Tag: ಸಿಎಎ ಪ್ರತಿಭಟನೆ

  • ದೇಶದ್ರೋಹಿಗಳಿಗೆ ಬೆದರಿದ ಕೈ ನಾಯಕರುಗಳು

    ದೇಶದ್ರೋಹಿಗಳಿಗೆ ಬೆದರಿದ ಕೈ ನಾಯಕರುಗಳು

    ಬೆಂಗಳೂರು: ಸಿಎಎ ಕಾಯ್ದೆಯ ವಿರುದ್ಧ ರಾಜ್ಯದ ಉದ್ದಗಲಕ್ಕೂ ಓಡಾಡಿ ಮಾತನಾಡಿದ್ದ ಕಾಂಗ್ರೆಸ್ ನಾಯಕರಿಗೆ ಈಗ ಪಜೀತಿ ಎದುರಾಗಿದೆ. ಎಲ್ಲಾ ಸಭೆಗಳಲ್ಲಿ ಸೆಕ್ಷನ್ ಬೈ ಸೆಕ್ಷನ್ ಹೇಳಿ ಮಾತನಾಡುತ್ತಿದ್ದ ನಾಯಕರುಗಳಿಗೆ ಈಗ ಪಾಕಿಸ್ತಾನ ಭೀತಿ ಎದುರಾಗಿದೆ. ಆ ಒಂದೇ ಕಾರಣಕ್ಕೆ ಸಾಕಪ್ಪ ಸಾಕು ಆ ಸಭೆ ಸಮಾವೇಶದ ಸಹವಾಸ ಅಂತ ಮಾಜಿ ಸಿಎಂ ಸಹ ಸೈಲೆಂಟಾಗಲು ಮುಂದಾಗಿದ್ದಾರೆ.

    ಸಿಎಎ ಹಾಗೂ ಎನ್ ಆರ್ ಸ ವಿರೋಧಿಸಿ ನಡೆದ ಸಮಾವೇಶಗಳಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ನಡೆಯನ್ನು ಹಿಗ್ಗಾ ಮುಗ್ಗಾ ಟೀಕಿಸಿದ್ದರು. ಇದೆ ಫೆಬ್ರವರಿ 24 ರಂದು ವಿಜಯಪುರದಲ್ಲಿ ಸಿಎಎ ವಿರುದ್ಧ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ವಿಜಯಪುರದ ಜಾಯಿಂಟ್ ಆಕ್ಷನ್ ಕಮಿಟಿಯ ಸಂವಿಧಾನ ಉಳಿಸಿ ಅಭಿಯಾನದ ಭಾಗವಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ.

    ಆಪ್ತ ಎಂ.ಬಿ.ಪಾಟೀಲ್ ಸಿದ್ದರಾಮಯ್ಯರನ್ನು ಫೆ.24ರ ಸಮಾವೇಶಕ್ಕೆ ಆಹ್ವಾನಿಸಿದ್ದಾರೆ. ಆದರೆ ಸಮಾವೇಶದಲ್ಲಿ ಭಾಗವಹಿಸಬೇಕಿದ್ದ ಸಿದ್ದರಾಮಯ್ಯ ಈಗ ಯು ಟರ್ನ್ ತಗೆದುಕೊಂಡಿದ್ದಾರೆ. ಅಂತಹ ಸಮಾವೇಶಗಳಲ್ಲಿ ಪಾಕಿಸ್ತಾನ ಜಿಂದಾಬಾದ್, ಅನ್ನೋ ದೇಶದ್ರೋಹಿ ಘೋಷಣೆ ಕೂಗಿ ಅಭಾಸ ಆಗಬಾರದು ಅನ್ನೋದು ಸಿದ್ದರಾಮಯ್ಯ ಆತಂಕ. ಆದ್ದರಿಂದ ವಿಜಯಪುರ ಸಮಾವೇಶಕ್ಕೆ ಹೋಗದಿರಲು ತೀರ್ಮಾನಿಸಿದ್ದಾರೆ. ಕಾರ್ಯಕ್ರಮದ ಆಯೋಜಕರು ಸಿದ್ದರಾಮಯ್ಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆದರೆ ಕಳೆದ ಎರಡು ಮೂರು ದಿನಗಳ ಸಿಎಎ ಪ್ರತಿಭಟನೆಯ ಅಹ್ವಾನ ಕಂಡು ಮಾಜಿ ಸಿಎಂ ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

    ದೇಶದ್ರೋಹಿಗಳ ಹುಚ್ಚು ಘೋಷಣೆಯ ಭೀತಿಗೆ ಸಿಎಎ ವಿರುದ್ಧ ಸಮಾವೇಶಕ್ಕೆ ಹೋಗೋದೆ ಬೇಡ ಅನ್ನೋ ತೀರ್ಮಾನಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ. ಇದು ಕೇವಲ ಸಿದ್ದರಾಮಯ್ಯ ಒಬ್ಬರ ಕಥೆಯಲ್ಲ ಬಹುತೇಕ ಕಾಂಗ್ರೆಸ್ ನಾಯಕರುಗಳದ್ದು ಇದೇ ಸ್ಥಿತಿಯಾಗಿದೆ. ಒಟ್ಟಾರೆ ಇದುವರೆಗೆ ಯಾರಿಗೂ ಹೆದರದೇ ಎದುರೇಟು ನೀಡುತ್ತಿದ್ದ ಸಿದ್ದರಾಮಯ್ಯ ಈಗ ದೇಶದ್ರೋಹಿಗಳ ಹುಚ್ಚಾಟಕ್ಕೆ ಹೆದರಿ ಸಿಎಎ ಸಮಾವೇಶದಿಂದಲೇ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾರೆ. ಜೊತೆಗೆ ಇತರೆ ಕೈ ನಾಯಕರುಗಳು ಇದೆ ಆತಂಕದಲ್ಲಿದ್ದಾರೆ.

  • ಮಂಗಳೂರು ಗಲಭೆ- 22 ಆರೋಪಿಗಳಿಗೆ ಜಾಮೀನು

    ಮಂಗಳೂರು ಗಲಭೆ- 22 ಆರೋಪಿಗಳಿಗೆ ಜಾಮೀನು

    -ಪೊಲೀಸರ ಮೇಲೆ ಎಫ್‍ಐಆರ್ ದಾಖಲಿಗೆ ಸೂಚನೆ

    ಬೆಂಗಳೂರು: ಸಿಎಎ ವಿರೋಧಿಸಿ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರ ನಡೆದು ಮಂಗಳೂರಿನಲ್ಲಿ ಗೋಲಿಬಾರ್ ಆಗಿತ್ತು. ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಹಿಂಸಾಚಾರಕ್ಕೆ ಕಾರಣವಾಗಿದ್ದ ಎನ್ನಲಾದ 22 ಆರೋಪಿಗಳನ್ನು ಬಂಧಿಸಿದ್ದ ಪೊಲೀಸರ ಕ್ರಮ ಸರಿಯಲ್ಲ ಅಂತ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

    ಆರೋಪಿಗಳ ಬಂಧನ ಮಾಡುವಾಗ ಪೊಲೀಸರು ಸರಿಯಾದ ಕ್ರಮವನ್ನು ಕೈಗೊಂಡಿಲ್ಲ. ಆರೋಪಿಗಳು ಗಲಭೆಯಲ್ಲಿ ಭಾಗಿಯಾಗಿರೋದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಿಲ್ಲದೆ ಇರೋ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ ಎಲ್ಲಾ 22 ಆರೋಪಿಗಳಿಗೆ ಜಾಮೀನನ್ನು ಮಂಜೂರು ಮಾಡಿದೆ..

    ಸಾಕ್ಷ್ಯ ಎಂದು ಪರಿಗಣಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಗಳು ನೇರವಾಗಿ ಭಾಗಿಯಾಗಿದ್ದಾರೆ ಅನ್ನೋದಕ್ಕೆ ಸಾಕ್ಷ್ಯ ಇಲ್ಲ ಎಂದು ಏಕ ಸದಸ್ಯ ಪೀಠ ಅಭಿಪ್ರಾಯ ಪಟ್ಟು ಜಾಮೀನನ್ನು ಮಂಜೂರು ಮಾಡಿದೆ.

    ಪೊಲೀಸರ ವಿರುದ್ಧ ಎಫ್‍ಐಆರ್: ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಂಗಳೂರು ಪೊಲೀಸರಿಗೆ ದೊಡ್ಡ ಶಾಕ್ ನೀಡಿದೆ. ಮಂಗಳೂರು ಗಲಭೆ ನೆಪದಲ್ಲಿ ಪೊಲೀಸರು ಅಮಾಯಕರ ಮೇಲೆ ಹಲ್ಲೆ ಮಾಡಿದ್ದಾರೆ. ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾರೆ. ಈ ಹಿಂಸೆ ಅನುಭವಿಸಿದವರು ಪೊಲೀಸರ ವಿರುದ್ಧ ದೂರು ನೀಡಿದರೂ ಎಫ್‍ಐಆರ್ ದಾಖಲು ಮಾಡುತ್ತಿಲ್ಲ ಎಂದು ಆರೋಪಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಎಫ್‍ಐಆರ್ ದಾಖಲು ಮಾಡಲು ಆದೇಶಿಸಿದೆ.

    ನೊಂದವರು ಪೊಲೀಸರ ವಿರುದ್ಧ ದೂರನ್ನು ನೀಡಿದ್ದಾರೆ. 10 ದೂರುಗಳನ್ನು ನೀಡಿ ಪದೇ ಪದೇ ಆ ದೂರಿನ ಬಗ್ಗೆ ವಿಚಾರಣೆ ನಡೆಸಲು ಪೊಲೀಸ್ ಠಾಣೆಗೆ ಮತ್ತು ಮಂಗಳೂರು ಆಯುಕ್ತರ ಭೇಟಿಗೆ ತೆರಳಿದಾಗ ಸರಿಯಾದ ರೀತಿಯಲ್ಲಿ ಉತ್ತರ ನೀಡುತ್ತಾ ಇಲ್ಲ. ಈ ದೂರಿಗೆ ಕ್ರಮವನ್ನು ಪೊಲೀಸರು ಜರಗಿಸುತ್ತಿಲ್ಲ ಅಂತ ವಾದ ಮಾಡಿದ್ದರು. ಇದನ್ನ ಪರಿಶೀಲಿಸಿದ ನ್ಯಾಯಾಲಯ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಗೆ ಸೂಚಿಸಿದೆ.

  • ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ- ಸೋಮಶೇಖರ್ ರೆಡ್ಡಿ ವಿರುದ್ಧ ದೂರು

    ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ- ಸೋಮಶೇಖರ್ ರೆಡ್ಡಿ ವಿರುದ್ಧ ದೂರು

    ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರ ಕುರಿತು ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿರುದ್ಧ ರಾಯಚೂರಿನಲ್ಲಿ ದೂರು ನೀಡಲಾಗಿದೆ.

    ಸಂವಿಧಾನಿಕ ಹಕ್ಕು ನಾಗರೀಕ ಸಮಿತಿಯ ಮಾನಸಯ್ಯ ಎಂಬವರು ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಿಎಎ ವಿರೋಧಿ ಹೋರಾಟಗಾರರು ಸೋಮಶೇಖರ್ ರೆಡ್ಡಿ ಹೇಳಿಕೆ ಖಂಡಿಸಿ ಪೊಲೀಸ್ ಠಾಣೆ ಮಟ್ಟಿಲು ಹತ್ತಿದ್ದಾರೆ. ಸಿಎಎ ಪರ ಮೆರವಣಿಗೆಯಲ್ಲಿ ಸೋಮಶೇಖರ್ ರೆಡ್ಡಿ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದರು. ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಸಮರ್ಥಿಸಿಕೊಂಡು ಸಿಎಎ ವಿರೋಧಿಸುವವರ ವಿರುದ್ದ ಕಿಡಿಕಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

