಕ್ರಿಯೆಯಲ್ಲಿ ಏನಾದರು ತೊಂದರೆ ಇದ್ದಲ್ಲಿ ಕರ್ಬೂಜವನ್ನು ತಿನ್ನುವುದು ಒಳ್ಳೆದು. ಯಾಕೆಂದರೆ ಜೀರ್ಣಕ್ರಿಯೆ ಸರಾಗವಾಗಿ ಆಗುವಾಗುತ್ತದೆ. ಈ ಹಣ್ಣಿನಲ್ಲಿರುವ ನೀರಿನಂಶ ಜೀರ್ಣಕ್ರಿಯೆಗೆ ನೆರವು ನೀಡುತ್ತದೆ. ಇದರಲ್ಲಿರುವ ಖನಿಜಾಂಶವು ಜಠರದಲ್ಲಿ ಜೀರ್ಣಕ್ರಿಯೆಗೆ ತಡೆಯೊಡ್ಡುವ ಆಮ್ಲೀಯತೆ(ಅಸಿಡಿಟಿ) ಯನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ.

    5. ತ್ವಚೆಯ ಸೌಂದರ್ಯಕ್ಕೆ ಒಳ್ಳೆದು
    ಸೌಂದರ್ಯ ಹೆಚ್ಚಿಸಲೂ ಕರ್ಬೂಜದ ಹಣ್ಣನ್ನು ಬಳಸಬಹುದಾಗಿದೆ. ಒಂದು ಮಧ್ಯಮ ಗಾತ್ರದ ಕರ್ಬೂಜ ಹಣ್ಣಿನ ಕಾಲುಭಾಗದ ತಿರುಳು, ಮೂರು ಸ್ಟ್ರಾಬೆರಿ ಹಣ್ಣು, ಒಂದು ದೊಡ್ಡಚಮಚ ಓಟ್ಸ್, ಒಂದು ಚಿಕ್ಕ ಚಮಚ ಜೇನು ತುಪ್ಪ ಸೇರಿಸಿ ಚೆನ್ನಾಗಿ ಕಲಿಸಿಕೊಂಡು. ಆ ಲೇಪನವನ್ನು ಮುಖ, ಕತ್ತು, ಕೈ ಕಾಲುಗಳಿಗೆ ಹಚ್ಚಿ ಸುಮಾರು 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಚರ್ಮಕ್ಕೆ ಪೋಷಕಾಂಶಗಳನ್ನು ಒದಗಿಸಿ ಕೋಮಲತೆ ಮತ್ತು ಕಾಂತಿಯನ್ನು ಹೆಚ್ಚಿಸುತ್ತದೆ.

    6. ತೂಕ ಇಳಿಸಲು ಸಹಕಾರಿ
    ಕರ್ಬೂಜ ಹಣ್ಣು ತೂಕ ಇಳಿಸಲು ಸಹಕಾರಿಯಾಗಿದೆ. ಏಕೆಂದರೆ ಇದರಲ್ಲಿ ಸೋಡಿಯಂ ಅಂಶ ಮಿತವಾಗಿರುತ್ತದೆ. ಇದು ಕೊಬ್ಬು ರಹಿತ, ಕೊಲೆಸ್ಟ್ರಾಲ್ ರಹಿತ ಹಣ್ಣು ಮತ್ತು ಇದರಲ್ಲಿರುವ ಕ್ಯಾಲೋರಿಗಳು ಸಹ ಕಡಿಮೆ. ಹೀಗಾಗಿ ಇದನ್ನು ತಿಂದರೆ ಇದರಲ್ಲಿರುವ ನೀರಿನಂಶವು ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಹೀಗೆ ತೂಕ ಇಳಿಸಲು ಸಹಕಾರಿಯಾಗುತ್ತದೆ.

    7. ಹೃದಯದ ಆರೋಗ್ಯಕ್ಕೆ
    ಕರ್ಬೂಜ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಹೃದಯದ ಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿರುವ ಅಡಿನೋಸಿನ್ ಪೋಷಕಾಂಶಕ್ಕೆ ರಕ್ತವನ್ನು ಹೆಪ್ಪುಗಟ್ಟಿಸುವುದನ್ನು ತಡೆಯುವ ಗುಣವಿದೆ. ಇದು ರಕ್ತನಾಳಗಳಲ್ಲಿ ರಕ್ತ ಸರಾಗವಾಗಿ ಸಂಚರಿಸಲು ನೆರವಾಗುವ. ಈ ಮೂಲಕ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ಹಲವು ಹೃದಯ ಸಂಬಂಧಿ ಕಾಯಿಲೆಗಳು ಬಾರದಂತೆ ನೋಡಿಕೊಳ್ಳುತ್ತದೆ.

    8. ಗರ್ಭಿಣಿಯರ ಆರೋಗ್ಯಕ್ಕೆ ಕರ್ಬೂಜ
    ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹಕ್ಕೆ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲದ ಅಗತ್ಯವಿರುತ್ತದೆ. ಈ ಹಣ್ಣಿನಲ್ಲಿ ಫೋಲಿಕ್ ಆಮ್ಲ ಉತ್ತಮ ಪ್ರಮಾಣದಲ್ಲಿದ್ದು, ಗರ್ಭಿಣಿಯ ದೇಹಕ್ಕೆ ಅಗತ್ಯ ಪೋಷಣೆ ಒದಗಿಸುತ್ತದೆ.

    9. ಮಲಬದ್ಧತೆ ಸಮಸ್ಯೆಗೆ
    ಕರ್ಬೂಜ ಹಣ್ಣಿನ ನೀರು ಮತ್ತು ಕರಗುವ ನಾರು ಅತ್ಯಂತ ಸಂತುಲಿತ ಅನುಪಾತದಲ್ಲಿವೆ. ಇದು ಮಲಬದ್ಧತೆಯ ತೊಂದರೆಯನ್ನು ನಿವಾರಿಸಲು ಸಹಕಾರಿಯಾಗಿದೆ. ಅಲ್ಲದೇ ಜೀರ್ಣಕ್ರಿಯೆಯನ್ನು ಸುಲಭಗೊಳಿ ಆರೋಗ್ಯ ವೃದ್ಧಿಸುತ್ತದೆ.

