Tag: ಸೈಕ್ಲಿಂಗ್

  • ಫಿಟ್ನೆಸ್‍ಗಾಗಿ ತಂದೆ ಜೊತೆ ಸೈಕ್ಲಿಂಗ್ – ಬಾಲಕನಿಗೆ ಡಿಕ್ಕಿ ಹೊಡೆದ ಟ್ರಕ್

    ಫಿಟ್ನೆಸ್‍ಗಾಗಿ ತಂದೆ ಜೊತೆ ಸೈಕ್ಲಿಂಗ್ – ಬಾಲಕನಿಗೆ ಡಿಕ್ಕಿ ಹೊಡೆದ ಟ್ರಕ್

    ಮುಂಬೈ: ಜೋಗೇಶ್ವರಿ-ವಿಕ್ರೋಲಿ ಸಂಪರ್ಕ ರಸ್ತೆಯಲ್ಲಿ(ಜೆವಿಎಲ್‍ಆರ್) 12 ವರ್ಷದ ಬಾಲಕ ತನ್ನ ತಂದೆ ಜೊತೆ ಸೈಕ್ಲಿಂಗ್‍ಗೆ ಹೋಗುತ್ತಿದ್ದನು. ಆದರೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಬಾಲಕನಿಗೆ ಡಿಕ್ಕಿ ಹೊಡೆದಿದ್ದು, ಬಾಲಕ ಮೃತಪಟ್ಟಿದ್ದಾನೆ.

    ಭಾನುವಾರ 7ನೇ ತರಗತಿಯ ವಿದ್ಯಾರ್ಥಿ ಅಕ್ಷ್ ಮಾಲು, ಕಾರು ಉತ್ಪಾದನಾ ಕಂಪನಿಯ ಜನರಲ್ ಮ್ಯಾನೇಜರ್ ಆಗಿದ್ದ ತಂದೆ ಮಧುರೇಂದ್ರ ಮಾಲು(42) ಮತ್ತು ಇತರ ಕೆಲವು ಸೈಕ್ಲಿಸ್ಟ್‍ಗಳೊಂದಿಗೆ ಸೈಕ್ಲಿಂಗ್‍ಗಾಗಿ ಹೋಗಿದ್ದನು. ಈ ವೇಳೆ ಜೆವಿಎಲ್‍ಆರ್ ರಸ್ತೆಯಲ್ಲಿ ಇವರು ಸೈಕ್ಲಿಂಗ್ ಮಾಡುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಅಕ್ಷ್ ಸೈಕಲ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ ಚಾಲಕ ಟ್ರಕ್‍ನನ್ನು ವೇಗವಾಗಿ ಓಡಿಸಿಕೊಂಡು ಹೋಗಿದ್ದಾನೆ. ಆದರೆ ಸೋಮವಾರ ಎಂಐಡಿಸಿ ಪೊಲೀಸರು ಜೋಗೇಶ್ವರಿ(ಪೂರ್ವ)ಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 99 ವರ್ಷದ ವೃದ್ಧೆಯನ್ನೂ ಬಿಡದ ಪಾಪಿ – ಹಿಡನ್ ಕ್ಯಾಮೆರಾದಲ್ಲಿ ಕ್ರೌರ್ಯ ಸೆರೆ!

    ಡಿಸಿಪಿ ಮಹೇಶ್ವರ್ ರೆಡ್ಡಿ ಈ ಕುರಿತು ಪ್ರತಿಕ್ರಿಯಿಸಿದ್ದು, ಹುಡುಗನು ತನ್ನ ತಂದೆ ಮತ್ತು ಸ್ನೇಹಿತರಾದ ಅಲೋಕ್, ಮಿತೇಶ್ ಅವರನ್ನೊಳಗೊಂಡ ಸೈಕ್ಲಿಸ್ಟ್‍ಗಳ ಗುಂಪಿನೊಂದಿಗೆ ಸವಾರಿ ಮಾಡುತ್ತಿದ್ದನು. ಅವರು ಪೊವೈ ತಲುಪಿದಾಗ ವೇಗದಿಂದ ಬಂದ ಟ್ರಕ್ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಾಲಕನ ತಲೆಗೆ ತೀವ್ರ ಗಾಯವಾಗಿದೆ. ತಕ್ಷಣ ಬಾಲಕನ ತಂದೆ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಘಟನೆ ನಡೆದ 36 ಗಂಟೆಗಳ ಒಳಗೆ ಟ್ರಕ್ ಚಾಲಕನನ್ನು ಬಂಧಿಸಲಾಯಿತು ಎಂದು ಹೇಳಿದರು.

    ಫಿಟ್ನೆಸ್‍ಗಾಗಿ ಸೈಕ್ಲಿಂಗ್!
    ಮಧುರೇಂದ್ರ ಅವರಿಗೆ ಇಬ್ಬರು ಗಂಡುಮಕ್ಕಳು ಇದ್ದಾರೆ. ಅವರಲ್ಲಿ ಅಕ್ಷ್ ದೊಡ್ಡವನಾಗಿದ್ದನು. ಮಧುರೇಂದ್ರ ಅವರು ಸಾಹಸ ಕ್ರೀಡೆ ಮತ್ತು ಫಿಟ್ನೆಸ್ ಚಟುವಟಿಕೆಗಳಲ್ಲಿ ಯಾವಾಗಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಮಧುರೇಂದ್ರ ಅವರು ವಿಕೇಂಡ್ ಮತ್ತು ರಜಾದಿನಗಳಲ್ಲಿ ಮಗನೊಂದಿಗೆ ಸೈಕ್ಲಿಂಗ್‍ಗೆ ಹೋಗುತ್ತಿರುತ್ತಾರೆ. ಅದೇ ಭಾನುವಾರವೂ ಹೋಗಿದ್ದು, ಈ ದುರದೃಷ್ಟಕರ ಘಟನೆ ನಡೆದಿದೆ. ಘಟನೆ ನಡೆದಾಗ ಮಧುರೇಂದ್ರ ಸಹ ಮಗನಿಂದ ಸ್ವಲ್ಪ ದೂರದಲ್ಲೇ ಇದ್ದು, ತಂದೆಯ ಎದುರೆ ಮಗ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

    For How Long Should You Do Cycling For Weight Loss? Expert Reveals Important Do's And Don'ts Of Cycling

    ನನ್ನ ಮಗನ ಬೈಸಿಕಲ್ ಡಿಕ್ಕಿ ಹೊಡೆದ ನಂತರ ಟ್ರಕ್ ವೇಗವಾಗಿ ಓಡಿಸಲಾಯಿತು. ನಾನು ನನ್ನ ಮಗನನ್ನು ಆಸ್ಪತ್ರೆಗೆ ಸೇರಿಸಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವನು ಸಾವನ್ನಪ್ಪಿದ್ದಾನೆ ಎಂದು ಮಧುರೇಂದ್ರ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದರು. ಇದನ್ನೂ ಓದಿ: ತಮಿಳುನಾಡಿನ 16 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ!

    ಎಂಐಡಿಸಿ ಪೊಲೀಸ್ ಹಿರಿಯ ಇನ್ಸ್‍ಪೆಕ್ಟರ್ ಸತೀಶ್ ಗಾಯಕ್ವಾಡ್ ಈ ಕುರಿತು ಮಾತನಾಡಿದ್ದು, ಟ್ರಕ್ ಚಾಲಕ ಘಟನೆ ನೋಡಿ ತನಗೆ ಹೊಡೆಯಬಹುದೆಂಬ ಭಯದಿಂದ ಟ್ರಕ್‍ನನ್ನು ವೇಗವಾಗಿ ಓಡಿಸಿದ್ದಾನೆ. ಆದರೆ ಟ್ರಕ್‍ನನ್ನು ಸಿಸಿಟಿವಿ ಫೂಟೇಜ್ ಸಹಾಯದಿಂದ ಗುರುತಿಸಿದ್ದೆವು ಎಂದು ವಿವರಿಸಿದರು.

    ಟ್ರಕ್ ಬಗ್ಗೆ ಮಾಹಿತಿ ತಿಳಿದುಕೊಂಡು ಆರೋಪಿ ಚಾಲಕ ಪ್ರೇಮಲಾಲ್ ವರ್ಮಾ(40)ನನ್ನು ಬಂಧಿಸಲಾಗಿದೆ. ಆತ ಅಪರಾಧವನ್ನು ಒಪ್ಪಿಕೊಂಡಿದ್ದು, ಐಪಿಸಿ ಸೆಕ್ಷನ್ 304(ಎ) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಮೋಟಾರು ವಾಹನ ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂದು ಆರೋಪಿಯನ್ನು ಅಂಧೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದರು.

  • ಸೈಕ್ಲಿಂಗ್ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ: ಸುನೀಲ್ ಗೌಡ ಪಾಟೀಲ್

    ಸೈಕ್ಲಿಂಗ್ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ: ಸುನೀಲ್ ಗೌಡ ಪಾಟೀಲ್

    – ಸೈಕ್ಲಿಂಗ್ ಅನುಭವ ಬಿಚ್ಚಿಟ್ಟ ವಿ.ಪ ಸದಸ್ಯ

    ವಿಜಯಪುರ: ಸೈಕ್ಲಿಂಗ್ ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿದ್ದು, ಪ್ರತಿಯೊಬ್ಬರು ತಮ್ಮ ಆಧುನಿಕ ಜೀವನದ ಒತ್ತಡದಿಂದ ಮುಕ್ತಿಹೊಂದಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸೈಕಲ್ ಬಳಸುವುದು ಅವಶ್ಯಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲ್‍ಗೌಡ ಪಾಟೀಲ್ ಹೇಳಿದ್ದಾರೆ.

    ಗೋಲಗುಂಬಜ್ ಆವರಣದಿಂದ ಆರಂಭಗೊಂಡ ಸೈಕ್ಲಿಂಗ್ ಜಾಥಾಕ್ಕೆ ಚಾಲನೆ ನೀಡಲಾಯಿತು. ಬಳಿಕ ಬಿ.ಎಲ್.ಡಿ.ಇ ಆಯುರ್ವೇದ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸುನೀಲ್ ಗೌಡ, ನಾನು ಆಸ್ಟ್ರೇಲಿಯಾದಲ್ಲಿ ವಿದ್ಯಾರ್ಥಿಯಾಗಿದ್ದಾಗ ನೂರು ಕೆ.ಜಿ ತೂಕ ಹೊಂದಿದ್ದೆ. ಆ ತೂಕವನ್ನು ಕಡಿಮೆ ಮಾಡಿಕೊಳ್ಳಲು ಟ್ರೇಡ್ ಮಿಲ್ ಮೇಲೆ ವಿವರೀತವಾಗಿ ಓಡಿದ ಪರಿಣಾಮ ನನ್ನ ಎರಡು ಕಾಲುಗಳ ಸಂಧಿಗಳಲ್ಲಿ ನೋವು ಉಂಟಾಯಿತು. ಅದನ್ನು ಉಪಚರಿಸಲು ದೇಶ-ವಿದೇಶದ ಎಲ್ಲ ತಜ್ಞವೈದ್ಯರಿಗೆ ಸಂದರ್ಶಿಸಿದರೂ ಗುಣಮುಖವಾಗಲಿಲ್ಲ. ಕೊನೆಗೆ ಕ್ರಿಕೆಟ್ ತಾರೆ ಸಚಿನ ತೆಂಡೂಲ್ಕರ್ ಫಿಟ್‍ನೆಸ್ ಕೋಚ್ ಅನಂತ್ ಜೋಶಿಯವರನ್ನು ಸಂಪರ್ಕಿಸಿದಾಗ ಅವರು ಸೈಕ್ಲಿಂಗ್ ಮಾತ್ರ ಇದಕ್ಕೆ ಪರಿಹಾರ ಎಂದರು. ಅಂದಿನಿಂದ ನಾನು ಮನೆಯಲ್ಲಿಯೇ ಸೈಕ್ಲಿಂಗ್ ಮಾಡುತ್ತಿದ್ದೆ ಎಂದು ತಮ್ಮ ಅನುಭವವನ್ನ ಸುನೀಲ್‍ಗೌಡ ಹಂಚಿಕೊಂಡರು.

    ವಿಜಯಪುರದಲ್ಲಿ ಇತ್ತೀಚೆಗೆ ಸೈಕ್ಲಿಂಗ್ ಟ್ರೆಂಡ್ ಬೆಳೆದಿರುವುದರಿಂದ ವಾರದಲ್ಲಿ ಎರಡು ದಿನವಾದರು ಸೈಕ್ಲಿಂಗ್ ಬಳಗದ ಸದಸ್ಯರೊಂದಿಗೆ ಪಾಲ್ಗೊಳ್ಳುತ್ತೇನೆ. ಅಲ್ಲದೆ ಬಿ.ಎಲ್.ಡಿ.ಇ ಸಂಸ್ಥೆಯ ಶಾಲೆ-ಕಾಲೇಜುಗಳಲ್ಲಿ ಸಹ ಮುಂದಿನ ದಿನಗಳಲ್ಲಿ ಸೈಕಲ್ ಬಳಸಲು ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ವಿಜಯಪುರ ಸೈಕ್ಲಿಂಗ್ ವೆಲೋಡ್ರೋಮ್‍ಗೆ ನನ್ನ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಸಹ ಅನುದಾನ ನೀಡುತ್ತೇನೆ ಎಂದರು.

    ನಗರದ ಹಿರಿಯ ವೈದ್ಯ ಡಾ. ರವಿ ಚೌಧರಿ, ಡಾ. ಎಲ್.ಎಸ್ ಪಾಟೀಲ್, ಡಾ. ಆನಂದ ಝಳಕಿ ಮಾತನಾಡಿ, ಸೈಕ್ಲಿಂಗ್‍ನ ಮಹತ್ವವನ್ನ ವಿವರಿಸಿದರು. ನಂತರ ರಾಜೀವ್ ಗಾಂಧಿ ಆರೋಗ್ಯ ವಿವಿ ಉಪಕುಲಸಚಿವ ಡಾ. ಗಿರೀಶ್ ಸೋನವಾಲಕರ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಗೋಲಗುಂಬಜ್‍ನಿಂದ ಆರಂಭಗೊಂಡ ಜಾಥಾ ಗಾಂಧಿಚೌಕ, ಶಿವಾಜಿವೃತ್ತ, ಮೀನಾಕ್ಷಿ ವೃತ್ತ, ಕೇಂದ್ರ ಬಸ್ ನಿಲ್ದಾಣ, ಬಾಗಲಕೋಟೆ ರಸ್ತೆ ಮೂಲಕ ಎ.ವಿ.ಎಸ್ ಆಯುರ್ವೇದ ಕಾಲೇಜು ತಲುಪಿತು. ಜಾಥಾದಲ್ಲಿ ನಗರದ ವೃತ್ತಿಪರ ಸೈಕ್ಲಿಸ್ಟ್ ಗಳು, ಹವ್ಯಾಸಿ ಸೈಕ್ಲಿಂಗ್ ಪಟುಗಳು, ಆಯುರ್ವೇದ ಕಾಲೇಜು ಅಧ್ಯಾಪಕರು ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

  • ಉಪಸಮರದ ಪ್ರಚಾರದಲ್ಲಿ ತೊಡಗದೆ ಸೈಕ್ಲಿಂಗ್‍ನಲ್ಲಿ ಯತ್ನಾಳ್ ಬ್ಯುಸಿ

    ಉಪಸಮರದ ಪ್ರಚಾರದಲ್ಲಿ ತೊಡಗದೆ ಸೈಕ್ಲಿಂಗ್‍ನಲ್ಲಿ ಯತ್ನಾಳ್ ಬ್ಯುಸಿ

    ವಿಜಯಪುರ: ಉಪಚುನಾವಣೆ ಕಣ ರಂಗೇರಿದ್ದು, ಎಲ್ಲಾ ಪಕ್ಷದ ನಾಯಕರು, ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ಭರ್ಜರಿ ಸೈಕ್ಲಿಂಗ್ ಮಾಡುತ್ತಿದ್ದಾರೆ. ತಕ್ಷಣವೇ ಚುನಾವಣೆ ಪ್ರಚಾರದಲ್ಲಿ ತೊಡಗುವಂತೆ ಸಿಎಂ ಸೂಚಿಸಿದ ಮೇಲೂ ಯತ್ನಾಳ್ ಮಾತ್ರ ಕಣಕ್ಕೆ ಇಳಿಯದೆ ದೂರ ಉಳಿದಿದ್ದಾರೆ.

    ನಗರದ ಗೋಳಗುಮ್ಮಟದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಸೈಕ್ಲಿಂಗ್ ಆಯೋಜಿಸಲಾಗಿತ್ತು. ನೂರಕ್ಕೂ ಅಧಿಕ ಯುವಕರು ಸೈಕ್ಲಿಂಗ್‍ನಲ್ಲಿ ಭಾಗಿಯಾಗಿದ್ದರು. ನಗರದ ಗಾಂಧಿ ಚೌಕ್, ಶಿವಾಜಿ ಸರ್ಕಲ್, ಬಂಜಾರಾ ಕ್ರಾಸ್, ಆಶ್ರಮ ರಸ್ತೆ, ಸಿದ್ದೇಶ್ವರ ಗುಡಿ ಮೂಲಕ ಯುವಕರು ಸೈಕ್ಲಿಂಗ್ ಮಾಡಿಕೊಂಡು ಜಿಲ್ಲಾ ಕ್ರೀಡಾಂಗಣ ಸೇರಿದರು. ಇವರೊಂದಿಗೆ ಯತ್ನಾಳ್ ಅವರು ಕೂಡ ಸೈಕ್ಲಿಂಗ್‍ನಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

    ಕಳೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಸ್ಟಾರ್ ಕ್ಯಾಂಪೆನರ್ ಆಗಿ ಆಯ್ಕೆ ಮಾಡದ ಹಿನ್ನೆಲೆಯಲ್ಲಿ ಯತ್ನಾಳ್ ಪಕ್ಷದ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಉಪಚುನಾವಣಾ ಪ್ರಚಾರಕ್ಕೆ ತಕ್ಷಣವೇ ತೆರಳುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದರೂ ಮತಕ್ಷೇತ್ರಗಳ ಕಡೆಗೆ ಯತ್ನಾಳ್ ತಲೆ ಹಾಕಿಲ್ಲ. ಅಥಣಿ, ಗೋಕಾಕ್, ಕಾಗವಾಡ, ಹಿರೇಕೆರೂರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ತೆರಳಬೇಕಿದ್ದ ಯತ್ನಾಳ್ ತಲೆ ಕೆಡಿಸಿಕೊಳ್ಳದೆ ಸುಮ್ಮನಿರುವುದು ತೀವ್ರ ಕುತೂಹಲ ಹುಟ್ಟಿಸಿದೆ.

  • ಮೈಕೊರೆಯೋ ಚಳಿಯಲ್ಲಿ ಮಂಜಿನ ನಗರಿ ಮಂದಿಯ ಸೈಕ್ಲಿಂಗ್, ಮ್ಯಾರಥಾನ್

    ಮೈಕೊರೆಯೋ ಚಳಿಯಲ್ಲಿ ಮಂಜಿನ ನಗರಿ ಮಂದಿಯ ಸೈಕ್ಲಿಂಗ್, ಮ್ಯಾರಥಾನ್

    ಮಡಿಕೇರಿ: ಮಂಜಿನ ನಗರಿ ಹಾಗೂ ಪ್ರವಾಸಿಗರ ಸ್ವರ್ಗ ಕೊಡಗು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು. ಮೈಕೊರೆಯುವ ಚಳಿಯಲ್ಲಿ ನೂರಾರು ಮಂದಿ ಬಹಳ ಉತ್ಸಾಹದಿಂದ ಸೈಕ್ಲಿಂಗ್, ಮ್ಯಾರಥಾನ್‍ನಲ್ಲಿ ಭಾಗಿಯಾಗಿ ಖುಷಿಪಟ್ಟರು.

    ಕೊಡಗು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಮ್ಯಾರಥಾನ್ ಮತ್ತು ಸೈಕ್ಲಿಂಗ್ ಆಯೋಜಿಸಲಾಗಿತ್ತು. ನಗರದ ಕಾರ್ಯಪ್ಪ ವೃತ್ತದಿಂದ ಕೋಟೆ ಆವರಣದವರೆಗೆ 5 ಕಿ.ಮೀ ಸೈಕ್ಲಿಂಗ್, ಮ್ಯಾರಥಾನ್‍ಗೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ ಪನ್ನೇಕರ್ ಚಾಲನೆ ನೀಡಿದರು.

    ಮೈಕೊರೆಯುವ ಚಳಿಯ ನಡುವೆಯೂ ಸೈಕ್ಲಿಂಗ್ ಮತ್ತು ಮ್ಯಾರಥಾನ್ ಕಾರ್ಯಕ್ರಮದಲ್ಲಿ ನೂರಾರು ಮಂದಿ ಉತ್ಸಾಹದಿಂದ ಭಾಗವಹಿಸಿದ್ದರು. ಡಿಸಿ, ಎಸ್‌ಪಿ ಇಬ್ಬರೂ ಖುದ್ದು ಸೈಕ್ಲಿಂಗ್ ಮಾಡೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೊಡಗು ಪ್ರಾಕೃತಿಕ ವಿಕೋಪ ನಡುವೆಯೂ ಕೊಡಗು ಪ್ರವಾಸೋದ್ಯಮ ಸೇಫ್ ಎನ್ನುವ ಸಂದೇಶ ಸಾರಿದರು. ಅಲ್ಲದೆ ಕೊಡಗಿಗೆ ಹೆಚ್ಚು ಹೆಚ್ಚು ಪ್ರವಾಸಿಗರು ಭೇಟಿ ನೀಡುವಂತೆ ಕರೆಯಿತ್ತರು.

  • ಭಾರೀ ಗಾಳಿ, ಧಾರಾಕಾರ ಮಳೆಯಲ್ಲೂ ಎಸ್‍ಪಿ ಅಣ್ಣಾಮಲೈ 300 ಕಿ.ಮೀ ಸೈಕ್ಲಿಂಗ್!

    ಭಾರೀ ಗಾಳಿ, ಧಾರಾಕಾರ ಮಳೆಯಲ್ಲೂ ಎಸ್‍ಪಿ ಅಣ್ಣಾಮಲೈ 300 ಕಿ.ಮೀ ಸೈಕ್ಲಿಂಗ್!

    ಚಿಕ್ಕಮಗಳೂರು: ಭಾರೀ ಗಾಳಿಯೊಂದಿಗೆ ಮಲೆನಾಡಲ್ಲಿ ಧಾರಾಕಾರ ಮಳೆಯಾಗ್ತಿದೆ. ಆದರೆ ಈ ಮಳೆಯಲ್ಲೇ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಸೈಕ್ಲಿಂಗ್ ಮಾಡಿದ್ದಾರೆ.

    ಮಂಗಳೂರು ಮತ್ತು ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್‍ನಿಂದ ಆಯೋಜನೆಗೊಂಡು ಶನಿವಾರ ನಡೆದ ಮೂರನೇ ವರ್ಷದ ಮಾನ್ಸೂನ್ ಬ್ರಿವೇ ಸೈಕ್ಲಿಂಗ್‍ನಲ್ಲಿ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಎರಡನೇ ವರ್ಷವೂ ಭಾಗವಹಿಸಿದರು.

    ಬೆಳಗ್ಗೆ ಆರು ಗಂಟೆಗೆ ನಗರದ ಟೌನ್ ಕ್ಯಾಂಟೀನ್‍ನಿಂದ ಆರಂಭವಾದ ಸೈಕಲ್ ರ‍್ಯಾಲಿಯಲ್ಲಿ 20ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಬಾಳೆಹೊನ್ನೂರು, ಎನ್.ಆರ್.ಪುರ, ಕೊಪ್ಪ, ತೀರ್ಥಹಳ್ಳಿ, ಮಂಡಗದ್ದೆ ಮಾರ್ಗವಾಗಿ ಸಕ್ರೆಬೈಲಿನ ಮೂಲಕ ಒಟ್ಟು 300 ಕಿ.ಮೀ. ಕ್ರಮಿಸಿ ಅದೇ ಮಾರ್ಗವಾಗಿ ಚಿಕ್ಕಮಗಳೂರಿಗೆ ಹಿಂದಿರುಗಿದ್ದಾರೆ. ಇದನ್ನೂ ಓದಿ: ವೃದ್ಧಾಶ್ರಮದ ವಯೋವೃದ್ಧರ ಆಸೆಯನ್ನು ಎಸ್‍ಪಿ ಅಣ್ಣಾಮಲೈ ನೆರವೇರಿಸಿದ್ರು: ವಿಡಿಯೋ ನೋಡಿ

    ಸುರಿಯೋ ಧಾರಾಕಾರ ಮಳೆ ಭಾರೀ ಗಾಳಿಯ ನಡುವೆಯೇ ಎಸ್‍ಪಿ, ಸೈಕ್ಲಿಂಗ್ ಮಾಡಿರೋದನ್ನು ಕಂಡು ಸ್ಥಳಿಯರು ಸಂತಸ ವ್ಯಕ್ತಪಡಿಸಿದ್ದಾರೆ. ಎಸ್‍ಪಿಯವರು ಮಾರ್ಗ ಮಧ್ಯೆ ಊಟ, ತಿಂಡಿ ಹಾಗೂ ಕಾಫಿಗೆ ಸೈಕಲ್ ನಿಲ್ಲಿಸಿದಾಗ ಜನರು ಅವರೊಂದಿಗೆ ಸೆಲ್ಫಿ ಕ್ಲಿಕಿಸಿಕೊಂಡು ಖುಷಿಪಟ್ಟರು.