Tag: ಸ್ನೇಹಿತರ ದಿನ

  • ಸ್ನೇಹಿತರ ದಿನಕ್ಕೆ ಮನ ಮಿಡಿಯುವ ಅನುಷ್ಕಾ ಪೋಸ್ಟ್

    ಸ್ನೇಹಿತರ ದಿನಕ್ಕೆ ಮನ ಮಿಡಿಯುವ ಅನುಷ್ಕಾ ಪೋಸ್ಟ್

    ಮುಂಬೈ: ಸ್ನೇಹಿತರ ದಿನದ ಅಂಗವಾಗಿ ಅನುಷ್ಕಾ ಶರ್ಮಾ ತಮ್ಮ ಬಾಲ್ಯದ ಸ್ನೇಹಿತರನ್ನು ನೆನೆದು, ಪೋಸ್ಟ್ ಹಾಕಿದ್ದು, ಅಪರೂಪದ ಫೋಟೋ ಪರಿಚಯಿಸಿದ್ದಾರೆ. ಇದಕ್ಕೆ ಅದ್ಭುತ ಸಾಲುಗಳನ್ನು ಬರೆದಿದ್ದಾರೆ.

    ತಮ್ಮ ಬಾಲ್ಯದ ಫೋಟೋ ಹಂಚಿಕೊಂಡಿದ್ದು, ಚಿತ್ರದಲ್ಲಿ ಅನುಷ್ಕಾ ಮಧ್ಯದಲ್ಲಿ ನಿಂತಿದ್ದು, ಸುತ್ತಲೂ ಸ್ನೇಹಿತೆಯರು ನಿಂತಿದ್ದಾರೆ. ನಗುತ್ತ ನಿಂತಿರುವ ಅನುಷ್ಕಾ ಕ್ಯೂಟ್ ಆಗಿ ಕಾಣುತ್ತಿದ್ದಾರೆ. ಅವರ ಪೋನಿ ಹೇರ್ ಸ್ಟೈಲ್ ಸಹ ಗಮನ ಸೆಳೆಯುತ್ತದೆ.

    ಪೋಸ್ಟ್ ಗೆ ಸಾಲುಗಳನ್ನು ಬರೆದಿರುವ ಅನುಷ್ಕಾ, ನಿಮ್ಮ ಜೀವನದಲ್ಲಿ ಹಲವರನ್ನು ಸ್ನೇಹಿತರನ್ನಾಗಿಸಿಕೊಂಡಿರುತ್ತೀರಿ. ಪ್ರತಿಯೊಬ್ಬರೂ ಪ್ರಮುಖ ಪಾತ್ರ ವಹಿಸಿಉತ್ತಾರೆ. ತಿಳಿದೋ, ತಿಳಿಯದೆಯೋ ನಮ್ಮಲ್ಲಿ ಅವರು ಪ್ರಭಾವ ಬೀರಿರುತ್ತಾರೆ. ಕೆಲವರು ಸಂಪರ್ಕದಲ್ಲಿರುತ್ತಾರೆ. ಇನ್ನೂ ಕೆಲವರು ಕೇವಲ ನೆನಪಿನಲ್ಲಿ ಉಳಿದಿರುತ್ತಾರೆ. ಆಗಾಗ ನಮ್ಮ ಮುಖದಲ್ಲಿ ನಗು ತರಿಸುತ್ತಿರುತ್ತಾರೆ. ಆರ್ಮಿ ಕುಟುಂಬ ಹಿನ್ನೆಲೆಯಾದವಳಾದ ನನಗೆ ತುಂಬಾ ಜನ ಸ್ನೇಹಿತರಿದ್ದರು. ಆದರೆ ಪೋಷಕರಿಗೆ ಬೇರೆ ಸ್ಥಳಗಳಿಗೆ ಪೋಸ್ಟಿಂಗ್ ಆದರೆ ನಾವು ಅವರ ಸಂಪರ್ಕವನ್ನು ಕಳೆದುಕೊಳ್ಳುತ್ತಿದ್ದೆವು ಎಂದು ಬರೆದಿದ್ದಾರೆ.

    ಇದು ನನ್ನೆಲ್ಲ ಸ್ನೇಹಿತರಿಗಾಗಿ. ನನ್ನೊಂದಿಗೆ ಬೆಳೆದವರಿಗೆ, ಇಂದು ನಮ್ಮೊಂದಿಗೆ ಇರುವವರಿಗೆ ಎಲ್ಲರಿಗೂ ಸ್ನೇತರ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‍ಗೆ 9 ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಅನುಷ್ಕಾ ಸ್ನೇಹಿತರ ದಿನವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

    ಅನುಷ್ಕಾ ಝೀರೋ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದು, ಇದೀಗ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಝುಲನ್ ಗೋಸ್ವಾಮಿ ಅವರ ಕುರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  • ಸ್ನೇಹಿತರ ಮುಂದೆ ಜಲಸಮಾಧಿಯಾದ ಬೆಂಗಳೂರಿನ ಯುವಕ

    ಸ್ನೇಹಿತರ ಮುಂದೆ ಜಲಸಮಾಧಿಯಾದ ಬೆಂಗಳೂರಿನ ಯುವಕ

    ಚಾಮರಾಜನಗರ: ಸ್ನೇಹಿತರ ದಿನದೊಂದು ಗೆಳಯರ ಜೊತೆಗೆ ಮಲೆಮಾದಪ್ಪನ ದರ್ಶನಕ್ಕೆ ಬಂದಿದ್ದ ಯುವಕನೊರ್ವ ನೀರಿನಲ್ಲಿ ಮುಳುಗಿ ಜಲ ಸಮಾಧಿಯಾದ ಘಟನೆ ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿನ ಅಂತರಗಂಗೆಯಲ್ಲಿ ಸ್ನಾನ ಮಾಡಲು ಹೋದಾಗ ಬೆಂಗಳೂರಿನ ನಿವಾಸಿಯಾದ ಪ್ರಭು (28) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ಬೆಂಗಳೂರಿನಿಂದ 9 ಜನ ಸ್ನೇಹಿತರು ಪ್ರವಾಸಕ್ಕೆಂದು ಆಗಮಿಸಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಪ್ರವಾಸಕ್ಕೆ ಹೋಗಿದ್ದವರ ಪೈಕಿ ಪ್ರಭುವಿಗೆ ಮಾತ್ರ ಈಜು ಬರುತಿತ್ತು ಎಂದು ತಿಳಿದುಬಂದಿದೆ. ಅಲ್ಲಿದ್ದ ಬೇರೆ ಯಾವ ಗೆಳೆಯರಿಗೂ ಈಜು ಬಾರದ ಹಿನ್ನೆಲೆಯಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಲಾಗದೇ ಕೂಗಾಡಿ ಕೊನೆಗೆ ಪೋಲಿಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಯುವಕನ ಶೋಧಕಾರ್ಯವನ್ನು ಮಲೆಮಹದೇಶ್ವರ ಬೆಟ್ಟದ ಪೊಲೀಸರು ಮುಂದುವರಿಸಿದ್ದಾರೆ.

  • ಸ್ನೇಹಿತರ ದಿನವಾದ ಇಂದು ಪಬ್ಲಿಕ್ ಟಿವಿ ಓದುಗರಿಗೆ ಪುಟಾಣಿ ಕಥೆ

    ಸ್ನೇಹಿತರ ದಿನವಾದ ಇಂದು ಪಬ್ಲಿಕ್ ಟಿವಿ ಓದುಗರಿಗೆ ಪುಟಾಣಿ ಕಥೆ

    ಗಸ್ಟ್ 05 ಬಂದರೆ ಸಾಕು ಸ್ನೇಹ ಬಳಗದಲ್ಲೊಂದು ಸಂಭ್ರಮದ ವಾತಾವರಣ. ಎಲ್ಲ ಸ್ನೇಹಿತರು ಪರಸ್ಪರ ಒಬ್ಬರಿಗೊಬ್ಬರು ಸ್ನೇಹಿತರ ದಿನದ ಶುಭಕೋರುತ್ತಾರೆ. ಮತ್ತೆ ಕೆಲವರು ತಮ್ಮ ನೆಚ್ಚಿನ ಗೆಳೆಯ/ಗೆಳತಿಯರಿಗೆ ಉಡುಗೊರೆಯನ್ನು ನೀಡುತ್ತಾರೆ. ಇಂದು ಸ್ನೇಹಿತರಿಗಾಗಿ ಸ್ನೇಹತನ ಹೇಳುವ ಕಥೆ ನಿಮಗಾಗಿ ಇಲ್ಲಿದೆ

    ಕೆಲವು ವರ್ಷಗಳ ಹಿಂದೆ ಅಂಕಿತ್ ಮತ್ತು ಸೂರಜ್ ಎಂಬ ಗೆಳೆಯರಿದ್ದರು. ಬಾಲ್ಯದಿಂದ ಒಟ್ಟಾಗಿಯೇ ಶಿಕ್ಷಣ ಮುಗಿಸಿದ ಗೆಳೆಯರಿಗೆ, ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶವೂ ಸಿಗುತ್ತದೆ. ಆದ್ರೆ ಇಲ್ಲಿ ಇಬ್ಬರು ಉದ್ಯೋಗಕ್ಕಾಗಿ ಬೇರೆ ಬೇರೆ ದೇಶಕ್ಕೆ ಹೋಗುತ್ತಾರೆ. ಇಬ್ಬರು ಗೆಳೆಯರು ಹೋಗುವ ಮುನ್ನ ಮುಂದಿನ 10 ವರ್ಷಗಳ ನಂತರ ನಾವಿಬ್ಬರು ಇದೇ ಸ್ಥಳ, ಇದೇ ಸಮಯಕ್ಕೆ ಭೇಟಿ ಆಗೋಣ. ಅಂದು ಯಾರು ಎಷ್ಟು ಯಶಸ್ಸು ಹೊಂದಿರುತ್ತಾರೆ ಎಂಬುದನ್ನು ಲೆಕ್ಕ ಹಾಕೋಣ ಎಂದು ಹೇಳಿ ಹೊರಡುತ್ತಾರೆ.

    10 ವರ್ಷಗಳ ಬಳಿಕ ಇಬ್ಬರು ಭೇಟಿಯಾಗುವ ಸಮಯ ಬರುತ್ತದೆ. ತಮ್ಮ ಯೋಚನೆಯಂತೆಯೇ ಇಬ್ಬರೂ 10 ವರ್ಷಗಳ ಹಿಂದೆ ತೀರ್ಮಾನಿಸಿದ ರೀತಿಯಲ್ಲಿ ಅದೇ ಸ್ಥಳ ಮತ್ತು ಸಮಯಕ್ಕೆ ಭೇಟಿಯಾಗಲು ಬರುತ್ತಾರೆ. ಮೊದಲಿಗೆ ಬಂದ ಅಂಕಿತ್, ಹೋಟೆಲೊಂದರ ಬಾಗಿಲ ಬಳಿಯೇ ಗೆಳೆಯ ಸೂರಜ್ ಗಾಗಿ ಕಾಯುತ್ತಿರುತ್ತಾನೆ. ಅಂಕಿತ್ ಒಳ್ಳೆಯ ಬಟ್ಟೆ ತೊಟ್ಟು ಗೆಳೆಯನ ನಿರೀಕ್ಷೆಯಲ್ಲಿ ಇರುತ್ತಾನೆ. ಅದೇ ವೇಳೆ ಹೋಟೆಲ್‍ಗೆ ಬಂದ ಪೊಲೀಸ್ ಅಧಿಕಾರಿಯೊಬ್ಬ ಅಂಕಿತ್‍ನನ್ನು ಪ್ರಶ್ನಿಸುತ್ತಾರೆ.

    ಪೊಲೀಸ್ ಅಧಿಕಾರಿ: ಯಾರು ನೀವು? ರಾತ್ರಿ 10ಗಂಟೆಗೆ ಏನು ಮಾಡುತ್ತಿದ್ರಿ?
    ಅಂಕಿತ್: ನಾನೊಬ್ಬ ವ್ಯಾಪಾರಸ್ಥ, ನನ್ನ ಗೆಳೆಯನಿಗಾಗಿ ಕಾಯುತ್ತಿದ್ದೇನೆ.
    ಪೊಲೀಸ್ ಅಧಿಕಾರಿ: ಈ ವೇಳೆ ಇಲ್ಲಿ ನೀವು ನಿಲ್ಲೋದು ಸೂಕ್ತವಲ್ಲ ಬೇಗ ಹೊರಡಿ (ಪೊಲೀಸ್ ಅಧಿಕಾರಿ ಹಿಂದಿರುಗುತ್ತಾರೆ)

    (ಕೆಲ ಸಮಯದ ನಂತರ) ದೂರದಲ್ಲಿ ಓರ್ವ ವ್ಯಕ್ತಿ ಬರೋದನ್ನು ಅಂಕಿತ್ ಕಾಣುತ್ತಾನೆ. ಆತ ಹತ್ತಿರ ಬರುತ್ತಲೇ ನೀನು ಸೂರಜ್ ಅಲ್ವ ಎಂದು ಅನುಮಾನದ ರೀತಿಯಲ್ಲಿ ಕೇಳುತ್ತಾನೆ. ಆ ವ್ಯಕ್ತಿ ಹೌದು ಎಂದು ತಲೆ ಅಲ್ಲಾಡಿಸುತ್ತಾನೆ. ಇಬ್ಬರು ಹಲವು ಮಾತುಗಳನ್ನಾಡುತ್ತಾರೆ. ಒಳ್ಳೆಯ ಊಟವನ್ನು ಮಾಡುತ್ತಾರೆ.

    ಅಂಕಿತ್: ಸೂರಜ್, ಜೀವನಕ್ಕೆ ಏನು ಮಾಡಿಕೊಂಡಿದ್ದೀಯಾ?
    ವ್ಯಕ್ತಿ: ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದೇನೆ. ನೀನು ಏನ್ ಮಾಡುತ್ತೀದ್ದಿಯಾ?
    ಅಂಕಿತ್: ಬಂಗಾರ ವ್ಯಾಪಾರಿ (ಈ ಮಧ್ಯೆ ಅಂಕಿತ್‍ಗೆ ಇವನು ನನ್ನ ಗೆಳೆಯನಲ್ಲ ಎಂಬ ಅನುಮಾನ ಮೂಡುತ್ತದೆ)
    ಅಂಕಿತ್: (ಸಿಟ್ಟಿನಿಂದ) ಯಾರು ನೀನು? ನೀವು ನನ್ನ ಗೆಳೆಯ ಸೂರಜ್ ಅಲ್ಲ ಎಂದು ಕಿರುಚುತ್ತಾನೆ.

    ಆ ವ್ಯಕ್ತಿ ಅಂಕಿತ್ ಕೈಗೆ ಪತ್ರವೊಂದನ್ನು ನೀಡುತ್ತಾರೆ. ಈ ಮೊದಲು ಮಾತನಾಡಿಸಿದ್ದ ಪೊಲೀಸ್ ಅಧಿಕಾರಿಯೇ ಸೂರಜ್ ಎಂದು ಆ ವ್ಯಕ್ತಿ ಎಂದು ಹೇಳುತ್ತಾರೆ. ಇಂದು ಸೂರಜ್, ಕಳ್ಳ ಸಾಗಾಟಗಾರನನ್ನು ಹಿಡಿಯಲು ಹೋಟೆಲ್‍ಗೆ ಬಂದಿದ್ದರು. ಆದ್ರೆ ಆ ಸ್ಮಗಲರ್ ತನ್ನ ಆಪ್ತ ಗೆಳೆಯ ಅಂಕಿತ್ ಎಂದು ತಿಳಿದ ಕೂಡಲೇ ಕೇವಲ ಮಾತನಾಡಿಸಿ ನನ್ನ ಬಳಿ ಬಂದರು. ಅಲ್ಲದೇ ನನ್ನ ಗೆಳೆಯನನ್ನು ಬಂಧಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಇದೇ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ರು. ಹಾಗಾಗಿ ನಿಮ್ಮನ್ನು ಬಂಧಿಸಲು ನಾನು ಬಂದಿದ್ದೇನೆ ಎಂದು ಅಲ್ಲಿದ್ದ ಪೊಲೀಸ್ ಅಧಿಕಾರಿ ಹೇಳುತ್ತಾರೆ.

    ತನಗಾಗಿ ಸಾವನ್ನಪ್ಪಿದ ಗೆಳೆಯನಿಗಾಗಿ ಅಂಕಿತ್ ತನ್ನ ಎಲ್ಲ ತಪ್ಪುಗಳನ್ನು ಒಪ್ಪಿಕೊಂಡು ಪೊಲೀಸರಿಗೆ ಶರಣಾಗುತ್ತಾನೆ.