Tag: ಸಿಎ ನಿವೇಶನ

  • ವಿವಾದದ ಬಳಿಕ ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ನೀಡಿದ್ದ ಸಿಎ ನಿವೇಶನ ವಾಪಸ್ ನೀಡಿದ ಖರ್ಗೆ ಕುಟುಂಬ

    ವಿವಾದದ ಬಳಿಕ ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ನೀಡಿದ್ದ ಸಿಎ ನಿವೇಶನ ವಾಪಸ್ ನೀಡಿದ ಖರ್ಗೆ ಕುಟುಂಬ

    – ನಮ್ಮ ಕುಟುಂಬದಿಂದ ಇನ್ಯಾರೂ ರಾಜಕೀಯಕ್ಕೆ ಬರಲ್ಲ; ಪ್ರಿಯಾಂಕ್‌ ಖರ್ಗೆ

    ಬೆಂಗಳೂರು: ವಿವಾದಕ್ಕೆ ಕಾರಣವಾಗಿದ್ದ ಸಿದ್ದಾರ್ಥ ವಿಹಾರ್ ಟ್ರಸ್ಟ್ ಸಿಎ ನಿವೇಶನವನ್ನ KIADBಗೆ ಖರ್ಗೆ ಕುಟುಂಬ ವಾಪಸ್ ನೀಡಿದೆ. 5 ಎಕರೆ ಸಿಎ ನಿವೇಶನ (CA Site) ಹಂಚಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ನಾಯಕರು ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದೆ ಅಂತ‌ ಆರೋಪ ಮಾಡಿದ್ರು. ಇಷ್ಟೇ ಅಲ್ಲದೇ ರಾಜ್ಯಪಾಲರಿಗೂ ದೂರು ನೀಡಿದ್ರು. ವಿವಾದದಿಂದ ಎಚ್ಚೆತ್ತಿರೋ ಸಿದ್ದಾರ್ಥ ವಿಹಾರ್ ಟ್ರಸ್ಟ್‌ ಅಧ್ಯಕ್ಷ ರಾಹುಲ್ ಖರ್ಗೆ ನಿವೇಶನ ವಾಪಸ್ ನೀಡಿದ್ದಾರೆ. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮಾಹಿತಿ ನೀಡಿದ್ದಾರೆ.

    ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ (Siddharth Vihar Trust) ನೀಡಿದ್ದ 5 ಎಕರೆ ಸಿಎ ನಿವೇಶನ ವಾಪಸ್ ನೀಡಿರೋ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ನಾವು ಮೊದಲ ದಿನದಿಂದ ನಾವು ಹೇಳ್ತಿದ್ದೇವೆ. ತರಾತುರಿಯಲ್ಲಿ, ಕಾನೂನು ಬಾಹಿರವಾಗಿ ಹಂಚಿಕೆ ಆಗಿಲ್ಲ. ಬಿಜೆಪಿ ಅವರು ಸುಮ್ಮನೆ ಆರೋಪ ಮಾಡಿದ್ರು. ಅದಕ್ಕೆ ನಾವು ಡಿಫೆಂಡ್ ಮಾಡಿಕೊಂಡ್ವಿ. ರಾಹುಲ್ ಖರ್ಗೆ ಬಗ್ಗೆ ಬಿಜೆಪಿ ಅವರಿಗೆ ಅರಿವಿರಲಿಲ್ಲ. ಅರಿವು ಬಂದ ಕೂಡಲೇ ಬಿಜೆಪಿ (BJP) ಮಾತಾಡೋದು ಬಿಟ್ಟಿದ್ದಾರೆ. ರಾಹುಲ್ ಖರ್ಗೆ ಅವರ ವಿದ್ಯಾರ್ಹತೆ ನೋಡಿದ ಬಳಿಕ ಬಿಜೆಪಿ ಅವರು ಮಾತಾಡುತ್ತಿಲ್ಲ ಎಂದಿದ್ದಾರೆ.

    ಮೊದಲು ರಾಜಕೀಯ ಮಾಡೋಕೆ ಮಾಡಿದ್ರು. ನಾನು, ನಮ್ಮ ತಂದೆ ಕಲಬುರ್ಗಿ ಎಂಪಿ ಬಿಟ್ಟು ಇನ್ಯಾರು ಇಲ್ಲ. ಏರೋ ಸ್ಪೇಸ್‌ನಲ್ಲಿ ಸ್ಕಿಲ್ ಡೆವಲಪ್ಮೆಂಟ್ ಮಾತಾಡಬೇಕು ಅಂತ ಆಸೆ ಇತ್ತು. ಹೀಗಾಗಿ ಅರ್ಜಿ ಹಾಕಿದ್ರು. ಮೇ 30ಕ್ಕೆ ಅರ್ಹತೆ ಆಧಾರದಲ್ಲಿ ನಿವೇಶನ ಹಂಚಿಕೆ ಆಗುತ್ತೆ. ಎಲ್ಲಾ ದಾಖಲಾತಿ ಇದೆ. ಡಿಆರ್‌ಡಿಒ, ಅಗ್ನಿ ಅವಾರ್ಡ್ ಪಡೆದ ರಾಹುಲ್ ಸ್ಕಿಲ್ ಡೆವಲಪ್ಮೆಂಟ್ ಮಾಡೋಕೆ ಹೊರಟಿದ್ರು. ಇದಕ್ಕೆ ಬಿಜೆಪಿ ರಾಜಕೀಯ ಮಾಡಿದ್ರು ಎಂದು ಕಿಡಿ ಕಾರಿದ್ದಾರೆ.

    ರಾಹುಲ್ ಮೃದು ಸ್ವಭಾವದರು. ಸೆಪ್ಟೆಂಬರ್ 20 ರಂದು ಸೈಟ್ ವಾಪಸ್ ನೀಡಿದ್ದಾರೆ. ಕೆಐಎಡಿಬಿ ಸಿಇಒಗೆ ಪತ್ರ ಬರೆದು ನಿವೇಶನ ವಾಪಸ್ ಕೊಡೋದಾಗಿ ಹೇಳಿದ್ದಾರೆ. ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ನೀಡಿದ್ದ 5 ಎಕರೆ ಸಿಎ ನಿವೇಶನ ಹಂಚಿಕೆ ಕಾನೂನು ಪ್ರಕಾರವೇ ಆಗಿದೆ. ಆದರೂ ಇದರಲ್ಲಿ ರಾಜಕೀಯ ಮಾಡ್ತಿದ್ದಾರೆ. ಹೀಗಾಗಿ ಇದನ್ನ ವಾಪಸ್ ನೀಡೋದಾಗಿ ತಿಳಿಸಿರುವುದಾಗಿ ಹೇಳಿದ್ದಾರೆ.

    ಟ್ರಸ್ಟ್ ಲಾಭ ಮಾಡಲು ಇಲ್ಲ. ನಿಯಮದ ಪ್ರಕಾರವಾಗಿಯೇ ಹಂಚಿಕೆ ಆಗಿದೆ, ಏಕೆಂದರೆ ಸಿಎ ಸೈಟ್ ಕೊಡೋವಾಗ ಯಾವುದೇ ರಿಯಾಯ್ತಿ ಇರೋದಿಲ್ಲ. ಹಂಚಿಕೆ ಆಗಿರೋ ನಿವೇಶನ 10 ವರ್ಷಕ್ಕೆ ಅಲರ್ಟ್ ಆಗಿದೆ. ಅದಕ್ಕೆ ಲೆಟರ್ ಕೊಟ್ಟಿದ್ದಾರೆ. ನಮ್ಮ ಉದ್ದೇಶ ಸ್ಕಿಲ್ ಡೆವಲಪ್ಮೆಂಟ್, ಎಜುಕೇಶನ್ ನೀಡುವ ಉದ್ದೇಶಕ್ಕೆ ಇತ್ತು. ಆದರೆ ಬಿಜೆಪಿ ಅವರು ಅನಗತ್ಯವಾಗಿ ರಾಜಕೀಯ ಮಾಡಿದ್ದಾರೆ. ವೈಯಕ್ತಿಕ ರಾಜಕೀಯದಿಂದ ಬೇಸರ ಆಗಿದೆ. ಕಲುಷಿತ ವಾತಾವರಣದಲ್ಲಿ ಟ್ರಸ್ಟ್ ಮುಂದುವರೆಸೋಕೆ ಸಾಧ್ಯವಿಲ್ಲ. ಹಾಗಾಗಿ ನಿವೇಶನ ವಾಪಸ್‌ ಪಡೆಯಬೇಕು ಅಂತ ರಾಹುಲ್‌ ಖರ್ಗೆ ಕೆಐಎಡಿಬಿಗೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

    ಸೆ.22ರಂದು ರಾಹುಲ್‌ ಖರ್ಗೆ ಪತ್ರ ಬರೆದಿದ್ದರು, ಸೆ.27ಕ್ಕೆ ಕೆಐಎಡಿಬಿ ನಿವೇಶನ ಹಿಂಪಡೆಯಲು ಒಪ್ಪಿಗೆ ನೀಡಿತ್ತು. ಈಗಲೂ ಬಿಜೆಪಿಗೆ ಸವಾಲ್ ಹಾಕ್ತೀನಿ ನಿವೇಶನ ಹಂಚಿಕೆ ಅಕ್ರಮ ಅಂತ ಸಾಬೀತು ಮಾಡಲಿ. ಕ್ರಿಕೆಟ್‌ ಬಾರದೇ ಇರೋ ಅಮಿತ್‌ ಶಾ ಪುತ್ರ ಬಿಸಿಸಿಐ ಕಾರ್ಯದರ್ಶಿ ಆಗಿದ್ದಾರೆ. ಬಿಜೆಪಿಯವರು ತಮ್ಮ ಮಕ್ಕಳಿಗೆ ಎಷ್ಟು ಸೈಟ್‌ಗಳನ್ನ ಹಂಚಿಕೆ ಮಾಡಿದ್ದಾರೆ. ಬಿಜೆಪಿಗೆ ಸಮಸ್ಯೆ ಇರೋದು ಖರ್ಗೆ ಕುಟುಂಬದ್ದು ಎಂದು ತಿರುಗೇಟು ನೀಡಿದ್ದಾರೆ.

    ತಾಯಿ ಕಷ್ಟಪಟ್ಟು ಬೆಳೆಸಿದ್ದಾರೆ:
    ರಾಜ್ಯಪಾಲರಿಗೆ ಮಾಹಿತಿ ಕೊಡಬೇಕು ಎಂಬ ವಿಚಾರ ಕುರಿತು ಮಾತನಾಡಿ, ರಾಜ್ಯಪಾಲರಿಗೆ ನಾವು ಯಾಕೆ ಮಾಹಿತಿ ಕೊಡೋಣ? ಅಧಿಕಾರಿಗಳ ಬಳಿ ಮಾಹಿತಿ ಪಡೆಯಲಿ. ನನ್ನ ಮತ್ತು ನಮ್ಮ ತಂದೆ ಮೇಲಿನ ಸಿಟ್ಟು ನನ್ನ ಸಹೋದರನ ಮೇಲೆ ಬಿದ್ದಿದೆ. ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಾವು 5 ಜನ ಕಷ್ಟಪಟ್ಟು ಓದಿದ್ದೇವೆ, ನಮ್ಮ ತಂದೆ ತಾಯಿ ಕಷ್ಟ ಪಟ್ಟು ಓದಿಸಿದ್ದಾರೆ. ನಮ್ಮ ಮೇಲಿನ ರಾಜಕೀಯಕ್ಕೆ ನಮ್ಮ ಕುಟುಂಬದವರಿಗೆ ಹೀಗೆ ಆಗಿದೆ. ಈಗಲೂ ಚಾಲೆಂಜ್ ಮಾಡ್ತೀನಿ. ಬಿಜೆಪಿ ಅವರು ಇದು ಅಕ್ರಮವಾಗಿ ಕೊಟ್ಟಿದ್ದಾರೆ ಅಂತ ಸಾಬೀತು ಮಾಡಲಿ ಎಂದು ಬಿಜೆಪಿ ನಾಯಕರಿಗೆ ಸವಾಲ್ ಹಾಕಿದ್ದಾರೆ.

    ನಮ್ಮ ಕುಟುಂಬದವರು ಯಾರೂ ರಾಜಕೀಯಕ್ಕೆ ಬರೊಲ್ಲ:
    ಇನ್ನೂ ಕುಟುಂಬ ರಾಜಕೀಯ ಆರೋಪಕ್ಕೆ ಪ್ರತಿಕ್ರಿಯಿಸಿ, ನಮ್ಮ ಕುಟುಂಬದವರು ಯಾರೂ ರಾಜಕೀಯಕ್ಕೆ ಬರೊಲ್ಲ. ಚುನಾವಣೆ ಪ್ರಚಾರಕ್ಕೂ ಬರೊಲ್ಲ. ಅವರ ಪಾಡಿಗೆ ಅವರು ಖಾಸಗಿ ಕೆಲಸ ಮಾಡಿಕೊಂಡು ಹೋಗಿದ್ದಾರೆ. ಬಿಜೆಪಿ ಅವರದ್ದು ಮನುಸ್ಮೃತಿ ಮನಸ್ಥಿತಿ, ಬಿಜೆಪಿ ಅವರ ಮಕ್ಕಳಿಗೆ ಆರ್‌ಎಸ್‌ಎಸ್‌ಗೆ ಕಳಿಸೊಲ್ಲ. ಬಡವರ ಮಕ್ಕಳಿಗೆ ಮಾತ್ರ ಕಳುಹಿಸುತ್ತಾರೆ. ಬಡವರ ಮಕ್ಕಳಿಗೆ ಮಾತ್ರ ಕೇಸರಿ ಶಾಲು ಹಾಕಿಸ್ತಾರೆ. ಇವರ ಮಕ್ಕಳ ದೊಡ್ಡ ದೊಡ್ಡ ಶಾಲೆಗಳಿಗೆ ಸೇರಿಸುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  • ನಿವೇಶನ ಲೂಟಿ ಮಾಡುತ್ತಿರುವುದು ನಾನಾ ನೀವಾ? – ಎಂ.ಬಿ.ಪಾಟೀಲರ ಸೈಟ್ ಅಕ್ರಮ ಸದ್ಯದಲ್ಲೇ ಬಯಲು: ಛಲವಾದಿ ನಾರಾಯಣಸ್ವಾಮಿ

    ನಿವೇಶನ ಲೂಟಿ ಮಾಡುತ್ತಿರುವುದು ನಾನಾ ನೀವಾ? – ಎಂ.ಬಿ.ಪಾಟೀಲರ ಸೈಟ್ ಅಕ್ರಮ ಸದ್ಯದಲ್ಲೇ ಬಯಲು: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ವಿಪಕ್ಷ ನಾಯಕನಾಗಿ ನನ್ನ ಸ್ಥಾನದ ಗೌರವ ಉಳಿಸುವ ಕೆಲಸ ಮಾಡುತ್ತೇನೆ. ನೀವು ನಿಮ್ಮ ಸಚಿವ ಸ್ಥಾನಕ್ಕೆ ಅನುಗುಣವಾಗಿ ಮಾತನಾಡಬೇಕಿತ್ತು ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಸಚಿವ ಎಂ.ಬಿ ಪಾಟೀಲರಿಗೆ ತಿಳಿಸಿದರು.

    ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಯವ, ನನಗ್ಯಾರೂ ಕೇಳೋರಿಲ್ಲ ಅಂತ ಲಜ್ಜೆಗೆಟ್ಟವ ಎಂದಿದ್ದೀರಲ್ಲವೇ? ನೀವು ಹರಿಶ್ಚಂದ್ರರೇ? ಎಂದು ಎಂ.ಬಿ ಪಾಟೀಲ್‌ (MB Patil) ಅವರಿಗೆ ಪ್ರಶ್ನಿಸಿದರಲ್ಲದೇ, ಈ ಪ್ರಪಂಚದಲ್ಲಿ ಯಾರೂ ಹರಿಶ್ಚಂದ್ರರಲ್ಲ ಎಂದು ನುಡಿದರು. ಇದನ್ನೂ ಓದಿ: ಛಲವಾದಿ ನಾರಾಯಣಸ್ವಾಮಿ ಒಬ್ಬ ಶೆಡ್ ಗಿರಾಕಿ – ಎಂ.ಬಿ ಪಾಟೀಲ್‌ ಲೇವಡಿ

    302 ಡೆಫಾಡೆಲ್ ಅಪಾರ್ಟ್‍ಮೆಂಟ್ ಯಾರದ್ದು? ನಿಮ್ಮದೇ ಅಲ್ಲವೇ? ಎಂದು ಎಂ.ಬಿ.ಪಾಟೀಲರನ್ನು ಕೇಳಿದ ಅವರು, ನಿಮ್ಮದ್ದಕ್ಕೇ ನೀವು 2 ಸೈಟ್ ಬರೆದುಕೊಂಡಿದ್ದೀರಿ. ಇನ್ನು ಮೂರು ವಿಜಯಪುರದಲ್ಲಿ ಬರೆದುಕೊಂಡಿದ್ದೀರಿ. ಸೋಲಾಪುರ ರಸ್ತೆ, ಕೆಎಚ್‍ಬಿ ಕಾಲೊನಿಯಲ್ಲಿ ಅವು ಇವೆ. ಈಗ ಹೇಳಿ ಲೂಟಿ ಮಾಡುತ್ತಿರುವುದು ನಾನಾ ನೀವಾ? ಅಂತ ಪ್ರಶ್ನೆ ಮಾಡಿದರು.

    ಪತ್ರಕರ್ತರನ್ನು ಕೂರಿಸಿ 2 ಗಂಟೆ ಅವರ ತಲೆ ತಿನ್ನಲು ನನ್ನ ಅಪರಾಧವಾದರೂ ಏನು? ನೀವು ನನ್ನ ಬಡತನವನ್ನು ಇಷ್ಟು ಹೀಯಾಳಿಸಿ ಬಿಟ್ಟಿರಲ್ಲವೇ? ಲಜ್ಜೆಗೆಟ್ಟ ವ್ಯಕ್ತಿ ಎಂದಿರಲ್ಲವೇ? ನಾನು ಯಾವುದರಲ್ಲಿ ಲಜ್ಜೆಗೆಟ್ಟವ? ಹೇಳಿ ಎಂದು ಮರುಪ್ರಶ್ನೆ ಮಾಡಿದರು.

    ದುಡ್ಡು ಪೂರ್ತಿ ಕಟ್ಟಿದ್ದೇನೆ:
    ನಾನು ಮಾಡಿದ ಲೋಪ ಏನು? ಅಪರಾಧವಾದರೂ ಏನು? ಹೇಳಿ ನೋಡೋಣ. ಸೇಲ್ ಡೀಡ್‍ಗೆ ಲೆಟರ್ (Sale Deed Letter) ಬರೆದಿದ್ದಾರೆ ಎಂದಿದ್ದೀರಿ. ಸೇಲ್ ಡೀಡ್‍ಗೆ ಅಲ್ಲದೇ ಇನ್ನೇನಕ್ಕೆ ಲೆಟರ್ ಕೊಡಬೇಕು? ಅದು ನನ್ನ ನಿವೇಶನ. ದುಡ್ಡು ಪೂರ್ತಿ ಕಟ್ಟಿದ್ದೇನೆ. ಶೆಡ್ ಗಿರಾಕಿ ಎಂದಿದ್ದೀರಲ್ಲವೇ? ಶೆಡ್ ಕಟ್ಟಿದೀನಿ. ನ್ಯಾಯವಾಗಿಯೇ ಕಟ್ಟಿದ್ದೇನೆ. ಸಾಕಾಗದಿದ್ದರೆ ನೋಟಿಸ್ ಕೊಡಿ. ಇದುವರೆಗೆ ಸಾಲಗಾರನಲ್ಲದ ನಾನು ಸಾಲ ಮಾಡಿಯಾದರೂ ನಿಮಗೆ ತೃಪ್ತಿ ಆಗುವಂತೆ ಶೆಡ್ ಕಟ್ಟಿಸುವೆ. ನನ್ನ ದುಡಿಮೆಯಲ್ಲಿ ಏನು ಸಾಧ್ಯವೋ ಅದನ್ನು ಮಾಡಿದ್ದೇನೆ. ಕಾನೂನು ಬಿಟ್ಟು ಆಚೆ ಈಚೆ ಹೋಗುವವನಲ್ಲ. ನಾನೇನಾದರೂ ನಿಮ್ಮ ಬಗ್ಗೆ ವಿಷಯ ಹೊರಗಡೆ ತಂದರೆ ನಿಮಗೆ ನಿದ್ದೆ ಬರೋದಿಲ್ಲ ಎಂದು ಎಚ್ಚರಿಕೆ ನೀಡಿದರು.

    ಖರ್ಗೆ ಕುಟುಂಬವನ್ನು ರಕ್ಷಣೆ ಮಾಡಿ. ನನಗೇನೂ ತೊಂದರೆ ಇಲ್ಲ. ಅಲ್ಲಿ ಆಗಿರುವುದೇನು ಎಂದು ನನಗೆ ಗೊತ್ತಿದೆ. ಈಗಾಗಲೇ ಅವರು ನಿದ್ದೆ ಬಿಟ್ಟಿದ್ದಾರೆ. ಅವರು ನಿಮ್ಮನ್ನು ಎತ್ತಿಕಟ್ಟಿ ನನ್ನ ಮೇಲೆ ಏನೋ ಮಾಡಿಸಲು ಹೊರಟಿದ್ದಾರೆ. ನಾನು ಯಾರಿಗೂ ಭಯ ಪಡಬೇಕಿಲ್ಲ, ನನ್ನನ್ನು ಏನೂ ಮಾಡಲಾಗೋದಿಲ್ಲ. ನೀವೇನೂ ಮಾಡಲಾಗುವುದಿಲ್ಲ ಎಂದು ತಿರುಗೇಟು ನೀಡಿದರು.

    ನೀವು ಇನ್ನೂ ಒಂದು ವರ್ಷ ಹುಡುಕಿದರೂ ನನ್ನ ಒಂದೇ ಒಂದು ತಪ್ಪನ್ನು ತರಲಾಗದು. ಈ ಶೆಡ್ ಖರ್ಗೆ, ದೇಶಪಾಂಡೆಯವರಿಗೂ ಗೊತ್ತಿತ್ತು. ನಾನೇ ಹೇಳಿಕೊಂಡಿದ್ದೆ. ಕಾಂಗ್ರೆಸ್‌ನಲ್ಲಿರುವ ನನಗ್ಯಾಕೆ ಅನ್ಯಾಯ ಮಾಡುತ್ತೀರಿ ಎಂದಿದ್ದೆ. ಕಾಂಗ್ರೆಸ್ಸಿಗರಿಗೆ ನನ್ನ ಬಗ್ಗೆ ಮುಂದೆ ಪ್ರೀತಿ, ಹಿಂದಿನಿಂದ ದ್ವೇಷ ಇದ್ದುದು ಈಗ ಗೊತ್ತಾಗಿದೆ ಎಂದು ವಿಶ್ಲೇಷಿಸಿದರು.

    ಸೈಟ್ ಪುಕ್ಕಟೆ ಕೊಟ್ಟದ್ದಲ್ಲ:
    ಸಚಿವ ಎಂ.ಬಿ ಪಾಟೀಲ್ ಅವರು 2 ಗಂಟೆಗಳ ಕಾಲ ಪತ್ರಿಕಾಗೋಷ್ಠಿ ನಡೆಸಿ ನಾನು ಏನೋ ಮಾಡಬಾರದ ತಪ್ಪು ಮಾಡಿದ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು. ಕೆಐಎಡಿಬಿ ಸೈಟ್ ಮಾಡುವುದು ಯಾಕಾಗಿ? ಅದರಲ್ಲಿ ನಾನು 2006-07ರಲ್ಲಿ ಸೈಟ್ ಪಡೆದುದು ನಿಜ. ಅದೇನೂ ಪುಕ್ಕಟೆ ಕೊಟ್ಟಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.

    ಎಲ್ಲರಂತೆ ನಾನು ವೇರ್‍ಹೌಸ್ ಇನ್ನೇನೋ ಉದ್ದೇಶದಿಂದ ನಿವೇಶನ ಪಡೆದಿದ್ದೇನೆ. ನಾವು ಬಡತನದಲ್ಲಿ ಬಂದವರು. ನಮ್ಮಲ್ಲಿ ಹಣ ಇರಲಿಲ್ಲ. ಅದಾದ ನಂತರ ಕಂತು ಕಟ್ಟಲು ಕಷ್ಟವಾದುದೂ ನಿಜ. ನಿಮ್ಮಲ್ಲಿ ನಾನು ಹಣ ಕೊಡಿ; ವಿನಾಯಿತಿ ಕೊಡಿ ಎಂದು ಕೇಳಿದ್ದೇನಾ? ಆದರೆ, ಕಾಂಗ್ರೆಸ್ ಕಾಲದಲ್ಲಿ ನನಗೆ ಅನ್ಯಾಯ ಆಗಿದೆ. ಆಗ ಅದನ್ನು ಕ್ಯಾನ್ಸಲ್ ಮಾಡಿದರು. ನಾನು ಆಗ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಜನರಲ್ ಸೆಕ್ರೆಟರಿ ಆಗಿದ್ದೆ. ಆದರೂ ನೀವು ನಿವೇಶನ ರದ್ದು ಮಾಡಿದ್ರಿ, ಯಾಕೆ ಮಾಡಿದ್ದೀರಿ ಅಂತ ಹೇಳಿ? ಅದಾದ ಬಳಿಕ ನಾನು ಕೋರ್ಟ್‌ಗೆ ಹೋದೆ. ಇವತ್ತು ಶೆಡ್ ಕಟ್ಟಿದ್ದೇನೆ ಎಂದು ಛಲವಾದಿ ವಿವರಿಸಿದರು.

  • ಛಲವಾದಿ ನಾರಾಯಣಸ್ವಾಮಿ ಒಬ್ಬ ಶೆಡ್ ಗಿರಾಕಿ – ಎಂ.ಬಿ ಪಾಟೀಲ್‌ ಲೇವಡಿ

    ಛಲವಾದಿ ನಾರಾಯಣಸ್ವಾಮಿ ಒಬ್ಬ ಶೆಡ್ ಗಿರಾಕಿ – ಎಂ.ಬಿ ಪಾಟೀಲ್‌ ಲೇವಡಿ

    – ಚಾಣಕ್ಯ ವಿವಿಗೆ 50 ಕೋಟಿಗೆ ಜಮೀನು ನೀಡಿ, 137 ಕೋಟಿ ರೂ. ನಷ್ಟ ಆಗಿದೆ
    – ಕೆಐಎಡಿಬಿ ನಷ್ಟದ ಬಗ್ಗೆ ರಾಜ್ಯಪಾಲರಿಗೆ ದೂರು ಏಕಿಲ್ಲ? ಅಂತ ಪ್ರಶ್ನೆ

    ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆ ಸಿ.ಎ. ನಿವೇಶನ ಕೊಟ್ಟಿದ್ದಕ್ಕೆ ಎಗರಾಡುತ್ತಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸತ್ಯ ಹರಿಶ್ಚಂದ್ರರೇನಲ್ಲ. 2006ರಲ್ಲಿ ಮೈಸೂರಿನ ಹೆಬ್ಬಾಳದಲ್ಲಿ 2 ಎಕರೆ ಜಾಗ ಪಡೆದುಕೊಂಡಿರುವ ಅವರು 18 ವರ್ಷಗಳಾದರೂ ಅಲ್ಲಿ ಏನೂ ಮಾಡದೇ ಕಾಟಾಚಾರಕ್ಕೆ ಒಂದು ಶೆಡ್ ಹಾಕಿಕೊಂಡು ಕೂತಿರುವ ಆಸಾಮಿ. ಅವರೊಬ್ಬ ಶೆಡ್ ಗಿರಾಕಿಯೇ ವಿನಾ ರಾಹುಲ್ ಖರ್ಗೆ ಅವರಂತೆ ಉದ್ಯಮಶೀಲರಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ (MB Patil) ಆಕ್ರೋಶ ವ್ಯಕ್ತಪಡಿಸಿದರು.

    ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ 2 ಗಂಟೆ ಕಾಲ ದಾಖಲೆ ಸಮೇತ ಮಾತನಾಡಿದ ಅವರು, `ರಾಹುಲ್ ಖರ್ಗೆ (Rahul Kharge) ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿದ್ದಾರೆ. ಎಂಜಿನಿಯರಿಂಗ್ ಪದವೀಧರರು, ಡಿಆರ್‌ಡಿಓ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇಂಥ ಅರ್ಹರಿಗೆ ಸಿ.ಎ. ನಿವೇಶನ ಕೊಡದೇ ಬಿಜೆಪಿಯವರಂತೆ ನಿಯಮಗಳನ್ನು ಗಾಳಿಗೆ ತೂರಿ ಯಾರಿಗೆ ಬೇಕೋ ಅವರಿಗೆ ಕೊಡಬೇಕಾಗಿತ್ತೇನು? ನಾರಾಯಣಸ್ವಾಮಿ ಈಗ ತಮಗೆ ಮಂಜೂರಾಗಿರುವ ಕೈಗಾರಿಕಾ ನಿವೇಶನದ ಸಮರ್ಪಕ ಬಳಕೆಗೆ ಮತ್ತೊಮ್ಮೆ 6 ತಿಂಗಳ ಕಾಲಾವಕಾಶ ಪಡೆದುಕೊಂಡಿದ್ದಾರೆ. ಇಲ್ಲೂ ಅವರು ವಿಫಲರಾದರೆ, ನಿಯಮಗಳ ಪ್ರಕಾರ ಆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ದಲಿತರಾದ ನಾರಾಯಣಸ್ವಾಮಿ ಸ್ವತಃ ತಮ್ಮ ಸಮುದಾಯದ ಹಿರಿಯರೂ ಮುತ್ಸದ್ದಿಗಳೂ ಆದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ವಿರುದ್ಧ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಇದು ಬಿಜೆಪಿಯ ಕುತಂತ್ರ. ದಲಿತರು ಪರಸ್ಪರ ಹೊಡೆದಾಡುತ್ತಿದ್ದರೆ ಅವರಿಗೆ ಲಾಭವಿದೆ. ತಮಗೆ ನೀಡಿರುವ ಕೈಗಾರಿಕಾ ನಿವೇಶನದಲ್ಲಿ ನಾರಾಯಣಸ್ವಾಮಿ ಇಷ್ಟು ಹೊತ್ತಿಗೆ ಶೇ.51ರಷ್ಟು ಭೂಮಿಯ ಬಳಕೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಅವರು ಕೇವಲ ಶೇ.5ರಷ್ಟು ಭೂಮಿಯಲ್ಲಿ ಕಾಟಾಚಾರಕ್ಕೆ ಶೆಡ್ ಹಾಕಿ, `ಬಾಡಿಗೆಗೆ ಇದೆ’ ಎಂದು ಬೋರ್ಡ್ ನೇತು ಹಾಕಿದ್ದಾರೆ. ಇಂಥ ಲಜ್ಜೆಗೆಟ್ಟ ವ್ಯಕ್ತಿ ದೇಶದ ನೇತಾರರಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾತನಾಡುವ ದುಸ್ಸಾಹಸ ಮಾಡುತ್ತಿದ್ದಾರೆ ಎಂದು ಅವರು ಹರಿಹಾಯ್ದರು.

    ನಾರಾಯಣಸ್ವಾಮಿ 2006ರಲ್ಲಿ `ಬೃಂದಾವನ್ ಸಾಫ್ಟ್ವೇರ್’ (Brindavan Software) ಎನ್ನುವ ಕಂಪನಿ ಶುರು ಮಾಡುವುದಾಗಿ ಭೂಮಿ ಪಡೆದುಕೊಂಡರು. ಆ ಮೇಲೆ ಅಲ್ಲಿ ಅದೇ ಹೆಸರಿನ ಗಾರ್ಮೆಂಟ್ಸ್ ಕಾರ್ಖಾನೆ ಆರಂಭಿಸುತ್ತೇನೆ ಎಂದರು. ಬಳಿಕ ಗೋದಾಮು ಮಾಡುತ್ತೇನೆಂದರು. ಅವರು ಕಾಲಕಾಲಕ್ಕೆ ಬೇರೆಬೇರೆ ಉದ್ದೇಶಕ್ಕೆ ಬದಲಿಸಿಕೊಂಡರೇ ವಿನಾ ಏನನ್ನೂ ದಡ ಮುಟ್ಟಿಸಲಿಲ್ಲ. ಇದಾದ ಮೇಲೆ ಸರ್ಕಾರವು ನಿಯಮದಂತೆ 2016ರ ನ.11ರಂದು ಜಮೀನನ್ನು ವಾಪಸ್ ಪಡೆಯಲು ಆದೇಶಿಸಿತು. ಇದರ ವಿರುದ್ಧ ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದ ಈ ವ್ಯಕ್ತಿ ಈಗ ಪುಕ್ಕಟೆ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಅವರು ಕಿಡಿ ಕಾರಿದರು.

    ನಾರಾಯಣಸ್ವಾಮಿ ರಾಜಕೀಯದಲ್ಲಿ ಮೇಲಕ್ಕೆ ಬರಲು ಖರ್ಗೆಯವರೇ ಕಾರಣ. ಅವರು ರೈಲ್ವೇ ಸಚಿವರಾಗಿದ್ದಾಗ ಈ ವ್ಯಕ್ತಿಯನ್ನು ರೈಲ್ವೆ ಬಳಕೆದಾರರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿ, ರೈಲ್ವೆ ಭವನದಲ್ಲಿ ಕಚೇರಿ ಕೂಡ ಕೊಟ್ಟಿದ್ದರು. ಆದರೂ ನಾರಾಯಣಸ್ವಾಮಿ ಉಂಡ ಮನೆಗೆ ಎರಡು ಬಗೆಯುತ್ತಿದ್ದಾರೆ. ಹೀಗೆ ಮಾತನಾಡಿದರೆ ಬಿಜೆಪಿಯಲ್ಲಿ ಇನ್ನೂ ಮೇಲೇರಬಹುದು ಎನ್ನುವ ಭ್ರಮೆಯಲ್ಲಿ ಅವರಿರಬಹುದು ಎಂದು ಪಾಟೀಲ್‌ ಕುಟುಕಿದರು.

    ಇವರು ಹೇಳುವ ಹಾಗೆ ಈ ನಿವೇಶಕ್ಕೆ 72 ಅರ್ಜಿ ಬಂದಿರಲಿಲ್ಲ. ಬಂದಿದ್ದು ಕೇವಲ 6 ಅರ್ಜಿ. ಅದರಲ್ಲಿ ಮೂರು ವಸತಿ ಉದ್ದೇಶದ್ದು. ಅಲ್ಲಿ ಈಗಾಗಲೇ ಅಂತಹ ಉದ್ದೇಶಕ್ಕೆ ಕೊಟ್ಟಿದ್ದರಿಂದ ಅವುಗಳನ್ನು ತಿರಸ್ಕರಿಸಲಾಗಿದೆ. ಉಳಿದಂತೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ‌ ಅರ್ಜಿ ಬಂದಿದ್ದರೂ ಸಮಪರ್ಕ ದಾಖಲೆ ಸಲ್ಲಿಸಿರಲಿಲ್ಲ. ಇನ್ನು ಉಳಿದಿದ್ದು ರಾಹುಲ್ ಮಾತ್ರ. ಇವರು ಎಲ್ಲ ರೀತಿಯಲ್ಲೂ ಸಮರ್ಥರಿದ್ದು, ಸಾಮಾನ್ಯ ವರ್ಗದ ಕೋಟಾದಲ್ಲೂ ಅವರು ಅರ್ಹರಾಗಿದ್ದರು ಎಂದು ತಿರುಗೇಟು‌ ನೀಡಿದರು.

    ಆರ್‌ಎಸ್‌ಎಸ್‌ (RSS) ಅಂಗವಾಗಿರುವ ರಾಷ್ಟ್ರೋತ್ಥಾನ ಪರಿಷತ್ತಿಗೆ ಹೈಟೆಕ್ ಡಿಫೆನ್ಸ್ ಪಾರ್ಕಿನಲ್ಲಿ ವಿವಿಧೋದ್ದೇಶ ವಾಣಿಜ್ಯ ಸಂಕೀರ್ಣಕ್ಕೆಂದು 2013ರಲ್ಲಿ 5 ಎಕರೆ ಕೊಡಲಾಗಿದೆ. ಇದುವರೆಗೂ ಅವರು ಅಲ್ಲಿ ಏನೂ ಮಾಡಿಲ್ಲ. ಕೋವಿಡ್ ನೆಪ ಹೇಳಿಕೊಂಡು ಮತ್ತೆ ಮತ್ತೆ ಕಾಲಾವಕಾಶ ಕೇಳಿಕೊಂಡು ಬಂದಿದ್ದಾರೆ. ಇತ್ತೀಚೆಗೆ 2023ರ ಡಿ.26ರಂದು ಪುನಃ ಎರಡು ವರ್ಷಗಳ ಸಮಯ ತೆಗೆದುಕೊಂಡಿದ್ದಾರೆ. ಈ ಜಮೀನನ್ನು ವಾಪಸ್ ಪಡೆಯಬೇಕೋ ಬೇಡವೋ ಅನ್ನೋದನ್ನ ಲೆಹರ್ ಸಿಂಗ್ ಮತ್ತು ನಾರಾಯಣಸ್ವಾಮಿ ಹೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಮುರುಗೇಶ ನಿರಾಣಿ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಬಾಗಲಕೋಟೆಯ ನವನಗರ ಕೈಗಾರಿಕಾ ಪ್ರದೇಶದಲ್ಲಿ 2012ರ ಮಾರ್ಚ್ 12ರಂದು ತಮಗೆ ತಾವೇ 25 ಎಕರೆ ಕೊಟ್ಟುಕೊಂಡು, ಅಲ್ಲಿ ತೇಜಸ್ ಇಂಟರ್ನ್ಯಾಷನಲ್ ಸ್ಕೂಲ್ ಕಟ್ಟಿದ್ದಾರೆ. ಅದು ಆಗ್ರೋ ಟೆಕ್ ಪಾರ್ಕ್‌ಗೆ ಮೀಸಲಾಗಿದ್ದ ಜಾಗ. ಆಮೇಲೆ ಪುನಃ ಕೈಗಾರಿಕಾ ಸಚಿವರಾದಾಗ ಕೂಡ 2022ರ ಡಿ.19ರಂದು ಅಲ್ಲೇ ಮತ್ತೆ 6.17 ಎಕರೆ ತೆಗೆದುಕೊಂಡು, ತಮಗೆ ತಾವೇ ಅಭಿನಂದನಾ ಪತ್ರ ಬರೆದುಕೊಂಡಿದ್ದಾರೆ. ಇಂಟರ್ನೆಟ್ ಜಾಲಾಡಿದರೇ ಇವರೆಲ್ಲರ ಜಾತಕ ಬಯಲಾಗುತ್ತದೆ ಎಂದು ಅವರು ಅಂಕಿ-ಅಂಶಗಳ ಸಹಿತ ವಿವರಿಸಿದರು.

    ಚಾಣಕ್ಯ ವಿಶ್ವವಿದ್ಯಾಲಯದ್ದು (Chanakya University) ಇದೇ ಕತೆಯಾಗಿದೆ. 2025ರ ಜೂನ್ ಒಳಗೆ ಅವರು 116 ಎಕರೆಯಲ್ಲಿ ಕನಿಷ್ಠ ಶೇ.51ರಷ್ಟು ಜಾಗವನ್ನು ಬಳಕೆ ಮಾಡದಿದ್ದರೆ ಉಳಿದ ಜಾಗವನ್ನು ವಾಪಸ್ ತೆಗೆದುಕೊಳ್ಳಲಾಗುವುದು. ಚಾಣಕ್ಯ ವಿವಿಗೂ ಕೇವಲ 50 ಕೋಟಿ ರೂ.ಗೆ ಈ ಜಮೀನು ನೀಡಲಾಯಿತು. ಇದರ ಮಾರುಕಟ್ಟೆ ಬೆಲೆ 187 ಕೋಟಿ ರೂ. ಇತ್ತು. ಆದರೆ ಬಿಜೆಪಿ ಸರಕಾರ ಇದಕ್ಕೆ ಕೇವಲ 50 ಕೋಟಿ ರೂ. ನಿಗದಿಪಡಿಸಿತು. ಇದರಿಂದ ಕೆಐಎಡಿಬಿಗೆ 137 ಕೋಟಿ ರೂ. ನಷ್ಟ ಆಗಿದೆ. ಇದರ ವಿರುದ್ಧ ಏಕೆ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು‌ ನೀಡಿಲ್ಲ? ಎಂದು ಸಚಿವರು ಪ್ರಶ್ನಿಸಿದರು.