Tag: ಸ್ಯಾಕ್ಸೋಫೋನ್

  • ಖ್ಯಾತ ಸ್ಯಾಕ್ಸೋಫೋನ್ ವಾದಕ ಮಚ್ಚೇಂದ್ರನಾಥ್ ಜೋಗಿ ನಿಧನಕ್ಕೆ ಲಿಂಬಾವಳಿ ಸಂತಾಪ

    ಖ್ಯಾತ ಸ್ಯಾಕ್ಸೋಫೋನ್ ವಾದಕ ಮಚ್ಚೇಂದ್ರನಾಥ್ ಜೋಗಿ ನಿಧನಕ್ಕೆ ಲಿಂಬಾವಳಿ ಸಂತಾಪ

    ಬೆಂಗಳೂರು: ಖ್ಯಾತ ಸ್ಯಾಕ್ಸೋಫೋನ್ ವಾದಕ ಮಚ್ಚೇಂದ್ರನಾಥ್ ಜೋಗಿ ಅವರ ನಿಧನಕ್ಕೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

    ಕೊರೋನಾದಿಂದ ಇತ್ತೀಚೆಗೆ ವಿಧಿವಶರಾದ ಮಚ್ಚೇಂದ್ರನಾಥ್, ಸುಮಾರು ಮೂರು ದಶಕಗಳಿಂದ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಸ್ಯಾಕ್ಸೋಫೋನ್ ಕಲಾವಿದರಾಗಿದ್ದರು. ಅಂತಾರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೋನ್ ಕಲಾವಿದರಾಗಿದ್ದ ಅವರ ಇಡೀ ಕುಟುಂಬ ಸಂಗೀತ ಸೇವೆಯಲ್ಲಿ ತೊಡಗಿದೆ.

    ಮಚ್ಚೇಂದ್ರನಾಥ್ ಅವರಿಗೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾರತ್ನ ಪ್ರಶಸ್ತಿ, ಕಲಾಶ್ರೀ ರಾಜ್ಯ ಪ್ರಶಸ್ತಿ, ಕನ್ನಡ ರತ್ನ ರಾಜ್ಯ ಪ್ರಶಸ್ತಿ, ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ, ಬಸವ ಜ್ಯೋತಿ ಪ್ರಶಸ್ತಿ, ಅರ್ರ್ಯಭಟ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ದೇವರ ದಾಸಿಮಯ್ಯ ರಾಷ್ಟೀಯ ರತ್ನ ಪ್ರಶಸ್ತಿ, ಸೌರಭ ಪ್ರಶಸ್ತಿ, ಸಾಧನ ಪ್ರಶಸ್ತಿ, ಚೈತನ್ಯ ಶ್ರೀ ಪ್ರಶಸ್ತಿ, ಕರ್ನಾಟಕ ಪದ್ಮಶ್ರೀ ಪ್ರಶಸ್ತಿ ಮೊದಲಾದವು ಲಭಿಸಿದೆ. ಪುತ್ತೂರಿನ ಕಲ್ಲಾರೆಯಲ್ಲಿ ಜನಿಸಿದ್ದ ಮಚ್ಚೇಂದ್ರನಾಥ್, ತಂದೆ ಬಾಬು ಮತ್ತು ಸಹೋದರ ಹರಿಶ್ಚಂದ್ರ ಅವರಿಂದ ಸಂಗೀತಾಭ್ಯಾಸ ಮಾಡಿ ಹತ್ತೊಂಬತ್ತರ ಹರೆಯದಲ್ಲಿಯೇ ಸ್ಯಾಕ್ಸೋಫೋನ್ ಕಲಾವಿದರಾಗಿದ್ದರು. ಇದನ್ನೂ ಓದಿ: ದಕ್ಷಿಣ ಕನ್ನಡದ ಮೊದಲ ಆಕ್ಸಿಜನ್ ಉತ್ಪಾದನಾ ಘಟಕ ಬಂಟ್ವಾಳದಲ್ಲಿ ಉದ್ಘಾಟನೆ

    ಇವರ ಪತ್ನಿ ಸುಶೀಲ ಸ್ವತಃ ಸಂಗೀತ ಕಲಾವಿದೆಯಾಗಿದ್ದು ಅವರು ಕೂಡಾ ಕೊರೋನಾಗೆ ಬಲಿಯಾಗಿದ್ದರು. ಇವರ ಮಕ್ಕಳು ಸಹ ಸಂಗೀತ ಸಾಧಕರಾಗಿದ್ದರು. ತಂದೆ ಮತ್ತು ತಾಯಿ ಇಬ್ಬರನ್ನು ನಾಲ್ಕು ದಿನಗಳ ಅಂತರದಲ್ಲಿ ಕಳೆದುಕೊಂಡಿರುವುದು ನಿಜಕ್ಕೂ ದುರದೃಷ್ಟಕರ. ಅವರಿಗೆ ಈ ಆಘಾತವನ್ನು ತಡೆದುಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

  • ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಇನ್ನಿಲ್ಲ

    ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಇನ್ನಿಲ್ಲ

    ಮಂಗಳೂರು: ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್(70) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನಲ್ಲಿ ಎಜೆ ಆಸ್ಪತ್ರೆಯಲ್ಲಿ ನಿಧನರಾದರು.

    1949ರ ಡಿಸೆಂಬರ್ 11ರಂದು ಜನಿಸಿದ ಗೋಪಾಲನಾಥ್ ಅವರು ಸ್ಯಾಕ್ಸೋಫೋನ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಳವಡಿಕೆಯಿಂದ ಅವರು ವಿಶ್ವಪ್ರಸಿದ್ಧಿ ಪಡೆದಿದ್ದರು.

    ಕದ್ರಿ ಗೋಪಾಲನಾಥ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ಬೆಳಗ್ಗಿನ ಜಾವ 4 ಗಂಟೆಗೆ ಗೋಪಾಲನಾಥ್ ಎಜೆ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು. ಮೂಲತಃ ಮಂಗಳೂರಿನವರಾಗಿರುವ ಗೋಪಾಲನಾಥ್ ಅವರು ಚೆನ್ನೈನಲ್ಲಿ ಮನೆ ಮಾಡಿಕೊಂಡಿದ್ದರು. ಕದ್ರಿ ಗೋಪಾಲನಾಥ್ ಅವರು ತಮ್ಮ ಮೂವರು ಮಕ್ಕಳನ್ನು ಅಗಲಿದ್ದಾರೆ.

    ಬಾಲ್ಯದಿಂದಲೇ ತಂದೆಯವರಿಂದ ಪಾಠವನ್ನು ಕಲಿತ ಕದ್ರಿ ಗೋಪಾಲನಾಥರು ನಂತರ ಕಲಾನಿಕೇತನದ ಎನ್. ಗೋಪಾಲಕೃಷ್ಣ ಅಯ್ಯರ್ ಅವರಿಂದ ಸ್ಯಾಕ್ಸೋಫೋನ್ ವಾದ್ಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ನುಡಿಸುವುದನ್ನು ಕಲಿತರು.

    ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರಕಾರದ ಕಲೈಮಾಮಣಿ, ಕರ್ನಾಟಕ ಕಲಾಶ್ರೀ, ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ, ಮಂತ್ರಾಲಯ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಠಿ ಆಸ್ಥಾನ ವಿದ್ವಾನ್, ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಮುಂತಾದ ಅನೇಕ ಪ್ರಶಸ್ತಿ ಗೌರವಗಳನ್ನು ಪಡೆದಿದ್ದರು.

    ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫೋನ್ ವಾದಗಳಿಗೆ ಮನಸೋಲದವರಿಲ್ಲ. ಅದರಲ್ಲೂ ಪ್ರವೀಣ್ ಗೋಡ್ಖಿಂಡಿ ಅವರ ಜೊತೆಗಿನ ಜುಗಲ್‍ಬಂದಿ ಅಲ್ಬಂ ರಾಗ್ ರಂಗ್ 1998ರಲ್ಲಿ ಬಿಡುಗಡೆ ಆಯಿತು. ಈ ರಾಗ್ ರಂಗ್ ಈಗಲೂ ಭಾರೀ ಪ್ರಸಿದ್ಧಿ ಪಡೆದಿದ್ದು ಬಹುತೇಕ ಶುಭ ಸಮಾರಂಭ, ಕಾರ್ಯಕ್ರಮದ ಉದ್ಘಾಟನೆಯ ಸಮಯದಲ್ಲಿ ಈ ರಾಗ್ ರಂಗ್ ಪ್ಲೇ ಆಗುತ್ತದೆ.

    ಈ ಹಿಂದೆ ಚೆನ್ನೈನ ನಾರದ ಗಾನಸಭಾದಲ್ಲಿ 400 ಮಂದಿ ಕಲಾವಿದರೊಡನೆ ನಡೆಸಿಕೊಟ್ಟ ಕಾರ್ಯಕ್ರಮದಿಂದ ಬಂದ ಲಕ್ಷಾಂತರ ಹಣವನ್ನು ಕಾರ್ಗಿಲ್ ಯುದ್ಧ ನಿಧಿಗಾಗಿ ಗೋಪಾಲನಾಥರು ಸಮರ್ಪಿಸಿದ್ದರು.