Tag: ಸಿಎಜಿ ವರದಿ

  • ಯುಪಿಎಗೆ ಹೋಲಿಸಿದರೆ ಎನ್‍ಡಿಎ ರಫೇಲ್ ಡೀಲ್ ಶೇ.2.8 ರಷ್ಟು ಅಗ್ಗ: ಸಿಎಜಿ

    ಯುಪಿಎಗೆ ಹೋಲಿಸಿದರೆ ಎನ್‍ಡಿಎ ರಫೇಲ್ ಡೀಲ್ ಶೇ.2.8 ರಷ್ಟು ಅಗ್ಗ: ಸಿಎಜಿ

    ನವದೆಹಲಿ: ಯುಪಿಎ ಮಾಡಿಕೊಂಡಿದ್ದ ರಫೇಲ್ ಖರೀದಿ ಒಪ್ಪಂದಕ್ಕೆ ಹೋಲಿಕೆ ಮಾಡಿದರೆ ಎನ್‍ಡಿಎ ಮಾಡಿಕೊಂಡಿರುವ ಒಪ್ಪಂದ ಶೇ.2.8 ಎಷ್ಟು ಅಗ್ಗ ಎಂದು ಮಹಾಲೇಖಪಾಲರ ವರದಿ(ಸಿಎಜಿ) ಹೇಳಿದೆ.

    ಮೋದಿ ಸರ್ಕಾರದ ಅತಿ ದೊಡ್ಡ ಹಗರಣ ಎಂದು ಕಾಂಗ್ರೆಸ್ ಆರೋಪಿಸುತ್ತಿರುವ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಸಿಎಜಿ ವರದಿ ಇಂದು ರಾಜ್ಯಸಭೆಯಲ್ಲಿ ಮಂಡನೆಯಾಗಿದೆ. 2007ರಲ್ಲಿ ಯುಪಿಎ ಪ್ರಸ್ತಾಪಿಸಿದ್ದ 126 ರಫೇಲ್ ವಿಮಾನ ಖರೀದಿಗೆ ಹೋಲಿಸಿದರೆ ಎನ್‍ಡಿಎ ಸರ್ಕಾರ 2016ರಲ್ಲಿ 36 ವಿಮಾನ ಖರೀದಿ ಸಂಬಂಧ ಮಾಡಿಕೊಂಡಿರುವ ಒಪ್ಪಂದ ಶೇ.2.8 ರಷ್ಟು ಅಗ್ಗವಾಗಿದೆ. ಅಷ್ಟೇ ಅಲ್ಲದೇ ಈ ಹೊಸ ಒಪ್ಪಂದದಿಂದಾಗಿ ಭಾರತಕ್ಕೆ ಶೇ.17.08 ರಷ್ಟು ಹಣ ಉಳಿತಾಯವಾಗಿದೆ ಎನ್ನುವ ಅಂಶ ಈ ವರದಿಯಲ್ಲಿದೆ. ಈ ವರದಿ ಮಂಡನೆಯಾಗುತ್ತಿದ್ದಂತೆ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಗದ್ದಲ ಎಬ್ಬಿಸಿವೆ.

     

    ಮಹಾಲೇಖಪಾಲ ರಾಜೀವ್ ಮಹರ್ಷಿ ಅವರು ರಫೇಲ್ ಖರೀದಿ ಒಪ್ಪಂದ ನಡೆಸುವಾಗ ಅವರು ಹಣಕಾಸು ಕಾರ್ಯದರ್ಶಿಯಾಗಿದ್ದರು. ಇವರ ಅವಧಿಯಲ್ಲಿ ಯುಪಿಎ ಒಪ್ಪಂದ ರದ್ದಾಗಿ 36 ವಿಮಾನ ಖರೀದಿಯ ವ್ಯವಹಾರ ನಡೆದಿತ್ತು. ರಫೇಲ್ ಮಾತುಕತೆಯಲ್ಲಿ ಮಹರ್ಷಿ ಅವರು ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

    ಕಾಂಗ್ರೆಸ್ ಟೀಕೆಗೆ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದು, ಸುಪ್ರೀಂ ಕೋರ್ಟ್ ತಪ್ಪು, ಸಿಎಜಿ ವರದಿಯೂ ತಪ್ಪು. ಅವರಿಗೆ ರಾಜವಂಶ ಮಾತ್ರ ಸರಿ, ಸತ್ಯಮೇವ ಜಯತೇ, ಕೊನೆಗೂ ಸತ್ಯವೇ ಗೆದ್ದಿದೆ. ನಮ್ಮ ರಫೇಲ್ ಒಪ್ಪಂದ ಕಡಿಮೆ ಬೆಲೆ, ವೇಗವಾಗಿ ವಿತರಣೆ, ಉತ್ತಮ ನಿರ್ವಹಣೆ ಎಂದು ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ:  18 ವರ್ಷ ಕಳೆದರೂ ಸಿತಾರಾ ವಿಮಾನ ಪೂರೈಸದ ಎಚ್‍ಎಎಲ್

    ಸುಪ್ರೀಂ ತೀರ್ಪಿನಲ್ಲಿ ಏನಿತ್ತು?
    ರಫೇಲ್ ಖರೀದಿ ಒಪ್ಪಂದದಲ್ಲಿ ಸಂದೇಹ ಪಡುವ ಅಗತ್ಯವಿಲ್ಲ. ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವುದಕ್ಕೆ ಯಾವುದಕ್ಕೆ ಸಾಕ್ಷ್ಯಗಳು ಸಿಕ್ಕಿಲ್ಲ. ಗುಣಮಟ್ಟದ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ಖರೀದಿ ಒಪ್ಪಂದ ಬೆಲೆಯ ಪರಾಮರ್ಶೆ ಮಾಡುವುದು ಕೋರ್ಟ್ ಕೆಲಸವಲ್ಲ. 126 ಜೆಟ್ ಬದಲು 36 ಜೆಟ್ ಖರೀದಿ ಒಪ್ಪಂದ ಮಾಡಿಕೊಂಡಿರುವ ಭಾರತ ಸರ್ಕಾರದ ಈ ನಿರ್ಧಾರವನ್ನು ಬದಲಾಯಿಸಿ ಎಂದು ನಾವು ಹೇಳಲು ಸಾಧ್ಯವಿಲ್ಲ. 2016ರ ಸಪ್ಟೆಂಬರ್ ತಿಂಗಳಿನಲ್ಲಿ ಈ ಡೀಲ್ ನಡೆದಾಗ ಯಾರು ಪ್ರಶ್ನೆ ಕೇಳಿರಲಿಲ್ಲ.

    ನಾಲ್ಕು ಮತ್ತು ಐದನೇಯ ತಲೆಮಾರಿನ ಫೈಟರ್ ಜೆಟ್ ಭಾರತೀಯ ವಾಯುಸೇನೆಗೆ ನಿಯೋಜಿಸುವ ಅಗತ್ಯವಿದೆ. ಖರೀದಿ, ಬೆಲೆ ನಿರ್ಣಯ, ದೇಶಿ ಪಾಲುದಾರ ಆಯ್ಕೆ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಕಂಡು ಬರುವುದಿಲ್ಲ. ಒಪ್ಪಂದದಲ್ಲಿ ಭಾಗಿಯಾದ ಎಲ್ಲರೂ ಖರೀದಿ ಹೇಗೆ ನಡೆಯಿತು ಎನ್ನುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ತುಲನಾತ್ಮಕ ಬೆಲೆ ವಿವರವನ್ನು ನೀಡಿ ವಿಮಾನಗಳನ್ನು ಖರೀದಿಸಿ ಎಂದು ಹೇಳುವುದು ಕೋರ್ಟ್ ಕೆಲಸವಲ್ಲ. ನಾವು ಕೇಳಿದ ಪ್ರಶ್ನೆಗಳಿಗೆ ಸಿಕ್ಕಿದ ಉತ್ತರಿಂದ ನಮ್ಮ ಸಂಶಯ ಪರಿಹಾರವಾಗಿದ್ದು ತೃಪ್ತಿಯಾಗಿದೆ. ರಕ್ಷಣೆಯಂತಹ ಸೂಕ್ಷ್ಮ ವಿಚಾರದಲ್ಲಿ ತನಿಖೆಗೆ ಆದೇಶ ನೀಡುವುದು ಸರಿಯಲ್ಲ. ದೇಶಿ ಪಾಲುದಾರನ ಆಯ್ಕೆ ಮಾಡುವುದು ಕಂಪನಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದನ್ನೂ ಓದಿ:ಒಂದೇ ಯುದ್ಧ ವಿಮಾನ ನಿರ್ಮಿಸದ ರಿಲಯನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿದ್ದು ಯಾಕೆ: ಪ್ರಶ್ನೆಗೆ ಡಸಾಲ್ಟ್ ಸಿಇಒ ಉತ್ತರ ನೀಡಿದ್ದು ಹೀಗೆ

    ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಂ.ಎಲ್ ಶರ್ಮಾ, ವಿನೀತಾ ದಾಂಡ, ಆಪ್ ನಾಯಕ ಸಂಜಯ್ ಸಿಂಗ್ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು. ರಫೇಲ್ ಒಪ್ಪಂದವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ವಕೀಲರು ಆಗ್ರಹಿಸಿದ್ದರು. ಈ ಅರ್ಜಿಗಳನ್ನು ಒಟ್ಟಾಗಿಸಿದ್ದ ಮುಖ್ಯ.ನ್ಯಾ ರಂಜನ್ ಗೋಗಯ್ ನೇತೃತ್ವದ ನ್ಯಾ. ಎಸ್‍ಕೆ ಕೌಲ್, ನ್ಯಾ. ಕೆಎಂ ಜೋಸೆಫ್ ಅವರಿದ್ದ ತ್ರಿಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿತ್ತು. ನವೆಂಬರ್ 14 ರಂದು ವಿಚಾರಣೆ ಅಂತ್ಯಗೊಳಿಸಿದ್ದ ಸುಪ್ರೀಂಕೋರ್ಟ್ ಡಿಸೆಂಬರ್ 14 ರಂದು ತೀರ್ಪು ಪ್ರಕಟಿಸಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಿತ್ತು. ಇದನ್ನೂ ಓದಿ:ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

  • ಸಿಎಜಿ ವರದಿ ನೋಡಿ ನನಗೆ ಹಾರ್ಟ್ ಅಟ್ಯಾಕ್ ಆಗಿತ್ತು: ರವಿಕುಮಾರ್ ವ್ಯಂಗ್ಯ

    ಸಿಎಜಿ ವರದಿ ನೋಡಿ ನನಗೆ ಹಾರ್ಟ್ ಅಟ್ಯಾಕ್ ಆಗಿತ್ತು: ರವಿಕುಮಾರ್ ವ್ಯಂಗ್ಯ

    ಬೆಳಗಾವಿ: ಸಿಎಜಿ ವರದಿ ನೋಡಿ ನನಗೆ ಹಾರ್ಟ್ ಅಟ್ಯಾಕ್ ಆಗಿತ್ತು ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಮಧ್ಯ ಮಾತಿನ ಚಕಮಕಿ ಉಂಟಾಯಿತು.

    ಬೆಳಗಾವಿ ಅಧಿವೇಶನದ ಪರಿಷತ್ ಕಲಾಪದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‍ನಲ್ಲಿ 19% ಹಣದ ಖರ್ಚಿಗೆ ದಾಖಲೆ ಇಲ್ಲ. ಸುಮಾರು 35 ಸಾವಿರ ಕೋಟಿಗೆ ಲೆಕ್ಕ ಇಲ್ಲ. ಇದಕ್ಕೆ ಉತ್ತರ ಕೊಡುವವರು ಯಾರು? ಸಾಲದ ಮೇಲಿನ ಬಡ್ಡಿ 12 ಸಾವಿರ ಕೋಟಿ ರೂ. ಕಟ್ಟಲಾಗಿದೆ. ಇದರಲ್ಲಿ ಬಳಕೆಯಾಗದ ಹಣ ಸರ್ಕಾರವನ್ನು ವಾಪಾಸ್ ನೀಡಿಲ್ಲ. ಈ ಕುರಿತಾಗಿ ಮಾಜಿ ಸಿಎಂ ಯಾಕೆ ಮಾಹಿತಿ ನೀಡದೆ ಮುಚ್ಚಿಟ್ಟರು. ಆಡಳಿತಾತ್ಮಕ ಅನುಮೋದನೆ ಇಲ್ಲದ ಹಣವನ್ನು ಖರ್ಚು ಮಾಡಲಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ರವಿಕುಮಾರ್ ಅವರ ಹೇಳಿಕೆ ವಿರುದ್ಧ ಕಿಡಿಕಾರಿದ ಐವಾನ್ ಡಿಸೋಜಾ, ಸಿಎಜಿ ವರದಿವನ್ನು ಇನ್ನೊಂದು ದಿನ ಪ್ರಸ್ತಾಪಿಸಿ ಚರ್ಚೆ ಮಾಡೋಣ ಎಂದರು. ಈ ವೇಳೆ ಸದನದಲ್ಲಿ ಗದ್ದಲದ ವಾತಾವರಣವೇ ನಿರ್ಮಾಣವಾಯಿತು. ವಿಪಕ್ಷ- ಆಡಳಿತ ಪಕ್ಷದ ನಡುವೆ ಮಾತಿನ ಚಕಮಕಿ ಜೋರಾಯಿತು. ಸದನದಲ್ಲಿ ಮಂಡಿಸಬೇಕಾದ ಬಿಲ್ ಬಗ್ಗೆ ಮಾತಾಡಿ ಎಂದು ಕಾಂಗ್ರೆಸ್ – ಜೆಡಿಎಸ್ ಸದಸ್ಯರ ಒತ್ತಾಯಿಸಿದರೂ ಗದ್ದಲ ಮಾತ್ರ ಕಡಿಮೆಯಾಗಲಿಲ್ಲ.

    ಸರ್ಕಾರದ ಹಣ ತಿಂದು ಜೈಲಿಗೆ ಹೋಗಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಂದು ಐವಾನ್ ಡಿಸೋಜಾ ಗುಡುಗಿದರು. ಈ ಹೇಳಿಕೆಯಿಂದಾಗಿ ಬಿಜೆಪಿ ಸದಸ್ಯರು ಐವಾನ್ ಡಿಸೋಜಾ ವಿರುದ್ದ ತಿರುಗಿ ಬಿದ್ದು, ಇಂದಿರಾ ಗಾಂಧಿ ಕೂಡ ಜೈಲಿಗೆ ಹೋಗಿದ್ರು ಎಂದು ಆರೋಪಿಸಿದರು.

    ಏನಿದು ಸಿಎಜಿ ವರದಿ?:
    ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಿಂದ 35 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎನ್ನುವ ಪ್ರಧಾನ ಮಹಲೇಖಪಾಲರ (ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್) ವರದಿ ಆಧರಿಸಿ ಬಿಜೆಪಿ ಕಿರು ಪುಸ್ತಕವನ್ನು ಬಿಡುಗಡೆ ಮಾಡಿದೆ. ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕೊಠಡಿಯಲ್ಲಿ ಶಾಸಕ ಅಶ್ವಥ್ ನಾರಾಯಣ್ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು, ಭ್ರಷ್ಟ ಕಾಂಗ್ರೆಸ್ ಸರ್ಕಾರದ ಲೂಟಿ ಅವಧಿ 2016-17 ಎಂಬ ಶೀರ್ಷಿಕೆಯಡಿಯಲ್ಲಿ 36 ಪುಟಗಳ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದ್ದರು.

    ಕಿರುಹೊತ್ತಿಗೆಯಲ್ಲಿರುವ ಪ್ರಮುಖ ಆರೋಪಗಳೇನು?:
    * 788 ಕೆರೆಗಳಿಗೆ ನೀರು ತುಂಬಲಿಲ್ಲ. ಆದರೆ 1433.41 ಕೋಟಿ ರೂ. ಬಿಡುಗಡೆಯಾಗಿದೆ
    * ಶಾಸಕಾಂಗದ ಅನುಮೋದನೆ ಇಲ್ಲದೆ ಸಾವಿರಾರು ಕೋಟಿ ಹಣ ಬಿಡುಗಡೆ.
    * ಬಡ್ಡಿ ಹಣದಲ್ಲಿ ಅಧಿಕಾರಿಗಳ ಮೋಜು
    * ಯೂನಿಫಾರಂ ಖರೀದಿಯಲ್ಲಿ 1.72 ಕೋಟಿ ರೂ. ಹಗರಣ
    * 115.10 ಕೋಟಿ ರೂ. ಲ್ಯಾಪ್ ಟಾಪ್ ಹಗರಣ
    * ಬಳಕೆಯಾಗದ 1199.81 ಕೋಟಿ ರೂ. ಸರ್ಕಾರಕ್ಕೆ ಮರು ಪಾವತಿ ಮಾಡಿಲ್ಲ
    * 254.34 ಕೋಟಿ ರೂ. ಗಳಿಗೆ ಬಳಕೆ ಪ್ರಮಾಣ ಪತ್ರ ಕೊಟ್ಟಿಲ್ಲ
    * 7378.34 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡದೆ ಕಾಮಗಾರಿಗೆ ಅವಕಾಶ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv