Tag: ಸುಪ್ರೀಂ ಕೋರ್ಟ್ ತೀರ್ಪು

  • ರಾಜ್ಯಾದ್ಯಂತ ಶನಿವಾರ ಶಾಲಾ, ಕಾಲೇಜುಗಳಿಗೆ ರಜೆ

    ರಾಜ್ಯಾದ್ಯಂತ ಶನಿವಾರ ಶಾಲಾ, ಕಾಲೇಜುಗಳಿಗೆ ರಜೆ

    – ಸಿಲಿಕಾನ್ ಸಿಟಿಯಾದ್ಯಂತ ಕಟ್ಟೆಚ್ಚರ
    – ಒಟ್ಟು 6 ಸಾವಿರ ಪೊಲೀಸರ ನಿಯೋಜನೆ
    – ಮುಂದಿನ ಆದೇಶದವರೆಗೆ ಪೊಲೀಸರಿಗೆ ರಜೆ ರದ್ದು

    ಬೆಂಗಳೂರು: ಅಯೋಧ್ಯೆ ಪ್ರಕರಣದ ತೀರ್ಪು ಪ್ರಕರಟವಾಗುವ ಹಿನ್ನೆಲೆಯಲ್ಲಿ‌ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಸಿಲಿಕಾನ್ ಸಿಟಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಬೆಂಗಳೂರಿನ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗುತ್ತಿದೆ.

    ಮಸೀದಿ ಮತ್ತು ಮಂದಿರಗಳ ಮುಂದೆ ಪೊಲೀಸರನ್ನು ನಿಯೋಜಿಸಲಾಗುತ್ತಿದ್ದು, ವಿಶೇಷವಾಗಿ ಮುಸ್ಲಿಂ ಏರಿಯಾಗಳಲ್ಲಿ ಕಟ್ಟೆಚ್ಚರದಿಂದ ಇರುವಂತೆ ಆದೇಶಿಸಲಾಗಿದೆ.

    ಶಿವಾಜಿನಗರ, ಕೆಜಿ ಹಳ್ಳಿ, ಡಿಜೆ ಹಳ್ಳಿ, ಟ್ಯಾನರಿ ರಸ್ತೆ, ಕೆ.ಆರ್.ಮಾರ್ಕೆಟ್, ಗೋರಿ ಪಾಳ್ಯ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಸ್ತ್ ಏರ್ಪಡಿಸಲಾಗಿದೆ. ಇಂದು ರಾತ್ರಿಯಿಂದಲೇ ಜಾಗರೂಕರಾಗಿ ಬೀಟ್ ನಿರ್ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಬೆಳಗ್ಗೆ 5 ಗಂಟೆಗೆ ಎಲ್ಲ ಪೊಲೀಸರು ಬಂದೋಬಸ್ತ್ ಜಾಗದಲ್ಲಿರುವಂತೆ ಆದೇಶ ಹೊರಡಿಸಲಾಗಿದೆ.

    ಪ್ಯಾರಾ ಮಿಲಿಟರಿ ಪಡೆ, ಕೆ.ಎಸ್.ಆರ್.ಪಿ ತುಕಡಿ, ಸಿಎಆರ್ ತುಕಡಿ, ಕ್ಯುಆರ್‍ಟಿ ಟೀಮ್ ಸನ್ನದ್ಧರಾಗಿರುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ರೌಡಿಗಳನ್ನು ಸಹ ಕರೆದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ತೀರ್ಪು ನೆಪವಾಗಿಟ್ಟುಕೊಂಡು ಕೋಮು ಸೌಹಾರ್ಧತೆಗೆ ಧಕ್ಕೆ ತಂದರೆ ಸರಿ ಇರುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ.

    ಬೆಂಗಳೂರಿನಲ್ಲಿ ಒಟ್ಟು 6 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದ್ದು, 50 ಕೆಎಸ್‍ಆರ್‍ಪಿ, 30 ಸಿಎಎಆರ್, 1 ಕಂಪನಿ ಆರ್‍ಎಎಫ್, ಮೂರು ಪಟ್ಲೂನ್, 12 ಸಿಆರ್‍ಪಿಎಫ್ ತುಕಡಿ, 18 ಡಿಸಿಪಿಗಳನ್ನು ನೇಮಿಸಲಾಗಿದೆ. ಅಲ್ಲದೆ ನಾಳೆಯಿಂದ ಪೊಲೀಸರಿಗೆ ರಜೆ ರದ್ದು ಮಾಡಲಾಗಿದ್ದು, ಮುಂದಿನ ಆದೇಶದವರೆಗೆ ರಜೆ ನೀಡದಂತೆ ತಾಕೀತು ಮಾಡಲಾಗಿದೆ.

  • ಅಯೋಧ್ಯೆ ತೀರ್ಪಿಗಾಗಿ ದೇಶಾದ್ಯಂತ ಕಟ್ಟೆಚ್ಚರ

    ಅಯೋಧ್ಯೆ ತೀರ್ಪಿಗಾಗಿ ದೇಶಾದ್ಯಂತ ಕಟ್ಟೆಚ್ಚರ

    – ಸಚಿವರಿಗೆ ಸ್ವಕ್ಷೇತ್ರದ ಶಾಂತಿ ಹೊಣೆ ಹೊರಿಸಿದ ಮೋದಿ
    – ಬೆಂಗಳೂರಿಗೆ ಹೆಚ್ಚುವರಿ ಸಿಆರ್‌ಪಿಎಫ್ ಕೋರಿಕೆ
    – ವಿವಾದಾತ್ಮಕ ಹೇಳಿಕೆ ನೀಡದಂತೆ ಜನಪ್ರತಿನಿಧಿಗಳಿಗೆ ಸೂಚನೆ

    ನವದೆಹಲಿ: ಅಯೋಧ್ಯೆ ಪ್ರಕರಣದ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರಲು ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

    ಅಯೋಧ್ಯೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಈಗಾಗಲೇ 144 ಸೆಕ್ಷನ್ ಜಾರಿ ಮಾಡಲಾಗಿದೆ. 4000 ಹೆಚ್ಚುವರಿ ಅರೆಸೇನಾಪಡೆ ರವಾನಿಸಲಾಗಿದೆ. ಅಲ್ಲದೆ ಸಿಆರ್‌ಪಿಎಫ್, ಕಮಾಂಡೋ ಪಡೆಗಳನ್ನು ಸಹ ನಿಯೋಜಿಸಲಾಗಿದೆ. ಅಂಬೇಡ್ಕರ್ ನಗರದ(ಅಕ್ಬರ್‌ಪುರ್, ಟಾನ್ ಡಾ. ಜಲಾಲ್‌ಪುರ್, ಜೈಟ್ ಪುರ್, ಭಿಟಿ ಮತ್ತು ಅಲ್ಲಾಪುರ್) ವಿವಿಧ ಕಾಲೇಜುಗಳಲ್ಲಿ 8 ತಾತ್ಕಾಲಿಕ ಜೈಲುಗಳನ್ನು ಸ್ಥಾಪನೆ ಮಾಡಲಾಗಿದೆ. ಮೂಲಭೂತ ವ್ಯವಸ್ಥೆ ಕಲ್ಪಿಸುವಂತೆ ಕಾಲೇಜುಗಳಿಗೆ ಸೂಚಿಸಲಾಗಿದೆ.

    ಕಾನೂನು-ಸುವ್ಯವಸ್ಥೆ ಕಾಪಾಡಿ, ಸೂಕ್ಷ್ಮ  ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಿ ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ ಸಂದೇಶ ರವಾನಿಸಿದೆ. ಮುಂಬೈನಲ್ಲೂ ಹದ್ದಿನ ಕಣ್ಣಿಡಲಾಗಿದ್ದು, ಹಿಂದೂ-ಮುಸ್ಲಿಂ ಧಾರ್ಮಿಕ ಮುಖಂಡರು ಪತ್ರಕರ್ತರ ಜೊತೆ ಕಮೀಷನರ್ ಸಂಜಯ್ ಬಾರ್ವೆ ಸಮಾಲೋಚನೆ ನಡೆಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಯಾವುದೇ ಹಿಂಸಾಚಾರ, ಕಾನೂನು ಸುವ್ಯವಸ್ಥೆ ಹದಗೆಡದಂತೆ ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಸೇರಿದಂತೆ ರಾಜ್ಯಾದ್ಯಂತ ಉತ್ತರಪ್ರದೇಶ ಸರ್ಕಾರ ಭಾರೀ ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳುತ್ತಿದೆ.

    ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಇದೇ 17ಕ್ಕೆ ನಿವೃತ್ತಿಯಾಗಲಿದ್ದಾರೆ. ತೀರ್ಪು ಪ್ರಕಟಣೆಗೆ ಕ್ಷಣಗಣನೆ ಆರಂಭವಾದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ.

    ತನ್ನೆಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿರುವ ಆರ್‌ಎಸ್‌ಎಸ್, ಅಯೋಧ್ಯೆ ತೀರ್ಪಿನತ್ತ ಗಮನ ಕೇಂದ್ರೀಕರಿಸಿದೆ. ತನ್ನೆಲ್ಲಾ ಕಾರ್ಯಕರ್ತರಿಗೆ ಎಚ್ಚರಿಕೆ ಹಾಗೂ ಶಾಂತಚಿತ್ತದಿಂದ ಇರುವಂತೆ ಸೂಚಿಸಿದೆ.

    ಇತ್ತ ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ, ಟಿಎಂಸಿ, ಆರ್‌ಜೆಡಿ ಹಾಗೂ ಎಡ ಪಕ್ಷಗಳಲ್ಲಿರುವ ಮುಸ್ಲಿಂ ಸಂಸದರ ಜೊತೆ ಸಭೆ ನಡೆಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಹಾಗೂ ಯಾವುದೇ ಪ್ರಚೋದನೆ ನೀಡದಂತೆ ಸಂಸದರಲ್ಲಿ ಮನವಿ ಮಾಡಿದೆ. ನಿನ್ನೆ ಅಹ್ಮದ್ ಪಟೇಲ್ ಜೊತೆ ಗಡ್ಕರಿ ಅವರ ಭೇಟಿಯೂ ಇದರ ಭಾಗ ಎಂದು ಆರ್‌ಎಸ್‌ಎಸ್ ಹೇಳಿದೆ.

    ಈ ಮಧ್ಯೆ, ಪ್ರಧಾನಿ ಮೋದಿ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಶಾಂತವಾಗಿ ವರ್ತಿಸುವಂತೆ ಸಲಹೆ ನೀಡಿದ್ದಾರೆ. ದೇಶದಲ್ಲಿ ಸೌಹಾರ್ದತೆ- ಸಾಮರಸ್ಯದ ಕಾಪಾಡುವ ಅಗತ್ಯವಿದೆ. ಅಯೋಧ್ಯೆ ವಿವಾದ ಸಂಬಂಧ ಅನಗತ್ಯ ಹೇಳಿಕೆಗಳನ್ನು ನೀಡಿದಿರಿ, ಕೋರ್ಟ್ ತೀರ್ಪನ್ನು ಸೋಲು, ಗೆಲುವು ಎಂದು ನೋಡಬೇಡಿ. ಶಾಂತಿ ಕಾಪಾಡುವ ಸಲುವಾಗಿ ನಿಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಎಂದು ತಿಳಿಸಿದ್ದಾರೆ.

    ರಾಜ್ಯದಲ್ಲೂ ಹೈ ಅಲರ್ಟ್: ಬೆಂಗಳೂರಿನಲ್ಲೂ ಸೇನೆ ನಿಯೋಜನೆ ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ.

    ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಣೆಯಾಗಿರುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ್ದು, ಅಯೋಧ್ಯೆ ತೀರ್ಪು ಹಿನ್ನೆಲೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿಲ್ಲ. ಅಯೋಧ್ಯೆ ತೀರ್ಪಿಗೂ, ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಯೋಧ್ಯೆ ತೀರ್ಪು ಪರ-ವಿರೋಧ ಏನೇ ಬಂದರೂ ಸ್ವೀಕರಿಸಬೇಕು, ಇದರಿಂದ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಇಲ್ಲ ಎಂದರು.

  • ಅಯೋಧ್ಯೆ ತೀರ್ಪು- ವಿವಾದಾತ್ಮಕ ಹೇಳಿಕೆ ನೀಡದಂತೆ ಸಚಿವರಿಗೆ ಯೋಗಿ ಖಡಕ್ ಸೂಚನೆ

    ಅಯೋಧ್ಯೆ ತೀರ್ಪು- ವಿವಾದಾತ್ಮಕ ಹೇಳಿಕೆ ನೀಡದಂತೆ ಸಚಿವರಿಗೆ ಯೋಗಿ ಖಡಕ್ ಸೂಚನೆ

    ಲಕ್ನೋ: ಅಯೋಧ್ಯೆ ಪ್ರಕರಣದ ತೀರ್ಪು ಬರುವವರೆಗೆ ಹಾಗೂ ಬಂದ ನಂತರ ಯಾರೊಬ್ಬರೂ ವಿವಾದಾತ್ಮಕ ಹೇಳಿಕೆ ನೀಡಬಾರದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸಚಿವರಿಗೆ ಖಡಕ್ ಸೂಚನೆ ನೀಡಿದ್ದಾರೆ.

    ರಾಮ ಜನ್ಮ ಭೂಮಿ ಹಾಗೂ ಬಾಬರಿ ಮಸೀದಿ ವಿವಾದ ಪ್ರಕರಣ ತೀರ್ಪು ಶೀಘ್ರದಲ್ಲಿಯೇ ಹೊರ ಬೀಳಲಿದೆ. ಇದರ ಬೆನ್ನಲ್ಲೇ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸಚಿವರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಈ ಕಿವಿ ಮಾತು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ರಾಮ ಜನ್ಮ ಭೂಮಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಕೂಡದರು ಎಂದು ತಾಕೀತು ಮಾಡಿದ್ದಾರೆ.

    ಈ ಕುರಿತು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ಸಚಿವರೇ ದೃಢಪಡಿಸಿದ್ದು, ಅನಗತ್ಯವಾಗಿ ಪ್ರತಿಕ್ರಿಯಿಸದಂತೆ ಮುಖ್ಯಮಂತ್ರಿ ನಮಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

    ತೀರ್ಪು ಯಾರ ಪರವಾಗಿ ಬಂದರೂ ಯಾವುದೇ ಸಚಿವರು ವಿವಾದತ್ಮಕ ಹೇಳಿಕೆ ನೀಡಬಾರದು. ಈ ಕುರಿತು ಬಿಜೆಪಿ ದೊಡ್ಡ ಕಾರ್ಯಕ್ರಮದ ಮೂಲಕ ನಿರ್ದೇಶನ ನೀಡಿದೆ ಎಂದು ತಿಳಿದು ಬಂದಿದೆ.

    ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಸಹ ಪ್ರಯಾಗರಾಜ್‌ನಲ್ಲಿ ಸೂಕ್ಷ್ಮ ವಿಷಯಗಳ ಕುರಿತು ಯಾವುದೇ ಆಚರಣೆ ನಡೆಸಬಾರದು. ತೀರ್ಪು ಯಾರ ಪರವಾಗಿ ಬಂದರೂ ಸಹ ಈ ಕುರಿತು ಸಂಭ್ರಮಾಚರಣೆ ಮಾಡಬಾರದು. ಇದು ಇನ್ನೊಂದು ಸಮುದಾಯವನ್ನು ಕೆರಳಿಸುತ್ತದೆ. ಹಿಂದೂಗಳು ಹಾಗೂ ಮುಸ್ಲಿಮರು ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

    ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಸಹ ಈ ಕುರಿತು ಸರಣಿ ಸಭೆಗಳನ್ನು ನಡೆಸಿದ್ದು, ಕಾರ್ಯಕರ್ತರು ಈ ಕುರಿತು ಯಾವುದೇ ಹೇಳಿಕೆ ನೀಡದಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

    ಅಕ್ಟೋಬರ್ 26ರಂದು ಯೋಗಿ ಆದಿತ್ಯನಾಥ್ ಅವರು ‘ದೀಪೋತ್ಸವ’ಕ್ಕಾಗಿ ಅಯೋಧ್ಯೆಗೆ ತೆರಳಿದಾಗ ಅಲ್ಲಿನ ಜನರನ್ನು ಭೇಟಿಯಾದರು. ಆಗಲೂ ಸಹ ಈ ವಿವಾದದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಂತೆ ಮನವಿ ಮಾಡಿದ್ದಾರೆ.

    ತೀರ್ಪಿನ ನಂತರ ಕೈಗೊಳ್ಳಬೇಕಾದ ಮುಂದಿನ ಕ್ರಮಗಳೇನು ಎಂಬುದರ ಕುರಿತು ಚರ್ಚಿಸಲು ಬಿಜೆಪಿ ಮುಂದಿನ ವಾರ ಸಭೆ ಕರೆದಿದೆ. ಮುಂದಿನ ವಾರ ಸದಸ್ಯರೊಂದಿಗೆ ಸಭೆ ನಡೆಸಿ ಈ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.