Tag: ಹುಲಿ ಯೋಜನೆ

  • ಘರ್ಜಿಸುವ ಹುಲಿ ಸಂರಕ್ಷಣೆಗೆ ಬೇಕಿದೆ ಬಲ; ಸಹ್ಯಾದ್ರಿ-ಕೊಂಕಣ ಕಾರಿಡಾರ್‌ ಪ್ಲ್ಯಾನ್‌ ಹೇಗಿದೆ ನೋಡಿ..

    ಘರ್ಜಿಸುವ ಹುಲಿ ಸಂರಕ್ಷಣೆಗೆ ಬೇಕಿದೆ ಬಲ; ಸಹ್ಯಾದ್ರಿ-ಕೊಂಕಣ ಕಾರಿಡಾರ್‌ ಪ್ಲ್ಯಾನ್‌ ಹೇಗಿದೆ ನೋಡಿ..

    ʻʻಮೃತ ಹೆಂಗಸಿನ ಕಾಲುಗಳು ಮೆಲ್ಲನೆ ನನ್ನ ಕೆನ್ನೆ ತಟ್ಟಿದವು ಒಂದೇ ಒಂದು ಶಬ್ಧವೂ ಇಲ್ಲ. ಮತ್ತೆ ಕಾಲುಗಳು ಅಲ್ಲಾಡಿದವು ಶವ ಸಜೀವವಾಗುತ್ತಿದೆಯೇ? ಅಂತ ನನಗೆ ಗಾಬರಿಯಾಯ್ತು. ಕೋವಿ, ಟಾರ್ಚನ್ನು ತೆಗೆದುಕೊಂಡು ಅಲ್ಲಾಡುವ ಹೆಣದ ಪಕ್ಕದಿಂದೆದ್ದು ಓಡಬೇಕು. ಅಷ್ಟರಲ್ಲಿ ನನ್ನ ವಾಸ್ತವ ಪ್ರಜ್ಞೆ ಮರಳಿತು. ಆ ಕಾಲು ಮತ್ತು ವಾರಸುದಾರರು ಸಜೀವಗೊಂಡಿಲ್ಲ. ನರಭಕ್ಷಕ ಅನ್ನು ಸಜೀವಗೊಂಡಂತೆ ಅಲ್ಲಾಡಿಸುತ್ತಿದೆ. ಶವದ ಅಲುಗಾಟಕ್ಕೆ ಕಾರಣ ನನ್ನ ತಲೆಗೆ ಹೊಳೆಯುವ ಹೊತ್ತಿಗಾಗಲೇ ಬೆವರಿನಿಂದ ನನ್ನ ಮೈಯೆಲ್ಲಾ ತೊಯ್ದುಹೋಗಿತ್ತುʼʼ.

    ಅಬ್ಬಬ್ಬಾ ಪೂರ್ಣಚಂದ್ರ ತೇಜಸ್ವಿ ಅವರ ʻಬೆಳ್ಳಂದೂರಿನ ನರಭಕ್ಷಕʼ ಅನುವಾದ ಕೃತಿಯಲ್ಲಿ ಬರುವ ಈ ದೃಶ್ಯವನ್ನು ಓದಿದರೆ ಕಾಡಿನ ಬಗ್ಗೆ, ವನ್ಯಜೀವಿಗಳ ಬಗ್ಗೆ ನೂರಾರು ಕುತೂಹಲಗಳು ಹುಟ್ಟಿಕೊಳ್ಳುತ್ತವೆ. ಮೈ ರೋಮಾಂಚನಗೊಳ್ಳುತ್ತದೆ. ಆದ್ರೆ ಮನುಷ್ಯನಲ್ಲಿ ನಾಗರಿಕತೆ ಬೆಳೆದಂತೆ ವನ್ಯ ಜೀವಿಗಳ ಆವಾಸಸ್ಥಾನಕ್ಕೆ ಕುತ್ತು ಬರುತ್ತಿವೆ. ಅದರಲ್ಲೂ ರಾಷ್ಟ್ರೀಯ ಪ್ರಾಣಿ (National Animal) ಎಂದೇ ಗುರುತಿಸಿಕೊಂಡಿರುವ ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದ್ದರೂ ಕೆಲವು ಕಾಡುಗಳಲ್ಲಿ ವಂಶಾಭಿವೃದ್ಧಿಯೇ ಅಳಿಸಿಹೋಗುತ್ತಿದೆ ಎಂದು ವನ್ಯಜೀವಿ (Wildlife) ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಮಹಾರಾಷ್ಟ್ರದ ಪಶ್ಚಿಮ ಪ್ರದೇಶದ ಏಕೈಕ ಹುಲಿ ಸಂರಕ್ಷಿತ ಪ್ರದೇಶವಾದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (Sahyadri Tiger Reserve) ಹುಲಿಗಳ ಸಂತತಿಯನ್ನು ಪುನರುಜ್ಜೀವನಗೊಳಿಸಲು ರಾಜ್ಯದ ಅರಣ್ಯ ಇಲಾಖೆಯು ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ರಾಜ್ಯದ ಅರಣ್ಯ ಇಲಾಖೆಯು ಚಂದ್ರಾಪುರ ಜಿಲ್ಲೆಯ ತಡೋಬಾ-ಅಂಧಾರಿ ಹುಲಿ ಸಂರಕ್ಷತ ಪ್ರದೇಶದಿಂದ ಹುಲಿಗಳನ್ನು ಸ್ಥಳಾಂತರಿಸುವ ಕಾರಿಡಾರ್‌ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ ʻಸಹ್ಯಾದ್ರಿ ಕೊಂಕಣ ವೈಲ್ಡ್‌ಲೈಫ್‌ ಕಾರಿಡಾರ್‌ʼ (Sahyadri-Konkan wildlife corridor) ಯೋಜನೆಗೆ ಮಹಾರಾಷ್ಟ್ರವೊಂದೇ ಅಲ್ಲ. ಕರ್ನಾಟಕ, ಗೋವಾ ಅರಣ್ಯ ಇಲಾಖೆಗಳೂ ಒಟ್ಟಾಗಿ ಕಾರ್ಯನಿರ್ವಹಿಸಿದ್ರೆ ಈ ಯೋಜನೆ ಯಶಸ್ವಿಯಾಗುತ್ತದೆ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಅಷ್ಟಕ್ಕೂ ವನ್ಯಜೀವಿ ಕಾರಿಡಾರ್‌ ಯೋಜನೆಯ ಪ್ರಯೋಜನಗಳೇನು? ಮಹಾರಾಷ್ಟ್ರದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹುಲಿಗಳನ್ನು ಸ್ಥಳಾಂತರಿಸುವ ಯೋಜನೆ ಹಾಕಿಕೊಂಡಿದ್ದೇಕೆ? ಈ ಯೋಜನೆ ಹುಲಿ ಸಂರಕ್ಷಣೆಗೆ ಹೇಗೆ ಪಾತ್ರವಹಿಸುತ್ತದೆ? ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಸಹ್ಯಾದ್ರಿ ಹುಲಿಸಂರಕ್ಷಿತ ಪ್ರದೇಶ ಹೇಗಿದೆ?

    ಉತ್ತರ ಭಾರತದ ಪಶ್ಚಿಮ ಘಟ್ಟಗಳಲ್ಲಿ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶ ನೆಲೆಗೊಂಡಿದೆ. 2010ರಲ್ಲಿ ಈ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಮಾಡಲಾಯಿತು. ಇದು ಮಹಾರಾಷ್ಟ್ರದ ಕೊಲ್ಲಾಪುರ, ಸತಾರಾ, ಸಾಂಗ್ಲಿ ಮತ್ತು ರತ್ನಗಿರಿ ಜಿಲ್ಲೆಗಳನ್ನು ವ್ಯಾಪಿಸಿದೆ. ಅಲ್ಲದೇ ಚಂದೋಲಿ ರಾಷ್ಟ್ರೀಯ ಉದ್ಯಾನವನ ಮತ್ತು ಕೊಯ್ನಾ ವನ್ಯಜೀವಿ ಅಭಯಾರಣ್ಯಗಳೊಂದಿಗೆ ತನ್ನ ವ್ಯಾಪ್ತಿಯನ್ನು ಹಂಚಿಕೊಂಡಿದೆ. ಕಳ್ಳಬೇಟೆ, ಬದಲಾಗುತ್ತಿರುವ ಆವಾಸಸ್ಥಾನ, ಸಂತಾನೋತ್ಪತ್ತಿ ಕುಂಠಿತಗೊಂಡಿದ್ದರಿಂದಾಗಿ ಈ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸದ್ಯಕ್ಕೆ ಸಿಕ್ಕಿರುವ ಫೋಟೋ ಸಾಕ್ಷ್ಯಗಳ ಪ್ರಕಾರ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೇವಲ 7-8 ಹುಲಿಗಳು ಮಾತ್ರ ಇವೆ ಎಂದು ಅಂದಾಜಿಸಲಾಗಿದೆ. ಅದಕ್ಕಾಗಿಯೇ ಮಹಾರಾಷ್ಟ್ರ ಅರಣ್ಯ ಇಲಾಖೆಯು ಹುಲಿಗಳನ್ನು ಸ್ಥಳಾಂತರಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇಲ್ಲಿನ ಹುಲಿಗಳ ಸಂಖ್ಯೆ ಹೆಚ್ಚಿಸಲು ಕರ್ನಾಟಕ ಮತ್ತು ಗೋವಾ ಅರಣ್ಯ ಪ್ರದೇಶಗಳಿಂದ ಹುಲಿಗಳನ್ನು ಸ್ಥಳಾಂತರಿಸುವ ಕೆಲಸ ಆಗಬೇಕು. ಇದರೊಂದಿಗೆ ಹುಲಿಗಳ ಸಂತಾನೋತ್ಪತ್ತಿಗೆ ಸೂಕ್ತ ವಾತಾವರಣವನ್ನೂ ಕಲ್ಪಿಸಿಕೊಟ್ಟಲ್ಲಿ, ಈ ಯೋಜನೆ ಯಶಸ್ವಿಯಾಲಿದೆ ಎಂದು ತಜ್ಞರು ಹೇಳುತ್ತಾರೆ.

    ದೇಶದಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ?

    2006 ರಿಂದಲೂ ದೇಶದಲ್ಲಿ ಹುಲಿಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಹೌದು. 2006ರಲ್ಲಿ ಹುಲಿಗಳ ಸಂಖ್ಯೆ 1,411 ಆಗಿತ್ತು. ಆ ನಂತರ 2010 ರಲ್ಲಿ 1,706, 2014ರಲ್ಲಿ 2,226, 2018ರಲ್ಲಿ 2,967 ಇದ್ದ ಹುಲಿಗಳ ಸಂಖ್ಯೆ 2022ರ ಅಂಕಿ ಅಂಶದ ಪ್ರಕಾರ 3,682ಕ್ಕೆ ಹುಲಿಗಳ ಸಂಖ್ಯೆ ಏರಿಕೆಯಾಗಿದೆ.

    ಹುಲಿಗಳ ಸ್ಥಳಾಂತರ ಉತ್ತಮ ವಿಧಾನವೇ?

    ಭಾರತದಲ್ಲಿ 2008 ರಿಂದ ಹುಲಿಗಳ ಸ್ಥಳಾಂತರ (translocate tigers) ಯೋಜನೆಯನ್ನು ಪ್ರಾರಂಭಿಸಲಾಯಿತು. 2008ರಲ್ಲಿ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶ, 2009ರಲ್ಲಿ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಯೋಜನೆ ಯಶಸ್ವಿಯಾಗಿರುವ ಉದಾಹರಣೆಯೂ ಇದೆ. ಅಲ್ಲದೇ ದೇಶದಲ್ಲೇ ಮೊದಲ ಅಂತರರಾಜ್ಯ ಸ್ಥಳಾಂತರ ಯೋಜನೆಗೆ ಕೈಹಾಕಿ ಒಡಿಶಾದ ಸತ್ಕೋಸಿಯಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಯೋಜನೆ ವೈಫಲ್ಯ ಅನುಭವಿಸಿದ ಉದಾಹರಣೆಯೂ ಇದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾಜಿ ಸದಸ್ಯ ಕಾರ್ಯದರ್ಶಿ ಅನುಪ್ ನಾಯಕ್, ಹುಲಿಗಳ ಸ್ಥಳಾಂತರ ಉಪಕ್ರಮವು ದೀರ್ಘಾವಧಿ ಯೋಜನೆಯಾಗಿದ್ದು, ಕೊನೇ ಆಯ್ಕೆಯಾಗಿ ಇಟ್ಟುಕೊಳ್ಳಬೇಕು. ಮೊದಲಿಗೆ ಹುಲಿಗಳ ಆವಾಸಸ್ಥಾ ಸುಧಾರಣೆ, ಕಳ್ಳಬೇಟೆಯಿಂದ ರಕ್ಷಣೆ, ಹುಲಿ ಸಂರಕ್ಷಿತಾರಣ್ಯಗಳ ಅಭಿವೃದ್ಧಿಪಡಿಸುವಂತಹ ಆಯ್ಕೆಗಳನ್ನು ನಿರ್ಣಿಸಬೇಕು. ಹುಲಿಗಳನ್ನು ಸ್ಥಳಾಂತರಿಸುವುದರಿಂದ ಒಳ್ಳೆಯದ್ದು ಆಗಬಹುದು, ವಿಫಲವೂ ಆಗಬಹುದು. ಹಾಗಾಗಿ ಅದನ್ನು ಕೊನೇ ಆಯ್ಕೆಯಾಗಿ ಇಟ್ಟುಕೊಳ್ಳಬೇಕು. ಸ್ಥಳಾಂತರಿಸಿದ ನಂತರವು ಅವು ಜನವಸತಿ ಪ್ರದೇಶಗಳಿಂದ ಮುಕ್ತವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬಳಿಕ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಗೆ ಕೈಹಾಕಬೇಕು ಎಂದು ಸಲಹೆ ನೀಡಿದ್ದಾರೆ.

    ಜನರನ್ನೂ ಕೊಂದಿತ್ತು.. ಹುಲಿಯೂ ಸತ್ತಿತ್ತು..

    ಈ ಹಿಂದೆ ಸತ್ಕೋಸಿಯಾ ಮೀಸಲು ಅರಣ್ಯದಲ್ಲಿ ಹುಲಿಗಳನ್ನು ಸ್ಥಳಾಂತರಿಸುವ ಯೋಜನೆ ವಿಫಲವಾಗಿತ್ತು. 2018ರಲ್ಲಿ ಕನ್ಹಾ ಸಂರಕ್ಷಿತ ಪ್ರದೇಶದಿಂದ ಒಂದು ಗಂಡು ಮತ್ತು ಒಂದು ಹೆಣ್ಣು ಹುಲಿಯನ್ನು ಸತ್ಕೋಸಿಯಾ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಆದ್ರೆ ಕಳಪೆ ನಿರ್ವಹಣೆಯಿಂದಾಗಿ ಹುಲಿಗಳು ಸ್ಥಳೀಯರ ಮೇಲೆ ದಾಳಿ ಮಾಡತೊಡಗಿದ್ದವು, ಕೆಲವರನ್ನು ಕೊಂದುಹಾಕಿದ್ದವು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು. ಕೊನೆಗೆ ಅಲ್ಲಿದ್ದ ʻಮಹಾವೀರ್‌ʼ ಎಂಬ ಗಂಡು ಹುಲಿ ಉರುಳಿಗೆ ಸಿಕ್ಕಿ ಸಾವನ್ನಪ್ಪಿತ್ತು. ಬಳಿಕ ಈ ಯೋಜನೆಯ ಪ್ರಸ್ತಾಪವನ್ನೇ ನಿಲ್ಲಿಸಲಾಗಿತ್ತು.

    ಸಹ್ಯಾದ್ರಿ-ಕೊಂಕಣ ಕಾರಿಡಾರ್‌ನ ಪ್ರಾಮುಖ್ಯತೆ ಏನು?

    ಈ ಯೊಜನೆಯು ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಜೊತೆಗೆ ಸಹ್ಯಾದ್ರಿ, ರಾಧನಗರಿ, ಗೋವಾ, ಕರ್ನಾಟಕ, ಕಾರಿಡಾರ್‌ ಮತ್ತು ಪಶ್ಚಿಮ ಘಟ್ಟಗಳಲ್ಲಿ ದೀರ್ಘಾವಧಿವರೆಗೆ ಸಂರಕ್ಷಣೆ ಮಾಡುವ ಉದ್ದೇಶವಾಗಿದೆ. ಈ ಕಾರಿಡಾರ್‌ ಕರ್ನಾಟಕದ ʻಕಾಳಿʼ ಸಂರಕ್ಷಿತ ಪ್ರದೇಶ ಹಾಗೂ ಗೋವಾ ಒಳನಾಡಿನ ಕಾಡುಗಳನ್ನೂ ಸಂಪರ್ಕಿಸುತ್ತದೆ. ಜೊತೆಗೆ ರಾಧಾನಗರಿ ವನ್ಯಜೀವಿ ಅಭಯಾರಣ್ಯ, ಸಿಂಧುದುರ್ಗ ಜಿಲ್ಲೆಯ ಸಂರಕ್ಷಣಾ ಮೀಸಲು ಪ್ರದೇಶವನ್ನು ಸಂಪರ್ಕಿಸುತ್ತದೆ. ಈ ಕಾರಿಡಾರ್‌ಗಳು ವನ್ಯಜೀವಿಗಳಿಗೆ ಮಾತ್ರವಲ್ಲದೇ ಗೋವಾ ಮತ್ತು ಕರ್ನಾಟಕದ ಈ ಕಾಡುಗಳ ಸುತ್ತ ವಾಸಿಸುವ ಸಮುದಾಯಗಳ ನೀರಿನ ಸಂರಕ್ಷಣೆಗೂ ಸಹಾಯಕವಾಗಲಿದೆ. ಆದ್ದರಿಂದ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ನಡುವೆ ಉತ್ತಮ ಸಮನ್ವಯತೆಯ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

    ಹುಲಿಗಳ ಯೋಜನೆಗೆ ಆಯ್ಕೆ ಹೇಗೆ?

    ಹುಲಿಯೋಜನೆ ಸಂರಕ್ಷಿತ ಪ್ರದೇಶ ಆಯ್ಕೆಗೆ ಮಾನಂದಡವಾಗಿದ್ದು ಹುಲಿಗಳ ಸಂಖ್ಯೆಯ ಜತೆಗೆ ವಾಸಕ್ಕೆ ಪೂರಕವಾದ ಅಲ್ಲಿನ ದಟ್ಟಾರಣ್ಯದ ಪ್ರಮಾಣ. ಇದನ್ನು ಗಮನಿಸಿಯೇ ಮೊದಲ ಹಂತದಲ್ಲಿ 9 ಪ್ರದೇಶ ಗುರುತಿಸಲಾಯಿತು. ಇನ್ನಷ್ಟು ಅರಣ್ಯಗಳಲ್ಲಿ ಹುಲಿ ಸಂರಕ್ಷಣೆ ಸಾಧ್ಯವಿದೆ ಎನ್ನುವ ಮಾಹಿತಿ ಆಧರಿಸಿ ವಿಸ್ತರಿಸಲಾಗಿದೆ. ಜನಸಮುದಾಯದಿಂದ ಮುಕ್ತವಾದ ವನ್ಯಜೀವಿಗಳಿಗೆ ಮಾತ್ರ ಮೀಸಲಾದ ಸ್ಥಳ ನಿಗದಿಪಡಿಸುವ (ಕೋರ್ ಬಫರ್) ಲೆಕ್ಕಾಚಾರದ ಮೇಲೆಯೇ ಹುಲಿ ಸಂರಕ್ಷಿತ ಪ್ರದೇಶ ಗುರುತಿಸಲಾಗಿದೆ.

    ಹುಲಿ ಯೋಜನೆಯಿಂದ ಪ್ರಯೋಜನವೇನು?

    ಹುಲಿ ಯೋಜನೆ ಅನುಷ್ಠಾನಗೊಂಡ ನಂತರ ಸಂಪೂರ್ಣ ಅಳಿವಿನ ಅಂಚಿಗೆ ತಲುಪಿದ್ದ ಹುಲಿಯನ್ನು ಸಂರಕ್ಷಿಸಲು ಸಾಧ್ಯವಾಗಿದೆ. ಈಗ ಹುಲಿಗೂ ತನ್ನದೇ ಪ್ರದೇಶದಲ್ಲಿ ನೆಮ್ಮದಿಯಿಂದ ಬದುಕುವ ಅವಕಾಶ. ಬಂಡೀಪುರ, ನಾಗರಹೊಳೆ, ರಣ ತಂಭೋರ್‌, ಕನ್ಹಾ ಸೇರಿದಂತೆ ಹಲವು ಪ್ರದೇಶಗಳು ಹುಲಿ ಸಂರಕ್ಷಣೆ ಮತ್ತು ವಂಶಾಭಿವೃದ್ಧಿಗೆ ಯೋಗ್ಯವಾದ ಸ್ಥಳಗಳಾಗಿವೆ. ಹುಲಿ ಯೋಜನೆ ಜಾರಿಗೊಳಿಸಿದ ಕೆಲವೇ ವರ್ಷದಲ್ಲಿ ಸುರಕ್ಷಿತ ವಲಯ ರೂಪುಗೊಂಡು ಹುಲಿಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ.

    – ಮೋಹನ ಬನ್ನಿಕುಪ್ಪೆ, ಮೈಸೂರು

  • ಬಂಡೀಪುರದಲ್ಲಿ ಮೋದಿ ಸಫಾರಿ – ಪ್ರಕೃತಿ ಸೌಂದರ್ಯ ಸವಿದ ಪ್ರಧಾನಿ

    ಬಂಡೀಪುರದಲ್ಲಿ ಮೋದಿ ಸಫಾರಿ – ಪ್ರಕೃತಿ ಸೌಂದರ್ಯ ಸವಿದ ಪ್ರಧಾನಿ

    ಚಾಮರಾಜನಗರ: ಹುಲಿ ಯೋಜನೆಯ (Project Tiger) ಸುವರ್ಣ ಮಹೋತ್ಸವದ ಆಚರಣೆಗಾಗಿ ಬಂಡೀಪುರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ‌ ಮೋದಿ (PM Narendra Modi) ಅವರು ಬಂಡೀಪುರ ಹುಲಿ‌ ಸಂರಕ್ಷಿತ ಪ್ರದೇಶದಲ್ಲಿ (Bandipur Tiger Reserve) ಸಫಾರಿ ನಡೆಸಿದ್ದಾರೆ.

    ಮೈಸೂರಿನಿಂದ ಬೆಳಗ್ಗೆ ಮೇಲುಕಾಮನಹಳ್ಳಿ ಹೆಲಿಪ್ಯಾಡ್‌ಗೆ ಬಂದಿಳಿದ ಮೋದಿ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳಾದ ಮುರುಳಿ, ಸುಬ್ರಮಣ್ಯ, ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ‌ ಡಿ.ಎಸ್. ರಮೇಶ್ ಅವರಿಂದ ಸ್ವಾಗತ ಕೋರಿದರು. ಬೆಳಗ್ಗೆ 7:35ರ ವೇಳೆಗೆ ಬಂಡೀಪುರ ಕ್ಯಾಂಪಸ್‌ಗೆ ತಲುಪಿದ ಮೋದಿ ಅವರು ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.

    7:50ಕ್ಕೆ ತೆರೆದ ಜೀಪ್‌ನಲ್ಲಿ (ಮಹೀಂದ್ರಾ ಬೊಲೆರೊ ಕ್ಯಾಂಪರ್) ಸುಮಾರು 2 ಗಂಟೆ (22 ಕಿ.ಮೀ) ಸಫಾರಿ ಮಾಡಿದರು. ಈ ವೇಳೆ ಅರಣ್ಯದಲ್ಲಿ ಪ್ರಧಾನಿ ಸಂಚರಿಸಿ ಸೌಂದರ್ಯ ಸವಿದರು. ಇದನ್ನೂ ಓದಿ: ವಿಕಲಚೇತನ ಕಾರ್ಯಕರ್ತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಮೋದಿ

    ಪ್ರಧಾನಿ ಮೋದಿ ಅವರೊಂದಿಗೆ ದೆಹಲಿಯಿಂದ ಬಂದಿದ್ದ ಏಮ್ಸ್ ವೈದ್ಯರ ತಂಡ, ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಎಸ್ ಪಿ ಪದ್ಮನಿ ಸಾಹು ಸೇರಿದಂತೆ ಜಿಲ್ಲೆಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ‌ ಇಲಾಖೆಯ ವೈದ್ಯರ ತಂಡ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ‌ಇದ್ದರು. ಮೋದಿ ಅವರಿದ್ದ ವಾಹನದ ಜೊತೆಗೆ ಅಂಬುಲೆನ್ಸ್‌ ಸೇರಿದಂತೆ ಒಂಬತ್ತು ವಾಹನಗಳು ಸಾಗಿದ್ದವು.

     

    ಅರಣ್ಯದ ಕಚ್ಚಾ ರಸ್ತೆಯಲ್ಲೇ ಸಾಗಿ ಬೆಳಗ್ಗೆ 9:50ಕ್ಕೆ ಕೆಕ್ಕನಹಳ್ಳ ಚೆಕ್ ಪೋಸ್ಟ್‌ಗೆ ಮೋದಿ ತಲುಪಿದರು. ಅಲ್ಲಿಂದ ತಮ್ಮ ವಾಹನದಲ್ಲಿ ಹೆದ್ದಾರಿಯಲ್ಲೇ 5 ಕಿ.ಮೀ. ಸಾಗಿ ತಮಿಳುನಾಡಿನ ಮಧುಮಲೈ ಹುಲಿಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಮೋದಿ ತೆರಳಿದರು. ಇಲ್ಲಿ ಆನೆಗಳಿಗೆ ಕಬ್ಬನ್ನು ತಿನ್ನಿಸಿದರು. ಏಷ್ಯಾದ ಪ್ರಥಮ ಆನೆ ಕ್ಯಾಂಪ್ ತೆಪ್ಪಕಾಡಿನಲ್ಲಿ ಮೋದಿ‌ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಭೇಟಿಯಾದ ಬಳಿಕ ನೀಲಗಿರಿಸ್ ಹೆಲಿಪ್ಯಾಡ್‌ನಿಂದ ಮೈಸೂರಿನತ್ತ ಹೊರಟರು.

  • ಬಂಡೀಪುರಕ್ಕೆ ಪ್ರಧಾನಿ ಮೋದಿ ಆಗಮನ

    ಬಂಡೀಪುರಕ್ಕೆ ಪ್ರಧಾನಿ ಮೋದಿ ಆಗಮನ

    ಮೈಸೂರು/ ಚಾಮರಾಜನಗರ: ಹುಲಿ ಯೋಜನೆ (Project Tiger) ಘೋಷಣೆಯಾಗಿ ಇಂದಿಗೆ 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಹೆಲಿಕಾಪ್ಟರ್‌ ಮೂಲಕ ಬಂಡೀಪುರಕ್ಕೆ (Bandipur) ಆಗಮಿಸಿದ್ದಾರೆ.

    ಶನಿವಾರವೇ ಮೈಸೂರಿಗೆ ಆಗಮಿಸಿದ್ದ ಮೋದಿ ಇಂದು ಬಂಡೀಪುರದಲ್ಲಿ ಸಫಾರಿ ನಡೆಸಲಿದ್ದಾರೆ.  ಸಫಾರಿ ನಡೆಸಿದ ಬಳಿಕ ತಮಿಳುನಾಡಿನ ಮಧುಮಲೈ ಅರಣ್ಯಕ್ಕೂ ಭೇಟಿ ಕೊಡಲಿದ್ದಾರೆ. ಹೀಗಾಗಿ ಮಧುಮಲೈ ಅರಣ್ಯದಲ್ಲೂ ಭರ್ಜರಿ ಸಿದ್ದತೆ ನಡೆದಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಬ್ರ್ಯಾಂಡ್ ಬಗ್ಗೆ‌ ಹರಿದಾಡುತ್ತಿರುವ ಸುದ್ದಿ ಸುಳ್ಳು: KMF ಸ್ಪಷ್ಟನೆ

    22 ಕಿ.ಮೀ. ಸಫಾರಿ ನಡೆಸಿ ಗಡಿಭಾಗದ ಕೆಕ್ಕನಹಳ್ಳ ಚೆಕ್‍ಪೋಸ್ಟ್ ಮೂಲಕ ತಮಿಳುನಾಡಿನ ಮಧುಮಲೈ ಅರಣ್ಯಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಲಿದ್ದಾರೆ. ಬೆಳಗ್ಗೆ 9:35ಕ್ಕೆ ಆನೆ ಶಿಬಿರದಲ್ಲಿ `ದಿ ಎಲಿಫೆಂಟ್ ವಿಸ್ಪರರ್ಸ್’ ಖ್ಯಾತಿಯ ಬೊಮ್ಮ-ಬೆಳ್ಳಿ ದಂಪತಿಗೆ ಅಭಿನಂದಿಸಲಿದ್ದಾರೆ. ಬಳಿಕ ತೆಪ್ಪಕಾಡಿನಲ್ಲಿ ದೇಶದ 12 ಹುಲಿಸಂರಕ್ಷಿತ ಪ್ರದೇಶದ ಹುಲಿ ಯೋಜನೆ ನಿರ್ದೇಶಕರೊಡನೆ ಸಂವಾದ ನಡೆಸಲಿದ್ದಾರೆ.

    ಬೆಳಗ್ಗೆ 11 ಗಂಟೆಗೆ ಮೈಸೂರಿಗೆ ವಾಪಸ್‌ ಆಗಲಿದ್ದು ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ನಡೆಯಲಿರುವ ಹುಲಿ ಯೋಜನೆಯ ಸುವರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ 2022ರ ಹುಲಿ‌ ಸಮೀಕ್ಷೆ ವರದಿ ಹಾಗೂ 50ನೇ ವರ್ಷಾಚರಣೆಗೆ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮದ ಬಳಿಕ ಮಧ್ಯಾಹ್ನ 12:40ಕ್ಕೆ ದೆಹಲಿಗೆ ವಾಪಸ್‌ ಆಗಲಿದ್ದಾರೆ.