    ದೂರಿನಲ್ಲೇನಿದೆ?
    ನೀವು ಇರೋದು 17%. ಹಾಗಾಗಿ ನಾವು ಹೇಳಿದಂತೆ ಕೇಳಿಕೊಂಡಿರಿ. ಇಲ್ಲದಿದ್ದರೆ ನಿಮ್ಮನ್ನು ಉಳಿಸಲ್ಲ. ಮಚ್ಚು ಖಡ್ಗ ಹಿಡಿದು ರಣರಂಗ ಮಾಡ್ತೀವಿ. ನಮ್ಮ ಪದ್ಧತಿ ಪ್ರಕಾರ ಇರಬೇಕು. ಹೆಚ್ಚಿಗೆ ನಕರಾ ಮಾಡಿದರೆ ನಿಮ್ಮ ದೇಶಕ್ಕೆ ಕಳುಹಿಸಿಕೊಡಬೇಕಾಗುತ್ತದೆ. ಒಬ್ಬೊಬ್ಬ ಹಿಂದೂ ಒಬ್ಬೊಬ್ಬ ಶಿವಾಜಿ ತರಹ ಆಗಿ ಮಚ್ಚು ಹಿಡಿದುಕೊಂಡರೆ ರಣರಂಗ ಸೃಷ್ಟಿಯಾಗುತ್ತೆ. ಬಳ್ಳಾರಿ ದುರ್ಗಮ್ಮ ದರ್ಶನ ಮಾಡಿಕೊಂಡು ಖಡ್ಗ ಹಿಡಿದುಕೊಂಡರೆ ರಣರಂಗ ಸೃಷ್ಟಿಯಾಗುತ್ತದೆ ಎಂದು ಅಲ್ಲಿ ಸೇರಿದ್ದ ಸಾವಿರಾರು ಜನರನ್ನು ಭಾಷಣದ ಮೂಲಕ ಪ್ರಚೋದಿಸಿದ್ದಾರೆ. ಈ ಮೂಲಕ ಸಮಾಜದಲ್ಲಿ ಭಯೋತ್ಪಾದನೆ ಹರಡುವ ಸಂಘಟಿತ ಸಶಸ್ತ್ರ ದಾಳಿಗೆ ಸೋಮಶೇಕರರೆಡ್ಡಿ ಕರೆ ನೀಡಿದ್ದಾರೆ. ಅವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಂಡು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಅಂತ ದೂರಿನಲ್ಲಿ ಮನವಿ ಮಾಡಲಾಗಿದೆ.

    ರಾಯಚೂರಿನ ಸದರಬಜಾರ್ ಠಾಣೆ ಪೊಲೀಸರು ದೂರನ್ನ ಸ್ವೀಕರಿಸಿದ್ದು, ಇನ್ನೂ ಎಫ್ ಐ ಆರ್ ದಾಖಲಾಗಿಲ್ಲ.

  • ಪಿಎಫ್‍ಐ ಸಂಘಟನೆ ನಿಷೇಧಿಸುವಂತೆ ಗೃಹ ಸಚಿವಾಲಯಕ್ಕೆ ಪೊಲೀಸರಿಂದ ಪತ್ರ

    ಪಿಎಫ್‍ಐ ಸಂಘಟನೆ ನಿಷೇಧಿಸುವಂತೆ ಗೃಹ ಸಚಿವಾಲಯಕ್ಕೆ ಪೊಲೀಸರಿಂದ ಪತ್ರ

    – ಹಿಂಸಾಚಾರದಲ್ಲಿ ಪ್ರಮುಖ ಪಾತ್ರದ ಆರೋಪ
    – ಸಾಮಾಜಿಕ ಜಾಲತಾಣಗಳಿಂದ ಪ್ರಚೋದನೆ

    ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಸಂಘಟನೆಯನ್ನು ನಿಷೇಧಿಸುವಂತೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ.

    ಉತ್ತರ ಪ್ರದೇಶದಲ್ಲಿ ನಡೆದ ಭಾರೀ ಹಿಂಸಾಚಾದಲ್ಲಿ ಸಂಘಟನೆ ಪ್ರಮುಖ ಪಾತ್ರ ವಹಿಸಿದೆ ಎಂದು ಪೊಲೀಸರು ಆರೋಪಿಸಿದ್ದು, ಇದಕ್ಕೆ ಸೂಕ್ತ ದಾಖಲೆಗಳನ್ನು ಸಹ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪಿಎಫ್‍ಐ ಸಂಘಟನೆಯ ಕಾರ್ಯಕರ್ತರು ಹಿಂಸಾಚಾರ ನಡೆಸಿದ್ದಾರೆ. ಈ ಮೂಲಕ ಯುಪಿಯ ಹಿಂಸಾಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಗೆ ಕಾರಣರಾಗಿದ್ದಾರೆ ಎಂದು ಗೃಹ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಅಲ್ಲದೆ ಯುಪಿ ರಾಜಧಾನಿ ಲಕ್ನೋದಲ್ಲಿ ನಡೆದ ಹಿಂಸಾಚಾರದ ಮಾಸ್ಟರ್ ಮೈಂಡ್ ಪಿಎಫ್‍ಐ ಸಂಘಟನೆಯಾಗಿದೆ. ಸಿಎಎ ಕುರಿತು ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದೆ. ಈ ಕುರಿತು ಪಿಎಫ್‍ಐ ಮುಖ್ಯಸ್ಥ ಹಾಗೂ ಖಜಾಂಚಿ ಹಿಂಸಾಚಾರದಲ್ಲಿ ತಮ್ಮ ಪಾತ್ರವಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಿಎಫ್‍ಐ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ. ಅಲ್ಲದೆ ಸಿಕ್ಕ ಸಿಕ್ಕ ಕಡೆ ಬೆಂಕಿ ಹಚ್ಚುವಂತೆ ಭಾಗವಹಿಸಿದ್ದ ಪ್ರತಿಭಟನಾಕಾರರಿಗೆ ಪ್ರಚೋದನೆ ನೀಡಿರುವುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಹೀಗಾಗಿ ಯುಪಿ ಪೊಲೀಸರು ಸಿಎಎ ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ತೊಡಗಿದ ವಾಸಿಮ್, ನದೀಮ್ ಹಾಗೂ ಅಶ್ಫಾಕ್ ಮೂವರು ಪಿಎಫ್‍ಐ ಸದಸ್ಯರನ್ನು ಬಂಧಿಸಿದ್ದಾರೆ. ವಾಸಿಮ್ ಯುಪಿ ಪಿಎಫ್‍ಐ ಮುಖ್ಯಸ್ಥನಾಗಿದ್ದು, ಅಶ್ಫಾಕ್ ಖಜಾಂಚಿಯಾಗಿದ್ದಾನೆ. ನದೀಮ್ ಸಂಘಟನೆಯ ಕಾರ್ಯಕರ್ತನಾಗಿದ್ದಾನೆ.

    ತನಿಖೆ ವೇಳೆ ಪೊಲೀಸರು ಈ ಮೂವರಿಂದ ಸಿಎಎ ಪ್ರತಿಭಟನೆಗೆ ಸಂಬಂಧಿಸಿದ ಭಿತ್ತಿ ಪತ್ರಗಳು, ಬಾವುಟಗಳು, ಬರವಣಿಗೆ, ಪೋಸ್ಟರ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ನದೀಮ್ ಹಾಗೂ ಅಶ್ಫಾಕ್ ಅವರು ಈ ಕುರಿತು ತಪ್ಪೊಪ್ಪಿಕೊಂಡಿದ್ದು, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸಿಎಎ ವಿರುದ್ಧದ ಪ್ರತಿಭಟನೆಯ ಸಂದೇಶ ಕಳುಹಿಸುತ್ತಿದ್ದೆವು. ವಾಟ್ಸಪ್, ಟೆಲಿಗ್ರಾಂ ಬಳಸಿ ವಿಡಿಯೋ ಹಾಗೂ ಬರವಣಿಗೆ ಮೂಲಕ ಮಾಹಿತಿ ಹಂಚುತ್ತಿದ್ದೆವು ಎಂದು ತಿಳಿಸಿದ್ದಾರೆ.

    ಯುಪಿಯ ಶಾಮ್ಲಿಯಲ್ಲಿ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ತೊಡಗಿದ್ದ 14 ಪಿಎಫ್‍ಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಮೀರತ್‍ನಲ್ಲಿ ಸಹ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಿಎಎ ವಿರುದ್ಧ ನಡೆದ ಪ್ರತಿಭಟನೆ ವೇಳೆ ಒಟ್ಟು 20 ಜನ ಸಾವನ್ನಪ್ಪಿದ್ದು, ಇದರಲ್ಲಿ ಬಹುತೇಕರು ಉತ್ತರ ಪ್ರದೇಶದವರಾಗಿದ್ದಾರೆ. ಉತ್ತರ ಪ್ರದೇಶದ ಡಿಜಿಪಿ ಒ.ಪಿ.ಸಿಂಗ್ ಅವರು ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿ, ಪಿಎಫ್‍ಐ ಸಂಘಟನೆಯನ್ನು ನಿಷೇಧಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದೇವೆ ಎಂದು ಖಚಿತಪಡಿಸಿದ್ದಾರೆ.

    ಈ ಮಧ್ಯೆ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಪ್ರತಿಕ್ರಿಯಿಸಿ, ಪೊಲೀಸರು ಪಿಎಫ್‍ಐ ಬ್ಯಾನ್ ಮಾಡುವ ಕುರಿತು ದಾಖಲೆಗಳನ್ನು ಸಲ್ಲಿಸಿದ್ದು, ಅವುಗಳನ್ನು ಆಧರಿಸಿ ಕೇಂದ್ರ ಗೃಹ ಸಚಿವಾಲಯ ನಿರ್ಧಾರ ಕೈಗೊಳ್ಳಲಿದೆ. ಹಿಂಸಾಚಾರದಲ್ಲಿ ಪಿಎಫ್‍ಐ ಪಾತ್ರವಿರುವುದು ಕಂಡು ಬಂದಿದೆ. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಗೃಹ ಸಚಿವಾಲಯ ನಿರ್ಧಾರ ಕೈಗೊಳ್ಳಲಿದೆ. ಸಂಘಟನೆ ಕುರಿತು ಹಲವು ಆರೋಪಗಳಿದ್ದು, ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದೊಂದಿಗೆ ಸಂಪರ್ಕ ಹೊಂದಿತ್ತು ಎಂಬ ಆರೋಪ ಸಹ ಇದೆ ಎಂದು ತಿಳಿಸಿದ್ದಾರೆ.

  • ಗೋಲಿಬಾರ್ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ: ಮುಸ್ಲಿಂ ಸೆಂಟ್ರಲ್ ಕಮಿಟಿ

    ಗೋಲಿಬಾರ್ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ: ಮುಸ್ಲಿಂ ಸೆಂಟ್ರಲ್ ಕಮಿಟಿ

    ಮಂಗಳೂರು: ನಗರದಲ್ಲಿ ನಡೆದ ಗೋಲಿಬಾರ್ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ದಕ್ಷಿಣ ಕನ್ನಡ-ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ ಒತ್ತಾಯಿಸಿದೆ.

    ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಟಿಯ ಅಧ್ಯಕ್ಷ ಎಂ.ಕೆ.ಮಸೂದ್, ಮಂಗಳೂರಿನ ಗೋಲಿಬಾರ್ ಘಟನೆಗೆ ಕಾರಣ ಯಾರು ಎಂದು ಪ್ರಶ್ನಿಸಿದ್ದು, ಆವತ್ತು ಕಫ್ರ್ಯೂ ವಿಧಿಸಿ, ಫೈರಿಂಗ್ ಮಾಡಿದ್ದಾರೆ. ಕಫ್ರ್ಯೂ ವಿಧಿಸಿರುವ ಬಗ್ಗೆ ಜನರಿಗೆ ತಿಳಿಸದೇ ಫೈರ್ ಮಾಡಿದ್ದು ಯಾಕೆ? ಕಫ್ರ್ಯೂ ವಿಧಿಸಿದ್ದ ಬಗ್ಗೆ ಜನತೆಗೆ ಯಾವುದೇ ಮಾಹಿತಿ ನೀಡದ ಪೊಲೀಸರು ಗೋಲಿಬಾರ್ ನಡೆಸುವ ಬಗ್ಗೆಯೂ ಜನತೆಯನ್ನು ಎಚ್ಚರಿಸಿಲ್ಲ. ಹೀಗಾಗಿ ಈ ಘಟನೆಗೆ ಕಾರಣವಾದ ಅಧಿಕಾರಿಗಳನ್ನು ಶಿಕ್ಷಿಸಬೇಕು. ನಿಜವಾದ ವಿಚಾರ ಹೊರ ಬರಬೇಕಾದ್ರೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಸಿಎಎ ವಿರುದ್ಧ ಸೆಂಟ್ರಲ್ ಕಮಿಟಿಯಡಿ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಪ್ರತಿಭಟಿಸುತ್ತೇವೆ. ಕ್ರಿಸ್ಮಸ್ ಹಿನ್ನೆಲೆ ಡಿ.28ರಂದು ನಡೆಸಬೇಕಿದ್ದ ಪ್ರತಿಭಟನೆಯನ್ನು ಮುಂದೂಡಿಕೆ ಮಾಡಲಾಗಿದೆ. ಜ.4 ರಂದು ಪೊಲೀಸ್ ಅನುಮತಿ ಪಡೆದು ಪ್ರತಿಭಟಿಸುತ್ತೇವೆ. ಪ್ರತಿಭಟಿಸಲು ಖಂಡಿತವಾಗಿಯೂ ಪ್ರಜಾಪ್ರಭುತ್ವದಲ್ಲಿ ಆಸ್ಪದವಿದೆ. ಹೀಗಾಗಿ ಅನುಮತಿ ಸಿಗುವ ನಂಬಿಕೆ ಇದೆ ಎಂದರು. ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರು ಮತ್ತು ಗಾಯಾಳು ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು. ಈಗ ಸರ್ಕಾರ ಮೃತರ ಕುಟುಂಬಸ್ಥರಿಗೆ ಘೋಷಿಸಿದ 10 ಲಕ್ಷ ರೂ. ಅವರ ಸಂಸಾರ ನಿರ್ವಹಣೆಗೆ ಸಾಕಾಗೋದಿಲ್ಲ. ಹೀಗಾಗಿ ಹೆಚ್ಚಿನ ಪರಿಹಾರ ಸರ್ಕಾರ ಘೋಷಿಸಬೇಕು. ಮೃತರ ಕುಟುಂಬದ ಓರ್ವರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಎಂ.ಕೆ.ಮಸೂದ್ ಆಗ್ರಹಿಸಿದರು.

  • ಭಟ್ಕಳದಲ್ಲಿ ಪೌರತ್ವ ವಿರೋಧಿ ಹೋರಾಟ

    ಭಟ್ಕಳದಲ್ಲಿ ಪೌರತ್ವ ವಿರೋಧಿ ಹೋರಾಟ

    ಕಾರವಾರ: ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ವಿರೋಧಿಸಿ ಭಟ್ಕಳದಲ್ಲಿ ತಂಜೀಂ ಸಂಸ್ಥೆ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ಭಟ್ಕಳದಾದ್ಯಾಂತ ಇಂದು ಸಂಜೆಯಿಂದಲೇ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

    ಜಿಲ್ಲೆಯಲ್ಲಿ 144 ಸೆಕ್ಷನ್ ಇದ್ದ ಕಾರಣ ಸಂಘಟನೆ ಕರೆದಿದ್ದ ಪ್ರತಿಭಟನೆಗೆ ಅವಕಾಶವನ್ನು ನಿರಾಕರಿಸಲಾಗಿತ್ತು. ಶನಿವಾರದಿಂದ ಕಲಂ 144 ಸಡಿಲಿಕೆ ಮಾಡಿದ್ದು ಸೋಮವಾರ ಪ್ರತಿಭಟನೆ ನಡೆಸಲು ಪೊಲೀಸ್ ಇಲಾಖೆ ಷರತ್ತುಬದ್ಧ ಪರವಾನಿಗೆ ನೀಡಿದೆ.

    ಮಂಗಳೂರಿನಂತೆ ಅಹಿತಕರ ಘಟನೆ ಆಗದಂತೆ ಭಟ್ಕಳ ನಗರದ ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಿದೆ. ಆರು ಡಿ.ಆರ್, ಮೂರು ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜನೆ ಮಾಡಿದ್ದು, 500 ಪೊಲೀಸರನ್ನು ನಗರದಾದ್ಯಂತ ಇಂದು ಸಂಜೆಯಿಂದ ನಿಯೋಜನೆ ಮಾಡಲಾಗಿದೆ. ಪ್ರತಿಭಟನೆಯು ಭಟ್ಕಳ ನಗರದ ಅಂಜಮನ್ ಗ್ರೌಂಡ್ ನಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಗ್ರೌಂಡ್ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿಭಟನೆಯು ಕೇವಲ ಭಟ್ಕಳದಲ್ಲಿ ಅಲ್ಲದೇ ಜಿಲ್ಲೆಯ ದಾಂಡೇಲಿಯಲ್ಲಿ ಸಹ ನಡೆಯಲಿದೆ. ದಾಂಡೇಲಿ ಸಂವಿಧಾನ ಬಚಾವ್ ಆಂದೋಲನ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

    ಪ್ರತಿಭಟನೆಗೆ ಅವಕಾಶ ನೀಡುವಂತೆ ತಂಜೀಂ ಸಂಘಟನೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಕೋರಿತ್ತು. ಒಂದು ವೇಳೆ ಪರವಾನಗಿ ದೊರೆಯದಿದ್ದರೂ ಭಟ್ಕಳದಲ್ಲಿ ಸೋಮವಾರ ಪ್ರತಿಭಟನೆ ನಡೆಸುತ್ತೇವೆ ಎಂದು ತಂಜೀಂ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಭಟ್ಕಳಕ್ಕೆ ಭೇಟಿ ನೀಡಿ ತಂಜಿಂ ಸಂಘಟನೆಗೆ ಷರತ್ತುಬದ್ಧ ಅನುಮತಿ ನೀಡಿದ್ದು ಒಂದು ವೇಳೆ ಅಹಿತಕರ ಘಟನೆ ನಡೆದರೆ ಸಂಘಟನೆಯೇ ಹೊಣೆ ಎಂದು ಷರತ್ತು ವಿಧಿಸಿದ್ದಾರೆ.

  • ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆ- 400 ಮೀಟರ್ ಉದ್ದದ ನಾಡಧ್ವಜದ ರಂಗು

    ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆ- 400 ಮೀಟರ್ ಉದ್ದದ ನಾಡಧ್ವಜದ ರಂಗು

    ರಾಮನಗರ: ಪೌರತ್ವ ತಿದ್ದುಪಡಿ ವಿರೋಧಿಸಿ ಬೊಂಬೆ ನಗರಿ ಚನ್ನಪಟ್ಟಣದಲ್ಲಿ ಮುಸ್ಲಿಂ ಹಾಗೂ ಹಿಂದುಗಳು ಜಾತ್ಯಾತೀತವಾಗಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ 400 ಮೀಟರ್ ಉದ್ದದ ಕನ್ನಡದ ಬಾವುಟ ರಂಗು ಪಡೆದುಕೊಂಡು ಪ್ರತಿಭಟನೆ ರ್ಯಾಲಿಯುದ್ದಕ್ಕೂ ಸಾಗಿತು.

    ನಗರದ ಬೆಂಗಳೂರು- ಮೈಸೂರು ರಸ್ತೆಯ ಶೇರು ಸರ್ಕಲ್ ನಿಂದ ಆರಂಭವಾದ ಪ್ರತಿಭಟನೆಯಲ್ಲಿ ಸಾವಿರಾರು ಪ್ರತಿಭಟನಾಕಾರರು ಭಾಗಿಯಾಗಿದ್ದರು. ಇನ್ನೂ ಶೇರು ಸರ್ಕಲ್ ನಿಂದ ಹೊರಟ ಪ್ರತಿಭಟನಾ ರ್ಯಾಲಿ ಹೆದ್ದಾರಿಯಲ್ಲಿ ಸಾಗಿ ಸಾತನೂರು ಸರ್ಕಲ್ ನಿಂದ ಹಳೇ ಕೋರ್ಟ್ ತನಕ ಸಾಗಿತು. ಪ್ರತಿಭಟನಾಕಾರರು ದಾರಿಯುದ್ದಕ್ಕೂ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

    ಶೇರು ಸರ್ಕಲ್ ನಿಂದಲೇ ಕನ್ನಡದ ಬಾವುಟವನ್ನು ಪ್ರತಿಭಟನಾಕಾರರು ಹಿಡಿದುಕೊಂಡು ಸಾಗಿದ್ರು. ಬರೋಬ್ಬರಿ 400 ಮೀಟರ್ ಗೂ ಉದ್ದವಾದ ಬಾವುಟವು ಪ್ರತಿಭಟನೆಯಲ್ಲಿ ಆಕರ್ಷಣೀಯವಾಗಿತ್ತು. ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಗುಲಾಬಿ ನೀಡುವ ಮೂಲಕ ಹಿಂದೂ- ಮುಸ್ಲಿಂ ಭಾಯ್ ಭಾಯ್ ಎಂದು ಘೋಷಣೆ ಕೂಗುತ್ತಿದ್ದರು.

    ಪ್ರತಿಭಟನೆಯಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಜಮೀರ್ ಅಹಮದ್ ಖಾನ್ ಭಾಗವಹಿಸಿದ್ದರು. ಅಲ್ಲದೇ ರ್ಯಾಲಿಯಲ್ಲಿ ಭಾಗವಹಿಸಿ ಪ್ರತಿಭಟನಾಕಾರರ ಜೊತೆ ನಡೆದು ಸಾಗಿದ್ದಲ್ಲದೇ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರನ್ನು ಹುರಿದುಂಬಿಸಿದರು.

    ಇದೇ ವೇಳೆ ಮಾತನಾಡಿದ ಶಾಸಕ ಜಮೀರ್ ಅಹಮದ್, ಕೇಂದ್ರ ಸರ್ಕಾರ ಎನ್‍ ಆರ್ ಸಿ, ಸಿಎಎ ತರುವ ಮೂಲಕ ದೇಶದಲ್ಲಿ ಮುಸ್ಲಿಮರ ವಿರೋಧಿ ನೀತಿಯನ್ನು ತಾಳುತ್ತಿದೆ. ದೇಶದಲ್ಲಿ ಹಿಂದೂ ಮುಸ್ಲಿಮರು ಭಾವೈಕ್ಯತೆಯಿಂದ ಬಾಳ್ವೆ ನಡೆಸುತ್ತಿದ್ದು ತಮ್ಮ ಬೇಳೆ ಬೇಯಿಸಿಕೊಳ್ಳಲು ಪೌರತ್ವ ಕಾಯ್ದೆ ತಿದ್ದುಪಡಿ ನಡೆಸುತ್ತಿದ್ದಾರೆ. ಬಿಜೆಪಿ ಆಡಳಿತ ವೈಫಲ್ಯವನ್ನ ಮುಚ್ಚಿಟ್ಟುಕೊಳ್ಳಲು ಈ ರೀತಿಯಾಗಿ ಜನರ ದಾರಿಯನ್ನ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

