Tag: ಸಿನಿಮಾ ವಿಮರ್ಶೆ

  • ಕುತೂಹಲ ಹುಟ್ಟಿಸೋ ತಿರುವುಗಳು, ರೋಚಕ ಸಂಗತಿಗಳು: ಪ್ರೇಕ್ಷಕರಿಗೆ ಥ್ರಿಲ್ ನೀಡಿದ ‘ಕೃಷ್ಣ ಟಾಕೀಸ್’

    ಕುತೂಹಲ ಹುಟ್ಟಿಸೋ ತಿರುವುಗಳು, ರೋಚಕ ಸಂಗತಿಗಳು: ಪ್ರೇಕ್ಷಕರಿಗೆ ಥ್ರಿಲ್ ನೀಡಿದ ‘ಕೃಷ್ಣ ಟಾಕೀಸ್’

    ರೇಟಿಂಗ್: 3.5/5

    ಚಿತ್ರ: ಕೃಷ್ಣ ಟಾಕೀಸ್
    ನಿರ್ದೇಶನ: ವಿಜಯಾನಂದ್
    ನಿರ್ಮಾಪಕ: ಗೋವಿಂದರಾಜು. ಎ.ಹೆಚ್ ಆಲೂರು
    ಸಂಗೀತ ನಿರ್ದೇಶನ: ವಿ. ಶ್ರೀಧರ್ ಸಂಭ್ರಮ್
    ಛಾಯಾಗ್ರಹಣ: ಅಭಿಷೇಕ್ ಜಿ ಕಾಸರಗೋಡು
    ತಾರಾಬಳಗ: ಅಜಯ್ ರಾವ್, ಅಪೂರ್ವ, ಸಿಂಧು ಲೋಕನಾಥ್, ಮಂಡ್ಯ ರಮೇಶ್, ನಿರಂತ್, ಚಿಕ್ಕಣ್ಣ, ಪ್ರಕಾಶ್ ತುಮಿನಾಡು, ಇತರರು

    ಜಯ್ ರಾವ್ ನಟನೆಯ ವಿಜಯಾನಂದ್ ನಿರ್ದೇಶನದ ಕೃಷ್ಣ ಟಾಕೀಸ್ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕ ಪ್ರಭುಗಳ ಮೆಚ್ಚುಗೆಗೆ ಸಿನಿಮಾ ಪಾತ್ರವಾಗಿದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ನಿರ್ದೇಶಕರು ಈ ಸಿನಿಮಾ ಮಾಡಿದ್ದು, ಲಖನೌದ ಚಿತ್ರಮಂದಿರದಲ್ಲಿ ನಡೆದ ಘಟನೆ ಈ ಸಿನಿಮಾದ ಕಥಾವಸ್ತು. ಅಜಯ್ ರಾವ್ ಅವರದ್ದು ಚಿತ್ರದಲ್ಲಿ ಪತ್ರಕರ್ತನ ಪಾತ್ರ. ಈ ಹಿಂದಿನ ಕೃಷ್ಣ ಸೀರೀಸ್ ನಾಲ್ಕು ಸಿನಿಮಾಗಳಲ್ಲಿ ಲವರ್ ಬಾಯ್ ಇಮೇಜಾದ್ರೆ ಇಲ್ಲಿ ಸೀರಿಯಸ್ ರೋಲ್. ಮೊದಲ ಬಾರಿ ಹಾರಾರ್ ಥ್ರಿಲ್ಲರ್ ಜಾನರ್ ನಲ್ಲಿ ನಟಿಸಿರುವ ಅಜಯ್ ರಾವ್, ಪತ್ರಕರ್ತನ ಪಾತ್ರದಲ್ಲಿ ಸಾಮಾನ್ಯ ಹುಡುಗನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

    ‘ಕೃಷ್ಣ ಟಾಕೀಸ್’ ಎಂಬ ಚಿತ್ರಮಂದಿರದ ಮೇಲೆ ಹೆಣೆಯಲಾದ ಕಥೆಯೇ ‘ಕೃಷ್ಣ ಟಾಕೀಸ್’. ಕೃಷ್ಣ ಟಾಕೀಸ್ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಮೇಲೆ ಒಬ್ಬರಲ್ಲ ಒಬ್ಬರು ನಾಪತ್ತೆಯಾಗುತ್ತಿರುತ್ತಾರೆ. ಒಮ್ಮೆ ನಾಯಕನ ಸ್ನೇಹಿತ ಸೂರಿ ಕೃಷ್ಣ ಟಾಕೀಸ್ ನಲ್ಲಿ ಸಿನಿಮಾ ನೋಡಲು ಹೋದ ಮೇಲೆ ಎಲ್ಲೂ ಕಾಣಸಿಗೋದಿಲ್ಲ. ತನ್ನ ಸ್ನೇಹಿತನ ಸಾವಿಗೆ ಕಾರಣ ಹುಡುಕಲು ಹೊರಟ ನಾಯಕನಿಗೆ ಹಲವು ಮಜಲುಗಳು ಸಿಗುತ್ತವೆ. ಕೃಷ್ಣ ಟಾಕೀಸ್ ನಲ್ಲಿ ಸಿನಿಮಾ ನೋಡಿದ ಮೇಲೆ ಕಾಣೆಯಾಗಲು ನಿಜವಾದ ಕಾರಣ ಏನು ಎಂಬುದನ್ನು ನಾಯಕ ಹೇಗೆ ಕಂಡು ಹಿಡಿಯುತ್ತಾನೆ ಎನ್ನುವುದರ ಸುತ್ತ ಸಿನಿಮಾ ಹೆಣೆಯಲಾಗಿದೆ. ಇದನ್ನು ರೋಚಕವಾಗಿ, ಹಾರಾರ್ ಥ್ರಿಲ್ಲರ್ ಸಬ್ಜೆಕ್ಟ್ ನೊಂದಿಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿಜಯಾನಂದ್. ಹಾರಾರ್ ಥ್ರಿಲ್ಲರ್ ಚಿತ್ರವಾಗಿರೋದ್ರಿಂದ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಅಂಡ್ ಟರ್ನ್ ಗಳು ಸಿನಿಮಾದಲ್ಲಿದೆ. ಚಿತ್ರಕಥೆಯನ್ನು ಇಂಟ್ರಸ್ಟಿಂಗ್ ಆಗಿ ಹೆಣೆದಿರೋ ನಿರ್ದೇಶಕರು, ಪ್ರೇಕ್ಷಕರನ್ನು ಸೆಳೆಯೋದ್ರಲ್ಲಿ ಯಶಸ್ವಿಯಾಗಿದ್ದಾರೆ.

    ಎಲ್ಲ ಕಮರ್ಶಿಯಲ್ ಸಿನಿಮಾಗಳಂತೆ ಇಲ್ಲೂ ಲವ್, ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಬೆರೆತಿದ್ದು, ಪ್ರೇಕ್ಷಕರಿಗೆ ಮನರಂಜನೆ ನೀಡಿದೆ. ಈ ಹಿಂದಿನ ಕೃಷ್ಣ ಸೀರೀಸ್ ಸಿನಿಮಾಗಳಂತೆ ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಹಾಗೂ ಅಜಯ್ ರಾವ್ ಹಿಟ್ ಕಾಂಬೋ ಈ ಸಿನಿಮಾದಲ್ಲೂ ಕಮಾಲ್ ಮಾಡಿದೆ. ಅಭೀಷೇಕ್ ಜಿ ಕಾಸರಗೋಡು ಛಾಯಾಗ್ರಹಣ ಕೂಡ ಮೆಚ್ಚುವಂತದ್ದು. ಪತ್ರಕರ್ತನಾಗಿ ಅಜಯ್ ರಾವ್ ಅಭಿನಯ ನೈಜವಾಗಿ ಮೂಡಿ ಬಂದಿದ್ದು, ನಾಯಕಿಯ ಪಾತ್ರದಲ್ಲಿ ಅಪೂರ್ವ ನಟನೆ ಗಮನ ಸೆಳೆಯುತ್ತದೆ. ವಿಶೇಷ ಪಾತ್ರದಲ್ಲಿ ಸಿಂಧು ಲೋಕನಾಥ್ ಅಭಿನಯ ಚಿತ್ರಕ್ಕೆ ತಿರುವು ನೀಡುವುದರ ಜೊತೆ ಥ್ರಿಲ್ ನೀಡುತ್ತದೆ. ಉಳಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

  • ದಿವಂಗತ ಮಂಜುನಾಥನ ಗೆಳೆಯರು ಮೋಸ ಮಾಡೋದಿಲ್ಲ!

    ದಿವಂಗತ ಮಂಜುನಾಥನ ಗೆಳೆಯರು ಮೋಸ ಮಾಡೋದಿಲ್ಲ!

    ಬೆಂಗಳೂರು: ದಿವಂಗತ ಮಂಜುನಾಥನ ಗೆಳೆಯರ ದರ್ಶನವಾಗಿದೆ. ಒಂದು ಯೂಥ್ ಫುಲ್ ಕಥೆಯನ್ನು ಲವಲವಿಕೆಯಿಂದಲೇ ಹೇಳುತ್ತಾ ಕಡೆಗೆ ಯುವ ಸಮುದಾಯಕ್ಕೊಂದು ಎಚ್ಚರಿಕೆಯ ಸಂದೇಶವನ್ನೂ ರವಾನಿಸುವ ಈ ಚಿತ್ರ ಪ್ರೇಕ್ಷಕರಿಗೆಲ್ಲ ಹೊಸಾ ಅನುಭವ ತುಂಬುವಲ್ಲಿ ಸಫಲವಾಗಿದೆ.

    ಎಸ್.ಡಿ ಅರುಣ್ ನಿರ್ದೇಶನದ ಈ ಚಿತ್ರ ಪೋಸ್ಟರುಗಳಲ್ಲಿನ ಫ್ರೆಶ್ ಅನುಭೂತಿಯನ್ನು ಹಾಗೆಯೇ ಕಾಪಿಟ್ಟುಕೊಂಡು ಪ್ರೇಕ್ಷಕರನ್ನು ತಲುಪಿಕೊಂಡಿದೆ. ಸಂಭಾಷಣೆಯಿಂದ ಹಿಡಿದು ಪ್ರತಿಯೊಂದರಲ್ಲಿಯೂ ಸಹಜತೆಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ತಮ್ಮನ ನಡುವಿನ ಪಾತ್ರಗಳೇ ಎಂಬಂಥಾ ಫೀಲು ಹುಟ್ಟಿಸುವಂತೆ ಈ ಚಿತ್ರದ ಪ್ರತೀ ಪಾತ್ರಗಳನ್ನೂ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಯಾವ ಭಾವಗಳೂ ಭಾರ ಅನ್ನಿಸದಂತೆ, ಯಾವ ದೃಶ್ಯಗಳೂ ಬೋರು ಹೊಡೆಸದಂತೆ ಅತ್ಯಂತ ಎಚ್ಚರಿಕೆಯಿಂದ ತಿದ್ದಿ ತೀಡಿದ ಕಲಾಕೃತಿಯಂತೆ ಈ ಚಿತ್ರ ಮೂಡಿ ಬಂದಿದೆ.

    ಸಂಜಯ್, ನವೀನ್, ರಾಜ್ ಕಿರಣ್ ಮತ್ತು ಶ್ರೀನಿವಾಸುಲು ಒಟ್ಟಿಗೇ ಓದಿದ್ದ ಗೆಳೆಯರು. ಅವರೆಲ್ಲರೂ ಇಂಜಿನಿಯರಿಂಗ್ ಓದಿ ಕೆಲಸ ಕಾರ್ಯ ಅಂತ ಒಬ್ಬೊಬ್ಬರೂ ಒಂದೊಂದು ದಿಕ್ಕುಗಳಾಗಿರುವಾಗಲೇ ಅವರ ಮತ್ತೋರ್ವ ಗೆಳೆಯ ದಿವಂಗತನಾದ ದುರ್ವಾರ್ತೆ ಬಂದೆರಗುತ್ತೆ. ಹೇಗೋ ಆ ಸಾವಿನ ನೆಪದಲ್ಲಿ ಮತ್ತೆ ಈ ನಾಲ್ವರು ಒಂದೆಡೆ ಸೇರಿತ್ತಾರೆ. ಆದರೆ ಮಂಜುನಾಥ ದಿವಂಗತನಾಗಿದ್ದು ಆತ್ಮಹತ್ಯೆಯಿಂದಲ್ಲ, ಬದಲಾಗಿ ಇದು ಕೊಲೆ ಅಂತ ಪೊಲೀಸ್ ಅಧಿಕಾರಿ ಕೆಂಪಯ್ಯ ಅದಾಗಲೇ ಫೀಲ್ಡಿಗಿಳಿದಿರುತ್ತಾನೆ. ಅದು ನಿಜಕ್ಕೂ ಕೊಲೆಯಾ? ಅದರಲ್ಲಿ ಈ ಗೆಳೆಯರು ತಗುಲಿಕೊಳ್ತಾರಾ ಅಂತೆಲ್ಲ ಪ್ರಶ್ನೆಗಳಿಗೆ ಥೇಟರಿನಲ್ಲಿ ಉತ್ತರ ಹುಡುಕಿದರೆ ಮಜವಾದೊಂದು ಅನುಭವವಾಗೋದು ಖಾತರಿ!

    ಸಹಜ ಸಂಭಾಷಣೆಯಲ್ಲಿಯೇ ಲವಲವಿಕೆ, ಹಾಸ್ಯವನ್ನೂ ಬೆರೆಸಿರುವ ನಿರ್ದೇಶಕರು ಪರಿಣಾಮಕಾರಿಯಾಗಿಯೇ ದೃಶ್ಯ ಕಟ್ಟಿದ್ದಾರೆ. ತನ್ನ ಮಗನಿಗೆ ಏನೂ ಕಡಿಮೆಯಾಗದಂತೆ ಪೊರೆದ ತಂದೆ ರಿಟೈರ್ಡು ಸ್ಟೇಜಿಗೆ ಬಂದರೂ ಅಪ್ಪನನ್ನು ನೋಡಿಕೊಳ್ಳಲಾರದ ಮಗ. ಆ ವಯಸ್ಸಲ್ಲಿಯೂ ಮಗನ ನೆರವಿಗಾಗಿ ಸೆಕ್ಯೂರಿಟಿ ಕೆಲಸಕ್ಕೆ ಹೊರಡೋ ಅಪ್ಪನನ್ನು ನೋಡಿ ಮಾನಸಿಕ ವೇದನೆಗೆ ಬೀಳೋ ಪುತ್ರ… ಒಟ್ಟಾರೆಯಾಗಿ ಇಲ್ಲಿ ಸಾವೊಂದರ ಸುತ್ತ ಬದುಕಿನ ಸೂಕ್ಷ್ಮಗಳನ್ನು ಅರಳಿಸುವ ಕುಸುರಿಯಂಥಾದ್ದನ್ನು ನಿರ್ದೇಶಕರು ಮಾಡಿದ್ದಾರೆ.

    ಆರಂಭದಿಂದ ಅಂತ್ಯದವರೆಗೂ ಕುತೂಹಲ ಕಾಯ್ದಿಟ್ಟುಕೊಂಡೇ ಈ ಚಿತ್ರ ಯುವ ಸಮೂಹಕ್ಕೆ, ಅದರಲ್ಲಿಯೂ ವಿಶೇಷವಾಗಿ ಗಂಡು ಮಕ್ಕಳಿಗೊಂದು ಸ್ಪಷ್ಟವಾದ, ಪರಿಣಾಮಕಾರಿಯಾದ ಎಚ್ಚರಿಕೆಯ ಸಂದೇಶ ರವಾನಿಸುತ್ತದೆ. ಅದರ ಜೊತೆ ಜೊತೆಗೇ ಒಂದೊಳ್ಳೆ ಚಿತ್ರ ನೋಡಿದ ತೃಪ್ತ ಬಾವವೂ ಪ್ರೇಕ್ಷಕರನ್ನು ತುಂಬಿಕೊಳ್ಳುತ್ತದೆ. ಯುವ ಸಮುದಾಯ, ಪೋಷಕರು ಸೇರಿದಂತೆ ಎಲ್ಲರೂ ನೋಡಬಹುದಾದ ಚಿತ್ರ ದಿವಂಗತ ಮಂಜುನಾಥನ ಗೆಳೆಯರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv