Tag: ಸುಮುದ್ರ

  • ಕುದಿಯುತ್ತಿದೆ ಸಮುದ್ರದ ನೀರು- ಕಡಲ ತೀರದ ನಿವಾಸಿಗಳಲ್ಲಿ ಆತಂಕ

    ಕುದಿಯುತ್ತಿದೆ ಸಮುದ್ರದ ನೀರು- ಕಡಲ ತೀರದ ನಿವಾಸಿಗಳಲ್ಲಿ ಆತಂಕ

    ಉಡುಪಿ: ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಓಝೋನ್ ಪದರ ಡ್ಯಾಮೇಜ್ ಆಗಿದೆ. ಬಿಸಿಲಿನ ಝಳ ವಿಪರೀತವಾಗಿದೆ. ಈ ನಡುವೆ ಸಮುದ್ರ ತನ್ನ ತಾಪಮಾನ ಮತ್ತು ಮಟ್ಟವನ್ನು ಹೆಚ್ಚಿಸಿಕೊಂಡಿದ್ದು ದೇಶದ ಕರಾವಳಿ ತೀರ ಆತಂಕದಲ್ಲಿದೆ. ಪರಿಸ್ಥಿತಿ ಕೈಮೀರಿದ್ರೆ ನಗರಗಳು ಮುಳುಗೋದು ಗ್ಯಾರೆಂಟಿಯಾಗಿದೆ.

    ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ತಾಪಮಾನ ತಾರಕಕ್ಕೇರಿದೆ. ಕಳೆದ ನೂರು ವರ್ಷದಲ್ಲಿ ಭಾರತದ ತಾಪಮಾನ ಒಂದರಿಂದ ಎರಡು ಸೆಲ್ಸಿಯಸ್‍ ನಷ್ಟು ಹೆಚ್ಚಿದೆ. ತಲೆ ಮೇಲಿನ ಸೂರ್ಯ ಸುಡುತ್ತಿದ್ದಾನೆ. ತಾಪಮಾನ ಭೂಮಿಯಲ್ಲಿ ಮಾತ್ರ ಏರಿಕೆಯಾಗಿದ್ದಲ್ಲ, ಸಮುದ್ರದ ನೀರು ಕೂಡ ಕುದಿಯಲಾರಂಭಿಸಿದೆ.

    ಹವಾಮಾನ ಇಲಾಖೆಯ ತಜ್ಞರ ಸಂಶೋಧನೆಯಲ್ಲಿ ಇದು ಸಾಬೀತಾಗಿದೆ. ಕಳೆದ 50 ವರ್ಷಗಳಲ್ಲಿ 9 ಸೆಂಟೀಮೀಟರ್ ನಷ್ಟು ಸಮುದ್ರದ ಮಟ್ಟ ಏರಿಕೆಯಾಗಿದೆ. ಅಂದರೆ ಕಡಲ ತೀರದಲ್ಲಿರುವ ನಗರವಾಸಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಅರಬ್ಬೀ ಸಮುದ್ರ ಉಡುಪಿ ನಗರಕ್ಕಿಂದ ಏಳೆಂಟು ಮೀಟರ್ ನಷ್ಟು ಕೆಳಗೆ ಇದೆ. ಮಳೆಗಾಲ, ಚಂಡಮಾರುತ ಬಂದಾಗ ಅಂತರ ಕಡಿಮೆಯಾಗುತ್ತದೆ. ಸಮುದ್ರದ ಅಬ್ಬರ ವರ್ಷದಿಂದ ವರ್ಷಕ್ಕೆ ಜಾಸ್ತಿಯಾದ್ರೆ ಒಂದಲ್ಲ ಒಂದು ದಿನ ಕಾರವಾರ, ಉಡುಪಿ- ಮಂಗಳೂರು ನಗರಗಳು ಮುಳುಗೋದು ಪಕ್ಕಾ ಆಗಿದೆ.

    ವರ್ಷದಿಂದ ವರ್ಷಕ್ಕೆ ಒಂದೆರಡು ಮಿಲಿಮೀಟರ್ ಸಮುದ್ರದ ಮಟ್ಟ ಏರಿಕೆಯಾಗಿ ಭೂಮಿಯನ್ನು ಕಬಳಿಸುತ್ತಿದೆ. ಆದರೆ ಕಳೆದ 10 ವರ್ಷದ ಅಂಕಿ ಅಂಶಗಳಲ್ಲಿ ವರ್ಷಕ್ಕೆ 7 ಮಿಲಿ ಮೀಟರ್ ಸಮುದ್ರ ಭೂ ಭಾಗವನ್ನು ಕಬ್ಜ ಮಾಡುತ್ತಿದೆ. ಈ ಬಗ್ಗೆ ರಾಜ್ಯಸಭೆಯಲ್ಲೂ ಚರ್ಚೆಯಾಗಿದೆ. ಸಚಿವ ಬಾಬುಲ್ ಸುಪ್ರಿಯೋ ಸದನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಭೂಮಿಯ ಉಷ್ಣಾಂಶ ಇಳಿಸುವ ಕ್ರಮ ಆಗದಿದ್ದರೆ ಸಮುದ್ರದ ನೀರು ಕರಾವಳಿಯನ್ನು ಮೊದಲು ಆವರಿಸುವ ದಿನ ದೂರವಿಲ್ಲ. ಸಮುದ್ರದ ಮಟ್ಟ ಏರಿಕೆಗೆ ಹಿಮಾಲಯ ಮತ್ತು ಅಂಟಾರ್ಟಿಕಾದಲ್ಲಿ ಹಿಮ ಕರಗಿ ನೀರಾಗುತ್ತಿರುವುದು ಕಾರಣವಂತೆ. ದುಂಡಗಿರುವ ಭೂಮಿಲ್ಲಿ ಸಮುದ್ರ ಒಂದಕ್ಕೊಂದು ಅಂಟಿಕೊಂಡಿರುವುದಿರಿಂದ ಈ ವಿದ್ಯಾಮಾನ ನಡೆಯುತ್ತದೆ ಎಂದು ಪರಿಸರ ವಿಜ್ಞಾನಿ ಎನ್ ಎ ಮಧ್ಯಸ್ಥ ಹೇಳುತ್ತಾರೆ.

    ಅರಬ್ಬೀ ಮತ್ತು ಬಂಗಾಳಕೊಲ್ಲಿಯಲ್ಲಿ ಚಂಡಮಾರುತಗಳು ಕೂಡ ಹೆಚ್ಚಾಗಿದೆ. ಕರಾವಳಿ ಭಾಗದಲ್ಲಿ ಅಕಾಲಿಕ ಮಳೆ ಜಾಸ್ತಿಯಾಗಿದೆ. ಚಳಿಗಾಲ ಮಾಯವಾಗಿದ್ದು ಬೇಸಿಗೆ ಮತ್ತು ಮಳೆಗಾಲ ಮಾತ್ರ ಕಾಣಿಸುತ್ತಿದೆ. ಪರಿಸರದ ಮೇಲಿನ ದಾಳಿಯನ್ನು ನಾವು ಕಡಿಮೆ ಮಾಡದಿದ್ದರೆ ಮುಂದೊಂದು ದಿನ ಅಪಾಯ ಉಂಟಾಗುವುದರಲ್ಲಿ ಸಂಶಯವೇ ಇಲ್ಲ ಎಂಬಂತಾಗಿದೆ.

  • ಗೋಕರ್ಣದಲ್ಲಿ ಸಮುದ್ರಪಾಲಾಗುತ್ತಿದ್ದ ಐವರು ವಿದ್ಯಾರ್ಥಿಗಳನ್ನ ರಕ್ಷಿಸಿದ ಪೊಲೀಸ್ ಪೇದೆ

    ಗೋಕರ್ಣದಲ್ಲಿ ಸಮುದ್ರಪಾಲಾಗುತ್ತಿದ್ದ ಐವರು ವಿದ್ಯಾರ್ಥಿಗಳನ್ನ ರಕ್ಷಿಸಿದ ಪೊಲೀಸ್ ಪೇದೆ

    ಕಾರವಾರ: ಸಮುದ್ರದಲ್ಲಿ ನೀರುಪಾಲಾಗುತ್ತಿದ್ದ ಐವರನ್ನು ಪೊಲೀಸ್ ಪೇದೆಯೊಬ್ಬರು ಪ್ರವಾಸಿ ಮಿತ್ರರ ಸಹಾಯದಿಂದ ರಕ್ಷಿಸುವ ಮೂಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ.

    ಚೆನ್ನೈ ವಿಶ್ವವಿದ್ಯಾಲಯವೊಂದರಲ್ಲಿ ಎಂಜನಿಯರಿಂಗ್ ಕೊನೆಯ ವರ್ಷದಲ್ಲಿ ಓದುತ್ತಿರುವ ವೀರಭದ್ರ ಭಾಸ್ಕರ(30), ಅವಿನಾಶ್ ನಳನ(28), ಅರ್ಪಿತಾ ಶ್ಯಾಮ್(25), ಚಿತ್ರಾ ಗೋವಿಂದರಾವ್ (24) ಹಾಗೂ ರಮ್ಯಾ (26) ಸಮುದ್ರದ ಸುಳಿಯಿಂದ ರಕ್ಷಿಸಲ್ಪಟ್ಟ ವಿದ್ಯಾರ್ಥಿಗಳಾಗಿದ್ದಾರೆ. ಆರು ಜನರ ತಂಡದೊಂದಿಗೆ ಗೋಕರ್ಣಕ್ಕೆ ಪ್ರವಾಸಾರ್ಥವಾಗಿ ಆಗಮಿಸಿದ್ದರು. ಈ ವಿದ್ಯಾರ್ಥಿಗಳು ಆಂಧ್ರಪ್ರದೇಶ ರಾಜ್ಯದ ರಾಜಮಂಡ್ರಿ ನಿವಾಸಿಗಳು ಎಂದು ತಿಳಿದುಬಂದಿದೆ.

    ಇವರೆಲ್ಲರೂ ರವಿವಾರ ಸಾಯಂಕಾಲ ಈಜಾಡಲು ಸಮುದ್ರಕ್ಕೆ ಇಳಿದಿದ್ದರು. 6 ಜನರಲ್ಲಿ ಇಬ್ಬರು ಸುಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿದ್ದಾಗ ಅವರನ್ನು ರಕ್ಷಿಸಲು ಮತ್ತೆ ಮೂವರು ಸಹಪಾಠಿಗಳು ಸಮುದ್ರದ ಮಧ್ಯಕ್ಕೆ ಸಾಗಿದ್ದರು. ಒಟ್ಟಾರೆಯಾಗಿ 5 ಜನ ಪ್ರವಾಸಿಗರು ಸುಳಿಯಲ್ಲಿ ಸಿಲುಕಿಕೊಂಡಿದ್ದನ್ನು ಗಮನಿಸಿದ ಗೋಕರ್ಣ ಪೊಲೀಸ್ ಪೇದೆ ರಾಘವೇಂದ್ರ ನಾಯಕ್ ಹಾಗೂ ಪ್ರವಾಸಿ ಮಿತ್ರ ಗಜೇಂದ್ರ ಎಂಬವರು ತಮ್ಮ ಜೀವವನ್ನೇ ಪಣಕ್ಕಿಟ್ಟು ಸಮವಸ್ತ್ರದಲ್ಲಿಯೇ ಸಮುದ್ರಕ್ಕೆ ಧುಮುಕಿ 5 ಜನರನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.

    ಲೈಫ್ ಗಾರ್ಡ ಸಿಬ್ಬಂದಿ ಬೇರೆಡೆ ತರಬೇತಿ ನಿಮಿತ್ತ ತೆರಳಿದ್ದ ವೇಳೆಯೇ ಈ ಘಟನೆ ನಡೆದಿದ್ದು ಗೋಕರ್ಣ ಪೊಲೀಸ್ ಮತ್ತು ಪ್ರವಾಸಿ ಮಿತ್ರರ ಸಾಧನೆಗೆ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.