Tag: ಸ್ಪಿನ್ನರ್

  • ರಣಜಿ ಕ್ರಿಕೆಟ್‍ನ ದಿಗ್ಗಜ, ಶ್ರೇಷ್ಠ ಸ್ಪಿನ್ನರ್ ರಾಜಿಂದರ್ ಗೋಯೆಲ್ ಇನ್ನಿಲ್ಲ

    ರಣಜಿ ಕ್ರಿಕೆಟ್‍ನ ದಿಗ್ಗಜ, ಶ್ರೇಷ್ಠ ಸ್ಪಿನ್ನರ್ ರಾಜಿಂದರ್ ಗೋಯೆಲ್ ಇನ್ನಿಲ್ಲ

    ಕೋಲ್ಕತ್ತಾ: ರಣಜಿ ಕ್ರಿಕೆಟ್‍ನ ದಿಗ್ಗಜ, ಶ್ರೇಷ್ಠ ಸ್ಪಿನ್ನರ್ ಖ್ಯಾತಿಯ ರಾಜಿಂದರ್ ಗೋಯೆಲ್ (77) ಭಾನುವಾರ ರಾತ್ರಿ ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

    ರಾಜಿಂದರ್ ಗೋಯೆಲ್ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರೂ ಟೀಂ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿರಲಿಲ್ಲ. ರಣಜಿ ಟ್ರೋಫಿ ಇತಿಹಾಸದಲ್ಲಿ ಅತ್ಯಧಿಕ 637 ವಿಕೆಟ್ ಕಬಳಿಸಿದ ಬೌಲರ್ ಎಂಬ ದಾಖಲೆ ಈಗಲೂ ರಾಜಿಂದರ್ ಗೋಯೆಲ್ ಅವರ ಹೆಸರಿನಲ್ಲಿದೆ.

    ಮಾಜಿ ಕ್ರಿಕೆಟರ್ ರಾಜಿಂದರ್ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರು ಪತ್ನಿ ಮತ್ತು ಪುತ್ರ, ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಹಾಗೂ ಹಾಲಿ ದೇಶೀಯ ಮ್ಯಾಚ್ ರೆಫ್ರಿ ನಿತಿನ್ ಗೋಯೆಲ್ ಅವರನ್ನು ಅಗಲಿದ್ದಾರೆ. ರಾಜಿಂದರ್ ಗೋಯೆಲ್ ಅವರ ನಿಧನಕ್ಕೆ ಬಿಸಿಸಿಐ, ಟೀಂ ಇಂಡಿಯಾ ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್, ವೀರೆಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

    44ನೇ ವಯಸ್ಸಿನವರೆಗೂ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದ ರಾಜಿಂದರ್ ಗೋಯೆಲ್ ಅವರು ಹರಿಯಾಣ, ಪಂಜಾಬ್, ದೆಹಲಿ ತಂಡಗಳನ್ನು ಪ್ರತಿನಿಧಿಸಿದ್ದರು. ಒಟ್ಟು 157 ಪ್ರಥಮ ದರ್ಜೆ ಪಂದ್ಯಗಳಲ್ಲಿ 750 ವಿಕೆಟ್ ಕಬಳಿಸಿದ್ದಾರೆ. ಜೊತೆಗೆ 18.58ರ ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದರು. ಅಷ್ಟೇ ಅಲ್ಲದೆ ಗೋಯೆಲ್ ಅವರು ತಮ್ಮ ವೃತ್ತಿ ಜೀವನದಲ್ಲಿ ಗೋಯೆಲ್ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್‍ಗಳನ್ನು 59 ಬಾರಿ ಮತ್ತು 10 ವಿಕೆಟ್‍ಗಳನ್ನು 18 ಬಾರಿ ಪಡೆದುಕೊಂಡಿದ್ದಾರೆ.

  • ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ

    ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ

    – ಹಿಂದೂ ಆಟಗಾರನಾಗಿ ಪಾಕ್ ತಂಡದಲ್ಲಿ ಬಚಾವ್ ಆಗೋದು ಅತ್ಯಂತ ಕಷ್ಟ

    ಇಸ್ಲಾಮಾಬಾದ್: ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಶಹೀದ್ ಅಫ್ರಿದಿ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಗಂಭೀರ ಆರೋಪ ಮಾಡಿದ್ದಾರೆ.

    ಪಾಕ್ ತಂಡದ ಪರ ಆಡಿದ ಎರಡನೇ ಹಿಂದೂ ಆಟಗಾರ ದಾನಿಶ್ ಕರೇನಿಯಾ ಆಗಿದ್ದಾರೆ. ದಾನಿಶ್ ಅವರಿಗೂ ಮುನ್ನ ಅವರ ಸಹೋದರ ಸಂಬಂಧಿ ಅನಿಲ್ ದಲಪತ್ ಆಡಿದ್ದರು. ದಲಪತ್ ಪಾಕ್ ತಂಡದಲ್ಲಿ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಆಗಿದ್ದರು. ದಾನಿಶ್ ವೃತ್ತಿಜೀವನದ ಕೆಲವು ಕಹಿ ಘಟನೆಗಳನ್ನು ಹಂಚಿಕೊಂಡಿದ್ದು, ಅಫ್ರಿದಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಮಾಧ್ಯಮವೊಂದರ ಜೊತೆಗೆ ಮಾತನಾಡಿದ 39 ವರ್ಷದ ದಾನಿಶ್, “ಧರ್ಮದ ಹೊರತಾಗಿ ಅಫ್ರಿದಿ ಅವರ ತಾರಮ್ಯದ ಹಿಂದಿನ ಕಾರಣ ತಿಳಿಯಲು ಕಷ್ಟವಾಗುತ್ತಿತ್ತು. ದೇಶಿಯ ಕ್ರಿಕೆಟ್ ಅಥವಾ ಏಕದಿನ ಕ್ರಿಕೆಟ್ ಆಡುವಾಗ ಅಫ್ರಿದಿ ಯಾವಾಗಲೂ ನನ್ನ ವಿರುದ್ಧವೇ ಇರುತ್ತಿದ್ದರು. ಒಬ್ಬ ವ್ಯಕ್ತಿ ನಿಮ್ಮ ವಿರುದ್ಧ ದ್ವೇಷ ಸಾಧಿಸುತ್ತಿದ್ದರೆ ಅದು ಧರ್ಮವನ್ನು ಬಿಟ್ಟು ಬೇರೆ ಏನೂ ಇರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

    “ಹಿಂದೂ ಆಟಗಾರನಾಗಿ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಬಚಾವ್ ಆಗುವುದು ಅತ್ಯಂತ ಕಷ್ಟ. ಹಿಂದೂ ಧರ್ಮದವರಾಗಿದ್ದರಿಂದ ನನ್ನನ್ನು ತಂಡದಲ್ಲಿ ಅತ್ಯಂತ ಹೀನಾಯವಾಗಿ ನೋಡಲಾಗಿತ್ತು. ನಾನು ಹಿಂದೂ ಧರ್ಮದವನಾಗಿದ್ದರಿಂದ ಅಫ್ರಿದಿ ಯಾವಾಗಲೂ ನನ್ನ ವಿರುದ್ಧ ಕಿಡಿಕಾರುತ್ತಿದ್ದ. ಅಂತಹ ಸನ್ನವೇಶದಲ್ಲಿ ನನ್ನ ಸ್ಥಿತಿ ಅತ್ಯಂತ ಕೆಟ್ಟದಾಗಿತ್ತು” ಎಂದು ದಾನಿಶ್ ಕನೇರಿಯಾ ತಿಳಿಸಿದರು.

    ಅಫ್ರಿದಿಯಿಂದಾಗಿಯೇ ನಾನು ವೃತ್ತಿ ಜೀವನದಲ್ಲಿ ಕೇವಲ 18 ಏಕದಿನ ಪಂದ್ಯಗಳನ್ನು ಆಡಿದೆ. ಇಲ್ಲವಾದಲ್ಲಿ ಹೆಚ್ಚಿನ ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸುತ್ತಿದ್ದೆ. ಏಕದಿನ ಕ್ರಿಕೆಟ್‍ನಲ್ಲಿ ಶಾಹೀದ್ ಅಫ್ರಿದಿ ಬೇರೆ ಸ್ಪಿನ್ನರ್‍ಗಳಿಗೆ ನೀಡಿದ ಪ್ರೋತ್ಸಾಹ ಹಾಗೂ ಸಹಕಾರ ನನಗೆ ನೀಡಲಿಲ್ಲ. ಆದರೂ ಪಾಕಿಸ್ತಾನ 10 ವರ್ಷಗಳ ಕಾಲ ಆಡಿದ್ದೇನೆಂಬ ಸಂತೋಷ ಹಾಗೂ ಗೌರವ ಇದೆ” ಎಂದು ನೆನೆದರು.

    “ಆಡುವ ಇಲೆವೆನ್‍ನಲ್ಲಿ ಇಬ್ಬರು ಸ್ಪಿನ್ನರ್ ಗಳು ಇರುತ್ತಾರೆ. ಆದರೆ ನನ್ನ ಫಿಲ್ಡಿಂಗ್ ಉತ್ತಮವಾಗಿಲ್ಲ ಎಂದು ಹೇಳಲಾಗುತ್ತಿತ್ತು. ಆಗ ತಂಡದಲ್ಲಿ ಯಾರು ಹೇಳಿಕೊಳ್ಳುವ ಮಟ್ಟಿಗೆ ಉತ್ತಮ ಫಿಲ್ಡರ್ ಗಳಾಗಿರಲಿಲ್ಲ. ಅಷ್ಟೇ ಅಲ್ಲದೆ ಆಗ ಪಾಕ್ ತಂಡ ಅಷ್ಟೇನು ಹೆಸರು ಮಾಡಿರಲಿಲ್ಲ. ಮೋಯಿನ್ ಖಾನ್, ರಶೀದ್ ಲತೀಫ್, ಇಂಜಾಮಾಮ್ ಉಲ್ ಹಕ್ ಹಾಗೂ ಯೂನಿಸ್ ಖಾನ್ ಅವರ ನಾಯಕತ್ವದಲ್ಲಿ ಆಡಿದ್ದೇನೆ. ಅಫ್ರಿದಿ ನಾಯಕತ್ವದಲ್ಲಿ ಅತ್ಯಂತ ಕಡಿಮೆ ಪಂದ್ಯಗಳನ್ನಾಡಿದ್ದೇನೆ. ಇಂಜಾಮಾಮ್ ಹಾಗೂ ಯೂನಿಸ್ ಭಾಯ್ ನನಗೆ ಸಾಕಷ್ಟು ಸಹಕಾರ, ಪ್ರೋತ್ಸಾಹ ನೀಡಿದ್ದರು” ಎಂದು ತಿಳಿಸಿದರು.

  • ವಿರಾಟ್ ಅಲ್ಲ ‘ಮಿಸ್ಟರ್ 360’ ಇಂಗ್ಲೆಂಡ್ ಸ್ಪಿನ್ನರ್‌ನ ನೆಚ್ಚಿನ ವಿಕೆಟ್

    ವಿರಾಟ್ ಅಲ್ಲ ‘ಮಿಸ್ಟರ್ 360’ ಇಂಗ್ಲೆಂಡ್ ಸ್ಪಿನ್ನರ್‌ನ ನೆಚ್ಚಿನ ವಿಕೆಟ್

    ಲಂಡನ್: ಇಂಗ್ಲೆಂಡ್‍ನ ಎಡಗೈ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಅವರ ನೆಚ್ಚಿನ ವಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಲ್ವಂತೆ. ‘ಮಿಸ್ಟರ್ 360’ ಖ್ಯಾತಿಯ ಕೆ.ಎಲ್.ರಾಹುಲ್ ಅವರು ರಶೀದ್ ನೆಚ್ಚಿನ ವಿಕೆಟ್ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ರಿವೀಲ್ ಮಾಡಿದೆ.

    2018ರಲ್ಲಿ ವಿರಾಟ್ ಕೊಹ್ಲಿ ಅವರಿಗೆ ಸ್ಪಿನ್ನರ್ ಆದಿಲ್ ರಶೀದ್ ನೀಡಿದ ಅದ್ಭುತ ಎಸೆತ ಹಾಗೂ ವಿಕೆಟ್ ಕಿತ್ತ ವಿಡಿಯೋವನ್ನು ಕೆಲವು ದಿನಗಳ ಹಿಂದೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿತ್ತು. ಅದೊಂದು ಅದ್ಭುತ ಎಸೆತವಾಗಿತ್ತು. ಆದಾಗ್ಯೂ ಇಂಗ್ಲಿಷ್ ಸ್ಪಿನ್ನರ್ ರಶೀದ್ ಅವರ ನೆಚ್ಚಿನ ಎಸೆತ ಹಾಗೂ ವಿಕೆಟ್ ಭಾರತೀಯ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಎಂದು ಹೇಳಿದೆ.

    ಭಾರತವು 2018ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಈ ವೇಳೆ ನಡೆದ ಟೆಸ್ಟ್ ಪಂದ್ಯದಲ್ಲಿ ಆದಿಲ್ ರಶೀದ್ ಅವರು ಅದ್ಭುತವಾಗಿ ಕೆ.ಎಲ್.ರಾಹುಲ್ ಅವರ ವಿಕೆಟ್ ಪಡೆದಿದ್ದರು. ಈ ವಿಡಿಯೋವನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಶನಿವಾರ ಟ್ವೀಟ್ ಮಾಡಿದೆ.

    ಆದಿಲ್ ರಶೀದ್ ಎಸೆದ ಬಾಲ್ ಪ್ಯಾಚ್ ರೀತಿಯಲ್ಲಿ ಲೆಗ್ ಸೈಡ್‍ಗೆ ಬಿದ್ದು ಸ್ಪಿನ್ ಆಗಿ ವಿಕೆಟ್‍ಗೆ ಬಿದ್ದಿತ್ತು. ಪರಿಣಾಮ 150 ರನ್ ಪೂರೈಸಲು ಜಸ್ಟ್ 1 ರನ್ ಬೇಕಿದ್ದಾಗಲೇ ರಾಹುಲ್ ವಿಕೆಟ್ ಕಳೆದುಕೊಂಡಿದ್ದರು.

    ಈ ಪಂದ್ಯವು ಟೆಸ್ಟ್ ಸರಣಿಯ 5ನೇ ಪಂದ್ಯವಾಗಿತ್ತು. 223 ಎಸೆತಗಳಲ್ಲಿ 149 ರನ್ ಗಳಿಸಿದ್ದ ರಾಹುಲ್ ಉತ್ತಮವಾಗಿ ಆಡುತ್ತಿದ್ದರು. ಜೊತೆಗೆ ಅಂದಿನ ಅಂತಿಮ ಓವರ್ ವರೆಗೂ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಆದರೆ ರಶೀದ್ ಅವರ ಮಾಂತ್ರಿಕ ಎಸೆತದಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಕೈಚೆಲ್ಲಿಕೊಂಡಿದ್ದರು. ಈ ಪಂದ್ಯದಲ್ಲಿ ಭಾರತದ ಇಂಗ್ಲೆಂಡ್ ವಿರುದ್ಧ 118 ರನ್‍ಗಳಿಂದ ಸೋಲು ಕಂಡಿತ್ತು. ಅಷ್ಟೇ ಅಲ್ಲದೆ ಟೀಂ ಇಂಡಿಯಾ ಸರಣಿಯನ್ನು 4-1 ಅಂತರದಿಂದ ಸೋತಿತ್ತು.

  • ಧೋನಿಯ ಸರಳತೆಯನ್ನು ಹೊಗಳಿದ ಚಹಲ್

    ಧೋನಿಯ ಸರಳತೆಯನ್ನು ಹೊಗಳಿದ ಚಹಲ್

    ಮುಂಬೈ: ಸಂದರ್ಶನವೊಂದರಲ್ಲಿ ಸ್ಪಿನ್ನರ್ ಯಜುವೇಂದ್ರ ಚಹಲ್ ಧೋನಿಯವರ ಸರಳತೆಯನ್ನು ಕುರಿತು ಹಾಡಿ ಹೊಗಳಿದ್ದಾರೆ. ನಟ ಗೌರವ್ ಕಪೂರ್ ನಡೆಸಿಕೊಡುವ “ಬ್ರೇಕ್‍ಫಾಸ್ಟ್ ವಿತ್ ಚಾಂಪಿಯನ್ಸ್” ಸಂದರ್ಶನದಲ್ಲಿ ಮಾತನಾಡುವಾಗ ಧೋನಿಯವರ ಕುರಿತು ಕೆಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ.

    ನನ್ನ ಜೀವನದ ಮರೆಯಲಾಗದ ಘಟನೆಯಂದರೆ ಕ್ರಿಕೆಟ್ ದಿಗ್ಗಜ ಧೋನಿಯವರಿಂದ ಏಕದಿನ ಪಂದ್ಯಕ್ಕೆ ಕ್ಯಾಪ್ ಪಡೆದಿದ್ದು, ನನ್ನ ಮೊದಲ ಏಕದಿನ ಪಂದ್ಯವನ್ನು ಇಂತಹ ದಿಗ್ಗಜ ಆಟಗಾರನೊಂದಿಗೆ ಆಟವಾಡಿದ್ದು ನನಗೆ ಹೆಮ್ಮೆ ಅನಿಸುತ್ತದೆ ಎಂದು ಹೇಳಿದರು.

    ಅಂದು ನನಗೆ ಧೋನಿಯವರ ಎದುರು ನಿಂತು ಮಾತನಾಡುವ ಅರ್ಹತೆ ಇರಲಿಲ್ಲ, ಆದರೆ ಅವರು ನನ್ನ ಜೊತೆ ಆತ್ಮೀಯವಾಗಿ ಮಾತನಾಡಿದ್ದರು. ಪಂದ್ಯದಲ್ಲಿ ಮೊದಲು ಅವರನ್ನು ಕಂಡಾಗ ನಾನು `ಸರ್’ ಎಂದು ಕರೆಯುತ್ತಿದ್ದೆ. ಪಂದ್ಯದ 2ನೇ ಓವರ್ ಮುಗಿದ ಬಳಿಕ ಅವರು ನನ್ನನ್ನು ಕರೆದು, ನನಗೆ ಸರ್ ಅಂತ ಕರೆಯಬೇಡ ಎಂದರು. ಸರ್ ಬದಲು ಮಾಹಿ, ಧೋನಿ, ಮಹೇಂದ್ರ ಸಿಂಗ್ ಧೋನಿ ಅಥವಾ ಭಾಯಿ ಅಂತ ನಿನಗೆ ಇಷ್ಟ ಆಗುತ್ತದೋ ಹಾಗೆ ಕರೆದು ಬಿಡು ಎಂದು ಹೇಳಿದ್ದರು. ಇದು ನನಗೆ ಅವರ ಮೇಲಿನ ಗೌರವ ಹೆಚ್ಚಾಗುವಂತೆ ಮಾಡಿತ್ತು ಎಂದು ಚಹಲ್ ತಿಳಿಸಿದರು.

    ಧೋನಿಯವರ ಈ ಸರಳತೆಯು ನನಗೆ ಸ್ಫೂರ್ತಿ ನೀಡಿತು, ಯಾವುದೇ ಆಟಗಾರರನ್ನು ಸಮಾನವಾಗಿ ನೋಡುವುದು ಧೋನಿ ಮಾತ್ರವೇ ಆದ್ದರಿಂದಲೇ ನಾನು ಅವರನ್ನು ಭಾಯಿ ಎಂದೇ ಕರೆಯುತ್ತೇನೆ ಎಂದರು. ಅಷ್ಟೇ ಅಲ್ಲದೇ ತಮ್ಮ ಎಲ್ಲಾ ಸಾಧನೆಗಳನ್ನು ಧೋನಿಯವರಿಗೆ ಅರ್ಪಿಸುತ್ತೇನೆ ಎಂದು ಈ ವೇಳೆ ಹೇಳಿದರು.

