Tag: ಸಿಎಎ ಜಾಗೃತಿ

  • ಎಲ್ಲೇ ಸಿಎಎ ವಿರುದ್ಧ ಗಲಾಟೆಯಾದ್ರೂ ಎಸ್‍ಡಿಪಿಐ ಹೆಸರು ಹೇಳ್ತಾರೆ: ಮುಜಾಹೀದ್ದಿನ್ ಪಾಷ

    ಎಲ್ಲೇ ಸಿಎಎ ವಿರುದ್ಧ ಗಲಾಟೆಯಾದ್ರೂ ಎಸ್‍ಡಿಪಿಐ ಹೆಸರು ಹೇಳ್ತಾರೆ: ಮುಜಾಹೀದ್ದಿನ್ ಪಾಷ

    ಬೆಂಗಳೂರು: ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿ ಸೂರ್ಯ ಕೊಲೆಗೆ ಸ್ಕೆಚ್ ಹಾಕಿದ್ದ ಆರೋಪಿಗಳು ಎಸ್‍ಡಿಪಿಐ ಕಾರ್ಯಕರ್ತರು ಎಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಅವರು ಯಾರಾದರೂ ಕಾನೂನಿನ ರೀತಿಯ ಕ್ರಮ ಕೈಗೊಳ್ಳಬೇಕು. ಆದರೆ ಸಿಎಎ ಹಾಗೂ ಎನ್.ಸಿ.ಆರ್ ವಿಚಾರವಾಗಿ ಎಲ್ಲೇ ಗಲಾಟೆ ನಡೆದರೂ ಅದು ಎಸ್‍ಡಿಪಿಐ ಅವರು ಮಾಡಿದ್ದು ಎಂದು ಹೇಳುತ್ತಾರೆ ಎಂದು ಎಸ್‍ಡಿಪಿಐ ಪಕ್ಷದ ಬಿಬಿಎಂಪಿ ಸದಸ್ಯ ಮುಜಾಹೀದ್ದಿನ್ ಪಾಷ ಬೇಸರ ವ್ಯಕ್ತಪಡಿಸಿದ್ದಾರೆ.

    ಇದು ರಾಜಕೀಯ, ನಮ್ಮ ಪಕ್ಷದವರು, ಸಂಘಟನೆಯವರು ಈ ರೀತಿ ಯಾವುದೇ ಕೆಲಸದಲ್ಲಿ ಭಾಗಿಯಾಗಿಲ್ಲ. ವರುಣ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿರುವುದು ಯಾರು ಎಂದು ನಮಗೆ ಗೊತ್ತಿಲ್ಲ. ಈಗಾಗಲೇ ನಾನು ಅವರು ನಮ್ಮ ಸಂಘಟನೆಯ ಕಾರ್ಯಕರ್ತರಾ, ಅಲ್ವಾ ಎಂದು ಹೇಳಲು ಆಗುವುದಿಲ್ಲ. ನನಗೆ ಅವರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಬಿಜೆಪಿ ಮತ್ತು ಆರ್.ಎಸ್.ಎಸ್ ಅವರು ಸ್ವಾತಂತ್ರ್ಯ ಬಂದಾಗಿನಿಂದ ಯಾವೆಲ್ಲಾ ಒಳ್ಳೆಯ ಕೆಲಸ ಮಾಡಿದ್ದಾರೆ ಎಂಬುವುದು ಜನರಿಗೆ ತಿಳಿದಿದೆ ಎಂದು ಹೇಳಿದರು.

    ನಮ್ಮ ಪಕ್ಷದ ಮೇಲೆ ಬೇಕು ಎಂದೇ ಷಡ್ಯಂತ್ರ ಮಾಡುತ್ತಿದ್ದಾರೆ. ನಾವೂ ಯಾರಿಗೂ ಸಮಾಜ ದ್ರೋಹಿ ಕೆಲಸಕ್ಕೆ ತರಬೇತಿ ನೀಡಿಲ್ಲ. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು ಎಂದರು. ಇದನ್ನು ಓದಿ: ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ: ಸೂಲಿಬೆಲೆ

  • ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ: ಸೂಲಿಬೆಲೆ

    ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ: ಸೂಲಿಬೆಲೆ

    ಬೆಂಗಳೂರು: ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ, ನಾವು ಕಾಳಿಯನ್ನು ಪೂಜೆ ಮಾಡುವವರು ಸಾವಿಗೆ ಹೆದರಲ್ಲ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ಮೇಲೆ ಕೊಲೆಯ ರೂಪಿಸಿದ ಸಂಚು ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಆರೋಪಿಗಳ ಎಲ್ಲಾ ಪ್ರಯತ್ನ ಕೂಡ ಶೇಕಡ 100ರಷ್ಟು ವ್ಯರ್ಥ ಪ್ರಯತ್ನ. ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ. ಕಾಳಿಯನ್ನು ಅಂದರೆ ಮೃತ್ಯು ದೇವತೆಯನ್ನು ಪೂಜೆ ಮಾಡಿ ಬಂದು ಕುಳಿತ ನಮಗೆ ಮೃತ್ಯವಿನ ಹೆದರಿಕೆ ಖಂಡಿತವಾಗಿಯೂ ಇಲ್ಲ. ಈ ರಾಷ್ಟ್ರವನ್ನು ಕಟ್ಟುವಂತ ಕೆಲಸವನ್ನು ನಾವು ಮಾಡುತ್ತೇವೆ. ಅವರು ಏನೇ ಮಾಡಿದರೂ ಬಗ್ಗುವ ಜೀವ ನಮ್ಮದಲ್ಲ ಎಂದು ಆರೋಪಿಗಳಿಗೆ ಹೇಳಲು ನಾನು ಇಚ್ಛಿಸುತ್ತೇನೆ ಅಂತ ಪ್ರತಿಕ್ರಯಿಸಿದರು.

    ಸಿಎಎ ಪರ ಜನಜಾಗೃತಿ ವೇಳೆ ದೊಡ್ಡ ಗಾತ್ರದ ಕಲ್ಲು ಬಂದು ನನ್ನ ಮೇಲೆ ಬಿತ್ತು. ಇಷ್ಟೆಲ್ಲ ಜನರ ನಡುವೆ ಗುರಿಯಿಟ್ಟು ನನಗೆ ಹೊಡೆಯಲು ಅವರಿಗೆ ಸಾಧ್ಯವಾಯ್ತಲ್ಲ ಎನ್ನುವುದೇ ಆಶ್ಚರ್ಯಕರ ಸಂಗತಿ. ನನ್ನ ಪ್ರಕಾರ ಆರೋಪಿಗಳು ಮೊದಲೇ ತಯಾರಿ ನಡೆಸಿಕೊಂಡು ಬಂದಿದ್ದರು. ಆದರೆ ಅಂದು ನನಗೆ ಏನೂ ಮಾಡಲು ಆಗಲಿಲ್ಲ ಎಂದು ಕಲ್ಲು ಹೊಡೆದಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರಿಗೆ ತಿಳಿಸಿದ್ದೆ. ಅವರು ನನಗೆ ಸಹಕರಿಸಿ ನನ್ನ ಮನೆ, ಕಚೇರಿಗೆ ಭದ್ರತೆ ಒದಗಿಸಿದ್ದರು. ಅವರಿಗೆ ಧನ್ಯವಾದ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

    ಕೊಲ್ಲಬೇಕೆನ್ನುವ ಮಾನಸಿಕತೆ ಇರುವುದು ಕ್ರಿಮಿನಲ್ ಸಂಗತಿ. ಇಂತಹ ಮನಸ್ಥಿತಿ ಇರುವವರನ್ನು ನಿಷೇಧಿಸುವುದು ಖಂಡಿತವಾಗಿಯು ಅಗತ್ಯವಾಗಿದೆ. ಅವರನ್ನು ಇಲ್ಲಿ ಬೀಡುಬಿಡಲು ಅವಕಾಶ ನೀಡಬಾರದು. ಕರ್ನಾಟಕ ತುಂಬಾ ಶಾಂತಿಯುತವಾದ ಸುಂದರ ಜಾಗ. ಯಾವುದಕ್ಕೂ ನಾವು ನಮ್ಮ ರಾಜ್ಯವನ್ನು ಕ್ರಿಮಿನಲ್ ಮನಸ್ಥಿತಿ ಇರುವವರ ನಾಡಾಗಲು ಬಿಡಬಾರದು. ಕಳೆದ ಮೂರ್ನಾಲ್ಕು ದಿನಗಳಿಂದ ನಾನು ವರದಿಗಳನ್ನು ನೋಡುತ್ತಿದ್ದೇನೆ. ಈ ರೀತಿ ಕೃತ್ಯಗಳಿಗೆ ಮೈಸೂರು, ಮಂಗಳೂರು, ಉಡುಪಿ ಹೀಗೆ ರಾಜ್ಯದ ಹಲವು ನಗರಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ. ಈ ಹೊಸ ಸರ್ಕಾರ ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಅವರನ್ನು ಮಟ್ಟಹಾಕಬೇಕು. ಯಾವುದೇ ಕಾರಣಕ್ಕೂ ಅವರನ್ನು ಇಲ್ಲಿ ಬೀಡುಬಿಡಲು ಅವಕಾಶ ನೀಡಬಾರದು ಎಂದು ಸೂಲಿಬೆಲೆ ಸರ್ಕಾರಕ್ಕೆ ಮನವಿ ಮಾಡಿದರು.

    ಇದು ಕೊಲೆಯ ಮಾನಸಿಕತೆ. ಪ್ರತಿಭಟನೆ ಎನ್ನುವುದು ಕೇವಲ ಪ್ರತಿಭಟನೆ ಅಷ್ಟೇ. ಆದರೆ ಅದನ್ನು ಕೊಲೆ ಮಾಡುವ ಮಟ್ಟಕ್ಕೆ ತೆಗೆದುಕೊಂಡು ಹೋಗೋದು ಒಂದು ಕೆಟ್ಟ ಪ್ರಯತ್ನ, ಹುಚ್ಚುತನ. ಈ ರೀತಿ ಪ್ರಯತ್ನವನ್ನು ಬುಡದಿಂದಲೇ ಚಿವುಟಿ ಹಾಕಬೇಕು. ನನ್ನ ಪ್ರಕಾರ ದೇಶವನ್ನು ತುಂಡರಿಸಿ ಆದರೂ ಅಧಿಕಾರ ಪಡೆಯಬೇಕು ಎಂದು ಆಲೋಚಿಸುವವರು ನೀಚರು. ಅಧಿಕಾರಕ್ಕಾಗಿ ಈ ರೀತಿ ಕೊಲೆ ಯತ್ನಕ್ಕೆ ಪ್ರಯತ್ನಿಸುವವರು ಕೊಲೆ ಮಾಡುವವರಿಗಿಂತ ನೀಚರು. ಈ ರೀತಿ ನೀಚ ಪ್ರಯತ್ನ ಮಾಡಬಾರದಿತ್ತು. ಆದರೆ ಇನ್ನಾದರೂ ಇವರೆಲ್ಲ ತಿದ್ದುಕೊಂಡು ರಾಷ್ಟ್ರದ ಕುರಿತು ಕೆಲಸ ಮಾಡಲು ಮುಂದಾದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ನಾನು ಘಟನೆ ನಡೆದ ದಿನ ಸುಮಾರು 10:30ರ ಹೊತ್ತಿಗೆ ಟೌನ್‍ಹಾಲ್‍ಗೆ ಬಂದೆ. ಆದರೆ ಅಲ್ಲಿನ ಮೆಟ್ಟಿಲ ಬಳಿ ಹೋಗದೇ ನೆರೆದಿದ್ದ ಜನರ ನಡುವೆ ಕುಳಿತೆ. ನಾನು ಅಲ್ಲಿ ಕುಳಿತ 10ರಿಂದ 15 ನಿಮಿಷ ಆಸುಪಾಸಿಗೆ ನನ್ನ ಮೇಲೆ ಕಲ್ಲು ಬಿತ್ತು. ಸುಮಾರು 50 ಅಡಿ ಅಂತರದಿಂದ ಕಲ್ಲು ಬಿದ್ದಿತ್ತು. ಆರೋಪಿಗಳು ನಮ್ಮವರ ನಡುವೆ ಇದ್ದುಕೊಂಡು ಪ್ಲಾನ್ ಮಾಡಿ ಈ ರೀತಿ ಮಾಡಿದ್ದಾರೆ. ಆದರೆ ಕೊಲ್ಲುವವರಿಗಿಂತ ಕಾಯುವವನು ದೊಡ್ಡವನು. ಇಂತಹ ನೂರಾರು ಎಸ್‍ಡಿಪಿಐ(ಸೊಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ)ಗಳನ್ನ ಭಾರತ ನೋಡಿದೆ. ಅವರನ್ನೆಲ್ಲಾ ಮೆಟ್ಟಿ ನಿಲ್ಲುವ ಶಕ್ತಿ ಭಾರತಕ್ಕಿದೆ ಎಂದು ಸೂಲಿಬೆಲೆ ಹೇಳಿದರು.

  • ಯಾರನ್ನೂ ಓಲೈಸುವ ಅಗತ್ಯವಿಲ್ಲ, ಹಲ್ಲೆ ಮಾಡಿದವ್ರ ಮೇಲೆ ಕಠಿಣ ಕ್ರಮ: ಜೋಶಿ

    ಯಾರನ್ನೂ ಓಲೈಸುವ ಅಗತ್ಯವಿಲ್ಲ, ಹಲ್ಲೆ ಮಾಡಿದವ್ರ ಮೇಲೆ ಕಠಿಣ ಕ್ರಮ: ಜೋಶಿ

    ಕೊಪ್ಪಳ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಕರಪತ್ರ ಹಂಚಲು ಮುಂದಾದ ಬಿಜೆಪಿ ನಾಯಕರ ಮೇಲೆ ಯುವಕರ ಗುಂಪು ಹಲ್ಲೆಗೆ ಯತ್ನಿಸಿದ ಘಟನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಯುವಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

    ರಾಯಚೂರಿಗೆ ತೆರಳುವ ಮಾರ್ಗ ಮಧ್ಯೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸಂಸತ್ತಿನಲ್ಲಿ ನಿರ್ಣಯ ಅಂಗೀಕಾರವಾಗಿ ಅನುಷ್ಠಾನಕ್ಕೆ ಬಂದಿದೆ. ಈ ಬಗ್ಗೆ ಬಿಜೆಪಿ ಅಧಿಕೃತ ಕರಪತ್ರ ಹಂಚುವ ಕೆಲಸ ಮಾಡುತ್ತಿದೆ. ಇದಕ್ಕೆ ಯಾರೇ ವಿರೋಧ ವ್ಯಕ್ತಪಡಿಸುವ ಅಥವಾ ತಡೆಯಲು ಮುಂದಾದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೊಲೀಸರು ಯಾರನ್ನೂ ಓಲೈಸುವ ಅಗತ್ಯವಿಲ್ಲ ಎಂದು ಹೇಳಿದರು.

    ಗಂಗಾವತಿ ನಗರದ ಕಿಲ್ಲಾ ಪ್ರದೇಶದ ಐದನೇ ವಾರ್ಡ್ ಈದ್ಗಾ ಕಾಲೋನಿ ಸಮೀಪದ ಸಮುದಾಯ ಭವನದ ಬಳಿ ಬಿಜೆಪಿ ಮುಖಂಡ ಪಾಂಡು ಅವರು ಸ್ಥಳಿಯರ ವಿರೋಧದ ನಡುವೆಯೂ ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದರು. ಈ ವೇಳೆ ಕೆಲ ಮುಸ್ಲಿಂ ಯುವಕರು ಬಿಜೆಪಿ ಮುಂಖಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

    ಇದರಿಂದಾಗಿ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಕೆಲ ಬಿಜೆಪಿ ಮುಖಂಡರು ಸ್ಥಳಕ್ಕೆ ಆಗಮಿಸಿದರು. ಇದರಿಂದ ಕೆರಳಿದ ನೂರಾರು ಯುವಕರು ಬಿಜೆಪಿ ಮುಖಂಡರಿದ್ದ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ, ಬಿಜೆಪಿ ಮುಖಂಡರನ್ನು ಸುರಕ್ಷಿತವಾಗಿ ಸ್ಥಳದಿಂದ ಕಳುಹಿಸಿದ್ದರು.