Tag: ಸಿನಿಮಾ ವಿಮರ್ಷೆ

  • ಪ್ರಕೃತಿ ಮಡಿಲಲ್ಲಿ ಸ್ನೇಹಿತರ ಪಯಣಕ್ಕೆ ಸೆಲ್ಫೀ ನೀಡಿತು ರೋಚಕ ಟ್ವಿಸ್ಟ್

    ಪ್ರಕೃತಿ ಮಡಿಲಲ್ಲಿ ಸ್ನೇಹಿತರ ಪಯಣಕ್ಕೆ ಸೆಲ್ಫೀ ನೀಡಿತು ರೋಚಕ ಟ್ವಿಸ್ಟ್

    ಚಿತ್ರ: ಗ್ರೂಫಿ
    ನಿರ್ದೇಶನ : ಡಿ. ರವಿ ಅರ್ಜುನ್
    ನಿರ್ಮಾಪಕ: ಕೆ.ಜಿ.ಸ್ವಾಮಿ
    ಛಾಯಾಗ್ರಹಕ: ಲಕ್ಷೀಕಾಂತ್
    ಸಂಗೀತ: ವಿಜೇತ್ ಕೃಷ್ಣ
    ತಾರಾಬಳಗ: ಆರ್ಯನ್, ಪದ್ಮಶ್ರೀ ಜೈನ್, ಗಗನ್, ಉಮಾ ಮಯೂರಿ, ಪ್ರಜ್ವಲ್, ಸಂಧ್ಯಾ, ಇತರರು

    ಯುವ ಜನತೆಯ ಜೀವಕ್ಕೆ ಮಾರಕವಾಗುತ್ತಿರುವ ಸೆಲ್ಫೀ ಗೀಳಿನ ಬಗ್ಗೆ ಸಿನಿಮಾ ಬೆಳಕು ಚೆಲ್ಲುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಿನಿಮ್ಯಾಟಿಕ್ ಆಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

    ಚಿತ್ರದ ನಾಯಕ ಕಾರ್ತಿಕ್ ಒಬ್ಬ ಫೋಟೋ ಜರ್ನಲಿಸ್ಟ್. ಪ್ರಕೃತಿ ಸೌಂದರ್ಯವನ್ನು ಪ್ರೀತಿಸುವ ಕಾರ್ತಿಕ್ ಸದಾ ತನ್ನ ಕ್ಯಾಮೆರಾ ಕಣ್ಣಲ್ಲಿ ಅದರ ಸೌಂದರ್ಯವನ್ನು ಸೆರೆ ಹಿಡಿಯುವಲ್ಲಿ ನಿರತನಾಗಿರುತ್ತಾನೆ. ಕ್ಯಾಮೆರಾ ಹಿಡಿದು ರಮಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿರುತ್ತಾನೆ. ಹೀಗಿರುವಾಗ ಒಮ್ಮೆ ಒಂದಷ್ಟು ಸ್ನೇಹಿತರು ಆತನಿಗೆ ಪರಿಚಯವಾಗುತ್ತಾರೆ. ಅವರೆಲ್ಲರದ್ದು ಒಂದೊಂದು ರೀತಿಯ ಸ್ವಭಾವ. ನಾಯಕಿ ಭುವಿಗೆ ಸದಾ ಸೆಲ್ಫೀ ತೆಗೆದುಕೊಳ್ಳುವ ಹುಚ್ಚು, ಭಯದಲ್ಲೇ ಬದುಕುವ ಪುನೀತ್, ಹೊಸತನಕ್ಕೆ ಹಾತೊರೆಯುವ ಪೂರ್ವಿ ಹೀಗೆ ಒಬ್ಬೊಬ್ಬರದ್ದು ಒಂದು ನೇಚರ್. ಇವರೆಲ್ಲರೂ ಒಂದು ಸುಂದರ ತಾಣದಲ್ಲಿ ಭೇಟಿಯಾಗಿ ಸ್ನೇಹಿತರಾಗುತ್ತಾರೆ. ಆನಂತರ ಏನೆಲ್ಲ ಘಟನೆ ನಡೆಯುತ್ತೆ ಎನ್ನುವುದೇ ಗ್ರೂಫಿ ಸಿನಿಮಾದ ಇಂಟ್ರಸ್ಟಿಂಗ್ ಸಂಗತಿ. ಇದನ್ನೂ ಓದಿ: ‘ಗ್ರೂಫಿ’ ಮೂಲಕ ಗಾಂಧಿನಗರಕ್ಕೆ ನಿರ್ಮಾಪಕರಾಗಿ ಕೆ.ಜಿ.ಸ್ವಾಮಿ

    ಛಾಯಾಗ್ರಾಹಕ ಲಕ್ಷೀಕಾಂತ್ ಕ್ಯಾಮೆರಾ ವರ್ಕ್ ಕಣ್ಣಿಗೆ ಹಬ್ಬ ನೀಡುತ್ತದೆ. ನಿಸರ್ಗದ ಮಡಿಲಲ್ಲೇ ಚಿತ್ರೀಕರಣ ನಡೆದಿರುವುದರಿಂದ ಅದನೆಲ್ಲ ಸೊಗಸಾಗಿ ಸೆರೆಹಿಡಿದು ತೆರೆ ಮೇಲೆ ತಂದಿದ್ದಾರೆ. ನಿಸರ್ಗ ಸೌಂದರ್ಯದ ಜೊತೆ ಪ್ರಾಕೃತಿಕ ವಿಕೋಪಕ್ಕೆ ಕಾರಣವಾದ ಅಂಶಗಳ ಮೇಲೆ ಚಿತ್ರ ಬೆಳಕು ಚೆಲ್ಲಿದೆ. ವಿಜೇತ ಕೃಷ್ಣ ಸಂಗೀತದಲ್ಲಿ ಒಂದೆರಡು ಹಾಡುಗಳು ಮನಸಿಗೆ ಮುದ ನೀಡುತ್ತವೆ. ನಿರ್ದೇಶಕ ಡಿ. ರವಿ ಅರ್ಜುನ್ ಸಿನಿಮಾ ಪ್ರೀತಿ ಬಗ್ಗೆ ಮೆಚ್ಚುಗೆ ಸೂಚಿಸಲೇಬೇಕು. ಇದನ್ನೂ ಓದಿ: ‘ಗ್ರೂಫಿ’ ಚಿತ್ರದ ಆಡಿಯೋಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಾಥ್

    ಫೋಟೋ ಜರ್ನಲಿಸ್ಟ್ ಆಗಿ ನಾಯಕ ಆರ್ಯನ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಯಕಿ ಪದ್ಮಶ್ರೀ ಜೈನ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ನೇಹಿತರ ಪಾತ್ರಗಳಲ್ಲಿ ನಟಿಸಿರುವ ಗಗನ್, ಉಮಾ ಮಯೂರಿ, ಸಂಧ್ಯಾ, ಪ್ರಜ್ವಲ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸ್ನೇಹ, ಪ್ರೀತಿ, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ಎಳೆಗಳನ್ನು ಒಳಗೊಂಡಿರುವ ಈ ಚಿತ್ರ ನೋಡುಗರಿಗೆ ಥ್ರಿಲ್ ನೀಡೋದ್ರ ಜೊತೆ ಸಾಮಾಜಿಕ ಕಳಕಳಿಯನ್ನು ಒಳಗೊಂಡಿದೆ. ಒಟ್ನಲ್ಲಿ ಒಂದೊಳ್ಳೆ ಅನುಭವ ಗ್ರೂಫಿ ಚಿತ್ರ ನೀಡೋದ್ರಲ್ಲಿ ಡೌಟೇ ಇಲ್ಲ.

    ರೇಟಿಂಗ್: 3.5/5

  • ಕಪಟ ನಾಟಕ ಪಾತ್ರಧಾರಿ: ಸಸ್ಪೆನ್ಸ್ ಕಥೆಯ ಥ್ರಿಲ್ಲಿಂಗ್ ಸವಾರಿ!

    ಕಪಟ ನಾಟಕ ಪಾತ್ರಧಾರಿ: ಸಸ್ಪೆನ್ಸ್ ಕಥೆಯ ಥ್ರಿಲ್ಲಿಂಗ್ ಸವಾರಿ!

    ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿರುವ ಕಪಟ ನಾಟಕ ಪಾತ್ರಧಾರಿ ಚಿತ್ರ ತೆರೆಕಂಡಿದೆ. ಶೀರ್ಷಿಕೆಯೊಂದಿಗೇ ಗಮನ ಸೆಳೆದು, ಆ ನಂತರದಲ್ಲಿ ಹಾಡುಗಳು ಮತ್ತು ಟ್ರೇಲರ್ ಮೂಲಕ ಸಖತ್ ಕ್ರೇಜ್ ಸೃಷ್ಟಿಸಿದ್ದ ಈ ಚಿತ್ರ ನೋಡುಗರನ್ನೆಲ್ಲ ಕಾಡುವಂತೆ, ಎಲ್ಲ ವರ್ಗದ ಪ್ರೇಕ್ಷಕರೂ ಸಂಪೂರ್ಣವಾಗಿ ತೃಪ್ತರಾಗುವಂತೆ ಅಚ್ಚುಕಟ್ಟಾಗಿಯೇ ಮೂಡಿ ಬಂದಿದೆ.

    ಯಾವ ಥರದ ನಿರೀಕ್ಷೆಗಳೆದ್ದಿದ್ದವೋ ಅದಕ್ಕೆ ತಕ್ಕುದಾದ ಕಂಟೆಂಟಿನೊಂದಿಗೆ ಮೂಡಿ ಬಂದಿರೋ ಈ ಚಿತ್ರ ಮಧ್ಯಮ ವರ್ಗದ ಹುಡುಗನೊಬ್ಬನ ಭೂಮಿಕೆಯಲ್ಲಿ ತೆರೆದುಕೊಳ್ಳುವ ಸಸ್ಪೆನ್ಸ್ ಕಥೆಯೊಂದಿಗೆ ಥ್ರಿಲ್ಲಿಂಗ್ ಜರ್ನಿ ಮಾಡಿಸುವಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

    ಇಲ್ಲಿರೋದು ಮಧ್ಯಮ ವರ್ಗದ ಹುಡುಗನೊಬ್ಬನ ಕಥೆ. ಅದು ಈ ವರ್ಗದ ಬಹುತೇಕ ಯುವಕರ ಪ್ರಾತಿನಿಧಿಕ ಕಥೆಯಂತೆಯೇ ಕಾಣಿಸುತ್ತದೆ. ಅದಕ್ಕೆ ಮತ್ತೂ ಒಂದಷ್ಟು ರೋಚಕ ಅಂಶಗಳನ್ನು ಸೇರಿಸಿ ಸಿನಿಮಾ ಸ್ಪರ್ಶ ನೀಡಿರುವಲ್ಲಿಯೇ ನಿರ್ದೇಶಕ ಕ್ರಿಶ್ ಅವರ ಕಸುಬುದಾರಿಕೆ ಎದ್ದು ಕಾಣಿಸುತ್ತದೆ. ಇದಕ್ಕಾಗಿ ಪ್ರತಿ ಪಾತ್ರಗಳನ್ನು ದುಡಿಸಿಕೊಂಡಿರೋದರಲ್ಲಿಯೇ ಇಡೀ ಸಿನಿಮಾದ ನಿಜವಾದ ಶಕ್ತಿಯೂ ಅಡಗಿದೆ. ಬಾಲು ನಾಗೇಂದ್ರ ಪ್ರತಿಭಾವಂತ ನಟ ಅನ್ನೋದು ಇಲ್ಲಿನ ಕೃಷ್ಣ ಎಂಬ ಪಾತ್ರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

    ಬಾಲು ನಾಗೇಂದ್ರ ಕೃಷ್ಣ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಅದು ಯಾವ ಕೆಲಸವನ್ನೂ ನೆಟ್ಟಗೆ ಮಾಡಲಾಗದೆ ಸದಾ ಅಪ್ಪನಿಂದ ಉಗಿಸಿಕೊಳ್ಳುವ ಪಾತ್ರ. ಹೀಗಿರುವ ಯುವ ಕೃಷ್ಣನ ಮುಂದೆ ಅನಿವಾರ್ಯತೆಯೊಂದು ಸೃಷ್ಟಿಯಾಗುತ್ತೆ. ಅದರ ಭಾಗವಾಗಿ ಆಟೋ ಓಡಿಸಿ ಬದುಕೋ ನಿರ್ಧಾರ ತಳೆಯುತ್ತಾನೆ. ಈ ಹಾದಿ ಪ್ರೀತಿ ಪ್ರೇಮಗಳೊಂದಿಗೆ ರೊಮ್ಯಾಂಟಿಕ್ ಮೂಡಿಗೆ ಜಾರಿಸುತ್ತಲೇ ಅಲ್ಲೊಂದು ಹಾರರ್ ಸಸ್ಪೆನ್ಸ್ ಕಥನ ತೆರೆದುಕೊಳ್ಳುತ್ತೆ. ಆತನ ಆಟೋ ಹತ್ತಲೇ ಹಿಂದೆ ಮುಂದೆ ನೋಡುವಂಥಾ ನಿರ್ಮಾಣವಾಗುತ್ತೆ. ಹಾಗಾದರೆ ಆಟೋದೊಳಗಾಗೋ ಚಿತ್ರವಿಚಿತ್ರ ಅನುಭವದ ಸೂತ್ರಧಾರರ್ಯಾರು? ಅದರಲ್ಲಿ ಪಾತ್ರಧಾರಿಗಳ್ಯಾರೆಂಬುದಕ್ಕಿಲ್ಲಿ ರೋಚಕ ಉತ್ತರವೇ ಕಾದಿದೆ.

    ನಿರ್ದೇಶಕ ಕ್ರಿಶ್ ಹಲವಾರು ಟ್ವಿಸ್ಟ್ ಗಳನ್ನು ಒಳಗೊಂಡಿರುವ ಈ ಕಥೆಯನ್ನು ಎಲ್ಲಿಯೂ ಸಿಕ್ಕಾಗದಂತೆ ನಿರ್ವಹಿಸಿದ್ದಾರೆ. ಬಾಲು ನಾಗೇಂದ್ರ, ಸಂಗೀತಾ ಭಟ್ ಸೇರಿದಂತೆ ಇಡೀ ಪಾತ್ರವರ್ಗ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದೆ. ಅದು ಈ ಸಿನಿಮಾದೊಂದು ಶಕ್ತಿಯಾದರೆ, ಛಾಯಾಗ್ರಹಣ, ಸಂಗೀತ ಸೇರಿದಂತೆ ಎಲ್ಲ ವಿಭಾಗಗಳೂ ಇದರಲ್ಲಿ ಭಾಗಿಯಾಗುವಂತಿವೆ. ಒಟ್ಟಾರೆಯಾಗಿ ಇದೊಂದು ಅಚ್ಚುಕಟ್ಟಾದ ವಿಭಿನ್ನ ಚಿತ್ರ. ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡಲು ಅಡ್ಡಿಯಿಲ್ಲ.

    ರೇಟಿಂಗ್ 3.5 / 5

  • ಪತಿ ಬೇಕು ಅಂದವಳು ಅನುಭವಿಸುವ ತಾಪತ್ರಯಗಳು

    ಪತಿ ಬೇಕು ಅಂದವಳು ಅನುಭವಿಸುವ ತಾಪತ್ರಯಗಳು

    ಶೀತಲ್ ಶೆಟ್ಟಿ ನಾಯಕಿಯಾಗಿರೋ ಕಾರಣದಿಂದಲೇ ಸಾಕಷ್ಟು ಸೌಂಡು ಮಾಡಿದ್ದ ಚಿತ್ರ ಪತಿಬೇಕುಡಾಟ್ ಕಾಮ್ ಇಂದು ತೆರೆಗೆ ಬಂದಿದೆ.

    ಮೂವತ್ತು ಮೀರಿದ ಹೆಣ್ಣುಮಗಳೊಬ್ಬಳನ್ನು ಮದುವೆ ಮಾಡಿ ಮನೆಯಿಂದ ಸಾಗಹಾಕೋದನ್ನೇ ಪರಮಗುರಿಯನ್ನಾಗಿಸಿಕೊಂಡ ಹೆತ್ತವರು. ನೋಡಲು ಬಂದ ಗಂಡು ಸಂತಾನ ಮತ್ತವರ ಮನೆ ಮಂದಿಗೆ ಕಾಫಿ ತಿಂಡಿ ಕೊಟ್ಟೂ ಕೊಟ್ಟು ಸುಸ್ತಾದ ಹುಡುಗಿ ತಾನೇ ಹುಡುಗನ ಭೇಟೆಗೆ ನಿಲ್ಲೋದು. ಕಡೆಗೂ ಗಂಡು ಸಿಕ್ಕ ಅಂತಾ ಖುಷಿ ಪಡೋ ಹೊತ್ತಿಗೇ ಉಸಿರಾಟ ಶುರುಮಾಡುವ ವರದಕ್ಷಿಣೆ ಪೀಡೆ. ಇಷ್ಟೆಲ್ಲದರ ನಡುವೆ ಕಥಾನಾಯಕಿ ಭಾಗ್ಯಳಿಗೆ ಮದುವೆಯಾಗುತ್ತದಾ? ಆಕೆಯ ತಂದೆ ತಾಯಿಯ ಆಸೆ ಕಡೆಗೂ ಈಡೇರುತ್ತದಾ ಅನ್ನೋದು ಪತಿಬೇಕು ಡಾಟ್‍ಕಾಮ್ ಚಿತ್ರದ ಪ್ರಧಾನ ಅಂಶ.

    ಶೀತಲ್ ಶೆಟ್ಟಿ ಈ ಸಿನಿಮಾದಲ್ಲಿ ಭಾಗ್ಯ ಎಂಬ ಮಧ್ಯಮವರ್ಗದ, ಮದುವೆಯ ಕನಸು ಕಾಣುವ ಹೆಣ್ಣುಮಗಳನ್ನು ಆವಾಹಿಸಿಕೊಂಡಂತೆ ನಟಿಸಿದ್ದಾರೆ. ನಿರ್ದೇಶಕ ರಾಕೇಶ್ ಪ್ರತಿಯೊಂದು ದೃಶ್ಯವನ್ನೂ ಕಾಮಿಡಿಯ ಮೂಲಕವೇ ಹೇಳಬೇಕು ಅಂತಾ ಮೊದಲೇ ನಿರ್ಧರಿಸಿದ್ದರ ಪರಿಣಾಮವೋ ಏನೋ ಗಂಭೀರವಾಗಬೇಕಿದ್ದ ಸೀನುಗಳು ಕೂಡಾ ಹಾಸ್ಯಮಯವಾಗಿದೆ. ಆದರೆ ಅದು ತೀರಾ ಅಭಾಸದ ಮಟ್ಟ ತಲುಪಿಲ್ಲ ಅನ್ನೋದು ಸಮಾಧಾನದ ವಿಚಾರ.

    ಹೆಣ್ಣುಕುಲದ ಆತ್ಮಗೀತೆಯಂತಿರುವ ಆಡುಸ್ತ್ಯ ದ್ಯಾವರೆ ಏನ್ ಚೆಂದ ಕ್ಯಾಬರೆ ಹಾಡು ಕೇಳಲು ಮಾತ್ರವಲ್ಲ ನೋಡಲು ಸಹ ಚೆಂದಗೆ ಚಿತ್ರಿತಗೊಂಡಿದೆ. ತಂದೆ ತಾಯಿ ಪಾತ್ರದಲ್ಲಿ ಕೃಷ್ಣ ಅಡಿಗ ಮತ್ತು ಹರಿಣಿ ಮಕ್ಕಳ ಮದುವೆ ಜವಾಬ್ದಾರಿಯನ್ನು ಹೊತ್ತ ತಂದೆ ತಾಯಿಯಾಗಿ ಮನಮಿಡಿಯುವಂತೆ ನಟಿಸಿದ್ದಾರೆ.

    ಒಟ್ಟಾರೆ ಇದು ಹೆಣ್ಮಕ್ಕಳನ್ನು ಹೆತ್ತ ತಂದೆ-ತಾಯಿ ಮಾತ್ರವಲ್ಲ, ಮಹಿಳೆಯರು, ಮಕ್ಕಳು, ಯುವಕರು, ವಯೋವೃದ್ಧರು ಸೇರಿದಂತೆ ವಯಸ್ಸಿನ ಬೇಧವಿಲ್ಲದೆ ಎಲ್ಲರೂ ನೋಡಬಹುದಾದ ಚಿತ್ರ. ಕ್ರೈಂ, ಹಾರರ್ ಮತ್ತು ಸೈಕೋ ಸಿನಿಮಾಗಳೇ ಹೆಚ್ಚೆಚ್ಚು ಬರುತ್ತಿರೋ ಇವತ್ತಿನ ದಿನಗಳಲ್ಲಿ ಪಕ್ಕಾ ಫ್ಯಾಮಿಲಿ ಸೆಂಟಿಮೆಂಟಿನ ಜೊತೆಗೆ ತಿಳಿ ಹಾಸ್ಯವನ್ನು ಬೆಸೆದುಕೊಂಡಿರುವ ಪತಿಬೇಕು ಡಾಟ್‍ಕಾಮ್ ಚಿತ್ರ ನಿಜಕ್ಕೂ ಭಿನ್ನ ಪ್ರಯತ್ನ.

    ರೇಟಿಂಗ್ -3.5/5

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv