Tag: ಸೀರಂ ಸಂಸ್ಥೆ

  • ದೀರ್ಘ ರಜೆ ಬಳಿಕ ಭಾರತಕ್ಕೆ ಹಿಂದಿರುಗಿದ ಆದಾರ್ ಪೂನಾವಾಲಾ

    ದೀರ್ಘ ರಜೆ ಬಳಿಕ ಭಾರತಕ್ಕೆ ಹಿಂದಿರುಗಿದ ಆದಾರ್ ಪೂನಾವಾಲಾ

    ಮುಂಬೈ: ಇಂಗ್ಲೆಂಡ್‍ಗೆ ತೆರಳಿದ್ದ ಸೀರಂ ಸಂಸ್ಥೆಯ ಸಿಇಓ ಆದಾರ್ ಪೂನಾವಾಲಾ ದೀರ್ಘ ರಜೆ ಬಳಿಕ ಭಾರತಕ್ಕೆ ಹಿಂದಿರುಗಿದ್ದಾರೆ.

    ಭಾರತದಲ್ಲಿ ಕೊರೊನಾ ಎರಡನೇ ಅಲೆ ಸ್ಫೋಟಗೊಂಡ ವೇಳೆಯೇ ಆದಾರ್ ಪೂನಾವಾಲಾ ಇಂಗ್ಲೆಂಡ್‍ಗೆ ತೆರಳಿದ್ದರು. ಬೆದರಿಕೆ ಮತ್ತು ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪೂನಾವಾಲಾ ಲಂಡನ್ ಸೇರಿದ್ದರು. ಇಂದು ಬೆಳಗ್ಗೆ ಪೂನಾವಾಲಾ ಸಂಸ್ಥೆಯ ಖಾಸಗಿ ಜೆಟ್ ಪುಣೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಅಲ್ಲಿಂದ ಖಾಸಗಿ ಹೆಲಿಕಾಪ್ಟರ್ ಮೂಲಕ ನೇರವಾಗಿ ಆದಾರ್ ಪೂನಾವಾಲಾ ಸೀರಂ ಸಂಸ್ಥೆಗೆ ತೆರಳಿದ್ದಾರೆ.

    ಭಾರತದ ಕೊರೊನಾ ಲಸಿಕಾಕರಣ ಅಭಿಯಾನದಲ್ಲಿ ಸೀರಂ ಸಂಸ್ಥೆಯ ಪಾತ್ರ ಪ್ರಮುಖವಾಗಿದೆ. ಕೊರೊನಾ ಸಂಜೀವಿನಿ ಕೋವಿಶೀಲ್ಡ್ ಲಸಿಕೆಯನ್ನ ಸೀರಂ ಉತ್ಪಾದನೆ ಮಾಡುತ್ತಿದೆ. ಮೇನಲ್ಲಿ ಕೊರೊನಾ ಲಸಿಕೆಗೆ ಬೇಡಿಕೆ ಹೆಚ್ಚಾಗಿದ್ದ ವೇಳೆ ದಿಢೀರ್ ಪೂನಾವಾಲಾ ಲಂಡನ್ ಗೆ ತೆರಳಿದ್ದು, ಹಲವು ಚರ್ಚೆಗಳಿಗೆ ಕಾರಣವಾಗಿತ್ತು.

    ಲಂಡನ್ ತಲುಪಿದ ಬಳಿಕ ಸ್ಪಷ್ಟನೆ ನೀಡಿದ್ದ ಪೂನಾವಾಲಾ, ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ತಮ್ಮ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದಿದ್ದರು. ಈ ಹೇಳಿಕೆ ದೇಶದಲ್ಲಿ ರಾಜಕೀಯ ತಿರುವು ಪಡೆದುಕೊಂಡು ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಬೆದರಿಕೆ ಬರುತ್ತಿದೆ ಇಂತಹ ಸ್ಥಿತಿಯಲ್ಲಿ ಇರಲಾರೆ: ಕೋವಿಶೀಲ್ಡ್ ಲಸಿಕೆ ತಯಾರಿಕಾ ಸಂಸ್ಥೆಯ ಸಿಇಓ

    ಸೀರಂ ಸಂಸ್ಥೆ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿದೆ. ಇಡೀ ವಿಶ್ವದಲ್ಲಿಯೇ ಲಸಿಕೆಯ ಉತ್ಪಾದನೆ ಸಂಸ್ಥೆಗಳಲ್ಲಿ ಸೀರಂ ಸಹ ಒಂದಾಗಿದೆ. ಆಗಸ್ಟ್ ನಿಂದ ಡಿಸೆಂಬರ್ ವರೆಗೆ ಭಾರತ ಸರ್ಕಾರಕ್ಕೆ ಸೀರಂ ಸಂಸ್ಥೆ 50 ಕೋಟಿ ಕೊರೊನಾ ವ್ಯಾಕ್ಸಿನ್ ನೀಡಬೇಕಿದೆ.

  • ಕೋವಿಡ್‌ ಲಸಿಕೆ ತಯಾರಕ ಸೀರಂನಲ್ಲಿ ಅಗ್ನಿ ದುರಂತ – ಐವರು ಬಲಿ

    ಕೋವಿಡ್‌ ಲಸಿಕೆ ತಯಾರಕ ಸೀರಂನಲ್ಲಿ ಅಗ್ನಿ ದುರಂತ – ಐವರು ಬಲಿ

    ಮುಂಬೈ: ಕೊರೊನಾ ವ್ಯಾಕ್ಸಿನ್ ತಯಾರಿಸುತ್ತಿರುವ ಪುಣೆ  ಸೀರಂ ಸಂಸ್ಥೆಯಲ್ಲಿ  ಸಂಭವಿಸಿದ ಬೆಂಕಿ ಅವಘಡದಲ್ಲಿ ಐವರು ಸಾವನ್ನಪ್ಪಿದ್ದಾರೆ.

    ಇಂದು ಮಧ್ಯಾಹ್ನ ನಿರ್ಮಾಣ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಐವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಇಂಗ್ಲೆಂಡಿನ ಆಕ್ಸ್‌ಫರ್ಡ್‌  ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಕಂಪನಿ ಅಭಿವೃದ್ಧಿಪಡಿಸಿರುವ ಕೊವಿಶೀಲ್ಡ್ ಲಸಿಕೆ ಸೀರಂ ಸಂಸ್ಥೆಯಲ್ಲಿ ಉತ್ಪಾದಿಸಲಾಗುತ್ತಿದೆ. ಆದರೆ ಕೊರೊನಾ ಲಸಿಕೆ ಸಂಗ್ರಹಿಸಿಟ್ಟ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಕುರಿತು ಆದರ್ ಪೂನವಾಲಾ ಟ್ವೀಟ್ ಮಾಡಿ, ಇದೀಗ ಆಘಾತಕಾರಿ ಮಾಹಿತಿ ಲಭ್ಯವಾಗಿದ್ದು, ಘಟನೆಯಲ್ಲಿ ಕೆಲವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ತನಿಖೆ ವೇಳೆ ಲಭ್ಯವಾಗಿದೆ. ಇದರಿಂದ ತೀವ್ರ ದುಃಖವಾಗಿದ್ದು, ಸಾವನ್ನಪ್ಪಿದವರ ಕುಟುಂಬದವರಿಗೆ ಸಂತಾಪ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.

    ಸತತ ಮೂರು ಗಂಟೆಗಳ ಅಗ್ನಿಶಾಮಕ ಸಿಬ್ಬಂದಿ ಪ್ರಯತ್ನದ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಇದೀಗ ನಾವು ಇಬ್ಬರನ್ನು ರಕ್ಷಿಸಿದ್ದು, ಇನ್ನೂ ಕಾರ್ಯಾಚರಣೆ ಮುಂದುವರಿದಿದೆ. ಬಳಿಕ ನಷ್ಟದ ಕುರಿತು ಲೆಕ್ಕ ಹಾಕಲಾಗುತ್ತದೆ ಎಂದು ಆದರ್ ಪೂನವಾಲಾ ತಿಳಿಸಿದ್ದಾರೆ.

    ಸೀರಂ ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನೆ ಮಾಡುವ ಸಂಸ್ಥೆಯಾಗಿದ್ದು, 10 ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು.