Tag: ಸೋಲಾರ್ ಪವರ್ ಪ್ಲಾಂಟ್

  • ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಮಗಳ ಐಶ್ವರ್ಯವೇ ಮುಳುವಾಗುತ್ತಾ..?

    ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಮಗಳ ಐಶ್ವರ್ಯವೇ ಮುಳುವಾಗುತ್ತಾ..?

    – 78 ಕೋಟಿ ಹಣ ಸುರಿದಿದ್ದ ಕನಕಪುರ ಬಂಡೆ

    ಬೆಂಗಳೂರು: ಮಗಳು ಐಶ್ವರ್ಯಾ ತನ್ನ ಕಾಲಿನ ಮೇಲೆ ನಿಲ್ಲುವಂತೆ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೋಟಿಗಟ್ಟಲೆ ಹಣವನ್ನು ಸುರಿದಿದ್ದರು. ಇದೀಗ ಅದೇ ಡಿಕೆಶಿಗೆ ಮುಳುವಾಯಿತಾ ಎಂಬ ಅನುಮಾನ ಮೂಡಿದೆ.

    ಡಿಕೆ ಶಿವಕುಮಾರ್ ಸೋಲಾರ್ ಮತ್ತು ಸೇಲ್ ಪ್ರಾಜೆಕ್ಟ್ ಗೆ ಬರೋಬ್ಬರಿ 78 ಕೋಟಿ ಹಣ ಸುರಿದಿದ್ದರು. ಆದರೆ ಈ ಹಣದ ಮೂಲದ ಬಗ್ಗೆ ಡಿ.ಕೆ ಶಿವಕುಮಾರ್ ಯಾವುದೇ ಉತ್ತರ ನೀಡಿರಲಿಲ್ಲ.

    ಸೋಲಾರ್ ಮತ್ತು ಸೇಲ್ಸ್ ಪ್ರಾಜೆಕ್ಟ್ ಗೆ ಬರೋಬ್ಬರಿ 78 ಕೋಟಿ ವ್ಯವಹಾರ ನಡೆದಿತ್ತು. ಇದನ್ನು ಪ್ರಶ್ನಿಸಿದರೆ ನನ್ನ ಹಿತೈಷಿಗಳು, ಕುಟುಂಬದವರು ಹಾಗೂ ಸ್ನೇಹಿತರು ಕೊಟ್ಟ ಹಣ ಎಂದಿದ್ದರು. ಇದು ಕೂಡ ಮನಿ ಲ್ಯಾಂಡರಿಂಗ್ ನಿಂದಲೇ ಬಂದಿದ್ದು ಅನ್ನೋ ಅನುಮಾನ ಇಡಿಗೆ ಇದೆ. ಇದನ್ನೇ ಮೂಲವಾಗಿಟ್ಟುಕೊಂಡು ಸಿಬಿಐ ದಾಳಿ ಮಾಡಿದೆ ಎನ್ನಲಾಗಿದೆ. ಹೀಗಾಗಿ ಡಿ.ಕೆ ಶಿವಕುಮಾರ್ ತನ್ನ ಮಗಳು ಐಶ್ವರ್ಯಗಾಗಿ ಮಾಡಿದ್ದ ಆಸ್ತಿಯೇ ಮುಳುವಾಯಿತಾ ಎಂಬ ಪ್ರಶ್ನೆ ಮೂಡಿದೆ.

    ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಬಳಿಕ ಸಿಬಿಐನಿಂದ ತನಿಖೆ ಆರಂಭವಾಗಿದೆ. ಇದೀಗ ಡಿಕೆಶಿಯ ಸೋಲಾರ್ ಪ್ಲಾಂಟ್ ಮೇಲೆ ಸಿಬಿಐ ಕಣ್ಣಾಕಿದೆ. ಸೋಲಾರ್ ಪ್ಲಾಂಟ್ ಬಳ್ಳಾರಿಯ ಹಗರಿಬೊಮ್ಮನಹಳ್ಳಿ ಗದ್ದಿನಕೇರಿಯಲ್ಲಿದ್ದು, 1,950 ಎಕರೆಯಲ್ಲಿ ನಿರ್ಮಾಣವಾಗಿರುವ ದೇಶದ ಅತಿ ದೊಡ್ಡ ಪ್ಲಾಂಟ್ ಆಗಿದೆ. ಈ ಬಗ್ಗೆ ದಾಖಲೆಗಳನ್ನು ಪಡೆದು ಇಡಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಈಗ ಸಿಬಿಐ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತಿದೆ.

    ಆಗ ಡಿಕೆ ಶಿವಕುಮಾರ್ ಸೋಲಾರ್ ಪವರ್ ಪ್ಲಾಂಟ್‍ನ ಗುತ್ತಿಗೆ ನೀಡಲು ಬರೋಬ್ಬರಿ 350 ಕೋಟಿ ಕಿಕ್ ಬ್ಯಾಗ್ ಪಡೆದುಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಡಿ.ಕೆ ಶಿವಕುಮಾರ್ ಜೊತೆಗೆ ಡಿ.ಕೆ.ಸುರೇಶ್, ತಾಯಿ, ಪುತ್ರಿ, ಪತ್ನಿ, ಡೈವರ್, ಉದ್ಯಮಿ ಸಚಿನ್ ನಾರಾಯಣ್, ದೆಹಲಿಯ ಆಪ್ತ ಸಹಾಯಕ ಆಂಜನೇಯ, ಲಕ್ಷ್ಮಿ ಹೆಬ್ಬಾಳಕರ್, ಮಾಜಿ ಶಾಸಕ ರಾಜಣ್ಣ, ಆಪ್ತ ವಿಜಯ್ ಮುರಗುಂದ್, ಮತ್ತೊರ್ವ ಆಪ್ತ ಶರ್ಮಾರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಈಗ ಸಿಬಿಐನಿಂದ ಆಂಜನೇಯ, ವಿಜಯ್ ಮುರಗುಂದ್  ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರಣೆ ಮಾಡುವ ಸಾಧ್ಯತೆ ಇದೆ.

  • ಇಡಿ ವಶದಲ್ಲಿದೆ ಸೋಲಾರ್ ಪವರ್ ಪ್ಲಾಂಟ್ ದಾಖಲೆ- ಟ್ರಬಲ್ ಶೂಟರ್‌ಗೆ ಹೆಚ್ಚಾದ ಸಂಕಷ್ಟ

    ಇಡಿ ವಶದಲ್ಲಿದೆ ಸೋಲಾರ್ ಪವರ್ ಪ್ಲಾಂಟ್ ದಾಖಲೆ- ಟ್ರಬಲ್ ಶೂಟರ್‌ಗೆ ಹೆಚ್ಚಾದ ಸಂಕಷ್ಟ

    ಬೆಂಗಳೂರು: ಇಡಿ ಬಂಧನದಲ್ಲಿರುವ ಟ್ರಬಲ್ ಶೂಟರ್ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಇಷ್ಟು ದಿನ ದೆಹಲಿಯ ಮನೆಯಲ್ಲಿ ಸಿಕ್ಕ ಹಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದ ಇಡಿ, ಈಗ ಬಳ್ಳಾರಿಯಲ್ಲಿನ ಸೋಲಾರ್ ಪವರ್ ಪ್ಲಾಂಟ್(ಸೌರಶಕ್ತಿ ಉತ್ಪಾದನಾ ಸ್ಥಾವರ) ಮೇಲೆ ಕಣ್ಣು ಹಾಕಿದೆ.

    ದೆಹಲಿಯಲ್ಲಿ ಸಿಕ್ಕ 8.59 ಕೋಟಿ ರೂಪಾಯಿ ಬೆನ್ನಹಿಂದೆ ಬಿದ್ದಿರುವ ಇಡಿ ಅಧಿಕಾರಿಗಳು ಈಗ ಬಳ್ಳಾರಿಯಲ್ಲಿನ ಸೋಲಾರ್ ಪವರ್ ಪ್ಲಾಂಟ್ ಮೇಲೆ ಕಣ್ಣು ಹಾಕಿದ್ದಾರೆ. ಹಗರಿಬೊಮ್ಮನ ಹಳ್ಳಿಯಲ್ಲಿ 1,950 ಎಕರೆ ಭೂಮಿಯಲ್ಲಿರುವ ಸೋಲಾರ್ ಪವರ್ ಪ್ಲಾಂಟ್ ನ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಈ ಯೋಜನೆಯಲ್ಲಿ ಡಿಕೆಶಿಯವರದ್ದೇ ಶೇಕಡ 60ರಷ್ಟು ಪಾಲುದಾರಿಕೆ ಇದೆ ಎನ್ನಲಾಗಿದ್ದು, ಒಂದು ವೇಳೆ ಇದು ಅಕ್ರಮವೆಂದು ಮೇಲ್ನೋಟಕ್ಕೆ ಕಂಡುಬಂದಲ್ಲಿ ಈ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳಲು ಇಡಿಗೆ ಅವಕಾಶವಿದೆ. ಸದ್ಯ ಇಡಿ ಅಧಿಕಾರಿಗಳ ಸುಪರ್ದಿಗೆ ಸೊಲಾರ್ ಪವರ್ ಪ್ಲಾಂಟ್‍ನ ದಾಖಲೆಗಳು ಸಿಕ್ಕಿರುವುದು ಡಿಕೆಶಿ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಸೋಲಾರ್ ಪವರ್ ಪ್ಲಾಂಟ್ ಬಿಡಿಸಿಕೊಳ್ಳಬೇಕು ಎಂದರೆ ಡಿಕೆಶಿ ನ್ಯಾಯಾಲಯದ ಮೊರೆ ಹೋಗಬೇಕಿದೆ.

    ಅಕ್ರಮ ಹಣ ವರ್ಗಾವಣೆ, ಹವಾಲಾ ಕೇಸ್‍ನಲ್ಲಿ ಕಳೆದೊಂದು ವಾರದಿಂದ ಇಡಿ ಹಿಡಿತದಲ್ಲಿರುವ ಕನಕಪುರ ಬಂಡೆ ಡಿಕೆಶಿ ಬಳಲಿ ಬೆಂಡಾಗಿದ್ದಾರೆ. ಡಿಕೆಶಿ ಇಂದು ಏಳನೇ ದಿನದ ವಿಚಾರಣೆ ಎದುರಿಸಲಿದ್ದಾರೆ. ಸೆಪ್ಟೆಂಬರ್ 4 ರಿಂದ 13 ರವರೆಗೂ ಅಂದರೆ ಒಟ್ಟು 10 ದಿನಗಳ ಕಾಲ ಡಿ.ಕೆ ಶಿವಕುಮಾರ್ ಅವರನ್ನು ಇಡಿ ಕಸ್ಟಡಿಗೆ ನೀಡಿ ಇಡಿ ವಿಶೇಷ ಕೋರ್ಟ್ ಆದೇಶಿಸಿತ್ತು. ಆದೇಶದಂತೆ ಇನ್ನು ಮೂರು ದಿನಗಳಲ್ಲಿ ಕಸ್ಟಡಿ ಅಂತ್ಯವಾಗಲಿದೆ.

    ಇತ್ತ ಪ್ರಕರಣದ ಮತ್ತಷ್ಟು ವಿಚಾರಣೆಗಾಗಿ ಡಿಕೆ ಶಿವಕುಮಾರ್ ಅವರನ್ನು ಇನ್ನೂ ನಾಲ್ಕು ದಿನ ಕಸ್ಟಡಿಗೆ ಕೇಳಲು ಇಡಿ ಅಧಿಕಾರಿಗಳು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 13ರಂದು ಇಡಿ ಕೋರ್ಟ್ ಮುಂದೆ ಹಾಜರುಪಡಿಸಿ ಮತ್ತೆ ನಾಲ್ಕು ದಿನ ಕಸ್ಟಡಿಗೆ ಪಡೆದುಕೊಳ್ಳುವ ಲೆಕ್ಕಾಚಾರ ಇಡಿ ಅಧಿಕಾರಿಗಳು ಹಾಕಿಕೊಂಡಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.