    10. ಕ್ಯಾನ್ಸರ್ ನಿಂದ ರಕ್ಷಣೆ
    ಕರ್ಬೂಜ ಹಣ್ಣು ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ ಎನ್ನಲಾಗುತ್ತದೆ. ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಹಾಗೂ ಬೀಟಾ ಕ್ಯಾರೋಟೀನ್ ಎಂಬ ಆಂಟಿ ಆಕ್ಸಿಡೆಂಟ್ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಬಹುದಾದ ಫ್ರೀ ರ್ಯಾಡಿಕಲ್ ಕಣಗಳನ್ನು ಹಿಮ್ಮೆಟ್ಟುತ್ತದೆ. ದೇಹದ ಜೀವಕೋಶಗಳಿಗೆ ಈ ಕಣಗಳು ಹಾನಿ ಮಾಡುವುದರಿಂದ ರಕ್ಷಿಸುತ್ತದೆ. ಹೀಗೆ ಕರ್ಬೂಜ ಹಣ್ಣು ಕ್ಯಾನ್ಸರ್ ಬರುವುದನ್ನು ತಡೆದು ರಕ್ಷಣೆ ನೀಡುತ್ತದೆ.

  • ಆರೋಗ್ಯದ ಬೆಸ್ಟ್‌ಫ್ರೆಂಡ್‌ ಆಲೂಗಡ್ಡೆ

    ಆರೋಗ್ಯದ ಬೆಸ್ಟ್‌ಫ್ರೆಂಡ್‌ ಆಲೂಗಡ್ಡೆ

    ಲೂಗಡ್ಡೆ ಅಂದ ತಕ್ಷಣ ನೆನಪಾಗೋದು ಅದರಿಂದ ತಯಾರಿಸುವ ಚಿಪ್ಸ್, ರುಚಿಕರ ತಿಂಡಿ. ಒಂದೆಡೆ ಆಲೂಗಡ್ಡೆಯಿಂದ ತಯಾರಾದ ರುಚಿಕರ ತಿಂಡಿಗೆ ಮನಸೋಲುವವರು ಇದ್ದರೆ, ಇನ್ನೊಂದೆಡೆ ಹೆಚ್ಚು ಆಲೂಗಡ್ಡೆ ತಿಂದರೆ ಕೈ ಕಾಲುಗಳು ಹಿಡಿದುಕೊಳ್ಳುತ್ತೆ, ಗ್ಯಾಸ್ಟಿಕ್ ಸಮಸ್ಯೆ ಆಗುತ್ತೆ, ಇದರ ಸಹವಾಸವೇ ಬೇಡಪ್ಪಾ ಎಂದು ಮೂಗು ಮುರಿಯುವವರೂ ಇರುತ್ತಾರೆ. ಆದರೆ ಆಲೂಗಡ್ಡೆಯನ್ನು ನಿತ್ಯವು ನಿಯಮಿತ ಸೇವಿಸಿದರೆ ಸಿಗುವ ಆರೋಗ್ಯಕರ ಲಾಭದ ಬಗ್ಗೆ ಬಹುತೇಕ ಮಂದಿಗೆ ಅರಿವಿರಲ್ಲ.

    ಆಲೂಗಡ್ಡೆಯಲ್ಲಿ ಇರುವ ಅನೇಕ ಬಗೆಯ ಪೌಷ್ಟಿಕ ಸತ್ವಗಳು ಮನುಷ್ಯನ ದೇಹಕ್ಕೆ ಒಳ್ಳೆದು. ಆಲೂಗಡ್ಡೆ ಸೇವನೆಯಿಂದ, ಅದರ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭವೇನು? ಯಾವ ಸಮಸ್ಯೆಗೆ ಇದು ಮದ್ದು? ಎನ್ನುವುದರ ಮಾಹಿತಿ ಇಲ್ಲಿದೆ.

    ಆಲೂಗಡ್ಡೆ ಜ್ಯೂಸ್ ಕುಡಿಯಬಹುದೇ?
    ಅಧ್ಯಯನ ಹಾಗೂ ತಜ್ಞರ ಪ್ರಕಾರ, ಆಲೂಗಡ್ಡೆ ಜ್ಯೂಸ್ ಆರೋಗ್ಯಕ್ಕೆ ಒಳ್ಳೆದು. ಇದನ್ನು ನಿತ್ಯವು ಮಿತವಾಗಿ ಸೇವಿಸಿದರೆ ಆರೋಗ್ಯದ ಹಲವು ಸಮಸ್ಯೆಗಳು ನಿವಾರಣೆ ಆಗುತ್ತದೆ. ಇದು ಜೀರ್ಣ ಪ್ರಕ್ರಿಯೆ, ಎದೆಯುರಿ, ಚರ್ಮದ ಆರೋಗ್ಯ ಹೀಗೆ ಹಲವು ಸಮಸ್ಯೆಗಳನ್ನು ದೂರ ಮಾಡುತ್ತದೆ.

    ಅಲ್ಲದೆ ಹಸಿ ಆಲೂಗಡ್ಡೆ ಜ್ಯೂಸ್ ವಿಷಕಾರಿ ಅಂತ ಕೆಲವರು ಹೇಳುತ್ತಾರೆ. ಆದರೆ ಅದು ತಪ್ಪು ಕಲ್ಪನೆ. ಹಸಿ ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ದೇಹದ ಮೇಲೆ ಯಾವುದೇ ಕೆಟ್ಟ ಪರಿಣಾಮಗಳು ಉಂಟಾಗುವುದಿಲ್ಲ. ಆದರೆ ಹಸಿ ಆಲೂಗಡ್ಡೆ ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸಬೇಕು, ಹೆಚ್ಚಾಗಿ ಸೇವಿಸಿದರೆ ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

    ಆಲೂಗಡ್ಡೆಯ ಆರೋಗ್ಯಕರ ಲಾಭವೇನು?

    1. ಹೃದಯದ ಆರೋಗ್ಯಕ್ಕೆ ಒಳ್ಳೆದು
    ಆಲೂಗಡ್ಡೆಯಲ್ಲಿ ಪೊಟ್ಯಾಶಿಯಂ ಅಂಶ ಇರುತ್ತದೆ. ಇದು ಕಟ್ಟಿಕೊಂಡಿರುವ ಹೃದಯ ರಕ್ತ ನಾಳಗಳನ್ನು ತೆರವುಗೊಳಿಸಿ ಹೃದಯಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯದ ಕಾಯಿಲೆಗಳು ದೂರಾಗಿ ಆರೋಗ್ಯ ವೃದ್ಧಿಯಾಗುತ್ತದೆ.

    2. ಎದೆಯುರಿ ನಿವಾರಿಸುತ್ತೆ
    ಆಲೂಗಡ್ಡೆ ಜ್ಯೂಸ್‍ನಲ್ಲಿ ಹೊಟ್ಟೆಯ ಒಳ ಪದರಕ್ಕೆ ಬೇಕಾದ ಅಗತ್ಯ ಸಂಯುಕ್ತಗಳು ಬಹಳಷ್ಟಿವೆ. ಇವುಗಳು ಹೊಟ್ಟೆಯ ಆಮ್ಲವನ್ನು ಹೆಚ್ಚಾಗದಂತೆ ತಡೆದು, ಜಠರದಲ್ಲಿ ಕಾಣಿಸುವ ಉರಿಯೂತವನ್ನು ಗುಣ ಪಡಿಸುತ್ತದೆ. ಆದ್ದರಿಂದ ಊಟಕ್ಕೆ ಅರ್ಧ ಗಂಟೆ ಮುಂಚೆ ಪ್ರತಿ ದಿನ 3 ರಿಂದ 4 ಟೇಬಲ್ ಚಮಚಗಳಷ್ಟು ಆಲೂಗಡ್ಡೆ ಜ್ಯೂಸ್ ಕುಡಿಯುವುದು ಒಳ್ಳೆದು. ಇದರಿಂದ ಎದೆಯುರಿ ಸಮಸ್ಯೆ ನಿವಾರಣೆಯಾಗುತ್ತೆ.

    3. ತೂಕ ಇಳಿಸಲು ಸಹಕಾರಿ
    ಹಸಿ ಆಲೂಗಡ್ಡೆ ಜ್ಯೂಸ್‍ನಲ್ಲಿ ವಿಟಮಿನ್ ‘ಸಿ’ ಅಂಶ ಇರುತ್ತದೆ, ಇದು ದೇಹದ ಮೆಟಬಾಲಿಸಂ ಹೆಚ್ಚಿಸುತ್ತದೆ. ಇದರಿಂದ ತೂಕ ಕಡಿಮೆ ಆಗುತ್ತದೆ. ಹೀಗಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಊಟದ ನಂತರ ಆಲೂಗಡ್ಡೆ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಆಲೂಗಡ್ಡೆ ಜ್ಯೂಸ್ ಹೆಚ್ಚು ಹಸಿವಾಗದಂತೆ ನೋಡಿಕೊಳ್ಳುವುದರಿಂದ ದೇಹದ ತೂಕ ಇಳಿಯುತ್ತದೆ.

    4. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತೆ
    ಆಲೂಗಡ್ಡೆಗಳಲ್ಲಿ ಆಲ್ಕಲೈನ್ ಅಂಶ ಬಹಳಷ್ಟಿದೆ. ಇದು ಮನುಷ್ಯನ ದೇಹದ ಅನ್ನನಾಳವನ್ನು ಶುಚಿಗೊಳಿಸಿ, ಅದಕ್ಕೆ ಬೇಕಾದ ಪೌಷ್ಟಿಕ ಸತ್ವಗಳನ್ನು ಒದಗಿಸುತ್ತದೆ. ಇದರಿಂದ ಜೀರ್ಣ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

    5. ಗಾಯಗಳು ಬೇಗ ಮಾಗುತ್ತವೆ
    ಆಲೂಗಡ್ಡೆ ಜ್ಯೂಸ್‍ನಲ್ಲಿ ಜಿಂಕ್ ಮತ್ತು ವಿಟಮಿನ್ ‘ಸಿ’ ಅಂಶವಿದ್ದು, ಇದು ಗಾಯ ವಾಸಿಯಾಗುವ ಪ್ರಕ್ರಿಯೆಯನ್ನು ಚುರುಕುಗೊಳಿಸಿ. ಅಲ್ಲದೇ ಗಾಯವಾದ ಭಾಗದಲ್ಲಿ ಊದಿಕೊಂಡ ಮಾಂಸ ಖಂಡಗಳನ್ನು ಸಹಜ ಸ್ಥಿತಿಗೆ ಮರಳಿಸುತ್ತದೆ. ಇದರಿಂದ ಗಾಯಗಳು ಬೇಗನೇ ಮಾಗುತ್ತದೆ.

    6. ಮೂತ್ರ ಪಿಂಡಗಳ ಆರೋಗ್ಯಕ್ಕೆ
    ಆಲೂಗಡ್ಡೆ ಜ್ಯೂಸ್‍ನಲ್ಲಿ ಪೊಟ್ಯಾಷಿಯಂ ಅಂಶವನ್ನು ಅಡಗಿದ್ದು, ಇದು ಕಿಡ್ನಿಗಳ ಕಾರ್ಯ ಚಟುವಟಿಕೆಯನ್ನು ಬಲಪಡಿಸುತ್ತದೆ. ಪೊಟ್ಯಾಶಿಯಂ ಒಂದು ಎಲೆಕ್ಟ್ರೋಲೈಟ್ ಆಗಿದ್ದು, ಇದು ದೇಹದಲ್ಲಿರುವ ದ್ರವಗಳನ್ನು ನಿಯಂತ್ರಿಸುತ್ತದೆ.

    7. ರೋಗ ನಿರೋಧಕ ಶಕ್ತಿ ವೃದ್ಧಿಸುತ್ತೆ
    ಆಲೂಗಡ್ಡೆ ಜ್ಯೂಸ್‍ನಲ್ಲಿ ಆಂಟಿ – ಆಕ್ಸಿಡೆಂಟ್ ಎಂದು ಗುರುತಿಸಿಕೊಂಡ ವಿಟಮಿನ್ ‘ ಸಿ ‘ ಅಂಶವಿದೆ. ಇದು ದೇಹದ ಸೋಂಕು ಮತ್ತು ಸಾಮಾನ್ಯ ಶೀತದ ನಿವಾರಣೆಗೆ ಸಹಾಯಕವಾಗಿದೆ. ಈ ಅಂಶ ರೋಗ ನಿರೋಧಕ ವ್ಯವಸ್ಥೆಯನ್ನು ಹೊರಗಿನ ಹಾನಿಕಾರಕ ರೋಗಕಾರಕಗಳಿಂದ ರಕ್ಷಿಸುತ್ತದೆ. ಅಲ್ಲದೇ ದೀರ್ಘ ಕಾಲದ ಕಾಯಿಲೆಗಳನ್ನು ನಿಧಾನವಾಗಿ ಗುಣ ಪಡಿಸುತ್ತದೆ.

    8. ಲಿವರ್ ಆರೋಗ್ಯಕ್ಕೆ
    ಆಲೂಗಡ್ಡೆ ಜ್ಯೂಸ್ ಪಿತ್ತಕೋಶದ ಸೋಂಕುಗಳನ್ನು ಗುಣಪಡಿಸಿ ಲಿವರ್‍ನ ಶುದ್ಧೀಕರಿಸುತ್ತೆ. ಆಲೂಗಡ್ಡೆ ಜ್ಯೂಸ್ ದೇಹದ ತ್ಯಾಜ್ಯ ವಸ್ತುಗಳನ್ನು ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕುವ ಲಿವರ್‍ನ ಸಾಮರ್ಥ್ಯವನ್ನು ಹೆಚ್ಚಿಸುತ್ತೆ. ಆದ್ದರಿಂದ ಇದು ನಿರ್ವಿಷಕಾರಿ ಏಜೆಂಟ್ ಎನ್ನಿಸಿಕೊಂಡಿದೆ.

  • ತಿನ್ನಲು ಕಹಿಯಾದ್ರು ಆರೋಗ್ಯಕ್ಕೆ ಸಿಹಿಯಾದ ಬೇವು

    ತಿನ್ನಲು ಕಹಿಯಾದ್ರು ಆರೋಗ್ಯಕ್ಕೆ ಸಿಹಿಯಾದ ಬೇವು

    ಬೇವು ಎಂದಾಕ್ಷಣ ನೆನಪಾಗೋದು ಕಹಿ. ಆದರೆ ಈ ಬೇವಿನಲ್ಲಿರುವ ಕಹಿ ಅಂಶ ಆರೋಗ್ಯಕ್ಕೆ ಎಷ್ಟು ಸಿಹಿ ಎನ್ನುವ ಬಗ್ಗೆ ಹಲವರಿಗೆ ತಿಳಿದಿರಲ್ಲ. ಜೀವನದಲ್ಲಿ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಲು ಸಾಂಕೇತಿಕವಾಗಿ ಬೇವು, ಬೆಲ್ಲವನ್ನು ಪ್ರತಿ ಯುಗಾದಿಯಂದು ಹಂಚಲಾಗುತ್ತೆ. ಇದರ ಹಿಂದೆ ಒಂದು ಆರೋಗ್ಯಕರ ಕಾರಣವೂ ಅಡಗಿದೆ. ಪುರಾತನ ಗ್ರಂಥದಲ್ಲಿ ಬೇವಿನ ಆರೋಗ್ಯಕರ ಲಾಭದ ಬಗ್ಗೆ ಉಲ್ಲೇಖವಿದೆ.

    ಬೇವಿನ ಉತ್ತಮ ಗುಣಗಳಲ್ಲಿ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಮತ್ತು ಶಿಲೀಂಧ್ರ ನಿವಾರಕಗಳೂ ಸೇರಿದ್ದು, ಈ ಗುಣಗಳು ಮಾನವನ ಆರೋಗ್ಯಕ್ಕೆ ಒಳ್ಳೆದು ಎನ್ನಲಾಗುತ್ತೆ. ಅಷ್ಟೇ ಅಲ್ಲದೇ ಬೇವಿನ ಎಲೆಗಳನ್ನು ಅರೆದು ಅದನ್ನು ಗಾಯಗಳಿಗೆ ಹಚ್ಚಿದರೆ ಗಾಯ ಬೇಗನೇ ಮಾಗುತ್ತವೆ.

    ಸಿಡುಬು (chicken pox), ಅಮ್ಮ (small pox), ದದ್ದು, ಕಾಲಿನ ಮೊಳೆ ಮೊದಲಾದ ತೊಂದರೆಗಳು ಬೇವಿನಿಂದ ಬೇಗನೇ ನಿವಾರಣೆಯಾಗುತ್ತದೆ. ಸುಲಭವಾಗಿ ಬಗ್ಗದ ಹರ್ಪೆಸ್ ವೈರಸ್ (herpes virus) ಕೂಡ ಬೇವು ನಾಶ ಮಾಡುತ್ತದೆ. ಕಹಿ ಬೇವನ್ನು ತಿನ್ನುವುದರ ಲಾಭವೇನು? ಯಾವೆಲ್ಲ ಸಮಸ್ಯೆಗೆ ಇದು ಮದ್ದು ಎನ್ನುವ ಮಾಹಿತಿ ಇಲ್ಲಿದೆ.

    ಬೇವಿನ ಆರೋಗ್ಯಕರ ಲಾಭವೇನು?

    ಲಿವರ್ ಸಮಸ್ಯೆಗೆ ಮದ್ದು:
    ಬೇವಿನ ಎಲೆಗಳನ್ನು ಸೇವಿಸುವುದರಿಂದ ಲೀವರ್ ಕ್ಷಮತೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ. ಅಲ್ಲದೇ ರಕ್ತದಿಂದ ವಿಷಕಾರಿ ಅಂಶವನ್ನು ಹೊರಹಾಕಲು ನೆರವಾಗುತ್ತದೆ. ಜೊತೆಗೆ ಜೀರ್ಣ ಮತ್ತು ಶ್ವಾಸಕೋಶದ ವ್ಯವಸ್ಥೆಯನ್ನು ಇದು ಉತ್ತಮಗೊಳಿಸುತ್ತದೆ. ಅಲ್ಲದೇ ಬೇವಿನ ಎಣ್ಣೆ ಮತ್ತು ಬೇವಿನ ರಸಗಳನ್ನು ಸೇವಿಸುವುದರಿಂದ ದೇಹದಲ್ಲಿದ್ದ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶವಾಗುತ್ತದೆ.

    ಚರ್ಮದ ಸಮಸ್ಯೆಗೆ:
    ಬೇವಿನ ಎಣ್ಣೆಯನ್ನು ಬಿಸಿ ನೀರಿನಲ್ಲಿ ಸೇರಿಸಿ ಸ್ನಾನ ಮಾಡುವುದರಿಂದ ವಿವಿಧ ಚರ್ಮರೋಗಗಳು, ತುರಿಕೆ, ಹುಳಕಡ್ಡಿ ಮೊದಲಾದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಶೀತ ಮತ್ತು ಎಕ್ಸಿಮಾದಂತಹ ಚರ್ಮರೋಗವೂ ಕೂಡ ಇದರಿಂದ ವಾಸಿಯಾಗುತ್ತದೆ.

    ತ್ವಚೆಯ ಕಲೆ ನಿವಾರಿಸುತ್ತದೆ:
    ಗಾಯ ಮತ್ತು ಮೊಡವೆಗಳು ಮಾಗಿದ ಬಳಿಕ ಚರ್ಮದ ಮೇಲೆ ಕಲೆಗಳು ಉಳಿದು ಬಿಡುತ್ತದೆ. ಈ ಕಲೆಗಳನ್ನು ನಿವಾರಿಸಲು ಬೇವು ಸಹಕಾರಿಯಾಗಿದ್ದು, ಮುಖದಲ್ಲಿ ಮತ್ತೆ ಮೊಡವೆಗಳು ಆಗದಂತೆ ತಡೆಯುತ್ತದೆ.

    ಚಿಕ್ಕಪುಟ್ಟ ಗಾಯಗಳಾದರೆ ಬೇವಿನ ಎಲೆಗಳ ರಸ ಅಥವಾ ಎಲೆಗಳನ್ನು ಅರೆದ ಹಚ್ಚಿದರೆ ಗಾಯಗಳು ಬೇಗ ಮಾಗುತ್ತದೆ. ಅಲ್ಲದೆ ಮೊಡವೆಗಳನ್ನು ನಿಯಂತ್ರಿಸಲು ನಿತ್ಯವೂ ಸ್ನಾನ ಮಾಡುವ ನೀರಿಗೆ ಬೇವಿನ ಎಣ್ಣೆಯ ಕೆಲವು ಹನಿಗಳನ್ನು ಸೇರಿಸಿದರೆ ತ್ವಚೆಯ ದುರ್ಗಂಧ, ಸೋಂಕುಗಳು ನಿವಾರಣೆಯಾಗುತ್ತದೆ ಹಾಗೂ ಚರ್ಮದಲ್ಲಿ ದದ್ದು, ಮೊಡವೆಗಳು ಆಗದಂತೆ ಇದು ನೋಡಿಕೊಳ್ಳುತ್ತದೆ.

    ಮುಖದ ಕಾಂತಿ ಹೆಚ್ಚಿಸುತ್ತದೆ:
    ಬೇವಿನ ಎಲೆಗಳನ್ನು ಹಾಕಿ ಕುದಿಸಿದ ನೀರಿನಲ್ಲಿ ಅದ್ದಿದ ಬಟ್ಟೆಯನ್ನು ಇಡೀ ರಾತ್ರಿ ಮುಖದ ಮೇಲೆ ಇಟ್ಟುಕೊಂಡು ಮಲಗಿದರೆ ಮುಖದ ಕಾಂತಿ ಹೆಚ್ಚಾಗುತ್ತೆ. ಹಾಗೆಯೇ ಈ ನೀರನ್ನು ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕೂಡಲು ಉದುರುವಿಕೆ, ತಲೆಹೊಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ.

    ರಕ್ತ ಶುದ್ಧೀಕರಣಗೊಳಿಸುತ್ತೆ:
    ಬೇವನ್ನು ತಿಂದರೆ ರಕ್ತ ಶುದ್ಧೀಕರಣಗೊಳ್ಳುತ್ತದೆ ಹಾಗೂ ರಕ್ತದೊತ್ತಡ ಕಡಿಮೆಯಾಗುತ್ತದೆ. ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರ ಹಾಕಿ, ರಕ್ತಸಂಚಾರ ಉತ್ತಮಗೊಳ್ಳುತ್ತದೆ. ವೃದ್ಧಾಪ್ಯ ಬೇಗನೇ ಆವರಿಸಲು ಕಾರಣವಾಗುವ free radical ಎಂಬ ಕಣಗಳನ್ನು ಬೇವು ಕೊಲ್ಲುವುದರಿಂದ ತಾರುಣ್ಯ ಬಹುಕಾಲ ಉಳಿಯುತ್ತದೆ. ಅಲ್ಲದೇ ಬೇವನ್ನು ಸೇರಿಸಿದರೆ ರಕ್ತನಾಳಗಳಲ್ಲಿ ಸಂಗ್ರಹವಾಗಿದ್ದ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಯಾಗಿ, ದೇಹದಲ್ಲಿ ರಕ್ತಸಂಚಾರ ಸುಗಮಗೊಳ್ಳುತ್ತದೆ. ಇದರಿಂದ ಹೃದಯದ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ.

    ಮಲೇರಿಯಾ ಜ್ವರಕ್ಕೆ:
    ಬೇವಿನಲ್ಲಿರುವ ಜೆಡ್ಯುನಿನ್ (Gedunin) ಎಂಬ ರಾಸಾಯನಿಕ ಮಲೇರಿಯಾ ಜ್ವರವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಬೇವಿನ ಎಲೆಗಳನ್ನು ಜಜ್ಜಿ ಮನೆಯ ಸುತ್ತ ಮುತ್ತ ಹರಡುವುದರಿಂದ ಆ ವಾಸನೆಗೆ ಸೊಳ್ಳೆಗಳು ಕಡಿಮೆ ಆಗುತ್ತದೆ. ಅಲ್ಲದೆ ಬೇವಿನ ಎಲೆಗಳನ್ನು ತಿಂದರೆ ಅಥವಾ ಅದರ ರಸವನ್ನು ಕುಡಿದರೆ ಮಲೇರಿಯಾ ಜ್ವರ ಕಡಿಮೆ ಆಗುತ್ತದೆ.

    ಕ್ಯಾನ್ಸರ್ ನಿಯಂತ್ರಿಸಲು:
    ನಿಯಮಿತವಾಗಿ ಬೇವಿನ ಎಲೆಗಳನ್ನು ಹಸಿಯಾಗಿ ಸೇವಿಸುವವರಲ್ಲಿ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಳ್ಳು ಸಾಧ್ಯತೆ ಕಡಿಮೆ. ಬೇವಿನ ಮರದ ತೊಗಟೆಯಲ್ಲಿ ಕಂಡುಬರುವ Limonoids ಮತ್ತು polysaccharides ಎಂಬ ರಾಸಾಯನಿಕಗಳು ದೇಹದಲ್ಲಿ ಕ್ಯಾನ್ಸರ್ ಮತ್ತು ಗಡ್ಡೆಯುಂಟಾಗುವುದನ್ನು ತಡೆಯುತ್ತದೆ.

    ಸಂಧಿವಾತಕ್ಕೆ:
    ಸಂಧಿವಾತ ಸಮಸ್ಯೆಗೆ ಬೇವಿನ ಎಲೆ ಮತ್ತು ಬೇವಿನ ತೊಗಟೆಯನ್ನು ಅರೆದು ತಯಾರಿಸಿದ ಲೇಪನ ಉತ್ತಮ ಪರಿಹಾರ ನೀಡುತ್ತದೆ. ಇದರಿಂದ ಸಂದುಗಳಲ್ಲಿ ಬಾವು, ನೋವು ಕೂಡ ಕಡಿಮೆಯಾಗುತ್ತದೆ.

    ಬೇವಿನ ಎಣ್ಣೆಯ ಮಸಾಜ್:
    ಬೇವಿನ ಎಣ್ಣೆ ಚರ್ಮಕ್ಕೆ ಒಳ್ಳೆದು. ಈ ಎಣ್ಣೆಯಲ್ಲಿ ಮೈಯನ್ನು ಮಸಾಜ್ ಮಾಡುವುದರಿಂದ ಕೆಳಬೆನ್ನಿನ ನೋವು, ಸಂಧಿವಾತ, ಸ್ನಾಯುಗಳಲ್ಲಿ ನೋವು ಹೀಗೆ ವಿವಿಧ ನೋವುಗಳು ಕಡಿಮೆಯಾಗುತ್ತವೆ.

  • ಹೆಚ್ಚು ನಿಂಬೆರಸ ಸೇವನೆ ಆರೋಗ್ಯಕ್ಕೆ ಹಾನಿಕರ

    ಹೆಚ್ಚು ನಿಂಬೆರಸ ಸೇವನೆ ಆರೋಗ್ಯಕ್ಕೆ ಹಾನಿಕರ

    ನಿಂಬೆಹಣ್ಣು ಆರೋಗ್ಯಕ್ಕೆ ಒಳ್ಳೆದು ಎನ್ನುವ ವಿಚಾರ ಸಾಮಾನ್ಯವಾಗಿ ಎಲ್ಲರಿಗು ತಿಳಿದಿದೆ. ಆದ್ರೆ ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೆ ಒಳ್ಳೆದು ಎಂದು ಹೆಚ್ಚು ನಿಂಬೆರಸ ಸೇವಿಸಿದರೆ ಆರೋಗ್ಯ ಹಾನಿಕರ ಎನ್ನುವ ಬಗ್ಗೆ ಹಲವರಿಗೆ ತಿಳಿದಿಲ್ಲ.

    ಹೌದು. ಅನೇಕ ಮನೆಮದ್ದುಗಳಲ್ಲಿ ನಿಂಬೆರಸ ಬಳಸಲಾಗುತ್ತದೆ. ಬೆಳಗ್ಗೆ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ದೇಹದ ಕೊಬ್ಬು ಕರಗುವುದರ ಜೊತೆಗೆ ಕ್ಯಾನ್ಸರ್ ತಡೆಗಟ್ಟಬಹುದೆಂದು ಅಧ್ಯಯನಗಳು ಹೇಳಿವೆ. ಇದರ ಜೊತೆಗೆ ಅತಿಯಾಗಿ ನಿಂಬೆರಸ ಸೇವಿಸಿದರೆ ಎಷ್ಟು ಅಪಾಯಕಾರಿ ಎನ್ನುವುದನ್ನ ಕೂಡ ಅಧ್ಯಯನಗಳೇ ತಿಳಿಸಿವೆ.

    ಆರೋಗ್ಯಕರ ಗುಣವಿರುವ ನಿಂಬೆಹಣ್ಣಿನ ರಸವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದು ತಿಳಿಯದಿದ್ದರೆ ಅಪಾಯ ತಪ್ಪಿದ್ದಲ್ಲ. ನಿಂಬೆ ಹಣ್ಣಿನಲ್ಲಿರುವ ಆಮ್ಲೀಯ ಗುಣ ಹೆಚ್ಚಾಗಿ ದೇಹ ಸೇರಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

    ಎಷ್ಟು ಪ್ರಮಾಣದಲ್ಲಿ ನಿಂಬೆರಸ ಸೇವನೆ ಮಾಡಬೇಕು?
    ನಿಂಬೆರಸ ಎಷ್ಟು ಸೇವಿಸಬೇಕು ಎಂಬುದು ವ್ಯಕ್ತಿಯ ವಯಸ್ಸು, ಆರೋಗ್ಯ ಮುಂತಾದವುಗಳ ಮೇಲೆ ಅವಲಂಬಿತವಾಗಿರುತ್ತೆ. ನಿಂಬೆರಸವನ್ನು ಇಷ್ಟೇ ಪ್ರಮಾಣದಲ್ಲಿ ಸೇವಿಸಬೇಕು ಎಂದು ನಿರ್ಧರಿಸಲು ಸಾಕಷ್ಟು ವೈಜ್ಞಾನಿಕ ಮಾಹಿತಿಗಳಿಲ್ಲ. ಆದರೆ ವೈದ್ಯರ ಪ್ರಕಾರ, ದಿನಕ್ಕೆ ಒಂದು ಲೋಟ ಅಥವಾ ಎರಡು ಲೋಟ ನಿಂಬೆರಸ (ಸುಮಾರು 120 ಮಿಲಿ) ಸುರಕ್ಷಿತವೆಂದು ಸೂಚಿಸಲಾಗಿದೆ. ಅದಕ್ಕಿಂತ ಹೆಚ್ಚು ನಿಂಬೆರಸ ಸೇವಿಸುವುದು ಒಳ್ಳೆಯದಲ್ಲ ಎನ್ನಲಾಗುತ್ತೆ.

    ಹೆಚ್ಚು ನಿಂಬೆರಸ ಸೇವಿಸಿದ್ರೆ ಏನಾಗುತ್ತೆ?

    1. ಹಲ್ಲಿನ ಸಮಸ್ಯೆ
    ಅತಿಯಾದ ನಿಂಬೆರಸ ಸೇವನೆಯಿಂದ ಅದರಲ್ಲಿರುವ ಆಮ್ಲೀಯ ಗುಣ ಹಲ್ಲಿನ ಮೆರುಗನ್ನು ನಾಶಗೊಳಿಸಬಹುದು. ಇತರೆ ತಂಪು ಪಾನೀಯಗಳಂತೆ ನಿಂಬೆರಸ ಕೂಡ ಹಲ್ಲಿನ ಸಮಸ್ಯಗೆ ಕಾರಣವಾಗಿದೆ. ಆದರೆ ನಿಂಬೆರಸ ಸೇವನೆಯ ಬಳಿಕ ಹಲ್ಲನ್ನು ಉಜ್ಜುವುದರಿಂದ ಹಲ್ಲಿನ ಸವೆತವನ್ನು ತಡೆಗಟ್ಟಬಹುದು.

    2. ಎದೆಯುರಿ ಉಂಟುಮಾಡುತ್ತದೆ
    ಕೆಲವು ಸಂಶೋಧನೆಗಳ ಪ್ರಕಾರ, ಸಿಟ್ರಸ್ ಅಂಶ ಒಳಗೊಂಡ ಹಣ್ಣುಗಳು ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್ ಗೆ ಕಾರಣವಾಗಬಹುದು. ನಿಂಬೆರಸ ಎದೆಯುರಿಯನ್ನು ಹೆಚ್ಚಿಸಬಹುದು ಮತ್ತು ಕಡಿಮೆ ಮಾಡಲೂ ಬಹುದು. ಆದರೆ ಅತೀಯಾಗಿ ನಿಂಬೆರಸ ಸೇವಿಸಿದರೆ ಎದೆಯುರಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಎದೆಯುರಿ ಸಮಸ್ಯೆ ಇದ್ದರೆ ನಿಂಬೆರಸ ಅಥವಾ ಯಾವುದೇ ಸಿಟ್ರಿಕ್ ಅಂಶದ ಪಾನಿಯ ಕುಡಿಯುವ ಮೊದಲು ವೈದ್ಯರ ಸಲಹೆ ಪಡೆಯೋದು ಸೂಕ್ತ.

    3. ಮೈಗ್ರೇನ್ ಹೆಚ್ಚಿಸುತ್ತದೆ
    ಸಿಟ್ರಸ್ ಹಣ್ಣುಗಳು ಮೈಗ್ರೇನ್ ಅನ್ನು ಹೆಚ್ಚು ಮಾಡುತ್ತದೆ. ಸಿಟ್ರಸ್ ಹಣ್ಣುಗಳನ್ನು ಮಿತಿಮೀರಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕ. ಈ ಹಣ್ಣುಗಳು ಅಲರ್ಜಿ ಉಂಟುಮಾಡುವುದರ ಮೂಲಕ ಮೈಗ್ರೇನ್‍ಗೆ ಕಾರಣವಾಗಬಹುದು. ಸಿಟ್ರಸ್ ಹಣ್ಣುಗಳಲ್ಲಿ ಟೈರಮೈನ್ ಅಂಶ ಇರುತ್ತದೆ. ಇದು ಮೈಗ್ರೇನ್ ಗೆ ಪ್ರಮುಖ ಕಾರಣವಾಗಿದೆ.

    4. ಬಾಯಿ ಹುಣ್ಣನ್ನು ಉಲ್ಬಣಗೊಳಿಸಬಹುದು
    ಬಾಯಿ ಹುಣ್ಣುಗಳಲ್ಲಿ ಕ್ಯಾಂಕರ್ ಹುಣ್ಣುಗಳು ಒಂದು ರೂಪ. ಇವು ಬಾಯಿಯೊಳಗೆ ಉಂಟಾಗುವ ಹುಣ್ಣುಗಲಾಗಿದ್ದು, ಹೆಚ್ಚು ನೋವಿನಿಂದ ಕೂಡಿರುತ್ತವೆ. ಸಿಟ್ರಿಕ್ ಆಮ್ಲವು ಬಾಯಿಯ ಹುಣ್ಣುಗಳನ್ನು ಇನ್ನಷ್ಟು ಹೆಚ್ಚು ಮಾಡುವುದರಿಂದ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

  • ಪ್ರತಿ ದಿನ ಮೊಸರು ತಿಂದು ಆರೋಗ್ಯವಾಗಿರಿ

    ಪ್ರತಿ ದಿನ ಮೊಸರು ತಿಂದು ಆರೋಗ್ಯವಾಗಿರಿ

    ನೀರು ಬಿಟ್ಟರೆ ನಮ್ಮ ದೇಹ ಅತಿ ಸುಲಭವಾಗಿ ಜೀರ್ಣಿಸಿಕೊಳ್ಳುವ ಆಹಾರವೆಂದರೆ ಮೊಸರು. ಮೊಸರಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳು ದೇಹಕ್ಕೆ ಒಳ್ಳೆದು. ಇದು ಆಹಾರವನ್ನು ಜೀರ್ಣಿಕೊಳ್ಳಲು ಸಹಕಾರಿಯಾಗಿದೆ. ಆದ್ದರಿಂದ ಮೊಸರು ಒಂದು ಆರೋಗ್ಯಕರ ಆಹಾರವಾಗಿದ್ದು, ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

    ಜೀರ್ಣ ಸಮಸ್ಯೆ ಇರುವ ರೋಗಿಗಳಿಗೆ ವೈದ್ಯರು ಕೂಡ ಹೆಚ್ಚಾಗಿ ಮೊಸರನ್ನೇ ತಿನ್ನಲು ಸೂಚಿಸುತ್ತಾರೆ. ಅದರಲ್ಲೂ ದಕ್ಷಿಣ ಭಾರತದ ಆಹಾರ ಪದ್ಧತಿಯಲ್ಲಿ ಮೊಸರಿಗೆ ವಿಶೇಷ ಸ್ಥಾನವಿದ್ದು, ಊಟದಲ್ಲಿ ಮೊಸರು ಇಲ್ಲವೆಂದರೆ ಊಟ ಪರಿಪೂರ್ಣವಾಗಲ್ಲ. ಊಟದ ಕೊನೆಯಲ್ಲಿ ನೀವು ಸೇವಿಸುವ ಮೊಸರು ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಲಾಭ ನೀಡುತ್ತದೆ. ಆದ್ದರಿಂದಲೇ ಹಿರಿಯರು, ವೈದ್ಯರು ಆರೋಗ್ಯವಾಗಿರಲು ಮೊಸರು ತಿನ್ನಿ ಎನ್ನುತ್ತಾರೆ. ಜೊತೆಗೆ ರಾತ್ರಿ ಹೊತ್ತು ಮೊಸರು ಸೇವಿಸುವುದು ಅಷ್ಟು ಸೂಕ್ತವಲ್ಲ ಎಂಬ ಮಾತುಗಳು ಕೂಡ ಇದೆ.

    ಮೊಸರಿನ ಆರೋಗ್ಯಕರ ಲಾಭವೇನು?

    ನಿಶ್ಯಕ್ತಿಯಿಂದ ಬಳಲುವವರು ಮೊಸರು ತಿನ್ನಿ:
    ನಿಶ್ಯಕ್ತಿಯಿಂದ ಬಳಲುವವರು ಮಿತವಾಗಿ ಮೊಸರನ್ನು ಸೇವಿಸಿದರೆ ದೇಹದಲ್ಲಿ ನಿಶ್ಯಕ್ತಿಯಾಗದಂತೆ ತಡೆಯುತ್ತದೆ. ಮೊಸರು ಜೀರ್ಣಿಸಿಕೊಳ್ಳಲು ಸುಲಭವಾಗಿರುವುದಕ್ಕೆ ನಿಶ್ಯಕ್ತಿಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮೊಸರು ಅತ್ಯುತ್ತಮವಾದ ಆಹಾರವಾಗಿದೆ.

    ನಿದ್ರಾಹೀನತೆಗೆ:
    ನಿದ್ರಾಹೀನತೆಯಿಂದ ಬಳಲುವವರು ರಾತ್ರಿ ಮಲಗುವ ಮುನ್ನ ಮೊಸರನ್ನು ಸೇವಿಸಿ ಮಲಗಬೇಕು. ಇದು ನಿದ್ರಾಹೀನತೆಯನ್ನು ದೂರಮಾಡಿ, ಆರೋಗ್ಯವನ್ನು ವೃದ್ಧಿಸುತ್ತದೆ.

    ಬಾಯಿ ಹುಣ್ಣಿಗೆ:
    ಬಾಯಿ ಹುಣ್ಣಿನ ಸಮಸ್ಯೆ ಇದ್ದವರು ರಾತ್ರಿ ಮಲಗುವ ಮುನ್ನ ಮತ್ತು ಬೆಳಗ್ಗೆ ಎದ್ದ ತಕ್ಷಣ ಗಟ್ಟಿ ಮೊಸರನ್ನು ಬಾಯಿಯ ಒಳಭಾಗದಲ್ಲಿ ಸವರಿಕೊಳ್ಳಬೇಕು. ಇದರಿಂದ ಶೀಘ್ರವೇ ಬಾಯಿ ಹುಣ್ಣಿನ ಸಮಸ್ಯೆ ಗುಣವಾಗುತ್ತದೆ.

    ಕರುಳು ಹಾಗೂ ಜಠರದ ತೊಂದರೆಗಳಿಗೆ:
    ದಿನವು ಮೊಸರನ್ನು ಆಹಾರದ ಒಂದು ಭಾಗವಾಗಿ ಸೇವಿಸುವ ವ್ಯಕ್ತಿಗಳಲ್ಲಿ ಕರುಳು ಹಾಗೂ ಜಠರದ ತೊಂದರೆಗಳು ಉಂಟಾಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಹೊಟ್ಟೆಯೊಳಗೆ ಬಿಸಿಯಾಗಿರುವಂತೆ ಅನುಭವವಾದರೆ ಅನ್ನಕ್ಕೆ ಮೊಸರು ಕಲಸಿಕೊಂಡು ಸೇವಿಸುವು ಒಳ್ಳೆದು.

    ಮೂಲವ್ಯಾಧಿಯ ಸಮಸ್ಯೆಗೆ:
    ಮೂಲವ್ಯಾಧಿಯಿಂದ ಬಳಲುವವರು ಮೊಸರಿಗೆ ಸ್ವಲ್ಪ ನೀರು ಬೆರೆಸಿ, ಇದರಲ್ಲಿ ಕೆಲವು ಪಿಸ್ತಾಗಳನ್ನು ನೆನೆಸಿಟ್ಟು, ಅದನ್ನು ಅರೆದು ಕುಡಿದರೆ ಮೂಲವ್ಯಾಧಿ ನೋವಿನಿಂದ ಮುಕ್ತಿ ದೊರಕುತ್ತದೆ.

    ಮೂಳೆಗಳ ಆರೋಗ್ಯಕ್ಕೆ ಬೆಸ್ಟ್:
    ಮೂಳೆಗಳನ್ನು ದೃಢಗೊಳಿಸಲು ಹಾಲಿಗಿಂತಲೂ ಮೊಸರು ಬೆಸ್ಟ್. ಯಾಕೆಂದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ನೇರವಾಗಿ ಪಡೆದುಕೊಳ್ಳಲು ನಮ್ಮ ದೇಹಕ್ಕೆ ಸಾಧ್ಯವಿಲ್ಲ. ಆದ್ದರಿಂದ ಹಾಲಿಗೆ ಜೇನು ತುಪ್ಪ ಸೇರಿಸಬೇಕಾಗುತ್ತದೆ. ಆದ್ರೆ ಮೊಸರಿನ ವಿಷಯದಲ್ಲಿ ಹಾಗಿಲ್ಲ. ಮೊಸರಿನಲ್ಲಿರುವ ಕ್ಯಾಲ್ಸಿಯಂ ಅನ್ನು ಜೇನು ತುಪ್ಪದ ಅಗತ್ಯವಿಲ್ಲದೇ ದೇಹ ಹೀರಿಕೊಳ್ಳುತ್ತದೆ. ಹೀಗಾಗಿ ಮೂಳೆಗಳ ಆರೋಗ್ಯಕ್ಕೆ ಇದು ಒಳ್ಳೆದು ಎನ್ನಲಾಗುತ್ತೆ.

    ಹೃದಯದ ಕಾಯಿಲೆ, ರಕ್ತದೊತ್ತಡಕ್ಕೆ:
    ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡಗಳಿಂದ ರಕ್ಷಣೆ ದೊರಕಲು ಮೊಸರನ್ನು ಸೇವಿಸಿ. ಮೊಸರು ದೇಹದಲ್ಲಿ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ಹೃದಯದ ಬಡಿತದ ವೇಗ ಹಾಗೂ ಒತ್ತಡವನ್ನೂ ನಿಯಂತ್ರಿಸಲು ಸಹಕಾರಿಯಾಗಿದೆ.