Tag: ಸಿಹಿ ಕಹಿ ಚಂದ್ರು

  • ‘ಬೊಂಬಾಟ್ ಭೋಜನ’ದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್

    ‘ಬೊಂಬಾಟ್ ಭೋಜನ’ದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್

    ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿರುವ  ಅಡುಗೆ ಶೋ ‘ಬೊಂಬಾಟ್ ಭೋಜನ’ದಲ್ಲಿ (Bombat Bhoja) ಈ ಬಾರಿ ರಾಮನವಮಿ ಹಬ್ಬದ ಪ್ರಯುಕ್ತ ವಿಶೇಷ ಸಂಚಿಕೆಯನ್ನು ಪ್ರಸಾರ ಮಾಡಲಾಗುತ್ತಿದೆ.

    ಈ ರಾಮನವಮಿಯ ವಿಶೇಷ ಸಂಚಿಕೆಯನ್ನು ಅಯೋಧ್ಯೆಯ ರಾಮಲಲ್ಲಾ ವಿಗ್ರಹವನ್ನು ಕೆತ್ತಿರುವ ಶಿಲ್ಪಿ ಅರುಣ್ ಯೋಗಿರಾಜ್ ರವರ ಮನೆಯಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ. ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಅರುಣ್ ಯೋಗಿರಾಜ್ ರವರ ತುಂಬು ಕುಟುಂಬವನ್ನು ನೀವು ಈ ವಿಶೇಷ ಸಂಚಿಕೆಯಲ್ಲಿ ಕಾಣಬಹುದು. ಇನ್ನು ರಾಮಲಲ್ಲಾ ವಿಗ್ರಹದ ಬಗ್ಗೆ, ಅದನ್ನು ಕೆತ್ತುವಾಗ ಆದ ಅನುಭವದ ಬಗ್ಗೆ ಈ ವಿಶೇಷ ಸಂಚಿಕೆಯಲ್ಲಿ ಎಳೆಎಳೆಯಾಗಿ ಹೇಳಿದ್ದಾರೆ.

    ಬೊಂಬಾಟ್ ಭೋಜನದ ರೂವಾರಿಯಾಗಿರುವ ಸಿಹಿ ಕಹಿ ಚಂದ್ರು (Sihi Kahi Chandru)ರವರು ಅರುಣ್ ಯೋಗಿರಾಜ್ Arun Yogiraj ಗೆ ಗೌರವಾರ್ಪಣೆಯೊಂದಿಗೆ, ಸನ್ಮಾನಿಸಿದ್ದಾರೆ. ಜೊತೆಗೆ ಈ ವಿಶೇಷ ಸಂಚಿಕೆಯಲ್ಲಿ ಗಾಯಕರಾದ  ಶ್ರೀ ಚಿನ್ಮಯಿ ಅತ್ರೇಯಸ್ ರವರು ಅತಿಥಿಯಾಗಿ ಆಗಮಿಸಿದ್ದು, ರಾಮನಾಮವನ್ನು ಭಕ್ತಿಯಿಂದ ಹಾಡಿ ಮನರಂಜಿಸಿದ್ದಾರೆ.

     

    ಬೊಂಬಾಟ್ ಭೋಜನದಲ್ಲಿ ರಾಮನವಮಿ ವಿಶೇಷ ಸಂಚಿಕೆಯು ಇದೇ ಬುಧವಾರ (ಏ.17) ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  • ಶಂಕರ್ ನಾಗ್ ಇದ್ದಿದ್ರೆ ಕರ್ನಾಟಕದಲ್ಲಿ ಸ್ಲಮ್ ಇರ್ತಾ ಇರಲಿಲ್ಲ- ಸಿಹಿ ಕಹಿ ಚಂದ್ರು

    ಶಂಕರ್ ನಾಗ್ ಇದ್ದಿದ್ರೆ ಕರ್ನಾಟಕದಲ್ಲಿ ಸ್ಲಮ್ ಇರ್ತಾ ಇರಲಿಲ್ಲ- ಸಿಹಿ ಕಹಿ ಚಂದ್ರು

    ಕಿರುತೆರೆಯ ಜನಪ್ರಿಯ ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದಲ್ಲಿ ಈ ವಾರ ಸಿಹಿ- ಕಹಿ ಚಂದ್ರು (Sihi Kahi Chandru) ಅವರು ಸಾಧಕರ ಸೀಟ್ ಅಲಂಕರಿಸಿದ್ದಾರೆ. ತಮ್ಮ ಬಾಲ್ಯದ ತುಂಟಾಟ, ನಟನೆ, ಅಡುಗೆ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಹಿರಿಯ ನಟ ಸಿಹಿ ಕಹಿ ಚಂದ್ರು ಅವರು ಮಾತನಾಡಿದ್ದಾರೆ. ಈ ವೇಳೆ ಶಂಕರ್ ನಾಗ್ (Shankar Nag) ಜೊತೆಗಿನ ಒಡನಾಟದ ಬಗ್ಗೆ ಚಂದ್ರು ಅವರು ಬಿಚ್ಚಿಟ್ಟಿದ್ದಾರೆ.

    ವೀಕೆಂಡ್ ಟೆಂಟ್‌ನಲ್ಲಿ ಶಂಕರ್‌ನಾಗ್ (Shankar Nag) ಪರಿಚಯ ತಮಗೆ ಆಗಿದ್ದು ಹೇಗೆ? ಎಂಬುದರಿಂದ ಮಾತು ಆರಂಭಿಸಿದ ಸಿಹಿ-ಕಹಿ ಚಂದ್ರು, ನಾನು ಕಾಲೇಜು ಪ್ರೆಸಿಡೆಂಟ್ ಆಗಿದ್ದಾಗ ಶಂಕರ್‌ನಾಗ್ ಅವರನ್ನು ಕಾಲೇಜಿಗೆ ಅತಿಥಿಯಾಗಿ ಆಹ್ವಾನಿಸಲು ಹೋಗಿದ್ದೆ ಆಗ ಅವರು ಪುಸ್ತಕವೊಂದನ್ನು ಕೊಟ್ಟು ಓದಿಕೊಂಡು ಬಂದು ಚರ್ಚಿಸುವಂತೆ ಹೇಳಿದರು. ನನಗೆ ಅರ್ಥವಾಗದಾಗ ಅವರೇ ಅದನ್ನು ಹೇಗೆ ಓದಬೇಕು ಎಂದು ಹೇಳಿಕೊಟ್ಟರು, ಅದಾದ ಮೇಲೆ ಓದಿ ಅವರೊಟ್ಟಿಗೆ ಚರ್ಚಿಸಿದೆ. ಆಗ ಅವರು ನಮ್ಮ ಕಾಲೇಜಿಗೆ ಬರಲು ಒಪ್ಪಿಕೊಂಡು ಅತಿಥಿಯಾಗಿ ಬಂದರು ಎಂದು ಶಂಕರ್‌ನಾಗ್ ಅವರೊಟ್ಟಿಗಿನ ಮೊದಲ ಭೇಟಿಯನ್ನು ಸ್ಮರಿಸಿದರು. ಬಳಿಕ ನೋಡಿಸ್ವಾಮಿ ನಾವಿರೋದೆ ಹೀಗೆ ನಾಟಕದ ರಿಹರ್ಸಲ್‌ಗೆ ಹೋಗುತ್ತಿದ್ದರು. ಅಲ್ಲಿ ಶಂಕರ್ ನಾಗ್ ಅವರು ತಮ್ಮನ್ನು ಗುರುತಿಸಿ ‘ಮಾಲ್ಗುಡಿ ಡೇಸ್’ (Malgudi Days) ತಂಡಕ್ಕೆ ಸೇರಿಸಿಕೊಂಡ ವಿಷಯ ಹೇಳಿದರು. ಆಗ ಶಂಕರ್‌ನಾಗ್ ಅವರು ಹೇಗೆ ಪಟ-ಪಟನೆ ಕೆಲಸ ಮಾಡುತ್ತಿದ್ದರು ಎಂಬ ವಿಚಾರವನ್ನ ಚಂದ್ರು ಬಿಚ್ಚಿಟ್ಟರು. ಇದನ್ನೂ ಓದಿ:ಸಾವಿನ ಬಗ್ಗೆ ಸುಳ್ಳು ಸುದ್ದಿ, ಅಪಪ್ರಚಾರ ಮಾಡಿದವರಿಗೆ ದ್ವಾರಕೀಶ್ ಸ್ಪಷ್ಟನೆ

    ‘ನರಸಿಂಹ’ (Narasimha) ಎಂಬ ಹೆಸರಿನ ಸಿನಿಮಾದಲ್ಲಿ ಶಂಕರ್ ನಾಗ್ (Shankarnag) ಜೊತೆ ನಟಿಸುತ್ತಿದ್ದೆ, ಹೊಸ ಮನೆ ಕಟ್ಟಿಸಿದ್ದೀನಿ ನಿನಗೆ ತೋರಿಸುತ್ತೀನಿ ಎಂದು ಅವರ ಮೆಟಡೋರ್‌ನಲ್ಲಿ ಕೂಡಿಸಿಕೊಂಡು ಕರೆದುಕೊಂಡು ಹೋದರು. ಅದಾಗಲೇ ದೊಡ್ಡ ನಟರಾಗಿದ್ದ ಅವರು ಯಾವುದೋ ದೊಡ್ಡ ಮನೆ ಕಟ್ಟಿದ್ದಾರೆ ಎಂದುಕೊಂಡು ಹೋಗಿ ನೋಡಿದರೆ ಅಲ್ಲಿ ಸಣ್ಣ ಮನೆ ಇತ್ತು. ಒಂದು ಕೋಣೆಯ ಸರಳವಾದ ಮನೆ ನನಗೆ ಆಶ್ಚರ್ಯವಾಯಿತು ಎಂದು ನೆನಪು ಮಾಡಿಕೊಂಡರು.

    ಈ ಮನೆಯನ್ನು ಬರೀ ಎರಡು ದಿನದಲ್ಲಿ ಕಟ್ಟಿದ್ದೀವಿ, ರೆಡಿಮೇಡ್ ಬ್ಲಾಕ್ಸ್‌ಗಳನ್ನು ಬಳಸಿ ಕಟ್ಟಿರುವ ಮನೆ ಇದು. ಇದು ಜರ್ಮನಿಯ ತಂತ್ರಜ್ಞಾನ. ಇದನ್ನು ಕಟ್ಟಲು ಖರ್ಚಾಗಿರುವುದು ಹದಿನೈದು ಸಾವಿರ ರೂಪಾಯಿ ಅಷ್ಟೇ. ಇಂಥಹಾ ಸರಳ ಮನೆಯನ್ನು ರಾಜ್ಯದ ಎಲ್ಲಕಡೆ ಕಟ್ಟಿಸಬೇಕು ಅಂದುಕೊಂಡಿದ್ದೇನೆ. ಈ ತಂತ್ರಜ್ಞಾನ ಬಳಸಿ ಮನೆ ಕಟ್ಟಿಸಿದರೆ ರಾಜ್ಯದಲ್ಲಿರುವ ಸ್ಲಮ್‌ಗಳೆಲ್ಲ ನಿರ್ಮೂಲನೆ ಆಗುತ್ತವೆ, ಗುಡಿಸಲು ವಾಸ ಎಂಬುದೇ ಇರಲ್ಲ. ಈ ಮನೆ ಕಟ್ಟಿಸಲು ಸರ್ಕಾರದಿಂದ ಹತ್ತುಸಾವಿರ ಸಬ್ಸಿಡಿ ಕೊಡಿಸಲು ಪ್ರಯತ್ನ ಮಾಡುತ್ತಿದ್ದೀನಿ, ಸರ್ಕಾರದಿಂದ ರಿಯಾಯಿತಿ ಸಿಕ್ಕರೆ ನಾನು ಕರ್ನಾಟಕದಲ್ಲಿರುವ ಸ್ಲಮ್ ನಿರ್ಮೂಲನೆ ಮಾಡುತ್ತೇನೆ ಎಂದು ಹೇಳಿದ್ದರು. ಬಡವರ ಪರವಾಗಿ ಶಂಕರ್ ನಾಗ್‌ಗೆ ಇರುವ ಕಾಳಜಿ ಬಗ್ಗೆ ಚಂದ್ರು ವಿವರಿಸಿದರು.

    ಅವರು ಅಂದು ಆಡಿದ ಆ ಮಾತು ನಾನು ಜೀವನದಲ್ಲಿ ಮರೆಯುವಂತಿಲ್ಲ, ಆಗಿನ ಕಾಲಕ್ಕೆ ಅವರದ್ದು ಅದೆಂಥ ಯೋಚನೆ, ಆ ಯೋಜನೆ ಬಂದಿದ್ದರೆ ನಿಜವಾಗಿಯೂ ನಮ್ಮದು ಗುಡಿಸಲು ಮುಕ್ತ ರಾಜ್ಯವಾಗಿಬಿಟ್ಟಿರುತ್ತಿತ್ತು. ಶಂಕರ್‌ನಾಗ್ ಇದ್ದಿದ್ದೇ ಹಾಗೆ ಸದಾ ಸಕ್ರಿಯ, ಕೆಲಸ ಮಾಡುವಾಗಲೂ ಚಟ-ಪಟ ಎನ್ನುತ್ತಾ ಕೆಲಸ ಮಾಡುತ್ತಿದ್ದರು ಎಂದ ಚಂದ್ರು, ಶಂಕರ್‌ನಾಗ್ ಅವರು ನನ್ನ ಬದುಕಿನ ಗುರು ಎಂದು ಸಿಹಿ ಕಹಿ ಚಂದ್ರು ಬಿಚ್ಚಿಟ್ಟರು.