Tag: ಸೂರ್ಯಾಸ್ತ

  • ಮಂಡ್ಯದಲ್ಲಿ ಮುಸ್ಸಂಜೆ ದಿಢೀರ್ ಬೆಳಕು – ವೈಜ್ಞಾನಿಕ ವಿಶ್ಲೇಷಣೆ

    ಮಂಡ್ಯದಲ್ಲಿ ಮುಸ್ಸಂಜೆ ದಿಢೀರ್ ಬೆಳಕು – ವೈಜ್ಞಾನಿಕ ವಿಶ್ಲೇಷಣೆ

    ಬೆಂಗಳೂರು: ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಹೆರಗನಹಳ್ಳಿಯಲ್ಲಿ ಸಂಜೆಯ ವೇಳೆ ದಿಢೀರ್ ಬೆಳಕು ಮೂಡಿದ ವಿಚಾರ ಸಂಬಂಧ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಈ ರೀತಿ ನಡೆಯಲು ಸಾಧ್ಯವಿಲ್ಲ ಎಂದರೆ ನೋಡಿದವರು ನಮ್ಮ ಗ್ರಾಮದಲ್ಲಿ ನಡೆದಿದೆ ಎಂದು ಹೇಳುತ್ತಿದ್ದಾರೆ. ಈ ಬೆಳಕಿನ ಕುರಿತು ಚರ್ಚೆ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿಯೂ ಈ ರೀತಿಯಾಗಿ ಬೆಳಕು ಮೂಡುವ ಸಾಧ್ಯತೆಯಿದೆ ಎನ್ನುವ ಮಾತು ಈಗ ಕೇಳಿ ಬಂದಿದೆ.

    ನಡೆದಿದ್ದು ಏನು?
    ಕಳೆದ ವಾರದ ಪಾಂಡವಪುರ ಭಾಗದಲ್ಲಿ ಭಾರೀ ಸದ್ದು ಕೇಳಿತ್ತು. ಇದಾದ ಮೂರು ದಿನದಲ್ಲಿ ಹೆರಗನಹಳ್ಳಿಯಲ್ಲಿ ಸಂಜೆ 7:15ಕ್ಕೆ ದಿಢೀರ್ ಬೆಳಕು ಕಾಣಿಸಿದೆ. ಸುಮಾರು 5 ನಿಮಿಷಗಳ ಕಾಲ ಈ ಬೆಳಕು ಇತ್ತು. ಬೆಳಗಿನ ಜಾವ ಬೆಳಕು ಹೇಗೆ ಇರುತ್ತದೋ ಅದೇ ರೀತಿಯಾಗಿ ಸಂಜೆಯೂ ಕಾಣಿಸಿತ್ತು. ಈ ರೀತಿ ಆಗಿರುವುದು ಇದೇ ಮೊದಲ ಬಾರಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ಅಚ್ಚರಿಗೆ ಕಾರಣವಾದ ಈ ಘಟನೆ ನಿಜವಾಗಿಯೇ ನಡೆಯಲು ಸಾಧ್ಯವೇ ಎನ್ನುವ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ  ಭೌತಶಾಸ್ತ್ರ ಪ್ರಾಧ್ಯಾಪಕಿ ಡಾ. ಕಮಲಾ ಅವರನ್ನು ಸಂಪರ್ಕಿಸಿದ್ದು ಅವರು ಮಂಡ್ಯದ ಬೆಳಕನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ.

    ವೈಜ್ಞಾನಿಕ ವಿಶ್ಲೇಷಣೆ ಏನು?
    ಸೂರ್ಯೋದಯ ಮತ್ತು ಸೂರ್ಯಾಸ್ತ ನಮ್ಮ ಬದುಕಿನೊಂದಿಗೆ ಭೌತಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಸೆದುಕೊಂಡಿರುವ ವಿದ್ಯಮಾನಗಳು. ಈ ಎರಡೂ ಘಟನೆಗಳು ಕ್ಷಿತಿಜದಂಚಿನಲ್ಲಿ ನಡೆಯುತ್ತಿರುತ್ತದೆ. ಇವೆರಡರೊಂದಿಗೆ ಬೆಸೆದಿರುವ ವಿದ್ಯಮಾನಗಳು ಮುಂಜಾನೆ ಮತ್ತು ಮುಸ್ಸಂಜೆ.

    ಸೂರ್ಯ ಕ್ಷಿತಿಜದಂಚಿನಲ್ಲಿ ಮರೆಯಾದ ನಂತರವೂ ಸುಮಾರು 18 ಡಿಗ್ರಿಗಳಷ್ಟು ಕೆಳಗಿಳಿಯುವ ತನಕ ಸೂರ್ಯನಿಂದ ಬೆಳಕು ಸ್ಪರ್ಷಕವಾಗಿ (Tangential) ಬರುತ್ತಿರುತ್ತದೆ. ಇದು ಸುಮಾರು 45 – 50 ನಿಮಿಷ ಬರುತ್ತಿರುತ್ತದೆ. ಈ ರೀತಿ ಬಂದ ಬೆಳಕು ನಿರ್ದಿಷ್ಟ ದಿಕ್ಕಿನಲ್ಲಿ ಮೋಡಗಳ ಮೇಲೆ ಬಿದ್ದಾಗ ಅಲ್ಲಿನ ವಾತಾವರಣವನ್ನನುಸರಿಸಿ ಪ್ರತಿಫಲಿತವಾಗುತ್ತದೆ. ಈ ಪ್ರತಿಫಲಿತ ಬೆಳಕು ಮಂಡ್ಯದ ಕೆಲ ಹಳ್ಳಿಗಳ ಮೇಲಾಗಿದೆ.

    ಭೂಮಿಯ ಮೇಲಿನ ವಿವಿಧ ಪ್ರದೇಶಗಳು ಅಲ್ಲಿನ ಸೂರ್ಯಾಸ್ತದ ಸಮಯ ಇತ್ಯಾದಿ ಅಂಶಗಳ ಆಧಾರದ ಮೇಲೆ ಇದನ್ನು ವಿವರಿಸಲಾಗುತ್ತದೆ. ಧ್ರುವ ಪ್ರದೇಶಗಳೆಡೆಗೆ ಸಾಗಿದಂತೆ ಈ ವಿದ್ಯಮಾನ ಸಾಮಾನ್ಯವಾಗಿ ಕಂಡುಬರುತ್ತದೆ. ಇನ್ನು ಉಲ್ಕೆಯ ಸಿದ್ಧಾಂತದ ಆಧಾರದ ಮೇಲೂ ವಿವರಣೆಗಳು ನಡೆಯುತ್ತಿವೆ. ಈ ಕಾರಣದಿಂದ ಮಂಡ್ಯದ ಗ್ರಾಮದಲ್ಲಿ ಬೆಳಕು ಕಾಣಿಸಿರಬಹುದು.  ಇನ್ನಿತರ ವಿವರಣೆಗಳಿಗೆ ಮುಂದೆ ಕಾಯೋಣ.

  • ಮಡಿಕೇರಿ: ವರ್ಷದ ಕೊನೆಯ ಸೂರ್ಯಾಸ್ತದ ಹೊನ್ನ ಬೆಳಕಿನ ಕ್ಷಣಗಳು

    ಮಡಿಕೇರಿ: ವರ್ಷದ ಕೊನೆಯ ಸೂರ್ಯಾಸ್ತದ ಹೊನ್ನ ಬೆಳಕಿನ ಕ್ಷಣಗಳು

    ಮಡಿಕೇರಿ: 2017ರ ಕೊನೆಯ ದಿನವಾದ ಇಂದು ಮಂಜಿನ ನಗರಿ ಮಡಿಕೇರಿಯ ರಾಜಾಸೀಟ್ ನಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ವರ್ಷದ ಕೊನೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಪ್ರವಾಸಿಗರು ಆಗಮಿಸಿದ್ದರು.

    ಮುಗಿಲಿನಲ್ಲಿ ಮೋಡದ ನಡುವೆ ಬಣ್ಣದ ಚಿತ್ತಾರ ಬಿಡಿಸಿದ್ದ ನೇಸರನನ್ನು ಕಂಡು ಪುಳಕಿತರಾದ ಪ್ರವಾಸಿಗರು 2017ರ ರವಿಮಾಮನಿಗೆ ಶುಭ ವಿದಾಯ ಹೇಳಿ ನಾಳೆಯ ಹೊಸ ಸೂರ್ಯನ ಬರುವಿಕೆಗಾಗಿ ಸಂಭ್ರಮಿಸಿದರು. ಸಂಜೆ ವೇಳೆಗೆ ತಣ್ಣಗಾದ ಸೂರ್ಯ ಕೆಂಪು ಕಡಲಲ್ಲಿ ತೇಲಿದಂತೆ ಕಂಡು ಬಂದ. ಸೂರ್ಯಾಸ್ತದ ಕೊನೇ ಕ್ಷಣ ಹತ್ತಿರವಾಗುತ್ತಿದ್ದಂತೆ ನೆರೆದಿದ್ದ ಜನರಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಕೈ ಬೀಸಿ ಹಾಯ್ ಬಾಯ್ ಎನ್ನುತ್ತಾ ಹಲವು ಸಿಹಿ ಕಹಿಗಳ ಮಿಶ್ರಣ ಹೊಂದಿದ್ದ 2017 ಕ್ಕೆ ಜನರು ಖುಷಿ ಖುಷಿಯಿಂದಲೇ ಬೀಳ್ಕೊಟ್ಟರು.

    ಎಂದಿನಂತೆ ಜಗತ್ತು ಬೆಳಗುವ ತನ್ನ ಕಾಯಕ ಮುಗಿಸಿ ರಂಗು ರಂಗಾಗಿ ಕೊನೆಯ ದರ್ಶನ ನೀಡಿ ಮೋಡದ ಮರೆಯಲ್ಲಿ ಮರೆಯಾದ ರವಿಮಾಮನನ್ನು ಕಂಡು ಜನರು ಪುಳಕಿತರಾದರು. ವರ್ಷದ ಕೊನೆಯ ಸೂರ್ಯನನ್ನು ಆತ್ಮೀಯವಾಗಿ ಬೀಳ್ಕೊಡಲೆಂದೇ ದೇಶದ ವಿವಿದೆಡೆಗಳಿಂದ ಇಲ್ಲಿಗೆ ಆಗಮಿಸಿದ್ದರು. ತಮ್ಮ ಕ್ಯಾಮೆರಾಗಳಲ್ಲಿ ವರ್ಷದ ಕೊನೆ ಸೂರ್ಯಾಸ್ತವನ್ನು ಸೆರೆಹಿಡಿದು ಕೊಂಡು ಕೊನೆಯ ಕ್ಷಣಗಳನ್ನು ಖುಷಿ ಖುಷಿಯಿಂದ ಹಂಚಿಕೊಂಡರು. 2017ರ ನೇಸರನಿಗೆ ವಿದಾಯ ಹೇಳಿ 2018ರ ನೇಸರನ ನಿರೀಕ್ಷೆಯಿಂದ ಹೊರನಡೆದರು.

     

  • ಹಚ್ಚ ಹಸಿರಿನಿಂದ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ ಆಗುಂಬೆ

    ಹಚ್ಚ ಹಸಿರಿನಿಂದ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ ಆಗುಂಬೆ

    ಉಡುಪಿ: ಆಗುಂಬೆಯಾ ಪ್ರೇಮ ಸಂಜೆಯಾ ಬಿಡಲಾರೆ ನಾನು ಎಂದಿಗೂ.., ಓ ಗೆಳೆತಿಯೆ ಓ ಗೆಳತಿಯೇ ಓ.,ಗೆಳತಿಯೇ. ಗೆಳತಿಯೇ ಗೆಳತಿಯೇ. ಗೆಳತಿ ಜೊತೆಯಲ್ಲಿ ಇಲ್ಲದಿದ್ದರೂ ಆಗುಂಬೆಗೆ ಹೋದವರು ಈ ಹಾಡನ್ನೊಂದು ಸಾರಿ ಗುನುಗಿಯೇ ಗುನುಗುತ್ತಾರೆ. ಅದು ಆಗುಂಬೆಯ ಮೋಡಿ.

    ಆಗುಂಬೆ ಈ ಹೆಸರೇ ಒಂತರ ರೋಮಾಂಚಕ. ಶಿವಮೊಗ್ಗ- ಉಡುಪಿ ಜಿಲ್ಲೆಯ ನಡುವೆ ಸಿಗುವ ಆಗುಂಬೆ ಘಾಟ್ ಪ್ರವಾಸಿಗರಿಗೆ ಹಾಟ್ ಸ್ಪಾಟ್. ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಆಗುಂಬೆ, ಬೇಸಿಗೆಯಲ್ಲಿ ನೀಲಿ ಆಗಸದಿಂದ ಕಣ್ಮನ ಸೆಳೆಯುತ್ತದೆ. ಆಗುಂಬೆಯ ಚೆಲುವು ಮಳೆಗಾಲದಲ್ಲಿ ಕಣ್ತುಂಬಿಕೊಳ್ಳುವುದೇ ಚಂದ. ಆಗಸದೆತ್ತರದಲ್ಲಿ ನಿಂತು ಮೋಡಗಳನ್ನು ಕಾಲ ಬುಡದಲ್ಲಿ ಕಾಣುವ ಅವಕಾಶವಿರೋದು ಮಳೆಗಾಲದಲ್ಲಿ ಮಾತ್ರ. ಘಾಟ್‍ನ ತಿರುವು ಮುರುವು ರಸ್ತೆ ಸಂಪೂರ್ಣ ಮೋಡದಿಂದ ಮುಸುಕಿರುತ್ತದೆ. ಕಾಣದ ರಸ್ತೆಯಲ್ಲಿ ವಾಹನ ಸಂಚಾರವೇ ಚಾಲಕರಿಗೆ ಒಂದು ಸವಾಲಾಗಿರುತ್ತದೆ.

    ಹೋಗೋದು ಹೇಗೆ?: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಿಂದ ಮೊದಲು ಹೆಬ್ರಿಗೆ ಹೋಗಬೇಕು. ಅಲ್ಲಿಂದ ಸೋಮೇಶ್ವರದ ಮೂಲಕ ಆಗುಂಬೆ ಪ್ರವೇಶ. ಪಶ್ಚಿಮ ಘಟ್ಟದ ತಪ್ಪಲು ಊರೇ ಸೋಮೇಶ್ವರ. ಸೋಮೇಶ್ವರದ ಬಡಕಿಲ್ಲಾಯ ಹೋಟೆಲ್‍ನಲ್ಲಿ ಬಿಸಿ ಬಿಸಿ ಇಡ್ಲಿ, ತೋವೆ, ಗರಂ ಚಾಯ್ ಕುಡಿದು ಆಗುಂಬೆ ನೋಡಲು ಹೊರಟ್ರೆ ಅದ್ರ ಮಜಾನೇ ಬೇರೆ. ಆಗುಂಬೆ ರಸ್ತೆಯ ತಿರುವು ಮುರುವು ಇಕ್ಕೆಲಗಳಲ್ಲಿ ಮಿನಿ ಜಲಪಾತಗಳು ನಮ್ಮನ್ನು ಸ್ವಾಗತ ಮಾಡುತ್ತವೆ. ರಸ್ತೆಯ ಮೇಲೆಯೇ ಮಳೆನೀರು ಹರಿದು ಜಲರಾಶಿಗಳು ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತವೆ.

    ಸನ್ಸೆಟ್ ಪಾಯಿಂಟಲ್ಲಿ ನಿಂತರೆ ಆಗುಂಬೆಯ ಚೆಲುವು ಆಸ್ವಾದಿಸಬಹುದು. ಮಳೆಗಾಲದಲ್ಲಂತೂ ಹಾಲಿನ ಸಾಗರದಂತೆ ಬೆಟ್ಟದ ಕೆಳಭಾಗ ಕಾಣಿಸುತ್ತದೆ. ಮೋಡ ಮರೆಯಾದಾಗ ಅಲ್ಲಲ್ಲಿ ಜಲಪಾತಗಳು ಇಣುಕುತ್ತದೆ, ಮತ್ತೆ ಮರೆಯಾಗುತ್ತದೆ. ಇದು ನೋಡುಗರಿಗೆ ಹಿತವಾದ ಮುದವನ್ನು ನೀಡುತ್ತದೆ.

    ಮೈಗೆ ಸೋಕಿಕೊಂಡೇ ಮೋಡಗಳು ತೇಲಿ ಹೋಗುವ ಅನುಭವವಾಗಬೇಕಂದ್ರೆ ಆಗುಂಬೆಗೆ ಬರಬೇಕು. ದಕ್ಷಿಣ ಭಾರತದ ಚಿರಾಪುಂಜಿ ಅಂತಲೇ ಆಗುಂಬೆಯನ್ನು ಕರೆಯಲಾಗುತ್ತದೆ. ಮಳೆಗಾಲದ ಆರು ತಿಂಗಳು ಯಾವಾಗ ಹೋದರೂ ಆಗುಂಬೆಯಲ್ಲಿ ಸದಾ ಮಳೆಯಿರುತ್ತದೆ. ಲ್ಯಾಟರೈಟ್ ಅನ್ನೋ ಶಿಲೆಯಿಂದಲೇ ಈ ಆಗುಂಬೆಯ ಗುಡ್ಡ ಪ್ರದೇಶ ನಿರ್ಮಾಣವಾಗಿದೆ.

    ಆಗುಂಬೆ ಘಾಟ್ ಹತ್ತಿ ಹೋದರೆ ಆಗುಂಬೆ ಪೇಟೆ ಸಿಗುತ್ತದೆ. ಮಾಲ್ಗುಡಿ ಡೇಸ್ ಚಿತ್ರೀಕರಣವಾದ ಊರದು. ಆಗುಂಬೆ ಪೇಟೆ ಇಂದಿಗೂ ಅದೇ ಹಳೆಯ ಮನೆಗಳ ಶೈಲಿಯನ್ನು, ಬೀದಿಯನ್ನು ಉಳಿಸಿಕೊಂಡಿದೆ.

    ಮಂಗಗಳ ಕಾಟ: ಆಗುಂಬೆ ಘಾಟ್‍ನ ಯಾವ ತಿರುವಿನಲ್ಲಿ ನಿಲ್ಲಿಸಿದರೂ ಕೋತಿಗಳಿಂದ ರಕ್ಷಣೆ ಪಡೆಯಬೇಕಂದ್ರೆ ಕಷ್ಟಪಡಲೇಬೇಕು. ಕೈಯ್ಯಲ್ಲೇನಾದ್ರು ತಿಂಡಿ ಪೊಟ್ಟಣ ಹಿಡ್ಕೊಂಡಿದ್ರೆ ನಮ್ಮ ಕಥೆ ಮುಗಿಯಿತು. ಮಂಗಗಳು ಮುಗಿಬೀಳೋ ಮೊದಲು ತಿಂಡಿ ಹಂಚಿಬಿಡದಿದ್ದರೆ ನಮ್ಮನ್ನು ಅವುಗಳು ಬಿಡೋದೆ ಇಲ್ಲ.

    ಬೈಕ್ ರೈಡ್‍ನಲ್ಲೇ ಆಗುಂಬೆ ಹತ್ತಿ: ಆಗುಂಬೆ ಘಾಟ್‍ನ ನಿಜವಾದ ಸೊಬಗು ಅನುಭವಿಸಬೇಕಾದ್ರೆ ಆಗುಂಬೆಯನ್ನು ಬೈಕಿನಲ್ಲೇ ಹತ್ತಬೇಕು. ಜೋರು ಮಳೆ ಸುರಿಯುತ್ತಿರಬೇಕು, ಒದ್ದೆಯಾಗಬೇಕು ಆಗಷ್ಟೇ ನಿಜವಾದ ಆಗುಂಬೆಯನ್ನು ಅನುಭವಿಸಬಹುದು.

    ಆಗುಂಬೆಯ ಸನ್ಸೆಟ್ ಪಾಯಿಂಟಲ್ಲಿ ಮುಳ್ಳುಸೌತೆ ಮತ್ತು ಅನಾನಾಸು ಸ್ಲೈಸ್‍ಗೆ ಖಾರ ಪುಡಿ, ಉಪ್ಪು, ಪೆಪ್ಪರ್ ಸೇರಿಸಿ ಹತ್ತಾರು ಜನ ವ್ಯಾಪಾರ ಮಾಡ್ತಾರೆ. ಮಳೆಯ ನಡುವೆ ಖಡಕ್ ಸ್ಲೈಸ್‍ಗಳನ್ನು ತಿನ್ನೋ ಖುಷಿಯೇ ಬೇರೆ. ಒಂದು ದಿನದ ಮಟ್ಟಿಗೆ ಎಂಜಾಯ್ ಮಾಡಬೇಕಂದ್ರೆ ಆಗುಂಬೆ ಪರ್ಫೆಕ್ಟ್ ಪ್ಲೇಸ್. ಬೋಟಿಂಗ್, ಸ್ಮಿಮ್ಮಿಂಗ್, ವ್ಯವಸ್ಥೆಯೂ ಆಗುಂಬೆಯಲ್ಲಿದ್ದು ಸಿಕ್ಕಾಪಟ್ಟೆ ಎಂಜಾಯ್ ಮಾಡೋ ಅವಕಾಶವಿದೆ.

    ಬೇಸಿಗೆ ಆಗುಂಬೆ: ಬೇಸಿಗೆ ಆಗುಂಬೆಯಲ್ಲಿ ಬರೀ ಹೆಸರಿಗಷ್ಟೇ ಬೇಸಿಗೆ. ಆದ್ರೆ ಆಗುಂಬೆ ವರ್ಷಪೂರ್ತಿ ತಂಪಾಗಿಯೇ ಇರುತ್ತೆ. ಸಮುದ್ರದಿಂದ ಜೋರಾಗಿ ಬೀಸೋ ಗಾಳಿ ಪಶ್ಚಿಮ ಘಟ್ಟಕ್ಕೆ ಅಪ್ಪಳಿಸುತ್ತದೆ. ಹೀಗಾಗಿ ಸದಾ ತಂಗಾಳಿ ಬೀಸ್ತಾ ತಂಪಾದ ವಾತಾವರಣ ಇರುತ್ತದೆ.

    ಸಮುದ್ರ ತೀರದಲ್ಲಿ ಸೂರ್ಯಾಸ್ತ ನೋಡುವುದಕ್ಕೂ, ಆಗುಂಬೆ ಸನ್ಸೆಟ್ ಪಾಯಿಂಟಲ್ಲಿ ಸೂರ್ಯಾಸ್ತ ನೋಡುವುದಕ್ಕೂ ಬಹಳ ವ್ಯತ್ಯಾಸವಿದೆ. ಆಗಸದಲ್ಲಿ ನಿಂತು ಸಮುದ್ರ ನೋಡೋ ಅವಕಾಶ ಮತ್ತೆಲ್ಲೂ ಸಿಗಲ್ಲ. ಸೂರ್ಯಾಸ್ತದ ವೇಳೆ ಬಾನೆಲ್ಲಾ ಬಂಗಾರದ ಬಣ್ಣಕ್ಕೆ ತಿರುಗುತ್ತದೆ. ಅವಕಾಶ ಸಿಕ್ರೆ, ಸಮಯ ಮಾಡ್ಕೊಂಡು ಒಂದ್ಸಾರಿ ಆಗುಂಬೆ ಸೊಬಗು ನೋಡೋದನ್ನು ಮಿಸ್ ಮಾಡ್ಕೋಬೇಡಿ.