Tag: ಸ್ಪರ್ಧೆ

  • ಕೊನೆಗೂ ದೇವೇಗೌಡರ ಸ್ಪರ್ಧೆ ಫಿಕ್ಸ್

    ಕೊನೆಗೂ ದೇವೇಗೌಡರ ಸ್ಪರ್ಧೆ ಫಿಕ್ಸ್

    ಬೆಂಗಳೂರು: ಮೊಮ್ಮಗನಿಗೆ ಹಾಸನ ಕ್ಷೇತ್ರ ಬಿಟ್ಟುಕೊಟ್ಟು ತಮ್ಮ ಸ್ಪರ್ಧೆಗೆ ಕ್ಷೇತ್ರ ಹುಡುಕಾಟದಲ್ಲಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಕೊನೆಗೂ ತುಮಕೂರಿನಿಂದ ಅಖಾಡಕ್ಕಿಳಿಯೋದು ಫಿಕ್ಸ್ ಆಗಿದ್ದು, ಈ ಕುರಿತು ದೇವೇಗೌಡರು ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

    ಎಲ್ಲವೂ ಅಂದುಕೊಂಡಂತೆ ಆದರೆ ಕಲ್ಪವೃಕ್ಷ ನಾಡಿನಿಂದಲೇ ಗೌಡರ ಕಣ ರೆಡಿಯಾಗಲಿದೆ. ಅಂದಹಾಗೆ ಎಲ್ಲಿಂದ ಸ್ಪರ್ಧೆ ಮಾಡಬೇಕು ಅಂತ ಗೊಂದಲದಲ್ಲಿದ್ದ ಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿತಾರೆ ಎನ್ನಲಾಗಿತ್ತು. ಆದರೆ ಬೆಂಗಳೂರು ಉತ್ತರಕ್ಕಿಂತ ತುಮಕೂರು ಸೇಫ್ ಅನ್ನಿಸಿದ ಕಾರಣಕ್ಕೆ ತುಮಕೂರಿನಿಂದ ಸ್ಪರ್ಧೆಗಿಳಿಯಲು ದೇವೇಗೌಡರು ಸಜ್ಜಾಗಿದ್ದಾರೆ. ಇಂದು ತುಮಕೂರು ಸ್ಪರ್ಧೆ ಬಗ್ಗೆ ದೇವೇಗೌಡರು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.

    ದೇವೇಗೌಡರು ಕಿರಿಯ ಮೊಮ್ಮಗ ನಿಖಿಲ್ ಕುಮಾರಸ್ವಾಮಿಗೆ ಮಂಡ್ಯ ಹಾಗೂ ಹಿರಿಯ ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಇತ್ತ ದೇವೇಗೌಡರು ಮೈಸೂರಿನಿಂದ ನಿಲ್ಲಬೇಕು ಎಂದು ಇಚ್ಛಿಸಿದ್ದರು. ಆದರೆ ಗೌಡರು ಮೈಸೂರು ಕೇಳಿದ್ದರೂ ಕಾಂಗ್ರೆಸ್ ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಬೆಂಗಳೂರು ಉತ್ತರ ಮತ್ತು ತುಮಕೂರು ಈ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗಿತ್ತು.

    ಈಗ ಬೆಂಗಳೂರಿಗಿಂತ ತುಮಕೂರು ಸೇಫ್ ಎಂದು ದೇವೇಗೌಡರು ನಿರ್ಧಾರ ಮಾಡಿದ್ದಾರೆ. ಯಾಕೆಂದರೆ ತುಮಕೂರಿನಲ್ಲಿ ಜೆಡಿಎಸ್‍ಗೆ ನೆಲೆ ಇದ್ದು, ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಜೊತೆಗೆ ಮೈತ್ರಿಪಕ್ಷದ ನಾಯಕರು ಕೂಡ ಗಣನೀಯ ಪ್ರಮಾಣದಲ್ಲಿ ಇದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಸುಲಭವಾಗಿ ಗೆಲ್ಲಬಹುದು ಎಂದುಕೊಂಡಿದ್ದಾರೆ. ಕೆಲವರು ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧೆ ಮಾಡಿದರೆ ಸೋಲಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ರಾಜ್ಯ ಮಟ್ಟದಲ್ಲಿ ದೋಸ್ತಿ ಸರ್ಕಾರದ ಮೂಲಕ ಗೆಲ್ಲಬಹುದು ಎಂಬುದು ದೇವೇಗೌಡರ ಲೆಕ್ಕಚಾರವಾಗಿದೆ.

  • ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಸಲಹೆ ಕೊಟ್ಟ ಮಾಜಿ ಸಿಎಂ

    ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಸಲಹೆ ಕೊಟ್ಟ ಮಾಜಿ ಸಿಎಂ

    ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಯಾವ ಕ್ಷೇತ್ರದಿಂದ ಸ್ಪರ್ಧಿಸ್ತಾರೆ ಎನ್ನುವುದು ಇನ್ನು ಕಗ್ಗಂಟಾಗೇ ಉಳಿದಿದೆ. ಖುದ್ದು ಗೌಡರೇ ಈ ವಿಚಾರದಲ್ಲಿ ಗೊಂದಲದಲ್ಲಿದ್ದು, ಯಾವ ಕ್ಷೇತ್ರದಿಂದ ಸ್ಪಧಿಸಿದರೆ ಉತ್ತಮ ಎನ್ನುವ ಚಿಂತೆ ಕಾಡುತ್ತಿದೆ ಎನ್ನಲಾಗುತ್ತಿದೆ.

    ಇದೀಗ ದೇವೇಗೌಡರ ಶಿಷ್ಯ ಎಂದೇ ಕರೆಸಿಕೊಳ್ಳುವ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಗುರುವಿಗೆ ಈ ವಿಚಾರವಾಗಿ ಟಿಪ್ಸ್ ನೀಡಿದ್ದಾರೆ. ನೀವು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದರೆ, ಗೆಲುವು ಸುಲಭವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

    ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್ ನ 5 ಜನ ಹಾಗೂ ಜೆಡಿಎಸ್ ನ ಇಬ್ಬರು ಶಾಸಕರಿದ್ದಾರೆ. ಹೀಗಾಗಿ ಎರಡು ಪಕ್ಷದವರು ಸೇರಿ ಒಟ್ಟಿಗೆ ಕೆಲಸ ಮಾಡಿದರೆ ಗೆಲ್ಲುವುದು ಗ್ಯಾರಂಟಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ ತುಮಕೂರಿನಲ್ಲೂ ನೀವು ಗೆಲ್ಲಬಹುದು ಆದರೆ ಅಲ್ಲಿ ಬೇರೊಬ್ಬ ಅಭ್ಯರ್ಥಿ ಹಾಕಿದರು ಗೆಲ್ತಾರೆ. ಆದರೆ ಬೆಂಗಳೂರು ಉತ್ತರದಲ್ಲಿ ಅಭ್ಯರ್ಥಿಗಳ ಕೊರತೆ ಇರುವುದರಿಂದ ನೀವು ಸ್ಪರ್ಧಿಸಿದರೆ ಉತ್ತಮ ಎಂದು ಸಿದ್ದರಾಮಯ್ಯ ದೇವೇಗೌಡರಿಗೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.

    ಸದ್ಯ ಈ ವಿಷಯದ ಬಗ್ಗೆ ದೇವೇಗೌಡರು ಸಹ ಯೋಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

  • ಮೊಮ್ಮಕ್ಕಳಿಗೆ ಕ್ಷೇತ್ರ ದಾನ ಮಾಡಿದ ದೇವೇಗೌಡ್ರಿಗೆ ಈಗ ಟೆನ್ಶನ್..!

    ಮೊಮ್ಮಕ್ಕಳಿಗೆ ಕ್ಷೇತ್ರ ದಾನ ಮಾಡಿದ ದೇವೇಗೌಡ್ರಿಗೆ ಈಗ ಟೆನ್ಶನ್..!

    ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಮೊಮ್ಮಕ್ಕಳಿಗೆ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ಮೊಮ್ಮಗನಿಗೆ ಕ್ಷೇತ್ರದಾನ ಮಾಡಿದ ದೇವೇಗೌಡರಿಗೆ ಈಗ ಟೆನ್ಶನ್ ಶುರುವಾಗಿದೆ.

    ದೇವೇಗೌಡರು ಕಿರಿಯ ಮೊಮ್ಮಗ ನಿಖಿಲ್ ಕುಮಾರಸ್ವಾಮಿಗೆ ಮಂಡ್ಯ ಹಾಗೂ ಹಿರಿಯ ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಇತ್ತ ದೇವೇಗೌಡರು ಮೈಸೂರಿನಿಂದ ನಿಲ್ಲಬೇಕು ಎಂದು ಇಚ್ಛಿಸಿದ್ದರು. ಆದರೆ ಗೌಡರು ಮೈಸೂರು ಕೇಳಿದ್ದರೂ ಕಾಂಗ್ರೆಸ್ ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಬೆಂಗಳೂರು ಉತ್ತರ ಮತ್ತು ತುಮಕೂರು ಈ ಎರಡು ಕ್ಷೇತ್ರದಲ್ಲಿ ಎಲ್ಲಿ ನಿಲ್ಲಬೇಕೆಂಬ ಬಗ್ಗೆ ಗೊಂದಲ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

    ಒಂದು ವೇಳೆ ದೇವೇಗೌಡರು ಬೆಂಗಳೂರು ಉತ್ತರದಲ್ಲಿ ನಿಂತರೆ ಗೆಲುವು ಅಷ್ಟೊಂದು ಸುಲಭವಾಗಿಲ್ಲ ಎಂಬ ಆತಂಕ ಎದುರಾಗಿದ್ದು, ಬೆಂಗಳೂರು ಉತ್ತರದಿಂದ ಸ್ಪರ್ಧೆ ಮಾಡಿದರೆ ಗೆಲುವು ಸಾಧ್ಯನಾ ಎಂದು ಗುಪ್ತಚರ ಇಲಾಖೆ ಮಾಹಿತಿ ಪಡೆಯಲು ಮಾಜಿ ಪ್ರಧಾನಿ ದೇವೇಗೌಡರು ಮುಂದಾಗಿದ್ದಾರೆ. ಅಲ್ಲಿಂದ `ಬೆಂಗಳೂರು ಉತ್ತರ ಸೇಫ್ ಸೀಟು’ ಎಂದು ಬಂದರೆ ಅಲ್ಲಿಯೇ ನಿಲ್ಲಬೇಕು ಎಂಬುದು ದೇವೇಗೌಡರ ಇಂಗಿತವಾಗಿದೆ. ಒಂದು ವೇಳೆ ಇದು ಸೇಫ್ ಅಲ್ಲ ಎಂದು ಬಂದರೆ, ಆಗ ಕಾಂಗ್ರೆಸ್ ಗೆದ್ದಿದ್ದ ತುಮಕೂರಿನಿಂದಲೇ ದೇವೇಗೌಡರ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

    ಬೆಂಗಳೂರು ಉತ್ತರದಿಂದ ದೇವೇಗೌಡರು ನಿಂತರೆ ಸದಾನಂದಗೌಡರ ವಿರುದ್ಧ ಸ್ಪರ್ಧೆ ಮಾಡಬೇಕಾಗುತ್ತದೆ. ತುಮಕೂರಿನಲ್ಲಿ ಹಾಲಿ ಸದಸ್ಯರು ಕಾಂಗ್ರೆಸ್ಸಿನವರ ವಿರುದ್ಧ ಸ್ಪರ್ಧೆ ಮಾಡಬೇಕಾಗುತ್ತದೆ. ಸದ್ಯಕ್ಕೆ ದೇವೇಗೌಡರು ಬೆಂಗಳೂರಿನಲ್ಲಿ ಜನರ ಅಭಿಪ್ರಾಯವನ್ನು ಗುಪ್ತಚರ ಇಲಾಖೆಯ ಮೂಲಕ ಮಾಹಿತಿ ಕಲೆಯಾಕುತ್ತಿದ್ದಾರೆ. ಇಲ್ಲಿ ನಿಂತು ಗೆಲ್ಲುವುದು ಕಠಿಣವಾಗುತ್ತದೆ ಎಂದರೆ ತುಮಕೂರಿನಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಇದುವರೆಗೂ ಜೆಡಿಎಸ್ ಈ ಎರಡು ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಯನ್ನು ಇನ್ನೂ ಘೋಷಣೆ ಮಾಡಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈ ಬಾರಿ ನಾನು ಚುನಾವಣೆಗೆ ನಿಲ್ಲಲ್ಲ: ದೇವೇಗೌಡ

    ಈ ಬಾರಿ ನಾನು ಚುನಾವಣೆಗೆ ನಿಲ್ಲಲ್ಲ: ದೇವೇಗೌಡ

    ಹಾಸನ: ನಾನು ಈ ಬಾರಿ ಹಾಸನದಲ್ಲಿ ಚುನಾವಣೆಗೆ ನಿಲ್ಲಲ್ಲ. ನಾನು ಸ್ಪರ್ಧೆ ಮಾಡಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಹೇಳಿದ್ದಾರೆ.

    ಹಾಸನದ ಹೊಳೆನರಸೀಪುರ ತಾ. ಮೂಡಲಹಿಪ್ಪೆಯಲ್ಲಿ ಕಾರ್ಯಕ್ರಮಕ್ಕೆ ದೇವೇಗೌಡರು ಆಗಮಿಸಿದರು. ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, “ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತೀರ್ಮಾನಿಸಿದ್ದೇನೆ. ಇನ್ನೂ 28 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್‍ಗೆ ಎಷ್ಟು ಹಾಗೂ ಜೆಡಿಎಸ್‍ಗೆ ಎಷ್ಟು ಎಂಬುದು ತೀರ್ಮಾನ ಆಗಿಲ್ಲ. ಅಂತಿಮವಾದ ಬಳಿಕ ಮಾರ್ಚ್ 15 ರಂದು ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.

    ಸದ್ಯ ರಾಹುಲ್ ಗಾಂಧಿ ಅವರು ಪ್ರಚಾರದಲ್ಲಿ ನಿರತಾಗಿದ್ದಾರೆ. ಕೇರಳ, ತಮಿಳುನಾಡು, ಒಡಿಸ್ಸಾದಲ್ಲಿ ಚುನಾವಣಾ ಪ್ರಚಾರದಲ್ಲಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ರಾಹುಲ್ ಗಾಂಧಿ ಜೊತೆ ಮತ್ತೊಮ್ಮೆ ಸಭೆ ಸೇರುತ್ತೇವೆ. ಶುಭ ಕಾರ್ಯಕ್ಕೂ ಮುನ್ನ ನಾವು ದೇವರ ದರ್ಶನ ಮಾಡುವುದು ವಾಡಿಕೆ. ರೇವಣ್ಣ ಅವರು ಯಾವಾಗಲೂ ದಿನಶುದ್ಧಿ ಬಗ್ಗೆ ಯೋಚನೆ ಮಾಡುತ್ತಾರೆ. ಇಂದು ಮೂಡಲಹಿಪ್ಪೆ ಗ್ರಾಮದಿಂದ ಪ್ರಚಾರವನ್ನು ಆರಂಭ ಮಾಡಿದ್ದೇನೆ ಎಂದು ದೇವೇಗೌಡರು ಹೇಳಿದರು.

    ಸದ್ಯ ದೇವೇಗೌಡರು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲವಾ ಅಥವಾ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲವೇ ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಿದ್ದಗಂಗಾ ಮಠದಲ್ಲಿ ಜಾನುವಾರು ಜಾತ್ರೆಯ ಸಂಭ್ರಮ

    ಸಿದ್ದಗಂಗಾ ಮಠದಲ್ಲಿ ಜಾನುವಾರು ಜಾತ್ರೆಯ ಸಂಭ್ರಮ

    ತುಮಕೂರು: ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾಗಿರುವ ಸಿದ್ದಗಂಗೆಯಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ.

    ಈಗಗಾಲೇ ಜಾನುವಾರುಗಳ ಜಾತ್ರೆ ನಡೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಯಿಂದ ರೈತರು ತಮ್ಮ ಜಾನುವಾರುಗಳೊಂದಿಗೆ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದಾರೆ. ವಿವಿಧ ತಳಿಯ ರಾಸುಗಳು ಇಲ್ಲಿಗೆ ಬಂದಿದ್ದು ರಾಸುಗಳ ಸ್ಪರ್ಧೆ ನಡೆಯುತ್ತಿದೆ.

    ರಾಸುಗಳ ಮೈಕಟ್ಟು, ಆರೋಗ್ಯ, ಸ್ವಚ್ಛತೆ ಇವೆಲ್ಲಾಗಳನ್ನು ಪರಿಗಣಿಸಿ ಬಹುಮಾನ ನೀಡಲಾಗುತ್ತದೆ. ಪಶು ವೈದ್ಯರು ಸ್ಥಳಕ್ಕೆ ಬಂದು ಸ್ಪರ್ಧೆಯಲ್ಲಿ ಇದ್ದ ಎಲ್ಲಾ ರಾಸುಗಳ ಪರೀಕ್ಷೆ ನಡೆಸುತ್ತಾರೆ. ಬಳಿಕ ಹೆಚ್ಚು ದಕ್ಷತೆ, ಆರೋಗ್ಯ ಪೂರ್ಣವಾದ ರಾಸುಗಳಿಗೆ ಆದ್ಯತೆ ಮೇರೆಗೆ ಆಯ್ಕೆ ಮಾಡುತ್ತಿದ್ದಾರೆ. ಹೀಗೆ ಆಯ್ಕೆಯಾದ ರಾಸುಗಳ ಜೋಡಿಗೆ ಮಠದ ವತಿಯಿಂದ ಬಹುಮಾನ ವಿತರಿಸಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ಕೊಟ್ಟ ಸುಮಲತಾ

    ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ಕೊಟ್ಟ ಸುಮಲತಾ

    ಮಂಡ್ಯ: ಸ್ಯಾಂಡಲ್ ವುಡ್ ನಟ ದಿ.ಅಂಬರೀಶ್ ಅವರು ಮೊದಲಿನಿಂದಲೂ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ನಾನು ಕೂಡ ಖಂಡಿತವಾಗಿಯೂ ಕಾಂಗ್ರೆಸ್ಸಿನಿಂದಲೇ ಸ್ಪರ್ಧಿಸಲು ಅಪೇಕ್ಷಿಸುತ್ತೇನೆ ಎಂದು ಸುಮಲತಾ ಅಂಬರೀಶ್ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

    ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಮಗ ಅಭಿಷೇಕ್ ಜೊತೆ ಭೇಟಿ ಕೊಟ್ಟ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಾಲಭೈರವೇಶ್ವರನ ದರ್ಶನ ಪಡೆದು ಸ್ವಾಮೀಜಿಯ ಆಶೀರ್ವಾದ ಪಡೆಯಬೇಕು ಎಂದು ಎರಡು ತಿಂಗಳಿಂದ ಅಂದುಕೊಂಡಿದ್ದೆವು. ಎಲ್ಲರೂ ರಾಜಕೀಯವಾಗಿ ಮೊದಲ ಹೆಜ್ಜೆ ಪಡೆಯಲು ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ ಎಂದು ನನಗೆ ಗೊತ್ತಿಲ್ಲ. ನೀವು ಹೇಳಿದ ಮೇಲೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

    ರಾಜಕೀಯ ಎಂಟ್ರಿ:
    ಅಂಬರೀಶ್ ಜೀವನದಲ್ಲಿ ಯಾರೇ ಗೆಲ್ಲಿಸಿದ್ದರೂ, ಸೋಲಿಸಿದ್ದರೂ ಅಭಿಮಾನಿಗಳು ಮಾತ್ರ ಯಾವತ್ತೂ ಅವರ ಜೊತೆಯಲ್ಲಿಯೇ ಇದ್ದರು. ಆ ಅಭಿಮಾನಿಗಳ ಪ್ರೀತಿ, ವಿಶ್ವಾಸ, ಆಸೆ ಏನಿದೆ ಅದನ್ನು ನೆರವೇರಿಸಬೇಕು ಎಂಬ ಆಸೆ ನನಗೂ ಇದೆ. ಯಾಕೆಂದರೆ ಅವರ ಪ್ರೀತಿಯನ್ನು ಬಿಟ್ಟುಕೊಡುವುದಕ್ಕೆ, ಕಳೆದುಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ಅವರ ಆಸೆ ಏನಿತ್ತು ಅದಕ್ಕೆ ಸೋಲಾಗಬಾರದು, ಗೆಲುವಾಗಬೇಕು ಎನ್ನುವ ಆಸೆ ನನಗಿದೆ. ಸದ್ಯಕ್ಕೆ ಈ ನಿರ್ಧಾರ ನನ್ನೊಬ್ಬಳ ಕೈಯಲ್ಲಿಲ್ಲ. ಎಲ್ಲರನ್ನೂ ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧರಿಸಬೇಕಿದೆ. ಅದಕ್ಕೂ ಕಾಲಕೂಡಿ ಬರಬೇಕು. ನಾನು ಯೋಚನೆ ಮಾಡಬೇಕು ಎಂದರು.

    ಅಂಬರೀಶ್ ಅವರು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದವರು ಎಂದೇ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ನಾನು ಕೂಡ ಖಂಡಿತವಾಗಿಯೂ ಕಾಂಗ್ರೆಸ್ಸನಿಂದಲೇ ಸ್ಪರ್ಧಿಸಲು ಅಪೇಕ್ಷಿಸುತ್ತೇನೆ. ಒಂದು ವೇಳೆ ಜೆಡಿಎಸ್ ಗೆ ಟಿಕೆಟ್ ಕೊಟ್ಟರೆ ಪಕ್ಷೇತರವಾಗಿ ನಿಲ್ಲಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಆದ್ದರಿಂದ ಅವರ ಆಸೆಯನ್ನು ನಾನು ಗೆಲ್ಲಿಸುತ್ತೇನೆ ಎಂದು ತಿಳಿಸಿದರು.

    ನಾನು ನೋವಿನಲ್ಲಿದ್ದ ಸಮಯದಲ್ಲಿ ಅವರು ನನಗೆ ಸ್ಪಂದಿಸಿದ್ದಾರೆ. ಈಗ ಅವರು ನನ್ನ ಕಡೆಗೆ ನೋಡಿ, ನೀವು ನಮ್ಮ ಜೊತೆ ಇರಬೇಕು ಎಂದು ಹೇಳುತ್ತಿದ್ದಾರೆ. ಅವರ ಆಸೆಗೆ ನಾನು ಸ್ಪಂದಿಸುತ್ತೇನೆ. ಸಮಯ ಬಂದಾಗ ನಾನೇ ಹೇಳುತ್ತೇನೆ. ಆದರೆ ನಾನಾಗಲಿ, ಅಭಿಷೇಕ್ ಆಗಲಿ ಜೀವನ ಪರ್ಯಂತ ಅಭಿಮಾನಿಗಳ ಜೊತೆಯೇ ಇರುತ್ತೇವೆ ಎಂದು ಹೇಳಿದರು. ಆದ್ರೆ ಮಂಡ್ಯ ಗೌಡ್ತಿ ಅಲ್ಲ ಎಂಬ ಹೇಳಿಕೆಯ ಬಗ್ಗೆ ಸುಮಲತಾ ಪ್ರತಿಕ್ರಿಯಿಸಲು ನಿರಾಕರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಮಲತಾ ಎಂದೂ ಕೂಡ ಮಂಡ್ಯದ ಗೌಡ್ತಿ ಅಲ್ಲ: ಕೆ.ಟಿ.ಶ್ರೀಕಂಠೇಗೌಡ

    ಸುಮಲತಾ ಎಂದೂ ಕೂಡ ಮಂಡ್ಯದ ಗೌಡ್ತಿ ಅಲ್ಲ: ಕೆ.ಟಿ.ಶ್ರೀಕಂಠೇಗೌಡ

    ಮಂಡ್ಯ: ನಟಿ ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿ ಜೆಡಿಎಸ್ ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ ನಟಿ ಸುಮಲತಾ ಎಂದೂ ಕೂಡ ಮಂಡ್ಯದ ಗೌಡ್ತಿ ಅಲ್ಲ, ಅವರ ಮೂಲ ಆಂಧ್ರಪ್ರದೇಶ ಎಂದು ವ್ಯಂಗ್ಯವಾಡಿದ್ದಾರೆ.

    ಸುಮಲತಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ, ಸುಮಲತಾ ಎಂದೂ ಕೂಡ ಮಂಡ್ಯದ ಗೌಡ್ತಿ ಅಲ್ಲ. ಮೂಲತಃ ಆಂಧ್ರದವರಾದ ಅವರು ಮಂಡ್ಯದಿಂದ ಹೇಗೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎನ್ನುವ ರೀತಿ ಪರೋಕ್ಷವಾಗಿ ಟೀಕಿಸಿದ್ದಾರೆ.

    ರೆಬೆಲ್ ಸ್ಟಾರ್ ಅಂಬರೀಶ್ ಅವರು ಬದುಕಿದ್ದಾಗ ರಾಜಕಾರಣ ನನಗೆ ಸಾಕು. ನನ್ನ ಮನೆಗೆ ರಾಜಕಾರಣ ಬೇಡ ಅಂತ ಸ್ಪಷ್ಟವಾಗಿ ಹೇಳಿದ್ದರು. ಈ ಹಿಂದೆ ಮಂಡ್ಯ ಕ್ಷೇತ್ರದಿಂದ ನಟಿ ರಮ್ಯಾರನ್ನು ಕಣಕ್ಕಿಳಿಸಿ ಅವರ ಕೆಲಸ ನೋಡಿ ಆಗಿದೆ. ಎಷ್ಟರ ಮಟ್ಟಕ್ಕೆ ನಮ್ಮ ಕೆಲಸ ಮಾಡಿಕೊಟ್ಟರು ಅಂತ ಗೊತ್ತು ಎಂದು ವ್ಯಂಗ್ಯವಾಡಿದ್ದಾರೆ.

    ಅಂಬರೀಶ್ ಅವರು ಕಡೆ ದಿನಗಳಲ್ಲಿ ಮಂಡ್ಯದಿಂದ ಏಕೆ ಚುನಾವಣೆಗೆ ನಿಲ್ಲಲಿಲ್ಲ? ಜನ ಸೋಲಿಸ್ತಾರೆ ಅಂತ ಅಂಬಿಗೆ ಚೆನ್ನಾಗಿಯೇ ಗೊತ್ತಿತ್ತು. ಅದಕ್ಕೆ ಅಂಬಿ ಕ್ಷೇತ್ರಕ್ಕೆ ಬರಲಿಲ್ಲ. ನಾವು ರಮ್ಯಾರಿಂದ ಪಾಠ ಕಲಿತಿದ್ದೇವೆ. ರಾಜಕಾರಣ ಹುಡುಗಾಟ ಅಲ್ಲ. ಜನರ ನೋವಿಗೆ ಸ್ಪಂದಿಸೋರು ನಮಗೆ ಬೇಕು. ಜನಪ್ರತಿನಿಧಿಗಳ ಆಯ್ಕೆ ವಿಚಾರದಲ್ಲಿ ಮಂಡ್ಯ ಜನ ಸಾಕಷ್ಟು ನೋವು ಉಂಡಿದ್ದಾರೆ ಎಂದು ಹೇಳಿದ್ದಾರೆ.

    ಅಷ್ಟೇ ಅಲ್ಲದೆ ಎಲ್ಲೋ ಕೂತು ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೇನೆ ಎನ್ನುವವರನ್ನ ಮಂಡ್ಯ ಜನ ಗೆಲ್ಲಿಸಲ್ಲ. ದೇವೇಗೌಡರ ಕುಟುಂಬ ಸೇವೆಯಿಂದ ಮಂಡ್ಯ ಬೆಳೆದು ಬಂದಿದೆ. ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧಿಸುವಲ್ಲಿ ಅರ್ಥವಿದೆ. ನಿಖಿಲ್ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ರಾಜಕಾರಣ ಮಾಡಿದ್ದಾರೆ. ಆದ್ರೆ ಸುಮಲತಾ ಗೆದ್ದ ಮೇಲೆ ಅವರನ್ನ ಎಲ್ಲಿ ಹುಡುಕಲು ಸಾಧ್ಯ. ಮಂಡ್ಯ ಕ್ಷೇತ್ರ ಕಾಂಗ್ರೆಸ್ಸಿಗೆ ಹೋಗುತ್ತೋ, ಜೆಡಿಎಸ್‍ಗೆ ಸಿಗುತ್ತೋ ನನಗೆ ಗೊತ್ತಿಲ್ಲ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಟ್ಟಿದ್ದು 10 ನಿಮಿಷ, ಆದ್ರೆ 3 ನಿಮಿಷದಲ್ಲಿ ತಿಂದು ಮುಗಿಸಿದ್ರು

    ಕೊಟ್ಟಿದ್ದು 10 ನಿಮಿಷ, ಆದ್ರೆ 3 ನಿಮಿಷದಲ್ಲಿ ತಿಂದು ಮುಗಿಸಿದ್ರು

    ಚಿಕ್ಕಬಳ್ಳಾಪುರ: ಕೃಷಿ ಮೇಳದಲ್ಲಿ ಆಯೋಜನೆಗೊಂಡಿದ್ದ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಇಂದು ಎಲ್ಲರಿಗೂ ಮನರಂಜನೆ ಒದಗಿಸಿದೆ.

    ಸ್ಪರ್ಧೆಯಲ್ಲಿ ಮುದ್ದೆ ತಿನ್ನಲು 10 ನಿಮಿಷ ಸಮಯ ನೀಡಲಾಗಿತ್ತು. ಆದರೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಜನರು ಮೂರೇ ನಿಮಿಷದಲ್ಲಿ ಮುದ್ದೆಗಳನ್ನು ತಿಂದು ಬೀಗಿದ್ದಾರೆ. ಈ ವೇಳೆ ಸ್ಪರ್ಧೆಯನ್ನು ಮೂರು ನಿಮಿಷಗಳಿಗೆ ಕಡಿತಗೊಳಿಸಲಾಗಿತ್ತು.

    ಶಿಡ್ಲಘಟ್ಟ ತಾಲೂಕಿನ ಕಾಕಚಚೊಕ್ಕಂಡಹಳ್ಳಿ ಗ್ರಾಮದ ನಾಗೇಶ್ ಕುಮಾರ್ 7 ಮುದ್ದೆಗಳನ್ನು ತಿನ್ನುವ ಮೂಲಕ ಮೊದಲ ಸ್ಥಾನ ಪಡೆದುಕೊಂಡರು. ಉಳಿದಂತೆ ತುಳಸಿ ರಾಮೇಗೌಡ, ಶಿವಪ್ಪ, ಕರಗಪ್ಪ 5 ಮುದ್ದೆಗಳನ್ನ ತಿನ್ನುವ ಮೂಲಕ ನಂತರದ ಸ್ಥಾನಗಳನ್ನು ಪಡೆದುಕೊಂಡರು.

    ಇದೇ ವೇಳೆ 50 ಕೆ.ಜಿ ಮೂಟೆ ಎತ್ತುವ ಸ್ಪರ್ಧೆಯನ್ನು ರೈತರಿಗೆ ಆಯೋಜಿಸಲಾಗಿತ್ತು. ಇದರಲ್ಲಿ 22 ಜನ ರೈತರು ಭಾಗವಹಿಸಿದ್ದು, ಕೆಜಿಎಫ್ ನ ತುಳಸಿರಾಮೇಗೌಡ ಮೊದಲ ಸ್ಥಾನಪಡೆದುಕೊಂಡರೆ, ಮನು ದ್ವಿತೀಯ, ಆಂಜನೇಯರೆಡ್ಡಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟಾರೆ ಮೇಳದಲ್ಲಿ ಮೂಟೆ ಹೊರುವ ಹಾಗೂ ಮುದ್ದೇ ತಿನ್ನುವ ಸ್ಪರ್ಧೆಗಳು ಎಲ್ಲರ ಗಮನ ಸೆಳೆದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸುಮಲತಾಗೆ ಟಿಕೆಟ್ ಕೊಡುತ್ತಾ ಜೆಡಿಎಸ್ – ಕಾಂಗ್ರೆಸ್ ಅಸ್ತ್ರವನ್ನೇ ದೋಸ್ತಿಯತ್ತ ತಿರುಗಿಸ್ತಾರಾ ಗೌಡ್ರು..?

    ಸುಮಲತಾಗೆ ಟಿಕೆಟ್ ಕೊಡುತ್ತಾ ಜೆಡಿಎಸ್ – ಕಾಂಗ್ರೆಸ್ ಅಸ್ತ್ರವನ್ನೇ ದೋಸ್ತಿಯತ್ತ ತಿರುಗಿಸ್ತಾರಾ ಗೌಡ್ರು..?

    ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯುವ ವಿಚಾರದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದ್ದು, ಮಂಡ್ಯದಿಂದ ಸುಮಲತಾ ಕಣಕ್ಕಿಳಿಯುತ್ತಾರಾ ಅನ್ನೋ ಚರ್ಚೆಯಾಗುತ್ತಿದೆ.

    ಶತಾಯಗತಾಯ ತಮ್ಮ ಪುತ್ರ ನಿಖಿಲ್‍ನನ್ನು ಕಣಕ್ಕಿಳಿಸಬೇಕೆಂದು ನಿರ್ಧರಿಸಿರುವ ಸಿಎಂ ಕುಮಾರಸ್ವಾಮಿ, ಮೈತ್ರಿಪಾಲನೆಯಲ್ಲಿ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಸಿಎಂ ಪುತ್ರನ ಮಂಡ್ಯ ಪ್ರವೇಶವನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಟೀಂ, ದಿವಂಗತ ಅಂಬರೀಶ್ ಪತ್ನಿ ಸುಮಲತಾ ಹೆಸರನ್ನು ತೇಲಿಬಿಟ್ಟು ಸಂಘರ್ಷಕ್ಕೆ ವೇದಿಕೆ ಸಿದ್ಧಗೊಳಿಸಿದ್ದಾರೆ.

    ಅಂಬಿ ಅಭಿಮಾನಿಗಳು ಶುಕ್ರವಾರ ಸುಮಲತಾ ಅವರನ್ನು ಭೇಟಿ ಮಾಡಿ ಸ್ಪರ್ಧಿಸುವಂತೆ ಒತ್ತಾಯಿಸಿದಾಗ ಕಣಕ್ಕಿಳಿಯುವ ಇಂಗಿತವನ್ನು ಸುಮಲತಾ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸುಮಲತಾ ಸ್ಪರ್ಧೆ ಜೆಡಿಎಸ್ ಪಾಲಿಗೆ ನುಂಗಲಾರದ ತುತ್ತಾಗಲಿದ್ದು, ಅವರನ್ನೇ ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡಿ ತಮ್ಮ ವಿರೋಧಿಗಳ ಬಾಯಿ ಮುಚ್ಚಿಸುವ ತಂತ್ರಕ್ಕೆ ಜೆಡಿಎಸ್ ಮುಂದಾಗುವ ಸಾಧ್ಯತೆ ಇದೆ. ಹೀಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಿಎಂ ಪುತ್ರ ನಿಖಿಲ್ ಸ್ಪರ್ಧೆನೋ..? ಸುಮಲತಾ ರಂಗ ಪ್ರವೇಶವೋ ಎಂಬ ಚರ್ಚೆ ಜೋರಾಗಿ ನಡೆದಿದೆ. ಇದನ್ನು ಓದಿ: ರಾಜಕೀಯ ಪ್ರವೇಶದ ಬಗ್ಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ

    ಮಂಡ್ಯದಿಂದ ಸುಮಲತಾ ಸ್ಪರ್ಧೆಗೆ ಒತ್ತಡ ವಿಚಾರದ ಬಗ್ಗೆ ಸಿಎಂ ಕುಮಾರಸ್ವಾಮಿ ಸ್ಥಾನ ಬಿಡಲ್ಲ ಎಂದು ಪರೋಕ್ಷವಾಗಿ ಸೂಚನೆ ನೀಡಿದ್ದಾರೆ. ಮಂಡ್ಯ ಜೆಡಿಎಸ್‍ನ ಭದ್ರಕೋಟೆ. ಅಲ್ಲಿ ಸುಮಲತಾ ಸ್ಪರ್ಧೆ ಮಾಡಬಾರದು ಎಂದು ಏನೂ ಇಲ್ಲ. ಸ್ಪರ್ಧೆ ಮಾಡಲಿ ಬೇಡ ಎಂದು ಹೇಳೋಕೆ ಆಗುತ್ತಾ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರು ಸ್ಪರ್ಧೆ ಮಾಡಲು ಅವಕಾಶವಿದೆ. ಟಿಕೆಟ್ ಹಂಚಿಕೆ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಆ ಸಂದರ್ಭ ಬಂದಾಗ ಟಿಕೆಟ್ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳುತ್ತಾ ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಕಾಂಗ್ರೆಸ್‍ಗೆ ಟಾಂಗ್ ನೀಡಿದ್ದಾರೆ.

    ಅಲ್ಲದೇ ಚುನಾವಣೆಯ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಕೂಡ ಕೇಳಬೇಕಾಗುತ್ತೆ. ಯಾರೋ ಕೇಳಿದರು ಎಂದು ನಿರ್ಧಾರ ಮಾಡೋಕೆ ಆಗಲ್ಲ. ಟಿಕೆಟ್ ಹಂಚಿಕೆ ಚರ್ಚೆ ಆಗಿಲ್ಲ. ಚರ್ಚೆಗೆ ಬಂದಾಗ ಈ ವಿಷಯದ ಬಗ್ಗೆ ತೀರ್ಮಾನ ಮಾಡುತ್ತೀವಿ. ಅಂಬರೀಶ್ ಕುಟುಂಬದವರು ನಮ್ಮ ಪಕ್ಷಕ್ಕೆ ಸೇರಿದವರಲ್ಲ. ಅವರು ಒಂದು ವೇಳೆ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ನಾವು ವಿರೋಧಿಸುವುದಿಲ್ಲ. ಅದು ಅವರ ವೈಯಕ್ತಿಕ ನಿರ್ಧಾರ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಲೋಕಸಭಾ ಚುನಾವಣೆಗೆ ಸ್ಪರ್ಧೆ-ಪರೋಕ್ಷವಾಗಿ ಗುಟ್ಟು ಬಿಚ್ಚಿಟ್ಟ ನಿಖಿಲ್

    ಲೋಕಸಭಾ ಚುನಾವಣೆಗೆ ಸ್ಪರ್ಧೆ-ಪರೋಕ್ಷವಾಗಿ ಗುಟ್ಟು ಬಿಚ್ಚಿಟ್ಟ ನಿಖಿಲ್

    ಮಂಡ್ಯ: ಈಗಾಗಲೇ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಬಗ್ಗೆ ಸಾಕಷ್ಟು ತಯಾರಿ ನಡೆಯುತ್ತಿದ್ದು, ನಟ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈಗ ಸ್ಪರ್ಧೆ ಮಾಡುವ ಆಸೆ ಬಗ್ಗೆ ಪರೋಕ್ಷವಾಗಿ ನಿಖಿಲ್ ಕುಮಾರಸ್ವಾಮಿ ಗುಟ್ಟು ಬಿಚ್ಚಿಟ್ಟಿದ್ದಾರೆ.

    ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನನ್ನ ಅಭಿನಯದ ‘ಸೀತಾರಾಮ ಕಲ್ಯಾಣ’ ಇದೇ ಜನವರಿ 25 ರಂದು ರಿಲೀಸ್ ಆಗಲಿದೆ. ಹೀಗಾಗಿ ಪ್ರಮೋಷನ್‍ಗೆ ಬಂದಿದ್ದೇನೆ. ಜಿಲ್ಲೆಯ ಜನಪ್ರತಿನಿಧಿಗಳು ಭೇಟಿ ಮಾಡಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದ್ದಾರೆ. ಈ ಬಗ್ಗೆ ವರಿಷ್ಠರು, ರಾಜ್ಯಾಧ್ಯಕ್ಷರು, ಪಕ್ಷದ ಮುಖಂಡರು ತೀರ್ಮಾನ ಮಾಡಬೇಕು. ಇದು ನನ್ನ ತೀರ್ಮಾನ ಅಲ್ಲ. ನನ್ನ ಪಕ್ಷದ ತೀರ್ಮಾನವಾಗುತ್ತದೆ. ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.

    ನನಗೆ ಚಿತ್ರರಂಗದಲ್ಲಿ ಡಾ. ರಾಜಕುಮಾರ್ ಅವರು ಸ್ಫೂರ್ತಿ. ರಾಜಕೀಯಕ್ಕೆ ಬರುವ ಬಗ್ಗೆ ನನ್ನ ಬಳಿ ಉತ್ತರವಿಲ್ಲ. ವರಿಷ್ಠರು ನಿರ್ಧರಿಸುತ್ತಾರೆ. ರಾಜಕೀಯಕ್ಕೆ ಬಂದರೆ ಚಿತ್ರರಂಗ, ರಾಜಕೀಯ ಎರಡರಲ್ಲೂ ಇರುತ್ತೇನೆ. ಮುಖ್ಯಮಂತ್ರಿ ಮಗನಾಗಿ ನನಗೆ ಜವಬ್ದಾರಿ ಇದೆ. ಸಮ್ಮಿಶ್ರ ಸರ್ಕಾರ 5 ವರ್ಷ ಇರುತ್ತದೆ. ಜನರಿಗಾಗಿ ಸರ್ಕಾರ ಇರಬೇಕು. ನಮ್ಮ ತಂದೆ ಭಾವನಾ ಜೀವಿ. ಸಮ್ಮಿಶ್ರ ಸರ್ಕಾರ ಬಂದಾಗ ಬಹುಮತ ಬಂದಿಲ್ಲ ಎಂದು ಸಾಲಮನ್ನಾ ವಿಚಾರವಾಗಿ ಎಸ್ಕೇಪ್ ಆಗಬಹುದಿತ್ತು. ಆದರೆ ಸರ್ಕಾರದ ಖಜಾನೆ ಬಗ್ಗೆ ಅವರಿಗೆ ಅರಿವಿದೆ. ಇವೆಲ್ಲದರ ನಡುವೆ ರೈತರ ಸಾಲಮನ್ನಾ ಮಾಡುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

    ಅಷ್ಟೇ ಅಲ್ಲದೇ ಅಭಿವೃದ್ಧಿ ಕಾರ್ಯದ ಜೊತೆಗೆ ಸಾಲಮನ್ನಾಕ್ಕೆ ಹೋರಾಟ ಮಾಡುತ್ತಿದ್ದಾರೆ. ನಮ್ಮ ಬ್ಯಾಂಕ್ ಅಕೌಂಟ್ ಬಗ್ಗೆ ನಮಗೆ ಗೊತ್ತಿರುತ್ತದೆ. ನಾವು ಸಾಲ ಮಾಡಿಕೊಂಡಿರುತ್ತೇವೆ. ನಮ್ಮ ಸಾಲದ ಬಗ್ಗೆ ನಮಗೆ ಹೇಗೆ ಅರಿವಿರುತ್ತದೆಯೋ, ಹಾಗೇ ಮುಖ್ಯಮಂತ್ರಿಗಳಿಗೂ ಖಜಾನೆ ಬಗ್ಗೆ ಅರಿವಿದೆ. ರೈತರಿಗಾಗಿ ನಮ್ಮ ಸರ್ಕಾರ ಕೆಲಸ ಮಾಡಲಿದೆ. ನಾನು ರಾಜಕೀಯವಾಗಿ ರಾಜ್ಯಾದ್ಯಂತ ಓಡಾಡುತ್ತೇನೆ. ಕೊನೆಯವರೆಗೂ ರಾಜ್ಯದಲ್ಲಿ ಪಕ್ಷ ಕಟ್ಟಲು ನಾನು ಕೆಲಸ ಮಾಡುತ್ತೇನೆ. ಕಾರ್ಯಕರ್ತರ ಅಭಿಪ್ರಾಯವನ್ನು ಗೌರವಿಸುತ್ತೇನೆ ಎಂದು ನಿಖಿಲ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv