Tag: ಸಾರ್ವಜನಿಕರು

  • ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರ ಪ್ರವೇಶ ನಿಷೇಧ

    ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರ ಪ್ರವೇಶ ನಿಷೇಧ

    ಬಳ್ಳಾರಿ: ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹಬ್ಬುತ್ತಿದೆ. ಲಾಕ್‍ಡೌನ್ ಮಾಡಬೇಕೆ, ಬೇಡವೆ ಎಂಬ ಚರ್ಚೆಗಳೂ ನಡೆಯುತ್ತಿವೆ. ಇದರ ಮಧ್ಯೆ ಇದೀಗ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕ ಪ್ರವೇಶ ಬಂದ್ ಮಾಡಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶ ಹೊರಡಿಸಿದ್ದಾರೆ.

    ತಕ್ಷಣದಿಂದ ಜಾರಿಯಾಗುವಂತೆ ಮುಂದಿನ ಆದೇಶದವರೆಗೆ ಜಿಲ್ಲಾಧಿಕಾರಿ ಕಾರ್ಯಾಲಯ ಸಂಪರ್ಕಿಸುವ ಕಚೇರಿಯನ್ನು ಸಾರ್ವಜನಿಕ ಪ್ರವೇಶದಿಂದ ಹೊರಗಿಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ಬಹುತೇಕ ಸಿಬ್ಬಂದಿ ಕೋವಿಡ್-19 ನಿರ್ವಹಣೆಯ ಒಂದಿಲ್ಲೊಂದು ತಂಡಗಳಲ್ಲಿ ನೇರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದಕ್ಕೆ ಸಾರ್ವಜನಿಕರು ಅಥವಾ ಇನ್ನಿತರ ರೀತಿಯಲ್ಲಿ ತೊಡಕಾಗುತ್ತಿದೆ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

    ಜನರ ಅನುಕೂಲಕ್ಕಾಗಿ ಕಿಯೋಸ್ಕ್ ಅಳವಡಿಸಲಾಗುತ್ತಿದ್ದು, ಜನ ಅನ್‍ಲೈನ್ ಮೂಲಕ ಯಾವುದೇ ರೀತಿಯ ವರದಿ ಅಥವಾ ಅರ್ಜಿಗಳನ್ನು ಪಡೆದುಕೊಳ್ಳಬಹುದು ಎಂದು ಅದೇಶದಲ್ಲಿ ತಿಳಿಸಲಾಗಿದೆ. ಕಿಯೋಸ್ಕ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿ ಅಗತ್ಯ ಮುಂಜಾಗ್ರತೆ ವಹಿಸಿ ಸಾರ್ವಜನಿಕರ ಅರ್ಜಿಗಳಿಗೆ ಸ್ಪಂದಿಸುವಂತೆ ಹಾಗೂ ಕೆಲಸ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದೆ.

  • ಸಾರ್ವಜನಿಕವಾಗಿ ಉಗುಳಿ ಸಿಕ್ಕಿಹಾಕಿಕೊಂಡ ಕುಖ್ಯಾತ ರೌಡಿ ಸಲೀಂ

    ಸಾರ್ವಜನಿಕವಾಗಿ ಉಗುಳಿ ಸಿಕ್ಕಿಹಾಕಿಕೊಂಡ ಕುಖ್ಯಾತ ರೌಡಿ ಸಲೀಂ

    ಹುಬ್ಬಳ್ಳಿ: ಕಲಬುರಗಿಯಲ್ಲಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸಲೀಂ ಬಳ್ಳಾರಿಯನ್ನು ಹುಬ್ಬಳ್ಳಿ ನೇಕಾರ ನಗರದ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಪೊಲೀಸರ ಕೈಗೆ ಸಿಕ್ಕಾಗಲೂ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಸಲೀಂ ಬಳ್ಳಾರಿಯನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಲಬುರಗಿಯಲ್ಲಿ ಕೊಲೆ ಮಾಡಿರುವ ಸಲೀಂ ಬಳ್ಳಾರಿ ತಲೆಮರೆಸಿಕೊಂಡಿದ್ದು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಲಬುರಗಿ ಪೊಲೀಸರು ಹುಡುಕುವುದನ್ನು ಸ್ಥಗಿತಗೊಳಿಸಿದ್ದರು. ಈತ ಅನೇಕ ಪ್ರಕರಣಗಳಲ್ಲಿ ಬೇಕಾಗಿರುವ ವ್ಯಕ್ತಿಯಾಗಿದ್ದ.

    ಕಲಬುರಗಿಯಲ್ಲಿ ಸುಪಾರಿ ಪಡೆದು ಕೊಲೆ ಮಾಡಿರುವ ಸಲೀಂ ಬಳ್ಳಾರಿ ಹುಬ್ಬಳ್ಳಿ ನೇಕಾರ ನಗರಕ್ಕೆ ಬಂದು ತಲೆಮರೆಸಿಕೊಂಡಿದ್ದ. ಅಲ್ಲದೇ ಇಲ್ಲಿ ಪರಿಚಯ ಮರೆಮಾಚಿ ಜೀವನ ನಡೆಸುತ್ತಿದ್ದ. ಆದರೆ ನಿನ್ನೆ ಸಲೀಂ ಸಾವಜಿ ಹೊಟೇಲ್ ಗೆ ಊಟಕ್ಕೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಊಟ ಇಲ್ಲ ಎಂದು ಹೋಟೆಲ್ ಅವರು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಸಲೀಂ ಸಾರ್ವಜನಿಕವಾಗಿ ಉಗುಳಿದ್ದಾನೆ.

    ಇದನ್ನು ಕಂಡು ಆಕ್ರೋಶಗೊಂಡ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿದ್ದಾರೆ. ಇದೇ ವೇಳೆ ವಿದ್ಯುತ್ ಕಂಬಕ್ಕೆ ಗುದ್ದಿ ಸಲೀಂ ತಲೆಗೆ ಗಾಯ ಮಾಡಿದ್ದಾನೆ. ಆಗ ಸ್ಥಳೀಯರು ಕಸಬಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇತನನ್ನು ಸಲೀಂ ಬಳ್ಳಾರಿ ಎಂದು ಕಂಡು ಹಿಡಿದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.

  • ತಾಯಂದಿರೊಂದಿಗೆ ನರ್ಸ್‍ಗಳ ಅನುಚಿತ ವರ್ತನೆ- ಸಾರ್ವಜನಿಕರ ಆಕ್ರೋಶ

    ತಾಯಂದಿರೊಂದಿಗೆ ನರ್ಸ್‍ಗಳ ಅನುಚಿತ ವರ್ತನೆ- ಸಾರ್ವಜನಿಕರ ಆಕ್ರೋಶ

    ಹುಬ್ಬಳ್ಳಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ನರ್ಸ್ ಗಳು ತಮ್ಮ ಜೀವ ಪಣಕ್ಕಿಟು ರೋಗಿಗಳ ಉಪಚಾರ ಮಾಡುತ್ತಿದ್ದಾರೆ. ಆದರೆ ಹಳೇ ಹುಬ್ಬಳ್ಳಿಯ ಹೆಗ್ಗೇರಿ ನಗರ ಆರೋಗ್ಯ ಕೇಂದ್ರದ ನರ್ಸ್ ಗಳು ಮಾತ್ರ ಮಕ್ಕಳು ಹಾಗೂ ಪೋಷಕರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ.

    ಹೆಗ್ಗೇರಿ ಆರೋಗ್ಯ ಕೇಂದ್ರದಲ್ಲಿ ಪ್ರತಿ ಗುರುವಾರ ನವಜಾತ ಶಿಶುಗಳಿಂದ ಹಿಡಿದು 10 ವರ್ಷದ ಮಕ್ಕಳಿಗೆ ಓಪಿವಿ, ಬಿಸಿಜಿ, ಪೆಂಟಾ, ಐಪಿವಿ, ವಿಟಮಿನ್ ಲಸಿಕೆಯನ್ನು ಹಾಕಲಾಗುತ್ತದೆ. ಆದರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಷ್ಟು ದಿನ ಮಕ್ಕಳಿಗೆ ಯಾವುದೇ ಲಸಿಕೆ ಹಾಕಿರಲಿಲ್ಲ. ಈಗ ಲಸಿಕೆ ಹಾಕಲಾಗುತ್ತಿದ್ದು, ತಾಯಂದಿರು ಪುಟ್ಟ ಮಕ್ಕಳನ್ನು ಹೊತ್ತುಕೊಂಡು ಆಸ್ಪತ್ರೆಗೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ನರ್ಸ್‍ಗಳು ತಾಯಂದಿರ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಾರೆ.

    ಆಸ್ಪತ್ರೆಯ ಹೊರಗಡೆ ತಾಯಂದಿರು ಶಿಶುಗಳನ್ನು ಹೊತ್ತುಕೊಂಡು ನೆಲದ ಮೇಲೆ ಕುಳಿತುಕೊಳ್ಳುವ ಸ್ಥಿತಿ ಇದೆ. ಸರಿಯಾದ ಆಸನ ವ್ಯವಸ್ಥೆ ಇಲ್ಲ. ನೆತ್ತಿ ಸುಡುವ ಬಿಸಿಲಲ್ಲಿಯೇ ತಾಯಂದಿರು ಸರತಿಯಲ್ಲಿ ನಿಲ್ಲುವ ಪರಸ್ಥಿತಿ ಇದೆ. ಈ ಬಗ್ಗೆ ಪ್ರಶ್ನಿಸಿದ ತಾಯಿಯೊಬ್ಬರಿಗೆ ನರ್ಸ್ ಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಂಡು ನರ್ಸ್ ಗಳ ವರ್ತನೆಯನ್ನು ಸರಿಪಡಿಸಬೇಕು. ಅಲ್ಲದೆ ಮಕ್ಕಳ ಪೋಷಕರಿಗೆ ಕನಿಷ್ಟ ನೆರಳಿನ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಲಾಕ್‍ಡೌನ್ ಡ್ಯೂಟಿ ಮಧ್ಯೆ 20 ಸಾವಿರ ಸಸಿ ಬೆಳೆಸಿದ ರಾಯಚೂರು ಪೊಲೀಸರು

    ಲಾಕ್‍ಡೌನ್ ಡ್ಯೂಟಿ ಮಧ್ಯೆ 20 ಸಾವಿರ ಸಸಿ ಬೆಳೆಸಿದ ರಾಯಚೂರು ಪೊಲೀಸರು

    – ಪೊಲೀಸರಿಂದ ಸಾರ್ವಜನಿಕರಿಗೆ ಉಚಿತ ಉಡುಗೊರೆ

    ರಾಯಚೂರು: ಬಿಸಿಲನಾಡು ರಾಯಚೂರನ್ನು ಹಸಿರು ಜಿಲ್ಲೆಯನ್ನಾಗಿಸಲು ಜಿಲ್ಲಾ ಪೊಲೀಸ್ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ. ಕೊರೊನಾ ಲಾಕ್ ಡೌನ್ ಸಮಯದಲ್ಲೂ 20 ಸಾವಿರ ಸಸಿಗಳನ್ನು ಬೆಳೆಸಿದೆ.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಅವರು ಹಸಿರು ಜಿಲ್ಲೆಗಾಗಿ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರೊಂದಿಗೆ 5 ಲಕ್ಷ ಸಸಿಗಳನ್ನು ನೆಡುವ ಪ್ರತಿಜ್ಞೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ರಾಯಚೂರಿನ ನಾಗರಿಕರ ಸಹಕಾರದೊಂದಿಗೆ ಹಾಲಿನ ಪ್ಯಾಕೆಟ್ ಗಳನ್ನು ಸಂಗ್ರಹಿಸಿ ಅದರಲ್ಲಿ ವಿವಿಧ ರೀತಿಯ ಬೀಜಗಳನ್ನು ಹಾಕಿ ಸಸಿಗಳನ್ನು ಬೆಳೆಸಿ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಸುಮಾರು 20 ಸಾವಿರ ಪಪ್ಪಾಯ, ಸೀತಾಫಲಾ, ಮಾವು, ಪೇರಲ, ಹುಣಸೆ, ನುಗ್ಗೆಕಾಯಿ, ಹೊಂಗೆ, ಅಲೊವೇರಾ ಸೇರಿದಂತೆ ವಿವಿಧ ರೀತಿಯ ಸಸಿಗಳನ್ನು ಬೆಳೆಸಿದ್ದಾರೆ.

    ದಣಿವರಿಯದ ಕರೊನಾ ಲಾಕ್‍ಡೌನ್ ಕರ್ತವ್ಯದ ಮಧ್ಯೆ ಬಿಡುವಿನ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಸಸಿಗಳನ್ನು ನೆಡುವ ಕಾರ್ಯದ ಕಡೆ ಗಮನ ಹರಿಸಿ, ಅವುಗಳನ್ನು ಪೋಷಣೆ ಮಾಡುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ ಪರಿಶ್ರಮದಿಂದ ಸುಮಾರು 20 ಸಾವಿರ ಸಸಿಗಳು ಸಿದ್ಧವಾಗಿವೆ. ಆದ್ದರಿಂದ ರಾಯಚೂರು ಜಿಲ್ಲೆಯ ನಾಗರಿಕರು ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗುವಾಗ ಇತರೆ ಉಡುಗೊರೆ ನೀಡುವ ಬದಲಾಗಿ ಸಸಿಗಳನ್ನು ಉಡುಗೊರೆಯಾಗಿ ನೀಡಿ ಜಿಲ್ಲೆಯನ್ನು ಹಸಿರು ಜಿಲ್ಲೆಯಾಗಿಸಲು ಸಹಕರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಕೋರಿದ್ದಾರೆ.

    ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಸಸಿಗಳು ಬೇಕಾದಲ್ಲಿ ಮೊಬೈಲ್ ಸಂಖ್ಯೆ 9480803806 ಅಥವಾ 9480803840ಕ್ಕೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

  • ಗ್ರೀನ್ ಝೋನ್‍ನಲ್ಲಿರುವ ಚಿತ್ರದುರ್ಗದಲ್ಲಿ ಲಾಕ್‍ಡೌನ್ ಸಡಿಲಿಕೆಗೆ ವಿರೋಧ

    ಗ್ರೀನ್ ಝೋನ್‍ನಲ್ಲಿರುವ ಚಿತ್ರದುರ್ಗದಲ್ಲಿ ಲಾಕ್‍ಡೌನ್ ಸಡಿಲಿಕೆಗೆ ವಿರೋಧ

    ಚಿತ್ರದುರ್ಗ: ದಾವಣಗೆರೆಯಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿರುವ ಹಿನ್ನೆಲೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಗ್ರೀನ್ ಝೋನ್‍ನಲ್ಲಿರುವ ಚಿತ್ರದುರ್ಗದಲ್ಲಿ ಲಾಕ್‍ಡೌನ್ ಸಡಿಲಿಕೆಗೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಜಾರಿಮಾಡಲಾಗಿದೆ. ಹೀಗಾಗಿ ಸಂಪೂರ್ಣ ಬಂದ್ ಆಗಿದ್ದ ಚಿತ್ರದುರ್ಗ ಜಿಲ್ಲೆ ಈಗ ಯಾವುದೇ ಕೊರೊನಾ ಪ್ರಕರಣ ಇಲ್ಲದೇ ಗ್ರೀನ್ ಝೋನ್‍ನಲ್ಲಿದೆ. ಹೀಗಾಗಿ ಎಂದಿನಂತೆ ಎಲ್ಲಾ ಚಟುವಟಿಕೆಗಳು ಆರಂಭಗೊಂಡಿವೆ. ಅಲ್ಲದೇ ವಾಹನ ಸಂಚಾರ ದಟ್ಟಣೆಯಾಗಿದ್ದು, ಅಂಗಡಿ ಮುಂಗಟ್ಟುಗಳು ತೆರೆದಿದ್ದು, ವ್ಯಾಪಾರ ವಹಿವಾಟು ಚುರುಕಾಗಿದೆ. ಆದರೆ ಪಕ್ಕದ ಜಿಲ್ಲೆ ದಾವಣಗೆರೆಯಲ್ಲಿ ಶುಕ್ರವಾರ ಒಂದೇ ದಿನ 6 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರೋದು ಕೋಟೆನಾಡಿನ ಜರನಲ್ಲಿ ಭಾರೀ ಆತಂಕ ಸೃಷ್ಟಿಸಿದೆ.

    ಆದ್ದರಿಂದ ಗ್ರೀನ್ ಝೋನ್‍ನಲ್ಲಿರುವ ಚಿತ್ರದುರ್ಗದಲ್ಲೂ ಇನ್ನಷ್ಟು ದಿನ ಲಾಕ್‍ಡೌನ್ ಮುಂದುವರೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಒಂದು ವೇಳೆ ಲಾಕ್‍ಡೌನ್ ಸಡಿಲಿಕೆಯಿಂದ ಜನರ ಓಡಾಟ ಹೆಚ್ಚಾಗಿ ಕೊರೊನಾ ಸೋಂಕು ಜಿಲ್ಲೆಗೂ ಕಾಲಿಡಬಹುದು. ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ಅವಾಂತರ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂಬ ಭಯ ಸಾರ್ವಜನಿಕರಲ್ಲಿ ಕಾಡುತ್ತಿದೆ. ಹೀಗಾಗಿ ಲಾಕ್‍ಡೌನ್ ಮುಂದುವರೆಸಿ ಎಂದು ಜನರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

  • ಚಿಕನ್ ಪ್ರಿಯರೇ ಎಚ್ಚರ – ಕೊಳೆತ ಚಿಕನ್ ಮಾರಾಟ ಮಾಡ್ತಾರೆ ವ್ಯಾಪಾರಸ್ಥರು

    ಚಿಕನ್ ಪ್ರಿಯರೇ ಎಚ್ಚರ – ಕೊಳೆತ ಚಿಕನ್ ಮಾರಾಟ ಮಾಡ್ತಾರೆ ವ್ಯಾಪಾರಸ್ಥರು

    ಮೈಸೂರು: ಮೈಸೂರಿನಲ್ಲಿನ ಚಿಕನ್ ಪ್ರಿಯರೇ ಕೊಂಚ ಹುಷಾರ್. ನೀವು ಸ್ವಲ್ಪ ಯಾಮಾರಿದ್ರು ನಿಮಗೆ ಹಳೆಯ ಸ್ಟಾಕ್ ನಲ್ಲಿರೋ ಚಿಕನ್ ಮಾಂಸವನ್ನು ನಿಮಗೆ ವ್ಯಾಪಾರಸ್ಥರು ಕೊಡುತ್ತಾರೆ.

    ಹಕ್ಕಿ ಜ್ವರದ ಕಾರಣ ಮೈಸೂರು ಜಿಲ್ಲಾಡಳಿತ ರಾತ್ರೋರಾತ್ರಿ ಕೋಳಿ ಮಾರಾಟಕ್ಕೆ ಬ್ರೇಕ್ ಹಾಕಿತ್ತು. ಹೀಗಾಗಿ ಕೆಲ ವ್ಯಾಪಾರಸ್ಥರು ಕೋಳಿ ಮಾಂಸವನ್ನು ಫ್ರಿಡ್ಜ್ ನಲ್ಲಿ ಇಟ್ಟಿದ್ದರು. ಈಗ ಚಿಕನ್ ಮಾರಾಟಕ್ಕೆ ಮೈಸೂರು ಜಿಲ್ಲಾಡಳಿತ ಅನುಮತಿ ನೀಡಿದ ಪರಿಣಾಮ ಫ್ರಿಡ್ಜ್‍ನಲ್ಲಿ ಇಡಲಾಗಿದ್ದ 20 ದಿನಗಳ ಹಿಂದಿನ ಕೋಳಿ ಮಾಂಸವನ್ನು ಗ್ರಾಹಕರಿಗೆ ನೀಡಲು ಮುಂದಾಗಿದ್ದಾರೆ.

    ಇದನ್ನು ಪತ್ತೆ ಹಚ್ಚಿದ ಕೆಲ ಗ್ರಾಹಕರು ಮಾರಾಟಗಾರರ ಅಸಲಿಯತ್ತನ್ನು ಬಯಲು ಮಾಡಿದ್ದಾರೆ. ಮೈಸೂರಿನ ಕ್ಯಾತಮಾರನಹಳ್ಳಿಯ ತಸ್ಕೀನ್ ಚಿಕನ್ ಅಂಡ್ ಮಟನ್ ಸೆಂಟರ್ ನಲ್ಲಿ ಕೊಳೆತ ಕೋಳಿ ಮಾಂಸ ಮಾರಾಟ ಮಾಡಲಾಗುತ್ತಿತ್ತು. ಎಚ್ಚೆತ್ತ ನಾಗರೀಕರು ಪಾಲಿಕೆಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪಾಲಿಕೆ ಅಧಿಕಾರಿಗಳು ಅಂಗಡಿ ಬಂದ್ ಮಾಡಿಸಿದ್ದಾರೆ. ಚಿಕನ್ ಮಾರಾಟಗಾರನನ್ನು ಉದಯಗಿರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಲಾಠಿ ರುಚಿಗೆ ಡೋಂಟ್ ಕೇರ್ ಅಂದೋರು ‘ಕೊರೊನಾ ಹೆಲ್ಮೆಟ್’ಗೆ ಗಢ ಗಢ

    ಲಾಠಿ ರುಚಿಗೆ ಡೋಂಟ್ ಕೇರ್ ಅಂದೋರು ‘ಕೊರೊನಾ ಹೆಲ್ಮೆಟ್’ಗೆ ಗಢ ಗಢ

    -ಕೊರೊನಾ ಹೆಲ್ಮೆಟ್ ಮೂಲಕ ಪೊಲೀಸರಿಂದ ಜನರಲ್ಲಿ ಅರಿವು

    ಚೆನ್ನೈ: ಮಹಾಮಾರಿ ಕೊರೊನಾ ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಆದರೂ ಹಲವರು ಈ ನಿಯಮ ಪಾಲಿಸುತ್ತಿಲ್ಲ. ಬೇಕಾಬಿಟ್ಟಿಯಾಗಿ ಸಂಚಿರಿಸುತ್ತಿದ್ದಾರೆ. ಇದನ್ನು ತಡೆಯಲು ಪೊಲೀಸರು ವಿವಿಧ ಉಪಾಯಗಳನ್ನು ಹುಡುಕುತ್ತಿದ್ದು, ಇದರ ಭಾಗವಾಗಿ ಕೊರೊನಾ ವೈರಸ್ ಆಕೃತಿಯ ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

    ಚೆನ್ನೈ ಪೊಲೀಸರು ಈ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದು, ಸ್ಥಳೀಯ ಕಲಾವಿದರ ಸಹಾಯದೊಂದಿಗೆ ಕೊರೊನಾ ಹೆಲ್ಮೆಟ್ ತಯಾರಿಸಿ, ಅದನ್ನು ಧರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸರ್ಕಾರ ಲಾಕ್‍ಡೌನ್ ಮಾಡಿ ಇಷ್ಟೆಲ್ಲಾ ಕ್ರಮ ಕೈಗೊಂಡರೂ ಸಾರ್ವಜನಿಕರು ಮಾತ್ರ ಇದಕ್ಕೆ ಕ್ಯಾರೆ ಎಂದಿಲ್ಲ. ಜನರನ್ನು ಮನೆಯಲ್ಲಿರುವಂತೆ ಕೇಳಿಕೊಂಡರೂ ಹೊರಗಡೆ ಬರುತ್ತಿದ್ದಾರೆ. ಪೊಲೀಸರು ದಿನದ 24ಗಂಟೆ ಕೆಲಸ ಮಾಡುತ್ತಿದ್ದು, ಕೆಲವರಿಂದಾಗಿ ಪರಿಸ್ಥಿತಿ ಹದಗೆಡುತ್ತಿದೆ.

    ಹಾಳಾದ ಹೆಲ್ಮೆಟ್ ಹಾಗೂ ಪೇಪರ್ ಬಳಸಿ ಕೊರೊನಾ ಹೆಲ್ಮೆಟ್ ತಯಾರಿಸಿದ್ದೇನೆ. ಮಾತ್ರವಲ್ಲದೆ ಜನರಲ್ಲಿ ಜಾಗೃತಿ ಮೂಡಿಸಲು ಹಲವು ಪ್ಲೇಕಾರ್ಡ್‍ಗಳನ್ನೂ ತಯಾರಿಸಿದ್ದೇನೆ. ಇವುಗಳನ್ನು ಸಹ ಪೊಲೀಸರಿಗೆ ನೀಡಿದ್ದೇನೆ. ಸಾರ್ವಜನಿಕರು ಮನೆಯಲ್ಲೇ ಇದ್ದು ಕೊರೊನಾ ಹರಡುವುದನ್ನು ತಡೆಗಟ್ಟಬೇಕು ಎಂದು ಹೆಲ್ಮೆಟ್ ಡಿಸೈನ್ ಮಾಡಿದ ಗೌತಮ್ ಅಭಿಪ್ರಾಯಪಟ್ಟಿದ್ದಾರೆ.

    ಜನರಲ್ಲಿ ಜಾಗೃತಿ ಮೂಡಿಸಲು ಈ ಹೆಲ್ಮೆಟ್ ತುಂಬಾ ಸಹಕಾರಿಯಾಗಿದೆ. ಇದರಿಂದಾಗಿ ಜನರಲ್ಲಿ ಅರಿವು ಮೂಡುತ್ತಿದೆ. ಹೊರಗಡೆ ಬರಬೇಡಿ ಎಂದು ಎಷ್ಟೇ ಹೇಳಿದರೂ ಜನ ಕೇಳುತ್ತಿರಲಿಲ್ಲ. ಆದರೆ ಈ ಕೊರೊನಾ ಹೆಲ್ಮೆಟ್‍ನಿಂದಾಗಿ ಜನ ಜಾಗೃತರಾಗುತ್ತಿದ್ದಾರೆ. ಅದರ ಗಂಭೀರತೆ ಅರ್ಥವಾಗುತ್ತಿದೆ. ಈ ಹೆಲ್ಮೆಟ್ ತುಂಬಾ ವಿಭಿನ್ನವಾಗಿರುವುದರಿಂದ ಜನ ಭಯಪಡುತ್ತಿದ್ದಾರೆ. ವಿಶೇಷವಾಗಿ ಮಕ್ಕಳು ಭಯಪಟ್ಟುಕೊಂಡು ಮನೆ ಕಡೆಗೆ ಓಡುತ್ತಿದ್ದಾರೆ ಎಂದು ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸುತ್ತಿರುವ ಪೊಲೀಸ್ ಇನ್ಸ್ ಪೆಕ್ಟರ್ ರಾಜೇಶ್ ಬಾಬು ತಿಳಿಸಿದ್ದಾರೆ.

  • ಕೈ ಮುಗಿದು, ಕಾಲಿಗೆ ಬಿದ್ದು ಕೇಳಿಕೊಂಡ್ರೂ ನಿಮಗೆ ಅರ್ಥ ಆಗೋದಿಲ್ವಾ?: ಸಾರ್ವಜನಿಕರಿಗೆ ಪೊಲೀಸರಿಂದ ಕ್ಲಾಸ್

    ಕೈ ಮುಗಿದು, ಕಾಲಿಗೆ ಬಿದ್ದು ಕೇಳಿಕೊಂಡ್ರೂ ನಿಮಗೆ ಅರ್ಥ ಆಗೋದಿಲ್ವಾ?: ಸಾರ್ವಜನಿಕರಿಗೆ ಪೊಲೀಸರಿಂದ ಕ್ಲಾಸ್

    ಹಾವೇರಿ: ಕೊರೊನಾ ಸೋಂಕು ಹರಡುವ ಭೀತಿಯಿಂದ ಭಾರತ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೊರಗೆ ಓಡಾಡುತ್ತಿದ್ದ ಬೈಕ್ ಮತ್ತು ಕಾರು ಸವಾರರಿಗೆ ಪೊಲೀಸರು ಸರಿಯಾಗಿ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.

    ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಗ್ರಾಮದಲ್ಲಿ ಬೈಕ್ ಮತ್ತು ಕಾರಿನಲ್ಲಿ ಓಡಾಡುತ್ತಿದ್ದವರಿಗೆ ಪೊಲೀಸರು ಬೆತ್ತದ ರುಚಿ ತೋರಿಸಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಗತ್ಯ ವಸ್ತುಗಳನ್ನು ತರಲು ಬೈಕಿನಲ್ಲಿ ಓಡಾಡುತ್ತಿದ್ದವರನ್ನು ನಿಲ್ಲಿಸಿ ಮಾಸ್ಕ್ ಹಾಕಿಕೊಂಡು ಓಡಾಡುವಂತೆ ತಿಳಿ ಹೇಳಿ ಕಳುಹಿಸುತ್ತಿದ್ದಾರೆ.

    ಅದರಲ್ಲೂ ಬೈಕಿನಲ್ಲಿ ಇಬ್ಬಿಬ್ಬರು ಓಡಾಡುತ್ತಿದ್ದವರಲ್ಲಿ ಒಬ್ಬರನ್ನು ಇಳಿಸಿ ಲಾಠಿ ರುಚಿ ತೋರಿಸಿದ್ದಾರೆ. ಕೈ ಮುಗಿದು, ಕಾಲಿಗೆ ಬಿದ್ದು ಹೊರಗೆ ಬರದಂತೆ ಕೇಳಿಕೊಂಡರೂ ನಿಮಗೆ ಅರ್ಥ ಆಗೋದಿಲ್ವಾ? ನಿಮ್ಮ ಜೀವನದ ಮೇಲೆ ನಿಮಗೆ ಕಾಳಜಿ ಇಲ್ವಾ ಎಂದು ಪೊಲೀಸರು ಜನರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಆರೋಗ್ಯ ಇಲಾಖೆ ಸೇರಿದಂತೆ ಎಲ್ಲರೂ ಹೊರಗೆ ಓಡಾಡಬೇಡಿ ಎಂದು ಹೇಳುತ್ತಿದ್ರು, ಯಾಕೆ ಹೊರಗೆ ಓಡಾಡುತ್ತೀರಾ ಎಂದು ಬೈಕ್ ಮತ್ತು ಕಾರಿನಲ್ಲಿ ಓಡಾಡುತ್ತಿದ್ದವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರ ಲಾಠಿ ರುಚಿಗೆ ಸುಸ್ತಾಗಿರೋ ಬೈಕ್ ಮತ್ತು ಕಾರು ಸವಾರರು ಮನೆಯಿಂದ ಹೊರಗೆ ಬರಬಾರದಪ್ಪಾ ಎನ್ನುತ್ತಾ ಮನೆಯತ್ತ ಹೋದರು.

  • ರಸ್ತೆಯಲ್ಲಿ ಸೀನಿದ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ ಜನರು

    ರಸ್ತೆಯಲ್ಲಿ ಸೀನಿದ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ ಜನರು

    ಕೊಲ್ಲಾಪುರ: ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಭೀತಿ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿನಿಂದ ಆತಂಕಕ್ಕೆ ಜನರು ಒಳಗಾಗಿದ್ದು, ಮಹಾರಾಷ್ಟ್ರದಲ್ಲಿ ಕರ್ಚೀಫ್ ಇಲ್ಲದೇ ಸೀನಿದವನಿಗೆ ಸಾರ್ವಜನಿಕರು ಹಿಗ್ಗಾಮುಗ್ಗ ಹೊಡೆದಿದ್ದಾರೆ.

    ಕೊರೊನಾ ಭೀತಿಯಿಂದ ಯಾರಾದರೂ ನೆಗಡಿ ಬಂದು ಸೀನಿದರೆ, ಕೆಮ್ಮಿದರೆ ಸಾಕು ಅವರನ್ನು ಅಪರಾಧಿ ಎನ್ನುವ ರೀತಿ ಜನರು ನೋಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಮಹಾರಾಷ್ಟ್ರದಲ್ಲಿ ಒಂದು ಘಟನೆ ನಡೆದಿದೆ. ರಸ್ತೆಯಲ್ಲಿ ಕರ್ಚೀಫ್ ಇಲ್ಲದೇ ಸೀನಿದ ವ್ಯಕ್ತಿಯನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೊಲ್ಲಾಪುರದಲ್ಲಿ ಈ ಘಟನೆ ನಡೆದಿದೆ. ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವ ಸೀನಿದ್ದಾನೆ. ಆದರೆ ಸೀನುವಾಗ ಆತ ಮುಖಕ್ಕೆ ಅಡ್ಡಲಾಗಿ ಕರ್ಚೀಫ್ ಇಟ್ಟುಕೊಂಡಿರಲಿಲ್ಲ. ಹೀಗಾಗಿ ವ್ಯಕ್ತಿ ಸೀನುತ್ತಿದ್ದದನ್ನು ನೋಡಿದ ಸ್ಥಳೀಯರು ಆತನ ಬೈಕನ್ನು ಅಡ್ಡಗಟ್ಟಿದ್ದಾರೆ.

    ‘ಕೊರೊನಾ ಎಲ್ಲೆಡೆ ಹರಡುತ್ತಿದೆ. ಸೀನುವಾಗ ಮುಖಕ್ಕೆ ಅಡ್ಡಲಾಗಿ ಏನಾದರೂ ಇಟ್ಟುಕೊಳ್ಳಬೇಕು ಎನ್ನುವ ಸಾಮಾನ್ಯ ಜ್ಞಾನವೂ ಇಲ್ವಾ? ನಿಮ್ಮಂಥವರಿಂದಲೇ ಕೊರೊನಾ ಸೋಂಕು ಹೆಚ್ಚು ಹರಡುತ್ತಿದೆ,’ ಎಂದು ಜನರು ಸೀನಿದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ವ್ಯಕ್ತಿ ಹಾಗೂ ಜನರ ನಡುವೆ ವಾಗ್ವಾದ ನಡೆದಿದ್ದು, ಸಿಟ್ಟಿಗೆದ್ದ ಜನರು ಸೀನಿದವನಿಗೆ ಮನಬಂದಂತೆ ಥಳಿಸಿದ್ದಾರೆ.

    ರಸ್ತೆ ಮಧ್ಯೆ ಈ ಘಟನೆ ನಡೆದ ಪರಿಣಾಮ ಕೆಲ ಕಾಲ ಟ್ರಾಫಿಕ್ ಜ್ಯಾಮ್ ಕೂಡ ಉಂಟಾಗಿತ್ತು. ಬಳಿಕ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯ್ತು.

    ಮೊದಲೇ ಮಹಾರಾಷ್ಟ್ರದಲ್ಲಿ ಡೆಡ್ಲಿ ಕೊರೊನಾ ಸೋಂಕಿನ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದರಿಂದ ಜನರು ಭಯಗೊಂಡಿದ್ದಾರೆ. ಸದ್ಯ 48 ಮಂದಿಗೆ ಕೊರೊನಾ ಸೋಂಕು ತಟ್ಟಿರುವುದು ದೃಢಪಟ್ಟಿದ್ದು, ಅಲ್ಲಿನ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಅಲ್ಲದೇ ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಕೂಡ ಮೂಡಿಸಲಾಗುತ್ತಿದೆ.

  • ಮಂಜಿನ ನಗರಿಯಲ್ಲಿ ಜಾದೂ ಮೂಲಕ ಕೊರೊನಾ ಜಾಗೃತಿ

    ಮಂಜಿನ ನಗರಿಯಲ್ಲಿ ಜಾದೂ ಮೂಲಕ ಕೊರೊನಾ ಜಾಗೃತಿ

    ಮಡಿಕೇರಿ: ಎಲ್ಲೆಡೆ ತೀವ್ರಗತಿಯಲ್ಲಿ ಹರಡುತ್ತಿರುವ ಕೊರೊನಾ ವೈರಸ್ ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ. ಸೋಂಕನ್ನು ನಿಯಂತ್ರಿಸಲು ಸರ್ಕಾರಗಳು ಕೂಡ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಅದಕ್ಕಾಗಿ ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯಗಳು ಕೂಡ ನಡೆಯುತ್ತಿವೆ. ಅದಕ್ಕೆ ಪೂರಕವಾಗಿ ಮಡಿಕೇರಿಯಲ್ಲಿ ವಿಕ್ರಮ್ ಜಾದುಗಾರ್ ಅವರು ಜಾದೂ ಕಾರ್ಯಕ್ರಮ ಮಾಡುವ ಮೂಲಕ ಜನರಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಕೊರೊನಾ ವೈರಸ್ ಬಗ್ಗೆ ಆತಂಕದಿಂದ ಹೇಳುವ ಬದಲು ಮನರಂಜನೆಯ ಮೂಲಕ ಹೇಳಿದರೆ ವಿಷಯ ಹೆಚ್ಚು ಜನರನ್ನು ತಲಪುತ್ತದೆ. ಜನರನ್ನು ಹೆಚ್ಚು ಆಕರ್ಷಿತರನ್ನಾಗಿಸಿ ಜಾಗೃತಿ ಮೂಡಿಸಲು ಇದು ಸುಲಭದ ಮಾರ್ಗವಾಗಿದೆ. ಆದ್ದರಿಂದ ವಿಕ್ರಮ್ ಜಾದೂಗಾರ ಅವರು ಮಡಿಕೇರಿಯ ಸಾರ್ವಜನಿಕ ಸ್ಥಳಗಳಲ್ಲಿ ಜಾದೂ ಮಾಡುವ ಮೂಲಕ ಜನರಿಗೆ ಕೊರೊನಾ ಸೋಂಕಿನ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

    ವೈರಸ್ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು, ಶುಚಿತ್ವದ ಕಡೆ ಒತ್ತು ನೀಡಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಅನೇಕ ಹಾಡಿಗಳಿಗೆ ಹೋಗಿ ಕಾಡಿನ ನಿವಾಸಿಗಳಿಗೂ ಕೊರೊನಾ ವೈರಸ್ ಬಗ್ಗೆ ತಿಳಿಸಿ, ಅರಿವು ಮೂಡಿಸುತ್ತೇನೆ ಎಂದು ವಿಕ್ರಮ್ ಅವರು ತಿಳಿಸಿದ್ದಾರೆ.