Tag: ಸ್ಥಳೀಯ ಚುನಾವಣೆ

  • ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ತಯಾರಿಸಿ ಕೇಂದ್ರಕ್ಕೆ ಸಲ್ಲಿಕೆ: ಧ್ರುವನಾರಾಯಣ

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ತಯಾರಿಸಿ ಕೇಂದ್ರಕ್ಕೆ ಸಲ್ಲಿಕೆ: ಧ್ರುವನಾರಾಯಣ

    ಚಾಮರಾಜನಗರ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ವಿಸ್ತೃತ ಮೇಕೆದಾಟು ಯೋಜನೆ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಲಾಗಿದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರಾಗಿ ಡಿ.ಕೆ ಶಿವಕುಮಾರ್ ಇದ್ದರು ಎಂದು ಹೇಳಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಕೆಪಿಸಿಸಿ ಕಾರ್ಯದರ್ಶಿ ಧ್ರುವನಾರಾಯಣ ತಿರುಗೇಟು ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ವಿಸ್ತೃತ ಯೋಜನಾ ವರದಿ ಸಲ್ಲಿಸಿ ಒಂದೂವರೆ ವರ್ಷ ಕಳೆದಿದೆ. ಆದರೂ ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತೇವೆ. ಇದು ರಾಜಕೀಯಕ್ಕೋಸ್ಕರ ಅಥವಾ ಜನರ ಮತ ಸೆಳೆಯಲು ಮಾಡುತ್ತಿಲ್ಲ. ಈ ವಿಚಾರವನ್ನು ಕುಮಾರಸ್ವಾಮಿ ಅರಿತುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

    ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಕಳೆದ ಒಂದೂವರೆ ವರ್ಷದಿಂದ ಈ ಯೋಜನೆಯ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಈ ಯೋಜನೆಯಿಂದ ಬೆಂಗಳೂರಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ. ಯೋಜನೆ ಜಾರಿಗೊಳಿಸುವಂತೆ ಒಂದು ರಾಜಕೀಯ ಪಕ್ಷವಾಗಿ ಒತ್ತಾಯಿಸುವುದು ತಪ್ಪೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ:  ಹಿಂದೂಗಳಿಗೆ ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು: ಸಿ.ಟಿ.ರವಿ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ವಿಚಾರವಾಗಿ ಮಾತನಾಡಿದ ಅವರು, ಸಹಜವಾಗಿ ಆಡಳಿತ ಪಕ್ಷ ಹೆಚ್ಚಿನ ಸ್ಥಾನ ಗಳಿಸುತ್ತದೆ. ಆದರೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಜನರ ಕಷ್ಟ ಕೇಳಲಿಲ್ಲ. ಕೊರೊನಾದಿಂದ ಮೃತಪಟ್ಟವರಿಗೆ ಪರಿಹಾರ ನೀಡಲು ವಿಫಲವಾಗಿದೆ. ಅಷ್ಟೇ ಅಲ್ಲದೆ ಬೆಲೆ ಏರಿಕೆ ನಿಯಂತ್ರಣದಲ್ಲಿ ವಿಫಲವಾಗಿದೆ. ಈ ಎಲ್ಲಾ ಕಾರಣದಿಂದಾಗಿ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ ಎಂದರು. ಇದನ್ನೂ ಓದಿ: ಪಾದಯಾತ್ರೆಗೆ ಭಾಗವಹಿಸಿ ಏನು ಮಾಡಲಿ ಹೇಳಿ: ಡಿಕೆಶಿಗೆ ಟಾಂಗ್ ಕೊಟ್ಟ HDK

    ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಪ್ರಾರಂಭವಾಗಿದೆ. ಈ ಫಲಿತಾಂಶ ಮುಂಬರುವ ಜಿಪಂ, ತಾಪಂ, ವಿಧಾನಸಭಾ ಚುನಾವಣೆಗಳಿಗೆ ದಿಕ್ಸೂಚಿಯಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಜನಪರ ಆಡಳಿತ ನೀಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಪ್ರತಿಕ್ರಿಯಿಸಿದರು.

  • ಆಡಳಿತರೂಢ ಕಾಂಗ್ರೆಸ್ಸಿಗೆ ಸೋಲು – ಬಿಜೆಪಿ ತೆಕ್ಕೆಗೆ ಮಂಗಳೂರು ಪಾಲಿಕೆ

    ಆಡಳಿತರೂಢ ಕಾಂಗ್ರೆಸ್ಸಿಗೆ ಸೋಲು – ಬಿಜೆಪಿ ತೆಕ್ಕೆಗೆ ಮಂಗಳೂರು ಪಾಲಿಕೆ

    ಮಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಬಿಜೆಪಿ ಭಾರೀ ಗೆಲುವು ಕಂಡಿದೆ.

    ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳ ಪೈಕಿ 44 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದೆ. ಈ ಮೂಲಕ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಜಯಭೇರಿ ಬಾರಿಸಿದೆ. ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದರೂ ಸಹ ಬಿಜೆಪಿಗೆ ಅಭೂತಪೂರ್ವ ಗೆಲುವು ಲಭಿಸಿದೆ.

    ಈ ಮೂಲಕ ಕಾಂಗ್ರೆಸ್ಸಿಗೆ ಭಾರೀ ಮುಖಭಂಗವಾಗಿದ್ದು, ಕೇವಲ 14 ವಾರ್ಡ್‌ಗಳನ್ನು ಮಾತ್ರ ಗೆದ್ದಿದೆ. ಬಿಜೆಪಿ ಭರ್ಜರಿ ಜಯಗಳಿಸುವ ಮೂಲಕ ಅಧಿಕಾರದ ಗದ್ದುಗೆಯನ್ನು ಏರಿದೆ. ಬಹುಮತ ಸಾಧಿಸಿದ್ದರಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಒಟ್ಟು 60 ವಾರ್ಡ್‍ಗಳ ಪೈಕಿ ಬಿಜೆಪಿ 44, ಕಾಂಗ್ರೆಸ್ 14, ಜೆಡಿಎಸ್ ಶೂನ್ಯ ಹಾಗೂ ಇತರೆ 02 ಸ್ಥಾನಗಳನ್ನು ಪಡೆದುಕೊಂಡಿವೆ.

    ಯಾರ್ಯಾರು ಜಯಗಳಿಸಿದ್ದಾರೆ?
    ಸುರತ್ಕಲ್ (ಪಶ್ಚಿಮ) ಶೋಭಾ ರಾಜೇಶ್(ಬಿಜೆಪಿ), ಸುರತ್ಕಲ್ (ಪೂರ್ವ) ಎ.ಶ್ವೇತಾ (ಬಿಜೆಪಿ), ಕಾಟಿಪಳ್ಳ(ಪೂರ್ವ) ಲೋಕೇಶ್ ಬೊಳ್ಳಾಜೆ(ಬಿಜೆಪಿ), ಕಾಟಿಪಳ್ಳ(ಕೃಷ್ಣಾಪುರ) ಲಕ್ಷ್ಮಿ ಶೇಖರ್ (ಬಿಜೆಪಿ), ಕಾಟಿಪಳ್ಳ(ಉತ್ತರ) ಶಂಶಾದ್ ಅಬೂಬ್‍ಕ್ಕರ್ (ಎಸ್‍ಡಿಪಿಐ), ಇಡ್ಯಾ(ಪೂರ್ವ) ಸರಿತಾ ಶಶಿಧರ್ (ಬಿಜೆಪಿ), ಇಡ್ಯಾ (ಪಶ್ಚಿಮ) ನಯನ ಆರ್ ಕೋಟ್ಯಾನ್ (ಬಿಜೆಪಿ), ಹೊಸಬೆಟ್ಟು-ವರೂಣ್ ಚೌಟ(ಬಿಜೆಪಿ), ಕುಳಾಯಿ-ಜಾನಕಿ ಯಾನೆ ವೇದಾವತಿ (ಬಿಜೆಪಿ), ಕುಂಜತ್ತಬೈಲ್ (ದಕ್ಷಿಣ) ಸುಮಂಗಲ(ಬಿಜೆಪಿ), ಬೈಕಂಪಾಡಿ-ಸುಮಿತ್ರಾ (ಬಿಜೆಪಿ), ಬಂಗ್ರ ಕೂಳೂರು- ಕಿರಣ್ ಕುಮಾರ್ (ಬಿಜೆಪಿ), ಪಣಂಬೂರು ಸುನಿತಾ(ಬಿಜೆಪಿ), ದೇರೇಬೈಲ್(ಉತ್ತರ) ಮನೋಜ್ ಕುಮಾರ್ (ಬಿಜೆಪಿ).

    ಪಂಜಿಮೊಗರು- ಅನಿಲ್ ಕುಮಾರ್ (ಕಾಂಗ್ರೆಸ್), ಕಾವೂರು ಎ.ಗಾಯತ್ರಿ (ಬಿಜೆಪಿ), ಕುಂಜತ್ತಬೈಲ್(ಉತ್ತರ) ಶರತ್ ಕುಮಾರ್ (ಬಿಜೆಪಿ), ಪಚ್ಚನಾಡಿ- ಸಂಗೀತಾ ಆರ್.ನಾಯಕ್(ಬಿಜೆಪಿ), ಮರಕಡ-ಲೋಹಿತ್ ಅಮಿನ್ (ಬಿಜೆಪಿ), ತಿರುವೈಲ್-ಹೇಮಲತಾ ರಘು ಸಾಲಿಯಾನ್ (ಬಿಜೆಪಿ), ದೇರೆಬೈಲು(ಪಶ್ಚಿಮ) ಜಯಲಕ್ಷ್ಮಿ ವಿ.ಶೆಟ್ಟಿ(ಬಿಜೆಪಿ), ಪದವು(ಪಶ್ಚಿಮ) ವನಿತಾ ಪ್ರಸಾದ್ (ಬಿಜೆಪಿ), ದೇರೆಬೈಲು(ನೈರುತ್ಯ) ಗಣೇಶ್ (ಬಿಜೆಪಿ), ಕದ್ರಿ ಪದವು- ಜಯಾನಂದ ಅಂಚನ್(ಬಿಜೆಪಿ), ಬೋಳೂರು ಜಗದೀಶ ಶೆಟ್ಟಿ(ಬಿಜೆಪಿ), ದೇರೆಬೈಲು(ಪೂರ್ವ) ರಂಜನಿ ಕೋಟ್ಯಾನ್(ಬಿಜೆಪಿ), ಮಣ್ಣಗುಡ್ಡ- ಸಂಧ್ಯಾ(ಬಿಜೆಪಿ), ಕಂಬ್ಳ-ಲೀಲಾವತಿ (ಬಿಜೆಪಿ), ದೇರೆಬೈಲು(ದಕ್ಷಿಣ) ಎಂ.ಶಶಿಧರ ಹೆಗ್ಡೆ(ಕಾಂಗ್ರೆಸ್), ಕೊಡಿಯಾಲ್ ಬೈಲ್- ಸುಧೀರ್ ಶೆಟ್ಟಿ(ಬಿಜೆಪಿ), ಬಜಾರ್-ಅಶ್ರಾಫ್(ಕಾಂಗ್ರೆಸ್), ಬೋಳಾರ್- ಭಾನುಮತಿ(ಬಿಜೆಪಿ), ಜೆಪ್ಪು- ಎಸ್.ಭರತ್ ಕುಮಾರ್ (ಬಿಜೆಪಿ), ಜಪ್ಪಿನಮೊಗರು- ವೀಣಾ ಮಂಗಳ(ಬಿಜೆಪಿ).

    ಮಂಗಳಾದೇವಿ- ಪ್ರೇಮಾನಂದ ಶೆಟ್ಟಿ(ಬಿಜೆಪಿ), ಹ್ಯೂಗೆ ಬಜಾರ್- ರೇವತಿ(ಬಿಜೆಪಿ), ಬಂಗ್ರೆ- ಮುನೀಬ್ ಬಂಗ್ರೆ(ಎಸ್‍ಡಿಪಿಐ), ಡೊಂಗರಕೇರಿ- ಎಂ.ಜಯಶ್ರೀ ಕುಡ್ವ(ಬಿಜೆಪಿ), ಕುದ್ರೋಳಿ- ಸಂಶುದ್ದೀನ್(ಕಾಂಗ್ರೆಸ್), ಬಂದರ್- ಝೀನತ್ ಸಂಶುದ್ದೀನ್(ಕಾಂಗ್ರೆಸ್), ಪೋರ್ಟ್- ಅಬ್ದುಲ್ ಲತೀಫ್(ಕಾಂಗ್ರೆಸ್), ಕಂಟೋನ್ಮೆಂಟ್- ದಿವಾಕರ(ಬಿಜೆಪಿ), ಮಿಲಾಗ್ರೀಸ್- ಅಬ್ದುಲ್ ರವೂಫ್(ಕಾಂಗ್ರೆಸ್), ಕಂಕನಾಡಿ ವೆಲೆನ್ಸಿಯಾ- ಸಂದೀಪ್(ಬಿಜೆಪಿ), ಕಂಕನಾಡಿ- ಟಿ.ಪ್ರವೀಣ್ ಚಂದ್ರ ಆಳ್ವಾ(ಕಾಂಗ್ರೆಸ್), ಅಳಪೆ(ಉತ್ತರ) ರೂಪ ಶ್ರೀ ಪೂಜಾರಿ(ಬಿಜೆಪಿ), ಕಣ್ಣೂರು- ಚಂದ್ರಾವತಿ(ಬಿಜೆಪಿ), ಬಿಜೈ- ಪ್ರಶಾಂತ್ ಆಳ್ವ(ಬಿಜೆಪಿ), ಕದ್ರಿ (ಉತ್ತರ) ಶಖಿಲ ಕಾವ(ಬಿಜೆಪಿ), ಕದ್ರಿ(ದಕ್ಷಿಣ) ಕದ್ರಿ ಮನೋಹರ ಶೆಟ್ಟಿ(ಬಿಜೆಪಿ), ಶಿವಭಾಗ್- ಕಾವ್ಯ ನಟರಾಜ ಆಳ್ವ (ಬಿಜೆಪಿ), ಪದವು (ಸೆಂಟ್ರಲ್) ಕಿಶೋರ್ ಕೊಟ್ಟಾರಿ(ಬಿಜೆಪಿ), ಪದವು(ಪೂರ್ವ) ಕೆ.ಭಾಸ್ಕರ್ (ಕಾಂಗ್ರೆಸ್), ಮರೋಳಿ- ಕೇಶವ(ಕಾಂಗ್ರೆಸ್), ಬೆಂದೂರ್- ನವೀನ್ ಆರ್.ಡಿಸೋಜ(ಕಾಂಗ್ರೆಸ್), ಫಳ್ನೀರ್- ಜೆಸಿಂತಾ ವಿಜಯ ಆಲ್ಫ್ರೆಡ್ (ಕಾಂಗ್ರೆಸ್), ಕೋರ್ಟ್- ಎ.ಸಿ.ವಿನಯ ರಾಜ್(ಕಾಂಗ್ರೆಸ್), ಸೆಂಟ್ರಲ್ ಮಾರ್ಕೆಟ್- ಪೂರ್ಣಿಮಾ(ಬಿಜೆಪಿ).

  • ಲೋಕಲ್ ಎಲೆಕ್ಷನ್ ವಾರ್ – ಬಳ್ಳಾರಿಯಲ್ಲಿ ಬೆಳ್ಳಿ ನಾಣ್ಯ ನೀಡಿ ಮತದಾರರಿಗೆ ಆಮಿಷ

    ಲೋಕಲ್ ಎಲೆಕ್ಷನ್ ವಾರ್ – ಬಳ್ಳಾರಿಯಲ್ಲಿ ಬೆಳ್ಳಿ ನಾಣ್ಯ ನೀಡಿ ಮತದಾರರಿಗೆ ಆಮಿಷ

    – 7 ಜಿಲ್ಲೆಗಳಲ್ಲಿ ಬಿರುಸಿನ ಮತದಾನ

    ಬಳ್ಳಾರಿ: ಲೋಕಸಭಾ ಚುನಾವಣೆ ನಡೆದ ಫಲಿತಾಂಶವೂ ಹೊರಬಿದ್ದಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲಿ ಇದೀಗ ಸ್ಥಳೀಯ ಚುನಾವಣೆಯ ಅಬ್ಬರ ಜೋರಾಗಿದೆ. ಹೌದು. 7 ಜಿಲ್ಲೆಗಳಲ್ಲಿ ಬಿರುಸಿನ ಮತದಾನ ನಡೆಯಲಿದ್ದು, ಇದೀಗ ಅಭ್ಯರ್ಥಿಗಳು ತಮ್ಮನ್ನು ಗೆಲ್ಲಿಸಿಕೊಡಬೇಕೆಂದು ಮತದಾರರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ.

    ಬಳ್ಳಾರಿಯ ಸಂಡೂರು ಪುರಸಭೆ ಚುನಾವಣೆಯಲ್ಲಿ ಕುರುಡು ಕಾಂಚಾಣ ಕುಣಿಯುತ್ತಿದ್ದು, ಲೋಕಸಭೆ, ವಿಧಾನಸಭೆ ಚುನಾವಣೆಯಂತೆ ಇಲ್ಲೂ ಅಮಿಷ ಒಡ್ಡಲಾಗುತ್ತಿದೆ. ಅಭ್ಯರ್ಥಿಗಳು ತಮ್ಮ ಗೆಲುವುಗಾಗಿ ಭರ್ಜರಿ ಹಣ ಖರ್ಚು ಮಾಡುತ್ತಿದ್ದಾರೆ. ಮತದಾರರಿಗೆ ಬೆಳ್ಳಿ ನಾಣ್ಯಗಳನ್ನು ಹಂಚುತ್ತಿದ್ದಾರೆ. ಈ ಮೂಲಕ ಪಕ್ಷೇತರ ಅಭ್ಯರ್ಥಿಗಳು ದೊಡ್ಡ ಪಕ್ಷಗಳಿಗೆ ಹೊಡೆತ ಕೊಡುತ್ತಿದ್ದಾರೆ.

    7 ಜಿಲ್ಲೆಗಳಲ್ಲಿ ಮತದಾನ:
    ಬೀದರ್, ಚಿತ್ರದುರ್ಗ, ಹಾವೇರಿ, ಕೋಲಾರ, ತುಮಕೂರು ಯಾದಗಿರಿ ಹಾಗೂ ಬಳ್ಳಾರಿಯಲ್ಲಿ ಚುನಾವಣೆ ನಡೆಯುತ್ತಿದೆ. ಬೀದರ್ ಜಿಲ್ಲೆಯಲ್ಲಿ ಒಟ್ಟು 128 ವಾಡ್9ಗಳಿಗೆ ಮತದಾನ ನಡೆಯುತ್ತಿದ್ದು, ಒಟ್ಟು 430 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚಿತ್ರದುರ್ಗದಲ್ಲಿ 31 ವಾರ್ಡ್ ಗಳಲ್ಲಿ ಚುನಾವಣೆ ನಡೆಯುತ್ತಿದೆ. ಇಲ್ಲಿ 122 ಜನ ಅಭ್ಯರ್ಥಿ ಗಳು ಕಣದಲ್ಲಿದ್ದಾರೆ. ಹಾವೇರಿಯಲ್ಲಿ ಬ್ಯಾಡಗಿ ಪುರಸಭೆಯ 23 ಮತ್ತು ಶಿಗ್ಗಾಂವಿ ಪುರಸಭೆಯ 23 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬ್ಯಾಡಗಿ ಪುರಸಭೆಯ 23 ವಾರ್ಡ್ ಗಳಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಪಕ್ಷೇತರರು ಸೇರಿ 79 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಿಗ್ಗಾಂವಿ ಪುರಸಭೆಯ 23 ವಾರ್ಡುಗಳಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರು ಸೇರಿ ಒಟ್ಟು 95 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

    ಕೋಲಾರದಲ್ಲಿ ಮಾಲೂರು, ಬಂಗಾರಪೇಟೆ ಹಾಗೂ ಶ್ರೀನಿವಾಸಪುರ ತಾಲೂಕಿನಲ್ಲಿ ಪುರಸಭೆ ಚುನಾವಣೆ ನಡೆಯುತ್ತಿದೆ. ಮಾಲೂರಿನಲ್ಲಿ ಒಟ್ಟು 27 ವಾರ್ಡ್ ಗಳಿಗೆ ಚುನಾವಣೆ, 79 ಜನ ಕಣದಲ್ಲಿದ್ದಾರೆ. ಬಂಗಾರಪೇಟೆಯಲ್ಲಿ ಒಟ್ಟು 27 ವಾರ್ಡ್ ಗಳಿಗೆ ಚುನಾವಣೆ, 80 ಜನ ಕಣದಲ್ಲಿದ್ದಾರೆ. ಶ್ರೀನಿವಾಸಪುರದಲ್ಲಿ ಒಟ್ಟು 23 ವಾರ್ಡ್ ಗಳಿಗೆ ಚುನಾವಣೆ, 87 ಜನ ಕಣದಲ್ಲಿದ್ದಾರೆ. ಕಳೆದ ಬಾರಿ ಮಾಲೂರಿನಲ್ಲಿ ಬಿಜೆಪಿ, ಬಂಗಾರಪೇಟೆಯಲ್ಲಿ ಕಾಂಗ್ರೆಸ್, ಶ್ರೀನಿವಾಸಪುರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.

    ತುಮಕೂರು ಜಿಲ್ಲೆಯಲ್ಲಿ ಎರಡು ಪುರಸಭೆ, ಒಂದು ಪಟ್ಟಣ ಪಂಚಾಯತ್, ಒಂದು ನಗರ ಸಭೆಗೆ ಇಂದು ಮತದಾನ ನಡೆಯುತ್ತಿದೆ. ಯಾದಗಿರಿ ಜಿಲ್ಲೆಯ ಶಹಾಪುರ ನಗರಸಭೆಗೆ ಇಂದು ಚುನಾವಣೆ ನಡೆಯುತ್ತಿದೆ. ನೂತನವಾಗಿ ಪುನರ್ ವಿಂಗಡಣೆಗೊಂಡಿರುವ ಒಟ್ಟು 31 ವಾರ್ಡ್ ಗಳಿಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿಯ 31 ,ಕಾಂಗ್ರೆಸ್ ನ 29, ಜೆಡಿಎಸ್ ನ 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

  • ಗೆಲುವಿನ ಅಲೆಯಲ್ಲಿ ತೇಲಿದ ಬಿಜೆಪಿ- ‘ಕೈ’ ಕಚ್ಚಿದ ಮತದಾರ- ಮುಗ್ಗರಿಸಿದ ತೆನೆ ಹೊತ್ತ ಮಹಿಳೆ

    ಗೆಲುವಿನ ಅಲೆಯಲ್ಲಿ ತೇಲಿದ ಬಿಜೆಪಿ- ‘ಕೈ’ ಕಚ್ಚಿದ ಮತದಾರ- ಮುಗ್ಗರಿಸಿದ ತೆನೆ ಹೊತ್ತ ಮಹಿಳೆ

    ಶಿವಮೊಗ್ಗ: ಮಹಾನಗರ ಪಾಲಿಕೆಗೆ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. 35 ವಾರ್ಡ್ ಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ. ಕಾಂಗ್ರೆಸ್ ಕೇವಲ 7 ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಕಿಂಗ್ ಮೇಕರ್ ಆಗುವ ಆಸೆ ಇಟ್ಟುಕೊಂಡಿದ್ದ ಜೆಡಿಎಸ್ ಗೆ ಕೇವಲ ಎರಡು ಸ್ಥಾನಗಳು ಮಾತ್ರ ದೊರಕಿವೆ. ಪಕ್ಷೇತರರು ಐವರು ಗೆದ್ದಿದ್ದು, ಎಸ್ ಡಿಪಿಐ ಒಂದು ಸ್ಥಾನದಲ್ಲಿ ಗೆದ್ದಿದೆ. ಹಾಲಿ ಪಾಲಿಕೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುತ್ತಿವೆ.

    ಸತತವಾಗಿ ಐದು ಬಾರಿ ಗೆದ್ದಿದ್ದ ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ ಬಿಜೆಪಿಯ ಗನ್ನಿ ಶಂಕರ್ ಎದರು ಸೋತಿದ್ದಾರೆ. ಕಾಂಗ್ರೆಸ್ ನ ನರಸಿಂಹಮೂರ್ತಿ, ಜೆಡಿಎಸ್ ನ ಮಾಜಿ ಮೇಯರ್ ಪತ್ನಿ ಗೀತಾ ಏಳುಮಲೈ, ಮಾಜಿ ಉಪಮೇಯರ್ ಪಾಲಾಕ್ಷಿ ಸೋಲಿನ ರುಚಿ ನೋಡುವಂತಾಗಿದೆ.

    15ನೇ ವಾರ್ಡ್ ನಲ್ಲಿ ಕಾಂಗ್ರೆಸ್ ನ ರಾಜಶೇಖರ್ ಹಾಗೂ ಜೆಡಿಎಸ್ ನ ಸತ್ಯನಾರಾಯಣ ಇಬ್ಬರೂ ಸಮ ಸಮ ಮತಗಳನ್ನು ಪಡೆದರು. ಅಂತಿಮವಾಗಿ ಚೀಟಿ ಮೂಲಕ ಆಯ್ಕೆ ಮಾಡಿದಾಗ ಜೆಡಿಎಸ್ ಸತ್ಯನಾರಾಯಣ ಅವರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ.

    35 ವಾರ್ಡ್ ಹಾಗೂ ಇಬ್ಬರು ಶಾಸಕರು ಹಾಗೂ ಮೂವರು ವಿಧಾನ ಪರಿಷತ ಸದಸ್ಯರು ಸೇರಿ ಒಟ್ಟು ಸದಸ್ಯರ ಸಂಖ್ಯೆ 40. ಪಾಲಿಕೆ ಅಧಿಕಾರ ಹಿಡಿಯಲು 21 ಸದಸ್ಯರ ಬೆಂಬಲ ಬೇಕು. ಈ ಹಿನ್ನೆಲೆಯಲ್ಲಿ ಬಿಜೆಪಿ ಗೆದ್ದ ಅಭ್ಯರ್ಥಿಗಳು 20 ಜನ ಹಾಗೂ ನಾಲ್ವರು ಶಾಸಕರು ಸೇರಿ ಸದಸ್ಯ ಬಲ 25 ತಲುಪಿದೆ. ಈ ಮೂಲಕ ಬಿಜೆಪಿ ನಿಚ್ಚಳ ಬಹುಮತ ಪಡೆದಿದೆ.

    ಕಾಂಗ್ರೆಸ್ ಹಿನ್ನಡೆಗೆ ಕಾರಣಗಳೇನು?
    ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಕಾಂಗ್ರೆಸ್ ತಿದ್ದುಕೊಳ್ಳಲಿಲ್ಲ. ಪಕ್ಷದೊಳಗಿನ ಭಿನ್ನಮತ ಶಮನಗೊಳಿಸಲು ಹಿರಿಯ ನಾಯಕರು ದಿಟ್ಟ ಹೆಜ್ಜೆ ಇಡಲೇ ಇಲ್ಲ. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕಾಶಿ ವಿಶ್ವನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್ ಇನ್ನಿತರ ಮುಖಂಡರಿಗೆ ಕಾಂಗ್ರೆಸ್ ಟಿಕೆಟ್ ದೊರಕಲಿಲ್ಲ. ಇದು ಒಟ್ಟಾರೆಯಾಗಿ ಕಾಂಗ್ರೆಸ್ ಕಾರ್ಯಕರ್ತರ ಆತ್ಮವಿಶ್ವಾಸ ಕುಗ್ಗಿಸಿತು. ಇದಲ್ಲದೇ, ಪ್ರಚಾರ ವಿಷಯದಲ್ಲೂ ಕೂಡ ಒಗ್ಗಟ್ಟಾದ ಪ್ರಯತ್ನ ಕಾಂಗ್ರೆಸ್ ನಾಯಕರಲ್ಲಿ ಕಂಡು ಬರಲಿಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇಲ್ಲಿಗೆ ಬಂದು ಪ್ರಚಾರ ಮಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ.

    ಕಿಂಗ್ ಮೇಕರ್ ಆಗುವ ನಿರೀಕ್ಷೆಯಲ್ಲಿದ್ದ ಜೆಡಿಎಸ್!
    ಕಳೆದ ಬಾರಿ ಕೇವಲ ಐದು ಸ್ಥಾನದಲ್ಲಿ ಗೆದ್ದಿದ್ದ ಜೆಡಿಎಸ್ ಕಾಂಗ್ರೆಸ್ ಜೊತೆ ಸೇರಿ ಅಧಿಕಾರ ಹಿಡಿದಿತ್ತು. ಈ ಬಾರಿಯೂ ಸಹ 8-10 ಸ್ಥಾನ ಗೆದ್ದು ಕಿಂಗ್ ಮೇಕರ್ ಆಗುವ ಉಮೇದಿನಲ್ಲಿ ಜೆಡಿಎಸ್ ನಾಯಕರು ಇದ್ದರು. ಆದರೆ, ನಗರದಲ್ಲಿ ಜೆಡಿಎಸ್ ಒಟ್ಟಾರೆಯಾಗಿ ಶಿಥಿಲಗೊಂಡಿದೆ. ಮೂರು ವಾರ್ಡ್ ಗಳಲ್ಲಿ ಜೆಡಿಎಸ್ ಗೆ ಅಭ್ಯರ್ಥಿಗಳೇ ಸಿಕ್ಕಿಲ್ಲ. ಹಾಲಿ ಮೇಯರ್ ಆಗಿದ್ದ ಜೆಡಿಎಸ್ ನಾಗರಾಜ್ ಕಂಕಾರಿ ಹಾಗೂ ಚೀಟಿ ಮೂಲಕ ಆಯ್ಕೆ ಗೊಂಡ ಸತ್ಯನಾರಾಯಣ ಇಬ್ಬರೇ ಇಬ್ಬರು ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಇನ್ನುಳಿದ ಕಡೆ ತೆನೆಹೊತ್ತ ಮಹಿಳೆ ಹೀನಾಯ ಸೋಲು ಕಂಡಿದ್ದಾಳೆ.

    ಬಸವನಗುಡಿ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಹೆಗ್ಡೆ 2246 ಮತಗಳ ಅಂತರ ದಿಂದ ಗೆದ್ದಿದ್ದಾರೆ. ಇದು ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ದೊರಕಿರುವ ಅತ್ಯಧಿಕ ಅಂತರ. ಮೆಲ್ಲೇಶ್ವರ ವಾರ್ಡ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಲ್ಲಾ ಬಜರಂಗದಳ ಸಂಚಾಲಕ ದೀನದಯಾಳು ಕಾಂಗ್ರೆಸ ಅಭ್ಯರ್ಥಿ ಎದುರು ಸೋತಿದ್ದಾರೆ.

    ಬಿಜೆಪಿ ಗೆದ್ದಿದ್ದು ಹೇಗೆ?
    ಮುಖ್ಯವಾಗಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಮತಗಳು ದೊರಕಿದ್ದವು. ಇದೇ ಹವಾ ಪಾಲಿಕೆ ಚುನಾವಣೆಯಲ್ಲಿ ಪುನಾರವರ್ತನೆ ಆಗಿದೆ. ಬಿಜೆಪಿಯಲ್ಲಿ ಅತೀ ಹೆಚ್ಚು ಬಂಡಾಯ ಅಭ್ಯರ್ಥಿಗಳೂ ಇದ್ದರು. ಅವರನ್ನು ಮನವೊಲಿಸಿ ಕಣದಿಂದ ನಿವೃತ್ತಿಗೊಳಿಸುವಲ್ಲಿ ಹಿರಿಯ ನಾಯಕರು ಸಫಲರಾಗಿದ್ದರು. ಆದರೂ, ಕಣದಲ್ಲಿ ಇದ್ದ ಬಿಜೆಪಿ ಅಭ್ಯರ್ಥಿಗಳೂ ಗೆಲವು ಸಾಧಿಸಿದ್ದಾರೆ. ಬಿಜೆಪಿ- ಕೆಜೆಪಿ ಭಿನ್ನತೆ ಈ ಚುನಾವಣೆಯಲ್ಲಿ ಕಂಡರೂ ಕೂಡ ಅದು ಗೆಲವಿನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

    ಮುಖ್ಯವಾಗಿ ಬಿಜೆಪಿಗೆ ಬಲ ತಂದು ಕೊಟ್ಟದ್ದು ಅವರ ನಾಯಕರು ಹೇಳುವ ಪ್ರಕಾರ ಹಿಂದುತ್ವದ ಅಂಶ. ಇದರೊಂದಿಗೆ ನಾಯಕರ ಸಂಘಟಿತ ಪ್ರಯತ್ನ. ಶಾಸಕರಾದ ಕೆ.ಎಸ್.ಈಶ್ವರಪ್ಪ, ಅಶೋಕ್ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಆಯನೂರು ಮಂಜುನಾಥ ವಾರ್ಡ್ ಗಳನ್ನು ಹಂಚಿಕೊಂಡು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿದರು. ಇವುಗಳ ಜೊತೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಸಮ್ಮಿಶ್ರ ಸರ್ಕಾರದ ಬಗ್ಗೆ ನಗರದ ಜನತೆಗೆ ಇರುವ ತಿರಸ್ಕಾರ ಮನೋಭಾವ ಕೂಡ ಬಿಜೆಪಿ ಪರವಾಗಿ ಕೆಲಸ ಮಾಡಿದೆ. ಈ ಎಲ್ಲಾ ಕಾರಣಗಳಿಂದ ಬಿಜೆಪಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ.

    ಇಷ್ಟೇ ಕಾರಣಗಳೇ?
    ಮೊಟ್ಟ ಮೊದಲ ಬಾರಿಗೆ ನಡೆದ ಮಹಾನಗರ ಪಾಲಿಕೆ ಚುನಾವಣೆ ಹಲವು ಅಂಶಗಳಿಂದ ಗಮನ ಸೆಳೆಯಿತು. ಮುಖ್ಯವಾಗಿ ಈ ಬಾರಿ ಪಕ್ಷಾತೀತವಾಗಿ ಮತದಾರರನ್ನು ಕೊಳ್ಳುವ ಪ್ರಯತ್ನಗಳು ನಡೆದವು. ಈ ಕಾರಣದಿಂದ ಮತ ಖರೀದಿ ಬಗ್ಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದರೂ ಯಾವುದೇ ದೂರು ದಾಖಲಾಗಿಲ್ಲ. ಪಕ್ಷಗಳ ತತ್ವ ಸಿದ್ಧಾಂತದ ಜೊತೆ ಹಣವೂ ಈ ಭಾರಿಯ ಚುನಾವಣೆಯಲ್ಲಿ ಪ್ರಾಮುಖ್ಯಗಳಿಸಿತು. ಹಣವಿಲ್ಲದೆ ಚುನಾವಣೆ ಸಾಧ್ಯವಿಲ್ಲ ಎಂಬುದನ್ನು ದೃಢಪಡಿಸಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾನೂ ವೋಟ್ ಹಾಕುತ್ತೇನೆಂದು ಹಠ ಹಿಡಿದ 3ರ ಪೋರ- ಕೈಗೆ ಇಂಕ್ ಹಾಕಿಸಿಕೊಂಡು ಖುಷಿಪಟ್ಟ

    ನಾನೂ ವೋಟ್ ಹಾಕುತ್ತೇನೆಂದು ಹಠ ಹಿಡಿದ 3ರ ಪೋರ- ಕೈಗೆ ಇಂಕ್ ಹಾಕಿಸಿಕೊಂಡು ಖುಷಿಪಟ್ಟ

    ಉಡುಪಿ: ಅಪ್ಪ ಅಮ್ಮನ ಜೊತೆ ಹೋಗಿ ನಾನೂ ವೋಟ್ ಹಾಕುತ್ತೇನೆ ಅಂತಾ ನಿಟ್ಟೂರಿನ 3 ವರ್ಷದ ಪೋರ ಹಠ ಹಿಡಿದು, ಕೊನೆಗೆ ಅತ್ತು ಕರೆದು ಕೈಗೆ ಇಂಕ್ ಹಾಕಿಸಿಕೊಂಡಿದ್ದಾನೆ.

    ಹಾಲುಗಲ್ಲದ ಹಸುಳೆ ರಿಹಾಂಶ್‍ಗೆ ಈಗ ಮೂರರ ಹರೆಯ. ಇವನು ಉಡುಪಿ ಶಾಸಕ ರಘುಪತಿ ಭಟ್ಟರ ಮಗ. ಅಪ್ಪ ಅಮ್ಮನ ಜೊತೆಗೆ ಮತಗಟ್ಟೆಗೆ ಬಂದ, ಅವರು ಮತದಾನ ಮಾಡಲು ಹೋಗುತ್ತಿದ್ದಂತೆ ನಾನೂ ವೋಟ್ ಹಾಕುತ್ತೇನೆ ಅಂತಾ ಹಠ ಮಾಡಿ, ಅಳಲಾರಂಭಿಸಿದ್ದಾನೆ. ಶಾಸಕರ ಕಾರು ಚಾಲಕ ವಿಜಯ್, ಅಧಿಕಾರಿಗಳ ಬಳಿಗೆ ರಿಹಾಂಶ್‍ನನ್ನು ಕರದೊಯ್ದರು. ಮತಗಟ್ಟೆಯ ಹೊರಗೆ ಕುಳಿತ್ತಿದ್ದ ಅಧಿಕಾರಿಗಳು ಪೆನ್ನಿನಿಂದ ರಿಹಾಂಶ್ ಎಡಗೈ ತೋರ್ಬೆರಳಿಗೆ ಶಾಹಿಮುದ್ರೆ ಹಾಕಿಸಿದ್ದಾರೆ. ಆಗ ಆತನು ಅಳುವುದನ್ನು ನಿಲ್ಲಿಸಿದ್ದಾನೆ.

    ಗಮ್ಮತ್ತು ಏನಂದರೆ ಶಾಹಿ ಹಾಕ್ಕೊಂಡು ಬಂದವನೇ ವಿಕ್ಟರಿ ಸಿಂಬಲ್ ತೋರಿಸುತ್ತಾನೆ. ಮೋದಿ ಗೆಲ್ತಾರೆ ಅಂತಾನೆ. ನಾಳೆ ಪೇಪರಲ್ಲಿ ಫೋಟೋ ಹಾಕಿ ಅಂತಾ ಮಾಧ್ಯಮದವರಿಗೆ ಮನವಿ ಮಾಡಿಕೊಂಡಿದ್ದಾನೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ರಘುಪತಿ ಭಟ್, ಕಳೆದ ಕೆಲವು ದಿನಗಳಿಂದ ಮನೆಯಲ್ಲಿ ಚುನಾವಣೆಯದ್ದೇ ವಾತಾವರಣ. ಹಾಗಾಗಿ ವೋಟ್ ಹಾಕುತ್ತೇನೆ ಅಂತಾ ಹಠ ಮಾಡುತ್ತಿದ್ದ. ಆತ ಕೂಡ ನಮ್ಮಂತೆ ಮೋದಿ ಅಭಿಮಾನಿ ಅಂತಾ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಲ್ಲು ತೂರಾಟ

    ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಲ್ಲು ತೂರಾಟ

    ಯಾದಗಿರಿ: ಸ್ಥಳೀಯ ಚುನವಾಣೆಗೂ ಮುನ್ನ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆ ಬಳಿ ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ.

    ಗುರುವಾರ ಸಂಜೆ ಸುರಪುರ ಪಟ್ಟಣದ ವಡ್ಡರ ಓಣಿಯ ವಾರ್ಡ್ ನಂಬರ್ 28 ಬಳಿ ಪ್ರಚಾರಕ್ಕೆ ಬಿಜೆಪಿಯವರು ತೆರಳಿದ್ದರು. ಆಗ ಕೆಲವರು ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.

    ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಎಸ್‍ಪಿ ಯಡಾ ಮಾರ್ಟಿನ್, ಗುಂಪನ್ನು ಚದುರಿದ್ದಾರೆ. ಸುರಪುರ ಪಟ್ಟಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದರಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

    ವಿಧಾನಸಭಾ ಚುನಾವಣೆ ಮುನ್ನವೂ ಸುರಪುರ ಪಟ್ಟಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಗಳವಾಗಿತ್ತು. ಈಗ ಇದು ಮರುಕಳಿಸಿದ್ದು, ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋಮುವಾದಿಗಳನ್ನು ದೂರವಿಡಲು ಮೈತ್ರಿ ಸರ್ಕಾರ ರಚನೆ- ಈಶ್ವರ್ ಖಂಡ್ರೆ

    ಕೋಮುವಾದಿಗಳನ್ನು ದೂರವಿಡಲು ಮೈತ್ರಿ ಸರ್ಕಾರ ರಚನೆ- ಈಶ್ವರ್ ಖಂಡ್ರೆ

    ಹಾಸನ: ಕೋಮುವಾದಿಗಳನ್ನು ದೂರವಿಡಲು ಅನಿವಾರ್ಯವಾಗಿ ಪಕ್ಷದ ವರಿಷ್ಠರು ಮೈತ್ರಿ ಸರ್ಕಾರ ರಚನೆಗೆ ಒಪ್ಪಿಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಶೇಕಡ 70 ರಷ್ಟು ನಮ್ಮ ಪಾಲುದಾರಿಕೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

    ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಯಲು ಶೌಚ ಮುಕ್ತ ಯೋಜನೆಯನ್ನು ಜಾರಿಗೆ ತಂದು, ಅದನ್ನು ಯಶಸ್ವಿಗೊಳಿಸಲು ಕೇಂದ್ರ ಯುಪಿಎ ಸರ್ಕಾರ ಶ್ರಮಿಸಿತ್ತು. ಆದರೆ ಈಗ ಬಿಜೆಪಿಯವರು ಸ್ವಚ್ಛ ಭಾರತವೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದರು.

    ಕಾಂಗ್ರೆಸ್ಸಿಗೆ ಬಹುಮತ ನೀಡಲಿಲ್ಲ ಅಂತಾ ರಾಜ್ಯದ ಜನರು ಪರಿತಪಿಸುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಹೆದರುವ ಅಗತ್ಯವಿಲ್ಲ. ಮುಂದೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ರಾಜಕೀಯ ದಿಕ್ಸೂಚಿ ಆಗಲಿದೆ. ಕಳೆದ ಬಾರಿ ನಮ್ಮ ಪಕ್ಷಕ್ಕೆ ಬಹುಮತ ಸಿಕ್ಕಿತ್ತು. ಆದರೆ ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಅಪಪ್ರಚಾರ ಮಾಡಿ, ಜನತೆಯ ದಾರಿ ತಪ್ಪಿಸಿದ್ದವು. ಹೀಗಾಗಿ ನಮ್ಮ ಫಲಿತಾಂಶದಲ್ಲಿ ಕೊಂಚ ಏರುಪೇರಾಗಿದೆ ಎಂದು ದೂರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಂಗ್ರೆಸ್, ಜೆಡಿಎಸ್‍ನವರು ಬಟ್ಟೆ ಬಿಚ್ಚಿ ಬೇಕಾದ್ರೆ ಕುಣಿಲಿ-ನಮಗೆ ಸಂಬಂಧ ಇಲ್ಲ: ಸೋಮಣ್ಣ ವ್ಯಂಗ್ಯ

    ಕಾಂಗ್ರೆಸ್, ಜೆಡಿಎಸ್‍ನವರು ಬಟ್ಟೆ ಬಿಚ್ಚಿ ಬೇಕಾದ್ರೆ ಕುಣಿಲಿ-ನಮಗೆ ಸಂಬಂಧ ಇಲ್ಲ: ಸೋಮಣ್ಣ ವ್ಯಂಗ್ಯ

    ತುಮಕೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಸ್ ಮೈತ್ರಿ ಮಾಡಿಕೊಂಡರೆ ಮಾಡಿಕೊಳ್ಳಲಿ ಇಲ್ಲವೇ ಬಟ್ಟೆ ಬಿಚ್ಚಿ ಕುಣಿಯಲಿ, ನಮ್ಮ ಕೆಲಸ ನಾವು ಮಾಡಿಕೊಂಡು ಹೋಗುತ್ತೇವೆ ಎಂದು ಮಾಜಿ ಸಚಿವ ವಿ ಸೋಮಣ್ಣ ವ್ಯಂಗ್ಯವಾಡಿದ್ದಾರೆ.

    ಇಂದು ತುಮಕೂರು ಸಿದ್ದಗಂಗಾ ಮಠ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಮುಖ್ಯ ಮಂತ್ರಿಯಾಗಿ ಕುಮಾರಸ್ವಾಮಿ ಸಂಕಷ್ಟ ಪರಿಸ್ಥಿತಿಯಲ್ಲಿ ಇದ್ದಾರೆ. ಸಿಎಂ ಆಗಿ ಅವರು ತಮ್ಮ ಕೆಲಸ ತಾವು ಮಾಡುತ್ತಿದ್ದಾರೆ. ಆದರೆ 37 ಶಾಸಕರೊಂದಿಗೆ ಅವರೊಂದಿಗೆ ಸಂಕಷ್ಟ ಅನುಭವಿಸುತ್ತಿದ್ದು, ಮತ್ತೊಬ್ಬ ಶಾಸಕನನ್ನು ಕರೆತರುವ ಶಕ್ತಿ ಇಲ್ಲ. ಅದ್ದರಿಂದ ಅವರು ಎರವಲು ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಯಾಗಿ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಅವರು ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಿ ಅಥವಾ ಬಟ್ಟೆ ಬಿಚ್ಚಿ ಬೇಕಾದರು ಕುಣಿಯಲಿ ನಮಗೇ ಸಂಬಂಧವಿಲ್ಲ ಎಂದರು.

    ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿ ಜನರ ಮುಂದೇ ಹೋಗುತ್ತೇವೆ. ಆದರೆ ಜನರು ಯಾರು ಗೆಲ್ಲ ಬೇಕು ಎಂದು ತೀರ್ಮಾನಿಸುತ್ತಾರೆ. ಬಿಜೆಪಿ ಏಕಾಂಗಿಯಾಗಿ ಹೋರಾಟ ಮಾಡಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ: ಮಾಜಿ ಸಿಎಂ

    ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ: ಮಾಜಿ ಸಿಎಂ

    ಹುಬ್ಬಳ್ಳಿ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ನೊಂದಿಗೆ ಯಾವುದೇ ಮೈತ್ರಿ ಇಲ್ಲವೆಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

    ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸದ್ಯ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ನೊಂದಿಗೆ ಯಾವುದೇ ಮೈತ್ರಿ ಇಲ್ಲವೆಂದು ತಿಳಿಸಿದ್ದಾರೆ. ಅಲ್ಲದೆ ಮೈತ್ರಿ ವಿಚಾರ ಜಿಲ್ಲಾ ಮಟ್ಟದ ನಾಯಕರಿಗೆ ಬಿಟ್ಟಿದ್ದು, ಈ ವಿಚಾರವಾಗಿ ಜಿಲ್ಲಾ ಮಟ್ಟದ ನಾಯಕರುಗಳ ಯಾವ ರೀತಿ ತೀರ್ಮಾನ ಕೈಗೊಳ್ಳುತ್ತಾರೋ ಹಾಗೆ ಮುಂದುವರೆಯುತ್ತೆ ಎಂದು ಹೇಳಿದರು.

    ಲೋಕಸಭಾ ಮೈತ್ರಿ ವಿಚಾರವನ್ನು ಸಮನ್ವಯ ಸಮಿತಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಬಹುತೇಕ ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಅಲಯನ್ಸ್ ಆಗುತ್ತವೆ. ಸಮ್ಮಿಶ್ರ ಸರ್ಕಾರದಲ್ಲಿನ ಯಾವುದೇ ಸಮಸ್ಯೆಗಳನ್ನು ಬಹಿರಂಗವಾಗಿ ಚರ್ಚೆ ನಡೆಸುವುದು ಸರಿಯಲ್ಲ. ಅದಕ್ಕಾಗಿ ಸಮನ್ವಯ ಸಮಿತಿಯನ್ನು ಸಿದ್ದಪಡಿಸಿದ್ದೇವೆ. ಎಲ್ಲರೂ ಸಮಿತಿಯ ರೀತಿ-ನೀತಿಗಳಿಗೆ ಬದ್ಧರಾಗಿರಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮನ್ವಯತೆಯಿಂದ ನಡೆಯಬೇಕಿದೆ. ಹೀಗಾಗಿ ಕೆಲವೊಂದು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ ಎಂದು ಅವರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕಾಲುವೆಯಿಂದ ನೀರು ಬಿಟ್ಟಹಾಗೆ ಸರ್ಕಾರ ಕೂಡ ಬೀಳ್ಬೋದು: ಡಿವಿಎಸ್ ವ್ಯಂಗ್ಯ

    ಕಾಲುವೆಯಿಂದ ನೀರು ಬಿಟ್ಟಹಾಗೆ ಸರ್ಕಾರ ಕೂಡ ಬೀಳ್ಬೋದು: ಡಿವಿಎಸ್ ವ್ಯಂಗ್ಯ

    ಬೆಂಗಳೂರು: ರಾಜ್ಯದ ರಾಜಕಾರಣ ನಿಂತ ನೀರಲ್ಲ. ಸಾಕಷ್ಟು ಮಳೆಯಾಗಿ ಜಲಾಶಯಗಳು ಭರ್ತಿಯಾಗಿದ್ದು, ಕ್ರಸ್ಟ್ ಗೇಟ್ ತೆರೆದು ನೀರು ಹೊರಬಿಡುವಂತೆ ಯಾವುದೇ ಕ್ಷಣದಲ್ಲಿ ಬೇಕಾದರೂ ಸರ್ಕಾರ ಬೀಳಬಹುದು ಅಂತ ಕೇಂದ್ರ ಸಚಿವ ಸದಾನಂದಗೌಡ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾವು ಯಾವುದೇ ಸರ್ಕಾರವನ್ನು ಬೀಳಿಸುವ ಕೆಲಸ ಮಾಡಲ್ಲ. ಸರ್ಕಾರವೇ ತನ್ನಷ್ಟಕ್ಕೆ ತಾನೇ ಉರುಳಿಹೋಗುತ್ತೆ. ಇದನ್ನು ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ. ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ರಾಜ್ಯದ ರಾಜಕಾರಣ ನಿಂತ ನೀರಲ್ಲ. ಕ್ರಸ್ಟ್ ಗೇಟ್ ತೆರೆದು ಜಲಾಶಯಗಳಲ್ಲಿ ನೀರು ಹೊರಬಿಡುವಂತೆ ಯಾವುದೇ ಕ್ಷಣದಲ್ಲಿ ಬೇಕಾದರೂ ಸರ್ಕಾರ ಬೀಳಬಹುದು. ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಸಿದರು.

    ಇದೇ ವೇಳೆ ಮುಂದೆ ಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಹಾಗೂ ಬಿಜೆಪಿ ಅವರಿಗೆ ಬುದ್ಧಿ ಕಲಿಸುತ್ತಾರೆ. ಅದ್ದರಿಂದ 70% ರಷ್ಟು ಸ್ಥಾನಗಳು ಬಿಜೆಪಿಗೆ ಸಿಗುತ್ತವೆ ಎಂಬ ವಿಶ್ವಾಸವಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕಾಲದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಹಗರಣಗಳು ಮುಂದುವರಿದ್ದು, ಮೊದಲು ಅವರು ಒಬ್ಬರೇ ಲೂಟಿ ಮಾಡುತ್ತಿದ್ದರು. ಈಗ ಇಬ್ಬರು ಸೇರಿಕೊಂಡು ಲೂಟಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಲೂಟಿ ಮಾಡುವ ಸರ್ಕಾರವಿದ್ದು, ಭ್ರಷ್ಟಾಚಾರಕ್ಕೆ ಇಬ್ಬರು ಕ್ಯಾಪ್ಟನ್ ಗಳಾಗಿದ್ದಾರೆ. ತಮ್ಮ ತಪ್ಪುಗಳನ್ನ ಮರೆಮಾಚಲು ಪ್ರತ್ಯೇಕ ಉತ್ತರ ಕರ್ನಾಟಕ ವಿಚಾರವನ್ನು ಎಳೆದು ತಂದಿದ್ದಾರೆ ಎಂದು ಆರೋಪಿಸಿದರು.

    ಸಿಎಂ ಕಣ್ಣೀರಿಗೆ ವ್ಯಂಗ್ಯ:
    ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸಿಎಂ ಆಗಬೇಕಿತ್ತೆಂಬ ನೋವು ಎಲ್ಲರ ಮನಸ್ಸಿನಲ್ಲಿ ಇದ್ದು, ಸಣ್ಣ ಪುಟ್ಟ ಕಾರಣಗಳಿಂದ ಕೇಂದ್ರ ನಿರೀಕ್ಷೆಯಂತೆ ನಾವು ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವವರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಸಿಎಂ ಆಗುವವರಿಗೆ ಎದೆಗಾರಿಗೆ ಇರಬೇಕು. ಜನರ ಸಮಸ್ಯೆ ಎಷ್ಟೇ ಕಠಿಣವಾಗಿದ್ದರೂ ಅದಕ್ಕೆ ಪರಿಹಾರ ಕಂಡು ಹಿಡಿರುವ ಶಕ್ತಿ ಇರಬೇಕು. ಆದರೆ ಕಣ್ಣೀರು ಹಾಕೋಕು ಇತಿಮಿತಿ ಇದೆ. ಎರಡು ಮೂರು ಕರ್ಚಿಫ್ ಒದ್ದೆ ಆಗೋಷ್ಟು ಕಣ್ಣೀರು ಮುಖ್ಯಮಂತ್ರಿ ಹಾಕುತ್ತಾರೆ ಎಂದರೇ ಆ ಕರ್ಚಿಫ್ ಅಲ್ಲಿ ಅದೇನಿತ್ತೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.