ಬೈರುತ್: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮತ್ತೆ ಯುದ್ಧದ ಕಾರ್ಮೋಡ ಆವರಿಸಿದೆ. ಪ್ಯಾಲೆಸ್ತೀನ್ (Palestine) ವಿರುದ್ಧ ಸಮರ ಸಾರಿರುವ ಇಸ್ರೇಲ್ (Israel) ನೆರೆಯ ಲೆಬನಾನ್ (Lebanon) ಮೇಲೂ ದಾಳಿ ಮಾಡುತ್ತಿದೆ.
ಟೆಲ್ ಅವೀವ್ನಲ್ಲಿರುವ ಇಸ್ರೇಲ್ ಸೇನೆಯ ಮುಖ್ಯ ಕಚೇರಿ ಮೇಲೆ ನಾವು ಕ್ಷಿಪಣಿ ಉಡಾವಣೆ ಮಾಡಿದ್ದೇವೆ ಎಂದು ಹಿಜ್ಬುಲ್ಲಾ ಹೇಳಿಕೊಂಡಿತ್ತು. ಈ ಹೇಳಿಕೆಯ ಬೆನ್ನಲ್ಲೇ ಇಸ್ರೇಲ್ ಬೈರುತ್ ಮೇಲೆ ದಾಳಿ ಮಾಡಿದೆ. ಬೈರುತ್ನ ಹೆಜ್ಬೊಲ್ಲಾ ಪ್ರಾಬಲ್ಯವಿರುವ ಪ್ರದೇಶಗಳಿಂದ ಸ್ಥಳಾಂತರಗೊಳ್ಳುವಂತೆ ನಿವಾಸಿಗಳಿಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇಸ್ರೇಲ್ ಸೇನೆ ಪೂರ್ವ ಬಾಲ್ಟಿಕ್ ಪ್ರದೇಶದ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ.
ಹಲವು ಕಟ್ಟಡಗಳಿಗೆ ಹಾನಿಯಾಗಿದ್ದು ವ್ಯಾಪಕ ನಾಶ-ನಷ್ಟ ಸಂಭವಿಸಿದೆ. ದಾಳಿ ನಡೆದ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ಮತ್ತು ಹೊಗೆಯ ಕಾರ್ಮೋಡ ಆಗಸಕ್ಕೆ ವ್ಯಾಪಿಸಿತ್ತು.
ಇಸ್ರೇಲಿ ನಡೆಸಿದ ದಾಳಿಯಲ್ಲಿ ಕನಿಷ್ಠ 12 ಜನರು ಗುರುವಾರ ಸಾವನ್ನಪ್ಪಿದ್ದಾರೆ ಎಂದು ಲೆಬನಾನ್ ತಿಳಿಸಿದೆ.
ಜೆರುಸಲೆಂ: ಲೆಬನಾನ್ ಮೇಲೆ ರಾಕೆಟ್ ದಾಳಿ ನಡೆಸಿದ ಬಳಿಕ ಲೆಬನಾನ್ನ ಹೆಜ್ಬುಲ್ಲಾ (Lebanonʼs Hezbollah) ಭಯೋತ್ಪಾದಕ ಸಂಘಟನೆ ಹಾಗೂ ಇಸ್ರೇಲ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಲೆಬನಾನ್ನಲ್ಲಿ ಕದನ ವಿರಾಮದ (Ceasefire) ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
21 ದಿನಗಳ ಕದನವಿರಾಮ ಪ್ರಸ್ತಾಪವನ್ನು ತಿರಸ್ಕರಿಸಿದ ನೆತನ್ಯಾಹು, ಹೆಜ್ಬುಲ್ಲಾ ವಿರುದ್ಧದ ಹೋರಾಟವನ್ನು ಮುಂದುವರಿಸಲು ಕರೆ ನೀಡಿದ್ದಾರೆ. ಯುದ್ಧವು ಇನ್ನಷ್ಟು ತೀವ್ರ ಸ್ವರೂಪ ಪಡೆಯಲಿದೆ, ಪೂರ್ಣಪ್ರಮಾಣದಲ್ಲಿ ಯುದ್ಧ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ. ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರ ಕಚೇರಿ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: ಲೆಬನಾನ್ಗೆ ಬರಬೇಡಿ – ತನ್ನ ನಾಗರಿಕರಿಗೆ ಭಾರತ ರಾಯಭಾರ ಕಚೇರಿ ಸೂಚನೆ
ಕಳೆದ ಕೆಲವು ದಿನಗಳಿಂದ ಲೆಬನಾನ್ (Lebanon) ಮೇಲೆ ಇಸ್ರೇಲ್ ನಿರಂತರವಾಗಿ ವಾಯು ದಾಳಿ ನಡೆಸುತ್ತಿದೆ. ಈ ದಾಳಿಗಳಲ್ಲಿ 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಲೆಬನಾನ್ನ ಸಾವಿರಾರು ಸಂಖ್ಯೆಯ ಸಾಮಾನ್ಯ ಪ್ರಜೆಗಳು ನೆಲೆ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರಬ್ ರಾಷ್ಟ್ರಗಳೂ ಸೇರಿದಂತೆ ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಇತರ ಮಿತ್ರ ರಾಷ್ಟ್ರಗಳು ಲೆಬನಾನ್ನಲ್ಲಿ 21 ದಿನಗಳ ಕಾಲ ಕದನ ವಿರಾಮ ಘೋಷಿಸುವಂತೆ ಜಂಟಿ ಕರೆ ನೀಡಿದ್ದವು.
ಸದ್ಯದ ಮಟ್ಟಿಗೆ ಲೆಬನಾನ್ ದೇಶದ ಪರಿಸ್ಥಿತಿ ಅಸಹನೀಯವಾಗಿದೆ. ಈ ಯುದ್ಧ ಯಾರ ಹಿತಾಸಕ್ತಿಯ ಪರವಾಗಿಯೂ ಇಲ್ಲ. ಇಸ್ರೇಲ್ ಅಥವಾ ಲೆಬನಾನ್ ಎರಡೂ ದೇಶಗಳ ಜನರ ಹಿತಾಸಕ್ತಿಯ ಪರವಾಗಿ ಈ ಯುದ್ಧ ನಡೆಯುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಸೇರಿದಂತೆ ಇತರ ಮಿತ್ರ ರಾಷ್ಟ್ರಗಳು ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಇದನ್ನೂ ಓದಿ: ‘ಗೋ ಬ್ಯಾಕ್ ಹಿಂದೂ’: ಅಮೆರಿಕದ ಸ್ವಾಮಿನಾರಾಯಣ ದೇವಸ್ಥಾನ ಆವರಣದಲ್ಲಿ ಆಕ್ಷೇಪಾರ್ಹ ಬರವಣಿಗೆ
‘ರಾಜತಾಂತ್ರಿಕ ಒಪ್ಪಂದದ ತೀರ್ಮಾನಕ್ಕೆ ಬದ್ಧರಾಗಿ ಇಸ್ರೇಲ್ ನಡೆದುಕೊಳ್ಳಬೇಕು. ರಾಜತಾಂತ್ರಿಕ ನಡೆಗಳಿಗೆ ಸ್ಥಳಾವಕಾಶ ಒದಗಿಸುವ ನಿಟ್ಟಿನಲ್ಲಿ ಲೆಬನಾನ್ ಹಾಗೂ ಇಸ್ರೇಲ್ ಗಡಿಯಾದ್ಯಂತ ತಕ್ಷಣದಿಂದ ಜಾರಿಗೆ ಬರುವಂತೆ 21 ದಿನಗಳ ಕಾಲ ಕದನ ವಿರಾಮ ಜಾರಿ ಮಾಡಲು ಕರೆ ನೀಡುತ್ತೇವೆ ಎಂದು ಅಮೆರಿಕ, ಯುರೋಪ್ ಮಿತ್ರ ರಾಷ್ಟ್ರಗಳು ಹೇಳಿವೆ.
ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆಯುತ್ತಿರುವ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಹೊತ್ತಲ್ಲಿ ಲೆಬನಾನ್ – ಇಸ್ರೇಲ್ ಸಮರದ ಕುರಿತಾಗಿ ಪ್ರತ್ಯೇಕವಾಗಿ ಹಲವು ರಾಷ್ಟ್ರಗಳು ಮಾತುಕತೆ ನಡೆಸಿ ಜಂಟಿ ಹೇಳಿಕೆ ನೀಡಿವೆ. ಈ ಮಾತುಕತೆ ವೇಳೆ, ಅಮೆರಿಕ, ಯುರೋಪ್ ಖಂಡಗಳ ದೇಶಗಳು, ಜಪಾನ್ ಮತ್ತು ಪ್ರಮುಖ ಗಲ್ಫ್ ರಾಷ್ಟ್ರಗಳಾದ ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳ ನಾಯಕರು ಭಾಗಿಯಾಗಿದ್ದರು. ಇದನ್ನೂ ಓದಿ: ದುರ್ಗಾ ಪೂಜೆಯಂದು ರಜೆ ನೀಡಬಾರದು, ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಬಾರದು: ಬಾಂಗ್ಲಾ ಹಿಂದೂಗಳಿಗೆ ಎಚ್ಚರಿಕೆ