ಬೆಂಗಳೂರು: ಸಿಡಿ ಪ್ರಕರಣದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಆಗುತ್ತಿರುವುದಕ್ಕೆ ರಾಜ್ಯ ಸರ್ಕಾರ ಮತ್ತು ಪೊಲೀಸರ ವೈಫಲ್ಯವೇ ಕಾರಣ. ಸಿಡಿ ಮಾಧ್ಯಮದಲ್ಲಿ ಕಾಣಿಸಿಕೊಂಡು 26 ದಿನಗಳು ಕಳೆದರೂ ಸಂತ್ರಸ್ತೆ ಯುವತಿಯನ್ನು ಪೊಲೀಸರಿಗೆ ಪತ್ತೆಹಚ್ಚಲಿಕ್ಕಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನಕ್ಕೊಂದು ತಿರುವು ಪಡೆದು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿರುವ ಸಿಡಿ ಹಗರಣದ ತನಿಖೆ ತಾರ್ಕಿಕ ಅಂತ್ಯ ಕಾಣಬೇಕಾದರೆ ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದ ಹೊರಬಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕು. ಕಾನೂನುಬದ್ಧವಾದ ಅವಳ ಹಕ್ಕನ್ನು ಚಲಾಯಿಸದಂತೆ ತಡೆಯುತ್ತಿರುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಸಿಡಿಯಲ್ಲಿರುವ ಯುವತಿ ಅಜ್ಞಾತ ಸ್ಥಳದಿಂದ ನಿರಂತರವಾಗಿ ತನ್ನ ಹೇಳಿಕೆಗಳ ಸಿಡಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದ್ದಾಳೆ. ತನ್ನ ವಕೀಲನ ಮೂಲಕ ಪೊಲೀಸರಿಗೆ ದೂರು ಕಳುಹಿಸಿಕೊಡುತ್ತಿದ್ದಾಳೆ, ತಂದೆ-ತಾಯಿ ಜೊತೆ ಮಾತನಾಡುತ್ತಿದ್ದಾಳೆ. ಹೀಗಿದ್ದರೂ ಪೊಲೀಸರ ಕೈಗೆ ಮಾತ್ರ ಸಿಗುತ್ತಿಲ್ಲ ಎಂದರೆ ಏನು ಅರ್ಥ?
ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಯುವತಿಯದ್ದೆನ್ನಲಾದ ಹೇಳಿಕೆಗಳನ್ನು ಗಮನಿಸಿದರೆ ಆಕೆಗೆ ರಾಜ್ಯ ಸರ್ಕಾರದ ಮೇಲಾಗಲಿ, ಪೊಲೀಸರ ಮೇಲಾಗಲಿ ನಂಬಿಕೆ ಇಲ್ಲ. ಪೊಲೀಸರು ತನ್ನ ವಿರುದ್ಧವೇ ಸಂಚು ಮಾಡುತ್ತಿದ್ದಾರೆಂಬ ಅರ್ಥದಲ್ಲಿ ಯುವತಿ ಮಾತನಾಡುತ್ತಿದ್ದಾಳೆ. ಗೃಹಸಚಿವ ಬಸವರಾಜ್ ಬೊಮ್ಮಾಯಿ ಈ ಬಗ್ಗೆ ಗಮನಹರಿಸಬೇಕು.
ರಾಜ್ಯದ ಪೊಲೀಸ್ ಇಲಾಖೆಯೂ ಸೇರಿದಂತೆ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದಕ್ಕೆ ಈ ಸಿಡಿ ಹಗರಣ ಸಾಕ್ಷಿ. ಸಾಮಾನ್ಯ ಕುಟುಂಬದಿಂದ ಬಂದಿರುವ ಯುವತಿಯನ್ನು ಇಷ್ಟು ದಿನಗಳ ನಂತರವೂ ಪತ್ತೆ ಹಚ್ಚಲಾಗಿಲ್ಲವೆಂದರೆ ಏನು ಅರ್ಥ? ಆಕೆಯೇನು ವಿಜಯಮಲ್ಯನೋ ಇಲ್ಲವೇ ನೀರವ್ ಮೋದಿಯೋ ಎಂದು ಸಿದ್ದರಾಮಯ್ಯನವರು ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ: ಎಸ್ಐಟಿ ವಿಚಾರಣೆ ಬಳಿಕ ಸಿಡಿ ಲೇಡಿಯ ಪೋಷಕರು ಇಂದು ಬೆಳಗಿನ ಜಾವ ಸುಮಾರು 3.30ಕ್ಕೆ ಬೆಳಗಾವಿ ತಲುಪಿದ್ದಾರೆ. ಎಸಿಪಿ ಪರಮೇಶ್ವರ್ ನೇತೃತ್ವದ 16 ಸಿಬ್ಬಂದಿಯ ಎಸ್ಐಟಿ ಟೀಂ ಜತೆ ಆಗಮಿಸಿದ ಪೋಷಕರನ್ನ ಎಪಿಎಂಸಿ ಠಾಣೆ ಪೊಲೀಸರಿಗೆ ಹಸ್ತಾಂತರಿಸಲಾಯ್ತು.
ಒಂದು ಗಂಟೆಗೂ ಹೆಚ್ಚು ಕಾಲ ಯುವತಿ ಪೋಷಕರು ಪೊಲೀಸ್ ಠಾಣೆಯಲ್ಲಿ ಕುಳಿತಿದ್ದರು. ಈ ವೇಳೆ ತಮ್ಮ ಸ್ಥಿತಿ ಮತ್ತು ಮಗಳ ಬಗ್ಗೆ ಚಿಂತಿಸಿ ತಾಯಿ ಕಣ್ಣೀರು ಹಾಕಿದರು. ಎಪಿಎಂಸಿ ಠಾಣೆಯ ಸಿಪಿಐ ದಿಲೀಪ್ಕುಮಾರ್ ಕುಟುಂಬಸ್ಥರ ಜೊತೆ ಮಾತನಾಡಿ ಕೆಲ ಮಾಹಿತಿ ಪಡೆದುಕೊಂಡಿದ್ದಾರೆ.
ಪೊಲೀಸ್ ಠಾಣೆ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಯುವತಿ ತಂದೆ, ಹೇಳಬೇಕಾದ ವಿಷಯಗಳನ್ನ ಬೆಂಗಳೂರಿನ ಪೊಲೀಸರ ಮುಂದೆ ಹೇಳಿದ್ದೇವೆ. ಸದ್ಯ ಏನು ಹೇಳದ ಪರಿಸ್ಥಿತಿಯಲ್ಲಿದ್ದೇವೆ. ನಮ್ಮ ಹೇಳಿಕೆ ನಂತ್ರ ಬಿಡುಗಡೆಯಾಗಿರುವ ಮಗಳ ವೀಡಿಯೋ ನನ್ನ ಗಮನಕ್ಕೂ ಬಂದಿದೆ. ಸದ್ಯ ಬೆಳಗಾವಿಯಲ್ಲಿಯೇ ಇರಲಿದ್ದು, ಒಂದೆರಡು ದಿನಗಳಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಭಾವ ಬೀರಿ ನಮ್ಮ ತಂದೆ, ತಾಯಿಯಿಂದ ಹೇಳಿಕೆ ಕೊಡಿಸಿದ್ದಾರೆ: ಸಿಡಿ ಲೇಡಿ 5ನೇ ವೀಡಿಯೋ ಹೇಳಿಕೆ
ಅಲ್ಲಿಂದ ಪೊಲೀಸ್ ಭದ್ರತೆಯೊಂದಿಗೆ ವಾಸವಿದ್ದ ಬಾಡಿಗೆ ಮನೆಗೆ ಯುವತಿ ಪೋಷಕರು ತೆರಳಿದ್ದರು. ಆದ್ರೆ ಮನೆಯ ಮಾಲೀಕರು ಯುವತಿ ಪೋಷಕರಿಗೆ ಒಳಗೆ ಪ್ರವೇಶಿಸಲು ವಿರೋಧ ವ್ಯಕ್ತಪಡಿಸಿದ್ದರು. ನೀವು ಇಲ್ಲಿಂದ ತೆರಳಿದ ನಂತರ ಪೊಲೀಸರು ಮತ್ತು ಮಾಧ್ಯಮದ ಸಿಬ್ಬಂದಿ ಮನೆಗೆ ಬಂದಿದ್ದರು. ಈ ಘಟನೆಯಿಂದಾಗಿ ನಮಗೆ ಮುಜುಗರ ಉಂಟಾಗುತ್ತಿದೆ. ದಯವಿಟ್ಟು ನಿಮ್ಮ ಸ್ವಂತ ಊರಿಗೆ ತೆರಳುವಂತೆ ಮನವಿ ಮಾಡಿಕೊಂಡಿದ್ದರು. ಪೊಲೀಸರು ಮಾಲೀಕರಿಗೆ ತಿಳಿ ಹೇಳಿದ್ದರಿಂದ ಮನೆಯಲ್ಲಿರಲು ಅವಕಾಶ ಕಲ್ಪಿಸಿಕೊಟ್ಟರು. ಇದನ್ನೂ ಓದಿ: ಚಿನ್ನೀ, ಡಿಕೆ ಶಿವಕುಮಾರ್ ರೊಕ್ಕ ಕೊಟ್ಟಿದ್ದಾರೆ, ಗೋವಾಗೆ ಹೋಗ್ತಿದ್ದೀವಿ – ಸಹೋದರನ ಜೊತೆ ಸಿಡಿ ಲೇಡಿ ಟಾಕ್
ಬೆಂಗಳೂರು: ಪೋಷಕರ ಮೇಲೆ ಒತ್ತಡ ಹಾಕಿ ಹೇಳಿಕೆಯನ್ನು ನೀಡಲಾಗುತ್ತಿದೆ ಎಂದು ಯುವತಿ ವಿಡಿಯೋ ರಿಲೀಸ್ ಮಾಡಿದ ಬೆನ್ನಲ್ಲೇ ಸಿಡಿ ಲೇಡಿ ತನ್ನ ಸಹೋದರನ ಜೊತೆ ಮಾತನಾಡುತ್ತಿರುವ ಫೋನ್ ಕರೆಯ ಆಡಿಯೋ ರಿಲೀಸ್ ಆಗಿದೆ.
ಈ ಫೋನ್ ಕರೆಯಲ್ಲಿ ಯುವತಿ ಸಹೋದರನ ಜೊತೆ ಮಾತನಾಡುತ್ತಾ, ಊರಿಗೆ ಹೋಗಬೇಡ. ಊರಿಗೆ ಹೋದರೆ ಸಮಸ್ಯೆ ಆಗುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ನೀನಾದ್ರೂ ನಂಗೆ ಸಪೋರ್ಟ್ ಮಾಡು ಎಂದು ಹೇಳಿದ್ದಾಳೆ.
ಇದಕ್ಕೆ ಸಹೋದರ ಮುಂದೆ ಏನು ಮಾಡ್ತೀಯಾ ಎಂದು ಕೇಳಿದ್ದಕ್ಕೆ ನಾನು ಮತ್ತು ಆಕಾಶ್ ಗೋವಾಗೆ ಹೋಗುತ್ತೇವೆ. ಡಿಕೆ ಶಿವಕುಮಾರ್ ನಮಗೆ ರೊಕ್ಕ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾಳೆ. ಈ ಉತ್ತರಕ್ಕೆ ಸಹೋದರ, ಇದೆಲ್ಲ ನಿಂಗೆ ಯಾಕೆ ಬೇಕು ಎಂದು ಕೇಳಿದಾಗ, ಏನು ಆಗಲ್ಲ. ಡಿಕೆ ಶಿವಕುಮಾರ್ ಅವರು ನಮಗೆ ಸಹಾಯ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ನಾನು ಗೋವಾಗೆ ಹೋಗುವ ವಿಚಾರ ಅಪ್ಪ, ಅಮ್ಮನಿಗೆ ಯಾವುದೇ ಕಾರಣಕ್ಕೂ ತಿಳಿಸಬೇಡ ಎಂದಿದ್ದಾಳೆ.
ಈ ಸಂದರ್ಭದಲ್ಲಿ ಸಹೋದರ ಈ ಸಿಮ್ ಚೇಂಜ್ ಮಾಡು ಎಂದಾಗ, ಸಿಮ್ ಎಲ್ಲ ಚೇಂಜ್ ಮಾಡಿದ್ದೀನಿ, ಬೇಸಿಕ್ ಸೆಟ್ ಕೊಟ್ಟಿದ್ದಾರೆ. ಅದನ್ನು ಬಳಕೆ ಮಾಡುತ್ತೇನೆ. ಆಕಾಶ್ ಫೋನ್ ಅನ್ನು ಅವರಿಗೆ ಟ್ರ್ಯಾಕ್ ಮಾಡಲು ಆಗಲ್ಲ. ನಿನ್ನನ್ನು ಸಂಪರ್ಕಿಸಿದ್ದರೆ ಸಂಜಯ್ ನಗರ, ವಿಜಯನಗರದಲ್ಲಿ ಇರಬಹುದು ಅಂತ ಹೇಳು. ಆರ್ಟಿ ನಗರ ಅಂತ ಹೇಳಬೇಡ. ನಾವೆಲ್ಲ ಒಟ್ಟಾಗಿದ್ದೇವೆ. ಬಸ್ಸಿನಲ್ಲಿ ಕುಳಿತ ಬಳಿಕ ಫೋನ್ ಮಾಡ್ತೀನಿ ಎಂದು ಹೇಳಿ ಕರೆ ಕಟ್ ಮಾಡಿದ್ದಾಳೆ.
