Tag: ಸುಳ್ವಾಡಿ

  • ಸುಳ್ವಾಡಿ ವಿಷ ಪ್ರಸಾದ ದುರಂತ – ಸಾಮೂಹಿಕ ಶ್ರದ್ಧಾಂಜಲಿ ಸಭೆ

    ಸುಳ್ವಾಡಿ ವಿಷ ಪ್ರಸಾದ ದುರಂತ – ಸಾಮೂಹಿಕ ಶ್ರದ್ಧಾಂಜಲಿ ಸಭೆ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಯನ್ನು ಕೋರುವ ಸಲುವಾಗಿ ಸಾಮೂಹಿಕ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

    ಏನಿದು ಪ್ರಕರಣ?
    ಸುಳ್ವಾಡಿ ಮಾರಮ್ಮನ ವಿಷ ದುರಂತ ಪ್ರಕರಣ ನಡೆದು ಶನಿವಾರಕ್ಕೆ ಒಂದು ವರ್ಷವಾಗಿದೆ. ದೇವಾಲಯದ ಆಡಳಿತ ಚುಕ್ಕಾಣಿಗೋಸ್ಕರ ಕಿಚ್ ಗುತ್ ಮಾರಮ್ಮನ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಿದ ಪರಿಣಾಮ 17 ಜನ ಸಾವನ್ನಪ್ಪಿದ್ದು, 120 ಮಂದಿ ಅಸ್ವಸ್ಥರಾಗಿದ್ದರು. ಈ ಪ್ರಕರಣ ಸಂಬಂಧ ಇಮ್ಮಡಿ ಮಹದೇವಸ್ವಾಮಿ, ದೊಡ್ಡಯ್ಯ, ಅಂಬಿಕಾ, ಮಾದೇಶ್ ಎಂಬ ಆರೋಪಿಗಳ ಬಂಧನವಾಗಿತ್ತು.

    ಕಳೆದ ಬಾರಿಯೂ ಸಹ ಮೃತಪಟ್ಟ ಎಲ್ಲಾ ಕುಟುಂಬಸ್ಥರು ಸೇರಿ ಸುಳ್ವಾಡಿ ಗ್ರಾಮದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ್ದರು. ಸಾವನ್ನಪ್ಪಿದ ಎಲ್ಲರ ಆತ್ಮಕ್ಕೆ ಶಾಂತಿ ಕೋರಿದರು. ಅದೇ ರೀತಿ ಈ ಬಾರಿಯೂ ಸಹ ಸುಳ್ವಾಡಿ ದೇವಾಲಯದ ಮುಂಭಾಗ ವಿಷ ಪ್ರಸಾದ ತಿಂದು ಮಡಿದವರ ಆತ್ಮಕ್ಕೆ ಶಾಂತಿ ಕೋರಲು ಸಾಮೂಹಿಕ ಶ್ರದ್ಧಾಂಜಲಿ ನಡೆಸಲಾಯಿತು. ಈ ಸಭೆ ನಡೆಯುವಾಗ ಕೆಲವರು ತಮ್ಮ ಮನೆಯವರನ್ನು ನೆನೆದು ಕಣ್ಣೀರು ಹಾಕಿದರು.

    ಈ ಸಭೆಯಲ್ಲಿ ಸ್ಥಳೀಯ ಶಾಸಕ ನರೇಂದ್ರ, ಮಾಜಿ ಶಾಸಕಿ ಪರಿಮಳಾ ನಾಗಪ್ಪ ಸೇರಿದಂತೆ ಇತರರು ಸೇರಿದ್ದು, ಮೃತಪಟ್ಟ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

  • ಸುಳ್ವಾಡಿ ಮಾರಮ್ಮ ದೇಗುಲ ತೆರೆಯುವಂತೆ ಭಕ್ತರ ಕಣ್ಣೀರು

    ಸುಳ್ವಾಡಿ ಮಾರಮ್ಮ ದೇಗುಲ ತೆರೆಯುವಂತೆ ಭಕ್ತರ ಕಣ್ಣೀರು

    ಚಾಮರಾಜನಗರ: ವಿಷ ಪ್ರಸಾದ ಸೇವನೆಯಿಂದ 17 ಮಂದಿ ಸಾವನ್ನಪ್ಪಿ 120ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು ಸಹ ಭಕ್ತರಿಗೆ ಆ ದೇವಿಯ ಮೇಲಿನ ಭಕ್ತಿ ಒಂದಿನಿತು ಕಡಿಮೆಯಾಗಿಲ್ಲ. ಈ ದುರಂತದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಮುಚ್ಚಿ ಒಂದು ವರ್ಷ ಕಳೆಯುತ್ತಾ ಬಂದಿದೆ. ದೇವಿಯ ದರ್ಶನ ಸಿಗದೇ ಭಕ್ತರು ಕಣ್ಣೀರಿಟ್ಟು ಗೋಳಾಡುತ್ತಿದ್ದಾರೆ. ದೇವಸ್ಥಾನ ಮುಚ್ಚಿರುವುದರಿಂದ ಮಾರಮ್ಮ ಮುನಿಸಿಕೊಂಡಿದ್ದಾಳೆ ಎಂಬುದು ಅಲ್ಲಿನ ಜನರ ನಂಬಿಕೆ. ಹೀಗಾಗಿಯೇ ಹಲವಾರು ರೀತಿಯ ರೋಗ ರುಜಿನಗಳು, ಸಂಕಷ್ಟಗಳು ಬರುತ್ತಿವೆ ಎಂದು ಭಕ್ತರು ನಂಬಿದ್ದಾರೆ.

    ಹೌದು. ಜಿಲ್ಲೆಯ ಹನೂರು ತಾಲೋಕಿನ ಸುಳ್ವಾಡಿ ಕಿಚ್ ಗುತ್ ಮಾರಮ್ಮ ದೇವಸ್ಥಾನದ ಆಡಳಿತ ಚುಕ್ಕಾಣಿ ಹಿಡಿಯುವ ಹುನ್ನಾರಕ್ಕೆ 17 ಮಂದಿ ಬಲಿಯಾಗಿದ್ದರು. ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ ಹಾಗು ಇತರ ಮೂವರು ಸೇರಿ ಪ್ರಸಾದದಲ್ಲಿ ವಿಷಬೆರೆಸಿ ದೊಡ್ಡ ದುರಂತಕ್ಕೆ ಕಾರಣವಾಗಿ ಕಂಬಿ ಎಣಿಸುತ್ತಿದ್ದಾರೆ.

    ಈ ದುರಂತದ ಹಿನ್ನೆಲೆಯಲ್ಲಿ ಕಿಚ್ ಗುತ್ ಮಾರಮ್ಮ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವರ್ಗಾಯಿಸಿ ಬೀಗ ಜಡಿಯಲಾಗಿದೆ. ಹೀಗಾಗಿ ಪೂಜೆಯು ನಿಂತು ಹೋಗಿದೆ. ದೇವಸ್ಥಾನ ಮುಚ್ಚಿರುವುದರಿಂದ ಮಾರಮ್ಮ ದೇವಿ ಮುನಿಸಿಕೊಂಡಿದ್ದಾಳೆ. ಹಾಗಾಗಿ ಸುತ್ತಮುತ್ತಲ ಗ್ರಾಮಗಳಲ್ಲಿ ರೋಗ ರುಜಿನಗಳು ಕಾಣಿಸಿಕೊಳ್ಳುತ್ತಿವೆ. ಜನರು ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ತಾಯಿ ಮಾರಮ್ಮನ ಬಾಗಿಲು ಮುಚ್ಚಿದ ನಂತ್ರ ಸಂಕಷ್ಟಗಳು ಎದುರಾಗಿದ್ದು ಇದೆಲ್ಲ ದೂರಾಗಬೇಕು ಅಂದರೆ ದೇವಾಸ್ಥಾನದ ಬಾಗಿಲು ತೆರೆಯುವಂತೆ ಅಳಲು ತೋಡಿಕೊಂಡರು.

    ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಿಕ್ಷಣ ಸಚಿವ ಇಂದು ಸುಳ್ವಾಡಿ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಭಕ್ತರ ಕಣ್ಣಿರ ಕಟ್ಟೆ ಒಡೆಯಿತು. ದೇವಸ್ಥಾನವನ್ನು ಕೂಡಲೇ ತೆರೆಯುವಂತೆ ಭಕ್ತರು ಗೋಳಿಟ್ಟ ಪ್ರಸಂಗ ನಡೆಯಿತು. ಈ ವೇಳೆ ಸಚಿವರು, ಕಿಚ್ ಗುತ್ ಮಾರಮ್ಮ ದೇವಸ್ಥಾನಕ್ಕೆ ಮುಜರಾಯಿ ಇಲಾಖೆ ಅನುಮತಿ ಪಡೆದು ಆದಷ್ಟು ಬೇಗ ಅರ್ಚಕರನ್ನು ನೇಮಿಸಿ ದೇವಸ್ಥಾನ ತೆರೆಯುವುದಾಗಿ ಭರವಸೆ ನೀಡಿದರು.

    ಇದಕ್ಕೂ ಮೊದಲು ಸಚಿವ ಸುರೇಶ್ ಕುಮಾರ್ ವಿಷ ದುರಂತದ ಸಂತ್ರಸ್ತರನ್ನು ಭೇಟಿಯಾಗಿದ್ದು, ಹಿಂದಿನ ಸರ್ಕಾರ ನೀಡಿದ್ದ ಭರವಸೆಯಂತೆ ಮೃತಪಟ್ಟವರ ಕುಟುಂಬಗಳಿಗೆ ಜಮೀನು ಮಂಜೂರು ಮಾಡಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

  • ವಿಷ ಪ್ರಸಾದ ಕೇಸ್- ಹೈಕೋರ್ಟಿನಲ್ಲೂ ಇಮ್ಮಡಿ ಸ್ವಾಮೀಜಿ ಜಾಮೀನು ಅರ್ಜಿ ವಜಾ

    ವಿಷ ಪ್ರಸಾದ ಕೇಸ್- ಹೈಕೋರ್ಟಿನಲ್ಲೂ ಇಮ್ಮಡಿ ಸ್ವಾಮೀಜಿ ಜಾಮೀನು ಅರ್ಜಿ ವಜಾ

    ಚಾಮರಾಜನಗರ: 17 ಮಂದಿ ಸಾವಿಗೀಡಾಗಿ, 112 ಮಂದಿ ಭಕ್ತರು ತೀವ್ರ ಅಸ್ವಸ್ಥಗೊಂಡಿದ್ದ ಸುಳ್ವಾಡಿ ವಿಷಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮೀಜಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

    ಇಮ್ಮಡಿ ಮಹದೇವಸ್ವಾಮೀಜಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ನಲ್ಲಿ ಸೆಪ್ಟೆಂಬರ್ 20ರಂದು ವಿಚಾರಣೆ ನಡೆದಿತ್ತು. ಆರೋಪಿ ಪರ ವಕೀಲರು ವಾದ ಮಂಡಿಸಿ, ಇಮ್ಮಡಿ ಮಹದೇವಸ್ವಾಮೀಜಿಯನ್ನು ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಹೀಗಾಗಿ ಅವರಿಗೆ ಜಾಮೀನು ನೀಡಬೇಕು ಎಂದು ಕೋರ್ಟಿಗೆ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಜಾಮೀನು ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರಿ ವಕೀಲರು, ಇದೊಂದು ಹೇಯ ಹಾಗೂ ಗಂಭೀರ ಪ್ರಕರಣ. ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ವಾದಮಂಡನೆ ಮಾಡಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ಅವರಿದ್ದ ಏಕಸದಸ್ಯಪೀಠವು ವಿಚಾರಣೆ ಪೂರ್ಣಗೊಳಿಸಿ ಇಂದಿಗೆ ಆದೇಶವನ್ನು ಕಾಯ್ದಿರಿಸಿತ್ತು.

    ಏನಿದು ಪ್ರಕರಣ?:
    ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ 2018ರ ಡಿಸೆಂಬರ್ 14ರಂದು ವಿಶೇಷ ಪೂಜೆ ನಡೆದಿತ್ತು. ಈ ವೇಳೆ ದೇವಸ್ಥಾನದಲ್ಲಿ ತಯಾರಿಸಿದ್ದ ಪ್ರಸಾದಕ್ಕೆ ವಿಷ ಹಾಕಿದ್ದ ಪರಿಣಾಮ 17 ಮಂದಿ ಸಾವನ್ನಪ್ಪಿದ್ದು, 112 ಮಂದಿ ಭಕ್ತರು ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣವೇ ತನಿಖೆ ಚುರುಕುಗೊಳಿಸಿದ ಪೊಲೀಸರು, ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮೀಜಿ, ಅಂಬಿಕಾ, ಮದೇಶ್ ಹಾಗೂ ದೊಡ್ಡಯ್ಯನನ್ನು ಬಂಧಿಸಿದ್ದರು.

    ಈ ದುರಂತವು ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಹೀಗಾಗಿ ಆರೋಪಿಗಳ ಪರ ವಕಾಲತ್ತು ವಹಿಸದಂತೆ ಜಾಮರಾಜನಗರ ಜಿಲ್ಲಾ ವಕೀಲರ ಸಂಘವು ತೀರ್ಮಾನಿಸಿತ್ತು. ಇದರಿಂದಾಗಿ 6 ತಿಂಗಳು ಯಾರೊಬ್ಬರೂ ಆರೋಪಿಗಳ ಪರ ವಾದ ಮಾಡಲು ಮುಂದೆ ಬರಲಿಲ್ಲ. ಇಮ್ಮಡಿ ಮಹದೇವಸ್ವಾಮೀಜಿ ಪರ ಮಡಿಕೇರಿ ಮೂಲದ ವಕೀಲ ಅಪ್ಪಣ್ಣ ವಕಾಲತ್ತು ವಹಿಸಲು ಮುಂದೆ ಬಂದಿದ್ದರು. ಉಳಿದ ಆರೋಪಿಗಳಾದ ಅಂಬಿಕಾ, ಮದೇಶ್ ಹಾಗೂ ದೊಡ್ಡಯ್ಯ ಪರವಾಗಿ ವಕಾಲತ್ತು ಮಾಡಲು ಬೆಂಗಳೂರು ಮೂಲದ ಡಿ.ಪಿ.ಸದಾನಂದ ಅವರು ವಕಾಲತ್ತು ವಹಿಸಲು ಅರ್ಜಿ ಸಲ್ಲಿಸಲಿದ್ದರು.

    ಇಮ್ಮಡಿ ಮಹದೇವಸ್ವಾಮೀಜಿ ಜಾಮೀನು ಕೋರಿ ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯು ಹೈಕೋರ್ಟ್ ಮೆಟ್ಟಿಲೇರಿದ್ದ. ಸದ್ಯ ಹೈಕೋರ್ಟ್ ನಲ್ಲಿಯೂ ಇಮ್ಮಡಿ ಸ್ವಾಮೀಜಿಗೆ ಹಿನ್ನಡೆಯಾಗಿದೆ.

  • ಸುಳ್ವಾಡಿ ವಿಷ ಪ್ರಕರಣ – 6 ತಿಂಗಳ ನಂತ್ರ ಆರೋಪಿಗಳ ಪರ ವಕೀಲರು ಅರ್ಜಿ

    ಸುಳ್ವಾಡಿ ವಿಷ ಪ್ರಕರಣ – 6 ತಿಂಗಳ ನಂತ್ರ ಆರೋಪಿಗಳ ಪರ ವಕೀಲರು ಅರ್ಜಿ

    ಚಾಮರಾಜನಗರ: ಸುಳ್ವಾಡಿಯ ಮಾರಮ್ಮ ದೇವಸ್ಥಾನದ ಪ್ರಸಾದಕ್ಕೆ ವಿಷ ಹಾಕಿ 17 ಮಂದಿಗೆ ಸಾವಿಗೆ ಕಾರಣವಾಗಿರುವ ಆರೋಪದ ಮೇಲೆ ಬಂಧಿತರಾಗಿರುವ ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ಇದೀಗ ವಕೀಲರು ಮುಂದೆ ಬಂದಿದ್ದಾರೆ.

    ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸುಳ್ವಾಡಿ ವಿಷ ದುರಂತ ನಡೆದು 6 ತಿಂಗಳು ಕಳೆದಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೂ ಬಂಧಿತ ಅರೋಪಿಗಳಾದ ಇಮ್ಮಡಿ ಮಹದೇವಸ್ವಾಮೀಜಿ, ಅಂಬಿಕಾ, ಮದೇಶ್ ಹಾಗೂ ದೊಡ್ಡಯ್ಯ ಪರವಾಗಿ ವಕಾಲತ್ತು ವಹಿಸಲು ಯಾರೋಬ್ಬ ವಕೀಲರು ಕೂಡ ಮುಂದೆ ಬಂದಿರಲಿಲ್ಲ. ಇದೀಗ ಇಂದು ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಆರೋಪಿಗಳ ವಿಚಾರಣೆಯ ವೇಳೆ ಇಬ್ಬರು ವಕೀಲರು ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ:  ಸುಳ್ವಾಡಿ ವಿಷಪ್ರಸಾದ ದುರಂತಕ್ಕೆ ಇಂದಿಗೆ ಒಂದು ತಿಂಗಳು- ಇನ್ನೂ ಡಿಸ್ಚಾರ್ಜ್ ಆಗಿಲ್ಲ ಅಸ್ವಸ್ಥರು

    ಇಮ್ಮಡಿ ಮಹದೇವಸ್ವಾಮೀಜಿ ಪರ ಮಡಿಕೇರಿ ಮೂಲದ ವಕೀಲ ಅಪ್ಪಣ್ಣ ವಕಾಲತ್ತು ವಹಿಸಲು ಮುಂದೆ ಬಂದಿದ್ದಾರೆ. ಇನ್ನೂ ಅಂಬಿಕಾ, ಮದೇಶ್ ಹಾಗೂ ದೊಡ್ಡಯ್ಯ ಪರವಾಗಿ ವಕಾಲತ್ತು ಮಾಡಲು ಬೆಂಗಳೂರು ಮೂಲದ ಡಿ.ಪಿ.ಸದಾನಂದ ಅವರು ವಕಾಲತ್ತು ವಹಿಸಲು ಅರ್ಜಿ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಈ ಇಬ್ಬರು ವಕೀಲರ ಪರವಾಗಿ ಅವರ ಜೂನಿಯರ್ ಗಳು ಇಂದು ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಸ್ವೀಕಾರ ಮಾಡಿರುವ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದ್ದಾರೆ.

  • ಜೈಲಿನಿಂದ್ಲೇ ಸುಳ್ವಾಡಿ ಹಂತಕನ ದರ್ಬಾರ್ – ಮಠದ ಆಸ್ತಿಯನ್ನು ತನ್ನ ಹೆಸ್ರಿಗೆ ಮಾಡ್ಕೊಂಡ ಇಮ್ಮಡಿ

    ಜೈಲಿನಿಂದ್ಲೇ ಸುಳ್ವಾಡಿ ಹಂತಕನ ದರ್ಬಾರ್ – ಮಠದ ಆಸ್ತಿಯನ್ನು ತನ್ನ ಹೆಸ್ರಿಗೆ ಮಾಡ್ಕೊಂಡ ಇಮ್ಮಡಿ

    ಚಾಮರಾಜನಗರ: ಸುಳ್ವಾಡಿ ದುರಂತದ ಕ್ರಿಮಿ ಇಮ್ಮಡಿ ಮಹದೇವ ಸ್ವಾಮೀಜಿ ಜೈಲಿನಲ್ಲಿ ಇದ್ದುಕೊಂಡು ದರ್ಬಾರ್ ನಡೆಸುತ್ತಿದ್ದಾನೆ. ಈತನ ಪ್ಲಾನ್‍ಗೆ ಜೈಲಾಧಿಕಾರಿಗಳು ಫುಲ್ ಸಪೋರ್ಟ್ ಮಾಡಿದ್ದಾರೆ.

    ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ ಸುಳ್ವಾಡಿ ವಿಷಪ್ರಸಾದ ದುರಂತ ನಡೆದು 5 ತಿಂಗಳಾಯಿತು. ಚಾಮರಾಜನಗರ ಜಿಲ್ಲೆಯಲ್ಲಿರುವ ಸುಳ್ವಾಡಿ ಮಾರಮ್ಮ ದೇವಸ್ಥಾನದ ಆಡಳಿತದ ಚುಕ್ಕಾಣಿ ಹಿಡಿಯಲು ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮೀಜಿ, ಇತರ ಮೂವರು ಸೇರಿ ಮಾಡಿದ ಪಿತೂರಿಗೆ 17 ಮಂದಿ ಬಲಿಯಾಗಿ 112 ಮಂದಿ ಅಸ್ವಸ್ಥರಾಗಿದ್ದರು. ವಿಷವಿಕ್ಕಿದ ಪಾಪಿಗಳು ಜೈಲಲ್ಲಿದ್ದಾರೆ. ಆದರೆ ಇಮ್ಮಡಿ ಮಹದೇವಸ್ವಾಮಿ ಮಾತ್ರ ಜೈಲಿನಲ್ಲಿ ಇದ್ದುಕೊಂಡೇ ಸಾಲೂರು ಮಠದ ಆಸ್ತಿಯನ್ನು ತನ್ನ ವೈಯಕ್ತಿಕ ಖಾತೆ ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

     

    1997ರಲ್ಲಿ ಇಮ್ಮಡಿ ಮಹದೇವಸ್ವಾಮಿ, ಕಾರ್ಯದರ್ಶಿ, ಮಲೆಮಹದೇಶ್ವರ ಕೃಪ ವಿದ್ಯಾಸಂಸ್ಥೆ ಹೆಸರಲ್ಲಿ ಲಿಂಗಣಾಪುರ ಎಂಬಲ್ಲಿ 2 ಎಕರೆ 44 ಸೆಂಟ್ಸ್ ಜಮೀನನ್ನು ಖರೀದಿಸಿದ್ದನು. ಆದರೆ ಈಗ ಈತ ಜೈಲಿಂದ ಹೇಗಾದ್ರೂ ಹೊರಬರಲು 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಈ ಆಸ್ತಿಯನ್ನು ಮಾರಾಟ ಮಾಡಲು ಇದೇ ಮೇ 3ರಂದು ತನ್ನ ಸ್ವಂತ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾನೆ ಎನ್ನಲಾಗಿದೆ.

    2018ರ ಫೆಬ್ರವರಿ 20 ರಂದು ಖಾತೆ ಮಾಡಿಕೊಡಲು ಇಮ್ಮಡಿ ಮಹದೇವಸ್ವಾಮೀಜಿ ಅರ್ಜಿ ಸಲ್ಲಿಸಿದ್ದ. ಅರ್ಜಿ ಕೊಟ್ಟ ಒಂದು ತಿಂಗಳೊಳಗೆ ವಿಲೇವಾರಿ ಮಾಡಬೇಕು. ಆದರೆ 1 ವರ್ಷವಾದ್ರೂ ಅರ್ಜಿಯ ಬಗ್ಗೆ ಕ್ರಮಕೈಗೊಳ್ಳದ ಅಧಿಕಾರಿಗಳು ಇದ್ದಕ್ಕಿದ್ದಂತೆ 2 ವಾರಗಳ ಹಿಂದೆ ಇಮ್ಮಡಿ ಮಹದೇವಸ್ವಾಮಿ ಹೆಸರಿಗೆ ಖಾತೆ ಮಾಡಿಕೊಟ್ಟಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

  • ಸುಳ್ವಾಡಿ ವಿಷ ಪ್ರಸಾದ ದುರಂತ ಬೆನ್ನಲ್ಲೇ ಮತ್ತೊಂದು ಘೋರ ಅವಘಡ

    ಸುಳ್ವಾಡಿ ವಿಷ ಪ್ರಸಾದ ದುರಂತ ಬೆನ್ನಲ್ಲೇ ಮತ್ತೊಂದು ಘೋರ ಅವಘಡ

    ಚಿಕ್ಕಬಳ್ಳಾಪುರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ವಿಷ ಪ್ರಸಾದ ಸೇವಿಸಿ 17 ಮಂದಿ ಸಾವನ್ನಪ್ಪಿದ ಘಟನೆ ಮಾಸುವ ಬೆನ್ನಲ್ಲೇ ಇದೀಗ ಇಂತದ್ದೇ ಘೋರ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ನರಸಿಂಹ ಪೇಟೆಯ ಗಂಗಮ್ಮ ಗುಡಿ ದೇವಸ್ಥಾನದಲ್ಲಿ ಶುಕ್ರವಾರ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯವಿತ್ತು. ಈ ವೇಳೆ ದೇವರ ಪ್ರಸಾದ ಸೇವಿಸಿ ಕವಿತಾ(28) ಸಾವನ್ನಪ್ಪಿ, ಒಂದೇ ಕುಟುಂಬದ 5 ಮಂದಿ ಅಸ್ವಸ್ಥರಾಗಿದ್ದಾರೆ. ಗಂಗಾಧರ, ರಾಜ, ರಾಧ ಹಾಗು ಮಕ್ಕಳಾದ ಗಾನವಿ, ಶರಣ ಅಸ್ವಸ್ಥರು.

    ಇಬ್ಬರು ಮಕ್ಕಳು ಹಾಗೂ ರಾಜ ಅವರ ಆರೋಗ್ಯಕ್ಕೆ ಯಾವುದೇ ಅಪಾಯವಿಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಅಸ್ವಸ್ಥರು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಡೆದಿದ್ದೇನು..?
    ರಾಜ ಎಂಬವರು ದೇವಸ್ಥಾನದಿಂದ ಸ್ವೀಟ್ ಪೊಂಗಲ್ ತಂದಿದ್ದರು. ಪ್ರಸಾದವನ್ನು ಸೇವಿಸಿದ ಬಳಿಕ ಎಲ್ಲರಿಗೂ ವಾಂತಿಯಾಗಿದ್ದರಿಂದ, ಕೂಡಲೇ ಎಲ್ಲರನ್ನೂ ಸ್ಥಳೀಯರು ಚಿಂತಾಮಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕವಿತಾ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಇನ್ನುಳಿದ ಅಸ್ವಸ್ಥರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆತರಲಾಗಿದೆ.

    ಪ್ರಸಾದ ಸೇವಿಸಿದ ಬಳಿಕವೇ ನಾವೆಲ್ಲರೂ ಅಸ್ವಸ್ಥರಾಗಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಆದ್ರೆ ದೇವಸ್ಥಾನದಲ್ಲಿ 100-150 ಜನ ಪ್ರಸಾದ ಸೇವಿಸಿದ್ದಾರೆ. ಹೀಗಾಗಿ ಒಂದೇ ಕುಟುಂಬಕ್ಕೆ ವಿಷ ಪ್ರಸಾದ ಸಿಕ್ಕಿತಾ ಅನ್ನೋ ಪ್ರಶ್ನೆ ಇದೀಗ ಮೂಡಿಬಂದಿದ್ದು, ವಿಚಾರಣೆ ಬಳಿಕವಷ್ಟೇ ಸತ್ಯಾಂಶ ಬೆಳಕಿಗೆ ಬರಬೇಕಿದೆ.

    ಘಟನೆ ಸಂಬಂಧ ಪೊಲೀಸರು ದೇವಸ್ಥಾನದ ಟ್ರಸ್ಟಿ ಮತ್ತು ಅರ್ಚಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶುಕ್ರವಾರ ಪೂಜಾ ಕೈಂಕರ್ಯದಲ್ಲಿ ಎಷ್ಟು ಜನ ಭಾಗಿಯಾಗಿದ್ದರು? ಪ್ರಸಾದ ತಯಾರಿಕೆ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಆರೋಪಿಗಳ ಪರ ಮಡಿಕೇರಿ ವಕೀಲ ವಕಾಲತ್ತು

    ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಆರೋಪಿಗಳ ಪರ ಮಡಿಕೇರಿ ವಕೀಲ ವಕಾಲತ್ತು

    – ಜಾಮೀನು, ಪ್ರಕರಣ ವಿಚಾರಣೆ ಜ.29ಕ್ಕೆ

    ಚಾಮರಾಜನಗರ: ಸುಳ್ವಾಡಿಯ ಮಾರಮ್ಮ ದೇವಿ ಪ್ರಸಾದಕ್ಕೆ ವಿಷಬೆರೆಸಿ 17 ಜನ ಅಮಾಯಕರನ್ನು ಬಲಿ ಪಡೆದ ಪ್ರಕರಣದ ಎ1 ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರ ವಕಾಲತ್ತು ವಹಿಸಲು ಮಡಿಕೇರಿ ಮೂಲದ ವಕೀಲರು ಮುಂದಾಗಿದ್ದಾರೆ.

    ಮಡಿಕೇರಿ ಮೂಲದ ವಕೀಲ ಅಪ್ಪಣ್ಣ, ತಮ್ಮ ಕಿರಿಯ ವಕೀಲರಾದ ಸುದೇಶ್ ಹಾಗೂ ಲೋಹಿತ್ ಎಂಬವರ ಮೂಲಕ ಇಂದು ಇಮ್ಮಡಿ ಮಹದೇವಸ್ವಾಮಿ ಪರ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಚಾಮರಾಜನಗರ ಜಿಲ್ಲಾ ನ್ಯಾಯಲಯದಲ್ಲಿ ಜನವರಿ 29ಕ್ಕೆ ನಡೆಯುವ ವಿಚಾರಣೆ ಮುನ್ನವೇ ಜಾಮೀನು ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಜಿಲ್ಲಾ ನ್ಯಾಯಾಧೀಶರ ಮುಂದೆ ಇಂದು ಮಧ್ಯಾಹ್ನ ಅರ್ಜಿ ಬರುತ್ತಿದ್ದಂತೆ, ಅದಕ್ಕೆ ತಕರಾರು ಅರ್ಜಿ ಸಲ್ಲಿಸಲು ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೇಳಿದ್ದಾರೆ. ಇದನ್ನು ಓದಿ: ವಿಷ ಪ್ರಸಾದ ಪ್ರಕರಣ- ದೇವಸ್ಥಾನದ ಆವರಣದಲ್ಲಿ ಭಕ್ತೆಯ ಗೋಳಾಟ

    ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಜನವರಿ 29ರಂದು ಪ್ರಕರಣದ ವಿಚಾರಣೆ ಜೊತೆಗೆ ಜಾಮೀನು ವಿಚಾರಣೆ ನಡೆಸಲಾಗುತ್ತದೆ ಎಂದು ನ್ಯಾಯಾಧೀಶರಾದ ಬಸವರಾಜು ತಿಳಿಸಿದ್ದಾರೆ. ಈ ಮಧ್ಯೆ ಆರೋಪಿಗಳ ಪರ ವಕಾಲತ್ತು ವಹಿಸಬಾರದೆಂಬ ತಮ್ಮ ನಿರ್ಣಯ ಬೆಂಬಲಿಸುವಂತೆ ಮಡಿಕೇರಿ ವಕೀಲರಿಗೆ ಮನವಿ ಸಲ್ಲಿಸಲು ಚಾಮರಾಜನಗರ ವಕೀಲರ ಸಂಘ ನಿರ್ಧರಿಸಿದೆ. ಇದನ್ನು ಓದಿ: ಅಂಬಿಕಾ ಮನೆ ಬಾಡಿಗೆಯಲ್ಲೂ ಮಧ್ಯಸ್ಥಿಕೆ ವಹಿಸಿದ್ದ ಇಮ್ಮಡಿ ಮಹದೇವ ಸ್ವಾಮೀಜಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆದಿದ್ದ 6 ಮಂದಿ ಮತ್ತೆ ಆಸ್ಪತ್ರೆಗೆ ದಾಖಲು

    ವಿಷ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆದಿದ್ದ 6 ಮಂದಿ ಮತ್ತೆ ಆಸ್ಪತ್ರೆಗೆ ದಾಖಲು

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆದಿದ್ದ 6 ಮಂದಿಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಎಂ.ಜಿ.ದೊಡ್ಡಿ ಗ್ರಾಮದ ರೇಖಾ, ಪಳನಿಯಮ್ಮ, ಮಲ್ಲಿಗೆ, ವೀರಮ್ಮ, ಕಮಲ ಮತ್ತು ಪಳನಿ ಎಂಬವರಿಗೆ ಹೊಟ್ಟೆ ಉರಿ, ಎದೆ ನೋವು, ತಲೆ ನೋವು, ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇತ್ತ ಸುಳ್ವಾಡಿ ದುರಂತ ಇನ್ನು ಹಸಿಯಾಗಿರುವಾಗಲೇ ಅಂಥದ್ದೇ ಪ್ರಕರಣವೊಂದು ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ. ಅಲ್ಲಿ ಮಾರಮ್ಮನ ಪ್ರಸಾದದಲ್ಲಿ ವಿಷ ಬೆರೆಸಿದರೆ, ಇಲ್ಲಿ ಕುಡಿಯುವ ನೀರಿಗೆ ದುಷ್ಕರ್ಮಿಗಳು ಕ್ರಿಮಿನಾಶಕ ಬೆರೆಸಿದ್ದಾರೆ. ಸುರಪುರ ತಾಲೂಕಿನ ಮುದನೂರ ಕೆ ಗ್ರಾಮದ ಹೊರಭಾಗದಲ್ಲಿರುವ ಬಾವಿಯ ನೀರು ಶಾಖಾಪುರ ಹಾಗೂ ತೆಗ್ಗಳ್ಳಿ ಗ್ರಾಮಕ್ಕೆ ಫಿಲ್ಟರ್ ಅಗಿ ಸರಬರಾಜಾಗ್ತಿತ್ತು. ಆದ್ರೆ ಯಾರೋ ಕಿಡಿಗೇಡಿಗಳು ಈ ನೀರಿಗೆ ಭತ್ತದ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ಬೆರೆಸಿದ್ದಾರೆ.

    ಈ ನೀರು ಕುಡಿದ ಪಂಪ್ ಆಪರೇಟರ್ ತಾಯಿ ನಾಗಮ್ಮ ಸೇರಿ ಐವರು ಅಸ್ವಸ್ಥರಾಗಿದ್ದು ಕೆಂಬಾವಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಪಂಪ್ ಆಪರೇಟರ್ ಮೌನೇಶ್ ನೀರು ಪೂರೈಕೆ ಸ್ಥಗಿತಗೊಳಿಸಿ ಗ್ರಾಮದಲ್ಲಿ ಯಾರು ಈ ನೀರು ಕುಡಿಯಬೇಡಿ ಎಂದು ಡಂಗೂರ ಸಾರಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಸದ್ಯ ಬಾವಿಯ ನೀರು ಖಾಲಿ ಮಾಡಿಸಲಾಗ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ದುರಂತ- ತಾನು ಕಲ್ಪಿಸಿದ ಮಗುವನ್ನು ತನ್ನ ಸನ್ನಿಧಿಯಲ್ಲೇ ಕಿತ್ತುಕೊಂಡ ಮಾರಮ್ಮ!

    ಸುಳ್ವಾಡಿ ದುರಂತ- ತಾನು ಕಲ್ಪಿಸಿದ ಮಗುವನ್ನು ತನ್ನ ಸನ್ನಿಧಿಯಲ್ಲೇ ಕಿತ್ತುಕೊಂಡ ಮಾರಮ್ಮ!

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿದ್ದು, ಇದೀಗ ಗರ್ಭಿಣಿಯೊಬ್ಬರಿಗೆ ಗರ್ಭಪಾತವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಹೌದು. ಸ್ಥಳೀಯ ನಿವಾಸಿ ಸೌಂದರ್ಯ ಅವರು ಮಾರಮ್ಮ ದೇವಿಗೆ ಹರಕೆ ಹೊತ್ತ ಬಳಿಕ ಗರ್ಭಿಣಿಯಾಗಿದ್ದು, 3 ತಿಂಗಳು ಆಗಿತ್ತು. ಆದ್ರೆ ಇದೀಗ ಅದೇ ತಾಯಿಯ ಸನ್ನಿಧಿಯಲ್ಲಿ ವಿಷ ಪ್ರಸಾದ ಸೇವಿಸಿದ್ದರಿಂದ ಅವರಿಗೆ ಗರ್ಭಪಾತವಾಗಿದೆ. ಈ ಮೂಲಕ ಮಾರಮ್ಮ ದೇವಿ ತಾನು ಕಲ್ಪಿಸಿದ ಮಗುವನ್ನು ತನ್ನ ಸನ್ನಿಧಿಯಲ್ಲೇ ಕಿತ್ತುಕೊಂಡಿದ್ದಾಳೆ ಅಂತ ಸೌಂದರ್ಯ ಕಣ್ಣೀರು ಹಾಕುತ್ತಿದ್ದಾರೆ.

    ಹರಕೆ ಏನಿತ್ತು?
    ನಾನು ಗರ್ಭಿಣಿಯಾದ್ರೆ ಪ್ರತಿ ವಾರ ಸನ್ನಿಧಿಗೆ ಬರುತ್ತೇನೆ ಎಂದು ಸೌಂದರ್ಯ ಹರಕೆ ಹೊತ್ತಿದ್ದರು. ಅಂತೆಯೇ ಅವರು ಪ್ರತೀ ವಾರ ಮಾರಮ್ಮನ ಸನ್ನಿಧಿಗೆ ಬರುತ್ತಿದ್ದರು. ಹೀಗೆ ಡಿಸೆಂಬರ್ 14ರಂದು ಸೌಂದರ್ಯ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಅಲ್ಲಿ ಕೊಟ್ಟ ಪ್ರಸಾದವನ್ನು ಸ್ವೀಕರಿಸಿದ್ದರು. ಹೀಗಾಗಿ ವಿಷ ಪ್ರಸಾದ ಸೇವನೆಯಿಂದ ಅಸ್ವಸ್ಥಗೊಂಡ ಅವರನ್ನು ಕೊಳ್ಳೇಗಾಲ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಂತವೆಂದರೆ ಸೌಂದರ್ಯ ವಿಷ ಪ್ರಸಾದ ಸೇವಿಸಿದ್ದರಿಂದ ಹೊಟ್ಟೆಯಲ್ಲಿನ ಭ್ರೂಣ ಸಾವನ್ನಪ್ಪಿದ್ದು, ಅವರಿಗೆ ಗರ್ಭಪಾತವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ.

    ಡಿಸೆಂಬರ್ 14 ರಂದು ದೇವಸ್ಥಾನದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮವಿತ್ತು. ಹೀಗಾಗಿ ಭಕ್ತರೆಲ್ಲರೂ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಟೊಮೆಟೋ ಬಾತನ್ನು ಅಲ್ಲಿ ಪ್ರಸಾದದ ರೂಪದಲ್ಲಿ ವಿತರಿಸಲಾಗಿತ್ತು. ಆದ್ರೆ ಈ ಪ್ರಸಾದದಲ್ಲಿ ವಿಷ ಬೆರೆಸಲಾಗಿದ್ದು, ತಿಂದವರೆಲ್ಲ ಆಸ್ಪತ್ರೆಗೆ ಸೇರಿದ್ದರು. ಅದರಲ್ಲಿ 17 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದು, ಉಳಿದವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ವಿಷಪ್ರಸಾದ ದುರಂತ- ಪೊಲೀಸರ ನಡೆಯ ಬಗ್ಗೆ ಎದ್ದಿದೆ ಅನುಮಾನ

    ಸುಳ್ವಾಡಿ ವಿಷಪ್ರಸಾದ ದುರಂತ- ಪೊಲೀಸರ ನಡೆಯ ಬಗ್ಗೆ ಎದ್ದಿದೆ ಅನುಮಾನ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವಿಸಿ 15 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ನಾಲ್ವರನ್ನು ಜೈಲಿಗಟ್ಟಿದ್ದಾರೆ.

    ರಾತ್ರೋರಾತ್ರಿ ಆರೋಪಿಗಳನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಈ ಬೆನ್ನಲ್ಲೇ ಜೈಲಿಗಟ್ಟಿದ್ದಾರೆ. ಇದೀಗ ಪೊಲೀಸರ ಈ ನಡೆಯ ಬಗ್ಗೆ ತೀವ್ರ ಅನುಮಾನ ಸೃಷ್ಟಿಯಾಗಿದೆ. ಇದನ್ನೂ ಓದಿ: ಪೊಲೀಸರೇ ನಮ್ಮ ಮನೆಯಲ್ಲಿ ವಿಷ ಇಟ್ಟಿದ್ದಾರೆ – ವಿಷಜಂತು ಅಂಬಿಕಾ ಹೈಡ್ರಾಮ

    ಪೊಲೀಸರ ನಡೆಯಿಂದ ಎದ್ದಿರುವ ಪ್ರಶ್ನೆಗಳೇನು?:
    10 ದಿನ ಕಸ್ಟಡಿಗೆ ಕೇಳಿದ್ದ ಪೊಲೀಸರು ಕೇವಲ 2 ದಿನದಲ್ಲಿ ತನಿಖೆ ಮುಗಿಸಿದ್ದು ಹೇಗೆ?. ಅಂಬಿಕಾಳ ನಡೆ ಪೊಲೀಸರಿಗೆ ಭಯ ತರಿಸಿದೆಯೇ? ಜಿಲ್ಲಾ ಪೊಲೀಸರಿಂದ ನನಗೆ ನ್ಯಾಯ ಸಿಗೋದಿಲ್ಲ ಎಂಬ ಹೇಳಿಕೆ ಪೊಲೀಸರಿಗೆ ನಡುಕ ಹುಟ್ಟಿಸಿದೆಯೇ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ.

    ಅಂಬಿಕಾಳ ಬಳಿ ಅಧಿಕಾರಿಗಳು, ರಾಜಕೀಯ ಮುಖಂಡರು ಮತ್ತು ಮಠಾಧೀಶರ ಮಹತ್ತರವಾದ ದಾಖಲೆಗಳಿರುವುದು ನಿಜನಾ. ಯಾಕಂದ್ರೆ ಪದೇ ಪದೇ ಅಂಬಿಕಾ ಮಾಧ್ಯಮದವರ ಮುಂದೆ ಬಂದ್ರೆ ಅಕ್ರಮಗಳನ್ನ ಬಾಯಿ ಬಿಡುವಳೇ ಎಂಬ ಅನುಮಾನ ಪೊಲೀಸರಿಗಿದೆಯೇ ಅನ್ನೋ ಪ್ರಶ್ನೆಯೂ ಮೂಡಿದೆ. ಇದನ್ನೂ ಓದಿ: ಸುಳ್ವಾಡಿ ಕೇಸ್ – ಅಂಬಿಕಾ ಬಳಿಕ ಪೊಲೀಸರ ಮುಂದೆ ವಿಷಸ್ವಾಮಿ ನಾಟಕ!

    ಇಂದು ಮದ್ಯಾಹ್ನವರೆಗೆ ಕಾಲಾವಕಾಶವಿದ್ದರೂ ಮಧ್ಯರಾತ್ರಿ ಹಾಜರಿಪಡಿಸಿದ ಮರ್ಮ ಏನು? ಅಂಬಿಕಾ ಬಳಿ ಇರುವ ಕೆಲವು ದಾಖಲೆ ಪೊಲೀಸರ ಬಳಿಯೂ, ಕೆಲವು ದಾಖಲೆಗಳು ಆಕೆರ ಆಪ್ತರ ಬಳಿ ಇದೆಯೇ? ಅಂಬಿಕಾ ಸಿಬಿಐ ತನಿಖೆ ಕೇಳೋದಾದರೂ ಏಕೆ? ತನ್ನ ಬಳಿ ಇರುವ ದಾಖಲಾತಿಯನ್ನ ಜಿಲ್ಲಾ ಪೊಲೀಸರಿಗೆ ನೀಡಿದರೆ ನಾಶಪಡಿಸುವ ಸಾಧ್ಯತೆ ಇದೆಯೇ ಎಂಬ ಅನುಮಾನ ಇದೆಯೇ? ಸಿಬಿಐ ಮುಂದೆ ಶರಣು ಪಡಿಸಿದರೆ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮತ್ತೊಂದು ಮುಖ ಕಳಚಿ ಬೀಳಲಿದೆಯೇ ಅನ್ನೋ ಪ್ರಶ್ನೆಗಳ ಸುರಿಮಳೆಯೇ ಇದೀಗ ಎದ್ದಿದೆ. ಇದನ್ನೂ ಓದಿ: ಮಾರಮ್ಮ ದೇವಸ್ಥಾನದ ದುರಂತ – ಆರೋಪಿಗಳು ಜೈಲಿಗೆ ಶಿಫ್ಟ್

    https://www.youtube.com/watch?v=Ejrz4lVX5-4

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv