Tag: ಸೇನಾ ತರಬೇತಿ

  • 26 ವರ್ಷ ಸೇನೆಯಲ್ಲಿ ಸೇವೆ-ನಿವೃತ್ತಿ ನಂತರವೂ ದೇಶ ಸೇವೆ

    26 ವರ್ಷ ಸೇನೆಯಲ್ಲಿ ಸೇವೆ-ನಿವೃತ್ತಿ ನಂತರವೂ ದೇಶ ಸೇವೆ

    -ಸೇನಾ ಆಕಾಂಕ್ಷಿಗಳಿಗೆ ತರಬೇತಿ

    ರಾಯಚೂರು: ಸರ್ಕಾರಿ ನೌಕರಿಯಿಂದ ನಿವೃತ್ತಿಯಾದರೆ ಸಾಕು ಮನೆ ಮಕ್ಕಳು ಮೊಮ್ಮಕ್ಕಳು ಅಂತ ಆರಾಮಾಗಿದ್ದು ಬಿಡೋಣ ಅಂದುಕೊಳ್ಳುವವರೇ ಜಾಸ್ತಿ. ರಾಯಚೂರಿನ ಮಾಜಿ ಸೈನಿಕ ಮೊಹಮದ್ ಸಲೀಂ ಮಾತ್ರ ನಿವೃತ್ತಿ ಬಳಿಕವೂ ದೇಶಸೇವೆಯನ್ನ ಮುಂದುವರಿಸಿದ್ದಾರೆ. ಸೇನೆ ಸೇರಲು ಆಸಕ್ತಿಯಿರುವ ಯುವಕರಿಗೆ ಮಾರ್ಗದರ್ಶಕರಾಗಿ ಉಚಿತವಾಗಿ ತರಬೇತಿ ನೀಡುವ ಮೂಲಕ ಆದರ್ಶವಾಗಿದ್ದಾರೆ.

    ಮೊಹಮದ್ ಸಲೀಂ ರಾಯಚೂರಿನ ಲಿಂಗಸುಗೂರು ತಾಲೂಕಿನ ಗುರಗುಂಟಾ ಗ್ರಾಮದ ಮಾಜಿ ಸೈನಿಕ. ಹವಾಲ್ದಾರ್ ಮೇಜರ್ ಆಗಿದ್ದ ಸಲೀಂ ಸೇನಾ ನಿವೃತ್ತಿ ಬಳಿಕ 2017 ರಿಂದ ಹಟ್ಟಿ ಪಟ್ಟಣದ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟೆ ಆಗಿದ್ರೆ ಅಂತಾ ವಿಶೇಷ ಏನ್ ಇರಲಿಲ್ಲ ಬಿಡಿ. ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಿಂದ ಸೇನೆಯಲ್ಲಿ ಸೇವೆ ಸಲ್ಲಿಸುವವರ ಸಂಖ್ಯೆ ಕಡಿಮೆಯಿದ್ದು, ಅದನ್ನ ಹೆಚ್ಚಿಸಬೇಕು ಅಂತ ಎರಡು ವರ್ಷಗಳಿಂದ ಉಚಿತ ಸೇನಾ ತರಬೇತಿ ನೀಡುತ್ತಿದ್ದಾರೆ.

    ಗುರುಗುಂಟಾ ಗ್ರಾಮದಲ್ಲಿ ತರಬೇತಿಗೆ ಸೌಲಭ್ಯಗಳು ಇಲ್ಲದಿದ್ದರೂ ಗ್ರಾಮದ ಹೊರವಲಯದ ಪ್ರದೇಶವೊಂದರಲ್ಲಿ ಸೇನಾರ್ಥಿಗಳಿಗೆ ಅಗತ್ಯ ತರಬೇತಿ ನೀಡುತ್ತಿದ್ದಾರೆ. ಕೇವಲ ಗುರಗುಂಟಾ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳಾದ ಗೌಡೂರು, ಯಲಗಟ್ಟ, ಮಾಚನೂರು, ಕೋಠಾ, ಹಟ್ಟಿ, ರಾಯದುರ್ಗ, ಅಮರೇಶ್ವರ ಕ್ರಾಸ್ ನಿಂದಲೂ ಯುವಕರು ತರಬೇತಿಗೆ ಬರುತ್ತಿದ್ದಾರೆ. ಅಲ್ಲದೆ ಬೀದರ್ ,ಗೋಕಾಕ್ ನಿಂದಲೂ ಆರು ಯುವಕರು ತರಬೇತಿಗೆ ಬಂದಿದ್ದು, ಅವರಿಗೆಲ್ಲಾ ಸಲೀಂ ಸ್ವಂತ ಖರ್ಚಿನಲ್ಲೇ ಊಟ, ವಸತಿ ವ್ಯವಸ್ಥೆ ಮಾಡಿದ್ದಾರೆ. ಒಟ್ಟು 45 ಜನ ತರಬೇತಿ ಪಡೆಯುತ್ತಿದ್ದಾರೆ.

    ಬೆಳಗ್ಗೆ ಐದು ಗಂಟೆಗೆಲ್ಲಾ ತರಬೇತಿ ಆರಂಭಿಸುವ ಸಲೀಂ ಯುವಕರಿಗೆ ಸೇನೆಗೆ ಆಯ್ಕೆಯಾಗಲು ಬೇಕಾಗುವ ಕಠಿಣ ದೈಹಿಕ ತರಬೇತಿಯನ್ನ ನೀಡುತ್ತಿದ್ದಾರೆ. ರನ್ನಿಂಗ್, ಲಾಂಗ್ ಜಂಪ್, ಹೈಜಂಪ್ ಶಾಟ್ ಪುಟ್ ನಿಂದ ಹಿಡಿದು ಪ್ರತಿಯೊಂದಕ್ಕೂ ಅಣಿಗೊಳಿಸುತ್ತಿದ್ದಾರೆ. ಇವರಲ್ಲಿ ತರಬೇತಿ ಪಡೆದ ಯುವಕ ರವಿಕುಮಾರ್ ಈಗಾಗಲೇ ಸೇನೆಗೆ ಆಯ್ಕೆಯಾಗಿದ್ದಾರೆ. ಮೂರು ಜನ ಯುವಕರು ಸ್ಟಾಫ್ ಸೆಲೆಕ್ಷನ್ ಕಮಿಷನ್ ಗೆ ಆಯ್ಕೆಯಾಗಿದ್ದಾರೆ. 26 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಎಂ.ಡಿ.ಸಲಿಂ ತಾವು ಕೆಲಸ ಮಾಡುವ ಬ್ಯಾಂಕ್ ನಲ್ಲೂ ಒಳ್ಳೆಯ ಕೆಲಸಗಾರ ಅನ್ನೋ ಹೆಸರನ್ನ ಪಡೆದಿದ್ದು, ಬಡ ಯುವಕರನ್ನ ದೇಶಕಾಯಲು ಸಜ್ಜುಗೊಳಿಸುತ್ತಿದ್ದಾರೆ.

    ಪತ್ನಿ ಹಾಗೂ ಇಬ್ಬರು ಮಕ್ಕಳಿರುವ ಸಲೀಂ ಕೆಲಸಕ್ಕೆ ಅವರ ಕುಟುಂಬ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಯುವಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇನೆ ಸೇರಬೇಕು. ಆದ್ರೆ ಅವರಿಗೆ ತರಬೇತಿ ತುಂಬಾ ದುಬಾರಿ ಆಗಿರುವುದರಿಂದ ಉಚಿತವಾಗಿ ತರಬೇತಿ ನೀಡುತ್ತಿದ್ದೇನೆ ಅಂತ ಸಲೀಂ ಹೇಳುತ್ತಾರೆ. ಬ್ಯಾನರ್, ವಾಟ್ಸಪ್ ಮೂಲಕ ಪ್ರಚಾರ ಮಾಡಿ ಯುವಕರನ್ನ ತರಬೇತಿಗೆ ಆಹ್ವಾನಿಸುತ್ತಿದ್ದಾರೆ. ಮೊದಲೆಲ್ಲಾ ಕೇವಲ ಬೆರಳೆಣಿಕೆಯಷ್ಟು ಯುವಕರಿಂದ ಆರಂಭವಾದ ತರಬೇತಿಗೆ ಈಗ 45 ಯುವಕರು ಬರುತ್ತಿದ್ದಾರೆ.

    ಮೈದಾನ, ವಸತಿ ಹಾಗೂ ತರಬೇತಿ ಸಾಮಗ್ರಿಗಳ ಕೊರತೆಯ ಮಧ್ಯೆಯೂ ಮೊಹಮದ್ ಸಲೀಂ ತಮ್ಮ ಕೈಲಾದ ಮಟ್ಟಿಗೆ ಸ್ವಂತ ಖರ್ಚಿನಲ್ಲೆ ಉಚಿತ ಸೇನಾ ತರಬೇತಿಯನ್ನ ನೀಡುತ್ತಿದ್ದಾರೆ. ನವೆಂಬರ್ 5 ರಿಂದ 16ರ ವರೆಗೆ ಕೊಪ್ಪಳದಲ್ಲಿ ನಡೆಯಲಿರುವ ಸೇನಾ ಭರ್ತಿ ರ್ಯಾಲಿಗೆ ಭರ್ಜರಿ ತಯಾರಿ ನಡೆಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಯುವಕರು ಆಯ್ಕೆಯಾಗುವ ನಿರೀಕ್ಷೆಯಲ್ಲಿ ಸಲೀಂ ಇದ್ದಾರೆ. ಸಲೀಂ ಹಾಗೂ ಅವರಲ್ಲಿ ತರಬೇತಿ ಪಡೆಯುತ್ತಿರುವ ಯುವಕರಿಗೆ ಆಲ್ ದಿ ಬೆಸ್ಟ್ ಹೇಳೋಣ.

  • 2 ತಿಂಗಳು ಸೇನಾ ತರಬೇತಿ ಪಡೆಯಲಿದ್ದಾರೆ ಧೋನಿ

    2 ತಿಂಗಳು ಸೇನಾ ತರಬೇತಿ ಪಡೆಯಲಿದ್ದಾರೆ ಧೋನಿ

    ನವದೆಹಲಿ: ವಿಶ್ವಕಪ್ ನಂತರ ಧೋನಿ ಕ್ರಿಕೆಟಿಗೆ ನಿವೃತ್ತಿ ಹೇಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ವಿಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾದಲ್ಲಿ ಭಾಗಿಯಾಗದ ಕಾರಣ ನಿವೃತ್ತಿ ಹೇಳುತ್ತಾರಾ ಎನ್ನುವ ಪ್ರಶ್ನೆ ಎದ್ದಿತ್ತು. ಈಗ ಧೋನಿ ತನ್ನ ಆಸೆಯನ್ನು ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

    ಮಹೇಂದ್ರ ಸಿಂಗ್ ಧೋನಿ ಕಾಶ್ಮೀರದಲ್ಲಿ ಸೇನಾ ತರಬೇತಿಗೆ ಹೋಗುತ್ತಿದ್ದಾರೆ. ಧೋನಿ ಅವರು ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡವನ್ನು ಸೇರಿ ಕರ್ತವ್ಯ ನಿರ್ವಹಿಸಲು ಇಚ್ಛಿಸಿದ್ದರು. ಅದರಂತೆಯೇ ಧೋನಿ ಅವರು ಪ್ಯಾರಾಚೂಟ್ ರೆಜಿಮೆಂಟ್ ಬೆಟಾಲಿಯನ್ ಅನ್ನು ಸೇರಿಕೊಂಡು ತರಬೇತಿಯಲ್ಲಿ ಭಾಗವಹಿಸಲು ಅನುಮತಿ ಕೇಳಿದ್ದರು. ಇದೀಗ ಧೋನಿ ಅವರ ಮನವಿಯನ್ನು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪುರಸ್ಕರಿಸಿ ಆರ್ಮಿ ಬೆಟಾಲಿಯನ್ ತರಬೇತಿ ಪಡೆಯಲು ಧೋನಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

    ಧೋನಿ ಅವರು ಮುಂದಿನ ಎರಡು ತಿಂಗಳವರೆಗೂ ಪ್ಯಾರಾಚೂಟ್ ರೆಜಿಮೆಂಟ್ ಬೆಟಾಲಿಯನ್ ಜೊತೆ ಜಮ್ಮು ಮತ್ತು ಕಾಶ್ಮೀರದಲ್ಲಿ ತರಬೇತಿ ಪಡೆಯಲಿದ್ದಾರೆ. ಆದರೆ ಧೋನಿ ಅವರು ಯಾವುದೇ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ.

    ಕರ್ನಲ್ ಗೌರವ ಹುದ್ದೆ
    ಧೋನಿ ಅವರಿಗೆ 2011ರಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ನೀಡಲಾಗಿತ್ತು. ಈ ಕರ್ನಲ್ ಗೌರವ ಹುದ್ದೆ ಟೆರಿಟೋರಿಯಲ್ ಆರ್ಮಿಯ 106ನೇ ಇನ್‍ಫ್ಯಾಂಟ್ರಿ ಬೆಟಾಲಿಯನ್‍ಗೆ ಸೇರಿದ್ದಾಗಿತ್ತು. ಭಾರತೀಯ ಸೇನೆ ಹೊಂದಿರುವ ಎರಡು ಪ್ಯಾರಾಚೂಟ್ ರೆಜಿಮೆಂಟ್‍ಗಳು ಪೈಕಿ ಇನ್‍ಫ್ಯಾಂಟ್ರಿ ಬೆಟಾಲಿಯನ್ ಒಂದಾಗಿದೆ. ವಿಶೇಷವೆಂದರೆ ಈ ಹಿಂದೆ ಅಂದರೆ 2015ರಲ್ಲಿ ಕೂಡ ಧೋನಿ ಆಗ್ರಾದಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡದವರೊಂದಿಗೆ ತರಬೇತಿ ಪಡೆದುಕೊಂಡಿದ್ದರು.

    ವಿಶ್ವಕಪ್ ಕ್ರಿಕೆಟ್ ವೇಳೆ ಧೋನಿ ಕೀಪಿಂಗ್ ವೇಳೆ ಪ್ಯಾರಾಚೂಟ್ ರೆಜಿಮೆಂಟ್ ಬಲಿದಾನ್ ಬ್ಯಾಡ್ಜ್ ಧರಿಸಿ ಗೌರವ ಸೂಚಿಸಿದ್ದರು. ಭಾರತದವರು ಈ ಬ್ಯಾಡ್ಜ್ ಧರಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದರು. ಆದರೆ ಐಸಿಸಿ ಬಿಸಿಸಿಐಗೆ ಸೂಚನೆಯ ಹಿನ್ನೆಲೆಯಲ್ಲಿ ಧೋನಿ ನಂತರದ ಪಂದ್ಯಗಳಲ್ಲಿ ಬಲಿದಾನ್ ಬ್ಯಾಡ್ಜ್ ಇರುವ ಗ್ಲೌಸ್ ಧರಿಸಿರಲಿಲ್ಲ.

    ಧೋನಿ ಅವರು, ತಾವೂ ಎರಡು ತಿಂಗಳ ಕಾಲ ಕ್ರಿಕೆಟ್ ಪಂದ್ಯಗಳ ಆಯ್ಕೆಗೆ ಲಭ್ಯವಿರುವುದಿಲ್ಲ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ತಿಳಿಸಿದ್ದಾರೆ. ವಿಶ್ವಕಪ್ ಪ್ರಾರಂಭವಾಗುವ ಮೊದಲೇ ಧೋನಿ ಸೇನಾ ತರಬೇತಿಗೆ ಹೋಗಬೇಕೆಂದು ತೀರ್ಮಾನಿಸಿದ್ದರು. ಆದರೆ ಕೆಲ ಸರಣಿ, ಐಪಿಎಲ್ ಪಂದ್ಯಗಳಿಂದಾಗಿ ಧೋನಿ ತರಬೇತಿ ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಕ್ರಿಕೆಟಿಗೆ 2 ತಿಂಗಳು ವಿರಾಮ ಘೋಷಿಸಿ ಧೋನಿ ಸೇನಾ ತರಬೇತಿ ಪಡೆಯಲು ತೆರಳುತ್ತಿದ್ದಾರೆ.

    ಆಗಸ್ಟ್ 3 ರಿಂದ ಹೋಗುವ ಭಾರತದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಧೋನಿ ಅವರನ್ನು ಆಯ್ಕೆ ಮಾಡಿಲ್ಲ. ಎಂಎಸ್‍ಕೆ ಪ್ರಸಾದ್ ನೇತೃತ್ವದ ಹಿರಿಯ ಆಯ್ಕೆ ಸಮಿತಿ ಏಕದಿನ, ಟಿ20ಐ ಮತ್ತು ಟೆಸ್ಟ್ ತಂಡಗಳನ್ನು ಆಯ್ಕೆ ಮಾಡಲು ಭಾನುವಾರ ಮುಂಬೈನಲ್ಲಿ ಸಭೆ ಸೇರಿತ್ತು.

    ಅಲ್ಲಿ ಎಂಎಸ್ ಧೋನಿ ಸೀಮಿತ ಓವರ್ ಗಳ ಸರಣಿಗೆ ಲಭ್ಯವಿರುವುದಿಲ್ಲ. ಅವರು ಕೂಡ ತಾವು ಇರುವುದಿಲ್ಲ ಎಂದು ತಿಳಿಸಿದ್ದಾರೆ. ವಿಶ್ವಕಪ್ ನಂತರ ನಾವು ಕೆಲವು ಯೋಜನೆಗಳನ್ನು ಹಾಕಿದ್ದೇವೆ. ಜೊತೆಗೆ ರಿಷಬ್ ಪಂತ್ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ಯೋಚಿಸಿದ್ದೇವೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ತಿಳಿಸಿದ್ದರು.

    ನಾವು ಧೋನಿ ಅವರೊಂದಿಗೆ ಭವಿಷ್ಯದ ಚರ್ಚಿಸಿದ್ದೇವೆ. ನಿವೃತ್ತಿ ಅವರ ವೈಯಕ್ತಿಕವಾದ ವಿಚಾರವಾಗಿದೆ. ಧೋನಿಯಂತಹ ಮಹಾನ್ ಕ್ರಿಕೆಟಿಗರಿಗೆ ಯಾವಾಗ ನಿವೃತ್ತಿ ಹೊಂದಬೇಕೆಂದು ತಿಳಿದಿದೆ ಎಂದು ಅವರು ಹೇಳಿದರು.