ಸಹೋದರ – ಊಟಾ ಯುವತಿ – ಆಯ್ತು ನಿಂದು ಸಹೋದರ – ಯಾವಾಗ ಬರ್ತಿಯಾ..? ಉರಿಗೆ? ಯುವತಿ – ಬರ್ತಿನಿ ಮೂರು ನಾಲ್ಕೈದು ದಿನ. ನನಗೆ ಈಗ ಎಲ್ಲಿಗೂ ಹೋಗಬೇಡ ಅಂತಾ ಹೇಳಿದ್ದಾರೆ.. ಅವರು ಹೇಳಿದಂತೆ ಮಾಡಬೇಕು ಅಂದಿದ್ದಾರೆ.
ಸಹೋದರ – ಯಾರು ಹೇಳಿದ್ದು…? ಯುವತಿ – ಡಿಕೆ ಶಿವಕುಮಾರ್ ಸಹೋದರ – ಬಹಳ ಕೆಟ್ಟದ್ದಾಗುತ್ತೆ ಇದೆಲ್ಲೆ ಯುವತಿ – ಏನು ಆಗಲ್ಲ ಹೆದರಬೇಡ.. ಪ್ಲೀಸ್ ನನ್ನ ನಂಬು. ಕಾಲಿಗೆ ಬೀಳುತ್ತೇನೆ ನೀನ್ ಒಬ್ಬನಾದ್ರು ಸಪೋರ್ಟ್ ಮಾಡು
ಸಹೋದರ – ನಿನ್ನ ಅಮೇಲೆ ಕೈಬಿಟ್ಟುಬಿಡುತ್ತಾರೆ ಅಮೇಲೆ ಅವರು ಯುವತಿ – ಬಿಡಲ್ಲ ಅವರು ಬಿಡೋ ಆಗಿದ್ರೆ ಇಲ್ಲಿ ತನಕ ಅವರು ರೊಕ್ಕೊ ನಮಗೆ ಬೇರೆ ಊರಿಗೆ ಹೋಗೋಕೆ ಹೇಳ್ತಿರಲಿಲ್ಲ.. ನಾವ್ ಗೋವಾ ಗೆ ಹೋಗ್ತಿದ್ದೇವೆ.. ಯಾರಿಗೂ ಹೇಳಬೇಡ.. ನಾನು ಆಕಾಶ್ ಇಬ್ಬರೇ, ಬೇರೆ ಯಾರಿಗೂ ಹೇಳಬೇಡ.. ಕಾಲಿಗೆ ಬೀಳುತ್ತೇನೆ ಮಮ್ಮಿಗೂ ಹೇಳಬೇಡ, ಅವ್ವನಿಗೂ ಹೇಳಬೇಡ. ಯುವತಿ – ನಾನು ಆರ್ ಟಿನಗರದಲ್ಲಿ ಇರಲ್ಲ ಯಾರಾದ್ರು ಕೇಳಿದ್ರೆ ಸಂಜಯನಗರ ಅಥವಾ ವಿಜಯನಗರದಲ್ಲಿ ಇರ್ತಾಳೆ ಅಂತೇಳು
ಸಹೋದರ – ನಿನ್ ಫೋನ್ ಸಿಮ್ ತೆಗಿ ಫೋನ್ ಸಿಮ್ ತೆಗಿ ಯುವತಿ – ಇಲ್ಲ ನನ್ ಫೋನ್ ಎಲ್ಲಾ ಕಸ್ಕೊಂಡವ್ರೆ ಅವ್ರು, ಸಿಮ್ ಕಾರ್ಡ್ ಎಲ್ಲಾ ತೆಗೆದಿದ್ದೀನಿ , ನಂಗೊಂದು ಆಕಾಶ್ ಮೊಬೈಲ್ ಟ್ರ್ಯಾಪ್ ಮಾಡೋಕೆ ಆಗಲ್ಲ ತಲೆ ಕೆಡಿಸ್ಕೊಬೇಡ ಯುವತಿ – ನಾನು ಆಕಾಶ್ ಒಂದು ಏಳೆಂಟು ಜನ ಡಿಕೆಶಿ ಮನೆ ಹತ್ರ ಬಂದಿದ್ದೀವಿ, ಡಿಕೆ ಶಿವಕುಮಾರ್ ಹತ್ರ ಅವರೆಲ್ಲಾ ಮಾತಾಡವ್ರೆ, ಚಿನ್ನಿ ಬಸ್ಸಿನಲ್ಲಿ ಕುಳಿತ ಬಳಿಕ ಕಾಲ್ ಮಾಡ್ತೀನಿ.
– ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಸಿಎಂ ಸಹಾಯ ಮಾಡಬೇಕು – ಭದ್ರತೆ ನೀಡಿದರೆ ಅನ್ಯಾಯವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ – ಈಗ ಬಂದು ಹೇಳಿಕೆ ನೀಡಲು ಭಯವಾಗುತ್ತಿದೆ
ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಣಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಪೋಷಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಹೇಳಿಕೆ ನೀಡಿದ್ದ ಬೆನ್ನಲ್ಲೇ ಇದೀಗ ಯುವತಿ 5ನೇ ವೀಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಪ್ರಭಾವ ಬೀರಿ ನಮ್ಮ ತಂದೆ, ತಾಯಿಯಿಂದ ಹೇಳಿಕೆ ಕೊಡಿಸಿದ್ದಾರೆ ಎಂದು ಸಿಡಿ ಲೇಡಿ ಆರೋಪಿಸಿದ್ದಾರೆ.
ವೀಡಿಯೋ ಹೇಳಿಕೆಯಲ್ಲಿ ಮಾತನಾಡಿರುವ ಸಿಡಿ ಲೇಡಿ, ಇಂದು ಆಗಿರುವ ಬೆಳವಣಿಗೆ ಕಂಡು ನನಗೆ ಭಯವಾಗುತ್ತಿದೆ. ನಮ್ಮ ಅಪ್ಪ, ಅಮ್ಮನಿಗೆ ಏನೂ ಗೊತ್ತೇ ಇಲ್ಲ. ಅವರ ಮೇಲೆ ಪ್ರಭಾವ ಬೀರಿ, ಬೆದರಿಕೆ ಹಾಕಿ, ಅವರನ್ನು ಎಲ್ಲೋ ಇರಿಸಿ, ಇಂದು ಹೊರಗಡೆ ಕರೆದುಕೊಂಡು ಬಂದು ಅವರ ಬಾಯಿಂದ ಏನೇನೋ ಹೇಳಿಸುತ್ತಿದ್ದಾರೆ. ಈ ಕೇಸಲ್ಲಿ ಅನ್ಯಾಯವಾಗಿರುವುದು ನನಗೆ, ಅನ್ಯಾಯ ಮಾಡಿರುವುದು ಅವರು. ಆದರೆ ಅವರ ಮನೆಯವರನ್ನು ಯಾಕೆ ಕರೆದುಕೊಂಡು ಬಂದು ವಿಚಾರಣೆ ಮಾಡುತ್ತಿಲ್ಲ ಎಂದು ರಮೇಶ್ ಜಾರಕಿಹೊಳಿ ಹೆಸರು ಹೇಳದೆ ಸಿಡಿ ಲೇಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ತಂದೆ, ತಾಯಿ ಬಾಯಿಂದ ಏನೇನೋ ಹೇಳಿಸಿ, ಪ್ರಕರಣವನ್ನೇ ಬೇರೆ ರೀತಿ ತಿರುಗಿಸುತ್ತಿದ್ದಾರೆ. ಇಲ್ಲಿ ನ್ಯಾಯ ಸಿಗಬೇಕಿರುವುದು ನನಗೆ, ಮೊದಲು ನನ್ನ ಬಗ್ಗೆ ಮಾತನಾಡಬೇಕು. ಅದನ್ನು ಬಿಟ್ಟು ಬೇರೆಯವರ ಬಗ್ಗೆ ಮಾತನಾಡುತ್ತಿದ್ದಾರೆ. ಇದು ನನಗೆ ಬೇಕಿಲ್ಲ ಅವೆಲ್ಲ ಅವರ ವೈಯಕ್ತಿಕ ವಿಚಾರ. ಈಗ ನಾನು ಬಂದು ಹೇಳಿಕೆ ನೀಡಬೇಕೆಂದರೂ ನನಗೆ ಭಯವಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಭಾವ ಬೀರಿ ನಮ್ಮ ಅಪ್ಪ, ಅಮ್ಮನ ಕಡೆಯಿಂದಲೇ ಏನೇನೋ ಹೇಳಿಸಿ, ಪ್ರಕರಣವನ್ನೇ ಬದಲಾಯಿಸಲು ನೋಡುತ್ತಿದ್ದಾರೆ. ಹೀಗಿರುವಾಗ ನಾನು ಅಲ್ಲಿಗೆ ಬಂದು ಹೇಳಿಕೆ ನೀಡಿದರೆ ಏನಾಗುತ್ತೋ ನನಗೆ ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಮೇಶ್ ಕುಮಾರ್ ಅವರ ಬಳಿ ಕೇಳಿಕೊಳ್ಳುವುದು ಇಷ್ಟೇ, ನನಗೆ ಸಹಾಯ ಮಾಡಿ. ಏನೇನು ಅನ್ಯಾಯ ಮಾಡಿದ್ದಾರೋ ಎಲ್ಲವನ್ನೂ ಎಳೆ ಎಳೆಯಾಗಿ ಎಲ್ಲರ ಮುಂದೆ ಬಿಚ್ಚಿಡುತ್ತೇನೆ ಎಂದು ತಿಳಿಸಿದ್ದಾರೆ.
ನಾನು ನ್ಯಾಯಾಧೀಶರ ಮುಂದೆಯೇ ಬಂದು ಹೇಳಿಕೆ ನೀಡುತ್ತೇನೆ. ದಯವಿಟ್ಟು ನನಗೆ ಎಲ್ಲರೂ ಸಹಾಯ ಮಾಡಿ, ಎಲ್ಲ ಮುಖಂಡರಲ್ಲೂ ನಾನು ಕೇಳಿಕೊಳ್ಳುವುದು ಇಷ್ಟೇ ಎಂದು ಸಿಡಿ ಯುವತಿ ತಮ್ಮ 5ನೇ ವೀಡಿಯೋ ಹೇಳಿಕೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು: ನೋಟಿಸ್ ಹಿನ್ನೆಲೆಯಲ್ಲಿ ಸಿಡಿ ಲೇಡಿಯ ಕುಟುಂಬ ಸದಸ್ಯರು ಇಂದು ವಿಶೇಷ ತನಿಖಾ ತಂಡ(ಎಸ್ಐಟಿ) ಮುಂದೆ ಹಾಜರಾದರು. ಆಡುಗೋಡಿಯ ಟೆಕ್ನಿಕಲ್ ಸೆಲ್ನಲ್ಲಿ ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ಎಸ್ಐಟಿ ಪೊಲೀಸರು ನಿರಂತರವಾಗಿ ವಿಚಾರಣೆ ನಡೆಸಿದರು.
ಖುದ್ದು ಎಸ್ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ,ಸಂದೀಪ್ ಪಾಟೀಲ್ ಮುಂದೆ ನಿಂತು ಪೋಷಕರಿಗೆ ಧೈರ್ಯ ತುಂಬಿ, ವಿಚಾರಣೆಗೆ ಒಳಪಡಿಸಿದರು. ಯುವತಿಯ ತಂದೆ, ತಾಯಿ, ಸಹೋದರ ಹೀಗೆ ಎಲ್ಲರನ್ನು ಪ್ರತ್ಯೇಕವಾಗಿ ಕೂರಿಸಿ ಹತ್ತು ಹಲವು ಪ್ರಶ್ನೆಗಳನ್ನು ಎಸ್ಐಟಿ ಅಧಿಕಾರಿಗಳು ಕೇಳಿದ್ದಾರೆ.
ನಿಮ್ಮ ಮಗಳನ್ನು ನೀವು ಕೊನೆಯ ಬಾರಿ ಭೇಟಿಯಾಗಿದ್ದು ಯಾವಾಗ? ಎಷ್ಟು ಬಾರಿ ಕರೆ ಬಂದಿತ್ತು. ಏನು ಹೇಳಿದ್ರು? ನಿನ್ನೆ ವೈರಲ್ ಆಡಿಯೋ ನಿಮ್ಮದಾ? ಯುವತಿಯ ವ್ಯಕ್ತಿತ್ವ ಹೇಗಿತ್ತು? ಗೆಳೆಯರ ವಿವರವೇನು? ಇದರ ಬಗ್ಗೆ ನಿಮಗೆ ಮೊದಲೇ ಗೊತ್ತಿತ್ತಾ? ಯಾರಾದರೂ ನಿಮ್ಮನ್ನು ಹೆದರಿಸಿದ್ರಾ? ಹೇಗೆ ತರಹೇವಾರಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಪೋಷಕರು ಹೇಳಿದ್ದೇನು?
ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡರೇ ನಾವು ಉಳಿಯುವುದಿಲ್ಲ. ನಮ್ಮ ಮಗಳು ಅಂಥವಳಲ್ಲ. ಏನಿಗಿದ್ಯೋ ಗೊತ್ತಾಗಿಲ್ಲ. 2 ಬಾರಿ ಮಾತಾಡಿದ್ದು ಬಿಟ್ರೆ ನಂತರ ಸಂಪರ್ಕಿಸಿಲ್ಲ. ನಮ್ಮ ಮಗಳನ್ನು ಯಾವುದೋ ಗ್ಯಾಂಗ್ ಕಿಡ್ನಾಪ್ ಮಾಡಿದೆ. ನಮ್ಮ ಮಗಳು ಯಾರಿಂದಲೋ ಒತ್ತಡಕ್ಕೆ ಒಳಗಾಗಿದ್ದಾಳೆ.
ಆಕೆ ಹೇಳುತ್ತಿರುವ ವಿಚಾರಗಳು ಸ್ವಯಂಪ್ರೇರಿತವಾಗಿಲ್ಲ. ವೀಡಿಯೋ ನೋಡಿದರೆ ಒತ್ತಡದಲ್ಲಿ ಇರುವುದು ಗೊತ್ತಾಗುತ್ತದೆ. ಯಾರೋ ತಮಗೆ ಬೇಕಾದ ರೀತಿ ಹೇಳಿಕೆ ಕೊಡಿಸುತ್ತಿದ್ದಾರೆ. ಮಗಳು ನಮ್ಮ ಮುಂದೆ ಬಂದರೆ ಅಸಲಿ ಸತ್ಯ ಗೊತ್ತಾಗುತ್ತದೆ. ನಿನ್ನೆ ವೈರಲ್ ಆದ ವಿಡಿಯೋದಲ್ಲಿ ನಮ್ಮದೇ ಧ್ವನಿಯಿದೆ. ಅದು ಹೇಗೆ ಹೊರಗೆ ಬಂತು ಎನ್ನುವುದು ಗೊತ್ತಿಲ್ಲ.
ಬೆಂಗಳೂರು: ಅಕ್ಕನನ್ನು ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ಹೊಲಸು ರಾಜಕಾರಣ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆಯ ಸಹೋದರ ಗಂಭೀರ ಆರೋಪ ಮಾಡಿದ್ದಾರೆ.
ವಿಶೇಷ ತನಿಖಾ ತಂಡದ(ಎಸ್ಐಟಿ) ಪೊಲೀಸರ ವಿಚಾರಣೆಯ ಬಳಿಕ ಮಾಧ್ಯಮಗಳ ಜೊತೆ ಸಿಡಿ ಲೇಡಿಯ ತಂದೆ, ತಾಯಿ ಮತ್ತು ಪೋಷಕರು ಮಾತನಾಡಿದರು. ಸಹೋದರ ಮಾತನಾಡಿ, ಅಕ್ಕನನ್ನು ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಅಕ್ಕನಿಗೆ ಶಿವಕುಮಾರ್ ದುಡ್ಡು ಕೊಟ್ಟು ಗೋವಾಗೆ ಕಳುಹಿಸಿದ್ದಾರೆ ಎಂದು ನೇರವಾಗಿಯೇ ಗಂಭೀರ ಆರೋಪ ಮಾಡಿದರು.
ಈ ವೇಳೆ ನರೇಶ್ ಗೌಡ ಸುಳ್ಳುಗಾರ. ಅಕ್ಕನೇ ಫೋನ್ ಮಾಡಿ ಡಿಕೆಶಿ ದುಡ್ಡು ಕೊಟ್ಟಿದ್ದಾರೆ ಎಂದು ಹೇಳಿದ್ದಾಳೆ. ಗಂಡಸಾಗಿದ್ದರೆ ಕೂಡಲೇ ಅಕ್ಕನನ್ನು ಬಿಟ್ಟುಬಿಡಿ ಎಂದು ಸಿಡಿ ಗ್ಯಾಂಗ್ ಸದಸ್ಯರಿಗೆ ಹೇಳಿದರು.
ತಂದೆ ಮಾತನಾಡಿ, ಮಗಳು ವಿಡಿಯೋ ಮಾಡಿ ನಮಗೆ ರಕ್ಷಣೆ ನೀಡಬೇಕು ಎಂದು ಕೇಳಿದ್ದಾಳೆ. ಆದರೆ ನಾನು ಒಬ್ಬ ನಿವೃತ್ತ ಸೈನಿಕ. ನಮಗೆ ಯಾರ ರಕ್ಷಣೆಯ ಅಗತ್ಯವಿಲ್ಲ. ಮಗಳ ರಕ್ಷಣೆ ಹೇಗೆ ಮಾಡಬೇಕು ಎನ್ನುವುದು ಗೊತ್ತಿದೆ. ದಯವಿಟ್ಟು ನನ್ನ ಮಗಳನ್ನು ನಮಗೆ ಕೊಟ್ಟುಬಿಡಿ ಎಂದು ಮನವಿ ಮಾಡಿಕೊಂಡರು.
ಈ ವೇಳೆ ನಿಮಗೆ ಒತ್ತಡ ಇದ್ಯಾ ಎಂದು ಕೇಳಿದ್ದಕ್ಕೆ, ನಮಗೆ ಯಾರ ಒತ್ತಡ ಇಲ್ಲ. ನಾನೊಬ್ಬ ನಿವೃತ್ತ ಸೈನಿಕ. ಯಾರ ಒತ್ತಡಕ್ಕೆ ಒಳಗಾಗಿ ನಾನು ಹೇಳಿಕೆ ನೀಡುತ್ತಿಲ್ಲ ಎಂದು ತಿಳಿಸಿದರು.
ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದ ಯುವತಿಯ ವೀಡಿಯೋಗಳನ್ನ ಧಾರಾವಾಹಿಗೆ ಹೋಲಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವರು, ಧಾರಾವಾಹಿಯ ರೀತಿಯಲ್ಲಿಯೇ ಆಡಿಯೋ, ವೀಡಿಯೋಗಳು ಹೊರ ಬರುತ್ತಿವೆ. ಯುವತಿ ಬಿಡುಗಡೆ ಮಾಡಿರುವ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಾರೆ. ತನಿಖೆಯನ್ನು ನಿಷ್ಠುರವಾಗಿ, ನ್ಯಾಯಸಮ್ಮತವಾಗಿ ಮಾಡುತ್ತೇವೆ. ಯಾರ ಪರ, ಯಾರ ವಿರುದ್ಧ ತನಿಖೆ ಮಾಡುವುದಿಲ್ಲ. ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಸಹಾಯ ಕೇಳಿ ಡಿಕೆಶಿ ಮನೆ ಹತ್ರ ಹೋಗಿದ್ದು ನಿಜ: ಸಿಡಿ ಯುವತಿಯ ಹೇಳಿಕೆ
ದಿನನಿತ್ಯವೂ ಸರಣಿ ವಿಡಿಯೋ ಆಡಿಯೋ ಬಿಡುಗಡೆಯಾಗುತ್ತಿದೆ. ಸಿಡಿ, ಆಡಿಯೋ, ವಿಡಿಯೋ ಇಟ್ಟುಕೊಂಡು ಎಸ್ಐಟಿ ಕೂಲಂಕುಷವಾಗಿ ತನಿಖೆ ಮಾಡುತ್ತದೆ. ವೈಜ್ಞಾನಿಕವಾಗಿ ಪರಿಶೀಲನೆ ಮಾಡಲಾಗುತ್ತದೆ. ಯಾವುದೇ ರೀತಿಯ ಒತ್ತಡ, ಪ್ರಭಾವ ಅಥವಾ ದಾರಿ ತಪ್ಪಿಸುವುದು ನಡೆಯುವುದಿಲ್ಲ. ಎಸ್ಐಟಿ ಕ್ರಮಬದ್ಧವಾಗಿ, ಕಾನೂನುಬದ್ಧವಾಗಿ ತನಿಖೆ ಮಾಡಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಂತ್ರಸ್ತೆಗೆ ನ್ಯಾಯ ಸಿಗಬೇಕಾದ್ರೆ ಆರೋಪಿಯ ಬಂಧಿಸಿ: ಯುವತಿ ಪರ ವಕೀಲ
ಎರಡು, ಮೂರು ಹಾಗೂ ನಾಲ್ಕನೇ ವೀಡಿಯೋದಲ್ಲಿ ಎಸ್ಐಟಿ ತನಿಖೆಯ ಬಗ್ಗೆ ಯುವತಿ ಅನುಮಾನ ವ್ಯಕ್ತಪಡಿಸಿದ್ದರು. ಇಂದು ಸಹ ಎಸ್ಐಟಿ ತನ್ನ ಪೋಷಕರಿಗೆ ಸೂಕ್ತ ರಕ್ಷಣೆ ನೀಡುತ್ತಿಲ್ಲ. ರಮೇಶ್ ಜಾರಕಿಹೊಳಿ ಅವರಿಂದ ತನಗೂ ಮತ್ತು ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಯುವತಿ ಆರೋಪಿಸಿರುವ ವೀಡಿಯೋ ಇಂದು ಬಿಡುಗಡೆಯಾಗಿದೆ. ಇದನ್ನೂ ಓದಿ: ಯುವತಿ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿರಬಹುದು : ಡಿಕೆ ಶಿವಕುಮಾರ್
ಬೆಂಗಳೂರು: ಸಿಡಿ ಯುವತಿಯ ಪರವಾಗಿ ವಕೀಲ ಜಗದೀಶ್ ದೂರು ನೀಡಿದ ಬೆನ್ನಲ್ಲೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದೆ.
ಐಪಿಸಿ ಸೆಕ್ಷನ್ 376 ಸಿ (ಅತ್ಯಾಚಾರ), 354 ಎ(ಕೆಲಸ ನೀಡುವುದಾಗಿ ನಂಬಿಸಿ ದೈಹಿಕ ಸಂಪರ್ಕ) 506 (ಜೀವ ಬೆದರಿಕೆ) 417(ವಂಚನೆ) ಅಡಿ ಅಲ್ಲದೇ ವಿಡಿಯೋ ಹೊರ ಹಾಕಿದ್ದಕ್ಕೆ ರಮೇಶ್ ಜಾರಕಿಹೊಳಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಾಗಿದೆ. ರೇಪ್ ಆರೋಪ ಸಾಬೀತಾದರೆ 6-10 ವರ್ಷ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಸಿ.ಡಿ. ಲೇಡಿ ಬರೆದ ದೂರಿನಲ್ಲೇನಿದೆ..?
ಸಿಡಿ ಲೇಡಿ ಮಾಡಿರುವ ಆರೋಪ ಏನು?
ಕೆಲಸ ಕೊಡಿಸುವುದಾಗಿ ವಂಚನೆ, ಜಾರಕಿಹೊಳಿಯಿಂದಲೇ ಸಿಡಿ ಬಿಡುಗಡೆ, ತನ್ನನ್ನು ಬಳಸಿಕೊಂಡಿರುವ ಆರೋಪ, ದೆಹಲಿಯಿಂದ ವಿಡಿಯೋ ಕಾಲ್ ಮಾಡಿ ಅಶ್ಲೀಲ ಮಾತು, ಕೆಲಸ ಕೇಳಿದ್ದಕ್ಕೆ ಜೀವ ಬೆದರಿಕೆ, ನನ್ನ ತಂದೆ-ತಾಯಿಗೂ ಬೆದರಿಕೆ, ಇದು ಅಸಲಿ ಸಿಡಿಯಾಗಿದ್ದು ಸಾರ್ವಜನಿಕ ಹುದ್ದೆಯಲ್ಲಿದ್ದು ಕೆಲಸ ಕೊಡಿಸುವುದಾಗಿ ವಂಚಿಸಿದ್ದಾರೆ.
ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ ಬೆನ್ನಲ್ಲೇ ಎಸ್ಐಟಿ ಪೊಲೀಸರು ವಕೀಲರ ಮೂಲಕ ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ದೂರು ನೀಡಿದ್ದಾರೆ.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಇಂದು ಸಿಡಿ ಲೇಡಿ ಮತ್ತೊಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ವಕೀಲರ ಮೂಲಕ ದೂರನ್ನೂ ಸಹ ಸಲ್ಲಿಸಿದ್ದಾರೆ. ಈ ಬಗ್ಗೆ ಸಿಡಿ ಲೇಡಿ ಪರ ವಕೀಲ ಜಗದೀಶ್ ಮಹಾದೇವನ್ ಮಾತನಾಡಿದ್ದು, ಇನ್ನೆರಡು ದಿನಗಳಲ್ಲಿ ಸಿಡಿ ಲೇಡಿ ಬರುತ್ತಾರೆ ಎಂದು ತಿಳಿಸಿದ್ದಾರೆ.
ಈ ಕರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವ ಭರವಸೆ ನೀಡಿದರೆ ಸಾಕು ಇನ್ನೆರಡು ದಿನಗಳಲ್ಲಿ ಸಿಡಿ ಲೇಡಿ ಹೊರಗೆ ಬರುತ್ತಾರೆ. ಆದರೆ ಇಂದು ಪೊಲೀಸ್ ಆಯುಕ್ತರು ಭರವಸೆ ನೀಡಬೇಕು. ಯುವತಿ ಎರಡ್ಮೂರು ವೀಡಿಯೋಗಳನ್ನು ಬಿಡುಗಡೆ ಮಾಡಿದರೂ ಗೃಹ ಇಲಾಖೆ, ಎಸ್ಐಟಿ, ಪೊಲೀಸರು ಅವರ ಕುಟುಂಬಕ್ಕೆ ರಕ್ಷಣೆ ನೀಡಿಲ್ಲ. ಸಿಡಿ ಪ್ರಕರಣದ ಸಂಪೂರ್ಣ ವಿವರಗಳನ್ನು ಯುವತಿ ನೀಡಿದ್ದಾರೆ. ಅಲ್ಲದೆ ಎರಡು ಪುಟದ ದೂರನ್ನು ಸಹ ಕೈಯ್ಯಲ್ಲಿ ಬರೆದು ಕೊಟ್ಟಿದ್ದಾರೆ. ಇಂದು ನಮ್ಮ ವಕೀಲರ ತಂಡ ಅದನ್ನು ಕಬ್ಬನ್ ಪಾರ್ಕ್ ಪೊಲೀಸರಿಗೆ ನೀಡಲಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ರೇಪ್ ಕೇಸ್ ಹಾಕಿದರೂ ಎದುರಿಸಲು ಸಿದ್ಧ: ರಮೇಶ್ ಜಾರಕಿಹೊಳಿ
ಎರಡು ಪುಟಗಳ ದೂರು ನೀಡಿದ್ದು, ಇದರಲ್ಲಿ ಜಾರಕಿಹೊಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನ್ನಿಸುತ್ತದೆ. ಭದ್ರತೆ ದೃಷ್ಟಿಯಿಂದ ಯುವತಿ ನನ್ನನ್ನು ಸಂಪರ್ಕಿಸಿ ಮಾತನಾಡಿದ್ದಾರೋ ಇಲ್ಲವೋ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದರೆ ಆಕೆಯ ದೂರು ಸ್ಟ್ರಾಂಗ್ ಆಗಿದೆ. ಅತ್ಯಾಚಾರ ಕೇಸ್ ದಾಖಲಾಗುತ್ತೋ ಕಾದು ನೋಡಬೇಕಿದೆ. ಅಧಿಕಾರ ದುರ್ಬಳಕೆ ಪ್ರಕರಣವಂತೂ ದಾಖಲಾಗುತ್ತದೆ. ಯಾವ ರೀತಿಯ ಪ್ರಕರಣ ದಾಖಲಾಗುತ್ತೆ ಎಂದು ಈಗ ಹೇಳಲು ಸಾಧ್ಯವಿಲ್ಲ ಎಂದು ಜಗದೀಶ್ ವಿವರಿಸಿದರು.
ಕಿಂಗ್ ಪಿನ್, ಹನಿಟ್ರ್ಯಾಪ್, ದುಡ್ಡು ಹರಿದಾಟದ ಬಗ್ಗೆ ಪ್ರಸ್ತಾವನೆಯಾದರೆ ರಮೇಶ್ ಜಾರಕಿಹೊಳಿ ಇದಕ್ಕೆಲ್ಲ ಸ್ಪಷ್ಟನೆ ಕೊಡಲಿ. ಅಷ್ಟು ದುಡ್ಡು ಹೇಗೆ ಬಂತು ಎನ್ನುವುದರ ಬಗ್ಗೆ ಕೂಡ ಹೇಳಲಿ. ಸರ್ಕಾರ ಮಾಜಿ ಸಚಿವರ ರಕ್ಷಣೆಗೆ ನಿಂತಿದೆ ಅನ್ನೋದು ಸ್ಪಷ್ಟ ಎಂದು ಅವರು ತಿಳಿಸಿದರು.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸಲು ಸಿ.ಡಿ.ಯಲ್ಲಿದ್ದ ಲೇಡಿ ಮುಂದಾಗಿದ್ದು, ತಮ್ಮ ಪರಿಚಿತ ವಕೀಲ ಜಗದೀಶ್ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಎರಡು ಪುಟಗಳ ದೂರಿನಲ್ಲಿ ಯುವತಿ ಈ ಪ್ರಕರಣ ಶುರುವಾಗಿದ್ದು ಹೇಗೆ, ಎಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ವಿವರಿಸಿ ನನಗೆ ಹಾಗೂ ಕುಟುಂಬಸ್ಥರಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ದೂರಿನ ಸಂಪೂರ್ಣ ವಿವರ
ಗೆ,
ಬೆಂಗಳೂರು ನಗರ ಪೊಲೀಸ್ ಆಯುಕ್ತರು ಇನ್ಫೆಂಟ್ರಿ ರಸ್ತೆ, ಬೆಂಗಳೂರು
ವಿಷಯ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂರ್ಪ ಮಾಡಿ, ವಿಡಿಯೋ ಕರೆ ಮೂಲಕ ಅಶ್ಲೀಲ ಮಾತು, ನಗ್ನವಾಗಿ ಮಾತನಾಡಲು ಪುಸಲಾಯಿಸಿ ಕೆಲಸ ಕೊಡಿಸದೆ ವಂಚಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರು
ಮಾನ್ಯರೇ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಬೆಂಗಳೂರು ನಗರದಲ್ಲಿ ಉದ್ಯೋಗ ಹುಡುಕಿಕೊಂಡು ಬಂದು ನೆಲೆಸಿದ್ದು ಕಿರುಚಿತ್ರ ಮಾಡುವ ಸಲುವಾಗಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಒಮ್ಮೆ ಭೇಟಿ ಮಾಡಿದ್ದು ನಂತರ ಅವರು ನನ್ನ ಮೊಬೈಲ್ ನಂಬರ್ ಪಡೆದು ಕರೆ ಮಾಡುವುದಾಗಿ ತಿಳಿಸಿದರು. ನಂತರ ಅವರು ಕರೆ ಮಾಡಿ ನನ್ನ ಬಗ್ಗೆ ಕುಟುಂಬದ ಬಗ್ಗೆ ವಿಚಾರಿಸಿ ಸಲುಗೆ ಇಂದ ಮಾತನಾಡಲು ಆರಂಭಿಸಿದರು.
ಸಚಿವರು ನನ್ನನ್ನು ಅಷ್ಟು ಕಾಳಜಿಯಿಂದ ಮಾತನಾಡಿಸಿದ್ದು ನನಗೆ ತುಂಬಾ ಖುಷಿ ಆಗಿ ಅವರನ್ನು ಗೌರವದಿಂದ ಮಾತನಾಡಿಸಿದೆ. ಆಗಾಗ್ಗೆ ನನಗೆ ಕರೆ ಮಾಡಿ ಮಾತನಾಡಲು ಆರಂಭಿಸಿದರು. ನನಗೆ ತಮ್ಮ ಪ್ರಭಾವ ಬಳಸಿ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿದರು. ಆದರೆ ಸರ್ಕಾರಿ ನೌಕರಿ ಕೊಡಿಸುವ ಬದಲಾಗಿ ನೀನು ನನ್ನ ಜೊತೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಕೇಳಿದರು. ಅವರನ್ನು ಟಿವಿಗಳಲ್ಲಿ ನೋಡಿದ್ದು, ಮಂತ್ರಿ ಈ ರೀತಿ ಹೇಳಿದ ಮೇಲೆ ಕೆಲಸ ಕೊಟ್ಟೇ ಕೊಡಿಸುತ್ತಾರೆ ಎಂದು ನಂಬಿದೆ. ನನ್ನ ಬಳಿ ಕೊಡಲು ಲಕ್ಷಾಂತರ ಹಣ ಇಲ್ಲದೆ ಇರುವುದನ್ನು ಮುಂಚೆಯೇ ತಿಳಿದುಕೊಂಡು ಹಣದ ಬದಲು ಅವರ ಜೊತೆ ಸಹಕರಿಸಿ ಖುಷಿ ನೀಡಬೇಕು ಅಂತ ಕೇಳಿದ್ದರಿಂದ ನಂಬಿ ಅವರು ಕೇಳಿದಂತೆ ನಡೆದುಕೊಂಡು ಬಂದೆ. ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದುಕೊಂಡಿದ್ದೇನೆ ಎಂದು ವಿಡಿಯೋ ಕರೆ ಮಾಡಿ ನನ್ನೊಂದಿಗೆ ಲೈಂಗಿಕ ವಿಚಾರಗಳನ್ನು ಮಾತನಾಡಿ ನನಗೆ ಬಟ್ಟೆ ತೆಗೆದು ನಗ್ನಳಾಗಿ ಖಾಸಗಿ ಅಂಗಾಂಗಗಳನ್ನು ತೋರಿಸುವಂತೆ ಕೇಳಿದರು. ನಾನು ಅವರು ಹೇಳಿದಂತೆಯೇ ಮಾಡಿದೆ.
ನಗ್ನವಾಗಿ ದೇಹದ ಗುಪ್ತ ಅಂಗಗಳನ್ನು ತೋರಿಸಿದೆ. ಅದಕ್ಕೆ ಅವರು ಅಶ್ಲೀಲವಾಗಿ ಮಾತನಾಡಿದರು. ಪ್ರಭಾವಿ ವ್ಯಕ್ತಿ ಆದ ಕಾರಣ ನಾನು ಅವರು ಹೇಳಿದಂತೆ ಮಾಡಿದೆ. ನಂತರ ಬೆಂಗಳೂರಿಗೆ ಬಂದು ನನ್ನ ನಿವಾಸಕ್ಕೆ ಬಾ… ಮಾತನಾಡಬೇಕು ನಿನ್ನ ಕೆಲಸದ ವಿಚಾರ ಎಂದರು. ನಾನು ಅವರು ಹೇಳಿದ ಅಪಾರ್ಟ್ಮೆಂಟಿಗೆ ಹೋದೆ. ಅವರು ನನ್ನೊಂದಿಗೆ ಅಶ್ಲೀಲವಾಗಿ ಮಾತನಾಡಿ ತಮ್ಮ ರೂಂಗೆ ಕರೆದುಕೊಂಡು ಹೋಗಿ ಬಟ್ಟೆ ತೆಗೆಸಿ ಲೈಂಗಿಕ ಕ್ರಿಯೆ ಮಾಡಿದರು, ಇದೇ ರೀತಿ 2 ಬಾರಿ ಅವರ ಅಪಾರ್ಟ್ಮೆಂಟ್ಗೆ ಕರೆಸಿ, ಲೈಂಗಿಕ ಕ್ರಿಯೆ ನಡೆಸಿ ಅಶ್ಲೀಲವಾಗಿ ಮಾತನಾಡಿರುತ್ತಾರೆ.
ನಾನು ಎದುರು ಮಾತನಾಡಲು ಹೆದರಿ ಅವರು ಕೇಳಿದಂತೆ ಮಾಡಿರುತ್ತೇನೆ. ನಂತರ ಸರ್ಕಾರಿ ನೌಕರಿ ಬಗ್ಗೆ ಕೇಳಿದಾಗ ಸ್ವಲ್ಪ ಹಣ ಬೇಕಾದರೆ ಕೇಳು. ಕೆಲಸದ ಕತೆ ಆಮೇಲೆ ನೋಡೋಣ ಎಂದು ಅವಾಯ್ಡ್ ಮಾಡುತ್ತಿದ್ದರು.
ನಾನು ಯಾವಾಗ ಅವರಿಗೆ ನನ್ನನ್ನು ಹೇಗೆ ಬೇಕೋ ಹಾಗೆ ಬಳಸಿಕೊಂಡು ಈಗ, ಯಾಕೆ ಕೆಲಸ ಕೊಡುತ್ತಿಲ್ಲ. ಎಂದು ಕೇಳಿದಾಗ ಬೈಯ್ದು ಕಳಿಸಿದರು. ಇದಾದ ನಂತರ ಅವರು ನನ್ನೊಂದಿಗೆ ಮಾತನಾಡಿದ ಮತ್ತು ಲೈಂಗಿಕ ಸಂಭೋಗ ನಡೆಸಿದ ಅಶ್ಲೀಲ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ನಾನು ಇವರ ವಿರುದ್ಧ ದೂರು ನೀಡದಂತೆ ಈ ರೀತಿ ಕುತಂತ್ರವನ್ನು ರಮೇಶ ಜಾರಕಿಹೊಳಿ ಮಾಡಿರುತ್ತಾರೆ. ಹಣವಂತರು, ಪ್ರಭಾವಿಗಳಾದ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಂದ ನನಗೂ ಮತ್ತು ನನ್ನ ಕುಟುಂಬದ ಸದಸ್ಯರಿಗೂ ಜೀವ ಬೆದರಿಕೆ ಇದೆ.
ನಾನು ದೂರು ನೀಡದಂತೆ ತಡೆಯಲು ಮತ್ತು ಅವರ ಕೈಗೆ ಸಿಕ್ಕರೆ ಕೊಂದು ಬಿಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ದಯಮಾಡಿ ತಾವು ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಭದ್ರತೆ ನೀಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಕೆಲಸ ಕೊಡಿಸದೇ ಮೋಸ ಮಾಡಿ ಅಶ್ಲೀಲವಾಗಿ ನಿಂದಿಸಿ ಕೊಲೆ ಮಾಡಿಸಲು ಪ್ರಯತ್ನ ಮಾಡುತ್ತಿರುವ ರಮೇಶ್ ಜಾರಕಿಹೊಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ. ನಾನು ನೇರವಾಗಿ ಯಾವ ಠಾಣೆಗೂ ಬಂದು ದೂರು ನೀಡದಂತೆ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದ್ದಾರೆ. ನನ್ನ ಪರವಾಗಿ ಯಾರೂ ಮಾತನಾಡದಂತೆ ತೇಜೋವಧೆ ಮಾಡ್ತಿದ್ದಾರೆ. ಹಾಗೂ ನನಗೆ ಸಹಾಯ ಮಾಡಿದವರಿಗೆ, ಮಾಡುತ್ತಿರುವವರಿಗೆ ಟಾರ್ಗೆಟ್ ಮಾಡಿ ಅವರ ಮನೆ ಮತ್ತು ಕುಟುಂಬಸ್ಥರಿಗೆ ಹಿಂಸೆ ಕೊಡುತ್ತಿರುವುದರಿಂದ ಬಹಳ ನೋವಾಗಿದೆ.
ನನಗೆ ಭದ್ರತೆ ಇಲ್ಲದ ಕಾರಣ ಕೈಯಲ್ಲಿ ಬರೆದು ಈ ದೂರನ್ನು ನನಗೆ ಪರಿಚಿತರಾದ ವಕೀಲರಾದ ಜಗದೀಶ್ ಅವರ ಮೂಲಕ ಕಳುಹಿಸುತ್ತಿದ್ದೇನೆ. ದಯವಿಟ್ಟು ನನಗೆ ಆಗುತ್ತಿರುವ ಮಾನಸಿಕ ಹಿಂಸೆ ಮತ್ತು ನನ್ನ ಕುಟುಂಬದ ಸದಸ್ಯರು ಎದುರಿಸುತ್ತಿರುವ ಒತ್ತಡ ಅವರನ್ನು ಆತ್ಮಹತ್ಯೆಗೆ ಯತ್ನಿಸುವಂತೆ ಮಾಡಿದ್ದು ತಾವು ರಮೇಶ್ ಜಾರಕಿಹೊಳಿ ಮತ್ತು ಅವರ ಕಡೆಯವರಿಂದ ನಮಗೆ ಯಾವುದೇ ಅಪಾಯವಾಗದಂತೆ ರಕ್ಷಣೆ ನೀಡಬೇಕೆಂದು ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ.