Tag: ಹಾರರ್ ಮೂವಿ

  • ‘ಛಾಯ’ ಹಾಡುಗಳ ಅನಾವರಣ

    ‘ಛಾಯ’ ಹಾಡುಗಳ ಅನಾವರಣ

    ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿರುವ ಜಗ್ಗು ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಛಾಯ ಎಂಬ ಛಾಯೆ ಇರುವ ಹಾರಾರ್ ಸಿನಿಮಾ ಇದಾಗಿದ್ದು, ಈ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ನೆರವೇರಿತು. ಸಿರಿ ಮ್ಯೂಜಿಕ್ ಆಡಿಯೋ ಕಂಪನಿ ಮುಖಾಂತರ ಈ ಆಡಿಯೋವನ್ನು ಹೊರತರಲಾಗಿದೆ.

    ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡುಗಳು ಹಾಗೂ ಸಾಹಸ ದೃಶ್ಯಗಳ ಶೂಟಿಂಗ್ ಮಾತ್ರವೇ ಬಾಕಿ ಇದೆ. ಮಧುಗೌಡ್ರು ನಿರ್ಮಾಣದ ಮೊದಲ ಚಿತ್ರವಿದು. ವೀರೇಶ್ ಬಾಬು, ನಂದನ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.

    ನಿರ್ಮಾಪಕ ಮಧುಗೌಡ್ರು ಮಾತನಾಡಿ, ನಿರ್ದೇಶಕ ಜಗ್ಗು ಒಳ್ಳೆ ಪ್ರಯತ್ನ ಮಾಡಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಬಾಹುಬಲಿ ತರಹದ ಸಿನಿಮಾ ಮಾಡುವ ಆಸೆಯಿದೆ. ಈ ಚಿತ್ರದಿಂದ ಒಳ್ಳೆಯ ಮೆಸೇಜ್ ಕೂಡ ಬೇಕೆಂಬುದು ನಮ್ಮ ಉದ್ದೇಶ. ಚಿತ್ರಕ್ಕೆ ಬೇಕಾದುದ್ದನ್ನು ಒದಗಿಸಿದ್ದೇವೆ ಎಂದು ಹೇಳಿದರು.

    ಆನಂದ್ ನಾಯಕನಾಗಿ ನಟಿಸಿದ್ದು ತೇಜುರಾಜು ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಹೇಮಂತ್, ನಂದನ್, ದರ್ಶನ್, ರಾಜಶೇಖರ್, ರಾಜು, ಉದಯ್, ಅನನ್ಯ, ಲಕ್ಷ್ಮಿ, ಗೋವಿಂದಪ್ಪ, ರಾಜ್‍ಪ್ರಭು, ನಯನ ಕೃಷ್ಣ, ಕಿಲ್ಲರ್ ವೆಂಕಟೇಶ್, ರೋಹಿಣಿ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳಿಗೆ ಮಂಜುಕವಿ ಸಾಹಿತ್ಯ ರಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಅರುಣ್ ವೀರೂರ್ ಚಿತ್ರದ ಕ್ಯಾಮರಾ ವರ್ಕ್ ಮಾಡಿದ್ದಾರೆ. ದುರ್ಗಾ ಪಿ.ಎಸ್. ಸಂಕಲನ, ಅಪ್ಪುವೆಂಕಟೇಶ್, ಯಾರಿಶ್ ಜಾನಿ ಸಾಹಸವಿದೆ.

    ನಾಲ್ಕು ಜನ ಹುಡುಗರು ಒಂದು ಮನೆಗೆ ಬಂದಾಗ ಅಲ್ಲಿ ನಡೆಯುವ ವಿಚಿತ್ರ ಘಟನೆಗಳೇ ಈ ಚಿತ್ರದ ಕಥಾವಸ್ತು. ನಾಯಕ ಆನಂದ್ ನಾನು ಪುನೀತ್ ರಾಜ್ ಕುಮಾರ್ ತರ ಕಾಣಿಸಿಕೊಳ್ಳುತ್ತಿದ್ದೇನೆ ಎಂಬ ಹೆಮ್ಮೆಯಿದೆ. ಅತ್ಯಾಚಾರ ಎನ್ನುವುದು ಸಮಾಜಕ್ಕೆ ದೊಡ್ಡ ಪಿಡುಗಾಗಿದೆ. ಅಂತಹವರನ್ನು ಹೇಗೆ ಶಿಕ್ಷಿಸಬಹುದು ಎನ್ನುವ ಕಥೆ ಚಿತ್ರದಲ್ಲಿದೆ. ನಾನು ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಅಭಿನಯಿಸಿದ್ದೇನೆ ಎಂದು ಹೇಳಿದರು.

    ನಾಯಕಿ ತೇಜುರಾಜ್ ಮಾತನಾಡಿ, ಇದು ನನ್ನ ಮೊದಲ ಸಿನಿಮಾ ನಾಯಕನ ಹೆಂಡತಿ ಪಾತ್ರ ಮಾಡಿದ್ದೇನೆ ಎಂದು ಹೇಳಿದರು. ನಟ ರಾಜ್ ಉದಯ್ ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ಸೋಮಶೇಖರ್ ಹಾಗೂ ಸಿರಿ ಮ್ಯೂಸಿಕ್ ಕಂಪನಿಯ ಮಾಲೀಕರಾದ ಸುರೇಶ್ ಚಿಕ್ಕಣ್ಣ ಮುಂತಾದವರು ಭಾಗವಹಿಸಿದ್ದರು.

  • ರೆಡಿಯಾಗ್ತಿದೆ ಹಾರರ್ ಮೂವಿ ‘ಛಾಯ’

    ರೆಡಿಯಾಗ್ತಿದೆ ಹಾರರ್ ಮೂವಿ ‘ಛಾಯ’

    ಬೆಂಗಳೂರು: ಕಳೆದ 22 ವರ್ಷಗಳಿಂದಲೂ ನೃತ್ಯ ಕಲಾವಿದರಾಗಿ ಹಾಗೂ ಸುಮಾರು ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಜಗ್ಗು ಈಗ ಸಿನಿಮಾ ನಿರ್ದೇಶಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಆಗ ಉಪೇಂದ್ರ ಅಭಿನಯದ ‘ಎ’ ಚಿತ್ರದಲ್ಲಿ ಕೂಡ ಕೆಲಸ ಮಾಡಿರುವ ಜಗ್ಗು ಈಗ ‘ಛಾಯ’ ಎಂಬ ಚಲನಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಅಲ್ಲದೆ, ಕೊರಿಯೋಗ್ರಾಫರ್ ಆಗಿಯೂ ಕೆಲಸ ಮಾಡಿದ್ದಾರೆ.

    ಲವ್ ಹಾಗೂ ಸೆಂಟಿಮೆಂಟ್ ಕಥಾಹಂದರ ಹೊಂದಿರುವ ಈ ಚಿತ್ರದ ಟಾಕಿ ಭಾಗ ಈಗಾಗಲೇ ಮುಕ್ತಾಯಗೊಂಡಿದ್ದು, ಚಿತ್ರದಲ್ಲಿ ಐದು ಹಾಡುಗಳು ಮತ್ತು ನಾಲ್ಕು ಸಾಹಸ ಸನ್ನಿವೇಶಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಬೆಂಗಳೂರು, ಸಕಲೇಶಪುರ ಹಾಗೂ ಮಂಡ್ಯ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಜನ ಸ್ನೇಹಿತರ ನಡುವೆ ನಡೆಯುವ ಕತೆ ಈ ಚಿತ್ರದಲ್ಲಿದ್ದು, ಇದರ ಜೊತೆಗೆ ಒಂದು ಹಾರರ್ ಎಲಿಮೆಂಟ್ ಕೂಡ ಇದೆ. ದೆವ್ವದ ರಿವೇಂಜ್ ಕಥೆಯನ್ನು ಕೂಡ ನಿರ್ದೇಶಕರು ಈ ಚಿತ್ರದಲ್ಲಿ ತಂದಿದ್ದಾರೆ.

    ನ್ಯೂ ಗ್ಲೋಬಲ್ ಕ್ರಿಯೇಷನ್ಸ್ ಲಾಂಛನದಲ್ಲಿ ಮಧು ಗೌಡ್ರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅರುಣ್ ಬೀರೂರು ಛಾಯಾಗ್ರಹಣ, ಮಂಜು ಕವಿ ಸಂಗೀತ, ಅಪ್ಪು ವೆಂಕಟೇಶ್, ಹ್ಯಾರಿಸ್ ಡ್ಯಾನಿ ಸಾಹಸ, ದುರ್ಗ ಪಿ.ಎಸ್. ಸಂಕಲನ, ಮಂಜುಕವಿ ಸಾಹಿತ್ಯ, ನಂದನ್, ಪ್ರವೀರ್ಣ ಚಾಲ್ರ್ಸ್, ರಂಗರಾಜು (ಬಾಬಣ್ಣ) ಸಹ ನಿರ್ಮಾಪಕರಾಗಿದ್ದು, ಆನಂದ್ ತೇಜು, ರಾಜಶೇಖರ್, ಅನನ್ಯಾ, ನಯನ ಕೃಷ್ಣ, ಲಕ್ಪ್ಷ್ಮಣ್, ಗೋವಿಂದಪ್ಪ, ಲಕ್ಷ್ಮಿ, ಕಿಲ್ಲರ್ ವೆಂಕಟೇಶ್, ರಾಜ್ ಉದಯ್, ರೋಹಿಣಿ, ಅಮೃತ್ ರಾಜ್ ಮುಂತಾದವರ ತಾರಾಬಳಗವಿದೆ.

  • ನಾಕುಮುಖ ನಿರ್ದೇಶಕ ಕುಶನ್ ಗೌಡರ ಪ್ರತಿಭೆಯ ನಾನಾ ಮುಖ!

    ನಾಕುಮುಖ ನಿರ್ದೇಶಕ ಕುಶನ್ ಗೌಡರ ಪ್ರತಿಭೆಯ ನಾನಾ ಮುಖ!

    ‘ನಾಕುಮುಖ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಹೊಸಬರೇ ಸೇರಿ ಮಾಡುತ್ತಿರೋ ಈ ಚಿತ್ರ ಅದರ ಮೂಲಕವೇ ಈಗ ಪ್ರೇಕ್ಷಕರನ್ನೆಲ್ಲ ತಲುಪಿಕೊಂಡಿದೆ. ಈಗ ಹೊಸಬರೊಂದು ಚಿತ್ರ ಮಾಡುತ್ತಿದ್ದಾರೆಂದರೆ ಆ ಬಗ್ಗೆ ಕನ್ನಡದ ಪ್ರೇಕ್ಷಕರಲ್ಲೊಂದು ಕುತೂಹಲ ಮೂಡಿಕೊಳ್ಳುತ್ತೆ. ಹೊಸಬರು ಹೊಸತನದ ಚಿತ್ರವನ್ನೇ ಸೃಷ್ಟಿಸುತ್ತಾರೆಂಬ ಗಾಢವಾದ ನಂಬಿಕೆಯಲ್ಲದೇ ಅದಕ್ಕೆ ಬೇರ್ಯಾವ ಕಾರಣವೂ ಇಲ್ಲ. ನಾಕುಮುಖ ಚಿತ್ರದ ವಿಚಾರದಲ್ಲಿಯೂ ಅಂಥಾದ್ದೇ ಕಾರಣದಿಂದ ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ. ಟ್ರೇಲರ್ ತುಂಬಾ ಅದಕ್ಕೆ ಪೂರಕವಾದ ಅಂಶಗಳೇ ಕಾಣಿಸುವಂತಿರೋ ನಾಕುಮುಖ ಸಸ್ಪೆನ್ಸ್, ಹಾರರ್, ಥ್ರಿಲ್ಲರ್ ಚಿತ್ರ. ಈ ಚಿತ್ರವನ್ನು ನಿರ್ದೇಶನ ಮಾಡಿ ಮುಖ್ಯವಾದೊಂದು ಪಾತ್ರವನ್ನೂ ನಿರ್ವಹಿಸಿರುವವರು ಕುಶನ್ ಗೌಡ. ಈ ಮೂಲವೇ ದಶಕಗಳ ಕಾಲ ಅವರು ಪಟ್ಟ ಕಷ್ಟ, ಕಂಡ ಕನಸು ನಿರ್ಣಾಯಕ ಘಟ್ಟ ತಲುಪಿಕೊಂಡಿದೆ.

    ಕುಶನ್ ಗೌಡ ಈವರೆಗೂ ಹಲವಾರು ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ಒಂದಷ್ಟು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಂಥಾ ಸಣ್ಣ ಸಣ್ಣ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದಕ್ಕೂ ದೊಡ್ಡಮಟ್ಟದಲ್ಲಿಯೇ ಪಡಿಪಾಟಲು ಪಟ್ಟಿರೋ ಕುಶನ್ ಆ ಹಂತದಲ್ಲಿ ಒಂದು ಸಿನಿಮಾದಲ್ಲಿ ಅವಕಾಶ ಸಿಕ್ಕರೆ ನಟನೆಯಷ್ಟೇ ನಿರ್ದೇಶನ ವಿಭಾಗಗಳತ್ತಲೂ ಶ್ರದ್ಧೆಯಿಂದ ಗಮನ ಹರಿಸುತ್ತಿದ್ದರಂತೆ. ಹಾಗೆ ದಶಕಗಳ ಕಾಲ ಸಾಗಿ ಬಂದು ಒಂದೊಳ್ಳೆ ಕಥೆಯೊಂದಿಗೆ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಬರವಣಿಗೆಯಲ್ಲಿ ಅಪಾರ ಆಸಕ್ತಿ ಮತ್ತು ಹಿಡಿತ ಹೊಂದಿರೋ ಕುಶನ್ ಹಾಡಲೂ ಸೈ, ನಟಿಸಲೂ ಸಿದ್ಧ. ಯಾವುದೇ ಸಿನಿಮಾ, ಧಾರಾವಾಹಿಗಳಿಗೆ ಸಂಬಂಧಿಸಿದ ಬರವಣಿಗೆಯನ್ನು ಬೆರಗಾಗುವಂತೆ ಮಾಡಬಲ್ಲ ಕುಶನ್ ಬಹುಮುಖ ಪ್ರತಿಭೆ. ಅವರ ಪ್ರತಿಭೆಯ ನಾನಾ ಮುಖಗಳಲ್ಲಿ ನಾಕುಮುಖ ಚಿತ್ರದ ನಿರ್ದೇಶಕನ ಅವತಾರವೂ ಒಂದಾಗಿದೆ!

    ನಾಕುಮುಖ ಚಿತ್ರಕ್ಕವರು ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ಮೂರು ಹಾಡುಗಳನ್ನೂ ಬರೆದಿದ್ದಾರೆ. ಪ್ರಮುಖವಾದ ಪಾತ್ರದಲ್ಲಿಯೂ ನಟಿಸಿದ್ದಾರೆ. ಅವರ ಪ್ರತಿಭೆಗೆ ಇದಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಮೂಲತಃ ಮಡಿಕೇರಿಯ ಐಕೊಳ ಗ್ರಾಮದವರಾದ ಕುಶನ್ ಶಾಲಾ ಕಾಲೇಜು ವ್ಯಾಸಂಗ ಮಾಡಿದ್ದೆಲ್ಲವೂ ಅಲ್ಲಿಯೇ. ಹೀಗೆ ಶಾಲೆ ಮತ್ತು ಕಾಲೇಜು ದಿನಗಳಲ್ಲಿಯೇ ನಾಟಕ ಬರೆಯುವುದು, ನಟಿಸೋದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು ಈ ಕಾರಣದಿಂದಲೇ ಇಡೀ ಊರಿನ ಗಮನ ಸೆಳೆದುಕೊಂಡಿದ್ದರು. ಅದಾದ ನಂತರದಲ್ಲಿ ಸಿನಿಮಾ ನಟನಾಗಬೇಕೆಂಬ ಹಂಬಲ ಅವರನ್ನಾವರಿಸಿಕೊಂಡಿತ್ತು. ಅದಕ್ಕೆ ಸ್ಫೂರ್ತಿಯಾಗಿದ್ದದ್ದು ಶಂಕರ್ ನಾಗ್ ಮೇಲಿನ ಅಪೂರ್ವ ಅಭಿಮಾನ.

    ಬಳಿಕ ಕಾಲೇಜು ವ್ಯಾಸಂಗ ಮುಗಿಸಿ ಬೆಂಗಳೂರಿಗೆ ಬಂದಿಳಿದ ಅವರೆದುರಿದ್ದದ್ದೂ ನಟನಾಗಿ ಬೆಳೆಯಬೇಕೆಂಬ ಹಂಬಲವಷ್ಟೇ. ಎಲ್ಲೆಲ್ಲ ಸೀರಿಯಲ್, ಸಿನಿಮಾ ಶೂಟಿಂಗು ನಡೆಯುತ್ತದೆ ಎಂದು ಪತ್ತೆಹಚ್ಚಿ ಹೇಗಾದರೂ ಅಲ್ಲಿಗೆ ನುಗ್ಗಿ ತನ್ನ ಫೋಟೋ ಮತ್ತಿತರ ವಿವರ ಕೊಟ್ಟು ಬರೋದೇ ಅವರ ದಿನನಿತ್ಯದ ಕೆಲಸವಾಗಿತ್ತು. ಹಾಗಂತ ಹೊಟ್ಟೆಪಾಡು ಸುಮ್ಮನಿರಬೇಕಲ್ಲಾ? ಅದಕ್ಕಾಗಿ ಆರಂಭದಲ್ಲಿ ಅವರು ಆರಿಸಿಕೊಂಡಿದ್ದದ್ದು ಪಬ್, ಹೊಟೇಲುಗಳಲ್ಲಿ ಬೌನ್ಸರ್ ಕೆಲಸ. ಸಾಮಾನ್ಯವಾಗಿ ವಾರದ ಕಡೆಯ ಎರಡು ದಿನ ಈ ಕೆಲಸ ಇರುತ್ತಿತ್ತು. ಅಂಥಾ ಕಡೆಗಳಿಗೆ ಸಿನಿಮಾ ಸೀರಿಯಲ್ ಮಂದಿ ಬಂದರೆ ಪರಿಚಯ ಮಾಡಿಕೊಂಡು ಅವಕಾಶ ಕೇಳಬೇಕೆಂಬ ದೂರದ ಆಸೆ ಮತ್ತು ಅದರಿಂದ ಇನ್ನೂರೋ ಮುನ್ನೋರೋ ವಾರದ ಖರ್ಚಿಗೆ ಹುಟ್ಟುತ್ತದೆಂಬ ಅನಿವಾರ್ಯತೆಯಿಂದಲೇ ಕುಶನ್ ಆ ಕೆಲಸಕ್ಕಿಳಿದಿದ್ದರು.

    ಆದರೆ ಎಷ್ಟೋ ಅವಮಾನಗಳನ್ನು ಸಹಿಸಿಕೊಂಡೇ ಅವರು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಲಾರಂಭಿಸಿದ್ದರು. ಒಂದಷ್ಟಾದರೂ ಗುರುತು ಹಿಡಿಯುವಂಥಾ ಪಾತ್ರಗಳು ಅವರಿಗೆ ಸಿಗಲಾರಂಭಿಸಿದ್ದು ಇತ್ತೀಚಿನ ದಿನಗಳಲ್ಲಿಯಷ್ಟೆ. ಆದರೆ ಸಿಕ್ಕ ಅವಕಾಶವನ್ನೇ ಬಳಸಿಕೊಂಡು ತಾನೋರ್ವ ಪ್ರತಿಭಾವಂತ ನಟ ಅನ್ನೋದನ್ನು ಪ್ರೂವ್ ಮಾಡಿಕೊಂಡಿದ್ದ ಕುಶನ್ ಅದರ ನಡುವೆಯೇ ಕೆಲ ರ್ಯಾಪ್ ಸಾಂಗ್‍ಗಳನ್ನೂ ರೂಪಿಸಿದ್ದರಂತೆ. ಅದರಲ್ಲಿಯೂ ಒಂದು ಮಟ್ಟದ ಯಶ ಕಂಡ ಅವರಲ್ಲಿ ನಿರ್ದೇಶಕನಾಗೋ ಆಸೆ ಚಿಗುರಿಕೊಂಡಿತ್ತು. ಕಡೆಗೂ ಮಧ್ಯರಾತ್ರಿ ಹೊಳೆದ ಚೆಂದದ ಕಥೆಯನ್ನು ಒಪ್ಪ ಓರಣ ಮಾಡಿ ನಾಕುಮುಖದ ಆಕಾರ ಕೊಟ್ಟಿದ್ದಾರೆ.

    ಈವರೆಗೂ ಹಲವಾರು ಕಷ್ಟದ ಹಾದಿಯನ್ನು ಕ್ರಮಿಸಿ ಗುರಿಯತ್ತ ಧಾವಿಸಿ ಬಂದಿರುವ ಕುಶನ್ ಗೌಡ ಪಾಲಿಗೆ ನಾಕುಮುಖ ಎಂಬುದು ಬದುಕಿನ ನಿರ್ಣಾಯಕ ಘಟ್ಟದಂಥಾ ಚಿತ್ರ. ಇದರ ಟ್ರೇಲರ್‍ಗೆ ಸಿಗುತ್ತಿರೋ ಅಭೂತಪೂರ್ವ ಮೆಚ್ಚುಗೆಗಳೇ ಗೆಲುವಿನ ಸೂಚನೆಯಂತೆಯೂ ಕಾಣಿಸುತ್ತಿದೆ. ಈ ಮೂಲಕವೇ ತಾನು ನಿರ್ದೇಶಕನಾಗಿಯೂ ನೆಲೆ ಕಂಡುಕೊಳ್ಳೋ ಭರವಸೆ ಕುಶನ್ ಗೌಡರಲ್ಲಿದೆ.