Tag: ಸಾವಯವ ಕೃಷಿ

  • ಬಿಡುವಿನ ವೇಳೆ ಗೋಕರ್ಣದಲ್ಲಿ ತರಕಾರಿ ಬೆಳೆದ ವಿದೇಶಿ ಜೋಡಿ

    ಬಿಡುವಿನ ವೇಳೆ ಗೋಕರ್ಣದಲ್ಲಿ ತರಕಾರಿ ಬೆಳೆದ ವಿದೇಶಿ ಜೋಡಿ

    ಕಾರವಾರ: ಪ್ರವಾಸಕ್ಕೆ ಆಗಮಿಸಿದಾಗ ಲಾಕ್‍ಡೌನ್ ನಿಂದಾಗಿ ತಮ್ಮ ದೇಶಕ್ಕೆ ಮರಳಿ ತೆರಳಲಾಗದೇ ಗೋಕರ್ಣದಲ್ಲೇ ಉಳಿದುಕೊಂಡಿದ್ದ ಜೋಡಿ ಸಾವಯವ ಪದ್ಧತಿಯಿಂದ ಕೃಷಿ ಮಾಡಿ ತರಕಾರಿ ಬೆಳೆದು ಇತರರಿಗೆ ಮಾದರಿಯಾಗಿದೆ.

    ಇಟಲಿಯ ಮೌರಿಯಾ ಹಾಗೂ ಪೊಲಾಂಡ್ ದೇಶದ ಜಾಸ್ಮಿನ್ ಜೋಡಿ ಲಾಕ್‍ಡೌನ್‍ನಲ್ಲಿ ಬಿಡುವಿನ ವೇಳೆ ತಾವು ಉಳಿದುಕೊಂಡಿರುವ ಗೋಕರ್ಣದ ರುದ್ರಪಾದದ ವಸತಿ ಗೃಹದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ತರಕಾರಿ ಬೆಳೆದಿದ್ದು, ಇವರ ಆಸಕ್ತಿಗೆ ಸ್ಥಳೀಯರೇ ಬೆರಗಾಗಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಈ ಜೋಡಿ ಅವರ ದೇಶಕ್ಕೆ ತೆರಳಬೇಕಿತ್ತು. ಆದರೆ ವಿಸಾ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ಸಮಯ ವ್ಯರ್ಥ ಮಾಡದೆ ತಾವು ಉಳಿದುಕೊಂಡಿರುವ ವಸತಿ ಗೃಹದ ಬಳಿಯ ಜಾಗದಲ್ಲಿ ಮಾಲೀಕರಿಗೆ ವಿನಂತಿಸಿ ಸಾವಯವ ಪದ್ಧತಿಯಿಂದ ತರಕಾರಿ ಬೆಳೆದಿದ್ದಾರೆ.

    ಇಟಲಿಯ ಪ್ರವಾಸಿಗ ಮೌರಿಯಾ ಕಳೆದ ಆರು ವರ್ಷಗಳಿಂದ ಗೋಕರ್ಣಕ್ಕೆ ಬರುತ್ತಿದ್ದಾರೆ. ಅದೇ ರೀತಿ ಕಳೆದ ವರ್ಷ ಬಂದಿದ್ದು, ಮೂರು ತಿಂಗಳು ವಸತಿ ಹೂಡಿದ್ದರು. ಇನ್ನೇನು ತಮ್ಮ ದೇಶಕ್ಕೆ ಹೊರಡಬೇಕಿದ್ದ ಇವರನ್ನು ಲಾಕ್‍ಡೌನ ತಡೆದಿತ್ತು. ಲಾಕ್‍ಡೌನ್ ಅವಧಿಯ ನಂತರ ಹಲವು ವಿದೇಶಿ ಪ್ರವಾಸಿಗರು ಇಲ್ಲಿನ ವಿವಿಧ ಇಲಾಖೆಗಳ ಸಹಾಯದಿಂದ ಸ್ವದೇಶಕ್ಕೆ ತೆರಳಿದ್ದರು. ಆದರೆ ಇವರು ತಾಂತ್ರಿಕ ತೊಂದರೆಯಿಂದ ಗೋಕರ್ಣದಲ್ಲೇ ಉಳಿಯುವ ಪರಿಸ್ಥಿತಿ ಬಂದಿತ್ತು.

    ಇಲ್ಲಿ ಉಳಿದು ಕೇವಲ ತಿಂಡಿ, ಊಟ ಮಾಡಿದರೆ ಏನು ಪ್ರಯೋಜನ ಎಂದು ಯೋಚಿಸಿ, ಈ ಭಾಗದಲ್ಲಿ ತರಕಾರಿ ಬೆಳೆಯ ಮಾಸ ಪ್ರಾರಂಭವಾಗಿದ್ದು, ಅದರಂತೆ ತರಕಾರಿ ಬೆಳೆದರೆ ಹೇಗೆ ಎಂದು ಯೋಚಿಸಿದ್ದಾರೆ. ತಾವು ಉಳಿದುಕೊಂಡಿದ್ದ ಮನೆಯ ಪಕ್ಕದ ಚಿಕ್ಕ ಜಾಗದಲ್ಲಿ ವಿವಿಧ ಜಾತಿಯ ತರಕಾರಿ ಬೆಳಯಲು ಪ್ರಾರಂಭಿಸಿದ್ದು, ಸ್ವತಃ ಓಳಿ ಕಡಿದು ಬೀಜ ಬಿತ್ತಿ ವಿವಿಧ ರೀತಿಯ ತರಕಾರಿ ಬೆಳೆದಿದ್ದು ಇನ್ನೆರಡು ತಿಂಗಳಲ್ಲಿ ಫಸಲು ಬರಲಿದೆ.

    ಟೊಮೆಟೊ, ಪಾಲಕ್ ಸೊಪ್ಪು, ಹರಿಗೆ ಮೆಣಸು ಸೇರಿದಂತೆ ವಿವಿಧ ಜಾತಿಯ ತರಕಾರಿಗಳನ್ನು ತನ್ನ ಗೆಳತಿಯ ಸಹಾಯದಿಂದ ಬೆಳೆದಿದ್ದಾರೆ. ಈ ಕುರಿತು ಮಾತನಾಡಿರುವ ಮೌರಿಯಾ, ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಹವ್ಯಾಸವಾಗಿ ಕೃಷಿ ಚಟುವಟಿಕೆಯನ್ನು ನನ್ನ ದೇಶದಲ್ಲಿ ಮಾಡುತ್ತಿದ್ದೆ. ಈ ವರ್ಷ ನಿಗದಿತ ಸಮಯಕ್ಕೆ ಸ್ವದೇಶಕ್ಕೆ ತೆರಳಾಗದ ಕಾರಣ ಈ ಕಾರ್ಯದಲ್ಲಿ ನಿರತನಾಗಿದ್ದೇನೆ. ಸ್ವದೇಶಕ್ಕೆ ತೆರಳಲಾಗದ ಬಗ್ಗೆ ಬೇಸರವಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ತುಂಬಾ ನೋವಿದೆ. ತಿಂಗಳಿಗೊಮ್ಮೆ ವೀಸಾ ಮುಂದುವರಿಸಬೇಕು, ಪೊಲೀಸರು ವಿಚಾರಿಸುತ್ತಾರೆ. ಆತಂಕವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೆಲ್ಲವನ್ನು ಮರೆಯಲು ಈ ಕೆಲಸ ಮಾಡುತ್ತಿದ್ದು, ಇಲ್ಲಿ ಬೆಳೆಯುವ ಬೆಳೆಗೆ ಸಾವಯವ ಗೊಬ್ಬರವನ್ನೇ ಬಳೆಸುತ್ತಿದ್ದೇನೆ. ನಮ್ಮ ಮನೆಯಲ್ಲಿ ಬಳಸಿದ ವಸ್ತುಗಳಿಂದ ಉಳಿದ ಹಸಿಕಸವನ್ನು ಒಂದೆಡೆ ಸೇರಿಸಿ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕಿ ಬೆಳೆಸಿದ್ದೇನೆ ಎಂದು ತಿಳಿಸಿದರು.

    ಗೆಳತಿಯ ಸಾಥ್!
    ಇಟಲಿಯ ಈ ಪ್ರಜೆಯೊಂದಿಗೆ ಪೊಲೆಂಡ್ ದೇಶದ ಜಾಸ್ಮಿನ್ ಇವರ ಕಾಯಕಕ್ಕೆ ಸಾಥ್ ನೀಡಿದ್ದಾರೆ. ತಾವು ನೆಟ್ಟ ತರಕಾರಿ ಗಿಡಗಳಿಗೆ ನೀರುಣಿಸುವುದು, ಗೊಬ್ಬರ ಹಾಕುವುದು ಸೇರಿದಂತೆ ವಿವಿಧ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಇವರು, ವೃತ್ತಿಯಲ್ಲಿ ಫೀಜೀಯೋಥೆರಿಪಿ ಮತ್ತು ಯೋಗ ಶಿಕ್ಷಕಿಯಾಗಿದ್ದಾರೆ.

    ಕೃಷಿಗಾಗಿ ಹವಾಮಾನದ ವೇಳಾಪಟ್ಟಿ!
    ಕಾಲ ಕಾಲಕ್ಕೆ ನಕ್ಷತ್ರ, ಗೃಹಗಳು, ಚಂದ್ರ ಯಾವ ರೀತಿಯಲ್ಲಿ ಬದಲಾಗುತ್ತಾನೆ ಆ ವೇಳೆಯಲ್ಲಿನ ನಮ್ಮ ಹವಾಮಾನದ ಕುರಿತು ಸಚಿತ್ರವಾಗಿ ವೇಳಾ ಪಟ್ಟಿಯನ್ನು ಈ ಜೋಡಿ ತಯಾರಿಸಿಕೊಂಡಿದೆ. ವರ್ಷದಲ್ಲಿನ ಬದಲಾವಣೆಗಳ ಸಂಪೂರ್ಣ ಮಾಹಿತಿ ಇದರಲ್ಲಿದ್ದು, ಹವಮಾನ ಬದಲಾವಣೆಗೆ ಯಾವ ತರಕಾರಿ ಬೆಳೆಯಬೇಕು ಎಂಬ ಮಾರ್ಗವನ್ನು ಅನುಸರಿಸಿ ಬೆಳೆಯುತಿದ್ದಾರೆ.

    ಭಾರತ ಅಚ್ಚುಮೆಚ್ಚಿನ ದೇಶ, ಗೋಕರ್ಣವೆಂದರೆ ಪ್ರಾಣ: ಹಲವು ವರ್ಷಗಳಿಂದ ಭಾರತದ ವಿವಿಧ ಪೌರಾಣಿಕ, ಪ್ರವಾಸಿ, ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇನೆ. ಉತ್ತರ, ದಕ್ಷಿಣ ಭಾತದ ಹಲವೆಡೆ ಭೇಟಿ ನೀಡಿದ್ದು, ಇಲ್ಲಿನ ಆಚಾರ, ವಿಚಾರ, ಸಂಸ್ಕೃತಿ ನಮ್ಮ ಜೀವನಕ್ಕೆ ಮಾದರಿಯಾಗಿದೆ. ಇದು ನನ್ನ ನೆಚ್ಚಿನ ದೇಶ. ಪುರಾಣ ಪ್ರಸಿದ್ಧ ಕ್ಷೇತ್ರ, ಸುಂದರ ಕಡಲತೀರ ಆತ್ಮೀಯತೆ ಸ್ಥಳೀಯ ಜನ ಗೋಕರ್ಣ ನನ್ನ ಪ್ರಾಣವಿದ್ದಂತೆ ಎಂದು ಈ ಇಬ್ಬರು ಪ್ರವಾಸಿಗರು ಹೆಮ್ಮೆಯಿಂದ ನುಡಿಯುತ್ತಾರೆ.

    ವಾರಾಂತ್ಯದ ರಜೆ ಬಂತೆಂದರೆ ಗೋಕರ್ಣದ ಕಡಲತೀರಗಳಿಗೆ ಮುಗಿಬೀಳುವ ಯುವ ಸಮೂಹದ ಪ್ರವಾಸಿಗರು, ಮೋಜು ಮಸ್ತಿ ಮಾಡುತ್ತ ಕುಡಿದು ತೂರಾಡುತ್ತಾರೆ. ಪುಣ್ಯ ಕ್ಷೇತ್ರಕ್ಕೆ ವಿದೇಶಿಗರು ಬಂದು ಅವರ ಸಂಸ್ಕೃತಿಯನ್ನು ಬಿಟ್ಟು, ನಮ್ಮ ಸಂಸ್ಕೃತಿಯನ್ನು ಅದೆಷ್ಟೂ ಜನ ಅಳವಡಿಸಿಕೊಳ್ಳುತ್ತಿದ್ದು, ಇದು ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕಿದೆ.

    ಸದ್ಯ ಈ ಜೋಡಿ ಬರಡು ಭೂಮಿಯಲ್ಲಿ ಸಾವಯವ ಕೃಷಿಯ ಮೂಲಕ ತರಕಾರಿ ಬೆಳೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದೆ. ಕೆಲವೇ ದಿನಗಳಲ್ಲಿ ಫಸಲು ಕೈಗೆ ಬರಲಿದೆ. ಈ ಫಸಲನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುವ ಜೊತೆಗೆ ಬೆಳೆ ಬೆಳೆಯಲು ಭೂಮಿ ನೀಡಿದ ಮಾಲೀಕನ ಋಣ ತೀರಿಸುವ ಔದಾರ್ಯ ತೋರಿದ್ದಾರೆ.

  • ನಿವೃತ್ತಿಯ ಬಳಿಕ ಕಡಕ್‍ನಾಥ್ ಕಪ್ಪು ಕೋಳಿ ಸಾಕಾಣಿಕೆಗೆ ಮುಂದಾದ ಧೋನಿ

    ನಿವೃತ್ತಿಯ ಬಳಿಕ ಕಡಕ್‍ನಾಥ್ ಕಪ್ಪು ಕೋಳಿ ಸಾಕಾಣಿಕೆಗೆ ಮುಂದಾದ ಧೋನಿ

    – 2 ಸಾವಿರ ಕೋಳಿ ಮರಿಗಳಿಗೆ ಅರ್ಡರ್

    ರಾಂಚಿ: ಮಧ್ಯಪ್ರದೇಶದ ಬುಡಕಟ್ಟು ಜಿಲ್ಲೆಯ ಕಡಕ್‍ನಾಥ್ ಕಪ್ಪು ಕೋಳಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಮನಗೆದ್ದಿದ್ದು, ನಿವೃತ್ತಿಯ ಬಳಿಕ ಕುಕ್ಕುಟೋದ್ಯಮ ಆರಂಭಿಸಲು ಧೋನಿ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಧೋನಿ ಅವರ ಆರ್ಗಾನಿಕ್ ಫಾರ್ಮ್‍ನೊಂದಿಗೆ ರಾಂಚಿಯಲ್ಲಿರುವ ಸಾವಯವ ಕೃಷಿಗೆ ಸಂಬಂಧಿಸಿದ ತಂಡ ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಕೋಳಿ ಕೃಷಿಕರಿಂದ ಸುಮಾರು 2 ಸಾವಿರ ಕಟಕ್‍ನಾಥ್ ಕೋಳಿ ಮರಿಗಳು ನೀಡುವಂತೆ ಅರ್ಡರ್ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಭೋಪಾಲ್‍ನಿಂದ ಸುಮಾರು 350 ಕಿಮೀ ದೂರದಲ್ಲಿರುವ ಜಬುವಾ ಜಿಲ್ಲೆಯ ರೈತ ವಿನೋದ್ ಮೇಧಾ ಅವರಿಗೆ ಡಿಸೆಂಬರ್ 15ರ ವೇಳೆಗೆ ಸುಮಾರು 2 ಸಾವಿರ ಕೋಳಿ ಮರಿಗಳನ್ನು ನೀಡುವಂತೆ ಅರ್ಡರ್ ನೀಡಲಾಗಿದೆ. ಧೋನಿ ಅವರ ತಂಡ ರಾಂಚಿಯಲ್ಲಿ ಈ ಅರ್ಡರ್ ಅನ್ನು ಪಡೆಯಲಿದೆ.

    ಮೂರು ತಿಂಗಳ ಹಿಂದೆ ಧೋನಿ ಫಾರ್ಮ್ ಮ್ಯಾನೇಜರ್ ನಮ್ಮೊಂದಿಗೆ ಕೃಷಿ ವಿಕಾಸ್ ಕೇಂದ್ರದ ಮೂಲಕ ಸಂಪರ್ಕಕ್ಕೆ ಬಂದಿದ್ದರು. ಆ ಬಳಿಕ ಅವರು ನಮ್ಮಿಂದ ಅವರು ಹೆಚ್ಚಿನ ಮಾಹಿತಿ ಪಡೆದುಕೊಂಡು ಸುಮಾರು 2 ಮರಿಗಳಿಗೆ ಅರ್ಡರ್ ನೀಡಿದ್ದಾರೆ. ಇದನ್ನು ನಾನು ಡಿಸೆಂಬರ್ 15ರಂದು ರಾಂಚಿಯಲ್ಲಿ ಅವರಿಗೆ ನೀಡಬೇಕಿದೆ. ಇದಕ್ಕೆ ಅವರು ಈಗಾಗಲೇ ಮುಂಗಡ ಹಣವನ್ನು ಪಾವತಿ ಮಾಡಿದ್ದಾರೆ. ದೇಶದ ಖ್ಯಾತ ಕ್ರಿಕೆಟ್ ಆಟಗಾರನಿಗೆ ಕಡಕ್‍ನಾಥ್ ಕೋಳಿಗಳನ್ನು ಪೂರೈಕೆ ಮಾಡುತ್ತಿರುವುದು ಹೆಮ್ಮೆ ಎನಿಸಿದೆ ಎಂದು ವಿನೋದ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಈ ಕುರಿತ ಮಾಹಿತಿಯನ್ನು ಖಚಿತ ಪಡಿಸಿರುವ ಕೃಷಿ ವಿಕಾಸ್ ಕೇಂದ್ರದ ಕಡಕ್‍ನಾಥ್ ಕೋಳಿ ವಿಭಾಗದ ಉಸ್ತುವಾರಿ ವಿಜ್ಞಾನಿ ಡಾ.ಚಂದನ್ ಕುಮಾರ್ ಅವರು, ರಾಂಚಿಯಲ್ಲಿ ಧೋನಿ ಅವರ ಕೃಷಿ ಜಮೀನನ್ನು ನಿರ್ವಹಿಸುತ್ತಿರುವ ಕುನಾಲ್ ಗೌರವ್ ಅವರು ಕಡಕ್‍ನಾಥ್ ಮರಿಗಳನ್ನು ಪಡೆಯಲು ಸಂಪರ್ಕ ಮಾಡಿದ್ದರು. ಮೊದಲು ಅವರು ರಾಂಚಿಯ ಪಶುವೈದ್ಯಕೀಯ ಕಾಲೇಜಿನ ತಜ್ಞರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದಿದ್ದರು. ನಾನು ಅದೇ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಕಾರಣ ಕಾಲೇಜಿನ ತಜ್ಞರು ನನ್ನೊಂದಿಗೆ ಸಂಪರ್ಕದಲ್ಲಿದ್ದರು ಎಂದು ವಿವರಿಸಿದ್ದಾರೆ.

    2019ರ ಆಗಸ್ಟ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ ಮಾಡಿದ್ದ ಧೋನಿ, ರಾಂಚಿಯಲ್ಲಿರುವ ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಮಾಡಲು ಮುಂದಾಗಿದ್ದಾರೆ. ಜುಲೈ ತಿಂಗಳಿನಲ್ಲಿಯೂ ಧೋನಿ 43 ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಮಾಡುತ್ತಿದ್ದ ಕೆಲ ಫೋಟೋಗಳು ವೈರಲ್ ಆಗಿದ್ದವು. ಧೋನಿ ಅವರ ಸಾವಯವ ಕೃಷಿ ತಂಡ ದೇಶೀಯ ಸಹೀವಾಲ್ ತಳಿಯ ಹಸು ಮತ್ತು ಬಾತುಕೋಳಿ ಹಾಗೂ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಅಂದಹಾಗೇ ಕಡಕ್‍ನಾಥ್ ಕೋಳಿ ಮಧ್ಯಪ್ರದೇಶದ ಬುಡಕಟ್ಟು ಮೂಲದಾಗಿದ್ದು, ಈ ಕೋಳಿಯ ಮಾಂಸ ಹಾಗೂ ಮೊಟ್ಟೆಗೆ ದೇಶಾದ್ಯಂತ ಭಾರೀ ಬೇಡಿಕೆ ಇದೆ. ಈ ಕೋಳಿಯ ಮಾಂಸದಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇದ್ದು, ಮಧುಮೇಹ ಮತ್ತು ಹೃದಯರೋದ ಖಾಯಿಲೆ ಇರುವ ಮಾಂಸ ಪ್ರಿಯರಿಗೆ ಹೇಳಿ ಮಾಡಿಸಿದ ತಳಿಯಾಗಿದೆ. 2018ರಲ್ಲಿ ಜಬುವಾ ಜಿಲ್ಲೆಯ ಈ ತಳಿಗೆ ಜಿಐ ಟ್ಯಾಗ್ (ಭೌಗೋಳಿಕ ವೈಶಿಷ್ಟ್ಯತೆಯ ಗುರುತು) ಕೂಡ ಲಭಿಸಿದೆ.

  • ಠಾಣೆಯಲ್ಲಿ ತುಕ್ಕು ಹಿಡಿಯುತ್ತಿದ್ದ ವಾಹನಗಳಲ್ಲೇ ತರಕಾರಿ ಬೆಳೆದ ಪೊಲೀಸರು

    ಠಾಣೆಯಲ್ಲಿ ತುಕ್ಕು ಹಿಡಿಯುತ್ತಿದ್ದ ವಾಹನಗಳಲ್ಲೇ ತರಕಾರಿ ಬೆಳೆದ ಪೊಲೀಸರು

    – ಮೊದಲ ಬೆಳೆ ಬೆಳೆದು ಯಶಸ್ವಿಯಾಗಿ ಕಟಾವ್ ಮಾಡಿದ್ರು
    – ಜಪ್ತಿ ಮಾಡಿದ್ದ ವಾಹಗಳಲ್ಲಿ ಸಾವಯವ ಕೃಷಿ

    ತಿರುವನಂತಪುರಂ: ಸಾಮಾನ್ಯವಾಗಿ ಕದ್ದ ವಾಹನಗಳು, ಸರಿಯಾದ ದಾಖಲೆಗಳಿಲ್ಲ ವಾಹನಗಳು, ಅಪಘಾತ ನಡೆದ ವಾಹನಗಳು ಸೇರಿದಂತೆ ಅನೇಕ ವಾಹನಗಳು ಪೊಲೀಸ್ ಠಾಣೆಯಲ್ಲಿ ವರ್ಷಗಳಿಂದ ತುಕ್ಕು ಹಿಡಿಯುತ್ತಿರುತ್ತವೆ. ಆದರೆ ಕೇರಳ ಪೊಲೀಸರು ಅಂತಹ ಜಪ್ತಿ ಮಾಡಿದ್ದ ವಾಹನಗಳಲ್ಲಿಯೇ ಸಾವಯವ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.

    ಪೊಲೀಸರು ಜಪ್ತಿ ಮಾಡುವ ವಾಹನಗಳನ್ನು ಇಷ್ಟು ವರ್ಷದೊಳಗೆ ಮಾಲೀಕರು ಬಂದು ತೆಗೆದುಕೊಂಡು ಹೋಗದೆ ಇದ್ದರೆ ಅಂತಹ ವಾಹನಗಳನ್ನು ಹರಾಜು ಮಾಡಲು ಪೊಲೀಸ್ ಇಲಾಖೆಗೆ ಅನುಮತಿ ಇದೆ. ಆದರೆ ಹಾಗೆ ಮಾಡುವುದರಲ್ಲಿ ಸಾಕಷ್ಟು ಕಾನೂನು ಸಮಸ್ಯೆಗಳಿವೆ. ಇದಲ್ಲದೆ ಈ ವಾಹನಗಳಿಗೆ ಹೆಚ್ಚು ಖರೀದಿದಾರರು ಇರುವುದಿಲ್ಲ. 2019ರ ವರದಿಯ ಪ್ರಕಾರ, ರಾಜ್ಯದ ಪೊಲೀಸ್ ಠಾಣೆಗಳಲ್ಲಿ 40,000ಕ್ಕೂ ಹೆಚ್ಚು ವಾಹನಗಳು ತುಕ್ಕು ಹಿಡಿಯುತ್ತಿವೆ.

    ತುಕ್ಕು ಹಿಡಿಯುತ್ತಿರುವ ವಾಹನಗಳನ್ನು ನೋಡಲಾಗದೆ ಬೇಸರ ಮಾಡಿಕೊಂಡಿದ್ದ ತ್ರಿಶೂರ್ ಜಿಲ್ಲೆಯ ಚೆರುತುರುತಿ ಪೊಲೀಸರು ಅವುಗಳಲ್ಲಿ ಕೆಲವು ವಾಹನಗಳಲ್ಲಿ ಸಾವಯವ ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿದ್ದರು. ಸಿಂಪ್ಸನ್, ಸುಧಾಕರನ್, ಬೇಬಿ, ರಂಜಿತ್, ರಘು ಮತ್ತು ಅನಿಲ್ ಅವರೊಂದಿಗೆ ಕೃಷಿಕರೂ ಆಗಿರುವ ಸಿವಿಲ್ ಪೊಲೀಸ್ ಅಧಿಕಾರಿ ರಂಗರಾಜ್ ಕೃಷಿಯನ್ನು ನೋಡಿಕೊಳ್ಳುತ್ತಾರೆ.

    “ನಾವು ಮರಳು ಕಳ್ಳಸಾಗಣೆಯಲ್ಲಿ ಜಪ್ತಿ ಮಾಡಿದ್ದ ಕೆಲವು ಮಿನಿ ಲಾರಿಗಳನ್ನು ಹೊಂದಿದ್ದೇವೆ. ಮೂರು ತಿಂಗಳ ಹಿಂದೆ ಅವುಗಳಲ್ಲಿ ತರಕಾರಿಗಳನ್ನು ಬೆಳೆಸಲು ನಾವು ನಿರ್ಧರಿಸಿದ್ದೇವೆ. ಇದು ಯಶಸ್ವಿಯಾಗಿದ್ದು, ಕಳೆದ ವಾರ ನಮ್ಮ ಮೊದಲ ಬೆಳೆಯನ್ನ ಕೂಡ ಕಟಾವ್ ಮಾಡಿದ್ದೇವೆ. ನಾವು ತರಕಾರಿಗಳನ್ನು ನಮ್ಮ ಪೊಲೀಸ್ ಕ್ಯಾಂಟೀನ್‍ಗೆ ನೀಡಿದ್ದೇವೆ” ಎಂದು ಪೊಲೀಸ್ ಅಧಿಕಾರಿ ಸಿಂಪ್ಸನ್ ಹೇಳಿದ್ದಾರೆ.

    ಕೃಷಿ ಯಶಸ್ವಿಯಾದ ಕಾರಣ, ಅದನ್ನು ಇತರ ವಾಹನಗಳಿಗೂ ವಿಸ್ತರಿಸಲು ಪೊಲೀಸ್ ಅಧಿಕಾರಿಗಳು ಯೋಜಿಸಿದ್ದಾರೆ. ಮೊದಲ ಹಂತದಲ್ಲಿ, ಅವರು ಬೆಂಡೆಕಾಯಿ, ಬೀನ್ಸ್ ಮತ್ತು ಪಾಲಕ್ ಸೊಪ್ಪನ್ನು ಬೆಳೆದಿದ್ದಾರೆ. ಈಗ ಇತರ ತರಕಾರಿಗಳನ್ನು ಬೆಳೆಯಲು ಯೋಜಿಸಿದ್ದಾರೆ.

    ಕಾನೂನುಬಾಹಿರ ಚಟುವಟಿಕೆಯಲ್ಲಿ ವಾಹನವನ್ನು ವಶಪಡಿಸಿಕೊಂಡರೆ, ಅದರ ಮಾಲೀಕರು ಎಂದಿಗೂ ವಾಪಸ್ ಪಡೆಯಲು ಬಯಸುವುದಿಲ್ಲ. ಇನ್ನೂ ಅಪಘಾತ ವಾಹನಗಳ ವಿಷಯದಲ್ಲಿ, ನ್ಯಾಯಾಲಯದ ಆದೇಶದ ನಂತರವೂ ಅವುಗಳನ್ನು ಮಾಲೀಕರು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಅವರು ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕಾರಣ ಮತ್ತೆ ಆ ವಾಹನ ಬೇಡ ಎಂದುಕೊಂಡಿರಬಹುದು. ಇನ್ನೂ ಕೆಲವು ಕೇಸ್‍ಗಳಲ್ಲಿ ತೀರ್ಪು ಪಡೆಯಲು ಕೆಲವು ವರ್ಷಗಳು ತೆಗೆದುಕೊಳ್ಳಬಹುದು. ಆ ಹೊತ್ತಿಗೆ ವಾಹನವು ತುಕ್ಕು ಹಿಡಿದು ನಿಷ್ಪ್ರಯೋಜಕವಾಗುತ್ತವೆ. ಆದ್ದರಿಂದ ತೀರ್ಪು ಮಾಲೀಕರ ಕಡೆ ಬಂದರೂ ತುಕ್ಕು ಹಿಡಿದಿರುವ ವಾಹನವನ್ನು ವಾಪಸ್ ತೆಗೆದುಕೊಂಡು ಹೋಗಲು ಬಯಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಸ್ಟೇಷನ್ ಹೌಸ್ ಆಫೀಸರ್ (ಎಸ್‍ಎಚ್‍ಒ) ಗಳು ವಾಹನಗಳನ್ನು ಹರಾಜು ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ ಅದನ್ನು ಮಾಡಲು ನಮಗೆ ಸಾಕಷ್ಟು ಕಾನೂನು ಅನುಮತಿ ಬೇಕಾಗುತ್ತವೆ. ಇದು ಸುಲಭವಲ್ಲ, ಆದ್ದರಿಂದ ಈ ವಾಹನಗಳು ಅನೇಕ ವರ್ಷಗಳ ಕಾಲ ಇಲ್ಲಿಯೇ ಇರುತ್ತವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಪೊಲೀಸ್ ಠಾಣೆಗಳಿಂದ ತೆರವುಗೊಳಿಸುವಂತೆ 2018ರಲ್ಲಿ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹೆರಾ ಎಲ್ಲಾ ಎಸ್‍ಎಚ್‍ಒಗಳಿಗೆ ನಿರ್ದೇಶನ ನೀಡಿದ್ದರು. ಆದರೆ ಅದು ಯಶಸ್ವಿಯಾಗಿಲ್ಲ.

  • ರಾಸಾಯನಿಕವಿಲ್ಲದೆ ನೈಸರ್ಗಿಕ ಕೃಷಿ ಮಾಡಿ ತೋರಿಸಿದ ಉಪೇಂದ್ರ

    ರಾಸಾಯನಿಕವಿಲ್ಲದೆ ನೈಸರ್ಗಿಕ ಕೃಷಿ ಮಾಡಿ ತೋರಿಸಿದ ಉಪೇಂದ್ರ

    ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಪ್ರಜಾಕೀಯ, ಸಿನಿಮಾ ಎರಡರಲ್ಲೂ ಬ್ಯುಸಿಯಾಗಿದ್ದು, ಎರಡನ್ನೂ ನಿಭಾಯಿಸುತ್ತಿದ್ದಾರೆ. ರಾಜಕೀಯಕ್ಕೆ ಹೊಸ ಭಾಷ್ಯ ಬರೆಯಲು ಯತ್ನಿಸುತ್ತಿರುವ ಉಪೇಂದ್ರ ತಮ್ಮ ಐಡಿಯಾಗಳ ಮೂಲಕ ಜನರ ಮುಂದೆ ಹೋಗುತ್ತಿದ್ದಾರೆ. ಆದರೆ ಇದೀಗ ಸಿನಿಮಾ, ಪ್ರಜಾಕೀಯ ಹೊರತುಪಡಿಸಿ ಹೊಲದಲ್ಲಿ ಕೆಲಸ ಮಾಡಲು ಪ್ರಾರಂಬಿಸಿದ್ದಾರೆ. ತಾವೇ ಕೆಲಸ ಮಾಡಿ ಫಸಲನ್ನೂ ತೆಗೆದಿದ್ದಾರೆ.

    ಸಿನಿಮಾ ರಂಗದಲ್ಲಿ ವಿಭಿನ್ನ ಕ್ರಿಯೇಟಿವಿಟಿ ಮೂಲಕ ಫ್ಯಾನ್ ಫಾಲೋವರ್ಸ್ ಹೊಂದಿರುವ ಉಪೇಂದ್ರ, ಸ್ಯಾಂಡಲ್‍ವುಡ್‍ನಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಎಚ್2ಒ, ಶ್!, ಓಂ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದರು. ನಂತರ ಇದೀಗ ಪ್ರಜಾಕೀಯದ ಮೂಲಕ ರಾಜಕೀಯ ವ್ಯವಸ್ಥೆಯನ್ನು ಬದಲಿಸಲು ಹೊರಟಿದ್ದಾರೆ. ಹೀಗೆ ತಮ್ಮದೇ ಪ್ರಯತ್ನದಲ್ಲಿ ತೊಡಗಿರುವ ಉಪ್ಪಿ, ಲಾಕ್‍ಡೌನ್ ಹಿನ್ನೆಲೆ ಮತ್ತೊಂದು ಕೆಲಸ ಮಾಡಿ ಭೇಷ್ ಎನ್ನಿಸಿಕೊಂಡಿದ್ದಾರೆ.

    ಹಲವು ನಟ, ನಟಿಯರು ಲಾಕ್‍ಡೌನ್ ಅವಧಿಯಲ್ಲಿ ತಮ್ಮದೇ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅದೇ ರೀತಿ ನಟ ಉಪೇಂದ್ರ ಕೃಷಿ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ. ಅಷ್ಟೇ ಅಲ್ಲ ಕೇವಲ ಎರಡೂವರೆ ತಿಂಗಳಲ್ಲಿ ಬೆಳೆಯನ್ನೂ ತೆಗೆದಿದ್ದಾರೆ. ಹೌದು ತಮ್ಮ ಹೊಲದಲ್ಲಿ ಸಾವಯವ ಪದ್ಧತಿ ಮೂಲಕ ತರಕಾರಿ, ಹೂವು ಬೆಳೆದಿದ್ದು, ಈ ಕುರಿತು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ವಿಡಿಯೋ ಪೋಸ್ಟ್ ಮಾಡಿ ಸಾಲುಗಳನ್ನು ಬರೆದಿದ್ದು, ಅತೀ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ನೈಸರ್ಗಿಕ ಕೃಷಿ ಎಂದು ತಿಳಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಕಮೆಂಟ್ ಮಾಡಿದ್ದು, ಹೇಳಿದ್ದನ್ನು ಪ್ರ್ಯಾಕ್ಟಿಕಲಿ ತೋರಿಸುತ್ತಾರೆ ಉಪ್ಪಿ ಬಾಸ್ ಎಂದಿದ್ದಾರೆ. ಅಲ್ಲದೆ ಮತ್ತೊಬ್ಬರು ಕಮೆಂಟ್ ಮಾಡಿ ಕೇವಲ ನಿರ್ದೇಶನದಲ್ಲಿ ಮಾತ್ರವಲ್ಲ ಎಲ್ಲದರಲ್ಲೂ ಕ್ರಿಯೇಟಿವಿಟಿ ಹೊಂದಿದ್ದಾರೆ ಎಂದೆಲ್ಲ ಹೇಳಿದ್ದಾರೆ.

    ವಿಡಿಯೋದಲ್ಲಿ ಉಪ್ಪಿ ತಾವು ಮಾಡಿದ ಕೆಲಸದ ಬಗ್ಗೆ ಹೇಳಿದ್ದು, ಎರಡೂವರೆ ತಿಂಗಳ ಹಿಂದೆ ನಾವು ಇಲ್ಲಿ ಸಸಿಗಳನ್ನು ನೆಡುತ್ತಿದ್ದೆವು. ಈಗ ಅದರ ಫಲ ಬಂದಿದೆ. ಚೆಂಡು ಹೂವು, ಸೌತೆಕಾಯಿ, ಎರಡು ಬಗೆಯ ಬದನೆಕಾಯಿ ಎಷ್ಟು ಅದ್ಭುತವಾಗಿವೆ ನೋಡಿ. ನಾವು ಯಾವುದೇ ಕ್ರಿಮಿನಾಶಕ, ರಸಗೊಬ್ಬರವನ್ನು ಬಳಕೆ ಮಾಡಿಲ್ಲ. ಕೇವಲ ದನದ ಗೊಬ್ಬರ, ನೀರು ಬಿಟ್ಟು ಬೆಳೆದಿದ್ದೇವೆ. ಹುಳು ಬೀಳಲ್ಲ ಅಂತಲ್ಲ ಶೇ.5ರಷ್ಟು ಬೆಳೆಗೆ ಹುಳು ಬೀಳುತ್ತದೆ. ಆದರೆ ನಮ್ಮ ಜೊತೆ ಅವೂ ಬದುಕಬೇಕಲ್ಲವೇ, ನಮ್ಮೊಂದಿಗೆ ಹುಳು ಚಿಟ್ಟೆಗಳು ಸಹ ಇರಬೇಕು. ಕ್ರಿಮಿನಾಶಕ ಹೊಡೆದು ಭೂಮಿ ಹಾಳು ಮಾಡುವುದರ ಜೊತೆಗೆ, ಕೇವಲ ಶೇ.10ರಷ್ಟು ಇಳುವರಿ ಹೆಚ್ಚು ಬರುತ್ತದೆಂದು ತಪ್ಪು ಕೆಲಸ ಮಾಡುತ್ತೇವೆ. ಇದಾವುದನ್ನೂ ಬಳಸದೆ ಬೆಳೆದು ತೋರಿಸಬೇಕೆಂದೇ ಕೃಷಿ ಮಾಡಿದೆ. ಈ ಪದ್ಧತಿಯಿಂದ ಬೆಳೆದ ತರಕಾರಿಗಳು ಆರೋಗ್ಯಕ್ಕೂ ಒಳ್ಳೆಯದು ಎಂದು ತಿಳಿಸಿದ್ದಾರೆ.

    ಉಪೇಂದ್ರ ಸದ್ಯ ಕಬ್ಜ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತವಾಗಿದೆ. ಹೀಗಾಗಿ ಕೃಷಿಯತ್ತ ಮುಖ ಮಾಡಿದ್ದಾರೆ. ಕಬ್ಜ ಸಿನಿಮಾದ ಪೋಸ್ಟರ್‍ಗಳು ಈಗಾಗಲೇ ಬಿಡುಗಡೆಯಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಉಪ್ಪಿ ಹಳೆ ಕಾಲದ ಗನ್ ಹಿಡಿದು ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಅಭಿಮಾನಿಗಳಲ್ಲಿ ಚಿತ್ರದ ಕುರಿತು ಕುತೂಹಲ ಹೆಚ್ಚಿದೆ.

  • ಒಂದು ಜಮೀನಿನಲ್ಲಿ 18 ವೆರೈಟಿ ಸಾವಯವ ಭತ್ತ: ಕೃಷಿಯಲ್ಲಿ ವಿಶಿಷ್ಟ ಸಾಧನೆಗೈದ ರೈತ

    ಒಂದು ಜಮೀನಿನಲ್ಲಿ 18 ವೆರೈಟಿ ಸಾವಯವ ಭತ್ತ: ಕೃಷಿಯಲ್ಲಿ ವಿಶಿಷ್ಟ ಸಾಧನೆಗೈದ ರೈತ

    ಹಾವೇರಿ: ಒಂದು ಜಮೀನಿನಲ್ಲಿ ಅಬ್ಬಬ್ಬಾ ಅಂದ್ರೆ ಎರಡ್ಮೂರು, ಮೂರ್ನಾಲ್ಕು ವಿವಿಧ ತಳಿಯ ಭತ್ತ ಬೆಳೆಯಬಹುದು. ಆದರೆ ಹಾನಗಲ್ ತಾಲೂಕಿನ ಕಾಮನಹಳ್ಳಿ ಗ್ರಾಮದ ಮುತ್ತಣ್ಣ ಪೂಜಾರ ಅವರು ಜಮೀನಿನಲ್ಲಿ 18 ತಳಿಯ ಭತ್ತ ಬೆಳೆದಿದ್ದಾರೆ.

    ಮುತ್ತಣ್ಣ ಮೂಲತಃ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನವರು. ಕುರಿಗಾಯಿ ಆಗಿದ್ದ ಮುತ್ತಣ್ಣ, ಕುರಿ ಕಾಯುತ್ತಾ ಬಂದು ಕೆಲವು ವರ್ಷಗಳ ಹಿಂದೆ ಕಾಮನಹಳ್ಳಿ ಗ್ರಾಮದಲ್ಲಿ ಕೃಷಿ ಜಮೀನು ಖರೀದಿಸಿದ್ದಾರೆ. ಬಳಿಕ ಸಾವಯವ ಕೃಷಿ ಮೂಲಕ ಅದ್ಭುತವಾದ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ.

    ಮುತ್ತಣ್ಣ ಅವರು ತಮ್ಮ ಎಂಟು ಎಕರೆ ಜಮೀನಿನಲ್ಲಿ 20 ಬಗೆಯ ಭತ್ತ ಬೆಳೆದಿದ್ದಾನೆ. ಎರಡು ತಳಿಗಳನ್ನು ಹೊರತುಪಡಿಸಿ ಹದಿನೆಂಟು ತಳಿಯ ಭತ್ತ ದೇಶೀಯ ತಳಿಯ ಭತ್ತಗಳಾಗಿವೆ. ಬಹುತೇಕ ತಳಿಯ ಭತ್ತಗಳು ಈಗಾಗಲೇ ಅವಸಾನದ ಅಂಚಿನಲ್ಲಿವೆ. ಅಂತಹ ಭತ್ತಗಳನ್ನ ಬೆಳೆದು ರೈತರಿಗೆ ನೀಡುವುದರ ಜೊತೆಗೆ ದೇಶೀಯ ತಳಿಯ ಭತ್ತ ಉಳಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಶಿವಮೊಗ್ಗದಿಂದ ಬಗೆಬಗೆಯ ತಳಿಯ ಭತ್ತದ ಬೀಜಗಳನ್ನ ತಂದು ಬಿತ್ತನೆ ಮಾಡಿದ್ದರು. ಈಗ ಇಪ್ಪತ್ತು ತಳಿಯ ಭತ್ತದ ಫಸಲು ಭರಪೂರ ಬೆಳೆದು ನಿಂತಿದೆ.

    ಮೈಸೂರು ಮಲ್ಲಿಗೆ, ಮ್ಯಾಜಿಕ್, ಸಿದ್ದಸಣ್ಣ ಹೀಗೆ ವಿವಿಧ ಹೆಸರಿನ ಭತ್ತದ ಫಸಲು ಜಮೀನಿನ ತುಂಬ ಕಂಪು ಸೂಸುತ್ತಿದೆ. ಕೆಲವು ತಳಿಯ ಭತ್ತಗಳಂತೂ ಆಳೆತ್ತರಕ್ಕೆ ಬೆಳೆದು ನಿಂತಿದೆ. ಕಡಿಮೆ ಪ್ರಮಾಣದಲ್ಲಿ ದೊರೆತಿದ್ದ ಎರಡು ಹೈಬ್ರಿಡ್ ತಳಿಯ ಬೀಜ ಹೊರತುಪಡಿಸಿ ಹದಿನೆಂಟು ತಳಿಯ ಬೀಜಗಳು ಈಗ ಸಾಕಷ್ಟು ಪ್ರಮಾಣದ ಜಮೀನಿಗೆ ಬಿತ್ತನೆಗೆ ಸಾಕಾಗುವಷ್ಟು ಬೆಳೆದಿವೆ. ಬಹುತೇಕ ದೇಶೀಯ ತಳಿಯ ಭತ್ತಗಳು ಯಾವುದೇ ರೋಗ, ಸೋಂಕಿಲ್ಲದಂತೆ ಬೆಳೆದು ನಿಂತಿವೆ. ಅಷ್ಟಾಗಿ ಶಾಲೆಯನ್ನು ಕಲಿಯದ ಮುತ್ತಣ್ಣ ಕುರಿಗಾಯಿಯಾಗಿ ಬಂದು ನೆಲೆ ನಿಂತು ಈಗ ಕೃಷಿಯಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಯಶಸ್ಸು ಕಾಣುತ್ತಿದ್ದಾರೆ. ಮುತ್ತಣ್ಣ ಅವರ ಸಾವಯವ ಕೃಷಿ ಮತ್ತು ಕೃಷಿಯಲ್ಲಿನ ವಿಭಿನ್ನ ಪ್ರಯತ್ನಗಳಿಗೆ ಕೃಷಿ ಇಲಾಖೆ ಮತ್ತು ಸ್ಥಳೀಯ ರೈತರು ಸಾಥ್ ನೀಡುತ್ತಿದ್ದಾರೆ.

    ಒಂದು ಜಮೀನಿನಲ್ಲಿ ಒಂದು ತಳಿಯ ಭತ್ತ ಬೆಳೆಯುವುದಕ್ಕೆ ರೈತರು ಇನ್ನಿಲ್ಲದ ಹರಸಾಹಸ ಪಡುತ್ತಾರೆ. ಅದರಲ್ಲೂ ದೇಶೀಯ ತಳಿಯ ಭತ್ತದ ಬೆಳೆಯುವುದು ಅಂದ್ರೆ ಸಾಮಾನ್ಯವಲ್ಲ. ಆದರೂ ಇಪ್ಪತ್ತು ತಳಿಯ ಭತ್ತದ ಬೆಳೆದು ರೈತ ಮುತ್ತಣ್ಣ ಅವರು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

  • ಬರಡು ಭೂಮಿಯಲ್ಲಿ ಬಂಗಾರದ ಬೆಳೆ-15 ವರ್ಷಗಳಿಂದ ನೀರು ಹೊತ್ತ ರೈತ

    ಬರಡು ಭೂಮಿಯಲ್ಲಿ ಬಂಗಾರದ ಬೆಳೆ-15 ವರ್ಷಗಳಿಂದ ನೀರು ಹೊತ್ತ ರೈತ

    -ಔರಾದ್‍ನ ವಿಲಾಸ್ ಹೂಗಾರ್ ಚಮತ್ಕಾರ

    ಬೀದರ: ಬಿಸಿಲ ನಾಡು ಬೀದರ್ ನ ಔರಾದ್ ತಾಲೂಕಿನ ವಿಲಾಸ್‍ರಾವ್ ಹೂಗಾರ್ ಅವರು ಬರಡು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದಿದ್ದಾರೆ. ಇದಕ್ಕಾಗಿ 15 ವರ್ಷಗಳಿಂದ ಹೆಗಲ ಮೇಲೆ ನೀರು ಹೊತ್ತಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಗುಡಪಳ್ಳಿ ಗ್ರಾಮದ ವಿಲಾಸ್‍ರಾವ್ ಹೂಗಾರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಭೀಕರ ಬರಗಾಲದಿಂದ ನಲುಗಿ ಹೋಗಿರುವ ಜಿಲ್ಲೆಯಲ್ಲಿ ರೈತರು ತತ್ತರಿಸಿ ಹೋಗಿದ್ದಾರೆ. ಆದರೆ 15 ವರ್ಷಗಳ ಹಿಂದೆ ವಿಲಾಸ್‍ರಾವ್ ಬರಡು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.

    ಅಂತರ್ಜಲ ಮಟ್ಟ ಕುಸಿದಿದ್ದಿರೂ, 1 ಕಿ.ಮೀ. ದೂರದ ಮನೆಯಿಂದ ಹೆಗಲಮೇಲೆ ಬಿಂದಿಗೆಯಿಂದ ನೀರು ತಂದು ಬೆಳೆ ಬೆಳೆಯುತ್ತಿದ್ದಾರೆ. 3 ಎಕರೆಯ ಜಮೀನಿನಲ್ಲಿ 3 ಗುಂಟೆ ಜಾಗದಲ್ಲಿ ಮಿಶ್ರಬೆಳೆ ಪದ್ಧತಿಯಡಿ ಟೊಮಾಟೋ, ಮೆಣಸಿನಕಾಯಿ, ಚವಳೆಕಾಯಿ, ಬದನೆ, ಬೆಂಡೆಕಾಯಿ, ಕೊತ್ತಂಬರಿ ಸೇರಿದಂತೆ ತರಹೇವಾರಿ ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ.

    ಹೆಂಡತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆ, ಮಗ ವಿಕಲಚೇತನನಾಗಿದ್ದು ಜೊತೆಗೆ ಪುಟ್ಟ ಹೆಣ್ಣು ಮಗುವನ್ನು ಸಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಮಾನಸಿಕವಾಗಿ ಕುಗ್ಗದೇ ವಿಲಾಸ್ ರಾವ್ ಮುಂದೆ ಸಾಗುತ್ತಿದ್ದಾರೆ.

    ಗ್ರಾಮದಲ್ಲಿ ಬೀಳುವ ಸಗಣಿಯನ್ನು ಸಂಗ್ರಹಿಸಿ, ಬೆಳೆಗೆ ಹಾಕಿ ಸಾವಯವ ಕೃಷಿ ಮಾಡುತ್ತಿದ್ದಾರೆ. ವಿಲಾಸ್ ಅವರ ಸಾಹಸಿ ಜೀವನ ನೋಡಿದ ಸ್ಥಳೀಯ ಅಧಿಕಾರಿಗಳು ಈಗ ಬೋರ್‍ವೆಲ್ ಕೊರೆಸಿಕೊಟ್ಟಿದ್ದಾರೆ. ಆದರೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ವಿಲಾಸ್ ಹೂಗಾರ್ ಅವರ ಈ ಕಾರ್ಯ, ಆತ್ಮಹತ್ಯೆಗೆ ಶರಣಾಗುವ ರೈತರು, ಗುಳೆ ಹೋಗುವ ಜನರಿಗೆ ಸ್ಫೂರ್ತಿಯಾಗಲಿ.

  • ಸಾವಯವ ಕೃಷಿಕ ಎಲ್.ನಾರಾಯಣರೆಡ್ಡಿ ವಿಧಿವಶ

    ಸಾವಯವ ಕೃಷಿಕ ಎಲ್.ನಾರಾಯಣರೆಡ್ಡಿ ವಿಧಿವಶ

    ಚಿಕ್ಕಬಳ್ಳಾಪುರ/ದೊಡ್ಡಬಳ್ಳಾಪುರ: ನಾಡೋಜ ಪ್ರಶಸ್ತಿ ಪುರಸ್ಕೃತ, ಸಾವಯವ ಕೃಷಿ ಪಂಡಿತ ಎಲ್. ನಾರಾಯಣರೆಡ್ಡಿ(80) ಇಂದು ಮುಂಜಾನೆ 5 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲೇ ವಾಸವಾಗಿದ್ದ ನಾರಾಯಣರೆಡ್ಡಿಯವರು ಇಹಲೋಕ ತ್ಯಜಿಸಿದ್ದಾರೆ. ಅಂದಹಾಗೆ 80 ವರ್ಷ ವಯಸ್ಸಿನ ನಾರಾಯಣರೆಡ್ಡಿಯವರು ಕಳೆದ ಕೆಲ ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ತೀವ್ರವಾದ ಕಫ ಹಿನ್ನೆಲೆ ಇಂದು ಮುಂಜಾನೆ ತೋಟದ ಮನೆಯಲ್ಲಿ ನಿಧನರಾಗಿದ್ದಾರೆ.

    ಕೃಷಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಾರಾಯಣರೆಡ್ಡಿ ಅವರು ಸಾವಯವ ಕೃಷಿ ಪಂಡಿತರೆಂದೇ ಪ್ರಖ್ಯಾತಿ ಗಳಿಸಿದ್ದಾರೆ. ಮೂಲತಃ ಬೆಂಗಳೂರಿನ ವೈಟ್ ಫೀಲ್ಡ್ ಸಮೀಪ ವರ್ತೂರು ಬಳಿ ಇರುವ ಸೊರೆಹುಣಸೆ ಇವರ ಸ್ವಗ್ರಾಮವಾಗಿದೆ. ಹೀಗಾಗಿ ಇವರ ಸ್ವಗ್ರಾಮ ಸೊರೆಹುಣಸೆ ಗ್ರಾಮದ ಹೊಲದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಮುಂದಾಗಿದ್ದಾರೆ. ಮತ್ತೊಂದೆಡೆ ನಾರಾಯಣರೆಡ್ಡಿ ಅವರ ಮೂವರು ಪುತ್ರರಾದ ಮಂಜುನಾಥ್, ನಿತ್ಯಾನಂದ ಹಾಗೂ ಸಾಯಿರಾಮ್ ಸೇರಿದಂತೆ ಪತ್ನಿ ಸರೋಜಮ್ಮ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನ ಅಗಲಿದ್ದಾರೆ.

    ಕಿರಿಯ ಮಗ ಸಾಯಿರಾಮ್, ಸೊಸೆ, ಮೊಮ್ಮಕ್ಕಳು ಹಾಗೂ ಪತ್ನಿ ಸರೋಜಮ್ಮ ಜೊತೆ ಮರಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲೇ ನಾರಾಯಣರೆಡ್ಡಿ ಅವರು ವಾಸವಾಗಿದ್ದರು. ಹಿರಿಯ ಮಗ ಹಾಗೂ ಮತ್ತೋರ್ವ ಮಗ ಸೊರಹುಣಸೆ ಗ್ರಾಮದಲ್ಲೇ ವಾಸವಾಗಿದ್ದರು. ಕಳೆದ 25 ವರ್ಷಗಳ ಹಿಂದೆ ಮರಳೇನಹಳ್ಳಿ ಗ್ರಾಮಕ್ಕೆ ಬಂದಿದ್ದ ನಾರಾಯಣರೆಡ್ಡಿ ಅವರು 25 ಎಕರೆ ಜಮೀನಿನಲ್ಲಿ ಸಾವಯವ ಕೃಷಿಕಾಯಕ ಮಾಡುತ್ತಿದ್ದರು. 25 ಎಕೆರೆಯಲ್ಲಿ ಆಡು ಮುಟ್ಟಿದ ಸೊಪ್ಪಿಲ್ಲ ಅನ್ನೋ ಹಾಗೆ ಎಲ್ಲಾ ಬಗೆಯ ವಿವಿಧ ಜಾತಿಯ ಮರ ಗಿಡಗಳನ್ನ ಸಾವಯವ ಕೃಷಿ ಮೂಲಕ ಸಾಕಿ ಸಲುಹಿ ಬೆಳೆಸುವ ಮೂಲಕ ಮನೆ ಮಾತಾಗಿದ್ದರು.

    ಇದಲ್ಲದೆ ಪ್ರತಿ ಭಾನುವಾರ ಇವರ ತೋಟದ ಮನೆಯಲ್ಲಿ ಸಾವಯವ ಕೃಷಿ ಕಣ್ತುಂಬಿಕೊಳ್ಳೋಕೆ ಬರುತ್ತಿದ್ದ ಕೃಷಿ ಪ್ರಿಯ ಅಥಿತಿಗಳಿಗೆ ಉಪನ್ಯಾಸ ನೀಡುತ್ತಿದ್ದರು. ಬರೀ ರಾಜ್ಯ ದೇಶ ಅಷ್ಟೇ ಅಲ್ಲದೇ ವಿದೇಶದಿಂದಲೂ ಸಹ ಇವರ ಸಾವಯವ ಕೃಷಿ ಬಗ್ಗೆ ಸಂಶೋಧನೆ ಮಾಡಲು ಹಲವು ವಿದ್ಯಾರ್ಥಿಗಳು, ಕೃಷಿ ಕಾಯಕ ಆಸಕ್ತರು ಸಹ ಬಂದು ಹೋಗುತ್ತಿದ್ದರು. ಹಲವು ಬಾರಿ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಇವರ ಕೃಷಿ ಉಪನ್ಯಾಸಗಳನ್ನ ನಡೆಸಿಕೊಡುತ್ತಿದ್ದರು. ಹೀಗಾಗಿ `ಕೃಷಿ ಮೇಷ್ಟ್ರು’ ಎಂದೇ ಫೇಮಸ್ ಆಗಿದ್ದರು.

    ಸದಾ ಸಾವಯವ ಕೃಷಿ ಕಾಯಕ ಮಾಡುವ ಮೂಲಕ ಸಮಾಜಕ್ಕೆ ಸಾವಯವ ಕೃಷಿಯ ಮಹತ್ವವನ್ನ ಸಾರುತ್ತಿದ್ದರು. ಇನ್ನೂ ಇವರು ಯಾವುದೇ ಖಾಯಿಲೆ ಅನಾರೋಗ್ಯಕ್ಕೂ ತುತ್ತಾದರೂ ಆಸ್ಪತ್ರೆಗೆ ಹೋಗುತ್ತಿರಲಿಲ್ಲವಂತೆ. ಇಂಗ್ಲೀಷ್ ಔಷಧಿ ಬಗ್ಗೆ ತಿರಸ್ಕಾರ ಮನೋಭಾವ ಹೊಂದಿದ್ದರು. ಹೀಗಾಗೇ ಹುಷಾರಿಲ್ಲದಿದ್ದರೂ ಒಂದು ದಿನವೂ ಆಸ್ಪತ್ರೆಗೆ ಹೋಗಿರಲಿಲ್ಲ. ಇದರಿಂದ ಅವರನ್ನ ಬೇಗ ಕಳೆದಕೊಳ್ಳಬೇಕಾಯಿತು ಅಂತ ಅವರನ್ನು ಹತ್ತಿರದಿಂದ ಬಲ್ಲವರು ಹೇಳಿದ್ದಾರೆ.

    ಸದ್ಯ ದೊಡ್ಡಬಳ್ಳಾಪುರ ನಗರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ತದನಂತರ ಪಾರ್ಥೀವ ಶರೀರವನ್ನ ಸ್ವಗ್ರಾಮ ಸೊರಹುಣಸೆಗೆ ತೆಗೆದುಕೊಂಡು ಹೋಗಿ ಸಂಜೆ ಅಂತ್ಯಕ್ರಿಯೆ ನೇರವೇರಿಸಲಾಗುತ್ತಿದೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದೂವರೆ ಎಕರೆ ಜಮೀನಿನಲ್ಲಿ 60ಕ್ಕೂ ಹೆಚ್ಚು ಸಿರಿಧಾನ್ಯಗಳನ್ನು ಬೆಳೆದು ಮಾದರಿಯಾಗಿದ್ದಾರೆ ಕೋಲಾರದ ಮಹಿಳೆ!

    ಒಂದೂವರೆ ಎಕರೆ ಜಮೀನಿನಲ್ಲಿ 60ಕ್ಕೂ ಹೆಚ್ಚು ಸಿರಿಧಾನ್ಯಗಳನ್ನು ಬೆಳೆದು ಮಾದರಿಯಾಗಿದ್ದಾರೆ ಕೋಲಾರದ ಮಹಿಳೆ!

    ಕೋಲಾರ: ಕೆರೆಗಳ ನಾಡು ಕೋಲಾರದಲ್ಲಿ ಮಳೆಯನ್ನೇ ಆಧರಿಸಿ 60ಕ್ಕೂ ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯುವ ಮೂಲಕ ಮಹಿಳೆಯೊಬ್ಬರು `ಮಾದರಿ ರೈತ ಮಹಿಳೆ’ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

    ಚಿನ್ನದ ನಾಡು ಕೋಲಾರದಲ್ಲಿ ಆದರ್ಶ ರೈತ ಮಹಿಳೆಯೊಬ್ಬರು ಸುಮಾರು 60 ವರ್ಷಗಳಿಂದ ಸಿರಿಧಾನ್ಯಗಳನ್ನು ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ತೊಂಡಹಳ್ಳಿ ಗ್ರಾಮದ ರಾಜಮ್ಮ ಈ ಆದರ್ಶ ಮಹಿಳೆ.

    ಕೋಲಾರದಲ್ಲಿ ಮಳೆಯ ಪ್ರಮಾಣ ಅಷ್ಟೇನೂ ಹೇಳಿಕೊಳ್ಳುವಂಥದ್ದೇನಲ್ಲ. ಮುಂಗಾರು ಮಳೆಯನ್ನೇ ಆಧರಿಸಿ ರೈತ ಮಹಿಳೆ ರಾಜಮ್ಮ, ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ 60 ವರ್ಷಗಳಿಂದ ಸುಮಾರು 50 ರಿಂದ 60 ರೀತಿಯ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದಾರೆ.

    ತಮ್ಮ ದೈನಂದಿನ ಬದುಕಿಗೆ ಬೇಕಾದ ರಾಗಿ, ಜೋಳ, ಅವರೆ, ಗೊಂಗುರು, ಬುಷ್ ಬಿನ್ಸ್, ಚಿಕ್ಕಕುಂಬಳಕಾಯಿ, ಕೆಂಪುಮುದ್ರೆ ಜೋಳ, ಹಳಸಂದ್ರ, ಸಾಮೆ, ಕಪ್ಪು ಸಾಮೆ, ಔಡಲ ಬೀಜ, ಬರುಗು ಸಾಮಿ, ಕಾಕಿ ಜೋಳ, ಕಿರು ಹಳೆಸಂದ್ರೆ, ತಬೆ ಬೀಜ, ನುಗ್ಗೆಬೀಜ, ಅವರೆ ಬೀಜ, ಸಚೆ ಬೀಜ, ಬಿಳಿ ನವೆ, ಊದಲು ಬೀಜ,ಕೆಂಪು ನವಣೆ, ಎಳ್ಳು, ರಾಗಿ ಬೀಳು, ಗಿಡ್ಡ ರಾಗಿ, ಬೀಟ್ರೋರಟ್, ಅರಿಸಿನ, ಟಮೋಟೊ, ಸೌತೆಕಾಯಿ, ಅರಿಸಿನ ಮೂಲಂಗಿ, ಈರುಳ್ಳಿ, ಬದನೆ, ಮುಸುಕ ಬದನೆ, ಕ್ಯಾರೆಟ್, ಕಡ್ಡಿ ಮೆಣಸಿನಕಾಯಿ, ಕೆಂಪು ಮೂಲಂಗಿ, ರಾಜಾಮ್ ಬೀಜ, ಮೆಂಥ್ಯ್ ಸೋಪ್ಪು, ತಂಬೂರಿ ಸೊರೆಕಾಯಿ ಕ್ಯಾರೆಟ್, ಉದ್ದ ಕುಂಬಳಕಾಯಿ, ಸೊರೆಬೀಜ, ಜೋಳ, ಬೀಳಿಬಿನ್ಸ್, ಸಾಮಿ, ಉದ್ದಲಬೀಜ, ಚಟ್ನಿ ಎಳ್ಳು ಸೇರಿದಂತೆ ಹಲವಾರು ಬಗೆಯ ಸಿರಿಧಾನ್ಯಗಳನ್ನು ಬೆಳೆಯುತ್ತಾರೆ.

    ತಮ್ಮ ಕುಟುಂಬಕ್ಕೆ ಬೇಕಾದಷ್ಟು ಸಿರಿಧಾನ್ಯಗಳನ್ನು ಬೆಳೆಯುತ್ತಾ ವರ್ಷವಿಡೀ ತಮ್ಮ ಜೀವನ ನಡೆಸುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯ ಅಂದ್ರೆ ಇವರು ಸಾವಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಹೊಲಕ್ಕೆ ರಾಸಾಯನಿಕ ಗೊಬ್ಬರವನ್ನು ಬಳಸದೇ ಕೊಟ್ಟಿಗೆ ಗೊಬ್ಬರವನ್ನೇ ಬಳಸಿ ಆರೋಗ್ಯಕರ ಕೃಷಿ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ಇದರಿಂದ ಇವರು ಮಾಡುವ ಕೃಷಿಯು ಅಕ್ಕಪಕ್ಕದ ರೈತರಿಗೂ ಮಾದರಿಯಾಗಿದೆ.

    ಈಗಾಗಲೇ ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಭೂಮಿ ಶುಚಿಗೊಳಿಸುವುದರಿಂದ ಹಿಡಿದು ಬಿತ್ತನೆವರೆಗೆ ಎಲ್ಲಾ ಕಾರ್ಯಗಳು ಪ್ರಾರಂಭಗೊಂಡಿವೆ. ಇನ್ನು ರೈತರಿಗೆ ಇದು ಪಕ್ಕಾ ಪರ್ವಕಾಲ. ಬಿತ್ತನೆ ಕಾರ್ಯ ಪೂರ್ಣಗೊಂಡು ಚೆನ್ನಾಗಿ ಬೆಳೆ ಬಂದರೆ ವರ್ಷವಿಡೀ ಆನಂದದಿಂದ ಊಟ ಮಾಡಬಹುದು ಎನ್ನುವ ಭಾವನೆ ಅವರದ್ದಾಗಿದೆ.

  • ಓದಿದ್ದು ಸೈಕಾಲಜಿ, ಕಂಪ್ಯೂಟರ್ ಸೈನ್ಸ್- ಆದ್ರೂ, ಬರಡು ಭೂಮಿಯಲ್ಲಿ ಬೆಳೆದ್ರು ಬಂಗಾರದ ಬೆಳೆ

    ಓದಿದ್ದು ಸೈಕಾಲಜಿ, ಕಂಪ್ಯೂಟರ್ ಸೈನ್ಸ್- ಆದ್ರೂ, ಬರಡು ಭೂಮಿಯಲ್ಲಿ ಬೆಳೆದ್ರು ಬಂಗಾರದ ಬೆಳೆ

    ರಾಯಚೂರು: ಏನಾದರೂ ಸಾಧಿಸಲೇಬೇಕು ಅನ್ನೋ ಛಲ ಇರೋರು ಒಂದಲ್ಲ ಒಂದು ದಿನ ಎಂತಾ ಕಷ್ಟ ಇದ್ರೂ ಸಾಧಿಸಿ ತೋರಿಸುತ್ತಾರೆ. ಅದಕ್ಕೆ ನಮ್ಮ ರಾಯಚೂರಿನ ಪಬ್ಲಿಕ್ ಹೀರೋ ಸಾಕ್ಷಿ. ಬರಡು ಭೂಮಿಯಲ್ಲೇ ಮನೆ ಕಟ್ಟಿಕೊಂಡು ಇಡೀ ಭೂಮಿಯನ್ನೇ ಬಂಗಾರ ಮಾಡಿ, ಬೆಳೆ ಬೆಳೆಯುತ್ತಿದ್ದಾರೆ.

    ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕವಿತಾಳ ಗ್ರಾಮದ ನಿವಾಸಿ ಕವಿತಾ ಮಿಶ್ರಾ, ಕೃಷಿ ಕ್ಷೇತ್ರದಲ್ಲಿ ಸಾಧನೆಗೆ ಹಠ ಹಿಡಿದು ತಮ್ಮ 8 ಎಕರೆ ಬರಡು ಭೂಮಿಯಲ್ಲಿ ಸಾವಯವ ಕೃಷಿ ಹಾಗೂ ಹನಿ ನೀರಾವರಿ ಮೂಲಕ ಬಂಗಾರದಂತ ಬೆಳೆ ಬೆಳೀತಿದ್ದಾರೆ. ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾ ಜೊತೆಗೆ ಎಂಎ ಸೈಕಾಲಜಿ ಓದಿರೋ ಕವಿತಾ ಅವರು ಕಳೆದ 7 ವರ್ಷಗಳಲ್ಲಿ ಪ್ರಗತಿಪರ ರೈತ ಮಹಿಳೆಯಾಗಿದ್ದಾರೆ.

    ಅತೀ ಸಾಂದ್ರಿಕೃತ ಬೇಸಾಯ ಪದ್ಧತಿ ಅಳವಡಿಸಿಕೊಂಡು ಮಾವು, ಸೀತಾಫಲ, ದಾಳಿಂಬೆ, ಮೂಸಂಬಿ, ನಿಂಬು, ಸಪೋಟ, ಬಾರೇಹಣ್ಣು, ಮತ್ತಿ, ಶ್ರೀಗಂಧ, ರಕ್ತಚಂದನ ಸೇರಿದಂತೆ ನಾನಾ ಬಗೆಯ ಗಿಡಗಳನ್ನ ಬೆಳೆದಿದ್ದಾರೆ. ಶ್ರೀಗಂಧ ಹಾಗೂ ರಕ್ತಚಂದನದ ಮರಗಳ ಮಾರಾಟಕ್ಕೆ ಕೆಎಸ್‍ಡಿಎಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.

    ಇಷ್ಟೇ ಅಲ್ಲದೇ ಕವಿತಾ ಅವರು ತೋಟದಲ್ಲೇ ಮನೆ ಮಾಡಿಕೊಂಡು ಹಸು, ಕುರಿ, ಕೋಳಿ ಸಾಕಾಣಿಕೆ ಮಾಡಿದ್ದಾರೆ. ವರ್ಷಕ್ಕೆ 25 ಲಕ್ಷ ರೂಪಾಯಿಗೂ ಅಧಿಕ ಆದಾಯ ಗಳಿಸ್ತಿದ್ದಾರೆ. ಇಂಗ್ಲಿಷ್, ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಗಳನ್ನ ಸುಲಲಿತವಾಗಿ ಮಾತನಾಡಬಲ್ಲ ಕವಿತಾರನ್ನ ವಿವಿಧ ಕೃಷಿ ವಿವಿಗಳ ಸಂಪನ್ಮೂಲ ವ್ಯಕ್ತಿಗಳು ಕೃಷಿ ಪದ್ಧತಿ ಬಗ್ಗೆ ಮಾಹಿತಿ ಪಡೆದು ಜನರಿಗೆ ತಲುಪಿಸ್ತಿದ್ದಾರೆ.

     

    https://www.youtube.com/watch?v=4q1NZurnxS8