Tag: ಸೋನಲ್ ಮೊಂತೆರೋ

  • ಮೊದಲ ಹೆಜ್ಜೆಯಲ್ಲೇ ಭರವಸೆಯ ಛಾಪು ಮೂಡಿಸಿದ ಝೈದ್ ನಟನೆ

    ಮೊದಲ ಹೆಜ್ಜೆಯಲ್ಲೇ ಭರವಸೆಯ ಛಾಪು ಮೂಡಿಸಿದ ಝೈದ್ ನಟನೆ

    ಝೈದ್ ಖಾನ್ (Zaid Khan) ಹಾಗೂ ಸೋನಲ್ ಮೊಂತೆರೋ (Sonal Montero) ನಟನೆಯ  ಬನಾರಸ್ ಸಿನೆಮಾ ಸಾಕಷ್ಟು ಕ್ರೇಜ್ ಗಳೊಂದಿಗೆ ಬಿಡುಗಡೆಗೊಂಡು, ಕನ್ನಡವೂ ಸೇರಿದಂತೆ ಪಂಚ ಭಾಷೆಯಲ್ಲೂ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ. ನಿರ್ದೇಶಕ ಜಯತೀರ್ಥ (Jayathirtha) ಬನಾರಸ್ ಗೆ (Banaras) ಆಕ್ಷನ್ ಕಟ್ ಹೇಳ್ತಿದ್ದಾರೆ ಅಂದಾಗ ಹೆಚ್ಚಾಗಿದ್ದ ಕುತೂಹಲ ಮೂಡಿಕೊಳ್ಳೋದು ಸಹಜ. ಈ ಚಿತ್ರಕ್ಕೆ ಝೈದ್ ಖಾನ್ ನಾಯಕರಾಗ್ತಿದ್ದಾರೆ ಅಂದಾಗ ಚರ್ಚೆ ಬೇರೆಯದ್ದೇ ಮಟ್ಟಕ್ಕೆ ತಲುಪಿತ್ತು. ಯಾಕಂದ್ರೆ, ಹಣವಿದ್ದವರಿಗೆ ಈ ಸಿನೆಮಾಗಳೆಲ್ಲ ಶೋಕಿಗಾಗಿ, ಹಣದ ಬಲ ಪ್ರದರ್ಶನದಲ್ಲಿ ಸಿನೆಮಾ ಮುಗಿದು ಹೋಗತ್ತೆ ಅನ್ನೋ ಬೇರೆಯದ್ದೇ ತರಹದ ಮಾತುಗಳು, ವಿಮರ್ಶೆಗಳು ಕೇಳಿಬಂದಿದ್ದವು. ಜೊತೆಗೆ ಬಾಯ್ಕಾಟ್ ಬನಾರಸ್ ಎಂಬ ವಿರೋಧಗಳ ಕೂಗು ಸಹ ಜೋರಾಗಿನೇ ಇತ್ತು. ಆದ್ರೆ ಇವರೆಲ್ಲರ ಮಾತನ್ನ, ನಂಬಿಕೆಯನ್ನ, ವಿರೋಧ ಗಳನ್ನ ಗೆದ್ದು ಝೈದ್ ತಾನೊಬ್ಬ ಅದ್ಭುತ ನಟನೆಂಬುದನ್ನ ಪ್ರೂವ್ ಮಾಡಿದ್ದಾರೆ.

    ಈಗ ಪಂಚ ಭಾಷೆಗಳಲ್ಲೂ ತೆರೆಕಂಡು ಮಿನುಗುತ್ತಿರುವ ಬನಾರಸ್ ಬಗೆಗಿನ ಪಾಸಿಟಿವ್ ಮಾತುಗಳೇ ಸಿನೆಮಾದ ಮಿಂಚಿನ ಓಟಕ್ಕೆ ನಾಂದಿ ಹಾಡಿವೆ. ಕರ್ನಾಟಕದಲ್ಲಂತೂ ಬನಾರಸ್ ನೋಡಿದ ಸಿನಿಪ್ರಿಯರಿಗೆ ಝೈದ್ ನಟನೆ ನುರಿತ ಕಲಾವಿದನಂತೆ ಕಾಣಿಸಿದೆ. ಹಾಗಾಗಿಯೇ ಝೈದ್ ನಟನೆಯನ್ನ ಮೆಚ್ಚಿ ಕೊಂಡಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ಬಹುಶಃ ಝೈದ್ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡುವ ಮೊದಲು ವಹಿಸಿದ್ದ ಶ್ರಮ, ಶ್ರದ್ದೆಯೇ. ಶ್ರೀಮಂತರ ಮನೆಯಿಂದ ಯಾರೇ ಸಿನಿಮಾ ರಂಗಕ್ಕೆ ಬಂದರೂ ಕೂಡಾ ಅದೊಂದು ತೆರೆನಾದ ಚಿಕಿತ್ಸಕ ನೋಟ ಅವರತ್ತ ನೆಟ್ಟಿರುವುದು ಸಹಜ.  ಹಣಬಲ ಒಂದರಿಂದಲೇ ಅಂಥವರು ಜಯಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂಬಂತಹ ವಿಮರ್ಶೆಗಳೂ ಮೊದಲು ಝೈದ್ ಖಾನ್ ಬಗ್ಗೆಯೂ  ಇದ್ದದ್ದು ಸುಳ್ಳಲ್ಲ. ಆದ್ರೆ ಸಿನೆಮಾ ನೋಡಿದ ಮೇಲಂತು ಝೈದ್ ಓರ್ವ ಭರವಸೆಯ ನಟ, ಬನಾರಸ್ ನಾಯಕನಾಗಿ ಆತ ಅದ್ಭುತವಾಗಿ ನಟಿಸಿದ್ದಾರೆಂಬ ಮೆಚ್ಚುಗೆ ಪ್ರೇಕ್ಷಕರ ಕಡೆಯಿಂದಲೇ ವ್ಯಾಪಕವಾಗಿ ಕೇಳಿ ಬರುತ್ತಿದೆ.

    ಈ ಹಿಂದೆ ಝೈದ್ ಬಗ್ಗೆ ಸ್ಟಾರ್ ನಟರೊಬ್ಬರು ಬನಾರಸ್ ಸಿನೆಮಾವನ್ನ ನೋಡಿ,  ಝೈದ್ ಖಾನ್ ಈಗಾಗಲೇ ಮೂರ್ನಾಲಕ್ಕು ಸಿನಿಮಾ ಮಾಡಿದ್ದಾರೇನೋ ಅಂತ ಫೀಲ್ ಆಗುವಂತೆ ನಟಿಸಿದ್ದಾರೆಂದೂ ಹೇಳಿದ್ದರು. ಬನಾರಸ್ ಅನ್ನು ಕಣ್ತುಂಬಿಕೊಂಡ ಪ್ರತಿಯೊಬ್ಬರಿಗೂ ದರ್ಶನ್ ಹೇಳಿರೋದು ಅಕ್ಷರಶಃ ನಿಜವೆನ್ನಿಸಿದಂತೆ ನಟಿಸಿದ್ದಾರೆ ಝೈದ್. ಇದನ್ನೂ ಓದಿ: ಕನ್ನಡತಿ ಅನುಷಾ ಶೆಟ್ಟಿ ಜೊತೆ ತೆಲುಗು ಸ್ಟಾರ್ ನಾಗಶೌರ್ಯ ಮದುವೆ

    ಸದ್ಯ ಬನಾರಸ್ ಪ್ರಭೆ  ಕರ್ನಾಟಕದ ಉದ್ದಗಲಕ್ಕೂ ಹಬ್ಬಿದ್ದು,  ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇದೇ ಖುಷಿಯಲ್ಲಿ ಝೈದ್ ಸಿನಿಮಾ ಮಂದಿರಗಳಿಗೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಸಿನೆಮಾ ನೋಡಿ ಅವರ ಪ್ರತಿಕ್ರಿಯೆಯನ್ನು ಎಂಜಾಯ್ ಮಾಡ್ತಿದ್ದಾರೆ.ಈ ಮೂಲಕ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲೂ ಪ್ರೇಕ್ಷಕ ವರ್ಗವೇ ನಿರ್ಧರಿಸಿದಂತೆ  ಚಿತ್ರರಂಗಕ್ಕೆ ಝೈದ್ ಖಾನ್  ಒಂದೊಳ್ಳೆ ಭರವಸೆಯ ನಟನೆಂಬುದನ್ನ ಮೊದಲ ಸಿನೆಮಾದಲ್ಲೇ ಒಪ್ಪಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೋನಲ್ ಬಣ್ಣದ ಹೆಜ್ಜೆಗೆ ಐದು ವಸಂತದ ಸಂಭ್ರಮ!

    ಸೋನಲ್ ಬಣ್ಣದ ಹೆಜ್ಜೆಗೆ ಐದು ವಸಂತದ ಸಂಭ್ರಮ!

    ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರದ ಮೂಲಕವೇ ನಾಯಕಿಯಾಗಿ ಗುರುತಾದವರು ಸೋನಲ್ ಮೊಂತೆರೋ. ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಹಲವಾರು ಪ್ರತಿಭೆಗಳನ್ನು ಕೊಡುಗೆಯಾಗಿ ಕೊಡಮಾಡಿರುವ ಮಂಗಳೂರಿನ ಹುಡುಗಿ ಸೋನಲ್. ಹೊರ ಜಗತ್ತಿನ ಪಾಲಿಗೆ ಪಂಚತಂತ್ರದ ಪ್ರಭೆ ಮಾತ್ರವೇ ಸೋನಲ್ ಸುತ್ತ ಗೋಚರಿಸುತ್ತೆ. ನಟಿಸಿದ ಮೊದಲ ಚಿತ್ರದಿಂದಲೇ ಟೇಕಾಫ್ ಆದ ಬಗ್ಗೆ ಹಲವರಲ್ಲೊಂದು ಅಚ್ಚರಿಯೂ ಇದೆ. ವಾಸ್ತವವಾಗಿ ಮಾಡೆಲಿಂಗ್ ಲೋಕದಿಂದ ತುಳು ಚಿತ್ರರಂಗವನ್ನು ಹಾದು ಬಂದು ಕನ್ನಡದಲ್ಲಿ ನೆಲೆ ಕಂಡುಕೊಂಡಿರುವ ಸೋನಲ್ ಈ ಹಂತ ತಲುಪಿಕೊಳ್ಳಲು ಒಂದಷ್ಟು ಸರ್ಕಸ್ಸು ನಡೆಸಿದ್ದಾರೆ. ಅಷ್ಟೆಲ್ಲ ಪರಿಶ್ರಮ ಮತ್ತು ತುಂಬು ಆಹ್ಲಾದವನ್ನು ಮೆತ್ತಿಕೊಂಡಂತಿರೋ ಸೋನಲ್‍ರ ಬಣ್ಣದ ಹೆಜ್ಜೆಗೀಗ ಭರ್ತಿ ಐದು ವರ್ಷ ತುಂಬಿದೆ.

    ಸೋನಲ್ ಮೊಂತೆರೋ ಈಗ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದಾಗ ತುಳು ಚಿತ್ರಪ್ರೇಮಿಗಳಿಗೆ ಬಿಟ್ಟರೆ ಬೇರೆಲ್ಲರಿಗೂ ಈಕೆ ಅಪರಿಚಿತೆಯಾಗಿದ್ದರು. ಆದರೆ ಅದರಲ್ಲಿನ ಪಾತ್ರ ಮತ್ತು ಅದನ್ನವರು ನಿರ್ವಹಿಸಿದ್ದ ರೀತಿಗಳನ್ನೆಲ್ಲ ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದರು. ಕೆಲವೊಮ್ಮೆ ಕೆಲ ನಟ ನಟಿಯರು ಹಲವಾರು ವರ್ಷಗಳ ಕಾಲ ಸೈಕಲ್ಲು ಹೊಡೆದರೂ ದಕ್ಕಿಸಿಕೊಳ್ಳಲಾಗದಂಥಾ ಗೆಲುವನ್ನು ಸೋನಲ್ ಪಂಚತಂತ್ರದ ಮೂಲಕ ಗಿಟ್ಟಿಸಿಕೊಂಡಿದ್ದರು.

    ಇದೊಂದೇ ಸಿನಿಮಾದ ನಂತರದಲ್ಲಿ ಅವರು ಪಡೆದುಕೊಳ್ಳುತ್ತಾ ಸಾಗಿ ಬರುತ್ತಿರೋ ಅವಕಾಶಗಳನ್ನು ಕಂಡರೆ ಯಾರೇ ಆದರೂ ಚಕಿತರಾಗುವಂತಿದೆ. ಯಾಕೆಂದರೆ, ದೊಡ್ಡ ಸಿನಿಮಾಗಳಲ್ಲಿ, ಸ್ಟಾರ್ ನಟರ ಜೊತೆ ನಟಿಸೋ ಅವಕಾಶಗಳನ್ನು ಸೋನಲ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿಯೂ ಅವರು ನಾಯಕಿಯರಲ್ಲೊಬ್ಬರಾಗಿದ್ದಾರೆ. ಅದೇ ಹೊತ್ತಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಬುದ್ಧಿವಂತ-2 ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಪರಭಾಷೆಗಳಿಂದಲೂ ಕೂಡಾ ಸೋನಲ್‍ಗೆ ಬಿಗ್ ಆಫರ್‌ಗಳು ಬರಲಾರಂಭಿಸಿವೆ. ಇಂಥಾದ್ದೊಂದು ಸಂಕ್ರಮಣ ಕಾಲದಲ್ಲಿಯೇ ತಮ್ಮ ಸಿನಿಮಾ ಯಾನಕ್ಕೆ ಐದು ವರ್ಷ ತುಂಬಿದ ಖುಷಿಯೂ ಅವರನ್ನಾವರಿಸಿಕೊಂಡಿದೆ.

    ಮಂಗಳೂರಿನ ಚೆಲುವೆ ಸೋನಲ್ ಮೊಂತೇರೋ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದೇ ಮಾಡೆಲಿಂಗ್ ಲೋಕದ ಮುಖಾಂತರ. ಮಂಗಳೂರು ಮಂದಿಗೆ ಯಕ್ಷಗಾನ, ನಾಟಕ ಮತ್ತು ಸಿನಿಮಾ ಗೀಳು ಇದ್ದೇ ಇರುತ್ತದೆ. ಅಂಥಾ ವಾತಾವರಣದಲ್ಲಿಯೇ ಬೆಳೆದು ಬಂದಿದ್ದ ಸೋನಲ್ ಮನಸು ಕಲಿಕೆಯ ದಿನಗಳಲ್ಲಿಯೇ ಬಣ್ಣದ ಲೋಕದತ್ತ ವಾಲಿಕೊಂಡಿತ್ತು. ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದವರು ತುಳುವಿನ ಚಿತ್ರದಲ್ಲಿ ನಾಯಕಿಯಾಗೋ ಅವಕಾಶ ಪಡೆದುಕೊಂಡಿದ್ದರು. ಆ ಮೊದಲ ಚಿತ್ರವೇ ನೂರು ದಿನ ಯಶಸ್ವೀ ಪ್ರದರ್ಶನ ಕಾಣುವ ಮೂಲಕ ತುಳು ನಾಡಿನ ತುಂಬ ಸೋನಲ್ ಹೆಸರುವಾಸಿಯಾಗಿದ್ದರು.

    ಆ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನಟಿಸಬೇಕೆಂಬುದು ಸೋನಲ್ ಅವರ ಮಹಾ ಕನಸಾಗಿತ್ತು. ಅದೇ ಗುಂಗಿನಲ್ಲಿ ಚಿತ್ರರಂಗದೊಳಕ್ಕೆ ಪ್ರವೇಶ ಪಡೆಯಲು ಪ್ರಯತ್ನಿಸಿದರೂ ಆರಂಭದಲ್ಲಿ ದೊರೆತದ್ದು ಸಣ್ಣ ಪುಟ್ಟ ಅವಕಾಶಗಳು ಮಾತ್ರ. ಅದರ ನಡುವೆಯೂ ಅಭಿಸಾರಿಕೆ, ಎಂಎಲ್‍ಎ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರಾದರೂ ಹೇಳಿಕೊಳ್ಳುವಂಥ ಗೆಲುವೇನೂ ಸಿಕ್ಕಿರಲಿಲ್ಲ. ಆದರೆ ಒಂದಷ್ಟು ಕಾಲದ ಸರ್ಕಸ್ಸುಗಳೆಲ್ಲವೂ ಸಾರ್ಥಕವಾಗುವಂಥ ಗೆಲುವನ್ನು ಪಂಚತಂತ್ರ ತಂದುಕೊಟ್ಟಿದೆ. ಸದ್ಯ ಲಾಕ್‍ಡೌನ್ ಸಮಯವನ್ನು ಬಹು ಕಾಲದ ನಂತರ ಕುಟುಂಬಿಕರ ಜೊತೆ ಕಳೆಯುತ್ತಿರೋ ಸೋನಲ್ ಅದರ ನಡುವೆಯೇ ಮುಂದಿನ ಸಿನಿಮಾಗಳಿಗೆ ತಯಾರಿ ನಡೆಸುತ್ತಿದ್ದಾರೆ. ಈ ಔದರ ಸಂಭ್ರಮವನ್ನವರು ಮುಂದಿನ ದಿನಗಳಲ್ಲಿ ಮತ್ತೊಂದಷ್ಟು ಚಿತ್ರಗಳೊಂದಿಗೆ ಸಂಪನ್ನಗೊಳಿಸಿಕೊಳ್ಳಲಿದ್ದಾರೆ.