Tag: ಸಿನಿಮಾ ಇಂಡಸ್ಟ್ರಿ

  • ಸಾವಿರ ಜನರನ್ನು ಹಿಂದೆ ಇಟ್ಟುಕೊಂಡರಷ್ಟೇ ನಾಯಕ ಆಗಲ್ಲ: ಶಿವಣ್ಣ

    ಸಾವಿರ ಜನರನ್ನು ಹಿಂದೆ ಇಟ್ಟುಕೊಂಡರಷ್ಟೇ ನಾಯಕ ಆಗಲ್ಲ: ಶಿವಣ್ಣ

    ಬೆಂಗಳೂರು: ಸಾವಿರ ಜನರನ್ನು ಹಿಂದೆ ಇಟ್ಟುಕೊಂಡರಷ್ಟೇ ನಾಯಕ ಆಗಲ್ಲ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ಆಗಲೇ ನಾಯಕ ಆಗಲು ಸಾಧ್ಯ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

    ಕೊರೊನಾ ಹಾಗೂ ಲಾಕ್‍ಡೌನ್‍ನಿಂದಾಗಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಶಿವರಾಜ್ ಕುಮಾರ್ ಮನೆಯಲ್ಲಿ ಸಭೆ ನಡೆಸಲಾಯಿತು. ನಾಗಾವರದ ಶಿವರಾಜ್ ಕುಮಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಅದರ ಸಂಸ್ಥೆಗಳು ಹಾಗೂ ಅದರ ಅಂಗ ಸಂಸ್ಥೆಗಳು ಭಾಗಿಯಾಗಿದ್ದವು.

    ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಚಿತ್ರರಂಗದ ಎಲ್ಲ ವಿಭಾಗಗಳಿಂದ ಒಗ್ಗಟ್ಟಾಗಿ ಬಂದಿರುವುದು ಖುಷಿ ತಂದಿದೆ. ಇಂಡಸ್ಟ್ರಿಯ ಸಾಕಷ್ಟು ಸಮಸ್ಯೆಗಳನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ. ನನ್ನನ್ನು ಕಂಡರೆ ಎಲ್ಲರೂ ಇಷ್ಟಪಡುತ್ತಾರೆ. ನಾವೆಲ್ಲರೂ ಒಗ್ಗಟ್ಟಾಗಿ ಹೋಗೋಣ. ಮಾದರಿ ಇಂಡಸ್ಟ್ರಿಯಾಗಿ ಬಾಳೋಣ ಎಂದರು ಕರೆ ನೀಡಿದರು.

    ಕೊರೊನಾ ಏನೂ ದೊಡ್ಡ ವಿಷಯವಲ್ಲ, ಅದನ್ನು ಹೋಗಲಾಡಿಸಬಹುದು. ಮೂರು, ನಾಲ್ಕು ದಿನಗಳಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಸೇರಿ, ಅದರಲ್ಲಿ ರಾಜ್ಯ ಸರ್ಕಾರಕ್ಕೆ ಯಾವ ರೀತಿ ಮನವಿ ಸಲ್ಲಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

    ನನಗೆ ಯಾವ ನಾಯಕತ್ವವೂ ಮುಖ್ಯವಲ್ಲ, ಎಲ್ಲರ ಜೊತೆಯಲ್ಲಿ ಹೋಗುತ್ತೇನೆ. ಸರ್ಕಾರದ ಬಳಿ ಹೋಗಲು ಎಲ್ಲರೂ ತೀರ್ಮಾನ ಮಾಡಿದ್ದಾರೆ. ಸರ್ಕಾರದ ಮುಂದೆ ಹೋಗುವ ಮುನ್ನ ನಾವು ಏನು ಮಾಡಿದ್ದೇವೆ ಎಂಬುದನ್ನು ತಿಳಿಯಬೇಕಿದೆ. ಸರ್ಕಾರದ ಮುಂದೆ ಹೋಗೋದು ಮುಖ್ಯವಲ್ಲ, ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದೆ. ಟೀಮ್ ಕೆಲಸ ಆದ ಮೇಲೆ ಮುಂದುವರಿಯುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು.

    ಯಾರೂ ಧೈರ್ಯ ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಸೂಕ್ತ ಪರಿಹಾರ ಮಾಡಲಾಗುತ್ತದೆ. ತಕ್ಷಣವೇ ಎಲ್ಲವೂ ಸರಿ ಹೋಗುತ್ತೆ ಅಂತ ಹೇಳಲು ಆಗುವುದಿಲ್ಲ. ಅದಕ್ಕೆ ಸಮಯ ಬೇಕು, ನಿಮ್ಮ ಜೊತೆ ನಾನು ಇದ್ದೇನೆ. ಎಲ್ಲರೂ ಧೈರ್ಯವಾಗಿರಿ ಎಂದು ಕಾರ್ಮಿಕರಿಗೆ ಶಿವರಾಜ್ ಕುಮಾರ್ ಧೈರ್ಯ ತುಂಬಿದರು.

    ನಿರ್ಮಾಪಕ ಸಾ.ರಾ.ಗೋವಿಂದು ಮಾತನಾಡಿ, ಸಧ್ಯದಲ್ಲೇ ಮುಖ್ಯಮಂತ್ರಿಗಳ ಭೇಟಿಯಾಗುವ ಬಗ್ಗೆ ನಿರ್ಧಾರ ಮಾಡಿದ್ದೇವೆ. ಚಿತ್ರರಂಗದ ಉಳಿವಿಗಾಗಿ ಮುಖ್ಯಮಂತ್ರಿ ಬಳಿ ಮನವಿ ಮಾಡುತ್ತೇವೆ ಎಂದರು.

    ಕೊರೊನಾ ಸಮಯದಲ್ಲಿ ಚಿತ್ರರಂಗ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಎಲ್ಲ ರಂಗಕ್ಕೂ ಪ್ಯಾಕೆಜ್ ಘೋಷಿಸಿರೋ ಸರ್ಕಾರ, ಚಿತ್ರರಂಗದ ಬಗ್ಗೆ ನಿರ್ಲಕ್ಷ ವಹಿಸಿದೆ. ಹೀಗಾಗಿ ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನಿಡಲು ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.

    ಸಭೆಯಲ್ಲಿ ಸಾಧುಕೋಕಿಲ, ಜಯಣ್ಣ, ಸೂರಪ್ಪ ಬಾಬು, ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಸಾರಾ ಗೋವಿಂದು, ಕೆ.ಮಂಜು, ಗುರುಕಿರಣ್, ಭೋಗೇಂದ್ರ, ಸುರೇಶ್ ಕುಮಾರ್, ಭಾಮ ಹರೀಶ್, ಎ.ಗಣೇಶ್, ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಕೋಟಿ ರಾಮು, ನಿರ್ಮಾಪಕ ವಿತರಕ ಚಿನ್ನೇಗೌಡ, ಕಾರ್ತಿಕ್ ಗೌಡ, ಛಾಯಾಗ್ರಾಹಕ ಸಂಘದ ಅದ್ಯಕ್ಷ ಜೆ.ಜೆ.ಕೃಷ್ಣ, ನಿರ್ಮಾಪಕ ಕೆಪಿ ಹಾಗೂ ಇತರರು ಇದ್ದರು.

  • ಸಿನಿಮಾ ಕೆಲಸಗಾರರಿಗಾಗಿ 50 ಲಕ್ಷ ರೂ. ದಾನ ನೀಡಿದ ರಜನಿ

    ಸಿನಿಮಾ ಕೆಲಸಗಾರರಿಗಾಗಿ 50 ಲಕ್ಷ ರೂ. ದಾನ ನೀಡಿದ ರಜನಿ

    ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಕಷ್ಟದಲ್ಲಿರುವವರಿಗೆ ಹಾಗೂ ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಿ ಸಹಾಯ ಹಸ್ತ ಚಾಚುವಲ್ಲಿ ಎತ್ತಿದ ಕೈ. ಯಾವುದೇ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿಯೂ ಅವರು ಲಕ್ಷ ಲಕ್ಷ ರೂಗಳನ್ನು ಸಹಾಯದ ರೂಪದಲ್ಲಿ ನೀಡುತ್ತಾರೆ. ಅದೇ ರೀತಿ ಇದೀಗ ಕೊರೊನಾದಿಂದ ತತ್ತರಿಸಿರುವ ಸಿನಿಮಾ ಕ್ಷೇತ್ರದ ದಿನಗೂಲಿ ನೌಕರರಿಗೂ ಸಹಾಯ ಹಸ್ತ ಚಾಚಿದ್ದಾರೆ.

    ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ಇಡೀ ದೇಶವೇ ತತ್ತರಿಸಿ ಹೋಗಿದೆ. ಎಲ್ಲವೂ ಸ್ತಬ್ಧವಾಗಿದೆ, ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಯಾವುದೇ ಕಾರ್ಖಾನೆ, ಕಂಪನಿಗಳು ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ಕಂಪನಿಗಳು ವರ್ಕ್ ಫ್ರಮ್ ಹೋಮ್ ಪದ್ಧತಿ ಅನುಸರಿಸಿದರೆ, ಇನ್ನೂ ಕೆಲ ಕಂಪನಿಗಳು ತಾತ್ಕಾಲಿಕವಾಗಿ ಕಾರ್ಯವನ್ನು ಸ್ಥಗಿತಗೊಳಿಸಿವೆ. ಮಾರ್ಚ್ 31ರ ವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಎಲ್ಲರೂ ಆತಂಕದಲ್ಲಿದ್ದಾರೆ.

    ಕೊರೊನಾ ಎಫೆಕ್ಟ್ ಸಿನಿಮಾ ರಂಗಕ್ಕೂ ತಟ್ಟಿದ್ದು, ಸಿನಿಮಾ ಕ್ಷೇತ್ರದ ಎಲ್ಲ ಕೆಲಸಗಳು ಸ್ಥಗಿತಗೊಂಡಿವೆ. ನಟ, ನಟಿಯರು ಸ್ವಯಂ ದಿಗ್ಬಂಧನ ವಿಧಿಸಿಕೊಂಡು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಸಿನಿಮಾ ಕ್ಷೇತ್ರ ಸ್ತಬ್ಧವಾಗಿದೆ. ಇದರ ಎಫೆಕ್ಟ್ ಸಿನಿಮಾ ಕ್ಷೇತ್ರದ ದಿನಗೂಲಿ ನೌಕರರ ಮೇಲೆ ಬಿದ್ದಿದ್ದು, ಕೆಲಸವಿಲ್ಲದೆ, ಸಂಬಳ ಇಲ್ಲದೆ ಪರದಾಡುತ್ತಿದ್ದಾರೆ. ತುತ್ತು ಅನ್ನಕ್ಕೂ ಬೇಡುವ ಪರಿಸ್ಥಿತಿ ಎದುರಾಗಿದೆ ಹೀಗಾಗಿ ಇಂತಹ ಕೆಲಸಗಾರರಿಗೆ ಇದೀಗ ಸಿನಿಮಾ ನಟರು ಸಹಾಯ ಹಸ್ತ ಚಾಚಿದ್ದಾರೆ.

    ನಟರಾದ ಸೂರ್ಯ ಮತ್ತು ವಿಜಯ್ ಸೇತುಪತಿ ಈಗಾಗಲೇ ತಲಾ 10 ಲಕ್ಷ ರೂ.ಗಳನ್ನು ನೀಡಿದ್ದಾರೆ. ಇದಾದ ಬಳಿಕ ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಸಹ ಕಾರ್ಮಿಕರ ಕಷ್ಟಕ್ಕೆ ಮಿಡಿದಿದ್ದಾರೆ. ಚಲನಚಿತ್ರ ಕಾರ್ಮಿಕರಿಗೆಂದೇ ಇರುವ ಫಿಲ್ಮ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಸೌತ್ ಇಂಡಿಯಾ (ಎಫ್‍ಇಎಫ್‍ಎಸ್‍ಐ) ಸಂಘಟನೆಗೆ ರಜನಿಕಾಂತ್ 50 ಲಕ್ಷ ರೂ. ನೀಡಿದ್ದಾರೆ. ಈ ಸಂಘಟನೆಯಲ್ಲಿ ಸುಮಾರು 25 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕೊರೊನಾ ಎಫೆಕ್ಟ್‍ನಿಂದಾಗಿ ಕೆಲಸವಿಲ್ಲದೆ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದನ್ನು ಕಂಡ ರಜನಿ, ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ರಜನಿಕಾಂತ್ ಸದ್ಯ ಅಣ್ಣಾತೆ ಚಿತ್ರದಲ್ಲಿ ನಟಿಸುತ್ತಿದ್ದು, ಕೊರೊನಾ ಭೀತಿಯಿಂದಾಗಿ ಸಿನಿಮಾದ ಚಿತ್ರೀಕರಣವನ್ನು ಬಂದ್ ಮಾಡಲಾಗಿದೆ. ಈ ಚಿತ್ರಕ್ಕೆ ಶಿವ ಆ್ಯಕ್ಷನ್ ಕಟ್ ಹೇಳಿದ್ದು, ನಯನತಾರಾ, ಕೀರ್ತಿ ಸುರೇಶ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.