Tag: ಸುಜಾ ಕುಶಾಲಪ್ಪ

  • ಕುರಿಗಳಂತೆ ಕರೆತಂದು ಮತ ಹಾಕಿಸಿಕೊಂಡು ಗೆಲುವು ಸಾಧಿಸಿದ್ದಾರೆ: ಮಂಥರ್ ಗೌಡ ವಾಗ್ದಾಳಿ

    ಕುರಿಗಳಂತೆ ಕರೆತಂದು ಮತ ಹಾಕಿಸಿಕೊಂಡು ಗೆಲುವು ಸಾಧಿಸಿದ್ದಾರೆ: ಮಂಥರ್ ಗೌಡ ವಾಗ್ದಾಳಿ

    ಮಡಿಕೇರಿ: ಕೊಡಗಿನಲ್ಲಿ ಮೂರು ದಶಕಗಳಿಂದ ಬಿಜೆಪಿಯ ಶಾಸಕರು ಇದ್ದಾರೆ. ಅವರಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಆದರೆ ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳನ್ನು ಎದುರಿಸಿ ಕುರಿಗಳಂತೆ ಕರೆತಂದು ಮತ ಹಾಕಿಸಿಕೊಂಡು ಗೆಲುವು ಸಾಧಿಸಿದ್ದಾರೆ. ಗೆದ್ದಿರುವ ಸುಜಾ ಕುಶಾಲಪ್ಪ ಅವರು ಇನ್ನಾದರೂ ಪಂಚಾಯಿತಿ ಸದಸ್ಯರನ್ನು ಗೌರವದಿಂದ ನಡೆಸಿಕೊಳ್ಳಲಿ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ವಾಗ್ದಾಳಿ ನಡೆಸಿದರು.

    ಚುನಾವಣೆ ಫಲಿತಾಂಶ ಘೋಷಣೆ ಆಗಿ ಸೋಲು ಅನುಭವಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಮತಗಳು 400 ಮತಗಳಿದ್ದರೂ, ನಾವು 602 ಮತಗಳನ್ನು ಪಡೆದಿದ್ದೇವೆ. ಬಿಜೆಪಿಗೆ 800 ಮತಗಳಿದ್ದವು ಅವರ 200 ಮತಗಳು ಕಾಂಗ್ರೆಸ್ಸಿಗೆ ಬಂದಿವೆ ಎಂದರೆ ಅದು ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ ಅಂತಲೇ ಅರ್ಥ. ಚುನಾವಣೆ ಹತ್ತಿರ ಬಂದಾಗ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳಾಗಿರುವ ಮತದಾರರನ್ನು ಕುರಿಗಳಂತೆ ರೆಸಾರ್ಟ್‍ಗಳಲ್ಲಿ ಕೂಡಿ ಹಾಕಿ ಬೆದರಿಸಿ ಮತ ಹಾಕಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಮತ್ತೆ ಅರಳಿದ ಬಿಜೆಪಿ

    BJP - CONGRESS

    ಮತ ಎಣಿಕೆ ವೇಳೆ ಮೂರ್ನಾಲ್ಕು ಟೇಬಲ್ ನಲ್ಲಿ ನನಗೆ ಹೆಚ್ಚು ಮತಗಳು ಬಂದವು. ಆಗ ಬಿಜೆಪಿಯ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರು ನಡುಗುತ್ತಿದ್ದರು. ಅಂತು ನಾವು ಈ ಚುನಾವಣೆಯಲ್ಲಿ ಬಿಜೆಪಿಯನ್ನು ನಡುಗಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಸೋಲಿಸಿ ನಮ್ಮ ಗೆಲುವಿಗಾಗಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

    ಚುನಾವಣೆಯಲ್ಲಿ ಗೆಲುವು ಸೋಲು ಎನ್ನೋದು ಇದ್ದದ್ದೇ. ಇದರಿಂದ ನನಗೇನು ಬೇಸರವಿಲ್ಲ. 37 ವರ್ಷದ ನನಗೆ ಟಿಕೆಟ್ ನೀಡಿದ್ದಕ್ಕೆ ನಾನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ವಂದನೆ ತಿಳಿಸುತ್ತೇನೆ ಎಂದರು. ಇದನ್ನೂ ಓದಿ: ಕಳೆದ ಬಾರಿ ಸೋತ ಕಡೆ ಈ ಬಾರಿ ನಾವು ಗೆದ್ದಿದ್ದೇವೆ: ಡಿಕೆಶಿ

  • ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಮತ್ತೆ ಅರಳಿದ ಬಿಜೆಪಿ

    ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಮತ್ತೆ ಅರಳಿದ ಬಿಜೆಪಿ

    ಮಡಿಕೇರಿ: ತೀವ್ರ ಕುತೂಹಲ ಮೂಡಿಸಿದ್ದ ಎಂಎಲ್‍ಸಿ ಚುನಾವಣೆಯು ಕೊಡಗು ಕ್ಷೇತ್ರದಲ್ಲಿ ಬಿಜೆಪಿಯ ಸುಜಾ ಕುಶಾಲಪ್ಪ ಗೆಲುವು ಸಾಧಿಸುವ ಮೂಲಕ ಕೊಡಗಿನಲ್ಲಿ ಮತ್ತೆ ಕಮಲ ಅರಳಿಸಿದ್ದಾರೆ.

    ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಗಟ್ಟಿಯಾಗಿದ್ದರೂ ಚುನಾವಣೆ ಆರಂಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಇದರಿಂದ ಜಿಲ್ಲೆಯಲ್ಲಿ ಬಿಜೆಪಿಗೆ ಒಂದಷ್ಟು ಟಫ್ ಫೈಟ್ ಎದುರಾಗಿತ್ತು. ಅಂತು 705 ಮತಗಳನ್ನು ಪಡೆದು ಕಾಂಗ್ರೆಸ್ ಎದುರು 102 ಮತಗಳ ಅಂತರದಿಂದ ಗೆಲುವು ಪಡೆದಿದೆ.

    ಸುಜಾ ಕುಶಾಲಪ್ಪ ಗೆಲುವು ಪಡೆಯುತ್ತಿದ್ದಂತೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸಂಭ್ರಮ ಆಚರಿಸಿದರು. ಸುಜಾ ಕುಶಾಲಪ್ಪ ಅವರಿಗೆ ಹಾರ, ತುರಾಯಿಗಳನ್ನು ಹಾಕಿ ಬಿಜೆಪಿಗೆ ಜೈಕಾರ ಕೂಗಿ ಸಂಭ್ರಮಿಸಿದರು. ಅಲ್ಲದೆ ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ ತೆರದ ವಾಹನದಲ್ಲಿ ಸುಜಾ ಕುಶಾಲಪ್ಪ ಅವರನ್ನು ಮೆರವಣಿಗೆ ಮಾಡಿದರು. ಇದನ್ನೂ ಓದಿ: ಕಳೆದ ಬಾರಿ ಸೋತ ಕಡೆ ಈ ಬಾರಿ ನಾವು ಗೆದ್ದಿದ್ದೇವೆ: ಡಿಕೆಶಿ

    ಈ ಸಂದರ್ಭದಲ್ಲಿ ಮಾತನಾಡಿದ ಸುಜಾ ಕುಶಾಲಪ್ಪ, ಕಾಂಗ್ರೆಸ್ ಗೆ ಜಿಲ್ಲೆಯಲ್ಲಿ ಚುನಾವಣೆಗೆ ನಿಲ್ಲಿಸಲು ಅಭ್ಯರ್ಥಿಯೂ ಇಲ್ಲದೆ, ಹೊರ ಜಿಲ್ಲೆಯಿಂದ ಅಭ್ಯರ್ಥಿಯನ್ನು ತಂದು ನಿಲ್ಲಿಸಿದರು. ಹಣದ ಮೂಲಕ ಚುನಾವಣೆ ಎದುರಿಸಿದರು. ಆದರೆ ಇಲ್ಲಿನ ಮತದಾರರು ಹಣದಿಂದ ನಡೆಯುವ ಚುನಾವಣೆಯನ್ನು ನಾವು ಬೆಂಬಲಿಸಲ್ಲ ಎನ್ನೋದನ್ನು ತೋರಿಸಿದ್ದಾರೆ. ಈ ಮೂಲಕ ಹೊರಗಿನಿಂದ ಬರುವವರಿಗೆ ಸರಿಯಾದ ಉತ್ತರ ನೀಡಿದ್ದಾರೆ ಎಂದರು.

    ಕಳೆದ ಹಲವು ವರ್ಷಗಳಿಂದ ನಮ್ಮ ಪಕ್ಷದ ಇಬ್ಬರು ಶಾಸಕರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಸಹೋದರ ಸುನಿಲ್ ಸುಬ್ರಹ್ಮಣಿ ಅವರು ಗೆದ್ದು ಸಾಕಷ್ಟು ಕೆಲಸ ಮಾಡಿದರು. ಇದೆಲ್ಲವೂ ನಾನು ಗೆಲ್ಲುವು ಸಾಧಿಸಲು ಸಹಾಯವಾಯಿತು. ನಾನು ಕೂಡ ಪ್ರತೀ ಗ್ರಾಮ ಪಂಚಾಯಿತಿ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಬಿಜೆಪಿಗೆ ಗೆಲುವು – ಕೋರ್ಟ್‌ ಮೊರೆ ಹೋಗಲು ಮುಂದಾದ ಕಾಂಗ್ರೆಸ್‌