Tag: ಹಾವು

  • ಕುಡಿದ ಮತ್ತಿನಲ್ಲಿ ಹಾವನ್ನ ಕಚ್ಚಿ ಕೊಂದ ಭೂಪ

    ಕುಡಿದ ಮತ್ತಿನಲ್ಲಿ ಹಾವನ್ನ ಕಚ್ಚಿ ಕೊಂದ ಭೂಪ

    -ಬಾಯಲ್ಲಿ ಬಾಟಲ್, ಕೊರಳಲ್ಲಿ ಹಾವು

    ಕೋಲಾರ: ಕುಡಿದ ಮತ್ತಿನಲ್ಲಿ ಭೂಪನೊಬ್ಬ ಹಾವನ್ನು ಬಾಯಿಂದ ಕಚ್ಚಿ ಸಾಯಿಸಿದ್ದಾನೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಮಷ್ಟೂರು ಗ್ರಾಮದ ಕುಮಾರ್ ಹಾವನ್ನು ಸಾಯಿಸಿದ ಭೂಪ. ನಶೆಯಲ್ಲಿದ್ದ ಕುಡುಕ ದಾರಿಯಲ್ಲಿ ಹೋಗುತ್ತಿದ್ದ ಹಾವನ್ನು ಹಿಡಿದು ಕತ್ತಿಗೆ ಸುತ್ತಿಕೊಂಡು ಗ್ರಾಮ ಪ್ರವೇಶಿಸಿದ್ದಾನೆ. ಗ್ರಾಮದ ಮಧ್ಯೆ ಬರುತ್ತಿದ್ದಂತೆ ಕುತ್ತಿಗೆ ಹಾವನ್ನು ಬಾಯಿಂದ ಕಚ್ಚಿ ಸಾಯಿಸಿದ್ದಾನೆ. ಕುಮಾರ್ ಹಾವನ್ನು ಕಚ್ಚಿ ಸಾಯಿಸುತ್ತಿರುವ ದೃಶ್ಯಗಳನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆಹಿಡಿದುಕೊಂಡಿದ್ದಾರೆ. ಆದ್ರೆ ಭಯದಿಂದ ಯಾರು ಕುಮಾರ್ ನನ್ನು ತಡೆಯಲು ಮುಂದಾಗಿಲ್ಲ.

    ಹಾವು ಸಾಯಿಸಿದ ಬಳಿಕ ಕುಮಾರ್ ಆರೋಗ್ಯವಾಗಿದ್ದು, ಗ್ರಾಮದಲ್ಲಿ ಓಡಾಡಿಕೊಂಡಿದ್ದಾನೆ. ಹಾವನ್ನ ಸಾಯಿಸಿದ್ದಕ್ಕೆ ಗ್ರಾಮಸ್ಥರು ಸಹ ಕ್ಲಾಸ್ ತೆಗೆದುಕೊಂಡಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮೈಸೂರು ಮೃಗಾಲಯದಲ್ಲಿ ಕೋಬ್ರಾ, ಹುಲಿ ಸಾವು

    ಮೈಸೂರು ಮೃಗಾಲಯದಲ್ಲಿ ಕೋಬ್ರಾ, ಹುಲಿ ಸಾವು

    ಮೈಸೂರು: ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್(ಮೈಸೂರು ಮೃಗಾಲಯ)ನಲ್ಲಿ ಹುಲಿ ಹಾಗೂ ಕಿಂಗ್ ಕೋಬ್ರಾ ಸಾವನ್ನಪ್ಪಿವೆ. ಕಿಂಗ್ ಕೋಬ್ರಾ ಲಿವರ್ ಸಮಸ್ಯೆಯಿಂದ ಮೃತಪಟ್ಟಿದ್ದರೆ, ಹುಲಿ ಹೃದಯಾಘಾತದಿಂದ ಸಾವನ್ನಪ್ಪಿದೆ ಎನ್ನಲಾಗಿದೆ.

    ಈ ಬಗ್ಗೆ ಮೈಸೂರು ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಪ್ರಾಣಿಗಳ ವಿನಿಮಯ ಯೋಜನೆಯಡಿ ಮಂಗಳೂರಿನ ಪಿಲಿಕುಳ ಮೃಗಾಲಯದಿಂದ 2 ಹುಲಿ, 2 ಹಾವುಗಳನ್ನ ಮೈಸೂರು ಮೃಗಾಲಯಕ್ಕೆ ತರಿಸಲಾಗಿತ್ತು. ಆದರೆ ಪ್ರಾಣಿಗಳನ್ನು ಆರೋಗ್ಯ ವಿಚಾರಿಸಲು ಪ್ರತ್ಯೇಕವಾಗಿ ಇಡಲಾಗಿತ್ತು. ಫೆ. 29ರ ಬೆಳಗ್ಗೆ ಪೈಥಾನ್ ಹೆಸರಿನ ಕಿಂಗ್ ಕೋಬ್ರಾ ಸಾವನ್ನಪ್ಪಿತ್ತು. ನಂತರ ಅದರ ಮೃತದೇಹವನ್ನ ಪರೀಕ್ಷೆಗೆ ಒಳಪಡಿಸಲಾಯಿತು. ಆಗ ಹಾವು ಲಿವರ್ ಸಮಸ್ಯೆಯಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು.

    ಭಾನುವಾರ ಬೆಳಗ್ಗೆ ಒಂದು ಹುಲಿ ಸಹ ಮೃಗಾಲಯದಲ್ಲಿ ಮೃತಪಟ್ಟಿದೆ. ಅದರ ಮೃತದೇಹವನ್ನ ಸಹ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದು ಹೃದಯಾಘಾತದಿಂದ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಪರೀಕ್ಷೆಗೆ ಒಳಪಡಿಸಿದ ತಕ್ಷಣವೇ ವೈದ್ಯರು ಈ ಬಗ್ಗೆ ತಿಳಿಸಿದ್ದಾರೆ.

    ಪ್ರಾಣಿಗಳು ಮೃತಪಡಲು ಆರೋಗ್ಯ ಸಮಸ್ಯೆಯೇ ಕಾರಣವಾ? ಅಥವಾ ಬೇರೆ ವೈರಸ್ ಇದೆಯಾ? ಬ್ಯಾಕ್ಟೀರಿಯಾ ಇದೇಯ ಎಂಬುದನ್ನ ತಿಳಿಯಬೇಕಿದೆ. ಅದಕ್ಕಾಗಿ ಪ್ರಾಣಿಗಳ ಸ್ಯಾಂಪಲ್ ಲ್ಯಾಬ್ ಗೆ ಕಳುಹಿಸಿದ್ದೇವೆ. ರಿಪೋರ್ಟ್ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಮೃಗಾಲಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಮೃಗಾಲಯ ನಿರ್ದೇಶಕರು ಹೇಳಿದ್ದಾರೆ.

  • ಮರಿಗಳಿಗಾಗಿ ಹಾವಿನ ಜೊತೆ ಸೆಣಸಾಟಕ್ಕೆ ನಿಂತ ಮರ ಕುಟಿಗ: ವಿಡಿಯೋ

    ಮರಿಗಳಿಗಾಗಿ ಹಾವಿನ ಜೊತೆ ಸೆಣಸಾಟಕ್ಕೆ ನಿಂತ ಮರ ಕುಟಿಗ: ವಿಡಿಯೋ

    – ತಾಯಿ ಪಕ್ಷಿಯ ಪ್ರೀತಿಗೆ ನೆಟ್ಟಿಗರು ಫಿದಾ

    ನವದೆಹಲಿ: ಮರಿಗಳಿಗಾಗಿ ಮರ ಕುಟಿಗ ಪಕ್ಷಿಯೊಂದು ಹಾವಿನ ಜೊತೆ ಪ್ರಾಣವನ್ನು ಲೆಕ್ಕಿಸದೆ ಹೋರಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ತಾಯಿ ಎಂದರೆ ಹಾಗೇ ಎಂಥ ಕಠಿಣ ಪರಿಸ್ಥಿತಿಯಲ್ಲೂ ತನ್ನ ಮಕ್ಕಳನ್ನು ಬಿಟ್ಟುಕೊಡುವುದಿಲ್ಲ. ಇದಕ್ಕೆ ಈ ಮರಕುಟಿಗದ ವಿಡಿಯೋ ತಾಜಾ ಉದಾಹರಣೆಯಾಗಿದೆ. ಭಾರತದ ಅರಣ್ಯಾಧಿಕಾರಿ ಸುಸಂತ್ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮರ ಕುಟಿಗದ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.

    ಈ ವಿಡಿಯೋವನ್ನು ಹಂಚಿಕೊಂಡಿರುವ ಸುಸಂತ್ ನಂದ ಅವರು, ಈ ಗ್ರಹದಲ್ಲಿರುವ ಎಲ್ಲ ಶಕ್ತಿಗಳು ಒಂದುಗೂಡಿದರು ತಾಯಿ ಎಂಬ ಪ್ರೀತಿಯನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ. ಈ ಮರ ಕುಟಿಗ ತನ್ನ ಮರಿಗಳಿಗಾಗಿ ಹಾವಿನ ಜೊತೆ ಜಗಳಕ್ಕೆ ಬಿದ್ದು ಕೊನೆಯಲ್ಲಿ ತನ್ನ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ರೀಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    27 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಮರ ಕುಟಿಗ ಮಾಡಿದ ಗೂಡಿನಲ್ಲಿ ಒಂದು ದೊಡ್ಡ ಗಾತ್ರದ ಹಾವು ಬಂದು ಸೇರಿಕೊಂಡಿರುತ್ತದೆ. ಅದನ್ನು ನೋಡಿದ ಪಕ್ಷಿ ಅದನ್ನು ಕುಕ್ಕಲು ಆರಂಭಿಸುತ್ತದೆ. ಆದರೆ ಹಾವು ಬಲಿಷ್ಠವಾಗಿದ್ದ ಕಾರಣ ಮರ ಕುಟಿಗವನ್ನೇ ಕಚ್ಚುತ್ತದೆ. ಆದರೆ ಛಲ ಬಿಡದ ತಾಯಿ ಪಕ್ಷಿ ತನ್ನ ಮರಿಗಳಿಗಾಗಿ ಜೀವವನ್ನೇ ಒತ್ತೆಇಟ್ಟು ಹಾವನ್ನು ಅಲ್ಲಿಂದ ಓಡಿಸುತ್ತದೆ.

    ಈ ವಿಡಿಯೋ ನೋಡಿ ಕೆಲವರು ಕಮೆಂಟ್ ಮಾಡಿದ್ದು, ಅ ತಾಯಿ ಪಕ್ಷಿ ತುಂಬ ಗ್ರೇಟ್. ತಾಯಿ ಅಂದರೆ ಹಾಗೇ ಇರಬೇಕು ಎಂದು ಹೇಳಿದ್ದಾರೆ. ಸುಸಂತ್ ನಂದ ಹಾಕಿರುವ ಈ ವಿಡಿಯೋ ಸುಮಾರು 12 ಸಾವಿರ ಜನ ವೀಕ್ಷಿಸಿದ್ದು, ಹಲವಾರು ಮಂದಿ ರೀಟ್ವೀಟ್ ಮಾಡಿದ್ದಾರೆ.

  • ಬೆಂಗ್ಳೂರು ಸುಂದರಿ ಬಳಿ ಮಾತನಾಡೋ ದೇವರ ಹಾವು- ಪಬ್ಲಿಕ್ ಟಿವಿಯಲ್ಲಿ ನಾಗಿಣಿ ರಹಸ್ಯ

    ಬೆಂಗ್ಳೂರು ಸುಂದರಿ ಬಳಿ ಮಾತನಾಡೋ ದೇವರ ಹಾವು- ಪಬ್ಲಿಕ್ ಟಿವಿಯಲ್ಲಿ ನಾಗಿಣಿ ರಹಸ್ಯ

    – ಹಾವ್ ರಾಣಿ ಹೇಳ್ತಾಳಂತೆ ಮಹಾಭವಿಷ್ಯ
    – ಮಾಟಗಾತಿಯ ಮೋಸಕ್ಕೆ ಮದ್ವೆಯೇ ಸ್ಟಾಪ್!

    ಬೆಂಗಳೂರು: ದೇವಲೋಕದಿಂದ ಭೂ ಲೋಕಕ್ಕೆ ದೇವರೆ ಕಳಿಸಿದ ಹಾವು. ಈ ದೇವರ ಹಾವು ಮಾತನಾಡುತ್ತದೆ, ಭವಿಷ್ಯ ಹೇಳುತ್ತದೆ. ಅಷ್ಟೇ ಅಲ್ಲದೆ ಥಟ್ ಅಂತ ಕಷ್ಟ ಪರಿಹರಿಸುತ್ತದೆ. ದೇವರ ಹಾವಿಗಾಗಿ ಇಡೀ ಖಾಕಿ ಪಡೆ ಹುಡುಕಾಡುತ್ತಿದೆ. ಆದರೆ ಈ ಭವಿಷ್ಯ ಹೇಳುವ ದೇವರ ಹಾವನ್ನು ಪಬ್ಲಿಕ್ ಟಿವಿ ಲೈವ್ ಚೇಸ್ ಮಾಡಿದೆ.

    ಹಸ್ತಸಾಮುದ್ರಿಕೆ, ರೇಖಿ ಭವಿಷ್ಯ, ಮುಖ ಭವಿಷ್ಯ, ಜಾತಕ ಭವಿಷ್ಯ. ಹೀಗೆ ನಾನಾ ತರದ ರೀತಿಯಲ್ಲಿ ಭವಿಷ್ಯ ಹೇಳುವವರನ್ನು ನೋಡಿರುತ್ತೀರಿ. ಆದರೆ ಹೆಚ್‍ಬಿಆರ್ ಲೇಔಟ್‍ನ ಶಬನಮ್ ದೇವರ ಹಾವಿನ ಮೂಲಕ ಭವಿಷ್ಯ ಹೇಳುತ್ತಿದ್ದಾಳೆ. ಈ ದೇವರ ಹಾವನ್ನು ಪಬ್ಲಿಕ್ ಟಿವಿ ಜಾಲಾಡಿ ಹುಡುಕಲು ಪ್ರಯತ್ನಿಸಿದೆ. ದೇವರ ಹಾವನ್ನು ಲೈವ್ ಚೇಸ್ ಮಾಡಿದೆ.

    ಹೆಚ್‍ಬಿಆರ್ ಲೇಔಟ್‍ನ ಶಬನಮ್ ಸೊಂಟ ಬಳುಕಿಸಿ ರ‍್ಯಾಂಪ್‌‌ವಾಕ್ ಮಾಡುವಾಗ ಅದ್ಯಾರು ಆಕೆಗೆ ಈ ಐಡಿಯಾ ಕೊಟ್ರೋ ಏನೋ? ನನ್ ಬಳಿ ಹಾವಿದೆ, ಭವಿಷ್ಯ ಹೇಳುತ್ತದೆ ಅಂತಾ ಸ್ಯಾಂಪಲ್ ಬುಟ್ಲು. ಅಷ್ಟೇ ಹಿಂದೂ ಮುಸ್ಲಿಂ ಎನ್ನದೇ ನೂರಾರು ಕುಟುಂಬ ಈಕೆಯ ಬೆನ್ನುಬಿದ್ದು ಕಷ್ಟ ಪರಿಹಾರವಾಗುವ ಕನಸು ಕಂಡರು. ಆದರೆ ಇದೂವರೆಗೆ ಯಾರೋಬ್ಬರೂ ದೇವರ ಹಾವನ್ನು ನೋಡಿದವರಿಲ್ಲ. ಎಲ್ಲರನ್ನೂ ಬಾಗಿಲಲ್ಲೇ ನಿಲ್ಲಿಸುತ್ತಿದ್ದಳು.

    ಶಬನಮ್ ಮೊದಮೊದಲು ಮುಸ್ಲಿಮರನ್ನೇ ಟಾರ್ಗೆಟ್ ಮಾಡಿಕೊಂಡು ತನ್ನ ಮನೆಯಲ್ಲಿಯೇ ಆಧ್ಯಾತ್ಮಿಕ ಕೇಂದ್ರವನ್ನು ಶುರು ಮಾಡಿಕೊಂಡಳು. ಇದು ದೇವರ ನೀರು ಅಂತ ಜನರಿಗೆ ಕುಡಿಸಿ, ಅವರನ್ನು ಆಧ್ಯಾತ್ಮಿಕತೆಗೆ ತಳ್ಳುತ್ತಿದ್ದಳು. ಅಷ್ಟೇ ಅಲ್ಲದೆ ನಿನ್ನ ಗಂಡನ ಜೀವಕ್ಕೆ ಕಂಟಕವಿದೆ. ಅವರನ್ನ ಉಳಿಸಿಕೊಳ್ಳಬೇಕಾದರೆ 5 ಲಕ್ಷ ರೂ. ಕೊಡಬೇಕು, 10 ಹತ್ತು ಲಕ್ಷ ರೂ. ಕೊಡಬೇಕು. ಹಜರತ್ ಜೊತೆ ಮಾತನಾಡಬೇಕು ಎಂದು ಜನರನ್ನು ಹೆದರಿಸುತ್ತಿದ್ದಳು. ದೇವರ ಹಾವು ಭವಿಷ್ಯ ಹೇಳಿದೆ, ನಾನು ನಾಗಿಣಿ ಅಂತ ಜನರಿಂದ ದುಡ್ಡು ಪೀಕತೊಡಗಿದ್ದಳು.

    ಕೇವಲ ಕೆಲವೇ ತಿಂಗಳಲ್ಲಿ, ಭರ್ತಿ ದುಡ್ಡು, ಚಿನ್ನ ಮಾಡಿಕೊಂಡ ಶಬನಮ್ ರಾತ್ರೋರಾತ್ರಿ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾಳೆ. ಅತ್ತ ಲಕ್ಷ ಲಕ್ಷ ದುಡ್ಡು ಕಳೆದುಕೊಂಡ ಜನರು ಇನ್ನಷ್ಟು ಕಷ್ಟವನ್ನು ಮೈಮೇಲೆ ಎಳೆದುಕೊಂಡ ಜನ ಕಂಗಾಲಾಗಿದ್ದಾರೆ.

    ಸಂಬಂಧಿಕರನ್ನೂ ಬಿಡದ ಹಾಬ್ ರಾಣಿ:
    ಶಬನಮ್, ತನ್ನ ಸ್ವಂತ ಸಂಬಂಧಿಕರಿಗೆ ಚಳ್ಳೆ ಹಣ್ಣು ತಿನ್ನಿಸಿ 70 ಲಕ್ಷ ರೂಪಾಯಿಯನ್ನ ತೆಗೆದುಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಶಬನಮ್ ಮನೆಯಲ್ಲಿ ನಾಗರತ್ನಮ್ಮ ಎಂಬ ವೃದ್ಧೆ, 8 ವರ್ಷದಿಂದ ಮನೆಗೆಲಸ ಮಾಡುತ್ತಿದ್ದರು. ಅವರನ್ನೂ ನಂಬಿಸಿ 8 ಲಕ್ಷ ರೂ. ಪೀಕಿದ್ದಾಳೆ. ಈ ಹಣವನ್ನು ನಾಗರತ್ನಮ್ಮ ತನ್ನ ಮಗಳ ಮದ್ವೆಗೆ ಅಂತ ತೆಗೆದಿಟ್ಟಿದ್ದರು. ಆದರೆ ಶಬನಮ್ ಕೆಲಸದಿಂದ ನಾಗರತ್ನಮ್ಮನ ಮಗಳ ಮದುವೆ ನಿಂತು ಹೋಗಿದೆ.

    ಶಬನಮ್ ಅದ್ಯಾವ ಪರಿ ಮೋಸ ಮಾಡಿದ್ದಾಳೆ ಅಂದ್ರೆ ಭರ್ತಿ ನಾಲ್ಕು ಸ್ಟೇಷನ್‍ನಲ್ಲಿ ಆಕೆಯ ವಿರುದ್ಧ ನೂರಾರು ದೂರು ದಾಖಲಾಗಿವೆ. ವಿವೇಕನಗರ, ಕೆ.ಜಿ ಹಳ್ಳಿ, ಪುಲಿಕೇಶಿ ನಗರ, ಭಾರತಿನಗರ ಪೊಲೀಸರು ನಾಗಿಣಿ ಹಿಂದೆ ಬಿದ್ರೂ ಪತ್ತೆ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಒಂದೆರಡು ಬಾರಿ ಈಕೆಯನ್ನು ಹಿಡಿದು ತಂದರೂ ಅದೆಂಗೋ ರಿಲೀಸ್ ಆದ ಶಬನಮ್ ಯಾರ ಕೈಗೂ ಸಿಗದಂತೆ ಮಾಯವಾಗಿದ್ದಾಳೆ.

  • ವಿಷ ಸರ್ಪಗಳ ರಕ್ಷಣೆ ಮಾಡುತ್ತಿದ್ದಾಳೆ 12 ವರ್ಷದ ಪೋರಿ

    ವಿಷ ಸರ್ಪಗಳ ರಕ್ಷಣೆ ಮಾಡುತ್ತಿದ್ದಾಳೆ 12 ವರ್ಷದ ಪೋರಿ

    – ಈಕೆ ಹಿಡಿಯುವ ಹಾವು ನೋಡಿದ್ರೆ ಮೈ ಝಲ್ ಎನ್ನುತ್ತೆ

    ಕಾರವಾರ: ಹಾವು ಎಂದ್ರೆ ಎಂಥವರಿಗೂ ಭಯ. ಆದರೆ ಇಲ್ಲೊಬ್ಬ ಪುಟ್ಟ ಬಾಲಕಿಗೆ ಹಾವು ಅಂದ್ರೆ ಪಂಚಪ್ರಾಣ. ಕಾರ್ಕೋಟಕ ವಿಷದ ಹಾವನ್ನು ಸಹ ಮುದ್ದಿಸುವ ಈ ಬಾಲಕಿ ಹಾವುಗಳ ರಕ್ಷಣೆಗೆ ನಿಂತಿದ್ದಾಳೆ. ಅಷ್ಟಕ್ಕೂ ಈ ಬಾಲಕಿ ಯಾರು ಅವಳ ಕೆಲಸವೇನು ಎಂದು ಕೇಳಿದ್ರೆ ಎಲ್ಲರೂ ಬೆಚ್ಚಿ ಬೀಳೋದು ಗ್ಯಾರಂಟಿ.

    ಯಾರದ್ದೇ ಮನೆಗೆ ಹಾವು ನುಗ್ಗಲಿ, ಇಲ್ಲವೇ ಹಾವೇ ತೊಂದರೆಯಲ್ಲಿರಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಆವರ್ಸಾ ಗ್ರಾಮದ 12 ವರ್ಷದ ಪುಟ್ಟ ಬಾಲಕಿ ಭೂಮಿಕಾ, ಕೈಯಲ್ಲಿ ಸ್ಟಿಕ್ ಹಿಡಿದು ವಿಷ ಸರ್ಪವನ್ನು ತನ್ನ ಕೈಯಲ್ಲಿ ಹಿಡಿದು ರಕ್ಷಿಸುತ್ತಾಳೆ.

    ಈ ಊರಿನ ಸುತ್ತಮುತ್ತ ಯಾರ ಮನೆಗೆ ಹಾವು ಬರಲಿ ಮೊದಲು ಫೋನು ಹೋಗುವುದು ಇವರ ಮನೆಗೆ. ತಂದೆ ಮಹೇಶ್ ನಾಯ್ಕ ಉರುಗತಜ್ಞರಾಗಿದ್ದು, ಹಾವಿಗಳ ರಕ್ಷಣೆ ಮಾಡುತ್ತಾರೆ. ತಂದೆಯನ್ನು ನೋಡಿ ಹಾವುಗಳನ್ನು ಹಿಡಿಯುವುದನ್ನು ಕಲಿತ ಈ ಪುಟ್ಟ ಬಾಲಕಿ ಈಗ ತಮ್ಮ ಊರಿನ ಸುತ್ತಮುತ್ತ ಯಾವುದೇ ಹಾವು ಬರಲಿ ಅವುಗಳನ್ನು ರಕ್ಷಿಸಿ ಕಾಡಿಗೆ ಬಿಡುವ ಕೆಲಸ ಮಾಡುತ್ತಿದ್ದಾಳೆ. ಹಾವುಗಳ ಜೊತೆ ಪ್ರೀತಿ ಬೆಳಸಿಕೊಂಡಿರುವ ಈ ಪುಟ್ಟ ಬಾಲಕಿ 50 ಕ್ಕೂ ಹೆಚ್ಚು ವಿಷಸರ್ಪ, ಹೆಬ್ಬಾವುಗಳನ್ನು ರಕ್ಷಣೆ ಮಾಡಿ ತಾನೇ ಸ್ವತಃ ಕಾಡಿಗೆ ಬಿಟ್ಟು ಬಂದಿದ್ದಾಳೆ.

    ಮನೆಯಲ್ಲಿ ನೀನು ಹುಡಗಿ ಹಾಗೆಲ್ಲ ಹಾವು ಹಿಡಿಯಬಾರದು ಎಂದು ಈಕೆಗೆ ತಿಳಿಹೇಳಿ ವಿಷ ಸರ್ಪಗಳನ್ನು ಹಿಡಿಯಬೇಡ ಎನ್ನುತ್ತಾರೆ. ಆದರೂ ಈಕೆ ಮನೆಗೆ ನುಗ್ಗಿ ಬರುವ ಹಾವುಗಳನ್ನು ತಾನೇ ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಟ್ಟುಬರುತ್ತಾಳೆ. ಹಾವು ಅಂದರೆ ನನಗೆ ಇಷ್ಟ. ಅಪ್ಪ ಹಾವನ್ನು ಹಿಡಿದು ರಕ್ಷಣೆ ಮಾಡುವುದನ್ನು ನೋಡಿ ಹಾವು ಹಿಡಿಯುವುದನ್ನು ಕಲಿತಿದ್ದೇನೆ. ಎಲ್ಲಾತರದ ಹಾವು ಹಿಡಿಯುತ್ತೇನೆ ಎಂದು ಭೂಮಿಕ ಹೇಳಿದ್ದಾಳೆ.

    ಆವರ್ಸಾದ ಸುತ್ತಮುತ್ತಲೂ ದಟ್ಟ ಕಾಡುಗಳಿವೆ. ಹೀಗಾಗಿ ಈ ಕಾಡಿನಿಂದ ಆಹಾರ ಅರಸಿ ನಾಡಿಗೆ ವಿಷಸರ್ಪಗಳು ಲಗ್ಗೆ ಇಡುತ್ತವೆ. ಇಂತಹ ಸಂದರ್ಭದಲ್ಲಿ ಜನರು ಭಯ ಪಟ್ಟು ಹಾವನ್ನು ಕೊಲ್ಲುತಿದ್ದರು. ಆದರೆ ಈಗ ಈ ಬಾಲಕಿ ಹಾವನ್ನು ಹಿಡಿಯುವುದನ್ನು ನೋಡಿ ಜನರಲ್ಲೂ ಭಯ ಮಾಯವಾಗಿದೆ. ತಮ್ಮ ಮನೆಗಳಿಗೆ ಹಾವು ಬಂದರೆ ಸುತ್ತಮುತ್ತಲ ಊರಿನ ಜನ ಈ ಬಾಲಕಿಗೆ ಫೋನ್ ಮಾಡುತ್ತಾರೆ. ಕೈಯಲ್ಲಿ ಸ್ಟಿಕ್ ಹಾಗೂ ಚೀಲ ಹಿಡಿದು ಹೊರಡುವ ಈ ಪೋರಿ ಎಂಥ ಗಟ ಸರ್ಪವನ್ನೂ ಅಳಕಿಲ್ಲದೇ ಕ್ಷಣಮಾತ್ರದಲ್ಲಿ ಹಿಡಿದು ಹಾವುಗಳನ್ನು ಕಾಡಿಗೆ ಬಿಟ್ಟು ಬರುತ್ತಾಳೆ. ಜೊತೆಗೆ ಜನರಿಗೂ ಹಾವನ್ನು ಕೊಲ್ಲಬೇಡಿ ಎಂದು ತಿಳಿಹೇಳಿ ಬರುವುದು ಈಕೆಯ ಹಾವಿನ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ಹೀಗಾಗಿ ನಮಗೂ ಖುಷಿ ಆಗುತ್ತೆ ನಾವೂ ಏನೇ ಇದ್ರು ಈ ಹುಡುಗಿಯನ್ನು ಕರೆಯುತ್ತೇವೆ ಎಂದು ಸ್ಥಳೀಯರು ಹೇಳುತ್ತಾರೆ.

  • ಮನೆಯಲ್ಲಿ ಅಡಗಿ ಕುಳ್ತಿದ್ದ ಕರಿನಾಗರ ರಕ್ಷಣೆ

    ಮನೆಯಲ್ಲಿ ಅಡಗಿ ಕುಳ್ತಿದ್ದ ಕರಿನಾಗರ ರಕ್ಷಣೆ

    ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಮನೆಯೊಂದರಲ್ಲಿ ಅಡಗಿ ಕುಳಿತ ಕರಿನಾಗರ ಹಾವನ್ನ ರಕ್ಷಣೆ ಮಾಡಲಾಗಿದೆ.

    ಯಮನಪ್ಪ ಮಾದರ ಮನೆಯಲ್ಲಿ ಹಾವು ಅಡಗಿ ಕುಳಿತಿತ್ತು. ಇವರ ಹಾನಗಲ್ ಡಿಪೋದ ಚಾಲಕನಾಗಿದ್ದು, ಮನೆಯಲ್ಲಿ ಹಾವು ಕಂಡ ತಕ್ಷಣ ಗಾಬರಿಯಾಗಿದ್ದಾರೆ. ಅದೇ ಡಿಪೋದಲ್ಲಿ ಕೆಲಸ ಮಾಡುವ ಚಾಲಕ ಕಂ ಸ್ನೇಕ್ ಕೃಷ್ಣರೆಡ್ಡಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಮನೆಗೆ ಬಂದ ಕೃಷ್ಣರೆಡ್ಡಿ ಮನೆಯಲ್ಲಿ ಅಡಗಿ ಕುಳಿತಿದ್ದ ಕರಿನಾಗರವನ್ನು ಹಿಡಿದಿದ್ದಾರೆ. ಈ ಕರಿನಾಗರ ಹಾವನ್ನು ನೋಡಲು ಅಪಾರ ಜನರು ಬಂದಿದ್ದರು. ನಂತರ ಕೃಷ್ಣರೆಡ್ಡಿ ಸುರಕ್ಷಿತವಾಗಿ ಹಾವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.

    ಈಗಾಗಲೇ ಸ್ನೇಕ್ ಕೃಷ್ಣರೆಡ್ಡಿ ಚಾಲಕ ಕೆಲಸ ಮಾಡುತ್ತಾ, ಬಿಡುವಿನ ವೇಳೆಯಲ್ಲಿ ಹಾವುಗಳನ್ನ ಹಿಡಿದು ಕಾಡಿಗೆ ಬಿಡುವ ಕಾರ್ಯ ಮಾಡುತ್ತಿದ್ದಾರೆ. ಇದುವರೆಗೂ ಸುಮಾರು 2000ಕ್ಕೂ ಅಧಿಕ ಹಾವುಗಳನ್ನ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಈ ಕಾರ್ಯಕ್ಕೆ ಹಾನಗಲ್ ಪಟ್ಟಣ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು.

  • ಶ್ರೀಮಂತಿಕೆಯ ಆಸೆ ತೋರಿಸಿ 2 ತಲೆ ಹಾವು ಮಾರಾಟಕ್ಕೆ ಯತ್ನಿಸಿದ ಮೂವರು ಅಂದರ್

    ಶ್ರೀಮಂತಿಕೆಯ ಆಸೆ ತೋರಿಸಿ 2 ತಲೆ ಹಾವು ಮಾರಾಟಕ್ಕೆ ಯತ್ನಿಸಿದ ಮೂವರು ಅಂದರ್

    ಚಿಕ್ಕಬಳ್ಳಾಪುರ: ಮೊಬೈಲ್ ಯುಗದಲ್ಲಿ ಎಲ್ಲವೂ ಫಾಸ್ಟ್, ಫಾಸ್ಟ್. ಬೇಗ ದುಡ್ಡು ಮಾಡಬೇಕು, ಬೇಗ ಶ್ರೀಮಂತನಾಗಬೇಕು ಎಂಬ ತವಕದಲ್ಲಿ ಮನುಷ್ಯ ಅತಿಯಾಸೆಗೆ ಬಲಿಯಾಗುತ್ತಿದ್ದಾನೆ. ಇಂತಹದ್ದೇ ಪ್ರಕರಣವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಶ್ರೀಮಂತಿಕೆ ಆಸೆ ತೋರಿಸಿ ಹಾವನ್ನು ಮಾರಾಟ ಮಾಡಲು ಯತ್ನಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ರೆಡ್ ಸ್ಯಾಂಡ್ ಬೋವಾ ಸ್ನೇಕ್ ಅಂತ ಕರೆಯುವ ಮಣ್ಣು ಮುಕ್ಕುವ ಹಾವಿನ ಹೆಸರಲ್ಲಿ ಅಮಾಯಕರಿಗೆ ವಂಚನೆ ಮಾಡಿ ಲಕ್ಷಾಂತರ ರೂಪಾಯಿ ಲಪಟಾಯಿಸಲು ಹೊಂಚು ಹಾಕಿದ್ದ ಮೂವರನ್ನು ಜಿಲ್ಲೆಯ ಗೌರಿಬಿದನುರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಇಡಗೂರು ಗ್ರಾಮದ ಬಳಿ ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದ ನರಸಿಂಹ, ಅನಿಲ್ ಹಾಗೂ ಹರೀಶ್ ಬಂಧಿತರು.

    ಆಕಸ್ಮಿಕವಾಗಿ ಸಿಕ್ಕ ಹಾವನ್ನು ಬಿಂದಿಗೆಯಲ್ಲಿಟ್ಟುಕೊಂಡು 2 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದರು. ನಮ್ಮ ಬಳಿ ಎರಡು ತಲೆ ಹಾವಿದೆ. ಈ ಹಾವನ್ನು ಮನೆಯಲ್ಲಿ ಇಟ್ಟುಕೊಂಡರೆ ಲಕ್ಷ್ಮೀದೇವಿ ಒಲಿದು ಬರುತ್ತಾಳೆ ಎಂದು ಹೇಳಿ ಅಮಾಯಕರಿಂದ ಹಣ ಪೀಕಲು ಆರೋಪಿಗಳು ಮುಂದಾಗಿದ್ದರು.

    ಎರಡು ತಲೆ ಹಾವು ಮನೆಯಲ್ಲಿ ಇಟ್ಟುಕೊಂಡರೆ ಹಣ ಗಳಿಸಬಹುದು ಎಂದು ಮಾರಾಟ ಮಾಡೋ ಅಸಾಮಿಗಳೇ ಏಕೆ ಮನೆಯಲ್ಲಿ ಹಾವನ್ನು ಇಟ್ಕೊಂಡು ಹಣವಂತರಾಗಬಾರದೆಂದು ನಾಗರಿಕರು ಪ್ರಶ್ನಿಸಿದ್ದಾರೆ. ಕಾಡು ಪ್ರಾಣಿಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಹಿಂಸಿಸುವವರ ವಿರುದ್ಧ ಕಠಿಣ ಕ್ರಮವಾಗಬೇಕೆನ್ನುತ್ತಾರೆ. ವನ್ಯಜೀವಿ ಸಂರಕ್ಷಕ ಪೃಥ್ವಿರಾಜ್. ಸದ್ಯ ಪೊಲೀಸರು ವಶಕ್ಕೆ ಪಡೆದಿರುವ ಹಾವನ್ನು ಅರಣ್ಯ ಇಲಾಖಾಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಹಾವನ್ನು ಕಾಡಿಗೆ ಬಿಡಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.

  • ಹಾವು ಕಚ್ಚಿ ಎಂಟು ತಿಂಗಳ ತುಂಬು ಗರ್ಭಿಣಿ ಸಾವು

    ಹಾವು ಕಚ್ಚಿ ಎಂಟು ತಿಂಗಳ ತುಂಬು ಗರ್ಭಿಣಿ ಸಾವು

    ಮಡಿಕೇರಿ: ಕೊಳಕುಮಂಡಲ ಹಾವೊಂದು ಕಚ್ಚಿದ ಪರಿಣಾಮ ಎಂಟು ತಿಂಗಳ ತುಂಬು ಗರ್ಭಿಣಿಯೊಬ್ಬರು ಮೃತಪಟ್ಟಿರುವ ಘಟನೆ ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

    ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಸುಚಿತ (36) ಮೃತ ದುರ್ದೈವಿ. ಸುಚಿತಗೆ ಶುಕ್ರವಾರ ರಾತ್ರಿ ತಮ್ಮ ಮನೆಯನ ಶೌಚ ಗೃಹದಲ್ಲಿ ಇರುವಾಗ ಕೊಳಕು ಮಂಡಲ ಹಾವು ಕಚ್ಚಿತ್ತು. ಹಾವು ಕಡಿತಕ್ಕೆ ಒಳಗಾದ ಮಹಿಳೆಯನ್ನು ಕುಶಾಲನಗರ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

    ಕುಶಾಲನಗರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ತುಂಬು ಗರ್ಭಿಣಿ ಸುಚಿತಾ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಸಂಜೆ 7:30 ರ ಸರಿಸುಮಾರಿಗೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

  • ಮೇಲೆ ಬರಲಾಗದೆ ಇಡೀ ರಾತ್ರಿ ಬಾವಿಯಲ್ಲೇ ಈಜಿದ ಹಾವು

    ಮೇಲೆ ಬರಲಾಗದೆ ಇಡೀ ರಾತ್ರಿ ಬಾವಿಯಲ್ಲೇ ಈಜಿದ ಹಾವು

    ಚಿಕ್ಕಮಗಳೂರು: ಬಾವಿಯೊಳಗೆ ಬಿದ್ದ ಹಾವೊಂದು ಇಡೀ ರಾತ್ರಿ ನೀರಿನಲ್ಲಿ ಈಜಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಚಕಮಕಿ ಗ್ರಾಮದ ಕೃಷ್ಣ ಭಟ್ ಎಂಬವರು ಮನೆ ಹಿಂದೆ ಇದ್ದ ಬಾವಿಯಲ್ಲಿ ಶುಕ್ರವಾರ ಸಂಜೆ ಏನೂ ಇರಲಿಲ್ಲ. ಆದರೆ ಶನಿವಾರ ಬೆಳಗ್ಗೆ ಹೋಗಿ ನೋಡಿದಾಗ ಹಾವೊಂದು ಈಜುತ್ತಾ ಮೇಲೆ ಬರಲು ಯತ್ನಿಸುತ್ತಿತ್ತು. ಬಾವಿಗೆ ಸುತ್ತಲೂ ಸಿಮೆಂಟ್‍ನಿಂದ ಪ್ಲಾಸ್ಟರ್ ಮಾಡಿರುವುದರಿಂದ ಹಾವು ತೆವಳಲಾಗದೆ ನೀರಿನಲ್ಲಿ ಈಜುತ್ತಿತ್ತು. ಕೂಡಲೇ ಕೃಷ್ಣ ಭಟ್ ಅವರು ಹಾವನ್ನು ಕೋಲಿನಿಂದ ಮೇಲೆ ಎತ್ತಲು ಪ್ರಯತ್ನಿಸಿದ್ದಾರೆ.

    ಹಾವು ಎಡೆ ಬಿಟ್ಟುಕೊಂಡು ಜೋರಾಗಿ ಉಸಿರು ಬಿಡುತ್ತಿದ್ದರಿಂದ ಕೃಷ್ಣ ಭಟ್ ಅವರಿಗೆ ಧೈರ್ಯ ಸಾಕಾಗಿಲ್ಲ. ಕೂಡಲೇ ಉರಗ ತಜ್ಞ ಆರೀಫ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಆರೀಫ್ ಐದೇ ನಿಮಿಷಕ್ಕೆ ಬಾವಿಯಲ್ಲಿ ಈಜುತ್ತಿದ್ದ ಹಾವನ್ನ ಮೇಲೆ ಎತ್ತಿದರು. ಸುಸ್ತಾಗಿ ಜೋರಾಗಿ ಉಸಿರು ಬಿಡುತ್ತಿದ್ದ ಹಾವನ್ನು ಸ್ವಲ್ಪ ಹೊತ್ತು ನೆಲದ ಮೇಲೆ ಬಿಟ್ಟರು. ತದನಂತರ ಹಾವನ್ನು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಇಡೀ ರಾತ್ರಿ ನೀರಿನಲ್ಲಿ ಈಜಿರುವ ಹಾವನ್ನ ಕಂಡು ಕೆಲವರು ಮರುಕ ವ್ಯಕ್ತಪಡಿಸಿದರು.

  • ಗಿರ್ಗಿಟ್ಲೆ ರೀತಿ ನಾಗಪ್ಪನನ್ನು ತಿರುಗಿಸಿ, ಕತ್ತಿಗೆ ಸುತ್ಕೊಂಡ ಕುಡುಕ

    ಗಿರ್ಗಿಟ್ಲೆ ರೀತಿ ನಾಗಪ್ಪನನ್ನು ತಿರುಗಿಸಿ, ಕತ್ತಿಗೆ ಸುತ್ಕೊಂಡ ಕುಡುಕ

    ಜೈಪುರ: ಮದ್ಯದ ನಶೆಯಿದ್ದ ಜನರು ಚಿತ್ರ ವಿಚಿತ್ರವಾಗಿ ವರ್ತಿಸುತ್ತಿರುತ್ತಾರೆ. ಆದರೆ ರಾಜಸ್ಥಾನದಲ್ಲೊಬ್ಬ ಕುಡುಕ ಮದ್ಯದ ನಶೆಯಲ್ಲಿ ನಾಗರ ಹಾವಿನೊಂದಿಗೆ ಸರಸಕ್ಕಿಳಿದಿದ್ದಾನೆ. ಹಾವಿನ ಮುಂದೆ ನಿಂತು ನಾನಾ, ನೀನಾ ನೋಡೇ ಬಿಡಣಾ ಎಂದು ನಾಗನಿಗೆ ಸವಾಲ್ ಹಾಕಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

    ಸಾಮಾನ್ಯವಾಗಿ ನಾಗರ ಹಾವನ್ನು ಕಂಡರೇ ಭಯಬಿದ್ದು ಜನ ಜಾಗ ಖಾಲಿ ಮಾಡುತ್ತಾರೆ. ಆದರೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ನಾಗರ ಹಾವಿನೊಂದಿಗೆ ಆಟವಾಡಿದ್ದಾನೆ. ಈ ಕುಡುಕನನ್ನು ಪ್ರಕಾಶ್ ಮಹಾವರ್ ಎಂದು ಗುರುತಿಸಲಾಗಿದೆ. ಹಾವನ್ನು ಕೈಯಲ್ಲಿ ಹಿಡಿದು ಗಿರ ಗಿರನೇ ಗಿರ್ಗಿಟ್ಲೆ ರೀತಿ ತಿರುಗಿಸಿ, ಸುಮಾರು 1 ಗಂಟೆಯ ಕಾಲ ಹಾವನ್ನು ಹಿಡಿದುಕೊಂಡು ಕುಡುಕ ಸತಾಯಿಸಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಕುಡುಕನ ಹುಚ್ಚಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿಬಿಟ್ಟಿದೆ.

    ದೌಸಾ ಜಿಲ್ಲೆಯ ಗದ್ದೆಯೊಂದರಲ್ಲಿ ತನ್ನ ಪಾಡಿಗೆ ಹರಿದಾಡಿಕೊಂಡು ಹೋಗುತ್ತಿದ್ದ ನಾಗರ ಹಾವಿನ ಕಂಡ ಪ್ರಕಾಶ್ ಅದರ ದಾರಿಯನ್ನು ತಡೆದಿದ್ದಾನೆ. ಕೆಲ ಸಮಯದ ಬಳಿಕ ಅದನ್ನು ಹಿಡಿದು ಗಿರ ಗಿರನೇ ತಿರುಗಿಸಿ, ತನ್ನ ಕೊರಳಿಗೆ ಧರಿಸಿಕೊಂಡು ಹುಚ್ಚಾಟವಾಡಿದ್ದಾನೆ. ನೀನಾ, ನಾನಾ ನೋಡೇ ಬಿಡಣಾ ಎಂದು ನಾಗಪ್ಪನಿಗೆ ಸವಾಲ್ ಹಾಕಿಕೊಂಡು ರಂಪಾಟ ಮಾಡಿದ್ದಾನೆ. ಈ ವೇಳೆ ಆತನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಬಾರಿ ಹಾವು ಆತನಿಗೆ ಕಚ್ಚಿದೆ. ಆದರೂ ಆತ ಮಾತ್ರ ಎಣ್ಣೆ ಏಟಲ್ಲಿ ಹುಚ್ಚಾಟ ಮುಂದುವರಿಸಿದ್ದ. ಈ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದೆ.

    ಹಾವು ಕಚ್ಚಿದ ಪರಿಣಾಮ ಪ್ರಕಾಶ್ ಶರೀರ ನೀಲಿ ಬಣ್ಣಕ್ಕೆ ತಿರುಗುತ್ತಿದ್ದಂತೆ ತಕ್ಷಣ ಆತನನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದರು. ಸದ್ಯ ಪ್ರಕಾಶ್ ಸ್ಥಿತಿ ಹೇಗಿದೆ ಎನ್ನುವ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.