    27 ವರ್ಷದ ಯಜುವೇಂದ್ರ ಚಹಲ್, ಇಂದು ಭಾರತ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಇವರು ಕಳೆದ 12 ತಿಂಗಳಿಂದ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. 2016ರಲ್ಲಿ ನಡೆದ ಜಿಂಬಾಬೆ ವಿರುದ್ಧ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದರು. ಚಹಲ್ ಲೆಗ್-ಸ್ಪಿನ್ನರ್ ಆಗಿದ್ದು, ಕಳೆದ ಒಂದು ವರ್ಷದಲ್ಲಿ ಹಲವು ವಿಕೆಟ್‍ಗಳನ್ನು ಪಡೆದು ಸೈ ಎನಿಸಿಕೊಂಡಿದ್ದಾರೆ. ಇವರ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ತಂಡ ತವರು ನೆಲದಲ್ಲಿಯೇ ತತ್ತರಿಸಿ ಹೋಗಿತ್ತು. ಶ್ರೀಲಂಕಾ ವಿರುದ್ದ ಉತ್ತಮ ಪ್ರದರ್ಶನ ನೀಡಿ, ಏಕದಿನ ಮತ್ತು ಟಿ-20ಗಳಲ್ಲಿ ಉತ್ತಮ ಸ್ಥಿರತೆ ಹೊಂದಿದ್ದರು.

    ಜಿಂಬಾಬ್ವೆ ಪ್ರವಾಸದ ಆಯ್ಕೆ ಸಂದರ್ಭದಲ್ಲಿ, ತಂಡದ ಪ್ರಮುಖ ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್‍ರವರು ಸತತ ಟೆಸ್ಟ್ ಪಂದ್ಯಗಳನ್ನಾಡಿ ವಿಶ್ರಾಂತಿ ಪಡೆದಿದ್ದರು. ಇವರ ಅನುಪಸ್ಥಿತಿಯಲ್ಲಿ ತಂಡಕ್ಕೆ ಭಾರೀ ನಷ್ಟವುಂಟಾಗಿತ್ತು. ಈ ಸಮಯದಲ್ಲಿ ಆಯ್ಕೆಗಾರರು ಎರಡನೇ ತಂಡದಲ್ಲಿದ್ದ ಹಲವು ಸದಸ್ಯರಲ್ಲಿ ಚಹಲ್‍ರನ್ನು ಆಯ್ಕೆಮಾಡಿದ್ದರು. ಚಹಲ್ ಆಯ್ಕೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಪ್ರಮುಖ ಪಾತ್ರವಹಿಸಿದ್ದರು.

  • ಮೊನ್ನೆ ಮದುವೆ, ನಿನ್ನೆ ಟೀಂ ಇಂಡಿಯಾ ಬೆಚ್ಚಿ ಬೀಳಿಸಿದ ಸ್ಪಿನ್ನರ್!

    ಮೊನ್ನೆ ಮದುವೆ, ನಿನ್ನೆ ಟೀಂ ಇಂಡಿಯಾ ಬೆಚ್ಚಿ ಬೀಳಿಸಿದ ಸ್ಪಿನ್ನರ್!

    – ಮದುವೆಯಾದ 24 ಗಂಟೆಯಲ್ಲೇ ತಂಡಕ್ಕೆ ವಾಪಾಸಾದ ಧನಂಜಯ
    – ಟೀಂ ಇಂಡಿಯಾದ 6 ವಿಕೆಟ್ ಪಡೆದು ಮ್ಯಾನ್ ಆಫ್ ದಿ ಮ್ಯಾಚ್

    ಬೆಂಗಳೂರು: ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಒಂದು ಹಂತದಲ್ಲಿ ಟೀಂ ಇಂಡಿಯಾವನ್ನು ಸೋಲಿನ ದವಡೆಯಲ್ಲಿತ್ತು. ಆದರೆ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಹಾಗೂ ಭುವನೇಶ್ವರ್ ಕುಮಾರ್ ಉತ್ತಮ ಆಟವಾಡಿ ಭಾರತವನ್ನು ಗೆಲ್ಲಿಸಿದರು.

    ಆದರೆ ಭಾರತದ 6 ವಿಕೆಟ್ ಕಿತ್ತ ಶ್ರೀಲಂಕಾದ ಸ್ಪಿನ್ನರ್ ಅಕಿಲ ಧನಂಜಯ. ಮದುವೆಯಾಗಿ ಕೇವಲ 24 ಗಂಟೆ ಮುಗಿಯುವಷ್ಟರಲ್ಲಿ ತಂಡವನ್ನು ಸೇರಿ ಭಾರತವನ್ನು ಬೆಚ್ಚಿ ಬೀಳಿಸಿದ್ದು ಮಾತ್ರ ಸುಳ್ಳಲ್ಲ. ಕೊಲಂಬೋದ ರಾಮಾದಿಯಾ ರನಮಲ್ ಹಾಲಿಡೇ ರೆಸಾರ್ಟ್ ನಲ್ಲಿ ಆಗಸ್ಟ್ 23ರಂದು 23 ವರ್ಷದ ಅಕಿಲ ಧನಂಜಯ್ ವಿವಾಹ ಗರ್ಲ್ ಫ್ರೆಂಡ್ ನತಾಲಿ ತೆಕ್ಶಿನಿ ಜೊತೆ ನೆರವೇರಿತ್ತು. ಆಗಸ್ಟ್ 23ರಂದು ರಾತ್ರಿಯೇ ಧನಂಜಯ ಭಾರತ ವಿರುದ್ಧ ಪಂದ್ಯವನ್ನಾಡಲು ಶ್ರೀಲಂಕಾ ತಂಡ ಉಳಿದಿದ್ದ ಹೋಟೆಲ್ ಗೆ ಬಂದು ಸೇರಿಕೊಂಡಿದ್ದರು. ಧನಂಜಯ ಮದುವೆಯಲ್ಲಿ ಶ್ರೀಲಂಕಾದ ಹಿರಿಯ ಆಟಗಾರರಾದ ರಂಗನಾ ಹೀರತ್ ಮತ್ತು ಅಜಂತಾ ಮೆಂಡಿಸ್ ಕೂಡಾ ಪಾಲ್ಗೊಂಡಿದ್ದರು.

    ಪಂದ್ಯದಲ್ಲಿ ಧನಂಜಯ್ ಕಮಾಲ್: 10 ಓವರ್ ನಲ್ಲಿ 54 ರನ್ ನೀಡಿ 6 ವಿಕೆಟ್ ಗಳಿಸಿದ ಧನಂಜಯ ಆರಂಭದ 13 ಎಸೆತಗಳಲ್ಲೇ 5 ವಿಕೆಟ್ ಕಬಳಿಸಿದ್ದರು. ಅದರಲ್ಲೂ ಒಂದೇ ಓವರ್ ನಲ್ಲಿ 3 ವಿಕೆಟ್ ಪಡೆದರು.
    ರೋಹಿತ್ ಶರ್ಮಾ, ರಾಹುಲ್, ಕೇದಾರ್ ಜಾಧವ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಅವರನ್ನು ಔಟ್ ಮಾಡಿ ಭಾರತದ ಬ್ಯಾಟಿಂಗ್ ಪಡೆಯನ್ನು ಪೆವಿಲಿಯನ್ ಗೆ ಕಳಿಸಿದರು.

    ಅಕಿಲ ಧನಂಜಯ್ ಗೆ ಇದು 4ನೇ ಪಂದ್ಯವಾಗಿತ್ತು. ಇದಕ್ಕೂ ಮುನ್ನ ಆಡಿದ 3 ಪಂದ್ಯಗಳಲ್ಲಿ ಧನಂಜಯ ಒಟ್ಟು 5 ವಿಕೆಟ್ ಗಳಿಸಿದ್ದರು. ಐಪಿಎಲ್ ನಲ್ಲೂ ಧನಂಜಯ ಆಟವಾಡಿದ್ದಾರೆ. 2013ರಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.