  • ಹತ್ತು ಮಂದಿ ಬಲಿ ಪಡೆದ CAA ಪ್ರತಿಭಟನೆ

    ಹತ್ತು ಮಂದಿ ಬಲಿ ಪಡೆದ CAA ಪ್ರತಿಭಟನೆ

    ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು ಹತ್ತು ಮಂದಿಯನ್ನು ಬಲಿ ಪಡೆದುಕೊಂಡಿದೆ. ನಿನ್ನೆಯಿಂದ ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು ಘಟನೆಯಲ್ಲಿ ಹತ್ತು ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

    ಫಿರೋಝ್ ಬಾದ್, ಕಾನ್ಪುರ್, ಬಿಜ್ನೋರ್, ಸಂಬಾಲ್, ಮೀರಠ್ ನಲ್ಲಿ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಯೋಗಿ ಆದಿತ್ಯನಾಥ್ ವದಂತಿಗಳಿಗೆ ಕಿವಿಗೊಡದೆ ಕಾನೂನು ಕೈಗೆತ್ತಿಕೊಳ್ಳದೆ ಶಾಂತಿ ಕಾಪಡುವಂತೆ ಮನವಿ ಮಾಡಿದ್ದಾರೆ.

    ಸುಳ್ಳು ಸುದ್ದಿ ಹಬ್ಬುವವರನ್ನ ಹಿಂಸಾತ್ಮಕ ಪ್ರತಿಭಟನೆ ಮಾಡುವುವರನ್ನ ಜನರ ದಾರಿ ತಪ್ಪಿಸುವ ಗುಂಪುಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶದ ಪೊಲೀಸರಿಗೆ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.

    ಈ ಮಧ್ಯೆ, ಯಾವೊಬ್ಬ ಪ್ರತಿಭಟನಾಕಾರನೂ ಪೊಲೀಸರ ಗುಂಡಿಗೆ ಬಲಿಯಾಗಿಲ್ಲ ಎಂದು ಉತ್ತರ ಪ್ರದೇಶ ಡಿಜಿಪಿ ಒ.ಪಿ.ಸಿಂಗ್ ಹೇಳಿದ್ದಾರೆ. ಒಂದೇ ಒಂದು ಬಾರಿಯೂ ನಾವು ಶೂಟ್ ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಗುಂಡಿನ ದಾಳಿ ನಡೆದಿದೆ ಎಂದಾಗಿದ್ದಲ್ಲಿ ಅದು ಪ್ರತಿಭಟನಾಕಾರರ ಕಡೆಯಿಂದಲೇ ಆಗಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

    ಶುಕ್ರವಾರ ಲಕ್ನೊ, ವಾರಾಣಾಸಿ, ಬರೋಲಿ, ಗೋರಕಪುರ್, ಬದೋಹಿ, ಸಂಬಾಲ್ ನಲ್ಲಿ ಪೊಲೀಸ್ ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

  • CAA ವಿರೋಧಿಸಿ ಪ್ರತಿಭಟನೆ – SIT ತನಿಖೆಗೆ ಮುಂದಾದ ಸರ್ಕಾರ

    CAA ವಿರೋಧಿಸಿ ಪ್ರತಿಭಟನೆ – SIT ತನಿಖೆಗೆ ಮುಂದಾದ ಸರ್ಕಾರ

    ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಸಂಧರ್ಭದಲ್ಲಿ ನಡೆದ ಹಿಂಸಾತ್ಮಕ ಘಟನೆಗಳನ್ನು ತನಿಖೆ ನಡೆಸಲು ಅಸ್ಸಾಂ ಸರ್ಕಾರ ಮುಂದಾಗಿದೆ. ಈ ಸಂಬಂಧ ವಿಶೇಷ ತನಿಖಾ ತಂಡವನ್ನು ರಚಿಸಿರುವ ಸಿಎಂ ಸರ್ಬಾನಂದ ಸೋನೊವಾಲ್ ಹಿಂಸಾಚಾರದಲ್ಲಿ ಭಾಗಿಯಾಗಿ ಶಾಂತಿ ಕದಡಿದವರನ್ನ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

    ಅಸ್ಸಾಂ ಜನರೊಂದಿಗೆ ಉಳಿಯಲಿದೆ ಇದಕ್ಕಾಗಿ ನಾವು ಯಾವ ಶಾಸನಗಳನ್ನು ಬೇಕಾದರು ಜಾರಿಗೆ ತರುತ್ತೇವೆ. ಅಸ್ಸಾಂ ಒಪ್ಪಂದ ಆರನೇ ಷರತ್ತು ಜಾರಿಗೆ ತರಲು ಎಲ್ಲ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೀಡಿದ್ದಾರೆ ಎಂದು ಸಿಎಂ ಸರ್ಬಾನಂದ ಸೋನೊವಾಲ್ ಅಸ್ಸಾಂ ಜನರಿಗೆ ಅಭಯ ನೀಡಿದ್ದಾರೆ.

    ಶುಕ್ರವಾರದಿಂದ ಇಂಟರ್ನೆಟ್ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳ ಮೇಲೆ ಸರ್ಕಾರ ನಿಗಾ ವಹಿಸಿದ್ದು ಶಾಂತಿ ಕದಡುವ ಪೋಸ್ಟ್ ಹಾಕುವ ಮುನ್ನ ಎಚ್ಚರಿಕೆ ಇರಲಿ, ಜನರು ಜಾಗರೂಕರಾಗಿ ಎಂದು ಮನವಿ ಮಾಡಿದ್ದಾರೆ.

    ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೊಸ್ಟ್ ಶೇರ್ ಮಾಡುವ ಮುನ್ನ ಎಚ್ಚರಿಕೆ ಇರಲಿ ಶಾಂತಿ ಸುವ್ಯವಸ್ಥೆ ಕದಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಸ್ಸಾಂ ಪೊಲೀಸ್ ಟ್ವೀಟ್ ಮಾಡಿದ್ದಾರೆ.

    CAA ವಿರೋಧಿಸಿ ಅಸ್ಸಾಂನಲ್ಲಿ ಬೃಹತ್ ಪ್ರತಿಭಟನೆಗಳು ನಡೆದು ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು ಈ ವೇಳೆ ಸಾಕಷ್ಟು ಆಸ್ತಿ-ಪಾಸ್ತಿ ಹಾನಿಯಾಗಿತ್ತು ಈ ಹಿನ್ನೆಲೆ 24 ಗಂಟೆಗಳ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಶುಕ್ರವಾರ ಗುವಾಹಟಿ ಹೈಕೋರ್ಟ್ ಸೂಚನೆ ಹಿನ್ನೆಲೆ ಇಂಟರ್ನೆಟ್ ಸಂಪರ್ಕ ನೀಡಲಾಗಿದೆ.

  • ಸಿಎಎ ವಿರುದ್ಧ ಪ್ರತಿಭಟನೆ- ಮುಸ್ಲಿಮರಿಗೆ ಸಿಎಂ ಅಭಯ

    ಸಿಎಎ ವಿರುದ್ಧ ಪ್ರತಿಭಟನೆ- ಮುಸ್ಲಿಮರಿಗೆ ಸಿಎಂ ಅಭಯ

    – ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
    – ಕಾಂಗ್ರೆಸ್ ನಾಯಕರಿಗೆ ಸಿಎಂ ಎಚ್ಚರಿಕೆ

    ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲೂ ಪ್ರತಿಭಟನೆ, ಮುಷ್ಕರಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದಿನಿಂದ ಮೂರು ದಿನಗಳ ಕಾಲ ಸೆಕ್ಷನ್ 144 ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಮುಖ್ಯಮಂತ್ರಿಗಳು ಬೆಳ್ಳಂಬೆಳಗ್ಗೆ ಮಹತ್ವದ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು.

    ಮುಖ್ಯಮಂತ್ರಿಗಳ ಡಾಲರ್ಸ್ ಕಾಲೋನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು, ಗುಪ್ತಚರ ವಿಭಾಗದ ಎಡಿಜಿಪಿ ಕಮಲ್ ಪಂತ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪಾಲ್ಗೊಂಡಿದ್ದರು. ಸುಮಾರು ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

    ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ನೀಡಿದ ಸೂಚನೆಗಳು:
    * ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿ ಕ್ರಮ ವಹಿಸಬೇಕು.
    * ಪ್ರತಿಭಟನೆ ನಡೆಯುವ ಸ್ಥಳಗಳಲ್ಲಿ ಸೂಕ್ತ ಮತ್ತು ಹೆಚ್ಚು ಭದ್ರತೆ ಕೊಡಬೇಕು.
    * ಪ್ರತಿಭಟನೆ ಹೆಸರಲ್ಲಿ ಶಾಂತಿ ಕದಡುವರ ಬಗ್ಗೆ ಎಚ್ಚರ ವಹಿಸಬೇಕು.
    * ಅಂತಹವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಬೇಕು.
    * ಈಗಾಗಲೇ ಪೌರತ್ವದಿಂದ ಬೇರೆ ರಾಜ್ಯಗಳಲ್ಲಿ ಪ್ರತಿಭಟನೆ ಆಗ್ತಿದೆ. ನಮ್ಮ ರಾಜ್ಯದಲ್ಲಿ ಆ ರೀತಿಯ ವಾತಾವರಣ ಸೃಷ್ಟಿ ಆಗೋದು ಬೇಡ.
    * ಈ ನಿಟ್ಟಿನಲ್ಲಿ ಜಾಗರೂಕತೆಯಿಂದ ಕ್ರಮ ವಹಿಸಬೇಕು.
    * ಎಲ್ಲ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಬೇಕು.
    * ಈ ಮೂರು ದಿನಗಳಲ್ಲಿ ಕಾನೂನು ಕ್ರಮಗಳ ಬಗ್ಗೆ ನಿತ್ಯ ಎರಡು ಬಾರಿ ವರದಿ ಕೊಡಬೇಕು.

    ಸಿಎಂ ಅಭಯ: ಸಿಎಎ ಕಾಯ್ದೆ ವಿರೋಧಿಸುತ್ತಿರುವ ರಾಜ್ಯದ ಮುಸಲ್ಮಾನ ಸಮುದಾಯಕ್ಕೆ ಮುಖ್ಯಮಂತ್ರಿಗಳು ಅಭಯ ನೀಡಿದ್ದಾರೆ. ತಮ್ಮ ನಿವಾಸದ ಎದುರು ಮಾತಾಡಿದ ಮುಖ್ಯಮಂತ್ರಿಗಳು ಸಿಎಎ ಕಾಯ್ದೆಯಿಂದ ಮುಸ್ಲಿಮರಿಗೆ ಯಾವುದೇ ತರಹದ ಸಮಸ್ಯೆ ಆಗುವುದಿಲ್ಲ. ಮುಸ್ಲಿಮರು ಕಾಯ್ದೆಯಿಂದಾಗಿ ಆತಂಕ ಪಡುವ ಅಗತ್ಯ ಇಲ್ಲ. ರಾಜ್ಯದ ಮುಸ್ಲಿಮರ ರಕ್ಷಣೆ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

    ಈ ಮೂಲಕ ಸಿಎಂ, ಮುಸ್ಲಿಂ ಸಮುದಾಯದಲ್ಲಿ ಮನೆ ಮಾಡಿರುವ ಅನುಮಾನ, ಆತಂಕಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು. ಇದೇ ವೇಳೆ ಪ್ರತಿಭಟನೆ ಹಿಂದೆ ಕಾಂಗ್ರೆಸ್ ನಾಯಕರ ಕಿತಾಪತಿ, ಕೈವಾಡಗಳಿವೆ. ಕಾಂಗ್ರೆಸ್ ನಾಯಕರು ಪ್ರತಿಭಟನೆಗೆ ಪ್ರಚೋದನೆ ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳು ನೇರವಾಗಿ ಎಚ್ಚರಿಕೆ ನೀಡಿದರು.