Tag: ಸುಳ್ವಾಡಿ ಮಾರಮ್ಮ ದೇವಸ್ಥಾನ

  • ಸುಳ್ವಾಡಿ ವಿಷ ಪ್ರಸಾದ ಪ್ರಕರಣ – ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ

    ಸುಳ್ವಾಡಿ ವಿಷ ಪ್ರಸಾದ ಪ್ರಕರಣ – ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ

    ಚಾಮರಾಜನಗರ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ ಆಗಿದೆ.

    ಜಾಮೀನು ಅರ್ಜಿ ವಜಾಗೊಳಿಸಿ ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್ ಭಾರತಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲೂ ಜಾಮೀನು ಅರ್ಜಿ ವಜಾ ಆಗಿತ್ತು.

    ಅನಾರೋಗ್ಯದ ಕಾರಣ ನೀಡಿ ಆರೋಪಿ ಇಮ್ಮಡಿ ಮಹದೇವಸ್ವಾಮಿ ಮತ್ತೆ ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ಮತ್ತೆ ಜಾಮೀನು ಅರ್ಜಿಯನ್ನು ಚಾಮರಾಜನಗರ ಜಿಲ್ಲಾ ನ್ಯಾಯಾಲಯವು ವಜಾ ಮಾಡಿದೆ. ಕಳೆದ 5 ವರ್ಷ 11 ತಿಂಗಳಿಂದ ಇಮ್ಮಡಿ ಮಹದೇವಸ್ವಾಮಿ ಜೈಲಿನಲ್ಲಿದ್ದಾರೆ.

    ಮಹದೇಶ್ವರ ಬೆಟ್ಟ ಸಾಲೂರು ಮಠದ ಕಿರಿಯ ಸ್ವಾಮೀಜಿ ಆಗಿದ್ದ ಇಮ್ಮಡಿ ಮಹದೇವಸ್ವಾಮಿ, ಸುಳ್ವಾಡಿ ಕಿಚ್‌ಗುತ್ ಮಾರಮ್ಮ ದೇವಸ್ಥಾನದ ಆಡಳಿತದಲ್ಲಿ ಅಧಿಪತ್ಯ ಸ್ಥಾಪಿಸಲು ಪಿತೂರಿ ನಡೆಸಿದ್ದರು. ಮತ್ತೊಂದು ಗುಂಪಿಗೆ ಕೆಟ್ಟ ಹೆಸರು ತರಲು ಪ್ರಸಾದಕ್ಕೆ ವಿಷ ಬೆರೆಸಿದ್ದ ಆರೋಪ ಕೇಳಿಬಂದಿತ್ತು.

    2018ರ ಡಿ.14 ರಲ್ಲಿ ನಡೆದ ಘಟನೆಯಲ್ಲಿ 17 ಮಂದಿ ಭಕ್ತರು ಮೃತಪಟ್ಟಿದ್ದರು. 127 ಮಂದಿ ಅಸ್ವಸ್ಥಗೊಂಡಿದ್ದರು. ಸದ್ಯ ಮೊದಲ ಆರೋಪಿ ಇಮ್ಮಡಿ ಮಹದೇವಸ್ವಾಮಿ, ಎರಡನೇ ಆರೋಪಿ ಅಂಬಿಕಾ, ಮೂರನೇ ಆರೋಪಿ ದೇವಸ್ಥಾನದ ವ್ಯವಸ್ಥಾಪಕ ಮಾದೇಶ್, ನಾಲ್ಕನೇ ಆರೋಪಿ ತಂಬಡಿ ದೊಡ್ಡಯ್ಯ ಮೈಸೂರಿನ ಜೈಲಿನಲ್ಲಿದ್ದಾರೆ.

  • ಸುಳ್ವಾಡಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಗಿಡ ನೆಟ್ಟು ಶ್ರದ್ಧಾಂಜಲಿ

    ಸುಳ್ವಾಡಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಗಿಡ ನೆಟ್ಟು ಶ್ರದ್ಧಾಂಜಲಿ

    ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಗಿಡ ನೆಡುವ ಮೂಲಕ ವಿಶೇಷವಾಗಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

    ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ ಗುತ್ ಮಾರಮ್ಮನ ದೇವಾಲಯದ ಪ್ರಸಾದ ಸೇವಿಸಿ ಸಾವನ್ನಪ್ಪಿದವರಿಗೆ ವಿಶೇಷ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಪಕ್ಕದಲ್ಲಿ ಅರಳಿ ಹಾಗೂ ಬೇವಿನ ಗಿಡ ನೆಟ್ಟು ವಿಷ ದುರಂತದಲ್ಲಿ ಮಡಿದವರಿಗಾಗಿ ಹಾಲು ತುಪ್ಪ ಎರೆದು ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.

    ಡಿಸೆಂಬರ್ 14, 2018 ರಲ್ಲಿ ಸುಳ್ವಾಡಿ ಮಾರಮ್ಮನ ವಿಷ ದುರಂತದಲ್ಲಿ 17 ಜನ ವಿಷ ಪ್ರಾಶನ ಮಾಡಿ ಸಾವನ್ನಪ್ಪಿದ್ದರು. 120 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಸಾವನ್ನಪ್ಪಿದ ಎಲ್ಲರಿಗೂ ಮೃತರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

  • ಬಿಕೋ ಎನ್ನುತ್ತಿದೆ ಭಕ್ತರಿಂದ ತುಂಬಿ ತುಳುಕುತ್ತಿದ್ದ ಸಾಲೂರು ಮಠ

    ಬಿಕೋ ಎನ್ನುತ್ತಿದೆ ಭಕ್ತರಿಂದ ತುಂಬಿ ತುಳುಕುತ್ತಿದ್ದ ಸಾಲೂರು ಮಠ

    – ಸಂಸ್ಕೃತ ಪಾಠ ಶಾಲೆಗೂ ಬೀಗ

    ಚಾಮರಾಜನಗರ/ಮೈಸೂರು: ಪ್ರತಿ ದಿನವೂ ಭಕ್ತರಿಂದ ತುಂಬಿ ತುಳುಕುತ್ತಿದ್ದ ಹಾಗೂ ದಾಸೋಹಕ್ಕೆ ಪ್ರಸಿದ್ಧವಾಗಿರುವ ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠ ಇದೀಗ ಬಿಕೋ ಎನ್ನುತ್ತಿದೆ.

    ಸುಳ್ವಾಡಿ ಮಾರಮ್ಮ ದುರಂತದ ಪ್ರಕರಣದಲ್ಲಿ ಬಂಧಿಯಾಗಿರುವ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮೀಜಿಯಿಂದ ಮಠಕ್ಕೆ ಕಳಂಕ ಬಂದಿದೆ. ಇದ್ರಿಂದಾಗಿ ಇತ್ತ ಭಕ್ತರೇ ಸುಳಿಯುತ್ತಿಲ್ಲ. ಈ ಮೊದಲು ಭಕ್ತರಿಂದ ತುಂಬಿ ತುಳುಕುತ್ತಿದ್ದ ಮಠ ಇದೀಗ ಸಂಪೂರ್ಣವಾಗಿ ಸ್ತಬ್ಧವಾಗಿದೆ.

    ಇದಲ್ಲದೇ ಮಠದ ಮುಂಭಾಗವಿರುವ ಸಂಸ್ಕೃತ ಪಾಠ ಶಾಲೆಯೂ ಮುಚ್ಚಿದೆ. ಈ ಶಾಲೆಯಲ್ಲಿ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಸಂಸ್ಕೃತ ಪಾಠವನ್ನು ಕಲಿಯುತ್ತಿದ್ದರು. ಇದೀಗ ಆ ಶಾಲೆಗಳಿಗೂ ಸಹ ಬೀಗ ಹಾಕಲಾಗಿದೆ.

    ಫೋಟೋ ಹರಿದು ಆಕ್ರೋಶ:
    ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಈಗ ಸಾಲೂರು ಮಠದ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. 1ನೇ ಆರೋಪಿ ಇಮ್ಮಡಿ ಮಹದೇಸ್ವಾಮಿ ವಿರುದ್ಧ ಸಿಡಿದೆದ್ದಿರುವ ಭಕ್ತರು, ಸಾಲೂರು ಮಠದಲ್ಲಿದ್ದ ಕಿರಿಯ ಸ್ವಾಮೀಜಿ ಫೋಟೋ ಹರಿದು ಭಕ್ತರ ಆಕ್ರೋಶ ಹೊರಹಾಕಿದ್ದಾರೆ. ವಿಷ ರಾಕ್ಷಸ ಇಮ್ಮಡಿ ಮಹಾದೇವಸ್ವಾಮಿ ಫೋಟೋ ಒಡೆದು ಚೂರುಚೂರು ಮಾಡಿದ್ದಾರೆ.

    ಇಮ್ಮಡಿ ಸ್ವಾಮಿ ಕುಳಿತುಕೊಳ್ಳುತ್ತಿದ್ದ ಪೀಠದ ಹಿಂದಿನ ಭಾವಚಿತ್ರವನ್ನು ಮಠದಿಂದ ಹೊರಗಿಡಲಾಗಿತ್ತು. ಅದನ್ನು ಕಂಡ ಕೂಡದೇ ಸಿಟ್ಟಿಗೆದ್ದ ಭಕ್ತರು, ತಮ್ಮಲ್ಲಿನ ಆಕ್ರೋಶ ಹೊರಹಾಕಿದ್ದಾರೆ. ಹಿರಿಸ್ವಾಮಿ ಮತ್ತು ಕಿರಿಸ್ವಾಮಿ ಒಟ್ಟಿಗೆ ಇದ್ದ ಫೋಟೋಗಳಲ್ಲಿ ಕಿರಿಸ್ವಾಮಿ ಫೋಟೋವನ್ನು ಹರಿದುಹಾಕಿದ್ದಾರೆ. ಇಮ್ಮಡಿ ಮಹದೇಸ್ವಾಮಿಯಿಂದ ಮಠಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಭಕ್ತರು ಆರೋಪಿಸಿದ್ದಾರೆ.

    ಅಸ್ವಸ್ಥರಿಗೆ ಮುಂದುವರಿದ ಚಿಕಿತ್ಸೆ:
    ದೇವಸ್ಥಾನದ ಕ್ರಿಮಿನಾಶಕ ಪ್ರಸಾದ ಸೇವೆನೆಯಿಂದ ಅಸ್ವಸ್ಥರಾದವರಿಗೆ 11ನೇ ದಿನವೂ ಚಿಕಿತ್ಸೆ ಮುಂದುವರಿದಿದೆ. ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 33 ಮಂದಿಗೆ ಚಿಕಿತ್ಸೆ ನೀಡಲಾಗ್ತಿದೆ. ಅದರಲ್ಲಿ 8 ಮಂದಿಗೆ ಐಸಿಯೂನಲ್ಲಿ ಟ್ರೀಟ್‍ಮೆಂಟ್ ನೀಡಲಾಗ್ತಿದೆ. 12 ಮಂದಿಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ. ಇನ್ನು 13 ಮಂದಿಗೆ ಸಾಮಾನ್ಯ ವಾರ್ಡ್‍ನಲ್ಲಿ ನೀಡಲಾಗ್ತಿದೆ. ಇನ್ನು ಕೆ.ಆರ್.ಆಸ್ಪತ್ರೆಯಿಂದ ಎಲ್ಲಾ ಅಸ್ವಸ್ಥರು ಡಿಸ್ಚಾರ್ಜ್ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ವಿಷ ದುರಂತದ ತನಿಖೆ ಚುರುಕು- ಇಮ್ಮಡಿ ಮಹದೇವಸ್ವಾಮಿ ಬಂಧನ..?

    ಸುಳ್ವಾಡಿ ವಿಷ ದುರಂತದ ತನಿಖೆ ಚುರುಕು- ಇಮ್ಮಡಿ ಮಹದೇವಸ್ವಾಮಿ ಬಂಧನ..?

    – ಇತ್ತ ಅಂಬಿಕಾಗೂ ಫುಲ್ ಡ್ರಿಲ್

    ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಕಿಚ್‍ಗುತ್ತ್ ಮಾರಮ್ಮ ವಿಷಪ್ರಸಾದಕ್ಕೆ ಬಿಗ್ ಟ್ವಿಸ್ಟ್ ದೊರೆತಿದೆ. ವಿಷ ದುರಂತದ ತನಿಖೆ ಚುರುಕುಗೊಂಡಿದೆ. ಸಾಲೂರು ಮಠದ ಕಿರಿಯ ಸ್ವಾಮೀಜಿಯ ತೀವ್ರ ವಿಚಾರಣೆ ಮಾಡಲಾಗುತ್ತಿದ್ದು, ಇಮ್ಮಡಿ ಮಹದೇವಸ್ವಾಮಿ ಬಂಧನವಾಗೋ ಸಾಧ್ಯತೆ ಹೆಚ್ಚಿದೆ.

    ಇಂದು ರಾತ್ರಿ ಅಥವಾ ನಾಳೆ ವಶಕ್ಕೆ ಪಡೆಯೋ ಸಾಧ್ಯತೆಗಳಿವೆ. ಯಾಕಂದ್ರೆ ಸ್ವಾಮೀಜಿಯನ್ನು ಇಂದು ಪೊಲೀಸರು ಎರಡನೇ ಬಾರಿಗೆ ವಿಚಾರಣೆಗೆ ಒಳಪಡಿಸಿದ್ದಾರೆ. ಶಂಕಿತ ಆರೋಪಿಗಳು ಸ್ವಾಮೀಜಿ ಹೆಸರು ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಮತ್ತೆ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ಈ ಮೂಲಕ ಸ್ವಾಮೀಜಿ ಯಾರದೋ ಮೇಲಿನ ದ್ವೇಷಕ್ಕೆ ವಿಷ ಬೆರೆಸಲು ಸೂಚಿಸಿದ್ರಾ ಅನ್ನೋ ಪ್ರಶ್ನೆಯೊಂದು ಮೂಡಿದೆ.

    ಇತ್ತ ಆರೋಪಿ ಮಾದೇಶ್ ಪತ್ನಿ ಅಂಬಿಕಾರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಪ್ರಸಾದಕ್ಕೆ ಕ್ರಿಮಿನಾಶಕ ಬೆರೆಸಿರುವ ವಿಚಾರ ಈಕೆಗೂ ಗೊತ್ತಿರಬಹುದು ಎಂಬ ಶಂಕೆ ಮೇಲೆ ಕಳೆದ ರಾತ್ರಿಯಿಂದ ಇಲ್ಲಿವರೆಗೂ ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಈಗಾಗಲೇ ಅಂಬಿಕಾಳ ಗಂಡ ದೇವಸ್ಥಾನದ ವ್ಯವಸ್ಥಾಪಕ ಮಾದೇಶ್ ಪೊಲೀಸ್ ವಶದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾನೆ. ಇದನ್ನೂ ಓದಿ: ವಿಷ ಪ್ರಸಾದ ಕೇಸ್ – ರಾತ್ರಿ ಅಡ್ಮಿಟ್, ಬೆಳಗ್ಗೆ ಡಿಸ್ಚಾರ್ಜ್ ಕಿರಿಯ ಸ್ವಾಮೀಜಿ ನಡೆ ಬಗ್ಗೆ ಮೂಡಿದೆ ಅನುಮಾನ


    ಒಟ್ಟಿನಲ್ಲಿ ಸುಳ್ವಾಡಿಯಲ್ಲಿರುವ ಮಾರಮ್ಮನ ಪ್ರಸಾದಕ್ಕೆ ಹಾಕಲು ವಿಷ ಸಿಕ್ಕಿದಾದ್ರೂ ಎಲ್ಲಿಂದ..? ಕೊಟ್ಟಿದ್ದು ಯಾರು..? ತಂದಿದ್ದು ಯಾರು..? ಇದು ಇನ್ನೂ ನಿಗೂಢವಾಗಿರೋ ಪ್ರಶ್ನೆಯಾಗಿದೆ. ಸುಳ್ವಾಡಿಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಮೂರು ಅಂಗಡಿಗಳಿವೆ. ಆದ್ರೆ ಆ ಅಂಗಡಿಗಳಲ್ಲಿ ಕ್ರಿಮಿನಾಶಕ ಮಾರುತ್ತಿಲ್ಲ. ಕೀಟನಾಶಕ ಬೇಕು ಅಂದ್ರೆ 50 ಕಿಲೋ ಮೀಟರ್ ದೂರದಲ್ಲಿರುವ ಹನೂರಿಗೆ ಬರಬೇಕು. ಸುಳ್ವಾಡಿ ಭಾಗದಲ್ಲಿ ಬೆಳೆದಿರೋದೇ ಜೋಳ ಮತ್ತು ಸೂರ್ಯಕಾಂತಿ ಬೆಳೆ. ಅವುಗಳಿಗೆ ಕ್ರಿಮಿನಾಶಕದ ಅವಶ್ಯಕತೆ ಇಲ್ಲ. ಹಾಗಾದ್ರೆ ಪ್ರಸಾದಕ್ಕೆ ವಿಷ ತಂದಿದ್ದು ಎಲ್ಲಿಂದ ಅನ್ನೋ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ.

    https://www.youtube.com/watch?v=y44ngMg3714

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೋಪುರ ವಿಚಾರಕ್ಕೆ ಅಸಮಾಧಾನವಿತ್ತು, ಆದ್ರೆ ವಿಷ ಬೆರೆಸಿಲ್ಲ- ಶಂಕಿತರಿಂದ ಗೊಂದಲದ ಹೇಳಿಕೆ

    ಗೋಪುರ ವಿಚಾರಕ್ಕೆ ಅಸಮಾಧಾನವಿತ್ತು, ಆದ್ರೆ ವಿಷ ಬೆರೆಸಿಲ್ಲ- ಶಂಕಿತರಿಂದ ಗೊಂದಲದ ಹೇಳಿಕೆ

    ಚಾಮರಾಜನಗರ: ಇಲ್ಲಿ ಸುಳುವಾಡಿ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿದ ಬಳಿಕ ಮೃತಪಟ್ಟ ಭಕ್ತರ ಸಂಖ್ಯೆ ಇಂದು 18ಕ್ಕೆ ಏರಿದೆ. ಆದ್ರೆ ಇತ್ತ ವಶಕ್ಕೆ ಪಡೆದ ಇಬ್ಬರು ಶಂಕಿತರು ಪ್ರಕರಣದ ಬಗ್ಗೆ ಗೊಂದಲವಾದ ಹೇಳಿಕೆ ನೀಡುತ್ತಿದ್ದಾರೆ.

    ನಾವು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆವು. ಗೋಪುರ ವಿಚಾರಕ್ಕೆ ಅಸಮಾಧಾನ ಇದ್ದದ್ದು ನಿಜ. ಆದ್ರೆ ವಿಷ ಬೆರೆಸಿಲ್ಲ. ಈ ಘಟನೆಯಲ್ಲಿ ನನ್ನ ಸಂಬಂಧಿಗಳು ಕೂಡ ಆಸ್ಪತ್ರೆಯ ಪಾಲಾಗಿದ್ದಾರೆ ಎಂದು ಪೊಲೀಸರ ಮುಂದೆ ಶಂಕಿತ ಮಾದೇಶ್ ಹೇಳಿಕೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ.

    ಪ್ರಕರಣ ಸಂಬಂಧ ನಾಲ್ವರು ಶಂಕಿತರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗುತ್ತಿದೆ. ಸದ್ಯ ಆಹಾರದ ವಸ್ತುವನ್ನು ಎಫ್ ಎಸ್ ಎಲ್ ಗೆ ರವಾನೆ ಮಾಡಲಾಗಿದೆ. ಆಹಾರದಲ್ಲಿ ಯಾವ ವಿಷಕಾರಿ ಅಂಶ ಇದೆ ಎಂಬುದರ ಬಗ್ಗೆ ತಿಳಿದುಕೊಳ್ಳಲಾಗುತ್ತಿದೆ. ವೈದ್ಯರು ಕ್ರಿಮಿನಾಶಕ ಬೆರೆಸಿರುವುದಾಗಿ ಅಭಿಪ್ರಾಯ ಪಟ್ಟಿದ್ದಾರೆ. ತನಿಖೆ ನಡೆಯುತ್ತಾ ಇದೆ ಶಂಕಿತರೇ ದ್ವಂದ್ವದಲ್ಲಿ ಇರೋದು ಸ್ವಲ್ಪ ಕಷ್ಟವಾಗ್ತಿದೆ ಅಂತ ತಿಳಿದುಬಂದಿದೆ.

    ಘಟನೆ ವಿವರ:
    ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಶುಕ್ರವಾರ ನಡೆದಿತ್ತು. ವಿವಿಧ ಪೂಜಾ ಕಾರ್ಯಗಳು ಮುಗಿದ ಬಳಿಕ ಮಧ್ಯಾಹ್ನ ಭಕ್ತರಿಗೆ ಪ್ರಸಾದ (ರೈಸ್‍ಬಾತ್) ವ್ಯವಸ್ಥೆ ಮಾಡಲಾಗಿತ್ತು. ಸುಳ್ವಾಡಿ ಸುತ್ತಮುತ್ತಲಿನ ಅನೇಕ ಗ್ರಾಮದ ಜನರು ದೇವಿಯ ದರ್ಶನಕ್ಕೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಶಂಕುಸ್ಥಾಪನೆ ಬಳಿಕ ಕೆಲವರು ಪ್ರಸಾದ ಸೇವಿಸಿ ತಮ್ಮ ಮನೆಗೆ ಹಾಗೂ ಊರುಗಳಿಗೆ ತೆರಳಿದರು. ದೇವಸ್ಥಾನದ ಪ್ರಸಾದ ಸೇವಿಸಿದ ಬಳಿಕ ಎಲ್ಲರ ಕಣ್ಣುಗಳು ನೀಲಿ ಬಣ್ಣಕ್ಕೆ ತಿರುಗಿದೆ. ಎಲ್ಲರನ್ನೂ ಗಮನಿಸಿದಾಗ ಉಸಿರಾಟದ ತೊಂದರೆ ಕಾಣಿಸಿದೆ. ಪ್ರಸಾದದಲ್ಲಿ ಕ್ರಿಮಿನಾಶಕ ಅಥವಾ ಟಿಕ್-20 ಬೆರೆಸಿರುವ ಸಾಧ್ಯತೆ ಇದೆ ಎಂದು ಮೈಸೂರು ಜಿಲ್ಲಾಸ್ಪತ್ರೆ ಡಿ.ಎಚ್.ಒ ಡಾ.ಬಸವರಾಜ್ ಹೇಳಿದ್ದರು.


    ದೇವಾಲಯ ಬಂದ್:
    ಇನ್ನು ದುರಂತದ ಪರಿಣಾಮ ಇತಿಹಾಸದಲ್ಲೇ ಮೊದಲ ಬಾರಿಗೆ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮ ಗುಡಿಗೆ ಬೀಗ ಜಡಿಯಲಾಗಿದೆ. ನಿತ್ಯವೂ ಧಾರ್ಮಿಕ ಚಟುವಟಿಕೆಗಳಿಂದ ಕೂಡಿರುತ್ತಿದ್ದ ದೇವಸ್ಥಾನವನ್ನು ಬಂದ್ ಮಾಡಲಾಗಿದೆ. ದೇವಸ್ಥಾನದ ಪುರೋಹಿತರು, ಅಡುಗೆ ತಯಾರಕರು, ಭದ್ರತಾ ಸಿಬ್ಬಂದಿಯ ಕುಟುಂಬಗಳಲ್ಲೂ ಸಾವು, ನೋವು ಸಂಭವಿಸಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv